ಭಾರತದ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರು 'ಪತಂಜಲಿ'ಯ ಆಚಾರ್ಯ ಬಾಲಕೃಷ್ಣ
ಟೀಮ್ ವೈ.ಎಸ್.ಕನ್ನಡ
Thursday September 15, 2016,
2 min Read
ಆಚಾರ್ಯ ಬಾಲಕೃಷ್ಣ, 44ರ ಹರೆಯದ ಯಶಸ್ವಿ ಉದ್ಯಮಿ. ಪತಂಜಲಿ ಸಂಸ್ಥೆಯ ಸಿಇಓ. ಈಗ ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಆಚಾರ್ಯ ಬಾಲಕೃಷ್ಣ ಕೂಡ ಒಬ್ಬರು. ಹರೂನ್ ಇಂಡಿಯಾ ರಿಚ್ ಲಿಸ್ಟ್ 2016ರ ಪ್ರಕಾರ ಆಚಾರ್ಯ ಬಾಲಕೃಷ್ಣ ಅವರ ಒಟ್ಟು ಆಸ್ತಿ ಅಂದಾಜು 25,600 ಕೋಟಿ ರೂಪಾಯಿ ( 3.9 ಬಿಲಿಯನ್ ಡಾಲರ್ ).
ಆಚಾರ್ಯ ಬಾಲಕೃಷ್ಣ, ಯೋಗ ಗುರು ಬಾಬಾ ರಾಮ್ದೇವ್ ಅವರ ಅತ್ಯಾಪ್ತರು. ಕೆಲಸದ ಬಗ್ಗೆ ಅವರಿಗೆ ಅಪರಿಮಿತ ಆಸಕ್ತಿ, ಕಾಳಜಿ. ಶ್ರಮಜೀವಿಯೂ ಹೌದು. ವಿಶೇಷ ಅಂದ್ರೆ ಆಚಾರ್ಯ ಬಾಲಕೃಷ್ಣ ಕಂಪ್ಯೂಟರ್ ಬಳಸುವುದಿಲ್ಲ, ಮುದ್ರಿತ ಪ್ರತಿಗಳನ್ನೇ ಬಳಸುತ್ತಾರೆ. ಅವರ ಬಳಿ ಒಂದು ಐಫೋನ್ ಇದೆ. ಯಾವಾಗಲೂ ಸಾಂಪ್ರದಾಯಿಕ ಬಿಳಿ ಕುರ್ತಾ ಮತ್ತು ಧೋತಿ ಧರಿಸ್ತಾರೆ. ಸದಾ ಸ್ವಚ್ಛ ಹಿಂದಿ ಭಾಷೆಯಲ್ಲೇ ಮಾತನಾಡುವುದು ವಿಶೇಷ. ಆಗಸ್ಟ್ 4ರಂದು ಆಚಾರ್ಯ ಬಾಲಕೃಷ್ಣ ಅವರ ಜನ್ಮದಿನ, ಆ ದಿನವನ್ನು ಪತಂಜಲಿ ಕುಟುಂಬದಲ್ಲಿ 'ಜಡಿ ಬೂಟಿ ದಿವಸ್' (ಗಿಡಮೂಲಿಕೆಗಳ ದಿನ) ಎಂದು ಆಚರಿಸಲಾಗುತ್ತದೆ.
ಆಚಾರ್ಯ ಬಾಲಕೃಷ್ಣ ಅವರ ಮೇಲೆ ಆರೋಪಗಳು ಇಲ್ಲವೆಂದೇನಲ್ಲ. 2011ರಲ್ಲಿ ವಂಚನೆ ಹಾಗೂ ನಕಲಿ ಸಹಿ ಮಾಡಿದ ಆರೋಪದ ಮೇಲೆ ಸಿಬಿಐ ಅವರನ್ನು ಬಂಧಿಸಿತ್ತು. ಕಾನೂನು ಪರವಾನಿಗೆ ಇಲ್ಲದೆ ಆಚಾರ್ಯ ಬಾಲಕೃಷ್ಣ ಪಿಸ್ತೂಲ್ ಹೊಂದಿದ್ದಾರೆ ಅನ್ನೋ ಆರೋಪ ಕೂಡ ಇತ್ತು. ಕಪ್ಪು ಹಣವನ್ನು ವೈಟ್ ಮಾಡಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ಅವರ ಮೇಲೆ ಪ್ರಕರಣವನ್ನು ಕೂಡ ದಾಖಲಿಸಿತ್ತು. ಆದ್ರೆ ಎರಡು ವರ್ಷಗಳ ತನಿಖೆ ನಂತರವೂ ಆಚಾರ್ಯ ಬಾಲಕೃಷ್ಣ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳು ದೊರೆಯದ ಕಾರಣ ಪ್ರಕರಣ ವಜಾಗೊಂಡಿತ್ತು. ಸಿಬಿಐ ತನಿಖೆ ನಡೆಸುತ್ತಿರುವ ಮತ್ತೊಂದು ಪ್ರಕರಣ ಇನ್ನೂ ಪೂರ್ಣಗೊಂಡಿಲ್ಲ.
ಆಚಾರ್ಯ ಬಾಲಕೃಷ್ಣ ಒಬ್ಬ ಯಶಸ್ವಿ ಉದ್ಯಮಿಯಾಗಿ ರೂಪುಗೊಂಡ ಬಗೆ ನಿಜಕ್ಕೂ ಅದ್ಭುತ. ಮಾರುಕಟ್ಟೆಯ ಮೇಲೆ ಹೇಗೆ ಹಿಡಿತ ಸಾಧಿಸಬೇಕೆಂಬ ಕಲೆ ಅವರಿಗೆ ಚೆನ್ನಾಗಿ ಕರಗತವಾಗಿದೆ. ಹಾಗಾಗಿಯೇ ಭಾರತದ ಜನಪ್ರಿಯ ಉದ್ಯಮಗಳಲ್ಲಿ ಪತಂಜಲಿ ಕೂಡ ಸ್ಥಾನ ಪಡೆದಿದೆ. ಕೆಲವೇ ವರ್ಷಗಳಲ್ಲಿ ಗ್ರಾಹಕರ ಮನಗೆದ್ದಿದೆ. ಅಷ್ಟೇ ಅಲ್ಲ ಬಹುರಾಷ್ಟ್ರೀಯ ಕಂಪನಿಗಳಲ್ಲೂ ನಡುಕ ಹುಟ್ಟಿಸಿದೆ. ಪತಂಜಲಿ ಕಂಪನಿಯಲ್ಲಿ ಶೇ.94ರಷ್ಟು ಪಾಲು ಆಚಾರ್ಯ ಬಾಲಕೃಷ್ಣ ಅವರಿಗೆ ಸೇರಿದ್ದು. ಹಾಗಾಗಿ ಶ್ರೀಮಂತಿಕೆಯಲ್ಲೂ ಅವರು ಹಿಂದೆ ಬಿದ್ದಿಲ್ಲ. ಭಾರತದ 339 ಮಂದಿ ಸಿರಿವಂತರ ಪಟ್ಟಿಯಲ್ಲಿ ಆಚಾರ್ಯ ಬಾಲಕೃಷ್ಣ 26ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ...
ಪ್ರಾಣಿಗಳ ಬಗ್ಗೆ ಅರಿವು ಮೂಡಿಸುವ ಗೆರ್ರಿ ಮಾರ್ಟಿನ್
ಕಾಲು ಇಲ್ಲದೇ ಇದ್ರೂ ಫುಟ್ಬಾಲ್ ಆಟ ನಿಂತಿಲ್ಲ- ರೊನಾಲ್ಡೊರನ್ನು ಭೇಟಿಯಾಗಲು ಸಿದ್ಧವಾಗಿದ್ದಾರೆ ಅಬ್ದುಲ್ಲಾ..!