ಮುಂಬೈಕರ್‍ಗಳಿಗೆ `ಥಿಯೋಬ್ರೋಮಾ' ಉಡುಗೊರೆ- ಸಿಹಿಭಕ್ಷ್ಯದ ಜೊತೆ ಪ್ರೀತಿ ಉಣಿಸುವ ಕೈನಾಝ್

ಟೀಮ್​​ ವೈ.ಎಸ್​. ಕನ್ನಡ

ಮುಂಬೈಕರ್‍ಗಳಿಗೆ `ಥಿಯೋಬ್ರೋಮಾ' ಉಡುಗೊರೆ- ಸಿಹಿಭಕ್ಷ್ಯದ ಜೊತೆ ಪ್ರೀತಿ ಉಣಿಸುವ ಕೈನಾಝ್

Wednesday December 02, 2015,

3 min Read

`ಗೇಟ್‍ವೇ ಆಫ್ ಇಂಡಿಯಾ'....ಅದರ ಎಡಗಡೆ ವೈಭವದಿಂದ ಕಾವಲು ಕಾಯ್ತಾ ಇರೋ ದಿ `ತಾಜ್', ಭಾರತೀಯರ ಅಚ್ಚುಮೆಚ್ಚಿನ ಶಾಪಿಂಗ್ ಮಾರ್ಗ. ಇದರ ಬಲಬದಿಯಲ್ಲಿ ವಾಣಿಜ್ಯ ನಗರಿ ಮುಂಬೈನ ಸಾಂಪ್ರದಾಯಿಕ ಬ್ರ್ಯಾಂಡ್‍ಗಳ ಅಲಂಕಾರ. ಮುಂಬೈನ ಕೊಲಾಬಾ ಕಾಸ್‍ವೇ ಎಂತಹ ಜಾಗ ಅಂದ್ರೆ ತವರನ್ನು ನೆನಪಿಸುತ್ತೆ. 2003ರಲ್ಲಿ ಇದೇ ಬೀದಿಯ ಕೊನೆಯಲ್ಲಿ ಚಿಕ್ಕದೊಂದು ಕೆಫೆ, ಮತ್ತು ಸಿಹಿತಿನಿಸುಗಳ ಅಂಗಡಿ ಆರಂಭವಾಗಿತ್ತು. ಆದ್ರೆ ಆಗ ಆ ಕೆಫೆ ಈ ಮಟ್ಟಿಗೆ ಜನರ ಮನಸ್ಸನ್ನು ಗೆಲ್ಲಬಹುದೆಂಬ ಕಲ್ಪನೆ ಯಾರಿಗೂ ಇರಲಿಲ್ಲ. ಇದೀಗ `ಥಿಯೋಬ್ರೋಮಾ' ಆರಂಭವಾಗಿ 12 ವರ್ಷಗಳು ಕಳೆದಿವೆ, ಈ ಕೆಫೆಯ ಜನಪ್ರಿಯತೆ ಮುಂಬೈನಾದ್ಯಂತ ಪಸರಿಸಿದ್ದು, ಮನೆಮಾತಾಗಿದೆ. ದೇವರ ಆಹಾರವನ್ನೇ ನಮಗೆ ಬಡಿಸುತ್ತಿದ್ದಾರೆಂಬ ಅನುಭೂತಿ ಗ್ರಾಹಕರಲ್ಲಿದೆ. ಇದರ ಹಿಂದಿರುವ ಪ್ರತಿಭಾವಂತ ಬಾಣಸಿಗರು ಯಾರು ಗೊತ್ತಾ? ಕೈನಾಝ್ ಮೆಸ್ಮನ್.

image


ತಮ್ಮ ಅದ್ಭುತ ಕೈರುಚಿಯ ಮೂಲಕ ಗ್ರಾಹಕರ ಭೋಜನ ಪ್ರೇಮವನ್ನು ತಣಿಸುವುರಲ್ಲೇ ಕೈನಾಝ್ ಬದುಕು ಸವೆಸಿದ್ದಾರೆ. ಹುಟ್ಟಿನಿಂದಲೇ ಫುಡ್ ಬಗ್ಗೆ ಅವರಿಗೆ ಒಲಿವಿತ್ತು. ನಮ್ಮ ಮನೆಯಲ್ಲಿ ಯಾವಾಗ್ಲೂ ಸುವಾಸನೆ ಇರುತ್ತಿತ್ತು, ಯಾಕಂದ್ರೆ ತಮ್ಮ ಕುಟುಂಬದವರೆಲ್ಲ ಭೋಜನ ಪ್ರಿಯರು ಎನ್ನುತ್ತಾರೆ ಅವರು. ನಾವೇನನ್ನು ಮಾಡುತ್ತೇವೆ, ಏನನ್ನು ತಿನ್ನುತ್ತೇವೆ ಅನ್ನೋದ್ರ ಮೇಲೆ ನಮ್ಮ ಜೀವನ ನಿಂತಿದೆ. ಅಡುಗೆ ಬಗೆಗಿನ ಅಭಿರುಚಿ ಬದುಕಿನುದ್ದಕ್ಕೂ ಇರುತ್ತೆ ಅಂತಾ ಕೈನಾಝ್ ಖುಷಿಯಿಂದ ಹೇಳಿಕೊಳ್ತಾರೆ. ಕೈನಾಝ್ ಅವರ ತಾಯಿ ಮನೆಯಲ್ಲೇ ಕೇಕ್ ಮತ್ತು ಸಿಹಿ ಭಕ್ಷ್ಯಗಳನ್ನು ತಯಾರಿಸಿ ಮಾರಾಟ ಮಾಡ್ತಾ ಇದ್ರು. ಅದೇ ಮನೆ ವ್ಯಾಪಾರದ ವಿಸ್ತ್ರದ ಭಾಗವೇ `ಥಿಯೋಬ್ರೋಮಾ'. ಆಹಾರ ಉದ್ಯಮದಲ್ಲಿ ಹೆಸರು ಮಾಡಿರುವ ಕೈನಾಝ್, ವಾಣಿಜ್ಯ ವಿಭಾಗದಲ್ಲೂ ಅತ್ಯುತ್ತಮ ಮಾರಾಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕೈನಾಝ್ ಅವರಿಗೆ ಕಾನೂನು ಪದವಿ ಪಡೆಯಬೇಕೆಂಬ ಆಸೆಯಿತ್ತು. ತಮ್ಮ 16ನೇ ವಯಸ್ಸಿನಲ್ಲಿ ರೋಟರಿ ಯೂತ್ ಎಕ್ಸ್​​​​ಚೇಂಜ್ ಸ್ಟೂಡೆಂಟ್ ಆಗಿ ಆಯ್ಕೆಯಾದ ಅವರು ಫ್ರಾನ್ಸ್​​​ಗೆ ತೆರಳಿದ್ರು. ಆ ವರ್ಷ, ಅವರ ಬದುಕು ಮತ್ತು ವೃತ್ತಿ ಎರಡನ್ನೂ ಬದಲಾಯಿಸಿತ್ತು. ಆಡಂಬರವಿಲ್ಲದ, ಶಾಸ್ತ್ರೀಯ ಫ್ರೆಂಚ್ ಬೇಕರಿಗಳ ಬಗ್ಗೆ ಅವರಿಗೆ ಒಲವು ಹೆಚ್ಚಾಗಿತ್ತು. ತಾವೊಬ್ಬ ಶೆಫ್ ಆಗಬೇಕೆಂದು ನಿರ್ಧರಿಸಿದ್ರೂ ಕೈನಾಝ್, ಫ್ರಾನ್ಸ್ ಸಾಹಿತ್ಯವನ್ನು ಅಧ್ಯಯನ ಮಾಡಿದ್ರು. ಬಳಿಕ ಐಎಚ್‍ಎಂ ಮುಂಬೈ ಹಾಗೂ ದೆಹಲಿಯ ಓಸಿಎಲ್‍ಡಿಯಲ್ಲಿ ಶಿಕ್ಷಣ ಪಡೆದ್ರು. ಉದಯ್‍ಪುರ್‍ನ `ಓಬೆರಾಯ್ ಉದಯ್‍ವಿಲಾಸ್'ನಲ್ಲಿ ಕೆಲಸ ಮಾಡಲಾರಂಭಿಸಿದ್ರು. ಅವರ ತಟ್ಟೆ ಯಶಸ್ಸು ಹಾಗೂ ಪ್ರಗತಿಯಿಂದ ತುಂಬಿದ್ದಾಗ್ಲೇ, ಬೆನ್ನು ನೋವು ಅವರ ವೃತ್ತಿ ಜೀವನಕ್ಕೆ ಅಡ್ಡಿಯಾಗಿತ್ತು. ತುಂಬಾ ಹೊತ್ತು ನಿಂತೇ ಕೆಲಸ ಮಾಡಬೇಕಾಗಿರೋದ್ರಿಂದ ಶೆಫ್ ಆಗಿ ಮುಂದುವರಿಯುವುದ ಅಸಂಭವ ಅಂತಾ ವೈದ್ಯರು ಕೂಡ ಕೈಚೆಲ್ಲಿದ್ರು. ಅದರಿಂದ ಶಾಶ್ವತ ಹಾನಿಯಾಗಬಹುದೆಂಬ ಆತಂಕ ವ್ಯಕ್ತಪಡಿಸಿದ್ರು. ಆದ್ರೆ ಅಷ್ಟರಲ್ಲಾಗ್ಲೇ ಕೈನಾಝ್ ಸ್ವಂತ ಕೇಕ್ ಮಳಿಗೆಯೊಂದನ್ನು ಆರಂಭಿಸಬೇಕೆಂಬ ಕನಸು ಕಾಣ್ತಾ ಇದ್ರು.

image


2003ರಲ್ಲಿ ಕೈನಾಝ್ ಧೈರ್ಯ ಮಾಡಿ ಸ್ವಂತ ಕೆಫೆಯನ್ನು ಶುರು ಮಾಡಿದ್ರು. ಕೈನಾಝ್ ಅವರಿಗೆ ಕೇಕ್ ಮಾಡೋದು ಚೆನ್ನಾಗಿ ಗೊತ್ತಿತ್ತು. ಅದೊಂದೇ ಉತ್ಪನ್ನದ ಮೂಲಕ ಆರಾಮದಾಯಕ ಫೈವ್ ಸ್ಟಾರ್ ಪರಿಸರ ನಿರ್ಮಾಣ ಮಾಡುವುದು ಹೇಗೆ ಎಂಬ ಆತಂಕವೂ ಇತ್ತು. ರಿಟೇಲ್ ಮಾರುಕಟ್ಟೆ, ಬೇಡಿಕೆ, ಮುಂದಿರುವ ಸವಾಲು ಇದ್ಯಾವುದಕ್ಕೂ ಕೈನಾಝ್ ಸಜ್ಜಾಗಿರಲಿಲ್ಲ. ಭಾರತದಲ್ಲಿ ಒಂದು ಸ್ವಂತ ಉದ್ಯಮ ನಡೆಸಬೇಕಂದ್ರೆ ಅನುಮತಿ, ಅಂಗೀಕಾರ, ಲಂಚ, ಅಧಿಕಾರಶಾಹಿಗಳ ದೌರ್ಜನ್ಯದಿಂದ ನಲುಗಿ ಹೋಗುವವರೇ ಹೆಚ್ಚು ಅನ್ನೋದು ಅವರ ಅನುಭವದ ಮಾತು. ಬರೀ ಭಾರತ ಮಾತ್ರವಲ್ಲ, ಇಡೀ ವಿಶ್ವದಲ್ಲೇ ಇದು ಪುರುಷ ಪಾರಮ್ಯವಿರುವ ಇಂಡಸ್ಟ್ರಿ. ಈ ಕೆಲಸಕ್ಕೆ ದೈಹಿಕವಾಗಿ ಹೆಚ್ಚು ಶಕ್ತಿ ಬೇಕು, ಘಂಟೆಗಳ ಲೆಕ್ಕವೇ ಇಲ್ಲ. ಹಾಗಾಗಿ ಮಹಿಳೆಯರು ಇಲ್ಲಿ ಅಲ್ಪಸಂಖ್ಯಾತರು ಎನ್ನುತ್ತಾರೆ ಕೈನಾಝ್.

ಈ ವ್ಯವಸ್ಥೆ ಕೈನಾಝ್ ಅವರ ಆಸಕ್ತಿಗೆ ನೀರೆರೆದು ಪೋಷಿಸಲಿಲ್ಲ. ನಿನ್ನ ಅಕ್ಕಪಕ್ಕದವರಿಗಾಗಿ ಒಂದು ಕೆಫೆ ಆರಂಭಿಸಿ, ಅಪಾಯಗಳನ್ನು ಆಹ್ವಾನಿಸುತ್ತಿದ್ದೀಯಾ ಅಂತೆಲ್ಲಾ ಟೀಕಿಸಿದವರೇ ಹೆಚ್ಚು. ಅವರೇ ಈಗ ಕೈನಾಝ್ ಅವರ ಕೆಫೆಯಲ್ಲಿ ಮಾಡಿದ ಕೇಕ್‍ಗಳನ್ನು ಸವಿಯಲು ಮುಂಬೈನ ಯಾವ ಮೂಲೆಯಿಂದಾದ್ರೂ ಬರುತ್ತಾರೆ. ಮುಂಬೈನಲ್ಲಿ ಕೈನಾಝ್ ಈಗ ಇಂತಹ ಒಂಭತ್ತು ಕೆಫೆಗಳನ್ನು ನಡೆಸುತ್ತಿದ್ದಾರೆ. ಆರಂಭದಲ್ಲಿ ಅವರಿಗೆ ಯಾವುದೇ ನಿರೀಕ್ಷೆಗಳಿರಲಿಲ್ಲ, ಕೆಫೆಗಾಗಿ ಖರ್ಚು ಮಾಡಿದ ಹಣವಾದ್ರೂ ವಾಪಸ್ ಬರಬಹುದೇ ಅನ್ನೋ ಪ್ರಶ್ನೆ ಕಾಡ್ತಾ ಇತ್ತು. ಆದ್ರೆ ಗ್ರಾಹಕರು ನೀಡಿದ ಅದ್ಭುತ ಪ್ರತಿಕ್ರಿಯೆ ಮತ್ತು ಈ ಮಟ್ಟಿನ ಯಶಸ್ಸಿನಿಂದ ಕೈನಾಝ್ ಖುಷಿಯಾಗಿದ್ದಾರೆ.

image


ಮುಂಬೈ ನಿವಾಸಿಗಳೆಲ್ಲ ಭೋಜನ ರಸಿಕರು. ಗ್ರಾಹಕರಿಗೆ ಜ್ಞಾನವಿದೆ, ಬೇರೆ ಬೇರೆ ಪ್ರದೇಶಗಳಿಗೆ ಪ್ರಯಾಣ ಮಾಡಿದ ಅನುಭವವಿದೆ. ಹೊಸ ರುಚಿ, ವಿನೂತನ ತಿನಿಸುಗಳ ಬಗ್ಗೆ ಕೂಡ ಅರಿವಿದೆ. ಮುಂಬೈಕರ್‍ಗಳು ಬೆಳಗಿನ ತಿಂಡಿಗೆ ಚಾಕಲೇಟ್ ಕೇಕ್ ಹಾಗೂ ರಾತ್ರಿ ಊಟದ ಜೊತೆ ಸಿಹಿ ತಿನಿಸುಗಳನ್ನು ಬಯಸೋದು ಈಗ ಸಾಮಾನ್ಯವಾಗ್ಬಿಟ್ಟಿದೆ. ತಾವು ಕೂಡ ಈ ಕ್ರಾಂತಿಯ ಭಾಗವಾಗಿದ್ದಕ್ಕೆ ಕೈನಾಝ್ ಹೆಮ್ಮೆಪಡ್ತಾರೆ. ಕೈನಾಝ್ ಒಮ್ಮೆಯೂ ತಮ್ಮ ಗುರಿಯಿಂದ ಹಿಂದೆ ಸರಿದಿಲ್ಲ, ವಿಚಲಿತರಾಗಿಲ್ಲ. ತಮ್ಮ ಉದ್ಯಮವನ್ನು ಇನ್ನಷ್ಟು ವಿಸ್ತರಿಸಲು ಮುಂದಾಗಿದ್ದಾರೆ. ಈಗಾಗ್ಲೇ ಉತ್ಪನ್ನಗಳನ್ನು ದೆಹಲಿಗೆ ಕೊರಿಯರ್ ಮೂಲಕ ಕಳುಹಿಸಲಾಗ್ತಿದೆ. ಅಲ್ಲಿ ಕೂಡ ಔಟ್‍ಲೆಟ್‍ಗಳನ್ನು ತೆರೆಯುವುದು ಕೈನಾಝ್ ಅವರ ಯೋಜನೆ.

ಕಾಮನ್ ಆಗಿರುವ ಸ್ಪೈಸಿ ಹಾಟ್ ಚಾಕಲೇಟ್ ಇದಲ್ಲ. ಸುಂದರ ನಗುವಿನ ಜೊತೆ ಪ್ರೀತಿಯನ್ನು ಬೆರೆಸಿ ಕೈನಾಝ್ ಸಿಹಿ ಭಕ್ಷ್ಯವನ್ನು ನಿಮಗೆ ಬಡಿಸ್ತಾರೆ. ರುಚಿ-ಶುಚಿ-ಗುಣಮಟ್ಟದ ಬಗ್ಗೆ ಎರಡು ಮಾತಿಲ್ಲ. ಮನಸ್ಸು ಮಾಡಿದ್ರೆ ಮಹಿಳೆ ಏನು ಬೇಕಾದ್ರೂ ಮಾಡಬಹುದು ಅನ್ನೋದಕ್ಕೆ ಕೈನಾಝ್ ಅವರೇ ಬೆಸ್ಟ್ ಎಕ್ಸಾಂಪಲ್. ಇನ್ನು ಮುಂದಿನ ದಿನಗಳಲ್ಲಿ ಭಾರತದಲ್ಲಿ ಮಹಿಳಾ ಶೆಫ್‍ಗಳು ಇನ್ನಷ್ಟು ರೆಸ್ಟೋರೆಂಟ್‍ಗಳ ಮಾಲೀಕರಾಗ್ತಾರೆ ಅನ್ನೋದು ನ್ಯಾಶನಲ್ ರೆಸ್ಟೋರೆಂಟ್ ಅಸೋಸಿಯೇಶನ್‍ನ ಅಧ್ಯಕ್ಷ ರಿಯಾಝ್ ಅಮ್ಲಾನಿ ಅವರ ಅಂದಾಜು. ಈ ಮಾತು ನಿಜವಾಗುವ ದಿನಗಳು ದೂರವೇನಿಲ್ಲ.

ಲೇಖಕರು: ಬಿಂಜಲ್​​ ಷಾ

ಅನುವಾದಕರು: ಭಾರತಿ ಭಟ್​​​​