ಟೀಂ ಇಂಡಿಯಾದಲ್ಲಿ ಕಾಫಿನಾಡಿನ ಕುವರಿ - ಕರುನಾಡಿಗೆ ಹೆಮ್ಮೆ ತಂದ ವೇದಾ ಕೃಷ್ಣಮೂರ್ತಿ

ಭಾರತಿ

ಟೀಂ ಇಂಡಿಯಾದಲ್ಲಿ ಕಾಫಿನಾಡಿನ ಕುವರಿ - ಕರುನಾಡಿಗೆ ಹೆಮ್ಮೆ ತಂದ ವೇದಾ ಕೃಷ್ಣಮೂರ್ತಿ

Tuesday March 08, 2016,

2 min Read

ವೇದಾ ಕೃಷ್ಣಮೂರ್ತಿ, ಟೀಂ ಇಂಡಿಯಾದ ಭರವಸೆಯ ಆಟಗಾರ್ತಿ, ಇವರು ಕರುನಾಡಿನ ಹೆಮ್ಮೆಯ ಕುವರಿ. ಹೌದು ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸ್ತಾ ಇರೋ ವೇದಾ ಕೃಷ್ಣಮೂರ್ತಿ ಕರ್ನಾಟಕದವರು ಅನ್ನೋದು ನಿಜಕ್ಕೂ ಹೆಮ್ಮೆಯ ಸಂಗತಿ. ಗ್ರಾಮೀಣ ಪ್ರತಿಭೆ ವೇದಾ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಹೊಸ ಭರವಸೆ ಮೂಡಿಸಿದ್ದಾರೆ.

image


ವೇದಾ ಕೃಷ್ಣಮೂರ್ತಿ ಅವರು ತವರು ಕಾಫಿ ನಾಡು ಚಿಕ್ಕಮಗಳೂರಿನ ಕಡೂರು ತಾಲೂಕು. ವೇದಾ ಎಸ್.ಜೆ.ಕೃಷ್ಣಮೂರ್ತಿ ಅವರ ಮಗಳು. ಅವರು ಜನಿಸಿದ್ದು 1992ರ ಅಕ್ಟೋಬರ್ 16ರಂದು. 23ರ ಹರೆಯದ ವೇದಾ ಅವರಿಗೆ ಬಾಲ್ಯದಿಂದ್ಲೇ ಕ್ರಿಕೆಟ್ ಬಗ್ಗೆ ಒಲವಿತ್ತು. ಅವರು ಗಲ್ಲಿಗಳಲ್ಲಿ ಹುಡುಗರ ಜೊತೆ ಕ್ರಿಕೆಟ್ ಆಡ್ತಾ ಇದ್ರು. ಇದನ್ನು ನೋಡಿ ಕೊಂಕು ಮಾತನಾಡಿದವರೂ ಇದ್ದಾರೆ. ಹಾಗಂತ ಅದಕ್ಕೆಲ್ಲ ವೇದಾ ತಲೆಕೆಡಿಸಿಕೊಂಡಿರಲಿಲ್ಲ. ಟೀಂ ಇಂಡಿಯಾ ಆಟಗಾರ್ತಿಯರ ಸಾಧನೆಗಳನ್ನು ನೋಡಿದಾಗಲೆಲ್ಲ ತಾವು ಕೂಡ ಭಾರತ ತಂಡದಲ್ಲಿ ಸ್ಥಾನ ಪಡೆಯಬೇಕು ಅನ್ನೋ ಛಲ ಅವರಲ್ಲಿ ಮೂಡುತ್ತಿತ್ತು. ವೇದಾ ಅವರ ಆಸೆಗೆ ನೀರೆರೆದು ಪೋಷಿಸಿದವರು ತಂದೆ ಕೃಷ್ಣಮೂರ್ತಿ. ತಾನು ಕ್ರಿಕೆಟರ್ ಆಗ್ತೀನಿ ಎಂದು ಆಸೆಗಣ್ಣುಗಳಿಂದ ಕೇಳಿದ ಮಗಳಿಗೆ ಅವರ ಬೇಡ ಎನ್ನಲಿಲ್ಲ.

ಇದನ್ನು ಓದಿ: ಉದ್ಯಮಿಗಳ ಯಶಸ್ಸಿನ ಕಹಾನಿಗೆ ನಾಂದಿ ಹಾಡಿದ ಶ್ರೀನಿವಾಸ್ …

ಬೆಂಗಳೂರಿಗೆ ಬಂದ ವೇದಾ, ಕರ್ನಾಟಕ ಇನ್ಸ್​ಟಿಟ್ಯೂಟ್ ಆಫ್ ಕ್ರಿಕೆಟ್ ಅಕಾಡೆಮಿ ಸೇರಿಕೊಂಡ್ರು. ಅಲ್ಲಿ ಚೆನ್ನಾಗಿ ತರಬೇತಿ ಪಡೆದ ಅವರಿಗೆ ಕರ್ನಾಟಕ ತಂಡದಲ್ಲಿ ಸ್ಥಾನ ದಕ್ಕಿತ್ತು. ನಂತರ ನಡೆದದ್ದೆಲ್ಲ ಚಮತ್ಕಾರ. ಕ್ರಿಕೆಟ್ ಲೋಕದ ಹೊಸ ನಕ್ಷತ್ರದಂತೆ ಮಿನುಗಿದ ವೇದಾ, 2011ರಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡ್ರು. ವೇದಾ ಕೃಷ್ಣಮೂರ್ತಿ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದು 2011ರ ಜೂನ್ 30ರಂದು. ಡರ್ಬಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಕನ್ನಡತಿ ವೇದಾ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನಕ್ಕೆ ಎಂಟ್ರಿ ಕೊಟ್ರು. ಅಲ್ಲಿಂದ ಇಲ್ಲಿಯವರೆಗೂ ವೇದಾ ಹಿಂತಿರುಗಿ ನೋಡಿಲ್ಲ. ಶತಕ, ಅರ್ಧಶತಕಗಳ ಮಳೆ ಸುರಿಸದೇ ಇದ್ರೂ ವೇದಾ ಟೀಂ ಇಂಡಿಯಾದ ಭರವಸೆಯ ಆಟಗಾರ್ತಿ ಎನಿಸಿಕೊಂಡಿದ್ದಾರೆ. ತಂಡ ಸಂಕಷ್ಟದಲ್ಲಿದ್ದಾಗಲೆಲ್ಲ ಉತ್ತಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ನೆರವಾಗಿದ್ದಾರೆ.

ವೇದಾ ರೈಟ್ ಹ್ಯಾಂಡ್ ಬ್ಯಾಟರ್​​ ಹಾಗೂ ಲೆಗ್ ಬ್ರೇಕ್ ಬೌಲರ್. ಇದುವರೆಗೆ 20 ಏಕದಿನ ಪಂದಗಳನ್ನಾಡಿರುವ ಅವರು 309 ರನ್ ಗಳಿಸಿದ್ದಾರೆ. ಅವರ ಬೆಸ್ಟ್ ಸ್ಕೋರ್ ಅಂದ್ರೆ 63 ರನ್. ವೇದಾ ಇದುವರೆಗೆ ಮೂರು ಅರ್ಧಶತಕ ಬಾರಿಸಿದ್ದಾರೆ. ಇನ್ನು ಟಿ-20 ಪಂದ್ಯಗಳಲ್ಲೂ ವೇದಾ ಸೈ ಎನಿಸಿಕೊಂಡಿದ್ದಾರೆ. ಈವರೆಗೆ 26 ಟಿ-20 ಪಂದ್ಯಗಳನ್ನಾಡಿದ್ದು, 274 ರನ್ ಕಲೆಹಾಕಿದ್ದಾರೆ. ವಿಶೇಷ ಅಂದ್ರೆ ಇತ್ತೀಚೆಗಷ್ಟೆ ಶ್ರೀಲಂಕಾ ವಿರುದ್ಧ ನಡೆದ 3 ಪಂದ್ಯಗಳ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವಲ್ಲಿ ಟೀಂ ಇಂಡಿಯಾಕ್ಕೆ ನೆರವಾಗಿದ್ದು ವೇದಾ ಕೃಷ್ಣಮೂರ್ತಿ ಅವರ ಸಮಯೋಚಿತ ಬ್ಯಾಟಿಂಗ್. ಲಂಕಾ ವಿರುದ್ಧದ ಅಂತಿಮ ಪಂದ್ಯದಲ್ಲಿ 61 ರನ್ ಸಿಡಿಸಿದ ವೇದಾ, ಭಾರತದ ಗೆಲುವಿನ ರೂವಾರಿಯಾದ್ರು.

image


ಏಕದಿನ ಹಾಗೂ ಟಿ-20 ಎರಡೂ ಮಾದರಿಯ ಕ್ರಿಕೆಟ್‍ನಲ್ಲಿ ಉತ್ತಮ ಪ್ರದರ್ಶನ ನೀಡ್ತಾ ಇರುವ ವೇದಾ ಭವಿಷ್ಯದಲ್ಲಿ ಕರ್ನಾಟಕದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಿಸಲಿ ಅನ್ನೋದೇ ಎಲ್ಲರ ಆಶಯ. ಅಷ್ಟೇ ಅಲ್ಲ ವೇದಾ ಕೃಷ್ಣಮೂರ್ತಿ ಅವರು ಕೂಡ ತಮ್ಮ ಕ್ರಿಕೆಟ್ ಬದುಕಿನ ಬಗ್ಗೆ ನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಇನ್ನಷ್ಟು ಒಳ್ಳೆಯ ಇನ್ನಿಂಗ್ಸ್ ಮೂಲಕ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಗೆಲುವಿನ ದಡ ಮುಟ್ಟಿಸಬೇಕು ಅನ್ನೋದು ಅವರ ಹೆಬ್ಬಯಕೆ. ಜೊತೆಗೆ ಶೀಘ್ರದಲ್ಲೇ ಟೆಸ್ಟ್ ತಂಡದಲ್ಲೂ ಸ್ಥಾನ ಪಡೆಯುವ ವಿಶ್ವಾಸ ಅವರಲ್ಲಿದೆ. ಕ್ರಿಕೆಟ್‍ನ ಮೂರು ಮಾದರಿಗಳಲ್ಲೂ ಉತ್ತಮ ಪ್ರದರ್ಶನ ನೀಡಬೇಕೆಂಬ ಛಲ ಅವರದ್ದು. ಇದಕ್ಕಾಗಿ ನಿರಂತರ ಅಭ್ಯಾಸವನ್ನು ಕೂಡ ನಡೆಸುತ್ತಿದ್ದಾರೆ.

ಕರ್ನಾಟಕದ ಗ್ರಾಮೀಣ ಪ್ರತಿಭೆ ಭಾರತೀಯ ಮಹಿಳಾ ಕ್ರಿಕೆಟ್ ಟೀಮ್‍ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ ಅನ್ನೋದೇ ನಮ್ಮ ರಾಜ್ಯದ ಪಾಲಿಗೆ ಗೌರವ ಮತ್ತು ಹೆಮ್ಮೆಯ ಸಂಗತಿ. ಅವರ ಸಾಧನೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಕ್ರಿಕೆಟ್ ಜೀವನದಲ್ಲಿ ಯಶಸ್ಸು ಅವರದ್ದಾಗಲಿ ಅಂತಾ ನಾವೆಲ್ಲ ಹಾರೈಸೋಣ. 

ಇದನ್ನು ಓದಿ: 

1. ಬೆಂಗಳೂರಿನ ಗೃಹಿಣಿಯರು ವಾಣಿ ಮೂರ್ತಿಯವರಂತೆ ಯೋಚಿಸಿ...

2. ಗೋಲ್ಡ್, ರೋಲ್ ಗೋಲ್ಡ್ ಆಭರಣ ಬೊರ್ ಆಗಿದ್ಯಾ! ಹಾಗಾದ್ರೆ ಹೂವಿಂದ ತಯಾರದ ಡಿಫರೆಂಟ್ ಆಭರಣ ಟ್ರೈ ಮಾಡಿ

3. ನಿಮ್ಮ ಬ್ಯುಟಿಫುಲ್ ಲುಕ್ ಗಾಗಿ ಡೆಸ್ರಿಂಗ್ ಸೆನ್ಸ್ ಹೀಗಿದ್ದರೆ ಚೆನ್ನ.. !