ಭಾರತದಲ್ಲಿ ಚಿಲ್ಲರೆ ವ್ಯಾಪಾರದ ಮರುಕಲ್ಪನೆ..!

ಟೀಮ್​ ವೈ.ಎಸ್​. ಕನ್ನಡ

ಭಾರತದಲ್ಲಿ ಚಿಲ್ಲರೆ ವ್ಯಾಪಾರದ ಮರುಕಲ್ಪನೆ..!

Saturday January 23, 2016,

4 min Read

ಭಾರತದಲ್ಲಿ ಇ-ಕಾರ್ಸ್ ಬಗ್ಗೆ ‘Dyn' ನಡೆಸಿದ ಸಮೀಕ್ಷೆಯ ಪ್ರಕಾರ ಶೇ.52ರಷ್ಟು ಮಂದಿ, ಅಂಗಡಿಗಳಿಗೆ ಹೋಗಿ ಖರೀದಿಸುವ ಅನುಭವಕ್ಕಿಂತ ಆನ್​​ಲೈನ್ ಶಾಪಿಂಗ್ ಅನುಭವವೇ ಉತ್ತಮ ಅಂತಾ ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿ ಇ-ಕಾಮರ್ಸ್ ಕ್ಷೇತ್ರ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. 2020ರ ವೇಳೆಗೆ ಭಾರತದ ಇ-ಕಾಮರ್ಸ್ ವಲಯದ ಮೌಲ್ಯ ಅಂದಾಜು 100 ಬಿಲಿಯನ್ ಡಾಲರ್​ನಷ್ಟಾಗಲಿದೆ. ಹಾಗಾಗಿ ಅಂಗಡಿಗಳಿಗೆ ಉಳಿಗಾಲವಿದೆಯೇ ಅನ್ನೋ ಪ್ರಶ್ನೆ ಉದ್ಭವವಾಗಿದೆ.

ಇದು ಭಾರತದ ಸ್ಥಿತಿಯಾಯ್ತು. ಅತ್ತ ಅಮೆರಿಕದಲ್ಲಿ ‘ದಿ 2015 ಟೈಮ್ ಟ್ರೇಡ್ ಸ್ಟೇಟ್ ಆಫ್ ರಿಟೇಲ್' ಸಮೀಕ್ಷೆಯ ಪ್ರಕಾರ ಶೇ.85ರಷ್ಟು ಗ್ರಾಹಕರು ಅಂಗಡಿಗೆ ಹೋಗಿ ಖರೀದಿ ಮಾಡಲು ಇಷ್ಟಪಡುತ್ತಿದ್ದಾರೆ. ‘Dyn' ನಡೆಸಿದ ಇದೇ ಸಮೀಕ್ಷೆಯ ಪ್ರಕಾರ ಶೇ.42ರಷ್ಟು ಭಾರತೀಯ ಗ್ರಾಹಕರು ಕೂಡ ಆನ್​ಲೈನ್ ಶಾಪಿಂಗ್​ಗಿಂತ ಹೆಚ್ಚಾಗಿ ಅಂಗಡಿಗೆ ಹೋಗಿ ಖರೀದಿಸುವುದಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. PwC ನಡೆಸಿದ ಸಮೀಕ್ಷೆಯಲ್ಲಿ ಶೇ.48ರಷ್ಟು ಗ್ರಾಹಕರು ಆನ್​ಲೈನ್ ಶಾಪಿಂಗ್​ಗೆ ಆದ್ಯತೆ ನೀಡುವುದಾಗಿ ಹೇಳಿದ್ದಾರೆ. ಕಾರಣ ಬೆಲೆಯೂ ಕಡಿಮೆ ಜೊತೆಗೆ ಅಂಗಡಿಗಿಂತ ಹೆಚ್ಚು ಆಯ್ಕೆಗಳಿರುತ್ತವೆ ಅಂತಾ ಅಭಿಪ್ರಾಯಪಟ್ಟಿದ್ದಾರೆ.

image


ಭಾರತದ ಬಹುತೇಕ ಇ-ಕಾಮರ್ಸ್ ಪ್ಲೇಯರ್​ಗಳೆಲ್ಲ ಸ್ಟಾರ್ಟ್ಅಪ್​​ಗಳು. ಅವರು ವೇಗವಾಗಿ ತಮ್ಮ ಮಾರುಕಟ್ಟೆ ಪಾಲನ್ನು ಹೆಚ್ಚಿಸುವತ್ತ ಗಮನಹರಿಸಿದ್ದಾರೆ. ಗ್ರಾಹಕರನ್ನು ಆಕರ್ಷಿಸಲು ಆಕ್ರಮಣಕಾರಿಯಾಗಿ ರಿಯಾಯಿತಿ ತಂತ್ರಗಳನ್ನು ಅನುಷ್ಠಾನಕ್ಕೆ ತರುತ್ತಿದ್ದಾರೆ. ಇ-ಕಾಮರ್ಸ್ ಕಂಪನಿಗಳು ಹೆಚ್ಚುತ್ತಿರುವ ನಷ್ಟದ ಬಗ್ಗೆ ತಲೆಕೆಡಿಸಿಕೊಳ್ಳದೆ, ಹೂಡಿಕೆದಾರರ ಬೆಂಬಲದೊಂದಿಗೆ ರಿಯಾಯಿತಿ ಮತ್ತು ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡುವಲ್ಲಿ ನಿರತವಾಗಿವೆ. 2015ರಲ್ಲಿ ಫ್ಲಿಫ್​ಕಾರ್ಟ್ 2,000 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ ಎನ್ನಲಾಗ್ತಿದೆ. ಹಾಗಾಗಿ ಈ ರಿಯಾಯಿತಿ ತಂತ್ರ ಎಷ್ಟು ದಿನಗಳ ವರೆಗೆ ಇರಬಲ್ಲದು ಅನ್ನೋದು ಹೂಡಿಕೆದಾರರು ಹಾಗೂ ಮಾರುಕಟ್ಟೆ ತಜ್ಞರ ಪ್ರಶ್ನೆ.

ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ.60ರಷ್ಟು ಮಂದಿ 35ಕ್ಕಿಂತ ಕಡಿಮೆ ವಯಸ್ಸಿನವರು ಅನ್ನೋದು ರಹಸ್ಯವಾಗಿ ಉಳಿದಿಲ್ಲ. ಅಮೆರಿಕದ `ದಿ 2015 ಟೈಮ್ ಟ್ರೇಡ್ ಸ್ಟೇಟ್ ಆಫ್ ರಿಟೇಲ್' ಅಧ್ಯಯನದ ಪ್ರಕಾರ ಹೊಸ ಪೀಳಿಗೆಯವರು ಕೂಡ ತಮ್ಮ ಹಿಂದಿನವರಂತೆ ಅಂಗಡಿಗೆ ಹೋಗಿ ಶಾಪಿಂಗ್ ಮಾಡುವುದನ್ನೇ ಇಷ್ಟಪಡುತ್ತಿದ್ದಾರೆ. ಯುವಜನತೆಯನ್ನು ಗಣನೆಗೆ ತೆಗೆದುಕೊಂಡ್ರೆ ಶೇ.52ರಷ್ಟು ಮಂದಿ ಆನ್​ಲೈನ್ ಶಾಪಿಂಗ್​ಗೆ ಆದ್ಯತೆ ನೀಡ್ತಿದ್ದು, ಶೇ.42ರಷ್ಟು ಗ್ರಾಹಕರು ಮಳಿಗೆಗಳಿಗೆ ತೆರಳಿ ಕೊಂಡುಕೊಳ್ಳುವ ಹವ್ಯಾಸವನ್ನೇ ಮುಂದುವರಿಸಿದ್ದಾರೆ. ಹಾಗಾಗಿ ಆಫ್​ಲೈನ್ ಮಾರುಕಟ್ಟೆ ಅಂದ್ರೆ ಅಂಗಡಿಗಳಿಗೆ ಮರಳಿ ಅಸ್ತಿತ್ವ ಕಂಡುಕೊಳ್ಳಲು ಅವಕಾಶ ಇದ್ದೇ ಇದೆ.

`ಸಿಲೋ' ಇನ್ನಿಲ್ಲ...

ಇದನ್ನು ದುರಹಂಕಾರ ಅನ್ನಿ, ಅಥವಾ ಅಜ್ಞಾನ ಅಂತಾದ್ರೂ ಕರೆಯಿರಿ, ಭಾರತದ ಚಿಲ್ಲರೆ ವ್ಯಾಪಾರಿಗಳು ಡಿಜಿಟಲ್ ಪವರ್ ಅನ್ನು ಅರ್ಥಮಾಡಿಕೊಂಡಿಲ್ಲ. ಕೆಲವರಿಗೆ ಈಗಷ್ಟೇ ಅದರ ಅರಿವಾಗುತ್ತಿದೆ. ಚಿಲ್ಲರೆ ವ್ಯಾಪಾರಿಗಳು ಡಿಜಿಟಲ್ ತಂತ್ರಜ್ಞಾನದೊಂದಿಗೆ ಗ್ರಾಹಕರನ್ನು ಸಂಪರ್ಕಿಸುವುದನ್ನು ಬಿಟ್ಟು, ಡಿಜಿಟಲ್ ಅನುಭವ ಮೂಡಿಸುವ ಬಗ್ಗೆ ಹೆಚ್ಚು ಗಮನಹರಿಸುತ್ತಿದ್ದಾರೆ. `ಫೊರೆಸ್ಟರ್' ಅಧ್ಯಯನದ ಪ್ರಕಾರ ಇವತ್ತಿನ ಡಿಜಿಟಲ್ ಅನುಭವದ ಅಡ್ಡಿಗಳೇ ಸಾಂಸ್ಥಿಕ ಸಿಲೋಸ್. ಈ ಸಮೀಕ್ಷೆಯ ಪ್ರಕಾರ 2015ರಲ್ಲಿ 135 ಡಿಜಿಟಲ್ ಡೆಲಿವರಿ ಡಿಸಿಷನ್ ಮೇಕರ್ಗಳ ಡಿಜಿಟಲ್ ಅನುಭವದ ಯಶಸ್ಸಿಗೆ ಅಡ್ಡಿಯಾದ ಪ್ರಮುಖ ಮೂರು ವಿಚಾರಗಳು ತಂತ್ರಜ್ಞಾನಕ್ಕೆ ಸಂಬಂಧಿಸಿದವುಗಳಲ್ಲ. ಪ್ರಮುಖ 3 ಅಡ್ಡಿಗಳು ಯಾವುವು ಅನ್ನೋದನ್ನು ನೋಡೋದಾದ್ರೆ,

1. ಬಂಡವಾಳ ಮತ್ತು ಸೂಕ್ತ ವ್ಯಕ್ತಿಗಳ ಕೊರತೆ (ಶೇ.61)

2. ಚುರುಕುತನದ ಕೊರತೆ ಮತ್ತು ನಿಧಾನಗತಿಯ ಮಾರುಕಟ್ಟೆ (ಶೇ.57)

3. ಪಾತ್ರಗಳನ್ನು ವಿಭಾಗಿಸುವುದು, ಜವಾಬ್ಧಾರಿ ಹಂಚಿಕೆ, ಇಲಾಖೆಗಳ ಪ್ರಕ್ರಿಯೆ ಸೆಟ್ಅಪ್ನಂತಹ ಸಾಂಸ್ಥಿಕ ಸವಾಲುಗಳು (ಶೇ.57)

ಪ್ರತಿಯೊಬ್ಬ ಚಿಲ್ಲರೆ ವ್ಯಾಪಾರಿಗೂ ಡಿಜಿಟಲ್ ಅನುಭವ ಅತ್ಯಂತ ಮಹತ್ವದ ವಿಚಾರ. ಸಾಂಸ್ಥಿಕ ಪ್ರಕ್ರಿಯೆಗಳು ಚುರುಕತನದ ಕೊರತೆ ಮತ್ತು ನಿಧಾನಗತಿಯ ಮಾರುಕಟ್ಟೆಗೆ ಕಾರಣವಾಗುತ್ತಿವೆ. ಉದಾಹರಣೆಗೆ ಇಟ್ಟಿಗೆ ಮತ್ತು ಗಾರೆ ಕಾರ್ಯಾಚರಣೆಗಳನ್ನು ಇ-ಕಾಮರ್ಸ್​ನಿಂದ ಬೇರ್ಪಡಿಸುವುದು. ಡಿಜಿಟಲ್ ಜಗತ್ತಿನಲ್ಲಿ ಪ್ರತಿಯೊಬ್ಬ ಗ್ರಾಹಕರ ಅಭಿಪ್ರಾಯಕ್ಕೂ ಆದ್ಯತೆ ಇದೆ ಅನ್ನೋದನ್ನು ಎಲ್ಲರೂ ಮರುಕಲ್ಪನೆ ಮಾಡಿಕೊಳ್ಳಬಹುದು. ಗ್ರಾಹಕ ಅಂಕಿ-ಅಂಶಗಳನ್ನು ಅವರ ಪಯಣದ ವಿವಿಧ ಹಂತಗಳಾಗಿ ವಿಂಗಡಿಸಲಾಗುತ್ತದೆ. ಇಂದಿನ ಜಗತ್ತಿನಲ್ಲಿ ವ್ಯವಸ್ಥಿತ ಏಕೀಕರಣದ ಕೊರತೆ ಸ್ವೀಕಾರಾರ್ಹವಲ್ಲ. ಒಂದು ಯಶಸ್ವಿ ಒಮ್ನಿ-ಚಾನೆಲ್​​ನ ಅನುಷ್ಠಾನ ಕೆಳಕಂಡ ಘಟಕಗಳನ್ನು ಒಳಗೊಂಡಿರುತ್ತದೆ.

ಅತಿಯಾದ ದೈಹಿಕ ಶ್ರಮ ಬೇಡ...

ಇವತ್ತಿನ ಗ್ರಾಹಕರ ಶಾಪಿಂಗ್ ಅನುಭವದಲ್ಲಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳು ಪ್ರಮುಖ ಪಾತ್ರ ವಹಿಸುತ್ತವೆ. ಗ್ರಾಹಕರ ಆಸ್ತಿ ಖರೀದಿ, ಅನ್ವೇಷಣೆ ಮತ್ತು ನಂತರದ ಮಾರಾಟ ಸೇವೆಯನ್ನು ಡಿಜಿಟಲ್ ಡಿವೈಸ್ ಬದಲಾಯಿಸುತ್ತದೆ. ಹಾಗಾಗಿ ಮುಂದಿನ ದಿನಗಳಲ್ಲಿ ಓಮ್ನಿ ಚಾನೆಲ್ ರಿಟೇಲ್ ತಂತ್ರಗಳು ಮಹತ್ವದ ಪಾತ್ರ ವಹಿಸಲಿವೆ. ಗ್ರಾಹಕರ ಖರೀದಿ ಪಯಣದಲ್ಲಿ ಅತ್ಯುತ್ತಮವಾದ ಡಿಜಿಟಲ್ ಮತ್ತು ಭೌತಿಕ ಜಗತ್ತನ್ನು ಸಂಯೋಜಿಸಲುವ ಕಾರ್ಯ ಚಿಲ್ಲರೆ ವ್ಯಾಪಾರಿಗಳದ್ದು. ಈ ಸಮೀಕ್ಷೆಯ ಪ್ರಕಾರ ಶೇ.27ರಷ್ಟು ಮಂದಿ, ಹೆಚ್ಚು ವೆರೈಟಿ ಇದೆ ಎಂಬ ಕಾರಣಕ್ಕೆ ಅಂಗಡಿಗಳಿಗೆ ಹೋಗಿ ಖರೀದಿಸುವುದಕ್ಕಿಂತ ಹೆಚ್ಚಾಗಿ ಆನ್​ಲೈನ್ ಶಾಪಿಂಗ್ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಅಂಗಡಿಗಳಲ್ಲಿರುವ ಉತ್ಪನ್ನಗಳು ಮತ್ತು ವೆರೈಟಿಗಳನ್ನು ಪರಿಚಯಿಸಲು ಚಿಲ್ಲರೆ ವ್ಯಾಪಾರಿಗಳು ಕೂಡ ಡಿಜಿಟಲ್ ತಂತ್ರಜ್ಞಾನದ ಮೊರೆಹೋಗಬೇಕು. ಉತ್ಪನ್ನದ ಸ್ಟೈಲ್, ಸೈಝ್, ಸ್ಟಾಕ್ ಇಲ್ಲದಿದ್ರೆ ಅದರ ಬಗ್ಗೆ ಮಾಹಿತಿ ಎಲ್ಲವನ್ನೂ ಕೊಟ್ಟು ಆನ್ಲೈನ್ನಲ್ಲೇ ಬುಕ್ಕಿಂಗ್ ಅವಕಾಶ ಕಲ್ಪಿಸಬಹುದು. ನೇರವಾಗಿ ನಿಮ್ಮ ಅಂಗಡಿಗಳಿಂದ್ಲೇ ಗ್ರಾಹಕರ ಮನೆಬಾಗಿಲಿಗೆ ಉತ್ಪನ್ನಗಳನ್ನು ತಲುಪಿಸಬಹುದು. ಶೋರೂಮಿಂಗ್ ವಿದ್ಯಮಾನ ನಿಜಕ್ಕೂ ಉಳಿಯುವಂಥದ್ದು ಎಂಬುದನ್ನು ಚಿಲ್ಲರೆ ವ್ಯಾಪಾರಿಗಳು ಅರ್ಥಮಾಡಿಕೊಳ್ಳಬೇಕು. PwC ಸಮೀಕ್ಷೆಯ ಪ್ರಕಾರ ಶೇ.77ರಷ್ಟು ಗ್ರಾಹಕರು ಉತ್ಪನ್ನಗಳನ್ನು ಮಳಿಗೆಗಳಲ್ಲಿ ಹುಡುಕಾಡುತ್ತಾರೆ. ಬಳಿಕ ಅದನ್ನು ಆನ್ಲೈನ್ನಲ್ಲಿ ಕೊಂಡುಕೊಳ್ಳುತ್ತಾರೆ. ಕೊಂಡುಕೊಳ್ಳುವುದಕ್ಕಿಂದ ಮುಂಚೆ ಉತ್ಪನ್ನವನ್ನು ಅಂಗಡಿಗಳಲ್ಲಿ ಮುಟ್ಟಿ ನೋಡಿ ಗುಣಮಟ್ಟ ಪರೀಕ್ಷಿಸಬಹುದು, ಜೊತೆಗೆ ಆನ್ಲೈನ್ನಲ್ಲಿ ಕಡಿಮೆ ಬೆಲೆಗೆ ಕೊಂಡುಕೊಳ್ಳಬಹುದು ಎನ್ನುತ್ತಾರೆ ಗ್ರಾಹಕರು. ತಮ್ಮ ಅಂಗಡಿಗಳು ಡಿಜಿಟಲ್ ತಂತ್ರಜ್ಞಾನವುಳ್ಳ ಶೋರೂಮ್ಗಳು, ಖರೀದಿ ಕೇಂದ್ರಗಳು, ಸಾಗಣೆ ಕೇಂದ್ರಗಳು, ಪಿಕ್ ಅಪ್ ಪಾಯಿಂಟ್ ಮತ್ತು ಹೆಲ್ಪ್ ಡೆಸ್ಕ್ಗಳೆಂದು ಚಿಲ್ಲರೆ ವ್ಯಾಪಾರಿಗಳು ಊಹಿಸಿಕೊಳ್ಳಬೇಕು.

ವೇಗವಾಗಿ ಮತ್ತು ಸುಲಭವಾಗಿರುವಂತೆ ಮಾಡಿ...

Dyn ಸಮೀಕ್ಷೆಯ ಪ್ರಕಾರ ಆನ್​ಲೈನ್ ಖರೀದಿ ಸಂದರ್ಭದಲ್ಲಿ ವೆಬ್​ಸೈಟ್​ನಲ್ಲಿ ಉತ್ಪನ್ನವೊಂದು ಲೋಡ್ ಆಗಲು 3 ಸೆಕೆಂಡ್​ಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡ್ರೆ ಅದಕ್ಕಾಗಿ ಕಾಯುವ ತಾಳ್ಮೆ ಶೇ.65ರಷ್ಟು ಗ್ರಾಹಕರಲ್ಲಿಲ್ಲ. ಒಳ್ಳೆ ಬೆಲೆ ಮತ್ತು ಡೀಲ್​ಗಳ ಹೊರತಾಗಿಯೂ ಇನ್ನೂ ಕೆಲ ಅಂಶಗಳನ್ನು ಗ್ರಾಹಕರು ಗಮನಿಸುತ್ತಾರೆ.

1. 24x7 ಖರೀದಿ ಸಾಮರ್ಥ್ಯ (ಶೇ.46)

2. ಅಂಗಡಿಗಳಿಗೆ ಎಡತಾಕುವ ತಲೆನೋವಿಲ್ಲ (ಶೇ.38)

3. ಹುಡುಕಾಟ ಮತ್ತು ಉತ್ಪನ್ನಗಳ ಹೋಲಿಕೆ ಸುಲಭ (ಶೇ.36)

ಈ ಎಲ್ಲಾ ಅನುಕೂಲಗಳನ್ನು ಚಿಲ್ಲರೆ ವ್ಯಾಪಾರಿಗಳು ಕಲ್ಪಿಸಿಕೊಟ್ರೆ ಗ್ರಾಹಕರಿಗೆ ಖರೀದಿ ಸುಲಭ. ಮಳಿಗೆಗಳು ತಮ್ಮ ಭೇಟಿಗೆ ಯೋಗ್ಯವಾಗಿರಲಿ ಎಂಬ ನಿರೀಕ್ಷೆ ಕೂಡ ಗ್ರಾಹಕರಲ್ಲಿರುತ್ತದೆ.

ಡಿಜಿಟಲ್ ತಂತ್ರಜ್ಞಾನದ ಮೂಲಕ ನೌಕರರ ಸಬಲೀಕರಣ

ಡಿಜಿಟಲ್ ಉಪಕರಣಗಳ ಮೂಲಕ ನೌಕರರ ಸಬಲೀಕರಣಕ್ಕೆ ಇದು ಸುಸಮಯ. ಸಿಬ್ಬಂದಿ ಈಗಾಗ್ಲೇ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ. ಉತ್ಪನ್ನಗಳ ಬಗ್ಗೆ ಮಾಹಿತಿ, ತರಬೇತಿ, ಕಾನೂನು ಮತ್ತು ನಿಯಂತ್ರಕಗಳ ಬಗ್ಗೆ ಅಪಡೇಟ್, ಗ್ರಾಹಕರ ಆದ್ಯತೆಗಳ ಬಗ್ಗೆ ಸಿಬ್ಬಂದಿಗೆ ತಿಳಿಸಿಕೊಡುವ ಮೂಲಕ ಡಿಜಿಟಲ್ ತಂತ್ರಜ್ಞಾನವನ್ನು ಪರಿಚಯಿಸಬಹುದು.

ಮಾರಾಟ ಮಾತ್ರವಲ್ಲ ಸೇವೆಯ ಅನುಭವವೂ ತಡೆರಹಿತವಾಗಿರಲಿ...

ಚಿಲ್ಲರೆ ವ್ಯಾಪಾರಿಗಳು ತಮ್ಮ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಲಿ ಅಂತಾ ಗ್ರಾಹಕರು ನಿರೀಕ್ಷಿಸುತ್ತಾರೆ. ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಲ್ಲಿ, ಯಾವುದೇ ಡಿವೈಸ್ ಮೂಲಕ, ಯಾವುದೇ ವಾಹಿನಿ ಮೂಲಕ ತಮ್ಮ ಸಮಸ್ಯೆಗೆ ಪರಿಹಾರ ಹುಡುಕಲಿ ಅನ್ನೋದು ಗ್ರಾಹಕರ ಬಯಕೆ. PwC ಸಮೀಕ್ಷೆಯ ಪ್ರಕಾರ ಶೇ.16ರಷ್ಟು ಗ್ರಾಹಕರಿಗೆ ಬ್ರಾಂಡ್ಗಳ ಸಾಮಾಜಿಕ ತಾಣಗಳ ಪೇಜ್ನಲ್ಲಿನ ಸೇವೆ ಇಷ್ಟವಾಗಿದೆ. ಜಗತ್ತಿನ ಮೂಲೆ ಮೂಲೆಯಲ್ಲೂ ಸಾಮಾಜಿಕ ಜಾಲತಾಣಳಗಳ ಸೇವೆ ವಿಸ್ತರಿಸಿರುವುದರಿಂದ ಗ್ರಾಹಕರ ನಿರೀಕ್ಷೆ ಕೂಡ ಹೆಚ್ಚಾಗಿದೆ.

image


ತೀರ್ಮಾನ : ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಇದು ಸೂಕ್ತ ಸಮಯ...

ಚಿಲ್ಲರೆ ವ್ಯಾಪರಿಗಳು ತಂತ್ರಜ್ಞಾನದ ಜೊತೆ ಹೆಚ್ಚು ಪರಿಚಿತರಾಗಿದ್ದಾರೆ. ಮಾರುಕಟ್ಟೆಯಲ್ಲಿ ಉಳಿಯಬೇಕೆಂದರೆ ಗ್ರಾಹಕರ ಪ್ರಯಾಣದ ಉದ್ದಕ್ಕೂ ಡಿಜಿಟಲ್ ಅನುಭವಗಳನ್ನು ಒದಗಿಸುವುದನ್ನು ಮರುಕಲ್ಪನೆ ಮಾಡಿಕೊಳ್ಳಬೇಕು. ತಂತ್ರಜ್ಞಾನ ಸಂಬಂಧಿತ ಮೂಲಸೌಕರ್ಯಕ್ಕಾಗಿ ಅವರು ಹೂಡಿಕೆ ಮಾಡಲೇಬೇಕು. ಆಗ ವೇಗವಾಗಿ ಪ್ರಯೋಗಗಳನ್ನು ಮಾಡಬಹುದು, ಸುಧಾರಣೆ ಕೂಡ ಕ್ಷಿಪ್ರಗತಿಯಲ್ಲಾಗಲಿದೆ. ಸ್ಥಿರವಾದ, ಸಂದರ್ಭೋಚಿತ, ವೈಯಕ್ತಿಕ ಅನುಭವಗಳನ್ನು ಸ್ವೀಕರಿಸುವ ಗ್ರಾಹಕರ ನಿರೀಕ್ಷೆಗಳಿಗೆ ಅನುಗುಣವಾಗಿ ಕಾರ್ಯಾಚರಣೆ ನಡೆಸಬೇಕು. ಒಟ್ಟಾರೆ ಹೊಸತನವಿದ್ರೆ ಮಾತ್ರ ಭವಿಷ್ಯವಿದೆ ಅನ್ನೋದಂತೂ ಸ್ಪಷ್ಟ.

ಲೇಖಕರು : ಮಂಜುನಾಥ್ ಪಡಿಗರ್

ಅನುವಾದಕರು : ಭಾರತಿ ಭಟ್

ಸೈನ್ ಅಪ್ ನಮ್ಮ ದೈನಂದಿನ ಸುದ್ದಿಪತ್ರಕ್ಕಾಗಿ