ಕೇರಳ ರಾಜ್ಯದಿಂದ ಮತ್ತೊಂದು ದಾಖಲೆ- ತೃತೀಯ ಲಿಂಗಿಗಳಿಗೆ ಕ್ರೀಡಾಕೂಟ ಆಯೋಜನೆ..!

ಟೀಮ್​ ವೈ.ಎಸ್​. ಕನ್ನಡ

ಕೇರಳ ರಾಜ್ಯದಿಂದ ಮತ್ತೊಂದು ದಾಖಲೆ- ತೃತೀಯ ಲಿಂಗಿಗಳಿಗೆ ಕ್ರೀಡಾಕೂಟ ಆಯೋಜನೆ..!

Sunday April 16, 2017,

2 min Read

ಭಾರತದಲ್ಲಿ ತೃತೀಯ ಲಿಂಗಿಗಳ ಸಮುದಾಯದ ಅಭಿವೃದ್ಧಿಗೆ ಎಲ್ಲಾ ಕಾರ್ಯಗಳು ನಡೆಯುತ್ತಿದೆ. ಎಲ್ಲರಂತೆ ಅವರೂ ಬದುಕಬೇಕು ಅನ್ನುವ ಯೋಜನೆಗಳನ್ನು ಸರಕಾರ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಮಾಡುತ್ತಿವೆ. ಈ ಅಭಿವೃದ್ಧಿ ಪಥಕ್ಕೆ ಕೇರಳ ಸರಕಾರ ವಿಭಿನ್ನವಾಗಿ ಕೈ ಜೋಡಿಸಿದೆ. ಸ್ಪೊರ್ಟ್ಸ್ ಕೌನ್ಸಿಲ್ ಆಫ್ ಕೇರಳ ಮೊತ್ತಮೊದಲ ರಾಜ್ಯಮಟ್ಟದ ತೃತೀಯ ಲಿಂಗಿಗಳ ಅಥ್ಲೆಟಿಕ್ ಕೂಟವನ್ನು ಆಯೋಜಿಸಿದೆ. ಟ್ರ್ಯಾಕ್ ಅಂಡ್ ಫೀಲ್ಡ್ ಈವೆಂಟ್​ನಲ್ಲಿ ತೃತೀಯ ಲಿಂಗಿಗಳ ಸಮುದಾಯ ಭಾಗವಹಿಸಲಿದೆ. ಈ ಕೂಟದಲ್ಲಿ 100ಮೀಟರ್, 200 ಮೀಟರ್​ , 400 ಮೀಟರ್, 4*100ಮೀಟರ್ ಓಟ, ಹೈಜಂಪ್, ಲಾಂಗ್ ಜಂಪ್ ಸೇರಿದಂತೆ ಹಲವು ಟ್ರ್ಯಾಕ್ ಅಂಡ್ ಫೀಲ್ಡ್ ಈವೆಂಟ್​ಗಳು ನಡೆಯಲಿವೆ.

image


ಕೇರಳ ತೃತೀಯ ಲಿಂಗಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುಬೇಕು ಅನ್ನುವ ಉದ್ದೇಶದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡುತ್ತಿದೆ. ದೇಶದಲ್ಲಿ ತೃತೀಯ ಲಿಂಗಿಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ರಾಜ್ಯಗಳ ಪೈಕಿ ಕೇರಳಕ್ಕೆ ಮೊದಲ ಸ್ಥಾನವಿದೆ. 2016ರ ಡಿಸೆಂಬರ್​ನಲ್ಲಿ ಕೊಚ್ಚಿಯಲ್ಲಿರುವ ಶಹಜ್ ಇಂಟರ್​ನ್ಯಾಷನಲ್ ಸ್ಕೂಲ್ ಅನ್ನು ಉದ್ಘಾಟನೆ ಮಾಡಿದ್ದು, ಪ್ರಖ್ಯಾತ ಕವಿ, ಕಲ್ಕಿ ಸುಬ್ರಮಣ್ಯಂ ಅನ್ನುವುದು ಕೂಡ ವಿಶೇಷವೇ. ಶಾಲೆಗಳಲ್ಲಿ ತಾನು ಹುಡುಗಿಯಂತೆ ನಡೆಯುತ್ತಿದ್ದಕ್ಕೆ ಮತ್ತು ವರ್ತನೆ ಮಾಡುತ್ತಿದ್ದಕ್ಕೆ ತಮಾಷೆಗೆ ಒಳಗಾಗುತ್ತಿದ್ದ ಶ್ಯಾಮ ಎಸ್ ಈಗ ಸರಕಾರ ಆಯೋಜಿಸಿರುವ ಕ್ರೀಡಾಕೂಟದಲ್ಲಿ ಭಾಗವಹಿಸುವ ಉತ್ಸಾಹದಲ್ಲಿದ್ದಾರೆ.

“ ನಾವ್ಯಾಕೆ ಮಹಿಳೆಯರಂತೆ ಓಡಬೇಕು..?ಇದು ನಮ್ಮೆಲ್ಲರ ನಡುವೆ ಇದ್ದ ಸಾಮಾನ್ಯ ಪ್ರಶ್ನೆ. ಶಾಲಾದಿನಗಳಲ್ಲಿ ನಮ್ಮ ಬಾಡಿ ಲಾಂಗ್ವೇಜ್ ನೋಡಿ ಅವಮಾನಿಸುತ್ತಿದ್ದರು. ಹೀಗಾಗಿ ನಾವು ಶಾಲಾ ಕೂಟಗಳಿಂದ ದೂರ ಉಳಿಯುತ್ತಿದ್ದೆವು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಮ್ಮ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದ್ದರೂ, ಕ್ರೀಡಾಕೂಟಗಳಲ್ಲಿ ಇಲ್ಲಿ ತನಕ ಅವಕಾಶವೇ ಸಿಕ್ಕಿರಲಿಲ್ಲ. ನನ್ನಂತಹ ಹಲವರಿಗೆ ಈ ಕ್ರೀಡಾಕೂಟ ಹೊಸ ಅನುಭವವನ್ನು ತಂದುಕೊಡಲಿದೆ. ನಮ್ಮ ಸಮುದಾಯದ ಸದಸ್ಯರಿಗೆ ಹೆಚ್ಚು ಸ್ಪೂರ್ತಿ ತಂದುಕೊಡಲಿದೆ.”
- ಶ್ಯಾಮ ಎಸ್, ಕ್ರೀಡಾಪಟು

ಅಂದಹಾಗೇ ಕೇರಳ ಸರಕಾರ ಕ್ರೀಡಾಕೂಟವನ್ನು ಕಾಟಾಚಾರಕ್ಕಾಗಿ ಆಯೋಜನೆ ಮಾಡುತ್ತಿಲ್ಲ. ಬದಲಾಗಿ ಅತ್ಯುತ್ತಮ ಸಂಘಟನೆ ಮಾಡಿ, ಮಾದರಿ ಕ್ರೀಡಾಕೂಟ ಅನ್ನುವ ಹೆಮ್ಮೆ ಬರಬೇಕು ಅನ್ನುವ ರೀತಿಯಲ್ಲಿ ಸಂಘಟನೆಗೆ ತಯಾರಿ ಮಾಡಿಕೊಂಡಿದೆ.

“ ಇದು ಪ್ರಪ್ರಥಮ ತೃತೀಯ ಲಿಂಗಿಗಳ ಕ್ರೀಡಾಕೂಟ ಅನ್ನುವ ಗೌರವಕ್ಕೆ ಪಾತ್ರವಾಗಲಿದೆ. ಸರಕಾರ ಈ ಕ್ರೀಡಾಕೂಟದ ಆಯೋಜನೆ ಬಗ್ಗೆ ವಿಶೇಷ ಕಾಳಜಿವಹಿಸಿಕೊಂಡಿದೆ. ಪ್ರತಿಯೊಂದು ಜಿಲ್ಲೆಗಳಿಂದಲೂ ಕನಿಷ್ಠ 20 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲೂ ಸ್ಪರ್ಧಿಗಳಿಗೆ ವಿಶೇಷ ತರಬೇತಿ ಹಾಗೂ ಪೂರ್ವ ಸಿದ್ಧತಾ ಕ್ಯಾಂಪ್​ಗಳನ್ನು ಆಯೋಜನೆ ಮಾಡಲಾಗಿದೆ.”
- ಅನಿಲ್ ಅರ್ಜುನನ್, ಕ್ರೀಡಾಕೂಟ ಆಯೋಜಕರು

ತಿರುವನಂತಪುರದ ಪಾಲಯಮ್ನಲ್ಲಿರುವ ಸೆಂಟ್ರಲ್ ಕ್ರೀಡಾಂಗಣದಲ್ಲಿ ಏಪ್ರಿಲ್ 28ರಂದು ಈ ಕ್ರೀಡಾಕೂಟ ಆರಂಭವಾಗಲಿದೆ. ಕೇರಳ ಸಿ,ಎಂ. ಪಿಣರಾಯಿ ವಿಜಯನ್, ಯುವಜನ ಮತ್ತು ಕ್ರೀಡಾಸಚಿವ ಎ.ಸಿ. ಮೊಯಿದ್ದೀನ್ ಮತ್ತು ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್ ಈ ಕ್ರೀಡಾಕೂಟದ ಆಯೋಜನಾ ಸಮಿತಿಯಲ್ಲಿದ್ದಾರೆ. ಒಟ್ಟಿನಲ್ಲಿ ತೃತೀಯ ಲಿಂಗಿಗಳ ಅಭಿವೃದ್ಧಿಗಾಗಿ ಸರಕಾರ ಎಲ್ಲಾ ಶ್ರಮವನ್ನು ಹಾಕುತ್ತಿದೆ. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಅನ್ನುವ ಉದ್ದೇಶಗಳನ್ನು ಹೊಂದಿದೆ. 

ಇದನ್ನು ಓದಿ:

1. ನಿರಾಶ್ರಿತರ ಪಾಲಿಗೆ ಸಂಜೀವಿನಿ- 5 ಲಕ್ಷಕ್ಕೂ ಅಧಿಕ ಜನರ ಹಸಿವು ತಣಿಸಿದ "ಯಂಗೀಸ್ತಾನ್"

2. 10*10 ಚಿಕ್ಕಕೋಣೆಯಿಂದ 1,000 ಕೋಟಿಯ ಮಾಲೀಕನಾದ ತನಕ..!

3. ಹಳೆಯ ಬಟ್ಟೆಗಳನ್ನು ಸ್ಟೈಲಿಷ್ ಆಗಿ ಪರಿವರ್ತಿಸುವ ಯುವಕ- ವಸ್ತ್ರಗಳ ಮರುಬಳಕೆ ಪಾಠ ಮಾಡುತ್ತಿರುವ ಯಾಕೂಬ್