ಪ್ರಾಚೀನತೆಯ ರಹಸ್ಯವನ್ನು ಬಹಿರಂಗಪಡಿಸಲು ಯತ್ನಿಸುತ್ತದೆ ಅನು ಮಲ್ಹೋತ್ರಾರ ಕ್ಯಾಮರಾ ಕಣ್ಣು

ಟೀಮ್​​ ವೈ.ಎಸ್​. ಕನ್ನಡ

ಪ್ರಾಚೀನತೆಯ ರಹಸ್ಯವನ್ನು ಬಹಿರಂಗಪಡಿಸಲು ಯತ್ನಿಸುತ್ತದೆ ಅನು ಮಲ್ಹೋತ್ರಾರ ಕ್ಯಾಮರಾ ಕಣ್ಣು

Tuesday December 08, 2015,

3 min Read

ಚರಿತ್ರೆಯ ಪುಟಗಳಲ್ಲಿ ಸಂಶೋಧನೆ ಹಾಗೂ ಹೊಸ ಹುಟ್ಟಿನ ಹಿಂದೆ ಯಾವಾಗಲೂ ಒಂದು ರೋಚಕ ಕಲಾತ್ಮಕ ಕಥನವಿರುತ್ತದೆ. ಭಾರತದ ಪುರಾತನ ಸಾಂಸ್ಕೃತಿಕ ನೆಲೆಗಟ್ಟನ್ನು ಜಗತ್ತಿನೆದುರು ತೆರೆದಿಟ್ಟ ಸೃಜನಶೀಲ ನಿರ್ದೇಶಕಿ, ನಿರ್ಮಾಪಕಿ ಸ್ವ-ಆಸಕ್ತಿಯೊಂದಿಗೆ ಕ್ಯಾಮರಾ ಕೈಗೆತ್ತಿಕೊಳ್ಳುವ ಹಿಂದೆಯೂ ರಮಣೀಯ ಕಥಾನಕವೊಂದಿದೆ. ಟೆಲಿವಿಷನ್ ಉದ್ಯಮದಲ್ಲಿ ವಿಭಿನ್ನತೆಯೊಂದಿಗೆ ವೃತ್ತಿಪರತೆಯನ್ನು ಮೈಗೂಡಿಸಿಕೊಂಡ ಪ್ರೊಡಕ್ಷನ್ ಹೌಸ್ ಮಾಲಕಿ ಅನು ಮಲ್ಹೋತ್ರಾ ತಮ್ಮ ವೃತ್ತಿ ಹಾಗೂ ಪ್ರವೃತ್ತಿಯ ಬಗ್ಗೆ ಖುಷಿಯಿಂದ ಮಾಹಿತಿ ನೀಡಿದ್ದಾರೆ.

ಅನುರವರಿಗೆ ಡಾಕ್ಯುಮೆಂಟರಿ ಫಿಲಂ ನಿರ್ಮಾಣವೆಂದರೇ ವೃತ್ತಿಪರತೆಗಿಂತ ಹೆಚ್ಚು. ಇದೊಂದು ಅಭಿವ್ಯಕ್ತತೆಯ ಮಾದರಿ. ಅರ್ಥಗರ್ಭಿತವಾದ ದೂರದರ್ಶನದ ಕಂಟೆಂಟ್ ನಿರ್ಮಿಸುವುದು ಅವರ ಗುರಿ. 1993ರಲ್ಲಿ ಅಂದರೆ 20 ವರ್ಷಗಳ ಹಿಂದೆಯೇ ಅವರು ಟಿವಿ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದರು.

image


ಅನು ತಮ್ಮ 20ರ ವಯಸ್ಸಿನ ನಂತರ ಭಾರತೀಯ ದೂರದರ್ಶನ ಕ್ಷೇತ್ರದಲ್ಲಿ ಆಸಕ್ತಿ ತಳೆದರು. ಇಲ್ಲಿ ಅವರು ತಮ್ಮ ಕರಿಯರ್ ಆರಂಭಿಸಿದ್ದು ಜಾಹಿರಾತುಗಳ ಮೂಲಕ. 1994ರಲ್ಲಿ ಅನು ತಮ್ಮ ಸಂಸ್ಥೆ ಎಐಎಮ್ ಟೆಲಿವಷನ್ ಪ್ರಾರಂಭಿಸಿದರು. ಅದು ಪ್ರಾರಂಭಿಕ ಹಂತ. ಆ ಬಳಿಕ ಅವರು ಉತ್ಸುಕರಾಗಿ ಈ ಕ್ಷೇತ್ರದಲ್ಲಿ ತೊಡಗಿಕೊಂಡರು.

ತಮ್ಮ ಟೆಲಿವಿಷನ್ ಪ್ರೊಡಕ್ಷನ್ ಹೌಸ್ ಮೂಲಕ ಅನು ಅವರು ಸುಮಾರು 600 ಗಂಟೆಗಳ ಗುಣಮಟ್ಟದ ನಾನ್ ಫಿಕ್ಷನ್ ಟಿವಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಝೀ ಟಿವಿ, ಸೋನಿ ಹಾಗೂ ದೂರದರ್ಶನಗಳಲ್ಲಿ ಅನುರವರ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ಸಿದ್ಧವಾದ ಕಾರ್ಯಕ್ರಮಗಳು ಪ್ರಸಾರವಾಗಿವೆ.

ಲಾಸೋ ಪ್ರೊಡಕ್ಷನ್ ಹೌಸ್ ರೆಕೋನ್ ಹೆಸರಿನಲ್ಲಿ ಬದಲಾದ ನಂತರ ಇನ್ಫೋಟೈನ್ಮೆಂಟ್ ಸರಣಿಯ ಕಾರ್ಯಕ್ರಮಗಳನ್ನು ನಿರ್ಮಿಸಿ ಪ್ರಸಿದ್ಧ ಜಾಗತಿಕ ಚಾನೆಲ್ಗಳಲ್ಲಿ ಪ್ರಸಾರ ಮಾಡತೊಡಗಿತು. ಬಿಬಿಸಿ, ಡಿಸ್ಕವರಿ, ಟ್ರಾವೆಲ್ ಚಾನೆಲ್ ಯುಕೆ ಹಾಗೂ ಫ್ರಾನ್ಸ್5 ನಂತಹ ಚಾನೆಲ್​​ಗಳಲ್ಲಿ ಈ ಸರಣಿ ಕಾರ್ಯಕ್ರಮಗಳು ಏರ್ ಆಗಿದ್ದವು.

ಆಧುನಿಕತೆ, ಮಾಹಿತಿ ತಂತ್ರಜ್ಞಾನ ಹಾಗೂ ವೈಚಾರಿಕತೆಗಳ ಮುಖವಾಣಿಯಾಗಿ ಮಾಧ್ಯಮಗಳು ವರ್ತಿಸುವ ಸಾಮರ್ಥ್ಯ ಹೊಂದಿರುವ ಸಂದರ್ಭದಲ್ಲಿ ಅನುರವರ ಸೃಜನಾತ್ಮಕ ಕಾರ್ಯಕ್ರಮಗಳು ಗಮನ ಸೆಳೆದಿವೆ. ಅನುರವರು ನಿರ್ಮಾಪಕಿಯಾಗಿ ನಿರ್ದೇಶಕಿಯಾಗಿ ಅನೇಕ ಟ್ರಾವೆಲ್ ಡಾಕ್ಯುಮೆಂಟರಿಗಳನ್ನು ನಿರ್ಮಿಸಿದ್ದಾರೆ. ಈ ಕಾರ್ಯಕ್ರಮಗಳು ವೀಕ್ಷಕರಿಂದ ಸಾಕಷ್ಟು ಮೆಚ್ಚುಗೆಗಳನ್ನೂ ಪಡೆದುಕೊಂಡಿದೆ. ಅನುರವರ ನಿರ್ಮಾಣತ್ವದಲ್ಲಿ ಸಿದ್ಧವಾದ ನಮಸ್ತೇ ಇಂಡಿಯಾ ಹಾಗೂ ಇಂಡಿಯನ್ ಹಾಲಿಡೇಯಂತಹ ಕಾರ್ಯುಕ್ರಮಗಳು ಹೊರದೇಶಗಳಲ್ಲಿ ಭಾರತವನ್ನು ಬಿಂಬಿಸುವ ಕಾರ್ಯಕ್ರಮವಾಗಿ ಸಾಕಷ್ಟು ವೀಕ್ಷಕರನ್ನು ಹೊಂದಿತ್ತು.

image


ಯಶಸ್ಸಿನ ಒಂದೊಂದೇ ಮೆಟ್ಟಿಲುಗಳನ್ನು ಏರಿದ ಅನು ಟೆಲಿವಿಷನ್ ಕ್ಷೇತ್ರದಲ್ಲಿ ಕೊಡಮಾಡುವ ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಒಂದು ಹಂತ ದಾಟಿದ ನಂತರ ಅನುರವರು ಕಷ್ಟಕರ ಡಾಕ್ಯುಮೆಂಟರಿ ನಿರ್ಮಾಣದತ್ತ ಗಮನಹರಿಸಿದರು.

ಭಾರತದ ಶ್ರೀಮಂತ ಸಾಂಪ್ರದಾಯಿಕ ಪರಂಪರೆ ಹಾಗೂ ಸಮುದಾಯಗಳ ಸಂಸ್ಕೃತಿ ಹಾಗೂ ಜೀವಂತಿಕೆಗಳನ್ನು ಚಿತ್ರಗಳಲ್ಲಿ ತೋರಿಸುವ ಉದ್ದೇಶ ಅನುರವರದ್ದಾಗಿತ್ತು. ವೀಕ್ಷಕರು ಭಾರತೀಯ ಸಾಂಸ್ಕೃತಿಕ ನೆಲಗಟ್ಟನ್ನು ಹೆಮ್ಮೆಯಿಂದ ನೋಡಬೇಕು ಅನ್ನುವುದು ಅನುರವರ ಪ್ರಾಧಾನ್ಯತೆಯ ಜೊತೆ ಕನಸಾಗಿತ್ತು.

ಟಿವಿ ಕ್ಷೇತ್ರದಲ್ಲಿ ಇಂದು ಅನುರವರು ಪ್ರಸಿದ್ಧ ಹೊಂದಿರುವುದೇ ಅವರ ಅತ್ಯಂತ ಸುಂದರ ಡಾಕ್ಯುಮೆಂಟರಿಗಳು ಹಾಗೂ ವಿನಾಶದ ಅಂಚಿನಲ್ಲಿರುವ ಅಪರೂಪದ ಕಥಾನಕಗಳ ಮೂಲಕ. ತಮ್ಮ ಕೆಲವು ಚಿತ್ರಗಳ ಮೂಲಕ ಅನು ಅಸಂಖ್ಯಾತ ವೀಕ್ಷಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಅರುಣಾಚಲ ಪ್ರದೇಶದ ಅಪಾಟನಿ, ನಾಗಾಲ್ಯಾಂಡ್ನ ಕುರಿತಾದ ಕೋನ್ಯಾಕ್, ಜೋಧ್ಪುರದ ದ ಮಹಾರಾಜಾ, ಹಿಮಾಲಯದ ಬಗೆಗಿನ ಶಾಮನ್ಸ್ ಅನುರವರ ಪ್ರಸಿದ್ಧ ಚಿತ್ರಗಳು.

ಇಂದಿನ ಮಾಧ್ಯಮಗಳು ಸರ್ವವ್ಯಾಪಿ ಮತ್ತು ಸರ್ವಶಕ್ತ ಮಾಧ್ಯಮಗಳಾಗಿವೆ. ಸ್ವಯಂಪ್ರೇರಿತರಾಗಿ ಸಾಮಾಜಿಕ ಬದಲಾವಣೆಗಳಿಗೆ ಇವು ಕಾರಣವಾಗಬೇಕು. ಮಾಧ್ಯಮದಲ್ಲಿರುವ ಪ್ರತಿಯೊಬ್ಬರು ಸಾಮಾಜಿಕ ಬದಲಾವಣೆಯ ಹರಿಕಾರಾಗಬೇಕು ಅಂತ ಬಲವಾಗಿ ನಂಬಿರುವವರು ಅನು. ಸಾರ್ವಜನಿಕ ಕ್ಷೇತ್ರದಲ್ಲಿ ಸಾಮಾಜಿಕ ಹಿತಾಸಕ್ತಿಗೆ ಧಕ್ಕೆಯಾಗದಂತೆ ಮೀಡಿಯಾಗಳು ಕಾರ್ಯನಿರ್ವಹಿಸಬೇಕು ಅಂತ ಅನು ಸದಾ ವಾದಿಸುತ್ತಾರೆ.

ಅವರ ಎಲ್ಲಾ ಡಾಕ್ಯುಮೆಂಟರಿಗಳು ಒಂದು ನಿರ್ದಿಷ್ಟ ಧೋರಣೆಯ ಅನ್ವಯ ನಿರ್ಧಾರಿತವಾಗಿರುತ್ತದೆ. ಅವರ ಟ್ರಾವೆಲ್, ಆಹಾರ ಸಂಸ್ಕೃತಿ, ಫ್ಯಾಷನ್ ಕಾರ್ಯಕ್ರಮಗಳು ಸಕಾರಾತ್ಮಕ ಹಾಗೂ ಅರ್ಥಗರ್ಭಿತವಾಗಿರುತ್ತದೆ ಅನ್ನುವುದು ಅನುರವರ ದೃಢ ವಿಶ್ವಾಸ.

ಇಂದು ನಮ್ಮ ತುರ್ತು ಅಗತ್ಯ ಆಧ್ಯಾತ್ಮ ಸಂಬಂಧದ ಕಾರ್ಯಕ್ರಮವಾಗಿದೆ. ನಮ್ಮ ನಗರಪ್ರದೇಶದ ಜನತೆ ನಿಧಾನವಾಗಿ ಸರಳತೆ ಹಾಗೂ ಸಂತೋಷಕ್ಕೆ ಸಂಬಂಧಿಸಿದಂತೆ ನೈತಿಕ ಸ್ವಾಸ್ಥ್ಯ ಗಳಿಸಿಕೊಳ್ಳುವತ್ತ ಹೆಜ್ಜೆ ಇಡುತ್ತಿದ್ದಾರೆ ಅನ್ನುವುದು ಅನುರವರ ವಾದವಷ್ಟೇ ಅಲ್ಲ ಅದನ್ನು ಡಾಕ್ಯುಮೆಂಟರಿಗಳಲ್ಲೂ ಅವರು ಬಳಸಿಕೊಳ್ಳುತ್ತಿದ್ದಾರೆ.

ಭಾಷೆ, ಜೀವನಶೈಲಿ, ಸೈದ್ಧಾಂತಿಕ ನಂಬಿಕೆಗಳು ಹಾಗೂ ಸೈದ್ಧಾಂತಿಕ ಮುಖದ ವಸ್ತುನಿಷ್ಠ ಪ್ರಸಾರಗಳು ವೀಕ್ಷಕರಲ್ಲಿ ಆತ್ಮವಿಶ್ವಾಸ ಬೆಳೆಸುತ್ತವೆ. ಇಲ್ಲಿ ಆಶ್ಚರ್ಯಕರ ಸಂಗತಿಯೆಂದರೇ ಅನುರವರಿಗೆ ಯಾವುದೇ ಸೈದ್ಧಾಂತಿಕ ಹಿನ್ನೆಲೆಗಳೂ ಇಲ್ಲ. ಪಯಣವೆನ್ನುವುದು ಗಮ್ಯದೆಡೆಗೆ ತಲುಪುವ ಮಾಧ್ಯಮ ಅನ್ನುವುದು ಅನು ಅವರ ನಂಬಿಕೆ. ಅವರು ಯಾವಾಗಲೂ ನಿಖರ ಅರ್ಥವಿರುವ ಹಾಗೂ ತುಡಿತ ಹೊಂದಿರುವ ಕೆಲಸ ಮಾಡಲು ಇಷ್ಟಪಟ್ಟವರು.

ಇಲ್ಲಿನ ತೊಡಕುಗಳನ್ನೇ ನಿಜವಾದ ಸವಾಲುಗಳೆಂದು ಪರಿಗಣಿಸಿದವರು ಹಾಗೂ ಇದರಲ್ಲೇ ಅವಕಾಶಗಳನ್ನು ಹುಡುಕಿಕೊಂಡವರು ಅವರು. ಭಾರತದ ಬುಡಕಟ್ಟು ಜನರು ಹಾಗೂ ಗ್ರಾಮೀಣ ಭಾಗದ ಪಟ್ಟಣಗಳಿಗಿಂತ ಮುಕ್ತವಾಗಿ ಸೈದ್ಧಾಂತಿಕ ನೆಲೆಗಟ್ಟನ್ನು ಸ್ವೀಕರಿಸುತ್ತಿದ್ದಾರೆ ಅನ್ನುವುದು ಅವರ ಸ್ಪಷ್ಟನೆ,

ತಿಂಗಳುಗಳ ಕಾಲ ಒಂದೇ ಪ್ರದೇಶದಲ್ಲಿ ಕಾಲ ಕಳೆದ ಹಾಗೂ ಸಾಕಷ್ಟು ಪ್ರದೇಶಗಳನ್ನು ಸುತ್ತಿದ ಮಹಿಳೆ ಅನು. ಹೀಗಾಗಿ ಅವರ ಪಾಲಿಗೆ ಇಡೀ ವಿಶ್ವವೆನ್ನುವುದು ಕಲ್ಪನಾ ಖಜಾನೆಯನ್ನು ತುಂಬಿಸುವ, ಅದರಲ್ಲಿ ಸೃಜನಾತ್ಮಕ ಚಿತ್ರಗಳನ್ನು ಬರೆಯುವ, ಬಣ್ಣಗಳನ್ನು ತುಂಬಿಸುವ, ಬದುಕಿನ ಸಾಧ್ಯತೆಗಳನ್ನು ಉದಾಹರಣೆ ಸಹಿತ ವಿವರಿಸುವ ಪಾಠಶಾಲೆ.

image


ಸ್ವತಃ ಅನುರವರೇ ಹೇಳುವಂತೆ ಕಲೆ ಅನ್ನುವುದು ಅವರ ಅನುಭವ ಮಾತ್ರವಲ್ಲ, ಬದುಕಿನ ಅವಲೋಕನ. ತಮ್ಮ ಪಯಣದಲ್ಲಿ ತಾವು ಕಂಡ ಅತ್ಯಂತ ಸುಂದರ ಪ್ರದೇಶಗಳನ್ನು ಅವರು ಆಗಾಗ ನೆನಪಿಸಿಕೊಳ್ಳುತ್ತಾರೆ. ಕೆನಡಿಯನ್ ಪರ್ವತಗಳು ಹಾಗೂ ಸರೋವರಗಳು, ಲಡಾಕ್ನ ವಿಸ್ತಾರ ಹರವು ಹಾಗೂ ಬೆಟ್ಟಗುಡ್ಡಗಳು, ಅತ್ಯದ್ಭುತ ಅಮಾಲ್ಫಿ ಕಡಲ ತೀರ, ಕ್ಯಾಪ್ರಿಯ ವಿಶಾಲ ನೀಲ ಮಾಯಾ ಟರ್ಕಿಯೋಸ್ ಸಾಗರ, ಮಾಲ್ಡೀವ್ಸ್ ಅಂಡರ್ಸೀ ಅದ್ಭುತಗಳನ್ನು ಅನು ಮೆಲುಕು ಹಾಕುತ್ತಿರುತ್ತಾರೆ.

ಗೋವಾದ ವಿವಿದ ವರ್ಣದ ವಿಲೇಜ್ ಹೌಸ್ಗಳು, ನಾಗಾಗಳ ವರ್ಣರಂಜಿತ ಆಭರಣಗಳು, ಕರ್ನಾಟಕದ ದೇವಸ್ಥಾನದ ಹೂಗಳು ಇತ್ಯಾದಿ ಬಣ್ಣಗಳ ಸಾಮ್ರಾಜ್ಯ ಅನುರವರನ್ನು ಇನ್ನಿಲ್ಲದಂತೆ ಆಕರ್ಷಿಸಿದೆಯಂತೆ.. 15 ವರ್ಷಗಳ ಹಿಂದೆ ಅನುರವರು ವರ್ಣಗಳ ಮೇಲಿನ ಮೋಹದಿಂದಾಗಿಯೇ ಬಿಡುವಿನ ಸಮಯದಲ್ಲಿ ಚಿತ್ರಗಳನ್ನು ಬಿಡಿಸುತ್ತಿದ್ದರಂತೆ.

ಹೀಗೆ ಬಣ್ಣಗಳ ಮೇಲಿನ ಪ್ರೇಮ ಹಾಗೂ ಕಲ್ಪನಾ ಲೋಕದಲ್ಲಿನ ವಿಹಾರದಿಂದಾಗಿ ಅನು ಅವರಲ್ಲಿ ಒಬ್ಬ ಸೃಜನಶೀಲೆ ಕಲಾವಿದೆ ಸದಾ ಹೊಸತನವನ್ನು ಸೃಷ್ಟಿಸುತ್ತಿದ್ದಾಳೆ. ಆಳವಾಗಿ ವಸ್ತು ಹಾಗೂ ವಿಚಾರಗಳಲ್ಲಿ ಮುಳುಗಿ ಪರಾಮರ್ಶಿಸಿ ಜಾರಿಗೆ ತರುವುದು ಹೀಗಾಗಿಯೇ ಅನು ಅವರಿಗೆ ರೂಢಿಯಾದ ಅಭ್ಯಾಸ. ಇಂದು ಅನು ಯಶಸ್ವಿಯಾಗಿ ಹತ್ತು ಹಲವು ವಿಭಿನ್ನ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿದ್ದಾರೆಂದರೆ ಅದರ ಹಿಂದೆ ಈ ಎಲ್ಲಾ ಅವರ ಆಸಕ್ತಿ ಹಾಗೂ ಅಭಿರುಚಿಗಳೇ ಕಾರಣ.

ಲೇಖಕರು: ಬಿಂಜಾಲ್​ ಷಾ

ಅನುವಾದಕರು: ವಿಶ್ವಾಸ್​​​