ಸಾಮಾನ್ಯ ಪೊಲೀಸ್ ಪೇದೆಯೊಬ್ಬರ ಸಮಾಜಮುಖಿ ಕೆಲಸ- ಜಾಲತಾಣಗಳಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರು ಪೇದೆ
ಉಷಾ ಹರೀಶ್
Saturday October 31, 2015,
2 min Read
ಇದು ಸಾಮಾನ್ಯ ಪೊಲೀಸ ಪೇದೆಯೊಬ್ಬರು ಸಾಮಾಜಿಕ ಜಾಲ ತಾಣದ ಮೂಲಕ ಫೇಮಸ್ ಆದ ಕಥೆ. ಸಾಮಾನ್ಯವಾಗಿ ಪೊಲೀಸರೆಂದರೆ ಅದರಲ್ಲೂ ಸಂಚಾರಿ ಪೊಲೀಸರೆಂದರೆ ನಮ್ಮ ಕಣ್ಣ ಮುಂದೆ ಬರುವುದು ಎಲ್ಲೆಂದರೆಲ್ಲಿ ವಾಹನ ತಪಾಸಣೆ ಫೈನ್ ಮತ್ತಿತರರ ವಿಷಯಗಳು. ಆದರೆ ಇದಕ್ಕೆ ಅಪವಾದವೆಂಬಂತೆ ಇಲ್ಲೊಬ್ಬ ಪೊಲೀಸರು ತಮ್ಮ ಸಮಾಜಮುಖಿ ಕಾರ್ಯದಿಂದ ಫೇಸ್ಬುಕ್ನಲ್ಲಿ 5 ಲಕ್ಷಕ್ಕೂ ಹೆಚ್ಚು ಲೈಕ್ಸ್ ಗಿಟ್ಟಿಸಿದ್ದಾರೆ.
ಪೇದೆ ಸತ್ಯನಾರಾಯಣ ಎಂಬುವವರೇ ಆ ಹೀರೋ. ಗ್ರಾಫೈಟ್ ಸಿಗ್ನಲ್ ಬಳಿ ಸಂಚಾರ ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ಸತ್ಯನಾರಾಯಣ ಸುತ್ತಮುತ್ತಲಿನ ಜನಗಳ ಬಾಯಲ್ಲಿ ಬುಲೆಟ್ ಸತ್ಯ ಎಂದೇ ಫೇಮಸ್. ಸಂಚಾರಿ ಪೊಲೀಸ್ ಇಲಾಖೆ ಗುರುತಿಸದ ಇವರ ಸಮಾಜ ಮುಖಿ ಕೆಲಸವನ್ನು ಇಲ್ಲಿ ಪ್ರತಿ ದಿನ ಸಂಚರಿಸೋ ಒಬ್ಬ ಪ್ರಯಾಣಿಕ ಗುರುತಿಸಿ ಇವರನ್ನು ಸ್ಟಾರ್ ಮಾಡಿದ್ದಾರೆ.
3ಲಕ್ಷಕ್ಕೂ ಹೆಚ್ಚು ಲೈಕ್
ಸತ್ಯ ಅವರು ಕೆಲ ದಿನಗಳ ಹಿಂದೆ ಡಿವೈಡರ್ನಿಂದ ರಸ್ತೆಗೆ ಬಿದ್ದಿದ್ದ ಜಲ್ಲಿ ಕಲ್ಲುಗಳನ್ನು ತಮ್ಮ ಕೈಯಿಂದ ಎತ್ತಿ ಪಕ್ಕಕ್ಕೆ ಹಾಕುತ್ತಿದ್ದ ಫೋಟೊ ಕೆಲ ತಿಂಗಳ ಹಿಂದೆ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಟ್ವಿಟರ್ಗಳಲ್ಲಿ ಓಡಾಡಿದೆ. ಈ ಫೋಟೊ ಬರೋಬ್ಬರಿ 5 ಲಕ್ಷಕ್ಕೂ ಹೆಚ್ಚು ಲೈಕ್ಗಳನ್ನು ಪಡೆಯುದಲ್ಲದೇ. ಈ ಚಿತ್ರವನ್ನು ತೆಲುಗಿನ ಖ್ಯಾತ ನಿರ್ದೇಶಕ ಎಸ್ ಎಸ್ ರಾಜವೌಳಿ ತಮ್ಮ ಫೇಸ್ಬುಕ್ ಪೇಜ್ನಲ್ಲಿ ಈ ಚಿತ್ರ ಹಾಕಿ ಅವರಿಗೆ ಅಭಿನಂದನೆ ಸಲ್ಲಿಸಿದ್ದರು. ಇದಕ್ಕೆ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಕಮೆಂಟುಗಳು ಸಾವಿರಾರು ಲೈಕ್ಗಳು ಬಂದು ಯಾವ ಸ್ಟಾರ್ ನಟನಿಗೂ ಸಿಗದ ಜನಪ್ರಿಯತೆ ಈ ಪೊಲೀಸ್ ಪೇದೆಗೆ ಸಿಕ್ಕಿತು.
ಸ್ವತಃ ಗುದ್ದಲಿ ಹಿಡಿದ ಪೇದೆ
ಗ್ರಾಫೈಟ್ ಸಿಗ್ನಲ್ ಸುತ್ತಮುತ್ತ ಅತಿಯಾದ ಟ್ರಾಫಿಕ್ನಿಂದಾಗಿ ಇಲ್ಲಿನ ರಸ್ತೆಗಳು ಹೊಂಡ ಬೀಳುತ್ತಿದ್ದವು, ಡಿವೈಡರ್ಗಳು ಹಾಳುಗುತ್ತಿದ್ದವು. ಅಧಿಕಾರಿಗಳಿಗೆ ಸತ್ಯನಾರಾಯಣ ಪದೇ ಪದೇ ಗುಂಡಿ ಮುಚ್ಚುವಂತೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಸತ್ಯನಾರಾಯಣ ಅವರು ಸ್ವತ ಗುದ್ದಿಲಿ ಹಿಡಿದು ಕೆಲಸ ಮಾಡಿದ್ದಾರೆ.
ರಸ್ತೆಯಲ್ಲಿ ಮುರಿದು ಬಿದ್ದಿದ್ದ ಡಿವೈಡರ್ಗಳನ್ನು ಸರಿಪಡಿಸೋ ಕೆಲಸಕ್ಕೆ ಕೈ ಹಾಕಿ ಅಲ್ಲಿಯೇ ಸಂಚರಿಸುತ್ತಿದ್ದ ಜಲ್ಲಿ ಕ್ರಷರ್ ಸಿಮೆಂಟ್ ಮಿಕ್ಸಿಂಗ್ ಮಷಿನ್ಗಳಿಂದ ಒಂದಷ್ಟು ಸಿಮೆಂಟ್ ತಂದು ಡಿವೈಡರ್ ಸರಿಪಡಿಸಿದ್ದಾರೆ.
ಮಹದೇವಪುರ ಐಟಿಪಿಎಲ್ ರಸ್ತೆಯಲ್ಲಿ ಸಂಚರಿಸೋ ಬಹುತೇಕ ಸಾಫ್ಟ್ವೇರ್ ಉದ್ಯೋಗಿಗಳು ಸತ್ಯನಾರಾಯಣ ಅವರ ಕೆಲಸವನ್ನು ಕಂಡು ಮೆಚ್ಚಿಕೊಂಡಿದ್ದಾರೆ. ಯಾವುದೇ ಅತ್ಯಾಧುನಿಕ ಉಪಕರಣಗಳೂ ಇಲ್ಲದೇ ಕೆಟ್ಟ ಗಾಳಿಯಿಂದ ದೂರವಾಗೋ ಮಾಸ್ಕ್ ಕೂಡಾ ಇಲ್ಲದೇ ಡಿವೈಡರ್ಗಳನ್ನು ರಸ್ತೆ ಹೊಂಡಗಳನ್ನು ಸರಿಪಡಿಸೋ ಇವರ ಸಮಾಜಮುಖಿ ಕೆಲಸದ ಬಗ್ಗೆ ಇವರ ಕೆಲಸವನ್ನು ಮಹಿಳೆಯೊಬ್ಬರು ತಮ್ಮ ಫೇಸ್ ಬುಕ್ ಅಕೌಂಟ್ನಲ್ಲಿ ಪ್ರಶಂಸೆಯ ಮಾತುಗಳನ್ನಾಡಿ ಚಿತ್ರ ಹಾಕಿದ್ದರು. ಇದೇ ಚಿತ್ರ ಒಬ್ಬರಿಂದ ಒಬ್ಬರಿಗೆ ವೈರಸ್ನಂತೆ ಹರಡಿ ನಿರ್ದೇಶಕ ರಾಜವೌಳಿಯವರೆಗೂ ತಲುಪಿದೆ. ಪೇದೆ ಸತ್ಯನಾರಾಯಣ ಅವರಿಗೆ ರಾಜವೌಳಿ ಅಭಿನಂದನೆ ಸಲ್ಲಿಸಿದ್ದು ಲಕ್ಷಾಂತರ ಮಂದಿಯನ್ನು ಸೆಳೆದಿದೆ. ಇಂತಹ ಪೊಲೀಸರ ಅಗತ್ಯ ನಮ್ಮ ಸಮಾಜಕ್ಕಿದೆ ಎಂದು ತಮ್ಮ ಪೇಪ್ನಲ್ಲಿ ಅವರು ಬರೆದುಕೊಂಡಿದ್ದಾರೆ.
ಸತ್ಯನಾರಾಯಣ ಅವರ ಕೆಲಸಕ್ಕೆ ರಸ್ತೆ ಅಕ್ಕಪಕ್ಕದ ನಿವಾಸಿಗಳು ಇವರಿಗೆ ಶಾಲು ಹೊದಿಸಿ ಸನ್ಮಾನಿಸಿದ್ದಾರೆ. ಕೇವಲ ಕೈ ಅಲ್ಲಾಡಿಸುತ್ತಾ ನಿಲ್ಲದೇ ವ್ಯವಸ್ಥೆ ವಿರುದ್ಧ ಬೈಯ್ಯದೇ ಬೇರೆ ಇಲಾಖೆಯ ಅಧಿಕಾರಿಗಳು ಮರೆತ ಕೆಲಸವನ್ನು ತಾವೇ ಸ್ವತಃ ಮುತುವರ್ಜಿ ವಹಿಸಿ ಮಾಡೋ ಸತ್ಯನಾರಾಯಣ ಲಕ್ಷಾಂತರ ಮಂದಿಯ ಮನಗೆದ್ದಿರುವುದರಲ್ಲಿ ಆಶ್ಚರ್ಯವಿಲ್ಲ. ಇವರ ಸಾಮಾಜಿಕ ಕಳಕಳಿಯನ್ನು ಗುರುತಿಸಿ ಮತ್ತು ಮೆಚ್ಚಿ ಸಂಚಾರಿ ಪೊಲೀಸ್ ಕಮಿಷನರ್ ಸಲೀಂ ಅವರು ಅಭಿನಂದಿಸಿದ್ದಾರೆ. ಇದು ಸತ್ಯನಾರಾಯಣ ಅವರ ಕೆಲಸಕ್ಕೆ ಮತ್ತಷ್ಟು ಉತ್ತೇಜನ ನೀಡಿದಂತಾಗಿದೆ. ಸ್ವಲ್ಪ ಅವಕಾಶ ಸಿಕ್ಕಿದರೂ ಲಂಚಕ್ಕಾಗಿ ಕೈ ನೀಡೋ ಪೊಲೀಸರ ನಡುವೆ ಸತ್ಯ ನಾರಾಯಣ ನಿಜಕ್ಕೂ ಮಾಡೆಲ್ ಅನ್ನೊದ್ರಲ್ಲಿ ಡೌಟೆ
" ನಮ್ಮ ಏರಿಯಾದಲ್ಲಿ ಇಂತಹ ಸಮಾಜ ಮುಖಿ ಕಾಳಜಿಯುಳ್ಳ ಪೊಲೀಸರು ಇರುವುದು ನಮಗೆ ಹೆಮ್ಮೆ. ಸತ್ಯನಾರಾಯಣ ಅವರನ್ನು ಮಧ್ಯರಾತ್ರಿ ಸಹಾಯಕ್ಕಾಗಿ ಕರೆ ಮಾಡಿದರೂ ಬಂದು ಸಹಾಯ ಮಾಡುತ್ತಾರೆ. ಇಲ್ಲಿ ಸುತ್ತಮುತ್ತ ಯಾವುದೇ ಅಪಘಾತ ಆದರೂ ಅಲ್ಲಿಗೆ ಸತ್ಯನಾರಾಯಣ ಹಾಜರಿರುತ್ತಾರೆ. ಇಂಥವರು ಸಮಾಜಕ್ಕೆ ಬೇಕು"
ಶರತ್, ಸ್ಥಳೀಯ ನಿವಾಸಿ