ಬಾಲ ಕಾರ್ಮಿಕನಾಗಿದ್ದವನು ಇಂದು ದೇಶವೇ ಹೆಮ್ಮೆ ಪಡುವಂತಹ ಕಲಾವಿದ

ಟೀಮ್​ ವೈ.ಎಸ್​. ಕನ್ನಡ

ಬಾಲ ಕಾರ್ಮಿಕನಾಗಿದ್ದವನು ಇಂದು ದೇಶವೇ ಹೆಮ್ಮೆ ಪಡುವಂತಹ ಕಲಾವಿದ

Wednesday May 25, 2016,

2 min Read

ಸುದರ್ಶನ್ ಪಟ್ನಾಯಕ್ ಹೆಸರು ಹೇಳಿದರೆ ಇಂದು ನಮ್ಮ ಕಣ್ಣಮುಂದೆ ಅದ್ಭುತ ಮರಳಿನ ಶಿಲ್ಪಗಳು ಒಮ್ಮೆ ಪಾಸಾಗಿ ಹೋಗುತ್ತವೆ. ಅಬ್ದುಲ್ ಕಲಾಂ, ಸಚಿನ್ ನಿವೃತ್ತಿಗೊಂಡಾಗ ವಿಶಿಷ್ಟವಾಗಿ ರಚಿಸಿದ ಶಿಲ್ಪ, ಹೀಗೆ ಸುದರ್ಶನ್ ಸಾಕಷ್ಟು ಮರಳಿನ ಶಿಲ್ಪಗಳನ್ನು ರಚಿಸಿದ್ದಾರೆ. ಇಂತಹ ಸುದರ್ಶನ್ ಒಂದು ಕಾಲದಲ್ಲಿ ಹೊಟ್ಟೆ ಹೊರೆಯಲು ಬಾಲ ಕಾರ್ಮಿಕನಾಗಿ ದುಡಿಯುತ್ತಿದ್ದ ಎಂದರೆ ನೀವು ನಂಬಲೇಬೇಕು.

image


ಎಳೆಯ ವಯಸ್ಸಿನಿಂದಲೂ ಚಿತ್ರಗಳನ್ನು ಬರೆಯುವದೆಂದರೆ ಏನೋ ಖುಷಿ, ಸಂತೋಷ. ಆದರೆ ಬಣ್ಣಗಳನ್ನು ಕೊಳ್ಳಲು ಹಣದ ಕೊರತೆ ಕಾಡುತ್ತಿತ್ತು. ಆಗಲೇ ಕಂಡಿದ್ದು ಮನೆಯ ಮುಂದಿನ ಬೀಚ್​ನಲ್ಲಿದ್ದ ಮರಳು. ಅದನ್ನೇ ಬಳಸಿಕೊಂಡು ಶಿಲ್ಪಗಳನ್ನು ರಚಿಸಿದರೆ ಹೇಗೆ ಎಂದು ಯೋಚಿಸಿ ಸಣ್ಣ ಪ್ರಯತ್ನವನ್ನು ಆರಂಭಿಸಿದರು.ಆಗ ಸುದರ್ಶನ್​ಗೆ 9 ವರ್ಷ. ವರ್ಷಗಳು ಉರುಳುತ್ತಿದ್ದಂತೆ ಸುದರ್ಶನ್​ಗೆ ಮರಳು ಶಿಲ್ಪ ರಚನೆ ಸುಲಲಿತವಾಗಿ ಒಲಿಯಿತು.

image


ಯಾವುದೇ ಶಾಲೆಗೆ ಹೋಗಿಲ್ಲ

ಮರಳು ಶಿಲ್ಪವನ್ನು ರಚಿಸುವುದು ಸಾಮಾನ್ಯದ ಸಂಗತಿಯಲ್ಲ, ಆದರೂ ಯಾವುದೇ ಶಾಲೆಗೆ ಹೋಗದೆ ಸುದರ್ಶನ್ ಇದನ್ನು ಕಲಿತಿದ್ದಾರೆ. ಮಾಹಿತಿ ಪ್ರಕಾರ ಭಾರತದಲ್ಲಿ ಮರಳಿನ ಬಗ್ಗೆ ಕಲಿಸುವಂಥಹ ಯಾವುದೇ ವಿದ್ಯಾಸಂಸ್ಥೆಗಳು ಇಲ್ಲ. ನಿರಂತರ ಕಲಿಕೆಯಿಂದ ಸುದರ್ಶನ್ ಈ ಮಟ್ಟಕ್ಕೆ ಬೆಳೆದಿದ್ದಾರೆ.

" ಮರಳು ಶಿಲ್ಪವನ್ನು ನಾನು ನಿರಂತರ ಅಭ್ಯಾಸದಿಂದ ಕಲಿತಿದ್ದು. ಆರಂಭದಲ್ಲಿ ಇದಕ್ಕಾಗಿ ಸಾಕಷ್ಟು ಹಣ ವ್ಯಯ ಮಾಡಿದ್ದೇನೆ. ಆದರೆ ಇಂದಿನ ನನ್ನ ಯಶಸ್ಸು ಅದನ್ನೆಲ್ಲಾ ಮುಚ್ಚಿ ಹಾಕಿದೆ. ಶಾಲೆಯೊಂದನ್ನು ತೆರೆಯುವ ಆಲೋಚನೆಯಿದೆ. ಒಬ್ಬ ಬಾಲ ಕಾರ್ಮಿಕನಾಗಿ ಜೀವನದ ಬಂಡಿ ಎಳೆಯಲು ಹರಸಾಹಸಪಡುತ್ತಿದ್ದ ದಿನಗಳ ನನ್ನ ಕಣ್ಣ ಮುಂದೆ ಇನ್ನು ಹಾಗೇ ಇವೆ. ಇಂದು ನಾನು ಸಾಕಷ್ಟು ಹೆಸರು ಮಾಡಿರುವ ಕಲಾವಿದನಾಗಿರಬಹುದು. ಅದರೆ ಒಂದು ಕಾಲದಲ್ಲಿ ಕಡು ಬಡತನದಿಂದ ಬಳಲಿದ್ದೇನೆ. ಆ ಸಮಯದಲ್ಲಿ ದೇವರು ನನಗೆ ಈ ಕಲೆಯನ್ನು ವರವನ್ನಾಗಿ ನೀಡಿದ. ನಮ್ಮ ದೇಶದಲ್ಲಿ ಪ್ರತಿಭಾವಂತ ಕಲಾವಿದರಿಗೆ ಉತ್ತಮ ಪ್ರೋತ್ಸಾಹ ದೊರೆಯುತ್ತದೆ ಎಂಬುದಕ್ಕೆ ನನಗೆ ದೊರೆತ ಪದ್ಮಶ್ರಿ ಪುರಸ್ಕಾರವೇ ಉದಾಹರಣೆ"
        -ಸುದರ್ಶನ್ ಪಟ್ನಾಯಕ್, ಕಲಾವಿದ

ಮರಳಿನ ಶಿಲ್ಪಗಳಿಗೆ ಹವಾಮಾನವೂ ಸಹಕಾರಿಯಾಗಬೇಕು

ಮರಳಿನ ಶಿಲ್ಪಗಳನ್ನು ಮಾಡುವುದು ತುಂಬ ಕಷ್ಟದ ಕೆಲಸ, ಇದೊಂಥರ ಚಾಲೆಂಜಿಂಗ್ ಆರ್ಟ್. ಶಿಲ್ಪಿಗಳು ಎಷ್ಟೇ ಎಚ್ಚರಿಕೆಯಿಂದ ಶಿಲ್ಪಗಳನ್ನು ಕಟ್ಟಿದಂತೆಲ್ಲಾ, ಅದು ಕೆಳಗೆ ಬೀಳುತ್ತಾ ಹೋಗುತ್ತದೆ. ಹವಾಮಾನವೂ ಮರಳು ಕಲೆಗೆ ಸಹಕಾರಿಯಾಗಿರಬೇಕು. ಆ ಕಾರಣಕ್ಕಾಗಿಯೇ ಮರಳು ಕಲಾವಿದರು ವಿಶ್ವದಲ್ಲಿ ಸಾಕಷ್ಟು ಕಡಿಮೆ ಇರುವುದು.

ಮಾಸ್ಕೋದಲ್ಲಿ ಚಿನ್ನದ ಪದಕ, ಪದ್ಮಶ್ರೀ ಗೌರವ

ಸುದರ್ಶನ್ ಪಟ್ನಾಯಕ್ ಅವರ ಕಲೆಗೆ ಭಾರತದಲ್ಲಿ ತಕ್ಕ ಬೆಂಬಲ ಮತ್ತು ಪ್ರೋತ್ಸಾಹ ದೊರೆಯುತ್ತಿದೆ. ಅದರಂತೆ ಅವರು ನಮ್ಮ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಪ್ರದರ್ಶನ ನೀಡಿದ್ದಾರೆ. ಇತ್ತೀಚಿಗೆಷ್ಟೆ ರಷ್ಯಾದ ಮಾಸ್ಕೋದಲ್ಲಿ ನಡೆದ ಅಂತರರಾಷ್ಟ್ರೀಯ ಮರಳು ಶಿಲ್ಪ ಸ್ಪರ್ಧೆಯಲ್ಲಿ 40 ದೇಶಗಳ ಸ್ಪರ್ಧಿಗಳ ನಡುವೆ ಸುದರ್ಶನ್ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಗೆದ್ದು ಭಾರತದ ಕೀರ್ತಿಯನ್ನು ಹೆಚ್ಚು ಮಾಡಿದ್ದಾರೆ. ಈ ಎಲ್ಲಾ ಸಾಧನೆಗಾಗಿ ಸುದರ್ಶನ್​ಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

image


ಸುದರ್ಶನ್ ರಚಿಸಿದ ಮರಳು ಶಿಲ್ಪಗಳಲ್ಲಿ ಎಂಟು ಕಲಾಕೃತಿಗಳು ಲಿಮ್ಕಾ ಬುಕ್ ಆಫ್​ ರೆಕಾರ್ಡ್​ನಲ್ಲಿ ಸೇರಿಕೊಂಡಿವೆ ಎಂದರೆ ಅವರ ಸಾಧನೆ ಎಷ್ಟಿರಬಹುದು ಎಂಬುದನ್ನು ಊಹಿಸಬಹುದು.

ಸುದರ್ಶನ್ ಪಟ್ನಾಯಕ್ ಅವರಿಗೆ ಮಾಸ್ಕೋದಲ್ಲಿ ಚಿನ್ನದ ಪದಕ ಗಳಿಸಿದಾಗ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಖುದ್ದು ಅವರನ್ನು ಕರೆಸಿಕೊಂಡು ಅಭಿನಂದಿಸಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅಷ್ಟೇ ಅಲ್ಲದೇ ಮಾಜಿ ರಾಷ್ಟ್ರಪತಿ ದಿವಂಗತ ಎ ಪಿ ಜೆ ಅಬ್ದುಲ್ ಕಲಾಂ ಸಹ ಅವರ ಕಚೇರಿಗೆ ಕರೆಸಿಕೊಂಡು ಅಭಿನಂದಿಸಿದ್ದರು.

ಪುರಿಯಲ್ಲಿ ಮರಳು ಶಿಲ್ಪ ಶಾಲೆ

ಭಾರತದಲ್ಲಿ ಇದುವರೆಗೂ ಮರಳು ಶಿಲ್ಪಗಳನ್ನು ಹೇಳಿಕೊಡುವಂತಹ ಒಂದೇ ಒಂದು ಶಾಲೆಗಳಿರಲಿಲ್ಲ. ಇದನ್ನರಿತ ಸುದರ್ಶನ್ ತನ್ನಲ್ಲಿರುವ ಕಲೆಯನ್ನು ಇತರರಿಗೂ ಪಸರಿಸುವ ಉದ್ದೇಶದಿಂದ ಪುರಿಯಲ್ಲಿ ಮರಳು ಕಲೆಯನ್ನು ಹೇಳಿಕೊಡುವ ಶಾಲೆಯನ್ನು ತೆರೆದಿದ್ದಾರೆ. ಅಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಒಟ್ಟಿನಲ್ಲಿ ಬಾಲ ಕಾರ್ಮಿಕನಾಗಿದ್ದವನೊಬ್ಬ ತನ್ನ ಶ್ರಮ ಬುದ್ದಿವಂತಿಕೆಯಿಂದ ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ.

ಇದನ್ನು ಓದಿ:

1. ಅಂದು 150 ರೂಪಾಯಿ ಸಂಬಳ, ಇಂದು 150 ಕೋಟಿ ರೂಪಾಯಿ ವಹಿವಾಟು ನಡೆಸುವ ಚಾಣಕ್ಯ..!

2. ಒಂದೇ ಕ್ಲಿಕ್​ನಲ್ಲಿ ದೊಡ್ಡ ಮನೆಯ ದೊಡ್ಡ ಮಾಹಿತಿ..!

3. ಗೋಧಿ ಬ್ಯಾಂಕ್​ನಿಂದ ಬದಲಾಯಿತು ಜೀವನದ ಕಥೆ...