ಒಂದು ಕಾಲದಲ್ಲಿ ಮನೆ ಮನೆಗೆ ಹೋಗಿ ಹಾಡ್ತಿದ್ದರು ರಂಜಿತ್- ಈಗ ಹಾಡು ಕೇಳಲು ದೂರ ದೂರದಿಂದ ಬರ್ತಾರೆ ಫ್ಯಾನ್ಸ್..!

ಟೀಮ್​​ ವೈ.ಎಸ್​​. ಕನ್ನಡ

ಒಂದು ಕಾಲದಲ್ಲಿ ಮನೆ ಮನೆಗೆ ಹೋಗಿ ಹಾಡ್ತಿದ್ದರು ರಂಜಿತ್- ಈಗ ಹಾಡು ಕೇಳಲು ದೂರ ದೂರದಿಂದ ಬರ್ತಾರೆ ಫ್ಯಾನ್ಸ್..!

Thursday December 03, 2015,

3 min Read

ಪ್ರತಿಭೆ ಯಾರಿಗೂ ಸೀಮಿತವಲ್ಲ. ಸತತ ಪರಿಶ್ರಮ ಹಾಗೂ ಹೋರಾಟದಿಂದ ಪ್ರತಿಭೆ ಹೊರಬರುತ್ತದೆ. ನಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಹೆಕ್ಕಿ ತೆಗೆದು ಅದಕ್ಕೊಂದು ರೂಪ ಕೊಡುವ ಜವಾಬ್ದಾರಿ ನಮ್ಮ ಹೆಗಲಿಗಿದೆ.ಹಾಡುಗಾರಿಕೆ ಕ್ಷೇತ್ರದಲ್ಲಿ ಕೇವಲ ಸಾಮರ್ಥ್ಯವನ್ನು ಹೊರತೆಗೆಯುವುದಲ್ಲದೆ ಸಾಕಷ್ಟು ಉತ್ತೇಜನ ನೀಡುವ ಅವಶ್ಯಕತೆ ಇದೆ. ಪ್ರತಿಭೆಯನ್ನು ಉನ್ನತ ಮಟ್ಟಕ್ಕೇರಿಸಲು ನಿರಂತರ ಅಭ್ಯಾಸ ಅಗತ್ಯ. ಈ ಸಂಗತಿಯನ್ನು ಅರಿತಿರುವ ರಂಜಿತ್ ರಾಜ್ವಾಡ ಗಝಲ್ ಕ್ಷೇತ್ರದಲ್ಲಿ ಹೆಸರು ಮಾಡುವ ಹೋರಾಟದಲ್ಲಿ ನಿರತರಾಗಿದ್ದಾರೆ. ರಂಜಿತ್ `ಗಝಲ್ ನ ಭವಿಷ್ಯ’ ಎಂದು ಶಾಸ್ತ್ರೀಯ ಸಂಗೀತದ ಮಾರ್ತಾಂಡ ಜಸ್ ರಾಜ್ ಭವಿಷ್ಯ ನುಡಿದಿದ್ದಾರೆ. ಗಾಯನ ಹಾಗೂ ಗಝಲ್​​​ನ್ನೇ ತನ್ನ ಜೀವನವನ್ನಾಗಿಸಿಕೊಂಡಿರುವ ಯುವ ಗಾಯಕ ರಂಜಿತ್ ರಾಜಸ್ಥಾನದ ಮಣ್ಣಿನ ವಾಸನೆ ಸೇವಿಸುತ್ತ ಬೆಳೆದವರು. ಕೆಲವು ಮಣ್ಣಿನ ಮಹಿಮೆಯಾದ್ರೆ ಮತ್ತೊಂದಿಷ್ಟು ಅವರ ಕುಟುಂಬದಿಂದ ಬಂದ ಉಡುಗೊರೆ. ತಮ್ಮ ಗಾಯನದಿಂದ ಗಝಲ್ ಪ್ರಿಯರ ಹೃದಯದಲ್ಲಿ ಮನೆ ಮಾಡಿದ್ದಾರೆ ರಂಜಿತ್. ಅಭಿಮಾನಿಗಳು ಅವರನ್ನು ಪ್ರಿನ್ಸ್ ಅಥವಾ ರಾಜ್ ಕುಮಾರ್ ಎಂದು ಕರೆಯುತ್ತಾರೆ.

image


ಯುವರ್ ಸ್ಟೋರಿ ಜೊತೆ ಮನಬಿಚ್ಚಿ ಮಾತನಾಡುತ್ತಿದ್ದ ರಂಜಿತ್ ಅವರಿಗೆ ತಮ್ಮ ಹೋರಾಟದ ದಿನಗಳು ನೆನಪಾದವು.ಆರಂಭಿಕ ಜೀವನದ ಬಗ್ಗೆ ಮಾತನಾಡುತ್ತ ` ನಾಲ್ಕು ವರ್ಷದವನಿರುವಾಗಲೇ ನಾನು ಹಾಡಲು ಶುರುಮಾಡಿದೆ. ತಂದೆ ಬೆಳಿಗ್ಗೆ 6.30ರಿಂದ 9 ಗಂಟೆಯವರೆಗೆ ಅಭ್ಯಾಸ ಮಾಡಿಸುತ್ತಿದ್ದರು. ನಂತರ ಶಾಲೆಗೆ ಹೋಗುತ್ತಿದ್ದೆ. ಇದು ಕೆಲ ವರ್ಷಗಳ ಕಾಲ ಮುಂದುವರೆಯಿತು. 7ನೇ ವಯಸ್ಸಿನಲ್ಲಿ ನಾನು ಮೊದಲ ರಾಷ್ಟ್ರೀಯ ಪ್ರಶಸ್ತಿ ಪಡೆದೆ. 12ನೇ ವಯಸ್ಸಿನವರೆಗೆ ನನಗೆ ಅನೇಕ ಪ್ರಶಸ್ತಿಗಳು ದೊರೆತವು. ಪ್ರತಿಭೆ ಹಾಗೂ ಸ್ಪರ್ಧೆ ನಡುವೆ ನಮ್ಮ ಚಿಂತನೆಗಳನ್ನು ಸುಧಾರಿಸಬಹುದೆಂದು ನಾನು ಅರಿತೆ’ ಎಂದ ರಂಜಿತ್ ಒಂದು ಶಾಯರಿ ಹಂಚಿಕೊಂಡರು.

image


ಜೋ ಅಪ್ನಿ ಕೋ ಉಂಚಾ ಉಡಾನ್ ದೇತಾ ಹೇ

ಖುದಾ ಉಸಕೋ ಖುಲಾ ಆಸಮಾನ್ ದೇತಾ ಹೇ

ರಿಯಾಲಿಟಿ ಶೋಗಳು ಪ್ರತಿಭೆಯನ್ನು ಹೊರತರುತ್ತವೆ. ಸ್ಪರ್ಧೆ ಸಹ ಹೆಚ್ಚಿರುತ್ತದೆ. ಅಲ್ಲಿ ನಮ್ಮನ್ನು ಗುರುತಿಸಿಕೊಳ್ಳುವುದು ಒಂದು ದೊಡ್ಡ ಸವಾಲು. ``ನನಗೆ ನಾನೇ ಸ್ಪರ್ಧಿ. ನನ್ನ ಈ ದಿನ ನಿನ್ನೆಗಿಂತ ಉತ್ತಮವಾಗಿರಬೇಕೆಂದು ಬಯಸುತ್ತೇನೆ. ಬೇರೆಯವರನ್ನು ನೋಡುವ ಬದಲು ನನ್ನನ್ನೇ ನಾನು ಸೋಲಿಸಿ ಮುಂದೆ ಹೋಗಲು ಬಯಸುತ್ತೇನೆ.ಪ್ರತಿಯೊಬ್ಬ ಕಲಾವಿದ ತನ್ನದೇ ಬಣ್ಣ, ತನ್ನದೇ ಪರಿಮಳದೊಂದಿಗೆ ಬರ್ತಾನೆ ‘’ ಎನ್ನುತ್ತಾರೆ ರಂಜಿತ್.

image


ರಿಯಾಲಿಟಿ ಶೋ ಸರಿಗಮದಲ್ಲಿ ಐದು ಅಂತಿಮ ಸ್ಪರ್ಧಿಗಳಲ್ಲಿ ರಂಜಿತ್ ಒಬ್ಬರಾಗಿದ್ದರು. ರಿಯಾಲಿಟಿ ಶೋಗೆ ಬರುವ ಮುನ್ನ ಅವರು ಬಾಲ ಕಲಾವಿದನಾಗಿ ಗುರುತಿಸಿಕೊಂಡಿದ್ದರು. ಕೆಲ ವೇದಿಕೆ ಹಾಗೂ ರೆಡಿಯೋ ಮೂಲಕ ಶೋತೃಗಳಿಗೆ ತಮ್ಮ ಗಾಯನದ ರುಚಿ ತೋರಿಸಿದ್ದರು. `` ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುತ್ತೇನೆಂದು ನಾನು ಎಣಿಸಿರಲಿಲ್ಲ.ಕೋಲ್ಕತ್ತಾ ರೆಡಿಯೋದಲ್ಲಿ ಹಾಡುತ್ತಿದ್ದ ವೇಳೆ ನನಗೆ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುವಂತೆ ಹೇಳಲಾಯ್ತು. ಧ್ವನಿ ಪರೀಕ್ಷೆ ನಂತರ ಆಯ್ಕೆಯಾದೆ. ಗಝಲ್ ಹಾಡುಗಾರ ರಿಯಾಲಿಟಿ ಶೋದಲ್ಲಿ ಹಾಡುವುದು ಕೆಲವರಿಗೆ ಇಷ್ಟವಿರಲಿಲ್ಲ. ಅದನ್ನು ಕೇಳುವವರು ಹೆಚ್ಚಿನ ಜನರಿಲ್ಲ ಎಂಬ ಅಭಿಪ್ರಾಯವಿತ್ತು. ಕಾರ್ಯಕ್ರಮ ಮುಂದುವರಿದಂತೆ ಅವರ ಅಭಿಪ್ರಾಯ ಬದಲಾಯ್ತು. ನಾನು ಅದನ್ನು ಶಬ್ಧದ ಮೂಲಕ ಹೇಳಲು ಸಾಧ್ಯವಿಲ್ಲ’’ ಎನ್ನುತ್ತಾರೆ ರಂಜಿತ್.

ತಮ್ಮ ಅಸ್ತಿತ್ವಕ್ಕಾಗಿ ರಂಜಿತ್ ಸಾಕಷ್ಟು ಹೋರಾಟಬೇಕಾಯ್ತು. `` ತಂದೆ ರಾಜಸ್ಥಾನದಿಂದ ಮುಂಬೈಗೆ ಬಂದರು. ಮುಂಬೈನಲ್ಲಿ ಪರಿಚಯಸ್ಥರು ತುಂಬಾ ಜನ ಇರಲಿಲ್ಲ. ಬಾಜಾ ತೆಗೆದುಕೊಂಡು ಅನೇಕ ಸ್ಥಳಗಳಿಗೆ ಹೋಗಿ ಹಾಡುತ್ತಿದ್ದೆವು. ಅನೇಕ ದಿನಗಳ ಕಾಲ ನಮ್ಮ ಹೋರಾಟ ಮುಂದುವರೆದಿತ್ತು. ದಿನಕಳೆದಂತೆ ಪರಿಸ್ಥಿತಿ ಬದಲಾಯ್ತು. ಜನರು ನಮ್ಮನ್ನು ಸ್ವೀಕರಿಸಲು ಶುರುಮಾಡಿದರು.’’ ಎಂದು ಕಷ್ಟದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ರಂಜಿತ್.

image


ಗಾಯಕ ಪ್ರತಿ ದಿನವನ್ನು ಮೊದಲ ದಿನದಂತೆ ನೋಡಬೇಕು. ಎಲ್ಲವನ್ನು ಕಲಿತಾಗಿದೆ ಎಂಬ ಭಾವನೆ ಬಂದ ದಿನ ನಮ್ಮ ಕಲೆಗೆ ಪೂರ್ಣ ವಿರಾಮ ಬಿದ್ದಂತೆ. ``ಪ್ರತಿದಿನ ವಿದ್ಯಾರ್ಥಿಯಂತೆ ಬದುಕಬೇಕು. ಜನರ ನಿರೀಕ್ಷೆಯನ್ನು ನಾನು ಆಶೀರ್ವಾದವೆಂದು ಭಾವಿಸುತ್ತೇನೆ. ನಮ್ಮ ಗುರಿ ತಲುಪಬೇಕೆಂದರೆ ಪ್ರತಿದಿನ ಅಭ್ಯಾಸ ಮಾಡಬೇಕೆನ್ನುತ್ತಾರೆ ರಂಜಿತ್.

ಗಾಯನ ಎಂಬುದು ಎಲ್ಲರಿಗೂ ಒಲಿಯುವುದಲ್ಲ. ಕೆಲಸ ಹಾಗೂ ಪರಿಶ್ರಮದಿಂದಾಗಿ ಕೆಲವೊಂದನ್ನು ಪಡೆಯಬಹುದು. ಆದರೆ ಗುರಿ ಮುಟ್ಟಬೇಕಾದರೆ ಅದ್ಬುತ ಧ್ವನಿಯ ಅವಶ್ಯಕತೆ ಇದೆ. ಆನಂದ ನೀಡುವುದೇ ಗಾಯನದ ಮುಖ್ಯ ಉದ್ದೇಶವಾಗಿದೆ. ಆನಂದವೇ ಕಲಾಕಾರ ಹಾಗೂ ಕಲಾಪ್ರೇಮಿಗಳ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಪ್ರಶಂಸೆ ಸಿಕ್ಕಾಗ ಗಾಯಕ ಜಂಬಪಡದೆ ಅದನ್ನು ಆಶೀರ್ವಾದವೆಂದು ಸ್ವೀಕರಿಸಬೇಕೆನ್ನುತ್ತಾರೆ ರಂಜಿತ್ .

ರಂಜಿತ್ ಇನ್ನೂ ಯುವಕ. ಅವರ ಮುಂದೆ ಹೊಳೆಯವ ಭವಿಷ್ಯವಿದೆ. ಗುಲಾಮ್ ಅಲಿ, ಮೆಹದಿ ಹಸನ್ ಮತ್ತು ಜಗಜಿತ್ ಸಿಂಗ್, ರಂಜಿತ್ ಅವರ ಆದರ್ಶ ವ್ಯಕ್ತಿಗಳು. ಗುಲಾಮ್ ಅಲಿ, ಜಗಜಿತ್ ಸಿಂಗ್ ಬಳಿಕ ಉತ್ತಮ ಗಝಲ್ ಹಾಡುಗಾರರ ಸಂಖ್ಯೆ ಕಡಿಮೆ ಇದೆ. ಹಾಗಾಗಿ ಹೊಸ ಗಾಯಕರ ಜವಾಬ್ದಾರಿ ಜಾಸ್ತಿ ಇದೆ. ``ನಿರಂತರ ಅಭ್ಯಾಸ ಮಾಡುವುದರ ಜೊತೆ ಜೊತೆಗೆ ಸಂಗೀತದ ಮೂಲವನ್ನು ಅರ್ಧಮಾಡಿಕೊಳ್ಳಬೇಕು. ಶಾಯರಿಯನ್ನು ರಚಿಸಿ, ಹಾಡಿನ ಮೂಲಕ ಅದನ್ನು ಹೊರಹಾಕುತ್ತಿರಿ’’ ಎನ್ನುತ್ತಾರೆ ರಂಜಿತ್.

`ತೇರೆ ಖಯಾಲ್ ಸೇ’ ಅಲ್ಬಂ ನಂತರ Paigham ಅಲ್ಬಂ ತಯಾರಿ ಆರಂಭಿಸಿದ್ದಾರೆ.ಗಝಲ್​ನ್ನು ಆರಾಧಿಸುವ ದೊಡ್ಡ ಜಗತ್ತು ಅವರ ಮುಂದಿದೆ.

ಲೇಖಕರು: ಅರವಿಂದ್ ಯಾದವ್

ಅನುವಾದಕರು: ರೂಪಾ ಹೆಗಡೆ