ಸರಳ ವಿವಾಹಕ್ಕೆ ಜೈ ಎಂದ ಯುವ ಜೋಡಿ : ಮದುವೆಗೆ ಕೂಡಿಟ್ಟ ಹಣ ರೈತರಿಗೆ ದಾನ

ಟೀಮ್ ವೈ.ಎಸ್.ಕನ್ನಡ 

ಸರಳ ವಿವಾಹಕ್ಕೆ ಜೈ ಎಂದ ಯುವ ಜೋಡಿ : ಮದುವೆಗೆ ಕೂಡಿಟ್ಟ ಹಣ ರೈತರಿಗೆ ದಾನ

Sunday July 17, 2016,

2 min Read

ಅವರದ್ದು ನಿಜಕ್ಕೂ ಮಾದರಿ ಮದುವೆ. ಅದ್ಧೂರಿ ವಿವಾಹದ ಹೆಸರಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವವರೆಲ್ಲ ಈ ಯುವ ಜೋಡಿಯನ್ನು ನೋಡಿ ಕಲಿಯಬೇಕು. ಅಷ್ಟಕ್ಕೂ ಅವರೇನು ಮಾಡಿದ್ದಾರೆ ಅಂತೀರಾ? ಮದ್ವೆಗೆ ಅಂತ ಕೂಡಿಟ್ಟ ಹಣವನ್ನೆಲ್ಲ ಬಡ ರೈತರಿಗೆ ದಾನ ಮಾಡಿ ಸಿಂಪಲ್ಲಾಗಿ ರಜಿಸ್ಟರ್ ಮ್ಯಾರೇಜ್ ಮಾಡ್ಕೊಂಡಿದ್ದಾರೆ. ಹೌದು ಹೀಗೆ ಡಿಫರೆಂಟ್ ವಿವಾಹದ ಮೂಲಕ ಸಾಮಾಜಿಕ ಕಳಕಳಿ ಮೆರೆದವರು ಅಮರಾವತಿಯ ಅಭಯ್ ದೇವರೆ ಹಾಗೂ ಪ್ರೀತಿ ಕುಂಭಾರೆ. ಅಭಯ್ ಐಆರ್​ಎಸ್ ಅಧಿಕಾರಿಯಾದ್ರೆ, ಪ್ರೀತಿ ಮುಂಬೈನ್ ಐಡಿಬಿಐ ಬ್ಯಾಂಕ್ನಲ್ಲಿ ಅಸಿಸ್ಟಂಟ್ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದಾರೆ. ರೈತರ ಆತ್ಮಹತ್ಯೆಯಿಂದ ಅದೆಷ್ಟೋ ಕುಟುಂಬಗಳು ದುಡಿಯುವ ಮಗನನ್ನೇ ಕಳೆದುಕೊಂಡು ಕಂಗಾಲಾಗಿವೆ. ಅವರನ್ನೆಲ್ಲ ನೋಡಿ ಅಭಯ್ ಹಾಗೂ ಪ್ರೀತಿ ಮರುಕಪಟ್ಟಿದ್ರು. ಅದ್ಧೂರಿ ಮದುವೆ ಬದಲು ರಜಿಸ್ಟರ್ ವಿವಾಹಕ್ಕೆ ಸೈ ಎಂದ ಈ ಜೋಡಿ, 10 ಬಡ ರೈತ ಕುಟುಂಬಗಳಿಗೆ ತಲಾ 20,000 ರೂಪಾಯಿಯಂತೆ ನೀಡುವ ಮೂಲಕ ನೆರವು ನೀಡಿದೆ. ಆಡಂಬರದ ಆಚರಣೆ, ಭೂರಿ ಭೋಜನ ಎಲ್ಲವನ್ನೂ ತ್ಯಜಿಸಿ, ಅನ್ನದಾತರಿಗೆ ಆಧಾರವಾಗಿದ್ದಾರೆ.

image


ರೈತಪರ ಹೋರಾಟಗಾರ ಚಂದ್ರಕಾಂತ್ ವಾಂಖೆಡೆ ಕೂಡ ಮದುವೆ ಸಮಾರಂಭದಲ್ಲಿ ಹಾಜರಿದ್ರು. ರೈತರ ಆತ್ಮಹತ್ಯೆ ಕುರಿತಂತೆ ಮಾತನಾಡಿದ್ರು. ಆತ್ಮಹತ್ಯೆಗೆ ಸಂಬಂಧಪಟ್ಟಂತೆ ವಿವಿಧ ಘೋಷಣೆಗಳು ಮತ್ತು ಜಾಗೃತಿ ಸಂದೇಶಗಳುಳ್ಳ ಫಲಕಗಳನ್ನು ವಿವಾಹ ಸಮಾರಂಭದಲ್ಲಿ ಪ್ರದರ್ಶಿಸಲಾಯ್ತು. ಅಷ್ಟೇ ಅಲ್ಲ ಅಮರಾವತಿ, ಕರಂಜಾ ಲಾಡ್ ಸೇರಿದಂತೆ 5 ಗ್ರಂಥಾಲಯಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ 52,000 ರೂಪಾಯಿ ಮೌಲ್ಯದ ಪುಸ್ತಕಗಳನ್ನು ಅಭಯ ಹಾಗೂ ಪ್ರೀತಿ ಕೊಡುಗೆಯಾಗಿ ನೀಡಿದ್ದಾರೆ.

ಅಭಯ್ ಒಮ್ಮೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿಯಾಗಿದ್ದರು. ಆಗ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಕಾರ್ಯಕರ್ತನಾಗುವಂತೆ ಪ್ರಣಬ್ ಮುಖರ್ಜಿ ಸಲಹೆ ನೀಡಿದ್ರು. ರಾಷ್ಟ್ರಪತಿಗಳ ಮಾತಿನಿಂದ ಪ್ರೇರಣೆ ಪಡೆದ ಅಭಯ್ ಸರಳ ವಿವಾಹವಾಗುವ ಮೂಲಕ ಮಣ್ಣಿನ ಮಕ್ಕಳ ನೋವಿಗೆ ಸ್ಪಂದಿಸಿದ್ದಾರೆ. ಇನ್ನು ಪ್ರೀತಿ ಕೂಡ ಇಂತಹ ಕಾರ್ಯದ ಮೂಲಕ ಸಾಮಾಜಿಕ ಬದಲಾವಣೆ ತರಬಹುದೆಂಬ ತತ್ವದಲ್ಲಿ ನಂಬಿಕೆ ಉಳ್ಳವರು. ಹಾಗಾಗಿ ಪತಿಯ ಪ್ರಯತ್ನಕ್ಕೆ ಸಾಥ್ ಕೊಟ್ಟಿದ್ದಾರೆ.

ಪ್ರತಿವರ್ಷ ಭಾರತದಲ್ಲಿ ಒಂದು ಲಕ್ಷ ಕೋಟಿಗೂ ಅಧಿಕ ಹಣ ಮದುವೆಗಳಿಗೆ ಖರ್ಚಾಗುತ್ತಿದೆ. ``ಭಾರತದಂತಹ ಬಡ ರಾಷ್ಟ್ರದಲ್ಲಿ ಮದುವೆ ಖರ್ಚು ನಿಜಕ್ಕೂ ದಿಗ್ಭ್ರಮೆ ಹುಟ್ಟಿಸುವಂತಿದೆ. ನಮ್ಮ ದೇಶದ ಬಜೆಟ್ ಕೇವಲ 16 ಲಕ್ಷ ಕೋಟಿ ರೂಪಾಯಿ. ಜೀವನಮಟ್ಟದಲ್ಲಿ ಅಸಮಾನತೆ ಇದ್ದರೂ ಒಂದು ಮದುವೆಗೆ ಮೂರು ಲಕ್ಷ ರೂಪಾಯಿಯಿಂದ 5 ಕೋಟಿ ರೂಪಾಯಿವರೆಗೂ ಖರ್ಚು ಮಾಡಲಾಗ್ತಿದೆ'' ಎನ್ನುತ್ತಾರೆ ಅಭಯ್. ಅದೆಷ್ಟೋ ಕುಟುಂಬಗಳು ಸಾಲಗಾರರಾಗಲು ಕೂಡ ಇಂತಹ ಮದುವೆಗಳೇ ಕಾರಣ, ಯಾಕಂದ್ರೆ ಮದುವೆಗಳ ವೆಚ್ಚವೇ ಹೆಚ್ಚಾಗಿದೆ ಅನ್ನೋದು ಅವರ ಅಭಿಪ್ರಾಯ. ಸಾಮಾಜಿಕ ಒತ್ತಡಗಳಿಂದಾಗಿ ಬಡ ಕುಟುಂಬಗಳು ಕೂಡ ಅವರ ಆಸ್ತಿಯನ್ನೆಲ್ಲ ಮಾರಾಟ ಮಾಡಿ ಅಥವಾ ಸಾಲ ಪಡೆದುಕೊಂಡು ಜೀವಮಾನದ ಆದಾಯವನ್ನೆಲ್ಲ ಮದುವೆಗೆ ಖರ್ಚು ಮಾಡುತ್ತಿವೆ ಅನ್ನೋದು ಅವರ ವಿಷಾದದ ನುಡಿ.

ಒಟ್ಟಿನಲ್ಲಿ ಅದ್ಧೂರಿ ಮದುವೆ ಕೈಬಿಟ್ಟು ಸರಳ ವಿವಾಹ ಮಾಡಿಕೊಳ್ಳುವ ಮೂಲಕ ಅಭಯ್ ಹಾಗೂ ಪ್ರೀತಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಬಡ ರೈತ ಕುಟುಂಬಗಳಲ್ಲಿ ಹೊಸ ಆಶಾಕಿರಣ ಮೂಡಿಸಿದ್ದಾರೆ.

ಇದನ್ನೂ ಓದಿ...

ಕನ್ನಡ ಪದ ಹಾಡಿ ಗೆದ್ದರು- ದೇಸಿ ಸ್ಟೈಲ್ ಹಾಡುಗಾರನಿಗೆ ವಿಶ್ವದಾಧ್ಯಂತ ಅಭಿಮಾನಿಗಳು

2 ಲಕ್ಷ ಯೂಸರ್ಸ್​ ಮತ್ತು 45 ಲಕ್ಷ ಮಂತ್ಲಿ ಟ್ರಾಫಿಕ್..!