ಕರಾವಳಿಯಲ್ಲಿ ಬಯಲು ಸೀಮೆಯ ರುಚಿಗೆ ಡಿಮ್ಯಾಂಡ್!

ಕೃತಿಕಾ

ಕರಾವಳಿಯಲ್ಲಿ ಬಯಲು ಸೀಮೆಯ ರುಚಿಗೆ ಡಿಮ್ಯಾಂಡ್!

Thursday February 11, 2016,

2 min Read

ಜೀವನ ಎಷ್ಟೇ ಕಷ್ಟದಾಯಕವಾಗಿದ್ದರೂ ಅದನನು ಸುಲಭ ಮಾಡಿಕೊಳ್ಳಯವ ಕಲೆ ತಿಳಿದವರಿಗೆ ಜೀವನವೇ ಸುಲಭವಾಗಿ ಬದಲಾಗುತ್ತದೆ. ಹೀಗೆ ಬದುಕನ್ನು ಸುಲಭವಾಗಿಸಿಕೊಂಡಾಕೆಯ ಹೆಸರು ಶಿಲ್ಪಾ. ಹಾಸದವರಾದ ಶಿಲ್ಪಾ 11 ವರ್ಷಗಳ ಹಿಂದೆ ಮಂಗಳೂರಿನ ವ್ಯಕ್ತಿಯೊಬ್ಬರೊಂದಿಗೆ ಮದುವೆಯಾಗಿದ್ದರು. ಬದುಕು ಅಲ್ಲಿಯವರೆಗೆ ಚೆನ್ನಾಗಿಯೇ ಇತ್ತು. ಆದರೆ ಒಂದು ದಿನ ಬೆಂಗಳೂರಿಗೆ ಹೋಗಿ ಬರುತ್ತೇನೆ ಎಂದು ಹೊರಟ ಗಂಡ ಮನೆಗೇ ಬರಲೇ ಇಲ್ಲ. ಕಾದು ಕಾದು ಸುಸ್ತಾದ ಶಿಲ್ಪಾ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

image


ಕೆಲವೆಡೆ ಕೆಲಸಕ್ಕೆ ಸೇರಿದರೂ ಸಹ ಮನೆಯ ಪರಿಸ್ಥಿತಿಯೇನೋ ಸುಧಾರಣೆಯಾಗಲಿಲ್ಲ. ಆಗ ಶಿಲ್ಪಾ ಸ್ವಂತಃ ತಾನೇ ಉದ್ಯೋಗ ಮಾಡಬೇಕೆಂಬ ಆಲೋಚನೆ ಮೊಳಕೆಯೊಡೆಯಿತು.ಯಾವ ರೀತಿಯ ಕೆಲಸ ಮಾಡಬೇಕೆಂದು ಆಲೋಚಿಸಿದಾಗ ಬೀದಿ ಬದಿಯ ವ್ಯಾಪಾರ ಮನಸ್ಸಿನಲ್ಲಿ ಮೂಡಿತು. ಆದರೆ ಬಂಡವಾಳ ಸಾಲಕ್ಕಾಗಿ ಬ್ಯಾಂಕ್​ನಿಂದ ಬ್ಯಾಂಕ್​ಗೆ ಅಲೆದಾಡಿದರು. ಸಾಲ ಕೊಡುತ್ತೇವೆ ಎಂದು ಬೋರ್ಡ್ ಹಾಕಿಕೊಂಡ ಬ್ಯಾಂಕುಗಳೆಲ್ಲಾ ಶ್ಯೂರಿಟಿ ನೀಡುವಂತೆ ಕೆಳಿದವು. ಊಟಕ್ಕೇ ಇಲ್ಲದ ಒಬ್ಬಂಟಿ ಮಹಿಳೆ ಯಾರ ಶ್ಯೂರಿಟಿ ತರಬೇಕು. ಕೊನೆಗೆ ತನ್ನ ಮಗನ ವಿದ್ಯಾಭ್ಯಾಸದ ಖರ್ಚಿಗಾಗಿ ಬ್ಯಾಂಕಿನಲ್ಲಿರಿಸಿದ ಒಂದು ಲಕ್ಷ ರೂಪಾಯಿಯನ್ನೇ ಮೂಲ ಬಂಡವಾಳವಾಗಿಸಿ ಹಳೆಯ ಬೊಲೆರೊ ವಾಹನ ಖರೀದಿಸಿದರು.

ಇದನ್ನು ಓದಿ

ನಿಮ್ಮ ಮುದ್ದಿನ ಪಪ್ಪಿಗೆ ನೆಮ್ಮದಿಯ ವಿದಾಯ ಹೇಳಿ..!

ಅಲ್ಲಿಂದ ಆರಂಭವಾಯಿತು ಶಿಲ್ಪಾರ ಮೊಬೈಲ್ ಕ್ಯಾಂಟೀನ್. ಮಂಗಳೂರು ಜನತೆಯ ಹೊಟ್ಟೆ ತಣಿಸಲು ಆರಿಸಿದ್ದು ಬಯಲುಸೀಮೆಯ ಜೋಳ, ಅಕ್ಕಿ, ರಾಗಿ ರೊಟ್ಟಿ, ತಟ್ಟೆ ಇಡ್ಲಿ, ಬಿಸಿಬೇಳೆ ಬಾತ್, ಮೆಂತೆ ರೈಸ್, ಟೊಮೆಟೊ ರೈಸ್, ವಾರಕ್ಕೆರಡು ಬಾರಿ ರಾಗಿ ಮುದ್ದೆ, ರೊಟ್ಟಿ ಜೊತೆಗೆ ತಯಾರಿಸುವ ಖಡಕ್ ಚಟ್ನಿ, ಹುರಿಗಡಲೆ ಚಟ್ನಿಗೆ ಇಲ್ಲಿ ಎಲ್ಲಿಲ್ಲದ ಡಿಮ್ಯಾಂಡ್. ಜೊತೆಗೆ ಸೊಪ್ಪಿನ ಸಾಂಬಾರ್, ಚಿಕ್ಕನ್ ಸಾಂಬರ್ ಕೂಡಾ ಗ್ರಾಹಕರನ್ನು ಸೆಳೆದಿದೆ. ಕೆಲವು ಹೊಟೇಲ್​​ನವರು ಇಲ್ಲಿಗೆ ಬಂದು ಶಿಲ್ಪಾ ತಯಾರಿಸುವ ಚಟ್ನಿಯ ರೆಸಿಪಿಯನ್ನು ಕೇಳಿರುವುದಾಗಿ ಶಿಲ್ಪಾ ಹೇಳುತ್ತಾರೆ. ಬೆಳಿಗ್ಗೆ ಮಾರುಕಟ್ಟೆಗೆ ತೆರಳಿ ತರಕಾರಿಗಳನ್ನು ತಂದು ಹಗಲಿಡೀ ಆಹಾರ ತಯಾರಿಸುವುದರಲ್ಲಿ ತೊಡಗುತ್ತಾರೆ. ಸಂಜೆ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ವ್ಯಾಪಾರದಲ್ಲಿ ನಿರತರಾಗುತ್ತಾರೆ. ದಿನಕ್ಕೆ ಏನಿಲ್ಲವೆಂದರೂ 300 ರಿಂದ 500 ರಷ್ಟು ರೊಟ್ಟಿ ತಟ್ಟುತ್ತಾರೆ ಶಿಲ್ಪಾ.

image


ಮಂಗಳೂರು ನಗರದ ಮಣ್ಣಗುಡ್ಡೆ ಬೀದಿ ಬದಿಯಲ್ಲಿ ತಲೆಯೆತ್ತಿರುವ `ಹಳ್ಳಿ ಮನೆ ರೊಟ್ಟೀಸ್` ಈ ಎಲ್ಲರ ಬಾಯಲ್ಲೂ ನೀರೂರಿಸುತ್ತಿದೆ. ಸಂಜೆಯಾಗುತ್ತಿದ್ದಂತೆ ಬೈಕ್, ಕಾರುಗಳಲ್ಲಿ ಬರುವ ಗ್ರಾಹಕರು ಬಿಸಿ- ಬಿಸಿ ರೊಟ್ಟಿಗಾಗಿ ತಾಸುಗಟ್ಟಲೆ ಕಾಯುತ್ತಿದ್ದಾರೆಂದರೆ ಕರಾವಳಿಯಲ್ಲೂ ಬಯಲು ಸೀಮೆಯ ರೊಟ್ಟಿ ಅದೆಷ್ಟು ಡಿಮ್ಯಾಂಡ್ ಸೃಷ್ಟಿ ಮಾಡಿದೆ ಎಂದರೆ ಎಲ್ಲರೂ ಚಿಂತಿಸಬೇಕಾದ ವಿಚಾರ.

ಅಷ್ಟೇ ಅಲ್ಲದೆ ಬೇರೆ ಹೊಟೇಲ್ ಹಾಗೂ ಯಾವುದೇ ಸಮಾರಂಭಗಳಿಗೆ ರೊಟ್ಟಿಗಳು ಆರ್ಡರ್ ಬಂದರೆ ರೊಟ್ಟಿ ತಯಾರಿಸಿ ನೀಡುತ್ತಾರೆ. ಇವರ ಮೊಬೈಲ್ ಕ್ಯಾಂಟೀನ್ ಈಗ ಎಲ್ಲೆಡೆ ಪ್ರಸಿದ್ದಿ ಹೊಂದಿದ್ದು. ಗ್ರಾಹಕರ ಸಂತುಷ್ಟತೆಯಲ್ಲೇ ಸಾರ್ಥಕ ಜೀವನ ನಡೆಸುತ್ತಿದ್ದಾರೆ. ಗಂಡ ಮನೆ ಬಿಟ್ಟು ಹೋದ ನಂತರ ಬದುಕೇ ಕೊನೆಯಾಯ್ತು ಅಂತ ಕುಸಿದು ಬೀಳುವ ಮನಸ್ಥಿತಿಯಲ್ಲೂ ಆತ್ಮಸ್ತೈರ್ಯ ಮೆರೆದು ಈಗ ಬದುಕನ್ನು ಶಿಲ್ಪಾ ಚೆಂದವಾಗಿಸಿಕೊಂಡಿದ್ದಾರೆ. ಅದೂ ಕರಾವಳಿಯ ಜನರಿಗೆ ಬಯಲುಸೀಮೆಯ ರುಚಿಕರ ತಿಂಡಿಗಳನ್ನು ಮಾಡಿಕೊಡುವುದರ ಮೂಲಕ. ಮನಸ್ಸಿದ್ದರೆ ಮಾರ್ಗ ಅನ್ನೋದನ್ನ ಶಿಲ್ಪಾ ಕಾರ್ಯರೂಪಕ್ಕೆ ತಂದಿದ್ದಾರೆ. ಈಕೆ ಬದುಕುತ್ತಿರುವ ಮಾದರಿ, ಆಕೆಯ ಜೀವನೋತ್ಸಾಹ ಎಲ್ಲರಿಗೂ ಮಾದರಿಯಾಗುವಂತದ್ದು.

ಇದನ್ನು ಓದಿ:

ಕಥೆಗಾತಿಯ ಕಥೆ..!

``ರಂಗೋಲಿ ಬಿಡಿಸಬಲ್ಲ ಮಹಿಳೆ ಗ್ರಾಫಿಕ್ಸ್ ಡಿಸೈನ್ ಕೂಡ ಮಾಡಬಲ್ಲಳು’’ –ಆವೋ ಸಾಥ್ ಮಾ

ಉದ್ಯಮಿಯಾದ ಡೆಲಿವರಿ ಹುಡುಗನ ಕಥೆ..!