ಬೆಂಗಳೂರಿನಲ್ಲೊಂದು ದೀವಟಿಗೆ ಗ್ರೂಪ್..!

ವಿಸ್ಮಯ

ಬೆಂಗಳೂರಿನಲ್ಲೊಂದು ದೀವಟಿಗೆ ಗ್ರೂಪ್..!

Wednesday March 09, 2016,

2 min Read

ಇತ್ತೀಚಿಗೆ ಉದಯೋನ್ಮುಖರಿಗೆ ತಮ್ಮ ಕೌಶಲ್ಯ ಪ್ರದರ್ಶನಕ್ಕೆ ವೇದಿಕೆ ಸಿಗುವುದು ಸ್ವಲ್ಪ ಕಷ್ಟ. ಕೆಲವೊಮ್ಮ ಸಿಕ್ಕಿದ್ರೂ ಸಾಕಷ್ಟು ಸಂಯಮ ಕಾಯಬೇಕಾಗುತ್ತೆ. ಇದನ್ನೇ ಗಮನದಲ್ಲಿಟ್ಟುಕೊಂಡು, ತಮ್ಮ ಪ್ರತಿಭೆಗೆ ತಾವೇ ವೇದಿಕೆ ಕಟ್ಟಿಕೊಂಡಿದ್ದಾರೆ. ಅದೇ ದೀವಟಿಗೆ ಯುವಜನ ವೇದಿಕೆ. ಇಲ್ಲಿರೋ ಎಲ್ಲರೂ ಸಮಾನ ಮನಸ್ಕರು. ಇನ್ನು ಇವರು ಕಾಲೇಜು ಹುಡುಗರು, ತಮ್ಮ ಜೀವನವನ್ನು ತಾವೇ ನಿರೂಪಿಸಿಕೊಳ್ಳುತ್ತಿದ್ದಾರೆ.

image


ದೀವಟಿಕೆ ಯುವಜನ ವೇದಿಕೆ ಹೆಸರೇ ಹೇಳುವಂತೆ ಎಲ್ಲರೂ ಇಲ್ಲಿ ಯುವಕರೇ. ಹೊಸತನಕ್ಕಾಗಿ ತುಡಿಯುತ್ತಿರೋ ಮನಸ್ಸುಗಳೇ ಇಲ್ಲಿ ಹೆಚ್ಚು. ಪ್ರಬುದ್ಧ ಚಿಂತೆ- ಆಲೋಚನೆಗಳ ಮೂಲಕ ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಕಟ್ಟಿಕೊಂಡಿರೋ ಈ ಗುಂಪಿನಲ್ಲಿ ಕೇವಲ ಈ ಊರು ಮಾತ್ರವಲ್ಲದೇ, ವಿದ್ಯಾಭ್ಯಾಸಕ್ಕೆ ಬರುವ ಹೊರ ಪ್ರದೇಶದ ವಿದ್ಯಾರ್ಥಿಗಳು ಇವ್ರ ಗುಂಪಿನಲ್ಲಿ ಇದ್ದಾರೆ. ರಾಯಚೂರು, ಉಡುಪಿ, ಸೇರಿದಂತೆ ವಿವಿಧೆಡೆಯಿಂದ ವಿದ್ಯಾರ್ಥಿಗಳು ಸೇರಿ ಈ ಹೊಸ ದೀವಟಿಗೆಯನ್ನ ನಿರ್ಮಿಸಿಕೊಂಡಿದ್ದಾರೆ. ಇಲ್ಲಿರುವವರೆಲ್ಲ ಪದವಿ ಮತ್ತು ಸ್ನಾತಕೋತ್ತರ ಪದವಿ ಹಂತದಲ್ಲಿರೋ ಯುವಕರೇ..

ಈ ಗುಂಪಿನಲ್ಲಿ ಎಲ್ಲ ಕ್ಷೇತ್ರದ ವಿದ್ಯಾರ್ಥಿಗಳು ಇದ್ದಾರೆ. ಕಲೆ, ಸಾಹಿತ್ಯ, ಕಥೆ, ಲೇಖನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರೋರಿಗೆ ಅವಕಾಶ ಕಲ್ಪಿಸಿಕೊಡುವುದು ಇವರ ಮುಖ್ಯ ಉದ್ದೇಶ. ಜೊತೆಗೆ ಸಮಕಾಲೀನ ವಿಚಾರಗಳ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಏನ್ ಹೇಳ್ತಾರೆ ದೀವಟಿಗೆ ಸಂಗಾತಿಗಳು..?

ಇನ್ನು ಇವರ ದೀವಟಿಗೆ ಗುಂಪಿನಲ್ಲಿ ಎಲ್ಲರೂ ಮಾತನಾಡುವುದು ಸಂಗಾತಿಗಳೆಂದು. ಕಾರಣ ಪ್ರತಿಯೊಬ್ಬರಲ್ಲೂ ಆತ್ಮೀಯತೆ ಬೆಳೆಯಲಿ ಎಂಬ ಕಾರಣಕ್ಕೆ ಪ್ರತಿಯೊಬ್ಬರು ಅವರೊಂದಿಗೆ ಮಾತನಾಡುವಾಗ ಸಂಗಾತಿ ಎಂಬ ಪದವನ್ನು ಬಳಸುತ್ತಾರೆ.. ದೀವಟಿಗೆ ಯುವಜನ ವೇದಿಕೆ ನಮಗೆ ನಾವೇ ವೇದಿಕೆ ಕಲ್ಪಿಸಿಕೊಳ್ಳಬೇಕು, ನಮ್ಮಂತಹ ಇತರ ವಿದ್ಯಾರ್ಥಿಗಳಿಗೂ ಸಹಾಯ ಆಗಬೇಕು ಎಂಬುದು ಗುಂಪಿನ ಉದ್ದೇಶ. ಒಂದು ವರ್ಷದ ಹಿಂದೆ ಈ ಯುವಜನ ವೇದಿಕೆ ಆರಂಭವಾದಾಗ ಮೂವತ್ತು ಸಂಗಾತಿಗಳು ಕೈ ಜೋಡಿಸಿದ್ದರು. ಈಗ ಅದು ದುಪ್ಪಟ್ಟ ಆಗಿದೆ. ಅಂತಾರೆ ವೇದಿಕೆ ಸದಸ್ಯ ಕೃಷ್ಣಮೂರ್ತಿ. ಗುಂಪಿನಲ್ಲಿ ಕಲೆ, ಸಾಹಿತ್ಯ, ತಂತ್ರಜ್ಞಾನ, ವಾಣಿಜ್ಯ ಹೀಗೆ ಬೇರೆ ಬೇರೆ ವಿಷಯಗಳ ವಿದ್ಯಾರ್ಥಿಗಳು ತೊಡಗಿಕೊಂಡಿದ್ದಾರೆ.

image


ದೀವಟಿಗೆ ಗುಂಪಿನ ಕಾರ್ಯಕ್ರಮವೇನು..?

ಶಾಲಾ-ಕಾಲೇಜುಗಳಿಗೆ ಹೋಗಿ ಸಂಗೀತ ಕಾರ್ಯಕ್ರಮ ನೀಡುವುದು. ಜೊತೆಗೆ ದೇಶ, ಪರಿಸರ, ಮಹಿಳೆಯರ ಮೇಲಿನ ದೌರ್ಜನ್ಯಗಳ ವಿಚಾರಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಿಕೊಂಡು ಬಂದಿದೆ. ಇನ್ನು ಅಂಡರ್ ಪಾಸ್‍ಗಳನ್ನು ಸಾರ್ವಜನಿಕರು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಕೆಲವು ಕಡೆಗಳಲ್ಲಿ ಅಂಡರ್ ಪಾಸ್‍ಗಳು ಶೌಚಾಲಯಗಲಾಗಿ ಮಾರ್ಪಟ್ಟಿವೆ. ಇನ್ನು ಕೆಲವೆಡೆ ಅಗತ್ಯ ವಿರುವಲ್ಲಿ ಅಂಡರ್ ಪಾಸ್‍ಗಳಿಲ್ಲ. ಇವುಗಳ ಬಗ್ಗೆ ಜನರಲ್ಲಿ ಜಾಗೃತಿಯನ್ನ ಮೂಡಿಸುವುದು. ಜಾಥಾಗಳನ್ನು ಕೈಗೊಳ್ಳುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಇವರ ಕೆಲಸ.

ದೀವಟಿಗೆ ದ್ವೈಮಾಸಿಕ..

ಎರಡು ತಿಂಗಳಿಗೊಮ್ಮೆ ದೀವಟಿಗೆ ಹೆಸರಿನಲ್ಲೇ ಕೈ ಬರಹ ಪತ್ರಿಕೆಯನ್ನು ಸಂಗಾತಿಗಳು ಹೊರತರುತ್ತಾರೆ. ಕಥೆ ಕವನ, ಲೇಖನಗಳು ಈ ಪತ್ರಿಕೆಯ ಮುಖ್ಯ ಆಕರಗಳು.. ಇನ್ನು ಇವರು ತಮ್ಮ ಕಾರ್ಯಕ್ರಮಗಳ ಕರಪತ್ರಗಳು, ಪತ್ರಿಕೆಗಳು ಎಲ್ಲವನ್ನು ಇವರುಗಳೇ ಚಿತ್ರಗಳನ್ನು ಮಾಡಿ ಹಂಚುತ್ತಾರೆ. ಒಟ್ಟಾರೆ ಯುವಕರೇ ಸೇರಿ, ಯುವಕರೇ ಕಟ್ಟಿಕೊಂಡ ಈ ಗುಂಪು ನಿಜಕ್ಕೂ ಎಲ್ಲರಿಗೂ ಸ್ಪೂರ್ತಿದಾಯ.. ತಮ್ಮ ಉದ್ಯೋನ್ಮುಖ ಪ್ರತಿಭೆಗಳನ್ನು ತಾವೇ ತೆರೆದುಕೊಂಡು ಬೇರೆ ಯುವಕರಿಗೂ ಮಾದರಿಯಾಗಿದ್ದಾರೆ.