ಆನ್ಲೈನ್ನಲ್ಲಿ "ಭಕ್ತಿ"ಗೆ ಟಚ್- ಗ್ರಾಹಕರನ್ನು ಸೆಳೆಯುತ್ತಿದೆ ಸತೀಶ್ ಸ್ಟೋರ್ಸ್
ಟೀಮ್ ವೈ.ಎಸ್. ಕನ್ನಡ
Thursday October 20, 2016,
3 min Read
ಡಿಜಿಟಲ್ ಯುಗದಲ್ಲೂ ಕಳೆಗುಂದದೇ ಇರುವುದು ಅಂದ್ರೆ ಅದು ಭಕ್ತಿ ಮಾತ್ರ. ಲೈಫ್ ಬ್ಯುಸಿ ಆಗಿ ಇದ್ರೂ ಕನಿಷ್ಠ ವಾರಕ್ಕೊಂದು ದಿನವಾದ್ರೂ ದೇವರು, ದೇವಸ್ಥಾನಗಳ ಬಗ್ಗೆ ನೆನಪು ಹೆಚ್ಚಾಗುತ್ತದೆ. ಒಂದು ಪೂಜೆ ಮಾಡಿಸಿ ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳುವ ಪ್ರಯತ್ನವನ್ನೂ ಮಾಡುವವರಿಗೇನು ಕಡಿಮೆ ಇಲ್ಲ. ಆದ್ರೆ ಪೂಜೆ ಮಾಡಿಸಬೇಕೆಂಬ ಆಸೆ ಉಳ್ಳವರಿಗೆ, ಪೂಜೆಗೆ ಬೇಕಾದ ವಸ್ತುಗಳನ್ನು ಹುಡುಕಿ ತರುವುದು ಸುಲಭದ ಮಾತಲ್ಲ. ಹೀಗಾಗಿ ಇವತ್ತು ಪೂಜಾ ಸಾಮಾಗ್ರಿಗಳನ್ನು ಮಾರುವ ಅಂಗಡಿಗಳು ಉತ್ತಮ ವ್ಯಾಪಾರವನ್ನು ಮಾಡಿಕೊಳ್ಳುತ್ತಿವೆ. ಅಷ್ಟೇ ಅಲ್ಲ ಹೋಮ್ ಡೆಲಿವರಿ, ಡೋರ್ ಡೆಲಿವರಿಯ ಜೊತೆಗೆ ಆನ್ಲೈನ್ ಟಚ್ನ್ನು ಕೂಡ ನೀಡಿವೆ.
ತೆಂಗಿನ ಕಾಯಿ, ಬಾಳೆಹಣ್ಣು ಮತ್ತಿತರ ಪೂಜಾ ಸಾಮಾಗ್ರಿಗಳೊಂದಿಗೆ ಸಣ್ಣದಾಗಿ ಆರಂಭವಾದ ಅಂಗಡಿಯೊಂದು ಉತ್ತಮ ಗ್ರಾಹಕ ಸ್ನೇಹಿಯಾಗಿ ದುಡಿದು ಇಂದು ತನ್ನ ಖ್ಯಾತಿಯಿಂದ ದೇಶ ವಿದೇಶಗಳಿಂದಲೂ ಆರ್ಡರ್ ಪಡೆಯುತ್ತಾ ಲಾಭದಲ್ಲಿ ಮುನ್ನೆಡೆಯುತ್ತಿರುವ ಒಂದು ಸಕ್ಸಸ್ ಸ್ಟೋರಿ ಇದು. ಡಿಜಿಟಲ್ ಲೈಫ್ನಲ್ಲಿ ನಾವಿದ್ದರೂ ನಮ್ಮ ಭಾರತೀಯರಿಗೆ ದಿನೇ ದಿನೇ ಭಕ್ತಿ ಹೆಚ್ಚಾಗುತ್ತಲೇ ಇದೆ. ಅದಕ್ಕಾಗಿ ಪೂಜಾಸಾಮಾಗ್ರಿಗಳು ದೊರೆಯುವ ಅಂಗಡಿಗಳು ಸಹ ಹೆಚ್ಚಾಗುತ್ತಿವೆ ಮತ್ತು ಡಿಜಿಟಲ್ ಯುಗಕ್ಕೆ ತಕ್ಕಂತೆ ತಮ್ಮನ್ನು ತಾವು ಅಪ್ಡೇಟ್ ಮಾಡಿಕೊಳ್ಳುತ್ತಿವೆ ಎಂದರೆ ತಪ್ಪಾಗಲಾರದು. ಸಾಮಾನ್ಯವಾಗಿ ಮನೆಯಲ್ಲಿ ಒಂದು ಪೂಜೆ ಇದೆ ಅಂದರೆ ಅದಕ್ಕೆ ಬೇಕಾದ ಸಾಮಗ್ರಿಗಳನ್ನು ಹೊಂದಿಸುವುದೇ ದೊಡ್ಡ ಕಷ್ಟ. ಹತ್ತಾರು ವಸ್ತುಗಳಿಗಾಗಿ ಹಲವಾರು ಅಂಗಡಿ ಸುತ್ತಬೇಕು. ಆದರೆ ಗಾಂಧಿಬಜಾರಿನಲ್ಲಿರುವ ಸತೀಶ್ ಸ್ಟೋರ್ಸ್ಗೆ ಹೋದರೆ ಸಾಕು ನಿಮ್ಮ ಪೂಜೆಗೆ ಬೇಕಾಗುವ ಎಲ್ಲ ವಸ್ತುಗಳು ಒಂದೇ ಸೂರಿನಡಿ ಸಿಗುತ್ತವೆ.
ಗಾಂಧಿಬಜಾರಿನಲ್ಲಿರುವ ಸತೀಶ್ ಸ್ಟೋರ್ಸ್ ದಶಕಗಳಿಂದ ಪೂಜೆಗೆ ಬೇಕಾಗುವ ಎಲ್ಲಾ ಸಾಮಾಗ್ರಿಗಳನ್ನು ಬೆಂಗಳೂರಿಗರಿಗೆ ಒದಗಿಸುತ್ತಾ ಬರುತ್ತಿದೆ. ಸದ್ಯ ಹರ್ಷ ವಿಜಯಕುಮಾರ್ ಅವರ ಸಾರಥ್ಯದಲ್ಲಿ ನಡೆಯುತ್ತಿರುವ ಸತೀಶ್ ಸ್ಟೋರ್ಸ್ ಪ್ರಾರಂಭ ಮಾಡಿದ್ದು ಹರ್ಷವಿಜಯ್ ಅವರ ತಾತ ಚಂದ್ರಹಾಸ್ ಅವರು. ಮೊದಲಿಗೆ ಒಂದಿಷ್ಟು ತೆಂಗಿನಕಾಯಿ, ಬಾಳೆಹಣ್ಣು ಇಟ್ಟುಕೊಂಡು ವ್ಯಾಪಾರ ಆರಂಭಿಸಿದರು. ಆದರೆ ಇಂದು ಬಹಳ ದೊಡ್ಡ ಮಟ್ಟಕ್ಕೆ ಬೆಳದು ನಿಂತಿದೆ.
ಏನೇನು ಸಿಗುತ್ತದೆ ಇಲ್ಲಿ..?
ಒಂದು ಪೂಜೆಗೆ ಏಲ್ಲಾ ವಸ್ತುಗಳು ಬೇಕೋ ಅವೆಲ್ಲವೂ ಸತೀಶ್ ಸ್ಟೋರ್ಸ್ನಲ್ಲಿ ಸಿಗುತ್ತವೆ. ಬರಿ ಪೂಜೆ ಅಷ್ಟೇ ಅಲ್ಲ, ಮದುವೆ, ಉಪನಯನ, ಸೀಮಂತ, ನಾಮಕರಣ, ಗೃಹ ಪ್ರವೇಶ, ದೇವಾಸ್ಥಾನಗಳಲ್ಲಿ ಪೂಜೆ ಹೀಗೆ ಸರ್ವ ರೀತಿಯ ಶುಭ ಕಾರ್ಯಕ್ಕೂ ಸತೀಶ್ ಸ್ಟೋರ್ಸ್ನಲ್ಲಿ ಸಾಮಾಗ್ರಿಗಳು ಲಭ್ಯ. ಮದುವೆಗೆ ಬೇಕಾದ ಎಲ್ಲಾ ವಸ್ತುಗಳು ಉದಾಹರಣೆಗೆ ಪೇಟ, ಪಂಚೆ, ಲುಂಗಿ, ಬಾಸಿಂಗ, ತೋರಣ, ವಧುವಿನ ಆಭರಣ, ಹೀಗೆ ನೀವು ಪಟ್ಟಿ ಹಿಡಿದು ಸತೀಶ್ ಸ್ಟೋರ್ಸ್ಗೆ ಹೋದರೆ ನಿಮ್ಮ ಪಟ್ಟಿಯಲ್ಲಿರುವುದೆಲ್ಲವೂ ಅಲ್ಲಿ ಸಿಗುತ್ತದೆ.
ಹೋಂ ಡೆಲಿವರಿ ಸೌಲಭ್ಯ
ಬೆಂಗಳೂರಿನ ಬ್ಯುಸಿ ಲೈಫ್ನಲ್ಲಿ ಎಲ್ಲರಿಗೂ ಎಲ್ಲಾ ಸಮಯದಲ್ಲೂ ಅಂಗಡಿಗೆ ಹೋಗಿ ಪೂಜಾ ವಸ್ತುಗಳನ್ನು ತೆಗೆದುಕೊಂಡು ಬರಲು ಸಮಯವಿರುವುದಿಲ್ಲ. ಅಂತವರಿಗಾಗಿ ಸತೀಶ್ ಸ್ಟೋರ್ಸ್ ಹೋಂ ಡೆಲವರಿ ವ್ಯವಸ್ಥೆಯನ್ನು ಮಾಡುತ್ತದೆ. ಪೂಜೆಗೆ ಬೇಕಾದ ವಸ್ತುಗಳನ್ನು ಪಟ್ಟಿಮಾಡಿ ಫೋನ್ ಮೂಲಕ ಆರ್ಡರ್ ಮಾಡಿದರೆ ಸಾಕು ನೀವು ಕೇಳಿದ ಸಮಯಕ್ಕೆ ನಿಮ್ಮ ಮನೆಗೆ ಪೂಜಾ ಸಾಮಾಗ್ರಿಗಳು ಬರುತ್ತವೆ.
ಇದನ್ನು ಓದಿ: ಶವ ಸಂಸ್ಕಾರಕ್ಕೂ ಆನ್ಲೈನ್ ಬುಕ್ಕಿಂಗ್
ಆನ್ ಲೈನ್ ಶಾಪಿಂಗ್
ಡಿಜಿಟಲ್ ಯುಗದಲ್ಲಿ ಎಲ್ಲವೂ ಆನ್ಲೈನ್ ಮಯ. ಮೊಬೈಲ್ನಿಂದ ಹಿಡಿದು ಬಟ್ಟೆ, ದಿನಸಿ,ಪಾತ್ರೆಗಳು ಎಲ್ಲವೂ ಆನ್ಲೈನ್ನಲ್ಲಿ ಸಿಗುತ್ತದೆ. ಅದೇ ರೀತಿ ಸತೀಶ್ ಸ್ಟೋರ್ಸ್ನಲ್ಲಿ ಸಿಗುವ ವಸ್ತುಗಳು ಸಹ ಆನ್ಲೈನ್ ಶಾಪಿಂಗ್ ಮಾಡಬಹುದು. ಸತೀಶ್ ಸ್ಟೋರ್ನವರು ಡೆವಲಪ್ ಮಾಡಿರುವ ವೆಬ್ಸೈಟ್ಗೆ ಹೋಗಿ ನಿಮಗೆ ಬೇಕಾದ ವಸ್ತುಗಳನ್ನು ಆರ್ಡರ್ ಮಾಡಿದರೆ ನಿಮ್ಮ ಮನೆ ಬಾಗಿಲಿಗೆ ಪೂಜಾ ಸಾಮಾಗ್ರಿಗಳು ಬಂದು ಬಿಡುತ್ತವೆ. ಅಂಗಡಿಗೆ ಎಷ್ಟು ಜನ ಬರುತ್ತಾರೋ ಅಷ್ಟೇ ಜನ ಆನ್ಲೈನ್ನಲ್ಲಿ ಶಾಪಿಂಗ್ ಮಾಡುತ್ತಿದ್ದಾರೆ ಅನ್ನೋದು ಮತ್ತೊಂದು ವಿಶೆಷತೆ.
ತಿರುಪತಿಗೆ ಪೂಜಾ ಸಾಮಗ್ರಿ
ಜಗತ್ತಿನ ಅತೀ ಶ್ರೀಮಂತ ದೇವರಾದ ತಿರುಪತಿಗೆ ಸತೀಶ್ ಸ್ಟೋರ್ಸ್ನಿಂದ ಪೂಜಾ ಸಾಮಾಗ್ರಿಗಳು ಡೆಲಿವರಿಯಾಗುತ್ತವೆ ಎಂದರೆ ನಂಬಲೇಬೇಕು. ತಿರುಪತಿ ಮಾತ್ರವಲ್ಲದೇ ಉಡುಪಿ, ಧರ್ಮಸ್ಥಳ ಸೇರಿದಂತೆ ಮತ್ತಿತರ ದೇವಾಲಯಗಳಿಗೂ ಸತೀಶ್ ಸ್ಟೋರ್ಸ್ ಪೂಜಾಸಾಮಗ್ರಿಗಳೇ ಬೇಕು.
ವಿದೇಶಕ್ಕೂ ಸತೀಶ್ ಸ್ಟೋರ್ಸ್
ಸತೀಶ್ ಸ್ಟೋರ್ಸ್ನ ವಸ್ತುಗಳನ್ನು ಈಗಾಗಲೇ ಕರ್ನಾಟಕದಾದ್ಯಂತ ಹೋಂ ಡೆಲಿವರಿ ಮಾಡುವ ವ್ಯವಸ್ಥೆ ಇದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಜರ್ಮನಿ ಅಮೇರಿಕಾಗಳಿಗೆ ಡೆಲಿವರಿ ಕೊಡುತ್ತಿದ್ದಾರೆ. ಕಳೆದ ಕೆಲದಿನಗಳಿಂದ ಆಸ್ಟ್ರೇಲಿಯಾದಿಂದಲೂ ಆರ್ಡರ್ ಬರುತ್ತಿದ್ದು ಅಲ್ಲಿಗೂ ವಸ್ತುಗಳನ್ನು ಇವರು ಕಳುಹಿಸಿಕೊಡುತ್ತಿದ್ದಾರೆ.
ರಾಶಿಗೆ ತಕ್ಕ ಹವಳ, ಫೋಟೊ ಫ್ರೇಮ್..!
ಸತೀಶ ಸ್ಟೋರ್ಸ್ನಲ್ಲಿ ರತ್ನಶಾಸ್ತ್ರ, ಹಸ್ತ ಶಾಸ್ತ್ರಕ್ಕೆ ತಕ್ಕಂತಹ ಮುತ್ತು, ಹವಳ, ಕಲ್ಲುಗಳು ಸಿಗುತ್ತವೆ. ಇದರಿಂದ ಸಾಕಷ್ಟು ಮಂದಿ ಗ್ರಾಹಕರು ಪ್ರಯೋಜನ ಪಡೆದಿದ್ದಾರೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಸತೀಶ್ ಸ್ಟೋರ್ಸ್ನತ್ತ ಬರುವಂತೆ ಮಾಡಿದೆ. ಫೋಟೋ ಫ್ರೇಮ್ ಕೂಡ ಮಾರಾಟ ಮಾಡಲಾಗುತ್ತಿದೆ. ಏಳು ಜನ ಕಲಾವಿದರು ಯಾರಿಗೆ ಯಾವ ರೀತಿ ಬೇಕೋ ಫೋಟೋ ಬೇಕೋ ಅದನ್ನು ಬಿಡಿಸಿ ಫ್ರೇಮ್ ಹಾಕಿ ಕೊಡುತ್ತಾರೆ. 50 ರೂಪಾಯಿಯಿಂದ ಹಿಡಿದು ಲಕ್ಷಗಟ್ಟಲೆ ಬೆಲೆ ಬಾಳುವ ಫ್ರೇಮ್ಗಳು ಇಲ್ಲಿವೆ.
ಇನ್ನಿತರ ಉದ್ಯಮಗಳು
ಹೋಟೆಲ್, ರಿಯಲ್ ಎಸ್ಟೇಟ್, ಈವೆಂಟ್ ಮ್ಯಾನೇಜ್ಮೆಂಟ್, ಕ್ಯಾಟರಿಂಗ್, ಕಾಂಡಿಮೆಂಟ್ಸ್ ಹೀಗೆ ಒಂದಷ್ಟು ಉಪಕಸುಬುಗಳೂ ಇವೆ. ಆದರೆ ಹರ್ಷ ವಿಜಯಕುಮಾರ್ ಅವರಿಗೆ ಸತೀಶ್ ಸ್ಟೋರ್ಸ್ ನ್ನು ಬ್ರಾಂಡ್ ಆಗಿ ಬೆಳೆಸುವ ಇರಾದೆ ಹೊಂದಿದ್ದಾರೆ. ಒಟ್ಟಿನಲ್ಲಿ ಸತೀಶ್ ಸ್ಟೋರ್ಸ್ ಭಕ್ತಿಗೆ ಬೇಕಾದ ವಸ್ತುಗಳನ್ನು ಒದಗಿಸಿದ್ರೂ, ಅದರಲ್ಲಿ ಡಿಜಿಟಲ್ ಟಚ್ ಇದೆ.
1. 160 ಕಿ.ಮೀ.ನದಿಗೆ ಮರುಜೀವ ನೀಡಿದ ಸಂತ - ಹಲವು ಹಳ್ಳಿಗಳ ಪಾಲಿಗೆ ಈತ ಆಧುನಿಕ ಭಗೀರಥ
2. ಮೇಕ್ ಇನ್ ಇಂಡಿಯಾ ಕಥೆಗೆ ಹೊಸ ಸೇರ್ಪಡೆ- ಚೆನ್ನೈನಲ್ಲಿ ತಲೆ ಎತ್ತಲಿದೆ "ಮೆಡಿಪಾರ್ಕ್"
3. ಸ್ಟಾರ್ಗಳಿಗೆ ಲುಕ್ ಕೊಡುವ ಗಟ್ಟಿಗಿತ್ತಿ- ಪಾತರಗಿತ್ತಿಗೂ ಬಣ್ಣ ಹಚ್ಚೋ ಪವಿತ್ರರೆಡ್ಡಿ