ವಕೀಲ ವೃತ್ತಿಗೂ ಜೈ..ಕೃಷಿ ಕೆಲಸಕ್ಕೂ ಸೈ

ಟೀಮ್​ ವೈ.ಎಸ್​.ಕನ್ನಡ

ವಕೀಲ ವೃತ್ತಿಗೂ ಜೈ..ಕೃಷಿ ಕೆಲಸಕ್ಕೂ ಸೈ

Wednesday January 13, 2016,

2 min Read

ಅದೆಷ್ಟೋ ಮಂದಿ ಇಂದಿಗೂ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ. ಆದ್ರೆ ಇವರು ವೃತ್ತಿಯಲ್ಲಿ ವಕೀಲರು, ಪ್ರವೃತ್ತಿಯಲ್ಲಿ ರೈತರು.. ಅರೇ ಇದು ಹೇಗೆ ಸಾಧ್ಯ ಅಂತೀರಾ? ಹೌದು ಎರಡೆರಡು ಕೆಲಸಗಳನ್ನು ಅವರು ಯಶಸ್ವಿಯಾಗಿ ಮಾಡುತ್ತಿದ್ದಾರೆ. ಆದ್ರೆ ಅದೆಷ್ಟೋ ಜನ ಕೃಷಿಯಲ್ಲಿ ನಷ್ಟ ಅನುಭವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ತಮ್ಮ ಅತ್ಯಮೂಲ್ಯ ಜೀವವನ್ನು ಕಳೆದುಕೊಂಡು ತಮ್ಮನ್ನೇ ನಂಬಿಕೊಂಡಿರುವ ಕುಟುಂಬದವರನ್ನು ನಡುನೀರಲ್ಲಿ ಕೈಬಿಟ್ಟು ಹೋಗ್ತಾರೆ. ಅಂಥವರಿಗೆಲ್ಲ ಈ ಕೃಷಿಕ ಮಾದರಿಯಾಗ್ತಾರೆ. 

image


ವಯಸ್ಸು ಕೇವಲ 33 ವರ್ಷ. ವೃತ್ತಿಯಲ್ಲಿ ವಕೀಲರು, ಜೊತೆಗೆ ರೈತರು ಕೂಡ. ವಿಜಯಪುರ ಜಿಲ್ಲೆ ಬಸವನಬಾಗೇವಾಡಿಯ ಶಿವಾನಂದ ಮುತ್ತಪ್ಪ ಒಣರೊಟ್ಟಿ ವಕೀಲಿ ವೃತ್ತಿ ಮಾಡುತ್ತಲೇ ಕೃಷಿಯಲ್ಲೂ ತೊಡಗಿಕೊಂಡಿದ್ದಾರೆ. ಕೃಷಿಯಿಂದಲೇ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ.

ಕೃಷಿಯನ್ನು ನಂಬಿಕೊಂಡು ಇಷ್ಟೊಂದು ಸಮೃದ್ಧ ಜೀವನ ನಡೆಸಬಹದು ಎಂಬುದನ್ನು ಶಿವಾನಂದ ಮುತ್ತಪ್ಪ ಒಣರೊಟ್ಟಿ ತೋರಿಸಿಕೊಟ್ಟಿದ್ದಾರೆ. ಕೃಷಿ ಯಾವತ್ತೂ ಯಾರನ್ನೂ ಕೈಬಿಡೋದಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವುದು ಸರಿಯಲ್ಲ ಅಂತಾರೆ ಇವರು. ಇನ್ನು ಒಂದೇ ಬೆಳೆಗೆ ಸೀಮಿತವಾಗಿರದೇ ವಿವಿಧ ಬೆಳೆಗಳನ್ನ ಬೆಳೆಯಬೇಕು ಎಂದು ಕಿವಿಮಾತು ಹೇಳ್ತಾರೆ. ಶಿವಾನಂದ, ಆಲಮಟ್ಟಿ ರಸ್ತೆಯ ಇಂದಿರಾನಗರದಲ್ಲಿ ಎಂಟು ಎಕರೆ ನೀರಾವರಿ ಭೂಮಿಯಲ್ಲಿ ಎರಡು ಎಕರೆ ದ್ರಾಕ್ಷಿ ಬೆಳೆದರು. ಒಣದ್ರಾಕ್ಷಿಯಲ್ಲಿನ ವರ್ಷದ ಆದಾಯ ಹೆಚ್ಚು ಕಡಿಮೆ ಅಂದರೂ 4 ಲಕ್ಷ ರೂಪಾಯಿ. 8 ಎಕರೆ ನೀರಾವರಿ ಭೂಮಿಯಲ್ಲಿ 6 ಎಕರೆ ದವಸ ಧಾನ್ಯಗಳಿಗೆ ಮೀಸಲಿಟ್ಟು, ಅದ್ರಲ್ಲಿ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಾರೆ.

ದ್ರಾಕ್ಷಿ ಜೊತೆ ಜೊತೆಗೆ ಜೋಳ ಬೆಳೆಯುತ್ತಾರೆ..

8 ಎಕರೆ ಜಮೀನಿನಲ್ಲಿ 6 ಎಕರೆ ದವಸ ಧಾನ್ಯಗಳಿಗೆ ಜಾಗ ಬಿಟ್ಟು, ಅದರಲ್ಲಿ ಸಾಂಪ್ರದಾಯಿಕ ಬೆಳೆಗಳಾದ ಜೋಳ, ಸಜ್ಜೆ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆಯುತ್ತಾರೆ. ಇನ್ನುಳಿದ 2 ಎಕರೆಯಲ್ಲಿ ಕಳೆದ ಮೂರು ವರ್ಷಗಳಿಂದ ದ್ರಾಕ್ಷಿ ಬೇಸಾಯ ಮಾಡಿಕೊಂಡು ಬಂದಿದ್ದಾರೆ. ಇದಕ್ಕಾಗಿ ಬಾವಿಯ ನೀರನ್ನು ಬಳಸಿಕೊಳ್ಳುತ್ತಾರೆ.

image


ದ್ರಾಕ್ಷಿ ಬೆಳೆಯುವುದು ಹೇಗೆ?

ಶಿವಾನಂದ ಅವರು ಥಾಮ್ಸನ್ ಗಣೇಶ ತಳಿಯ ದ್ರಾಕ್ಷಿಯನ್ನು ಟೆಲಿಫೋನ್ ಪದ್ಧತಿಯಲ್ಲಿ ಬೆಳೆಯುತ್ತಾರೆ. ಸುಮಾರು 1050 ಗಿಡಗಳಿವೆ. ಸಾಲಿನಿಂದ ಸಾಲಿಗೆ 10 ಅಡಿ, ಗಿಡದಿಂದ ಗಿಡಕ್ಕೆ 5 ಅಡಿ ಅಂತರದಲ್ಲಿ ಗಿಡಗಳನ್ನು ನೆಡಲಾಗುತ್ತೆ. ಆರು ತಿಂಗಳು ಡಾಗ್ರೊಜ್ ಗಿಡ ಬೆಳೆಸಿದ್ದಾರೆ. ಬಳಿಕ ತಮಗೆ ಬೇಕಾದ ತಳಿಗೆ ಕಸಿ ಕಟ್ಟಿದ್ದಾರೆ. ಅದರ ಆಚೆ 18 ತಿಂಗಳಿಗೆ ಅಂದರೆ ಒಟ್ಟು ಗಿಡಕ್ಕೆ 2 ವರ್ಷಗಳಾಗುವಷ್ಟರಲ್ಲಿ ದ್ರಾಕ್ಷಿ ಫಸಲು ಕೈಗೆ ಸಿಗುತ್ತೆ ಅಂತಾರೆ ಶಿವಾನಂದ. ವರ್ಷಕ್ಕೆ ಒಂದು ಫಸಲು ಸಿಗುವುದರಿಂದ 5-6 ತಿಂಗಳಗಳ ಕಾಲ ದ್ರಾಕ್ಷಿ ಸಿಗುತ್ತೆ.

image


ದ್ರಾಕ್ಷಿ ಗಿಡಗಳಿಗೆ ಮಕ್ಕಳಂತೆ ಆರೈಕೆ...

ರೈತ ಶಿವನಾಂದ ದ್ರಾಕ್ಷಿ ಗಿಡಗಳನ್ನು ಮಕ್ಕಳಂತೆ ಆರೈಕೆ ಮಾಡುತ್ತಾರೆ. ಗಿಡಗಳಿಗೆ ಕಾಡುವ ಕಾಯಿಲೆಗಳನ್ನು ಆರಂಭದಲ್ಲಿಯೇ ಗುರುತಿಸಿ ಸೂಕ್ತ ಔಷಧೋಪಚಾರ ಮಾಡ್ತಾರೆ. ಕಾಂಟಪ್, ನ್ಯೂಸ್ಟಾರ್, ಆಯಿಸ್ಟಾರ್, ಮಟಗೊ, ಆಕ್ರೊಬಿಟ್, ಕರ್ಜಟ್, 2-28ಗಳಂತ ಸೂಕ್ತ ಔಷಧಗಳನ್ನು ಬಳಸುತ್ತಾರೆ. ಏಪ್ರಿಲ್ ತಿಂಗಳಲ್ಲಿ ಚಾಟವಿ ಮಾಡಿ 5 ತಿಂಗಳ ಕಡ್ಡಿ ಬೆಳೆಸಿ ಕಡ್ಡಿ ಕೆಂಪಾದ ನಂತರ ಅಕ್ಟೋಬರ್ ತಿಂಗಳಲ್ಲಿ ಕಾಯಿ ಚಾಟನಿ ಮಾಡಿ ಮುಂದೆ ಜನವರಿಯಲ್ಲಿ ಕಾಯಿ ಶುಗರ್ ಆಗಿ ಮಾರಾಟಕ್ಕೆ ಸಿದ್ದವಾಗುತ್ತೆ ಅಂತಾರೆ ಶಿವಾನಂದ. ಹಸಿ ದ್ರಾಕ್ಷಿಗಿಂತ ಒಣದ್ರಾಕ್ಷಿಗೆ ಉತ್ತಮ ಬೆಲೆ ಇರುವುದರಿಂದ ಕಾಯಿ ಪೂರ್ತಿಯಾಗಿ ಶುಗರ್ ಬಂದಾಗ ಕೂಡಲೇ ಕತ್ತರಿಸಿ ಪ್ರತ್ಯೇಕ ಶೆಡ್ ಮಾಡಿ ಒಣಗಿಸುತ್ತಾರೆ. ಸೂಕ್ತ ನೆರಳಿನಲ್ಲೇ ಒಣಗಿಸಬೇಕಿರುವುದರಿಂದ ನೆರಳಿಗೆ ಅನುಗುಣವಾದ ಶೆಡ್​ ನಿರ್ಮಾಣ ಮಾಡುತ್ತಾರೆ. ಬಿಸಿಲು ಹಾಗೂ ಗಾಳಿ ಇದ್ದರೆ 10 - 11 ದಿನಗಳಲ್ಲಿ ಒಣದ್ರಾಕ್ಷಿ ಸಿದ್ಧವಾಗುತ್ತೆ. ಇದನ್ನು ಮಹಾರಾಷ್ಟ್ರದ ಸಾಂಗ್ಲಿಯಲ್ಲಿರುವ ತಾಸಗಾಂವ ಮಾರುಕಟ್ಟೆಗೆ ಕಳುಹಿಸುತ್ತಾರೆ.

image


ಇನ್ನು ಶಿವಾನಂದ ಬೆಳಗ್ಗೆ 7 - 9 ಗಂಟೆಯವರೆಗೂ ತೋಟದಲ್ಲಿ ಕೆಲಸ ನಿರ್ವಹಿಸ್ತಾರೆ. ನಂತರ ಬಸವನಬಾಗೇವಾಡಿ ನ್ಯಾಯಾಲಯದಲ್ಲಿ ಸಂಜೆ 5 ಗಂಟೆ ತನಕ ಕೆಲಸ ಮಾಡಿ, ಬಳಿಕ 5 - 6.30ರವರೆಗೆ ಮತ್ತೆ ಕೃಷಿ ಕೆಲಸದಲ್ಲಿ ತೊಡಗುತ್ತಾರೆ. ಒಟ್ಟಾರೆ ಕೃಷಿ ಮಾಡಲೆಂದು ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಕೈಸುಟ್ಟುಕೊಂಡವರ ಮಧ್ಯೆ, ಕೃಷಿಯಿಂದಲೇ ಲಕ್ಷ ಲಕ್ಷ ಆದಾಯ ಗಳಿಸಿರುವ ಶಿವಾನಂದ ವಿಭಿನ್ನವಾಗಿ ನಿಲ್ತಾರೆ. ಇವರು ಎಲ್ಲ ರೈತರಿಗೂ ಪ್ರೋತ್ಸಾಹದ ಚಿಲುಮೆಯಾಗಿದ್ದಾರೆ.