ಸಾಂಸ್ಕೃತಿಕ ನಗರಿಯ ಹೊಸ ಶೈಕ್ಷಣಿಕ ಸಾಧನೆ

ವಿಶಾಂತ್​

ಸಾಂಸ್ಕೃತಿಕ ನಗರಿಯ ಹೊಸ ಶೈಕ್ಷಣಿಕ ಸಾಧನೆ

Saturday April 09, 2016,

4 min Read

ಶಿಕ್ಷಣವೆಂಬುದು ಇವತ್ತು ಜೀವನದ ಅವಿಭಾಜ್ಯ ಅಂಗವಾಗಿದೆ. ಶಿಕ್ಷಣ ಇಲ್ಲದವರಿಗೆ ಬೆಲೆ ಇಲ್ಲ ಎನ್ನುವಂತಾಗಿದೆ. ಇವತ್ತು ಎಷ್ಟು ಹೆಚ್ಚು ಓದಿರುತ್ತಾರೋ ಸಮಾಜದಲ್ಲಿ ಅಂಥವರಿಗೆ ಹೆಚ್ಚು ಮರ್ಯಾದೆ ಸಿಗುತ್ತದೆ, ಹಾಗೂ ಉನ್ನತ ಹುದ್ದೆ. ಆದರೆ ಬಡತನದಿಂದಾಗಿ ಮಕ್ಕಳು ಶಾಲೆಯಿಂದಲೇ ದೂರ ಉಳಿಯುವಂತಹ ಘಟನೆಗಳು ಹೆಚ್ಚಾಗಿದ್ದವು. ಹೀಗಾಗಿಯೇ 6ರಿಂದ 14 ವರ್ಷದೊಳಗಿನ ಅಂತಹ ಬಡಮಕ್ಕಳಿಗೆ ಉಚಿತ ಹಾಗೂ ಮೌಲ್ಯಯುತ ಶಿಕ್ಷಣ ನೀಡುವ ಸಲುವಾಗ ಕೇಂದ್ರ ಸರ್ಕಾರ 2000-01ರಲ್ಲಿ ಸರ್ವ ಶಿಕ್ಷಣ ಅಭಿಯಾನ ಆರಂಭಿಸಿತ್ತು. ಈಗ ಈ ಸರ್ವ ಶಿಕ್ಷಣ ಅಭಿಯಾನಕ್ಕೆ ಭರ್ತಿ 15 ವರ್ಷ. ಹಾಗಾದರೆ ಈ ಯೋಜನೆ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ? ಹೇಗೆ ಉಪಯೋಗವಾಗುತ್ತಿದೆ ಎಂಬುದರ ಕುರಿತು ಒಂದು ರಿಪೋರ್ಟ್ ನೀಡುವುದು ನಮ್ಮ ಇಂದಿನ ‘ಯುವರ್‍ಸ್ಟೋರಿ’ಯ ಸ್ಪೆಷಲ್ ಸ್ಟೋರಿ. ಅದಕ್ಕೆ ನಮ್ಮ ಮೈಸೂರು ನಗರವನ್ನು ಕೇಸ್ ಸ್ಟಡಿಯನ್ನಾಗಿಟ್ಟುಕೊಂಡು ಈ ರಿಪೋರ್ಟ್ ಮಾಡಲಾಗಿದೆ.

image


ಇದು ನಮ್ಮ ಮೈಸೂರು

ಕರ್ನಾಟಕ ರಾಜ್ಯದ ಸಾಂಸ್ಕೃತಿಕ ರಾಜಧಾನಿ, ಅರಮನೆಗಳ ಬೀಡು, ಸುಸಂಸ್ಕೃತ ಜನರ ನೆಲೆವೀಡು ಮೈಸೂರು. ಈ ಸಾಂಸ್ಕೃತಿಕ ಜಿಲ್ಲೆಗೆ 7 ತಾಲೂಕುಗಳಿದ್ದು, ಶೈಕ್ಷಣಿಕವಾಗಿ ಒಂಬತ್ತು ವಲಯಗಳಾಗಿ ವಿಭಜಿಸಲಾಗಿದೆ. ಜಿಲ್ಲೆಯಲ್ಲಿ 2,033 ವಸತಿ ಪ್ರದೇಶಗಳನ್ನೊಳಗೊಂಡ 1,533 ಕಂದಾಯ ಗ್ರಾಮಗಳು ಅಸ್ತಿತ್ವದಲ್ಲಿವೆ. ಈ ವಿಸ್ತಾರ ಭೂ ಪ್ರದೇಶದಲ್ಲಿ 30,01,127 ಜನರು ವಾಸಿಸುತ್ತಿದ್ದು, 15,11,600 ಪುರುಷರು ಹಾಗೂ 14,89,527 ಮಹಿಳೆಯರು ವಾಸಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 6 ರಿಂದ 14 ವರ್ಷ ವಯೋಮಾನದ 1,95,771 ಗಂಡು ಮಕ್ಕಳು ಹಾಗೂ 1,88,790 ಹೆಣ್ಣು ಮಕ್ಕಳು ಒಟ್ಟು 3,84,561 ಮಕ್ಕಳಿದ್ದು, ಈ ಮಕ್ಕಳಿಗೆ ಸಂವಿಧಾನದ ರೀತ್ಯಾ ಉಚಿತ ಹಾಗೂ ಕಡ್ಡಾಯ ಶಿಕ್ಷಣದ ಮೂಲಭೂತ ಹಕ್ಕನ್ನು ಪೂರೈಸಲು ರಾಜ್ಯ ಸರ್ಕಾರ ಕಟಿಬದ್ಧವಾಗಿ ನಿಂತಿದೆ. ಈ ಮಕ್ಕಳ ಶಿಕ್ಷಣಕ್ಕಾಗಿ 1,090 ಕಿರಿಯ, 1,535 ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ 686 ಪ್ರೌಢಶಾಲೆಗಳು, 2,149 ಸರ್ಕಾರಿ ಶಾಲೆಗಳೂ ಸೇರಿದಂತೆ 3,311 ಶಾಲೆಗ¼ಲ್ಲಿ 12,729 ಶಿಕ್ಷಕರು ಈ ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸುತ್ತಿದ್ದಾರೆ. ಈ ಎಲ್ಲಾ ಶಾಲೆಗಳ ಉಸ್ತುವಾರಿಗಾಗಿ 9 ಕ್ಷೇತ್ರಶಿಕ್ಷಣಾಧಿಕಾರಿಗಳು, 9 ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳು ಹಾಗೂ 176 ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು ಕಾರ್ಯ ನಿರ್ವಹಿಸುತ್ತಿದಾರೆ.

ಇದನ್ನು ಓದಿ: ನನಗೆ ಗೊತ್ತಿಲ್ಲ ಎನ್ನಲು ಏಕೆ ಮುಜುಗರ..?

1ರಿಂದ 10ನೇ ತರಗತಿಯ ವರೆಗೆ ಒಟ್ಟು 4,44,123 ಮಕ್ಕಳು ಈ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದು, 83,601 ಪರಿಶಿಷ್ಟ ಜಾತಿಯ, 54,336 ಪರಿಶಿಷ್ಟ ವರ್ಗದ ಹಾಗೂ 53,518 ಮುಸ್ಲಿಂ ಸಮುದಾಯದ ಮಕ್ಕಳಿರುವುದನ್ನು ಕಾಣಬಹುದು. ಸರಕಾರಿ ಹಾಗೂ ಅನುದಾನಿತ ಶಾಲೆಗ¼ಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಹಾಗೂ ಮಧ್ಯಾಹ್ನದ ಉಪಹಾರ ಹಾಗೂ 8ನೇ ತರಗತಿ ಮಕ್ಕಳಿಗೆ ಬೈಸಿಕಲ್ ಒದಗಿಸಲಾಗಿದೆ.

image


ಶಾಲೆಗಳಲ್ಲಿ ಆಗಿರುವ ಕೆಲಸಗಳೇನು?

ಗುಣಾತ್ಮಕ ಶಿಕ್ಷಣ ಕಲ್ಪಿಸುವ ಉದ್ದೇಶದಿಂದ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ 2001ರಿಂದ ಶಾಲೆಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳಾದ 1,800 ಹೆಚ್ಚುವರಿ ಕೊಠಡಿ, 113 ಉನ್ನತೀಕರಿಸಿದ ಹೆಚ್ಚುವರಿ ಕೊಠಡಿ, 256 ಮುಖ್ಯ ಶಿಕ್ಷಕರ ಕೊಠಡಿ, 860 ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯ, 974 ಸಾಮಾನ್ಯ ಶೌಚಾಲಯ, 1,116 ಹೆಣ್ಣುಮಕ್ಕಳ ಶೌಚಾಲಯ, 61 ವಿಶೇಷ ಅಗತ್ಯವುಳ್ಳ ಮಕ್ಕಳ ಶೌಚಾಲಯ, 2,119 ಶಾಲೆಗಳಿಗೆ ವಿದ್ಯುತ್ ಸಂಪರ್ಕ, 584 ಶಾಲೆಗಳಿಗೆ ಪೀಠೋಪಕರಣ, 459 ಶಾಲೆಗಳಿಗೆ ಆವರಣಗೋಡೆಯನ್ನು ನಿರ್ಮಿಸಲಾಗಿದೆ. ಅಲ್ಲದೆ ಈವರೆಗೆ 403 ಶಾಲೆಗಳಲ್ಲಿ ದುರಸ್ತಿ ಕಾರ್ಯವನ್ನು ಮಾಡಲಾಗಿದ್ದು, 1,912 ಶಾಲೆಗಳಲ್ಲಿ ಗ್ರಂಥಾಲಯ ಹಾಗೂ ಅಗ್ನಿನಂದಕಗಳನ್ನು ಅಳವಡಿಸಲಾಗಿದೆ. ಜಿಲ್ಲೆಯಾದ್ಯಂತ 55 ಹೊಸ ಶಾಲೆಗಳನ್ನು ತೆರೆಯಲಾಗಿದೆ.

ಗುಣಮಟ್ಟದ ಕಲಿಕೆಗಾಗಿ ಪ್ರತಿ ಶಾಲೆಯಲ್ಲಿ ಶಾಲಾಭಿವೃದ್ದಿ ಯೋಜನೆ, ಶಾಲಾ ಶೈಕ್ಷಣಿಕ ಯೋಜನೆ ಹಾಗೂ ಶಾಲಾ ವಾರ್ಷಿಕ ಕ್ರಿಯಾಯೋಜನೆಯನ್ನು ಸಮುದಾಯದೊಡನೆ ಚರ್ಚಿಸಿ ಸಿದ್ದಪಡಿಸಿ ಅದರಂತೆ ಮಕ್ಕಳ ಗುಣಮಟ್ಟದ ಕಲಿಕೆಗೆ ಕಾರ್ಯಚಟುವಟಿಕೆಗಳನ್ನು ರೂಪಿಸಲಾಗಿದೆ, ಜಿಲ್ಲೆಯಾದ್ಯಂತ ಸ್ವಕಲಿಕೆ, ಸಂತಸದ ಕಲಿಕೆ, ಸ್ವವೇಗದ ಕಲಿಕೆಗಾಗಿ ನಲಿಕಲಿ ಅನುಷ್ಠಾನದೊಂದಿಗೆ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನವನ್ನು ಮಕ್ಕಳಿಗಾಗಿ ಅಳವಡಿಸಿಕೊಳ್ಳಲಾಗಿದೆ. ಮಕ್ಕಳ ಕಲಿಕೆಗೆ ಪೂರಕವಾಗಿರುವ ಓದುವೆ ನಾನು ಕಾರ್ಡು, ಗಣಿತ ಕಿಟ್, ವಿಜ್ಞಾನ ಕಿಟ್, ಜಿಯೋಕಿಟ್‍ಗಳನ್ನು ಒದಗಿಸುವ ಜೊತೆಗೆ ಗ್ರಂಥಾಲಯದ ಪುಸ್ತಕ ಖರೀದಿಗಾಗಿ ಪ್ರತಿ ಶಾಲೆಗೆ ರೂ.10,000/- ಗಳನ್ನು ನೀಡಿದೆ. 169 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ತಂತ್ರಜ್ಞಾನ ಬಳಸಿ ಮಕ್ಕಳಿಗೆ ಪಾಠ ಹೇಳಿಕೊಡುವ ಕಾರ್ಯ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ.

ಮಕ್ಕಳ ಕಲಿಕೆಯನ್ನು ಪೋಷಕರು ಹಾಗೂ ಸಮುದಾಯದೊಂದಿಗೆ ಹಂಚಿಕೊಳ್ಳಲು ಸಮುದಾಯದತ್ತ ಶಾಲೆ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಗುತ್ತಿದೆ, ಅಷ್ಟೆ ಅಲ್ಲದೆ ಕಲಿಕೋತ್ಸವದಂತಹ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ನೀಡಲಾಗುತ್ತಿರುವ ಗುಣಮಟ್ಟದ ಶಿಕ್ಷಣದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ, “ಪಢೇ ಭಾರತ್, ಬಢೇ ಬಾರತ್” ಕಾರ್ಯಕ್ರಮದಡಿ ಸ್ಪಷ್ಟ ಓದು - ಶುದ್ಧ ಬರಹ, ಕಲಿಕಾ ಕಾರ್ಡುಗಳು, ಸಾಧನ ಕಾರ್ಡುಗಳ ಬಳಕೆಯ ಜೊತೆಗೆ ಪ್ರತಿ ತರಗತಿಯಲ್ಲಿ ಪ್ಲಾನಲ್ ಬೋರ್ಡ್ ವ್ಯವಸ್ಥೆ ಮಾಡಿ ಮಕ್ಕಳ ಓದುವ ಮತ್ತು ಬರೆಯುವ ಅಭಿವ್ಯಕ್ತಿಯನ್ನು ಹೊರಹಾಕಲು ಉತ್ತಮ ಅವಕಾಶ ಕಲ್ಪಿಸಲಾಗಿದೆ.

image


ಮಕ್ಕಳನ್ನು ಶಾಲೆಗೆ ಮರಳಿ ಕರೆತರುವ ಯೋಜನೆ

ಶಾಲೆಯಿಂದ ಹೊರಗುಳಿದ ಮಕ್ಕಳಿಗಾಗಿ ವಿಶೇಷ ಗಮನ ನೀಡಲಾಗುತ್ತಿದೆ. 2014-15ನೇ ಸಾಲಿನಲ್ಲಿ 5,512 ಇಂತಹ ಮಕ್ಕಳನ್ನು ಗುರುತಿಸಲಾಗಿದೆ. ಇವರಲ್ಲಿ 4,515 ಮಕ್ಕ¼ನ್ನು ಮುಖ್ಯ ವಾಹಿನಿಗೆ ತರಲಾಗಿದೆ. 2015-16ನೇ ಸಾಲಿನಲ್ಲಿ 1,715 ಮಕ್ಕಳನ್ನು ಗುರುತಿಸಿದ್ದು, ಇವರನ್ನು ಮುಖ್ಯವಾಹಿನಿಗೆ ತರಲು 3 ತಿಂಗಳ ವಸತಿ ಸಹಿತ ಹಾಗೂ ವಸತಿ ರಹಿತ ಚಿಣ್ಣರ ಅಂಗಳ ಕಾರ್ಯಕ್ರಮ, ಒಂದು ವರ್ಷದ ವಿಶೇಷ ತರಬೇತಿ ಕಾರ್ಯಕ್ರಮ, ಚಿಣ್ಣರ ತಂಗುಧಾಮ ಹಾಗೂ ವಲಸೆ ಹೋಗುವ ಮಕ್ಕಳಿಗೆ ಋತುಮಾನ ತರಬೇತಿ ಕೇಂದ್ರ ಹಾಗೂ ಟೆಂಟ್ ಶಾಲೆಗಳನ್ನು ಸ್ಥಾಪಿಸಲಾಗಿದೆ. ಈ ಎಲ್ಲಾ ಕಾರ್ಯಚಟುವಟಿಕೆಗಳ ಮೂಲಕ 1,244 ಮಕ್ಕಳನ್ನು ಮುಖ್ಯವಾಹಿನಿಗೆ ತರಲಾಗಿದೆ. ಈ ಕಾರ್ಯದಲ್ಲಿ ಎನ್.ಜಿ.ಓ.ಗಳನ್ನು ತೊಡಗಿಸಿಕೊಳ್ಳಲಾಗಿದೆ. ಶಾಲಾ ಲಭ್ಯತೆ ಇಲ್ಲದಿರುವ ಜನವಸತಿ ಪ್ರದೇಶದ 427 ಮಕ್ಕಳಿಗೆ ಸಾರಿಗೆ ಸೌಲಭ್ಯ ಕಲ್ಪಿಸಿ ಈ ಮಕ್ಕಳು ಶಾಲೆಯಿಂದ ಹೊರಗುಳಿಯುವುದನ್ನು ತಪ್ಪಿಸಲಾಗಿದೆ.

image


ಜಿಲ್ಲೆಯಲ್ಲಿ 5 ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯಗಳಲ್ಲಿ 429 ಹೆಣ್ಣು ಮಕ್ಕಳು ಮತ್ತು 4 ಕರ್ನಾಟಕ ಕಸ್ತೂರಬಾ ಗಾಂಧಿ ವಸತಿ ನಿಲಯಗಳಲ್ಲಿ 243 ಹೆಣ್ಣುಮಕ್ಕಳು ಹಾಗೂ 1 ವಿಶಿಷ್ಟ ವರ್ಗದ ಮಕ್ಕಳ ವಸತಿ ಶಾಲೆಯಲ್ಲಿರುವ 100 ಮಕ್ಕಳಿಗೆ ಆಶ್ರಯ ಕಲ್ಪಿಸಲಾಗಿದೆ. ವಿಶೇಷ ಅಗತ್ಯವುಳ್ಳ ಮಕ್ಕಳ ಶಿಕ್ಷಣಕ್ಕಾಗಿ ಒತ್ತುನೀಡಲಾಗಿದೆ. 4,534 ಮಕ್ಕಳಲ್ಲಿ 4,035 ಮಕ್ಕಳು ಶಾಲೆಯಲ್ಲಿ ಔಪಚಾರಿಕ ಶಿಕ್ಷಣ ಪಡೆಯುತ್ತಿದ್ದಾರೆ. ತೀವ್ರ ನ್ಯೂನ್ಯತೆಯುಳ್ಳ 300 ಮಕ್ಕಳಿಗೆ ಗೃಹಾಧಾರಿತ ಶಿಕ್ಷಣ ಹಾಗೂ 199 ಮಕ್ಕಳಿಗೆ 32 ಶಾಲಾ ಸಿದ್ಧತಾ ಕೇಂದ್ರಗಳಲ್ಲಿ ವಿಶೇಷ ಶಿಕ್ಷಕರ ಮುಖಾಂತರ ಜೀವನ ಕೌಶಲ್ಯ ಹಾಗೂ ನಿತ್ಯ ಚಟುವಟಿಕೆಗಳ ಬಗ್ಗೆ ತರಬೇತಿಯನ್ನು ನೀಡಲಾಗುತ್ತಿದೆ, ಈ ಎಲ್ಲಾ ವಿಕಲ ಚೇತನ ಮಕ್ಕಳಿಗೆ ವೈದ್ಯಕೀಯ ತಪಾಸಣಾ ಮೌಲ್ಯಾಂಕನ ಶಿಬಿರ ನಡೆಸಿ ವೈದ್ಯರ ಶಿಫಾರಸ್ಸು ಅನುಗುಣವಾಗಿ ಸಾಧನ ಸಲಕರಣೆಗಳನ್ನು ನೀಡಲಾಗುತ್ತ್ತಿದೆ. ಪ್ರಸ್ತುತ ಸಾಲಿನಲ್ಲಿ 506 ಮಕ್ಕಳು ಈ ಸೌಲಭ್ಯ ಪಡೆದಿದ್ದಾರೆ. ಈ ಮಕ್ಕಳಿಗೆ ವೈದ್ಯರ ಶಿಫಾರಸ್ಸಿನ ಅನುಸಾರ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಆಸ್ಪತ್ರೆಗಳಲ್ಲಿ ಕರೆಕ್ಟೀವ್ ಸರ್ಜರಿ ಮಾಡಿಸಲಾಗುತ್ತಿದೆ. ಈ ಮಕ್ಕಳು ಶಾಲೆಗಳಲ್ಲಿ ಸಲೀಸಾಗಿ ಓಡಾಡಲು ಎಲ್ಲಾ ಶಾಲೆಗಳಲ್ಲೂ ರ್ಯಾಂಪ್‍ಗಳನ್ನು ನಿರ್ಮಿಸಲಾಗಿದೆ. ಫಿಜಿಯೋಥೆರಪಿಗಾಗಿ ಮತ್ತು ಶಾಲಾ ಸಿದ್ದತಾ ಕೇಂದ್ರಕ್ಕೆ ಬಂದು ಹೋಗುವ ಮಕ್ಕಳಿಗೆ ಮತ್ತು ಪೋಷಕರಿಗೆ ಎಸ್ಕಾರ್ಟ್ ಭತ್ಯೆ ನೀಡಲಾಗುತ್ತಿದೆ. ವಿಶ್ವ ಅಂಗವಿಕಲರ ದಿನಾಚರಣೆ ಆಚರಿಸುವ ಮೂಲಕ ವಿಶೇಷ ಅಗತ್ಯವುಳ್ಳ ಮಕ್ಕಳ ಬಗ್ಗೆ ತೋರಬೇಕಾದ ಕಾಳಜಿ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಲಾಗಿದೆ.

image


ಸರ್ವ ಶಿಕ್ಷಣ ಅಭಿಯಾನ ಯೋಜನೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿವಿಧ ಮಹತ್ವಕಾಂಕ್ಷಿ ಯೋಜನೆಗಳ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸಲು ಮೈಸೂರು ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ಪ್ರತಿ ವರ್ಷ ಇಲಾಖಾ ಮಳಿಗೆ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೆ ಮೈಸೂರು ಜಿಲ್ಲಾ ಆಡಳಿತದ ನೆರವಿನೊಂದಿಗೆ ದಸರಾ ಜಂಬೂಸವಾರಿಯಲ್ಲಿ ಇಲಾಖೆಯ ಸ್ಥಭ್ಧಚಿತ್ರವನ್ನು ನಿರ್ಮಿಸಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಇಲಾಖೆಯ ಕಾರ್ಯಕ್ರಮಗಳನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪಿಸುವ ಪ್ರಯತ್ನವನ್ನು ಮಾಡಲಾಗಿದೆ. ಜಿಲ್ಲೆಯ ಅಧಿಕಾರಿ ವೃಂದದ ಸಾರ್ಥಕ ಶ್ರಮದ ಫಲವಾಗಿ ಇಂದು ಇಲ್ಲಿನ ಮಕ್ಕಳು ಸರ್ವತೋಮುಖ ಅಭಿವೃದ್ಧಿನ್ನು ಕಾಣುವತ್ತ ಅಡಿಯಿಡುತ್ತಿದ್ದಾರೆ. ಇವರ ಸುಂದರ ನಾಳೆಗಳ ಕನಸಿಗೆ ನಾವೆಲ್ಲರೂ ನೀರೆರೆದು ಪೋಷಿಸೋಣ.

ಇದನ್ನು ಓದಿ:

1. ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಬಂದಿದೆ ಈಸಿ `ಡ್ರಿವನ್'

2. ‘ಸಂತೃಪ್ತಿ’ಯಲ್ಲಿ ತೃಪ್ತಿಯಿಂದ ಉತ್ತರ ಕರ್ನಾಟಕದ ತಿನಿಸುಗಳನ್ನು ಸವಿಯಿರಿ....

3. ಕಾರ್ಪೋರೇಟ್ ಗಿಫ್ಟ್ ಗಳಲ್ಲಿ ಹಸಿರಿನ ಜ್ಞಾನ : ಇದು ಪರಿಸರದ ಬಗ್ಗೆ ‘ಟ್ರಿ ಅಪ್ ’ಗಿರುವ ಪರಿಜ್ಞಾನ..!