ವಿಕಲಚೇತನರ ಅಭಿವೃದ್ಧಿಗೆ ಕೆಲಸ ತ್ಯಜಿಸಿದ ಟೆಕ್ಕಿ

ಉಷಾ ಹರೀಶ್​​

ವಿಕಲಚೇತನರ ಅಭಿವೃದ್ಧಿಗೆ ಕೆಲಸ ತ್ಯಜಿಸಿದ ಟೆಕ್ಕಿ

Tuesday January 05, 2016,

2 min Read

ಎಂಜಿನಿಯರಿಂಗ್ ಓದಿದ ಮೇಲೆ ಎಂಎನ್​ಸಿ ಕಂಪನಿಯಲ್ಲಿ ಒಳ್ಳೆ ಕೆಲಸ ಗಿಟ್ಟಿಸಿಕೊಂಡು ಕೈ ತುಂಬಾ ಸಂಬಳ ಪಡೆದರೆ ಲೈಫ್ ಸೆಟಲ್ ಆಗುತ್ತದೆ ಅಂತ ಎಂದುಕೊಂಡು ಇಂಜಿನಿಯಿರಿಂಗ್ ಓದುವವರೇ ಹೆಚ್ಚು. ಆದರೆ ಇಲ್ಲೊಬ್ಬ ಮಹಿಳೆ ಇಂಜಿನಿಯರಿಂಗ್ ಓದಿ ಬಹು ರಾಷ್ಟ್ರೀಯಕಂಪನಿಯಲ್ಲಿ ಸಿಕ್ಕಿದ್ದ ಉತ್ತಮ ಉದ್ಯೋಗವನ್ನು ತೊರೆದು ಅಂಗವಿಕಲರ ಸೇವೆಯಲ್ಲಿ ಸಾರ್ಥಕತೆ ಕಾಣುತ್ತಿದ್ದಾರೆ.

ಹೌದು ನಿವೃತ್ತ ಕೆಎಎಸ್ ಅಧಿಕಾರಿ ಜಗದೀಶ್ ಜೋಯಿಸ್ ಅವರ ಪುತ್ರಿ ಮೇಘನಾ ಜೋಯಿಸ್ ಅವರೇ ಕೆಲಸ ಬಿಟ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಮಹಿಳೆ. ಅಂಗವಿಕಲರ ಏಳಿಗೆಗಾಗಿ ಮೇಘನಾ ಪ್ರೇರಣಾ ರಿಸೋರ್ಸ್ ಸೆಂಟರ್ ಎಂಬ ಸರ್ಕಾರೇತರ ಸಂಸ್ಥೆಯನ್ನು ಕಟ್ಟಿಕೊಂಡಿದ್ದಾರೆ. ಅದರ ಮೂಲಕ ಅವರು ನೂರಾರು ಅಂಗವಿಕಲ ಹೆಣ್ಣುಮಕ್ಕಳಿಗೆ ಸ್ವಾವಲಂಬಿ ಬದುಕು ನೀಡುತ್ತಿದ್ದಾರೆ.

image


ಇಂತಹ ಒಳ್ಳೆ ಕೆಲಸಕ್ಕಾಗಿ ಮೇಘನಾ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ 2015 ನೇ ಸಾಲಿನ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಗೊರಗುಂಟೆ ಪಾಳ್ಯದಲ್ಲಿರುವ ತಮ್ಮ ಪ್ರೇರಣಾದಲ್ಲಿ 18 ರಿಂದ 45 ವಯಸ್ಸಿನ ಮಹಿಳೆಯರು ಆಶ್ರಯ ಪಡೆದಿದ್ದಾರೆ.

ತಾಯಿಯಂತೆ ಮಕ್ಕಳು ನೂಲಿನಂತೆ ಸೀರೆ ಎಂಬಂತೆ ಮೇಘನಾ ಅವರ ತಾಯಿ ಪ್ರಶಾಂತ ಅವರು ಈ ಪ್ರೇರಣಾ ಸಂಸ್ಥೆಯನ್ನು ಹುಟ್ಟು ಹಾಕಿದ್ದು, 2007ರಲ್ಲಿ ತಮ್ಮ ತಾಯಿ ಅನಾರೋಗ್ಯಕ್ಕೆ ತುತ್ತಾದಾಗ ಮೇಘನಾ ಪ್ರೇರಣಾಕ್ಕೆ ದಾರಿಯಾದರು.

ಮೇಘನಾ ಚಿಕ್ಕವರಾಗಿದ್ದಾಗ ಮನೆಯಲ್ಲಿ ಒಂದು ಭಾಗದಲ್ಲಿ ಅಮ್ಮ ಅಂಗವಿಕಲರಿಗೆ ಆಶ್ರಯ ನೀಡಿದ್ದರು, ಆ ಮಕ್ಕಳಿಗೆ ನೃತ್ಯ ಕಲಿಸಿಕೊಡುತ್ತಿದ್ದ ಮೇಘನಾ ಅವರು ಆಗಲೇ ಎಲ್ಲರ ಪಾಲಿಗೆ ಮೆಚ್ಚಿನವರಾಗಿದ್ದರು. ಅಂಗವಿಕಲರ ಜೊತೆ ಜೊತೆಯಲ್ಲೇ ಬೆಳೆದು ಬಂದ ಕಾರಣ ಮೇಘನಾ ಅವರನ್ನು ಮುಖ್ಯವಾಹಿನಿಗೆ ತರುವಲ್ಲಿ ಎದುರಾಗುವ ಸವಾಲುಗಳ ಬಗ್ಗೆ ಅರಿವಿತ್ತು.

image


ರಾಜ್ಯದ ವಿವಿಧ ಭಾಗದ ಅಂಗವಿಕಲರಿಗೆ ಕೌಶಲ ತರಬೇತಿ ನೀಡಿ ಅವರಿಗೆ ಕಾರ್ಖಾನೆಗಳಲ್ಲಿ ಕೆಲಸ ಕೊಡಿಸುತ್ತಿದ್ದಾರೆ. ಮಾನಸಿಕ ಅಸ್ವಸ್ಥರು, ಸಂಪೂರ್ಣ ಅಂಗವಿಕಲರಾದವರಿಗೆ ತಮ್ಮ ದೈನಂದಿನ ಕೆಲಸವನ್ನು ತಾವೆ ಮಾಡಿಕೊಳ್ಳುವಂತೆ ತರಬೇತಿ ನೀಡುತ್ತಿದ್ದಾರೆ.

ತಮ್ಮ ಸಂಸ್ಥೆಗೆ ಬರುವ ವಿವಿಧ ಬಗೆಯ ಅಂಗವಿಕಲ ಯುವತಿಯರಿಗೆ ಹೆಚ್ಚಿನ ಕೌಶಲದ ಅಗತ್ಯವಿಲ್ಲದ ಕೆಲಸಗಳಾದ ಪ್ಯಾಕಿಂಗ್ , ಕಚೇರಿಗಳಲ್ಲಿ ಅರ್ಜಿ ವಿತರಿಸುವುದು, ಟೆಲಿಫೋನ್ ಎಕ್ಸಿಕ್ಯೂಟಿವ್, ಮತ್ತಿತರ 60 ಕೆಲಸಗಳನ್ನು ಗುರುತಿಸಿ ಕಾರ್ಖಾನೆಗಳಲ್ಲಿ ಗಾರ್ಮೆಂಟ್ಸ್​​ಗಳಲ್ಲಿ ಕೆಲಸ ಕೊಡಿಸುತ್ತಿದ್ದಾರೆ. ಕೆಲಸ ಸಿಕ್ಕಿದ ಯುವತಿಯರಿಗೆ ಸ್ವಂತವಾಗಿ ಬದುಕುವುದು ಸಾಧ್ಯವಾಗಬೇಕು ಎಂಬ ಉದ್ದೆಶದಿಂದ ಬೇರೆ ಬೇರೆ ಅಂಗವಿಕಲರನ್ನು ಐದಾರು ಮಂದಿಯ ಗುಂಪು ಮಾಡಿ ಬಾಡಿಗೆ ಮನೆಯಲಿ ವಾಸಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.

ಇದುವರೆಗೂ 800 ಜನ ಯುವತಿಯರಿಗೆ ಕೆಲಸ ಕೊಡಿಸಿರುವ ಮೇಘಾನ ಅವರು 26 ಮಂದಿಗೆ ಮದುವೆ ಮಾಡಿಸಿದ್ದಾರೆ. ಮದುವೆ ಮತ್ತು ಕೆಲಸ ಯಾವುದು ಆಗದ 120 ಮಂದಿ ಯುವತಿಯರು ಪ್ರೇರಣಾದಲ್ಲಿ ಆಶ್ರಯ ಪಡೆದಿದ್ದಾರೆ.

ಬೀದಿಗಳಲ್ಲಿ ಭಿಕ್ಷಾಟನೆ ಮಾಡುವ ಸಾಕಷ್ಟು ಮಂದಿ ಅಂಗವಿಕಲರನ್ನು ತಂದು ಬಿಡುತ್ತಾರೆ ಅಂತವರಿಗೂ ಸಹ ಇಲ್ಲಿ ಆಶ್ರಯ ದೊರೆಯುತ್ತದೆ.

ಹದಿನೆಂಟು ವರ್ಷದವರೆಗೆ ಶಿಕ್ಷಣ ಆಶ್ರಯ ನೀಡುವ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಸಾಕಷ್ಟಿವೆ ಆಮೇಲೆ ಮುಂದೇನು ಎಂಬ ಆತಂಕ ಪೋಷಕರಿಗೆ ಇರುತ್ತದೆ. ಅಂತಹ ಪ್ರಶ್ನೆಗೆ ಮೇಘನಾ ಅವರು ಉತ್ತವಾಗಿದ್ದಾರೆ. ಕೇವಲ 30 ವರ್ಷ ವಯಸ್ಸಿನ ಮೇಘನ ಅವರ ಈ ಸಾಮಾಜಿಕ ಕೆಲಸಕ್ಕೆ ಪತಿ ವಿಶ್ರುತ್ ಅವರ ಬೆಂಬಲವು ಇದೆ.