ಕಿತ್ತು ತಿನ್ನುವ ಬಡತನದಲ್ಲೂ ಕಲಾವಿದನಾದ ಕಥೆ..!

ಟೀಮ್​ ವೈ.ಎಸ್​​. ಕನ್ನಡ

ಕಿತ್ತು ತಿನ್ನುವ ಬಡತನದಲ್ಲೂ ಕಲಾವಿದನಾದ ಕಥೆ..!

Tuesday December 15, 2015,

2 min Read

ಮನೆಯಲ್ಲಿನ ಬಡತನ ಸಾಧನೆಗೆ ಅಡ್ಡಿಯಾಗಿಲ್ಲ ಅಂತ ಇಲ್ಲೊಬ್ಬ ಯುವಕ ಸಾಧಿಸಿ ತೋರಿಸಿದ್ದಾನೆ. ಕಿತ್ತು ತಿನ್ನುವ ಬಡತನದ ಮಧ್ಯೆಯೂ ಕಲೆಯಲ್ಲಿ ಪರಿಣಿತನಾಗಿ ಸಾಧಿಸುವುದರ ಮೂಲಕ ತಮ್ನ ಊರಿಗೆ ಮಾತ್ರವಲ್ಲದೆ ರಾಜ್ಯಕ್ಕೆ ಕೀರ್ತಿ ತಂದಿರುವ ಅಪರೂಪದ ವ್ಯಕ್ತಿಯಾಗಿದ್ದಾನೆ. ಕಲಬುರುಗಿ ಜಿಲ್ಲೆಯ ಚಿಂಚೋಳಿ ತಾಲೂಕು ದೇಗಲ್ಮಡಿ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಚಿತ್ರಕಲೆಗಾರ ಜೋಹೆಬ್ ಮೋಮಿನ್ ಎಂಬುವರ ಸಾಧನೆ ಹಾಗೂ ಅವರು ಸಾಗಿಬಂದ ಯಶೋಗಾಥೆ ಇದು.

image


ಜೋಹೆಬ್ ಮೋಮಿನ್ ಕುಂಚದಿಂದ ಅರಳಿಸುವ ಚಿತ್ರ ಅತ್ಯಂತ ಆಕರ್ಷಕ. ಇವರು ತಮ್ಮ ಕೈಚಳಕದಿಂದ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಪುಸ್ತಕದ ಮೇಲೆ ಬಹು ಸರಳವಾಗಿ ಚಿತ್ರ ಬಿಡಿಸುತ್ತಾರೆ. ಜೋಹೆಬ್ ಬಿಡಿಸಿದ ಚಿತ್ರಕಲಾಕೃತಿಗಳಿಗೆ ಕರ್ನಾಟಕ ಅಲ್ಲದೆ ನೆರೆಯ ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಲ್ಲೂ ಹೆಚ್ಚಿನ ಬೇಡಿಕೆಯಿದೆ. ಸದ್ಯ ಮೋಮಿನ್ ಹೈದ್ರಾಬಾದ್ ನ ಪ್ರಸಿದ್ಧ ಗ್ರೀಬ್ ಗೋಲ್ಡ್ ಸ್ಟುಡಿಯೋದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

image


ಧಾರವಾಹಿಗಳಾದ ಚಾಣಕ್ಯ, ಗಾಂಧಿ, ರಾಮಾಯಣ, ಬಾಲಹನುಮಾನ್, ಬಾಲಗಣೇಶ ಅಲ್ಲದೆ ಹಲವು ಚಲನಚಿತ್ರಗಳಲ್ಲಿ ಇವರು ನಿರ್ಮಿಸಿರುವ ಅನಿಮೇಷನ್ ಭಾರಿ ಹೆಸರು ತಂದು ಕೊಟ್ಟಿವೆ. ಕಾಮಿಕ್ಸ್ ಬುಕ್ಸ್ ಬಾಲಕಾಂಡ, ವರ್ಗಿಸ್ ಕೊರಿಯನ್, ಮಿತಿಕಲ ಬಿಯಿಂಗ್ಸ್, ಪರಮವೀರ ಚಕ್ರ, ಐಟಮ್ ಧಮಾಕಾ ಇವರು ರಚಿಸಿದ ದೊಡ್ಡ ಪ್ರಾಜೆಕ್ಟ್ಸ್​ಗಳಾಗಿವೆ. ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ 'ಕೃಷ್ಣಲೀಲಾ ಥೀಂ ಪಾರ್ಕ್'ನ ಪ್ರಾಜೆಕ್ಟ್ ನಿರ್ವಹಿಸಿದ ಖ್ಯಾತಿ ಜೋಹೆಬ್ ಮೋಮಿನ್ ಅವರದ್ದು.

image


ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ತಮ್ಮ ಚಿಕ್ಕವಯಸ್ಸಿನಲ್ಲೇ ಆಗಾಧ ಹೆಸರು ಮಾಡಿರುವ ಮೋಮಿನ್ ಚಿಕ್ಕ ವಯಸ್ಸಿನಿಂದಲೂ ಚಿತ್ರಕಲೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು, ಮನಸ್ಸಿನಲ್ಲಿ ಮೂಡಿದ್ದೆಲ್ಲವನ್ನೂ ಚಿತ್ರದ ರೂಪದಲ್ಲಿ ಬಿಡಿಸುತ್ತಿದ್ದರು. ಕಿತ್ತು ತಿನ್ನುವ ಬಡತನದ ಹಿನ್ನೆಲೆಯಲ್ಲಿ ಬಣ್ಣ ಖರೀದಿಸಲಾಗದೆ ಮರದ ಎಲೆಗಳ ರಸವನ್ನು ಹಸಿರು ಬಣ್ಣವಾಗಿ, ಕೆಂಪು ಹೂಗಳನ್ನು ಕುಟ್ಟಿದ ರಸವನ್ನು ಕೆಂಪುಬಣ್ಣವಾಗಿ, ಇದ್ದಿಲಿನಿಂದ ಸಂಗ್ರಹ ಮಾಡಿದ ಕಪ್ಪು ಬಣ್ಣವನ್ನು ಉಪಯೋಗಿಸಿ ಚಿತ್ರಗಳನ್ನು ಬಿಡಿಸುತ್ತಿದ್ದರು. ಮೋಮಿನ್ ಕೈಯಲ್ಲಿ ಅರಳಿದ ಚಿತ್ರಗಳಿಂದ ಗ್ರಾಮದವರ ಪ್ರಶಂಸೆಗೆ ಪಾತ್ರರಾದರು. ಐದನೇ ತರಗತಿಯಲ್ಲೇ ತಾಲೂಕು, ಜಿಲ್ಲಾಮಟ್ಟ ಮೀರಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸುವುದರ ಮೂಲಕ ತಮ್ಮ ಪ್ರತಿಭೆ ಹೊರಹಾಕಿದರು.

image


ಬಡತನದ ಮಧ್ಯೆಯೂ ನನಗೆ ನನ್ನ ತಂದೆ-ತಾಯಿಗಳು ಸಂಬಂಧಿಕರು, ಮಿತ್ರರು ಸಾಧ್ಯವಾದಷ್ಟು ಹಣ ಕೊಟ್ಟು ಸಹಾಯ ಮಾಡಿದರು. ಚಿತ್ರಕಲೆಯಲ್ಲಿ ಉನ್ನತ ವ್ಯಾಸಂಗ ಮಾಡುವ ಮಹದಾಸೆ ಹೊಂದಿದ್ದ ನನಗೆ ಬಡತನ ಅನ್ನೋದೇ ದೊಡ್ಡ ಸಮಸ್ಯೆಯಾಗುತ್ತು. ಆದ್ರೆ ನನ್ನ ಶಿಕ್ಷಕರಾದ ರೇವಣಸಿದ್ದಪ್ಪ ಆರ್ಥಿಕವಾಗಿ ನನಗೆ ಪ್ರೋತ್ಸಾಹ ನೀಡಿದ ಫಲವಾಗಿ ಬೆಂಗಳೂರಿನ ಅನಿಮಾಸ್ಟರ್ ಸಂಸ್ಥೆಯಲ್ಲಿ 2 ಡಿ ಮತ್ತು 3ಡಿ ಜಾಹೀರಾತುಗಳನ್ನು ನಿರ್ಮಿಸುವ ಕಲೆ ಕರಗತವಾಯ್ತು. ನಾನು ಇಂದು ಏನಾದ್ರೂ ಸಾಧಿಸಿದ್ದೇನೆ ಅಂದ್ರೆ ಅದಕ್ಕೆ ಕಾರಣ ನನ್ನ ತಂದೆ,ತಾಯಿ ಮತ್ತು ಗುರುಗಳು ಅಂತಾರೆ ಮೋಮಿನ್.

image


ರಾಷ್ಟ್ರಮಟ್ಟದಲ್ಲಿ ದೇಗಲ್ಮಡಿ ಗ್ರಾಮವನ್ನು ಗುರುತಿಸುವಂತೆ ಮಾಡಿರುವ ಇವರು ಗ್ರಾಮಕ್ಕೆ ಏನಾದ್ರೂ ಕೊಡುಗೆ ನೀಡುವ ಆಸೆ ಹೊಂದಿದ್ದಾರೆ. ಆಸೆ ಪೂರ್ಣಗೊಂಡು ಇನ್ನಷ್ಟು ಉತ್ತುಂಗಕ್ಕೆ ಜೋಹೆಬ್ ಮೋಮಿನ್ ಬೆಳೆಯಲಿ ಅನ್ನೋ ಹಾರೈಕೆ ನಮ್ಮದು.