ಸುನಾಮಿ ಸಂತ್ರಸ್ತರಿಗೆ ನೆರವಿನ ಹಸ್ತ- ಆರೋಗ್ಯ ಸೇವೆಗಾಗಿ ಬದುಕು ಮುಡಿಪಾಗಿಟ್ಟ ವೈದ್ಯ

ಟೀಮ್​​ ವೈ.ಎಸ್​​.ಕನ್ನಡ

ಸುನಾಮಿ ಸಂತ್ರಸ್ತರಿಗೆ ನೆರವಿನ ಹಸ್ತ- ಆರೋಗ್ಯ ಸೇವೆಗಾಗಿ ಬದುಕು ಮುಡಿಪಾಗಿಟ್ಟ ವೈದ್ಯ

Tuesday November 24, 2015,

2 min Read

ಅದು 10 ವರ್ಷಗಳ ಹಿಂದಿನ ಘಟನೆ. ಡಿಸೆಂಬರ್ 26, 2004, ಸುನಾಮಿಯ ಅಬ್ಬರಕ್ಕೆ ಇಡೀ ಜಗತ್ತೇ ನಲುಗಿತ್ತು. ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಅಬ್ಬರಿಸಿ ಬೊಬ್ಬಿರಿದ ಸುನಾಮಿ ಅಲೆಗಳು ಸಹಸ್ರಾರು ಜನರ ಬದುಕನ್ನೇ ಬರ್ಬಾದ್ ಮಾಡಿಬಿಟ್ಟಿದ್ವು. ಸಾವಿರಾರು ಮಂದಿ ದುರಂತದಲ್ಲಿ ಪ್ರಾಣ ಕಳೆದುಕೊಂಡ್ರೆ, ಅದೆಷ್ಟೋ ಜನ ಮನೆ, ಮಠವಿಲ್ಲದೆ ಬೀದಿ ಪಾಲಾಗಿದ್ರು. ಆಗ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬ ಬದುಕುಳಿದವರ ಜೀವನವನ್ನೇ ಬದಲಾಯಿಸಲು ಪಣ ತೊಟ್ಟಿದ್ದ. ಈ ನಿರ್ಧಾರ ಅವನ ಬದುಕನ್ನೂ ಬದಲಾಯಿಸಿಬಿಟ್ಟಿತ್ತು. ಸುನಾಮಿ ಪರಹಾರದ ಮೂಲಕ ತಮ್ಮ ಪಯಣ ಆರಂಭಿಸಿದ ಆ ಎಂಬಿಬಿಎಸ್ ವಿದ್ಯಾರ್ಥಿ ಯಾರು ಗೊತ್ತಾ? ಡಾ.ದಯಾಪ್ರಸಾದ್. ಇದೀಗ ಡಾ.ದಯಾಪ್ರಸಾದ್ `ಆರೋಗ್ಯ ಸೇವಾ' ಹೆಸರಿನಲ್ಲಿ ಆರೋಗ್ಯ ಸ್ವಯಂ ಸೇವಕ ವೇದಿಕೆಯೊಂದನ್ನು ಆರಂಭಿಸಿದ್ದಾರೆ. ಸುನಾಮಿ ಹೊಡೆತದಿಂದ ತತ್ತರಿಸಿದ ಪ್ರದೇಶಗಳಿಗೆ ತೆರಳಿ ಸಂತ್ರಸ್ತರಿಗೆ ಅಗತ್ಯ ಚಿಕಿತ್ಸೆ ನೀಡಲು ತಂಡವೊಂದನ್ನು ಕಟ್ಟಲು ದಯಾಪ್ರಸಾದ್ ಇಚ್ಛಿಸಿದ್ರು. ದಯಾಪ್ರಸಾದ್ ಅವರ ಸ್ನೇಹಿತ ಹಾಗೂ ನಾಲ್ವರು ವಿದ್ಯಾರ್ಥಿಗಳು ಪರಿಹಾರ ಕಾರ್ಯದಲ್ಲಿ ಕೈಜೋಡಿಸಿದ್ರು. ಸಂತ್ರಸ್ತರಿಗೆ ನೆರವಾಗಲು ಈ ತಂಡ ಕೋಲಾರದಿಂದ ನಾಗಪಟ್ಟಣದ ವರೆಗೂ ಸಾಗಿತ್ತು. ಸತತ ಪರಿಶ್ರಮದ ಬಳಿಕ ಪುನರ್ವಸತಿ ಕಾರ್ಯ ಸ್ವಲ್ಪಮಟ್ಟಿಗಾದ್ರೂ ಪೂರ್ಣಗೊಳ್ಳಲು ಸುಮಾರು ಒಂದು ವರ್ಷವೇ ಬೇಕಾಯ್ತು.

image


ಈಗ ದಯಾಪ್ರಸಾದ್ ಸಾರ್ವಜನಿಕ ಆರೋಗ್ಯ ವಿಭಾಗದಲ್ಲಿ ತಜ್ಞ ವೈದ್ಯರು. ಆದ್ರೆ ಪದವಿಯಿಂದಲ್ಲ, ತಮ್ಮ ಅನುಭವದಿಂದ. ಸುನಾಮಿ ದುರಂತ ಸಂಭವಿಸಿ 10 ವರ್ಷಗಳ ನಂತರವೂ ಸಾರ್ವಜನಿಕರ ಪಾಲಿಗೆ ಆರೋಗ್ಯ ಸೇವೆಯಲ್ಲಿ ಹೆಚ್ಚು ಬದಲಾವಣೆ ಆಗಿಲ್ಲ. ಹತ್ತಿರದ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಸಿಗದೇ ಇದ್ದಿದ್ರಿಂದ ಎಚ್‍ಐವಿ ಸೋಂಕಿತ ಮಗುವನ್ನು ಕಳೆದುಕೊಳ್ಳಬೇಕಾಯ್ತು ಅಂತಾ ದಯಾಪ್ರಸಾದ್ ವಿಷಾಧ ವ್ಯಕ್ತಪಡಿಸ್ತಾರೆ. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಅದನ್ನು ಪುನರ್ ಸಂಯೋಜಿಸುವ ಅಗತ್ಯವಿದೆ ಅನ್ನೋದು ಅವರ ಅಭಿಪ್ರಾಯ. ಗುಣಮಟ್ಟದ ಆರೋಗ್ಯ ಸೇವೆಯನ್ನು ಪಡೆಯಲು ಶಕ್ತರಲ್ಲದವರಿಗೆ ನೆರವಾಗಲು ಸ್ವಯಂಸೇವಕರಾಗಿ `ಆರೋಗ್ಯ ಸೇವಾ' ವೇದಿಕೆಯನ್ನು ಬಳಸಿಕೊಳ್ಳಬಹುದು. ಆರೋಗ್ಯ ಸೇವಾ ಸಂಸ್ಥೆ ಈ ಸಂಬಂಧ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

1. ಶಾಲೆಯಲ್ಲಿ ವೈದ್ಯರು

2. ವಿಪತ್ತು ನಿರ್ವಹಣಾ ಪರಿಹಾರ ಮತ್ತು ಪುನರ್ವಸತಿ

3. ಸಮುದಾಯದಲ್ಲಿ ವೈದ್ಯರು

4. ವೈದ್ಯಕೀಯ ಯಾತ್ರೆ

5. ಗ್ರಾಮೀಣ ಆರೋಗ್ಯ ಸೇವೆಯ ನೇತೃತ್ವ

6. ಅಭಿಯಾನ

7. ವಯಸ್ಕರ ಆರೈಕೆ - ವಯಸ್ಕರಿಗೆ ಆರೋಗ್ಯ ಸೇವೆ

ಆರೋಗ್ಯ ಸೇವಾ ಸಂಸ್ಥೆಯನ್ನು ಆರಂಭಿಸಿದ ಉದ್ದೇಶವನ್ನು ಅರ್ಥಮಾಡಿಕೊಂಡಲ್ಲಿ, ಜನರಿಂದ ಕೂಡ ಉತ್ತಮ ಪ್ರತಿಕ್ರಿಯೆ ಹಾಗೂ ಬೆಂಬಲ ದೊರೆಯಲಿದೆ ಅನ್ನೋ ವಿಶ್ವಾಸ ಡಾ.ದಯಾಪ್ರಸಾದ್ ಅವರಿಗಿದೆ. ಉತ್ತರಾಖಂಡ್‍ನಂತಹ ದುರಂತ ಸ್ಥಳಗಳಿಗೆ ತೆರಳಿ ರಕ್ಷಣಾ ಕಾರ್ಯ ಕೈಗೊಳ್ಳುವ ಯೋಜನೆ ಬಗ್ಗೆ ದಯಾಪ್ರಸಾದ್, ತಮ್ಮ ಸ್ನೇಹಿತರು, ಪರಿಚಯಸ್ಥರು ಹಾಗೂ ವೈದ್ಯರೊಂದಿಗೆ ಚರ್ಚಿಸಿದ್ರು. ಅವರು ಕೂಡ ಈ ಬಗ್ಗೆ ಉತ್ಸಾಹವನ್ನೇನೋ ತೋರಿದ್ರು. ಆದ್ರೆ ಹೆಚ್ಚಿನ ಜವಾಬ್ದಾರಿ ಹೊತ್ತುಕೊಳ್ಳಲು ಸಿದ್ಧರಿರಲಿಲ್ಲ. ಸಮಯ ಸಿಕ್ಕಾಗ ಕೈಲಾದಷ್ಟು ಸಹಾಯ ಮಾಡಲು ಒಪ್ಪಿಕೊಂಡಿದ್ದರಷ್ಟೆ. ಪರಿಹಾರ ಕಾರ್ಯಾಚರಣೆಗೆ ಜನರನ್ನು ಒಗ್ಗೂಡಿಸುವುದು ಹೇಗೆ ಎಂಬ ಪ್ರಶ್ನೆ ದಯಾಪ್ರಸಾದ್ ಅವರನ್ನು ಕಾಡುತ್ತಿತ್ತು. ಹಾಗಾಗಿ ಸ್ವಯಂ ಸೇವಕರ ತಂಡವನ್ನು ಸಜ್ಜುಗೊಳಿಸಲು ಅವರು ಸಿದ್ಧತೆ ಮಾಡಿಕೊಂಡಿದ್ದಾರೆ.

image


ಮುಂದಿನ ಮೂರು ವರ್ಷಗಳಲ್ಲಿ 100,000 ವೈದ್ಯರನ್ನು ಆರೋಗ್ಯ ಸೇವೆಯಲ್ಲಿ ಒಗ್ಗೂಡಿಸುವುದು ಡಾ. ದಯಾಪ್ರಸಾದ್ ಅವರ ಮುಂದಿರುವ ಗುರಿ. ಈ ವೈದ್ಯರು ಪ್ರತಿ ತಿಂಗಳು ಇಬ್ಬರು ರೋಗಿಗಳನ್ನು ಉಪಚರಿಸಿದ್ರೆ ಸಾಕು, ಪ್ರತಿವರ್ಷ 25 ಲಕ್ಷದಿಂದ 2.5 ಮಿಲಿಯನ್ ರೋಗಿಗಳಿಗೆ ಚಿಕಿತ್ಸೆ ಕೊಡಿಸಬಹುದು. ವಿವಿಧ ಆಸ್ಪತ್ರೆಗಳಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಕೂಡ ಇಷ್ಟೇ ಇರುತ್ತೆ. ಆದ್ರೆ ಆರೋಗ್ಯ ಸೇವಾ ಮೂಲಕ ಅಷ್ಟೇ ಸಂಖ್ಯೆಯ ರೋಗಿಗಳು ಉಚಿತವಾಗಿ ಚಿಕಿತ್ಸೆ ಪಡೆಯುತ್ತಾರೆ. ವಿವಿಧ ನಗರಗಳಲ್ಲಿನ ಸಂಯೋಜಕರ ನೆರವಿನಿಂದ ಮಾತ್ರ ಇದು ಸಾಧ್ಯ. ಸದ್ಯ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಇಬ್ಬರು ಸಂಯೋಜಕರು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸ್ತಿದ್ದಾರೆ. ಆರೋಗ್ಯ ಸೇವಾಗಾಗಿ ಹತ್ತಾರು ಮಾದರಿಗಳನ್ನು ಕೂಡ ಅವರು ತಯಾರಿಸಿದ್ದಾರೆ. ಇನ್ನು ಮೂರು ವರ್ಷಗಳಲ್ಲಿ 10 ನಗರಗಳಲ್ಲಿ 10 ಸಂಯೋಜಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಡಾ.ದಯಾಪ್ರಸಾದ್ ಅವರು ಗುರಿ ತಲುಪಿದ್ರೆ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ದೊರೆಯಲಿದೆ. ಸ್ವಯಂಸೇವಕರನ್ನು ಒಗ್ಗೂಡಿಸುವ ಅಭಿಯಾನ ಚಳವಳಿಯಾಗಿ ಮಾರ್ಪಡಲಿದೆ.

image


ಅದೇನೇ ಆದ್ರೂ ಡಾ.ದಯಾಪ್ರಸಾದ್ ಅವರ ಸಾಮಾಜಿಕ ಕಳಕಳಿ ಎಲ್ಲಾ ವೈದ್ಯರಿಗೂ ಮಾದರಿಯಾಗುವಂಥದ್ದು. ವೈದ್ಯರು ಮಾನವೀಯತೆಯಿಂದ ರೋಗಿಗಳನ್ನು ಉಪಚರಿಸಿದ್ರೆ ಆರೋಗ್ಯ ಸೇವೆ ಇನ್ನಷ್ಟು ವಿಸ್ತರಿಸುವುದರಲ್ಲಿ ಅನುಮಾನವೇ ಇಲ್ಲ.

ಅನುವಾದಕರು: ಭಾರತಿ ಭಟ್​​