ರಾಣಿ ಭವಾನಿಯವರ ಟ್ರೆಶರ್ಸ್ ಆಫ್ ಇನೊಸೆನ್ಸ್

ಟೀಮ್​​ ವೈ.ಎಸ್​​.

ರಾಣಿ ಭವಾನಿಯವರ ಟ್ರೆಶರ್ಸ್ ಆಫ್ ಇನೊಸೆನ್ಸ್

Wednesday October 28, 2015,

4 min Read

ಆಕೆ ರಬಿಯಾ ಖಾತೂನ್. ಕೊಲ್ಕತ್ತಾದ ಠಾಕುರ್‍ಪುರದಲ್ಲಿರುವ ಸೇವ್ ದಿ ಚಿಲ್ಡ್ರನ್‍ನಲ್ಲಿ 6ನೇ ತರಗತಿ ಓದುತ್ತಿರುವ 11 ವರ್ಷದ ಹುಡುಗಿ. ತನ್ನ ವಯಸ್ಸಿನ ಬೇರೆ ಮಕ್ಕಳಂತೆಯೇ ತನ್ನ ಸುತ್ತಲಿನ ಜಗತ್ತಿನ ಅರಿವಿಲ್ಲದೆಯೇ ಓದಾಯ್ತು, ಜೀವನವಾಯ್ತು ಅಂತ ಓಡಾಡಿಕೊಂಡಿದ್ದ ಬಾಲಕಿ. ಆದ್ರೆ ಟ್ರೆಶರ್ ಆಫ್ ಇನೊಸೆನ್ಸ್ ರಬಿಯಾಳ ಜೀವನವನ್ನೇ ಬದಲಿಸಿದೆ.

‘ನಾನು ಶಾಲೆ, ಓದು ಮತ್ತು ಗೆಳೆಯರೊಂದಿಗೆ ಯಾವುದರ ಬಗ್ಗೆಯೂ ತಲೆಕೆಡೆಸಿಕೊಳ್ಳದೇ ನನ್ನದೇ ಲೋಕದಲ್ಲಿ ಮುಳುಗಿದ್ದೆ. ನನ್ನ ಬಗ್ಗೆ ಯೋಚಿಸಲೂ ನನ್ನ ಬಳಿ ಸಮಯವಿರಲಿಲ್ಲ. ನಂತರ ನಾನು ಟ್ರೆಶರ್ ಆಫ್ ಇನೊಸೆನ್ಸ್​​​ನ ಇಗ್ನೈಟೆಡ್ ಮೈಂಡ್ಸ್ ಕಾರ್ಯಕ್ರಮ ಸೇರಿಕೊಂಡೆ. ಬಳಿಕ ನನ್ನ ಜೀವನದಲ್ಲಿ ಬದಲಾವಣೆಗಳಾದವು. ಈಗ ನಾನು, ನನ್ನ ಸುತ್ತಮುತ್ತಲಿನ ಕುರಿತು ಯೋಚಿಸಲು ಪ್ರಾರಂಭಿಸಿದ್ದೇನೆ. ಶಿಕ್ಷಣದ ಪ್ರಾಮುಖ್ಯತೆಯೇನು ಅನ್ನೋದು ಈಗ ಅರಿವಾಗಿದೆ. ಒಳ್ಳೆಯ ನಡವಳಿಕೆ, ಹಿರಿಯರನ್ನು ಗೌರವಿಸುವ, ಮತ್ತೊಬ್ಬರಿಗೆ ಸಹಾಯ ಮಾಡುವ ಹಾಗೂ ಎಲ್ಲಕಿಂತ ಹೆಚ್ಚಾಗಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸುರಕ್ಷಿತವಾಗಿಡುವುದನ್ನು ಕಲಿತಿದ್ದೇನೆ. ನಾನೀಗ ಜವಾಬ್ದಾರಿಯುತ ಜೀವನ ಸಾಗಿಸುತ್ತಿದ್ದೇನೆ ಮತ್ತು ಒಬ್ಬ ಭಾರತೀಯಳಾಗಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ತುಡಿತವಿದೆ. ಆಗಸ ಮತ್ತು ಬಾಹ್ಯಾಕಾಶಗಳ ಕುರಿತ ತರಗತಿ, ಹಲವು ವಿಷಯಗಳನ್ನು ತಿಳಿಸಿತು, ನನಗೆ ತುಂಬಾ ಇಷ್ಟವಾಯ್ತು. ಈಗ ನನ್ನಲ್ಲಿ ಮತ್ತಷ್ಟು ಕಲಿಯುವ ಆಸಕ್ತಿ ಹೆಚ್ಚಿದೆ. ಜೊತೆಗೆ ನಾನು ಕೂಡ ಏನನ್ನು ಬೇಕಾದರೂ ಸಾಧಿಸಬಹುದು ಅನ್ನೋ ಆತ್ಮವಿಶ್ವಾಸ ಜಾಸ್ತಿಯಾಗಿದೆ. ’ – ಇದು 11 ವರ್ಷದ ರಬಿಯಾ ಹೇಳಿದ ಮಾತುಗಳು.

image


ರಬಿಯಾಳಂತೆಯೇ ಮೀತಾ ಕರ್ಮಕರ್ ಕೂಡ ಕಾಸಿಪುರ ಬಾಲಕಿಯರ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿರುವ ಹುಡುಗಿ. ಮೀತಾ ಈ ಚಿಕ್ಕ ವಯಸ್ಸಿಗೇ ಚಿತ್ರಗಳ ಕಥಾ ಪುಸ್ತಕವೊಂದರ ಸಹ-ಲೇಖಕಿಯಾಗಿರೋದು ವಿಶೇಷ. ಇನ್ನು ಈ ಪುಟಾಣಿ ಲೇಖಕಿ ಹೇಳೋ ಪ್ರಕಾರ, ‘ನಾನು ಟ್ರೆಶರ್ ಆಫ್ ಇನೊಸೆನ್ಸ್ ಅಥವಾ ಟಿಒಐನ ಮೈ ಬುಕ್ ಮೈ ವರ್ಲ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಅಲ್ಲಿ ನಮಗೆ ಚಿತ್ರಗಳಿಂದ ಕೂಡಿದ ಕಥಾಪುಸ್ತಕವನ್ನು ಬರೆಯಲು ತಿಳಿಸಲಾಗಿತ್ತು. ಇದು ಹೊಸ ವಿಷಯವಾದ್ದರಿಂದ ಮೊದಲು ಕಲಿಯಲು ಹಾಗೂ ಚಿತ್ರ ಬಿಡಿಸಲು ತುಂಬಾ ಕಷ್ಟವಾಯ್ತು. ಆದ್ರೆ ಟಿಒಐನ ಸದಸ್ಯರು ನಮ್ಮನ್ನು ಪ್ರೇರೇಪಿಸುತ್ತಿದ್ದರು ಹಾಗೂ ಪ್ರತಿ ಹೆಜ್ಜೆಯಲ್ಲೂ ಬೆನ್ನೆಲುಬಾಗಿ ನಿಂತರು. ಕ್ರಮೇಣ ನಾವು ಕೇವಲ ಚಿತ್ರಗಳ ಮೂಲಕವೇ ಒಂದು ಸಂಪೂರ್ಣ ಕಥಾ ಪುಸ್ತಕವನ್ನು ಬರೆದೆವು. ಮೊದಲಿಗೆ ನಾವು ಬರೆದಿದ್ದ ಚಿತ್ರಗಳು ಮಂಕು ಮಂಕಾಗಿ ಕಾಣುತ್ತಿದ್ದ ಕಾರಣ ನಮಗೆ ತೃಪ್ತಿಯಿರಲಿಲ್ಲ. ಆಗ ಇದೇ ಟಿಒಐ ಸದಸ್ಯರು ನಮ್ಮ ಸಹಾಯಕ್ಕೆ ಬಂದರು. ಇದರಿಂದ ಚಿತ್ರಗಳಿಗೆ ಹೊಸ ರೂಪ ನೀಡಲು ಸಾಧ್ಯವಾಯ್ತು. ಚಿತ್ರಕಥಾ ಪುಸ್ತಕ ಪೂರ್ಣಗೊಂಡ ಬಳಿಕ, ನೋಡಿದವರ ಪ್ರತಿಕ್ರಿಯೆ ಹೇಗಿರುತ್ತೋ ಅಂತ ನಮಗೆ ಕೊಂಚ ಆತಂಕವಿತ್ತು. ಆದ್ರೆ ಎಲ್ಲರೂ ಒಟ್ಟಾಗಿ, ನಮ್ಮ ಸಾಮಥ್ರ್ಯ ಮೀರಿ ಒಂದು ಕೆಲಸ ಮಾಡಿದ್ದು, ಎಲ್ಲಕಿಂತ ಪ್ರಮುಖವಾದುದು ಅಂತ ಸಮಾಧಾನವಾಯ್ತು. ಹೊಸ ಚಿತ್ರ ಕಥಾ ಪುಸ್ತಕ ಮಾಡಿದ ತಂಡದಲ್ಲಿ ನಾನೂ ಒಬ್ಬಳು ಸದಸ್ಯಳಾಗಿರೋದು ನನಗೆ ಹೆಮ್ಮೆಯ ವಿಷಯ’ ಅಂತ ಗೆಲುವಿನ ನಗೆ ಬೀರ್ತಾಳೆ ಮೀತಾ.

ಟ್ರೆಶರ್ಸ್ ಆಫ್ ಇನೊಸೆನ್ಸ್ ಅಥವಾ ಟಿಒಐ

ಟಿಒಐ, ಲಾಭರಹಿತ ಸಂಸ್ಥೆ. ಮಕ್ಕಳಲ್ಲಿ ಧೈರ್ಯ, ಕುತೂಹಲ, ಆತ್ಮವಿಶ್ವಾಸ, ಸೃಜನಶೀಲತೆ ತುಂಬುವುದು. ಹಾಗೂ ಈ ಮೂಲಕ ಅವರು ದೊಡ್ಡ ಕನಸುಗಳನ್ನು ಕಾಣುವಂತೆ ಪ್ರೇರೇಪಿಸುವುದು ಟಿಒಐ ಕೆಲಸ. ಈ ಸಂಸ್ಥೆ ಸೃಜನಶೀಲತೆ ಹಾಗೂ ನವನಾವೀನ್ಯತೆಗಳಲ್ಲಿ ನಾಯಕರನ್ನು ಸೃಷ್ಟಿಸುತ್ತಿದೆ. ಮಕ್ಕಳ ಜೀವನದಿಂದ ಕೆಟ್ಟದ್ದನ್ನು ತೆಗೆದುಹಾಕಿ, ಅವರ ಕನಸುಗಳನ್ನು ಅವರಿಗೆ ವಾಪಸ್ಸು ನೀಡುವ ಕೆಲಸ ಮಾಡುತ್ತಿದೆ. ಸಮಾಜದ ಕೆಡುಕಿನಿಂದ ಸುರಕ್ಷಿತವಾಗಿ ಬೆಳೆಯುವಂತೆ ಮಕ್ಕಳನ್ನು ನೋಡಿಕೊಳ್ಳುವ ಗುರಿ ಟಿಐಒ ಸಂಸ್ಥೆಯದು. ‘ಮಕ್ಕಳ ಸೃಜನಶೀಲತೆಗೆ ನೀರೆರೆಯುವ ಕೆಲಸ ಅಷ್ಟಾಗಿ ನಡೆಯುತ್ತಿಲ್ಲ. ಅದಕ್ಕೆ ತುಂಬಾ ಕಡಿಮೆ ಮಿತಿಯಿದೆ. ಚಿಂತನಶೀಲರಾಗಿ ಆಹ್ಲಾದಕರ ವಾತಾವರಣದಲ್ಲಿ ಕಲಿಯಲು ಮಕ್ಕಳನ್ನು ಪ್ರಚೋದಿಸಬೇಕು. ಆದ್ರೆ ಸ್ವಯಂ ಪರಿಶೋಧನೆಗೆ ಪ್ರಾಮುಖ್ಯತೆ ನೀಡಲಾಗುತ್ತಿಲ್ಲ. ಬಡ ಭಾಷಾ ಹಾಗೂ ಬರವಣಿಗೆ ಕೌಶಲ್ಯ, ವಿಶ್ಲೇಷಣಾತ್ಮಕ ಗುಣಗಳಿಲ್ಲದ ಮಕ್ಕಳಲ್ಲಿ ಆತ್ಮವಿಶ್ವಾಸ ಕುಗ್ಗುತ್ತದೆ. ಇದರಿಂದ ಗುಣಾತ್ಮಕ ಶಿಕ್ಷಣ ಪಡೆಯುತ್ತಿರುವ ಬೇರೆ ಮಕ್ಕಳೊಂದಿಗೆ ಸ್ಪರ್ಧಿಸಲಾಗುವುದಿಲ್ಲ. ಭರವಸೆಯಿಲ್ಲದ, ಗುರಿಯಿಲ್ಲದ, ಬೇಗನೇ ಸೋಲೊಪ್ಪಿಕೊಳ್ಳುವ ಹೋರಾಟ ಮನೋಭಾವವಿಲ್ಲದ ಮಕ್ಕಳು ಜೀವನದಲ್ಲೂ ಅಸಹಾಯಕತೆಯಿಂದಾಗಿ ವೈಫಲ್ಯ ಅನುಭವಿಸಬೇಕಾಗುತ್ತದೆ. ಇದು ಎಂದಿಗೂ ಮುಗಿಯದ ಅನೈತಿಕ ಚಕ್ರ’ ಅಂತಾರೆ ಟಿಒಐ ಸಂಸ್ಥಾಪಕಿ ರಾಣಿ ಭವಾನಿ.

image


ಯಾರು ಈ ರಾಣಿ ಭವಾನಿ?

ಕೊಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಉನ್ನತ ಪದವಿ ಪಡೆದು, ಎಮ್‍ಬಿಎ ಶಿಕ್ಷಣವನ್ನೂ ಪೂರೈಸಿದ್ದ ರಾಣಿಗೆ ಯೋಜನಾ ನಿರ್ವಹಣೆ ಮತ್ತು ಸಲಹಾ ವಿಭಾಗಗಳಲ್ಲಿ ಶ್ರೀಮಂತ ಹಾಗೂ ವೈವಿಧ್ಯಮಯ ಅನುಭವವಿತ್ತು. ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆಯೂ ಸಾಕಷ್ಟು ಕೆಲಸಗಳನ್ನು ಮಾಡಿದ್ದರು. ಜೊತೆಗೆ ಮಕ್ಕಳಿಗಾಗಿ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮವನ್ನೂ ವಿನ್ಯಾಸಗೊಳಿಸಿದ್ದರು. ರಾಣಿ ಒಂದೇ ಸಮಯದಲ್ಲಿ ಹಲವು ಕೆಲಸಗಳನ್ನು ಮಾಡುವಲ್ಲಿ ನಿಸ್ಸೀಮರಾಗಿದ್ದರು. ಹೀಗಾಗಿಯೇ ಕಣ್ಣಿಗೆ ಕಾಣಿಸಿದ ಎಲ್ಲ ಕೆಲಸಗಳಿಗೂ ಕೈಹಾಕಿ ಯಶಸ್ವಿಯಾಗಿ ನಿರ್ವಹಿಸುತ್ತಿದ್ದರು. ಯೋಜನಾ ನಿರ್ವಹಣೆ, ಸಂಶೋಧನಾ ವಿಭಾಗಗಳಲ್ಲಿ ಮಾತ್ರವಲ್ಲ ಅವುಗಳ ಅನುಷ್ಠಾನದಲ್ಲೂ ವಿಜಯ ಪತಾಕೆ ಹಾರಿಸಿದ್ದರು.

ರಾಣಿ ಭವಾನಿಗೆ ಬಾಲ್ಯದಿಂದಲೂ ಕಷ್ಟದಲದಲಿರುವವರಿಗೆ ಸಹಾಯ ಮಾಡೋದು ಅಂದ್ರೆ ಆಸೆ. ಕೆಲಸಕ್ಕೆ ಸೇರಿದ ಮೇಲೂ ಬಡ ಮಕ್ಕಳಿಗೆ ಸಹಾಯ ಹಸ್ತ ಚಾಚುವ ಮೂಲಕ ಅದನ್ನು ಹಾಗೆಯೇ ಮುಂದುವರಿಸಿದ್ದರು. ಇದೇ ಸಮಯದಲ್ಲಿ ಅವರಿಗೆ ಮಕ್ಕಳ ಚಟುವಟಿಕೆಗಳಲ್ಲಿ ಹೊಸ ಆಲೋಚನೆಗಳು ಹಾಗೂ ನಾವೀನ್ಯತೆಗಳಿಲ್ಲದಿರುವುದು ಕಂಡು ಬಂತು. ಇದೇ ಯೋಚನೆ ಅವರ ಮನದಲ್ಲಿ ಟ್ರೆಶರ್ಸ್ ಆಫ್ ಇನೊಸೆನ್ಸ್ ಪ್ರಾರಂಭಿಸಲು ಪ್ರೇರಣೆ ನೀಡ್ತು. ‘ನನ್ನ ಅಜ್ಜಿ ಬೇಲೂರು ಮಠದ ಅನುಯಾಯಿಯಾಗಿದ್ದರು. ಹೀಗಾಗಿಯೇ ಮಕ್ಕಳು ಹಾಗೂ ಮಹಿಳೆಯರ ಅಭಿವೃದ್ಧಿಗಾಗಿ ಮಠದ ವತಿಯಿಂದ ನಡೆಯುವ ಎಲ್ಲಾ ಸಮಾಜಮುಖಿ ಕೆಲಸಗಳಲ್ಲೂ ಭಾಗವಹಿಸುತ್ತಿದ್ದರು. ಅವರೊಂದಿಗೆ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದ ನನಗೆ ಕ್ರಮೇಣ ಅದೇ ಸ್ಫೂರ್ತಿಯಾಯ್ತು. ಶಿಕ್ಷಣ ಪೂರ್ಣಗೊಂಡು, ಹಲವು ವರ್ಷಗಳ ಕಾಲ ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡಿದ ಬಳಿಕ, 2013ರಲ್ಲಿ ಟ್ರೆಶರ್ಸ್ ಆಫ್ ಇನೊಸೆನ್ಸ್ ಪ್ರಾರಂಭಿಸಲು ನಿರ್ಧರಿಸಿದೆ. ಈ ಮೂಲಕ ಹಲವು ವರ್ಷಗಳಿಂದ ನನ್ನ ಮನಸ್ಸಿನ ಆಳದಲ್ಲಿ ಹುದುಗಿದ್ದ ಕನಸಿಗೆ ಜೀವ ದೊರಕಿತು. ಕೆಲಸದ ಒತ್ತಡದ ನಡುವೆಯೂ ನಾನೊಬ್ಬಳೇ ಏಕಾಂಗಿಯಾಗಿ ತಿಂಗಳುಗಟ್ಟಲೆ ನಿದ್ದೆಗೆಟ್ಟು, ಟಿಒಐ ಪರಿಕಲ್ಪನೆಗೆ ಜೀವ ನೀಡಿದೆ. ಇದೆಲ್ಲವೂ ಒಂದು ಹಂತಕ್ಕೆ ಬಂದ ನಂತರ ಕೊನೆಗೆ ನಾನು ಕೆಲಸ ಬಿಡಲು ತೀರ್ಮಾನಿಸಿದೆ. ಅಂದಿನಿಂದ ಮಕ್ಕಳ ಶ್ರೇಯೋಭಿವೃದ್ಧಿಗೆ ದುಡಿಯುವ ಕನಸನ್ನು ನನಸು ಮಾಡಿಕೊಳ್ಳಲು ನನ್ನ ಸಂಪೂರ್ಣ ಸಮಯ ಮುಡಿಪಾಗಿಟ್ಟಿದ್ದೇನೆ’ ಅಂತ ಮಾಹಿತಿ ನೀಡ್ತಾರೆ ರಾಣಿ.

ಹೆಣ್ಣುಮಕ್ಕಳ ಶಾಲೆಯಾದ ನವಜಾತಕ್ ವಿದ್ಯಾಭವನದಲ್ಲಿ 8ನೇ ತರಗತಿ ಓದುತ್ತಿರುವ 13 ವರ್ಷದ ಅಂಜುರಾ ಖಾತೂನ್ ಕೂಡ ಟಿಒಐನಿಂದ ಲಾಭ ಪಡೆದ ಮಕ್ಕಳಲ್ಲಿ ಒಬ್ಬಳು. ‘ಇಗ್ನೈಟೆಡ್ ಮೈಂಡ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ನಾನು ಪ್ರಯೋಗಾತ್ಮಕವಾಗಿ ಯೋಚಿಸುವುದನ್ನು ಕಲಿತೆ. ಶಾಲಾ ಪುಸ್ತಕಗಳಿಂದ ಹೊರತಾಗಿ ಕಲಿಯುವುದು ತುಂಬಾ ಆಸಕ್ತಿದಾಯಕವಾಗಿತ್ತು. ಪ್ರತಿದಿನ ಸುತ್ತಮುತ್ತಲಿನ ವಸ್ತುಗಳೊಂದಿಗೆ ನಾವು ಪ್ರಯೋಗ ಮಾಡುತ್ತಿದ್ದೆವು. ಇದು ನನ್ನನ್ನು ಅನ್ವೇಷಣಾಶೀಲ ವ್ಯಕ್ತಿಯನ್ನಾಗಿಸಿದೆ. ಹೀಗಾಗಿಯೇ ನಾನು ಮನೆಯಲ್ಲೂ ಪ್ರಯೋಗಗಳನ್ನು ಮುಂದುವರಿಸುತ್ತಿದ್ದೇನೆ. ವಿಜ್ಞಾನವನ್ನು ಕಲಿಯಬೇಕು ಅಂದ್ರೆ ನಮ್ಮಲ್ಲಿ ಸುತ್ತಮುತ್ತಲಿನ ಪರಿಸರವನ್ನು ಅವಲೋಕಿಸುವ ಶಕ್ತಿ ಇರಬೇಕು. ಹೀಗಾಗಿಯೇ ಶಾಲೆಯ ಬಳಿಕ ನಾನು ನನ್ನ ಸುತ್ತಮುತ್ತಲಿನ ವಸ್ತುಗಳನ್ನು ಆಸಕ್ತಿ ಹಾಗೂ ಕುತೂಹಲಗಳಿಂದ ನೋಡುತ್ತೇನೆ’. – ಅನ್ನೋದು ಅಂಜುರಾ ಖಾತೂನ್ ಟಿಒಐ ಬಗ್ಗೆ ಹೇಳುವ ಮಾತುಗಳು.

ಸದ್ಯ ಟಿಒಐ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಬಡ ಮತ್ತು ಅನಾಥ ಮಕ್ಕಳು ಹಾಗೂ ಹರೆಯದ ಹೆಣ್ಣುಮಕ್ಕಳೊಂದಿಗೆ ಕೆಲಸ ಮಾಡುತ್ತಿದೆ. ನಾವೀನ್ಯತೆ ಹಾಗೂ ಸೃಜನಶೀಲತೆಯಲ್ಲಿ ಆ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೇರೇಪಿಸುವುದನ್ನೇ ಗುರಿಯಾಗಿಸಿಕೊಂಡು ಟಿಒಐ ಕಾರ್ಯ ನಿರ್ವಹಿಸುತ್ತಿದೆ. ಧ್ಯಾನ, ಗುಂಪು ಚರ್ಚೆ, ಪೂರ್ವಸಿದ್ಧತೆಯಿಲ್ಲದ ಭಾಷಣ, ವೀಡಿಯೋ, ಕಥೆ ಹೇಳುವುದು, ಆಟಗಳು, ಚಿತ್ರ ಬಿಡಿಸುವುದು, ಸ್ಕಿಟ್ಸ್, ನಾಟಕಗಳು, ವಿವರಣೆ, ವೈಜ್ಞಾನಿಕ ಹಾಗೂ ತಂತ್ರಜ್ಞಾನದ ಪ್ರಯೋಗಗಳು ಹಾಗೂ ಇತರೆ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಮಕ್ಕಳು ಸಾಕಷ್ಟು ಕಲಿಯಬಹುದಾಗಿದೆ.

image


‘ಇರುವ ಮಾಹಿತಿಯನ್ನೇ ಕಲಿಸುವುದು ಇಂದಿನ ಕಲಿಕಾ ವಿಧಾನದ ಅತಿ ದೊಡ್ಡ ನ್ಯೂನ್ಯತೆ. ಇದು ಪ್ರಾರಂಭಿಕ ಹಂತವಾಗಿದ್ದರೂ ಕಲಿತ ಬಳಿಕ ಮಕ್ಕಳು ಸೃಜನಶೀಲರಾಗಿ ಯೋಚಿಸುವಲ್ಲಿ ಸೋಲುತ್ತಿದ್ದು, ತಮ್ಮ ನಿಜವಾದ ಸಾಮಥ್ರ್ಯ ಕಳೆದುಕೊಳ್ಳುತ್ತಿದ್ದಾರೆ. ಎಲ್ಲ ಪರಿಹಾರಗಳು ಸರಿ ಅಂತ ಹೇಳಲಾಗುವುದಿಲ್ಲ. ಆದ್ರೆ ಸೃಜನಶೀಲರಾಗಿ ಯೋಚಿಸುವುದು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುತ್ತದೆ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸುವುದೇ ನಮ್ಮ ಗುರಿಯಾಗಿದೆ. ಹೀಗಾಗಿಯೇ ಮೊದಲು ನಾವು ಮಕ್ಕಳ ಸಾಮಥ್ರ್ಯ ಹಾಗೂ ಪ್ರತಿಭೆಯನ್ನು ಗುರುತಿಸಲು ಪ್ರಯತ್ನಿಸುತ್ತೇವೆ. ಸೃಜನಶೀಲತೆಯೇ ನಾಯಕತ್ವದ ಹೃದಯ. ಹೀಗಾಗಿಯೇ ಮಕ್ಕಳು ತಮಗೇನು ಬೇಕು ಅಥವಾ ಬೇಡ ಎಂಬುದರ ಬಗ್ಗೆ ತಾವೇ ನಿರ್ಧರಿಸುವಷ್ಟು ಪ್ರಬುದ್ಧರಾಗಿ ಯೋಚಿಸುವಂತೆ ಆತ್ಮವಿಶ್ವಾಸ ತುಂಬುತ್ತೇವೆ. ಇಂದಿನ ಶಾಲಾ ವಿಧಾನಗಳು ಕಡೆಗಣಿಸಿರುವ ಯೋಚನೆ, ಕಲ್ಪನೆ, ಕಾರ್ಯೋನ್ಮುಖನಾಗು ಹಾಗೂ ಮುನ್ನುಗ್ಗು – ಈ ಚೌಕಟ್ಟನ್ನೇ ಅನುಸರಿಸುತ್ತೇವೆ. ಆದ್ರೆ ನಾವು ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಯಶಸ್ವಿಯಾಗಿದ್ದೇವೆ’ ಅಂತಾರೆ ರಾಣಿ ಭವಾನಿ.