ಮಕ್ಕಳ ಶಿಕ್ಷಣಕ್ಕೆ ‘ಪ್ರಥಮ್’ ಪ್ರಥಮ ಆದ್ಯತೆ

ಟೀಮ್​​ ವೈ.ಎಸ್​​.

ಮಕ್ಕಳ ಶಿಕ್ಷಣಕ್ಕೆ ‘ಪ್ರಥಮ್’ ಪ್ರಥಮ ಆದ್ಯತೆ

Thursday October 08, 2015,

3 min Read

“ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು” ಎಂಬ ನಾಣ್ಣುಡಿಯೇ ಇದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆತರೆ ಮಾತ್ರ ಮುಂದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಗುಣಮಟ್ಟದ ಶಿಕ್ಷಣ ಎಂದಾಗ ಅಲ್ಲಿ ಗುಣಮಟ್ಟದ ಪುಸ್ತಕಗಳ ಅವಶ್ಯಕತೆಯು ಹೆಚ್ಚಿರುತ್ತದೆ. ಆದರೆ ಎಲ್ಲಾ ಮಕ್ಕಳಿಗೂ ಉತ್ತಮ ಪುಸ್ತಕಗಳನ್ನು ಕೈಗೆಟಕುವ ಬೆಲೆಯಲ್ಲಿ ಅಥವಾ ಉಚಿತವಾಗಿ ಕೊಂಡು ಓದಲು ಸಾಧ್ಯವಾಗಬೇಕಲ್ಲ? ಈಗ ಅದೂ ಸಾಧ್ಯ ಎನ್ನುತ್ತದೆ ‘ಪ್ರಥಮ್’ ಎಂಬ ಜನಪ್ರಿಯ ಎನ್.ಜಿ.ಓ ಸಂಸ್ಥೆ.

image


ಯಾವ ಮಕ್ಕಳೂ ಶಿಕ್ಷಣದಿಂದ ವಂಚಿತರಾಗಬಾರದು, ಜ್ಞಾನ ಸಂಪಾದನೆ ಮಾಡಬೇಕು ಮತ್ತು ಎಲ್ಲಾ ಭಾಷೆಯ ಮಕ್ಕಳಿಗೂ ಕಥೆ ಪುಸ್ತಕಗಳು ತಲುಪಬೇಕು ಎಂಬುದು ‘ಪ್ರಥಮ್’ ಉದ್ದೇಶ. ಸ್ವತಃ ಅನೇಕ ಪುಸ್ತಕಗಳನ್ನು ಪಬ್ಲೀಶ್ ಮಾಡುತ್ತಿರುವ ಪ್ರಥಮ್ ಸ್ಥಳೀಯ ಭಾರತೀಯ ಭಾಷೆಗಳಲ್ಲಿಯೂ ಪುಸ್ತಕಗಳನ್ನು ಪ್ರಕಟ ಮಾಡುತ್ತಿದ್ದು, ಕಳೆದ 11 ವರ್ಷಗಳಿಂದ 18 ಸ್ಥಳೀಯ ಭಾಷೆಗಳ 14 ಮಿಲಿಯನ್ ಪುಸ್ತಗಳನ್ನು ಪ್ರಕಟಿಸಿದೆ. ಇದರಲ್ಲಿ 6 ಬುಡಕಟ್ಟು ಭಾಷೆಗಳ ಪುಸ್ತಕಗಳನ್ನೂ ಸಹ ಪ್ರಕಟಿಸಿದೆ. ಮೊದಲಿನಿಂದಲೂ ಪುಸ್ತಕಗಳ ಬೆಲೆ ಹೆಚ್ಚೇನೂ ಇರಲಿಲ್ಲ. 8 ವರ್ಷಗಳ ಕಾಲ ಸರಾಸರಿ ಬೆಲೆ 25 ರೂ. ಇತ್ತು. ಈಗ 35 ರೂ. ಆಗಿದೆ. 2008ರಲ್ಲಿ ಇದು ಭಾರತದಲ್ಲಿ ಮಕ್ಕಳ ಪುಸ್ತಕಗಳನ್ನು ಪ್ರಕಟ ಮಾಡಲು ಆರಂಭವಾದ ಮೊದಲನೇಯ ಪ್ರಕಾಶನ ಸಂಸ್ಥೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಪ್ರಖ್ಯಾತ ಲೇಖಕರುಗಳು ಬರೆದ ಹೊಸ ಹೊಸ ವಿಷಯಗಳ ಜೊತೆಗೆ ಕಲರ್‍ಫುಲ್ ಚಿತ್ರಗಳನ್ನು ಹೊಂದಿರುವ ಈ ಪ್ರಕಾಶನದ ಪುಸ್ತಕಗಳು ಮಕ್ಕಳನ್ನು ಬಹಳಬೇಗ ಆಕರ್ಷಿಸುತ್ತವೆ.

ಒನ್ ಡೇ ಒನ್ ಸ್ಟೋರಿ

ಒನ್ ಡೇ ಒನ್ ಸ್ಟೋರಿ... ಇದು ಪುಸ್ತಕದ ಶೀರ್ಷಿಕೆಯಲ್ಲ, ಪ್ರಥಮ್ ಸಂಸ್ಥೆ 4 ವರ್ಷಗಳಿಂದ ಹಮ್ಮಿಕೊಂಡು ಬರುತ್ತಿರುವ ಕ್ಯಾಂಪೇನ್. ಉಚಿತವಾಗಿ ಆಯೋಜಿಸುವ ಈ ಸ್ಟೋರಿ ಟೆಲ್ಲಿಂಗ್ ಕ್ಯಾಂಪೇನ್ ಬಡವರ ಪಾಲಿಗೆ ಆಶಾಕಿರಣವಾಗಿವೆ ಎಂದು ಹೇಳಬಹುದು. ಅಂದಹಾಗೆ ಕ್ಯಾಂಪೇನ್‍ನಲ್ಲಿ ಮಕ್ಕಳ ಕೈಗೆ ಕಥೆ ಪುಸ್ತಕವನ್ನು ಕೊಟ್ಟು ಕಥೆ ಹೇಳಲಾಗುತ್ತದೆ. ಈ ಮೂಲಕ ಮಕ್ಕಳಲ್ಲಿ ಓದಿನ ಬಗ್ಗೆ ಆಸಕ್ತಿ, ಒಲವು ಮೂಡುವಂತೆ ಮಾಡಲಾಗುತ್ತದೆ. ಮಕ್ಕಳಿಗೆ ಅನುಕೂಲವಾಗುವ ಹಾಗೆ ಆಯಾ ಪ್ರದೇಶಕ್ಕೆ ಅನುಗುಣವಾಗಿ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಲಾಗುತ್ತದೆ. ಮೊದಲೇ ಹೇಳಿದ ಹಾಗೆ ಬಹುಭಾಷೆಗಳಲ್ಲಿ ಪ್ರಕಟಗೊಂಡಿರುವ ಪುಸ್ತಕಗಳನ್ನು ಮಕ್ಕಳಿಗೆ ಓದಲು ಕೊಡುವುದರಿಂದ ಅವರು ಅದನ್ನು ಎಂಜಾಯ್ ಮಾಡಿಕೊಂಡು ಓದುತ್ತಾರೆ ಜೊತೆಗೆ ಇಲ್ಲಿ ಸ್ಟೋರಿಯನ್ನು ಶೇರ್ ಮಾಡಿಕೊಂಡು ಕಥೆ ಹೇಳಲಾಗುತ್ತದೆ. ಮಕ್ಕಳಲ್ಲಿ ಹುರುಪು ತುಂಬಲು ಪ್ರತಿ ವರ್ಷವೂ ಒಬ್ಬೊಬ್ಬ ಲೇಖಕರ ಒಂದೊಂದು ಪುಸ್ತಕವನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಭಾರತ ಮಾತ್ರವಲ್ಲದೆ, ಹೊರ ದೇಶಗಳಲ್ಲಿಯೂ ಪ್ರಥಮ್ ಸ್ಟೋರಿ ಟೆಲ್ಲಿಂಗ್ ಕ್ಯಾಂಪೇನ್ ಅನ್ನು ನಡೆಸಿಕೊಂಡು ಬರುತ್ತಿದ್ದು, ಇದುವರೆಗೆ 2,500 ಕ್ಯಾಂಪೇನ್ ಕಂಡಕ್ಟ್ ಮಾಡಲಾಗಿದೆ. ವಿಶೇಷವೆಂದರೆ ಎಲ್ಲಾ ಕ್ಯಾಂಪೇನ್‍ಗಳನ್ನು ಉಚಿತವಾಗಿಯೇ ಮಾಡಲಾಗಿದೆ.

image


ಪುಸ್ತಕ ದಾನ

ಪ್ರಥಮ್ ಮೂಲ ಗುರಿಯೇ ಪ್ರತಿಯೊಬ್ಬ ಮಕ್ಕಳ ಕೈಯ್ಯಲ್ಲಿ ಖಡ್ಡಾಯವಾಗಿ ಪುಸ್ತಕ ಇರಬೇಕೆಂಬುದು, ಸಾಧ್ಯವಾದಷ್ಟು ಮಕ್ಕಳಿಗೆ ಒಳ್ಳೊಳ್ಳೆಯ ಪುಸ್ತಕಗಳನ್ನು ಕೊಡಬೇಕೆಂಬುದು. ಮಕ್ಕಳಿಗೆ ಓದಲು ಸಹಾಯ ಮಾಡುವವರು ಹಾಗೂ ಪುಸ್ತಕಗಳನ್ನು ದಾನವಾಗಿ ಕೊಡುವವರ ಮಧ್ಯೆ ಸೇತುವೆಯಾಗಿ ನಿಂತಿರುವ ಪ್ರಥಮ್ ದೇಶದಾದ್ಯಂತ ಸಾವಿರಾರು ಮಕ್ಕಳಿಗೆ ಈಗಾಗಲೇ ಪುಸ್ತಕಗಳನ್ನು ಒದಗಿಸಿ ಅವರ ಸಂತೋಷಕ್ಕೆ ಕಾರಣವಾಗಿದೆ. ಕೆಲವೊಮ್ಮೆ ಬಹಳಷ್ಟು ಸಂಘಸಂಸ್ಥೆಗಳಿಗೆ, ಜನಸಾಮಾನ್ಯರಿಗೆ ಮಕ್ಕಳ ಓದಿಗೆ ಸಹಾಯ ಮಾಡಬೇಕೆಂಬ ಹಂಬಲವಿರುತ್ತದೆ. ಆದರೆ ಅದನ್ನು ಕಾರ್ಯರೂಪಕ್ಕೆ ತರುವುದು ಕಷ್ಟವಾಗಿರುತ್ತದೆ. ಇನ್ನು ಕೆಲವು ಮಕ್ಕಳಿಗೆ ಓದುವ ತುಡಿತವಿರುತ್ತದೆ ಅವರಿಗೆ ಸಹಾಯ ಮಾಡಲು ಮುಂದೆ ಬರುವವರು ಕಡಿಮೆಯೇ, ಇವರನ್ನೆಲ್ಲಾ ಒಂದೆಡೆ ಸಂಘಟಿಸಿ ಪುಸ್ತಕಗಳನ್ನು ಸಂಗ್ರಹಿಸುವ ಬಗ್ಗೆ ಐಡಿಯಾ ನೀಡುತ್ತಿದೆ ಪ್ರಥಮ್. ಭಾರತದಲ್ಲಿರುವುದು 300 ಮಿಲಿಯನ್ ಮಕ್ಕಳಾದರೆ, ಪ್ರಥಮ್ ಪ್ರತಿ ವರ್ಷ ಪ್ರಕಟಿಸುತ್ತಿರುವುದು ಒಂದು ಮಿಲಿಯನ್ ಪುಸ್ತಕಗಳನ್ನು.

ಮುಂಚೂಣಿಯಲ್ಲಿರುವ ಇತರೆ ಸಂಸ್ಥೆಗಳು...

ಪ್ರಥಮ್ ತರಹವೇ ಅದ್ಭುತವಾಗಿ ಕ್ಯಾಂಪೇನ್ ಅನ್ನು ನಡೆಸಿಕೊಂಡು ಬರುತ್ತಿರುವ ಇನ್ನೊಂದು ಸಂಸ್ಥೆ ಅವಲೊಕಿತೇಶ್ವರ ಟ್ರಸ್ಟ್. ಲೆಹ್ ಹಾಗೂ ಲಡಾಕ್‍ನಲ್ಲಿರುವ ಈ ಟ್ರಸ್ಟ್ ಮಕ್ಕಳ ಪಾಲನೆ ಮತ್ತು ಶಿಕ್ಷಣ ನೀಡುವತ್ತ ಗಮನವಿಟ್ಟಿದೆ. ಲೆಹ್‍ನಲ್ಲಿರುವ ಟ್ರಸ್ಟ್​​ನ ಶಾಲೆ ಮತ್ತು ಲರ್ನಿಂಗ್ ಸೆಂಟರ್‍ಗಳಲ್ಲಿ ಸುಸಜ್ಜಿತವಾದ 40 ರೀಡಿಂಗ್ ರೂಮ್‍ಗಳು ಹಾಗೂ ಬುಕ್ ಕಾರ್ನರ್‍ಗಳನ್ನು ಮಾಡಲಾಗಿದ್ದು, ಇಲ್ಲಿ ಹಿಂದಿ, ಉರ್ದು, ಇಂಗ್ಲಿಷ್ ಮತ್ತು ಲಡಾಕಿ/ಟಿಬೇಟಿಯನ್ ಭಾಷೆಗಳ ಪುಸ್ತಕಗಳನ್ನು ಸಂಗ್ರಹಿಸಿಡಲಾಗಿದೆ.

image


ಇಂಡಿಯನ್ ಮಾಮ್ಸ್ ಕನೆಕ್ಟ್ ಎಂಬ ಮತ್ತೊಂದು ಸಂಸ್ಥೆ ಯೂಥ್ ಫಾರ್ ಸೇವಾದೊಂದಿಗೆ ಕೈಜೋಡಿಸಿದ್ದು, ಬೆಂಗಳೂರಿನ ಪೂರ್ಣ ಪ್ರಜ್ಞಾ ಲೇಔಟ್‍ನಲ್ಲಿರುವ ಬ್ರಿಡ್ಜ್ ಸ್ಕೂಲ್ ಗ್ರಂಥಾಲಯಕ್ಕೆ ಪುಸ್ತಕಗಳನ್ನು ದಾನ ಮಾಡುತ್ತಿದೆ. ಹಾಗೆಯೇ ಯೂಥ್ ಫಾರ್ ಸೇವಾದ ಸ್ವಯಂಸೇವಕರು 4-14 ವರ್ಷ ವಯೋಮಿತಿಯ ವಲಸೆ ಬಂದಿರುವ ಕೂಲಿಕಾರ್ಮಿಕರ ಮಕ್ಕಳಿಗೆ ಶಿಕ್ಷಣ ನೀಡುತ್ತಾ ಬರುತ್ತಿದ್ದಾರೆ. ಎಷ್ಟೋ ಬಾರಿ ಕ್ಯಾಂಪೇನ್ ಹಾಕಿ ಒಂದು ವಾರದೊಳಗೆ ದಾನಿಗಳು ಸಹಾಯ ಮಾಡಿದ ಉದಾಹರಣೆಗಳು ಸಾಕಷ್ಟಿವೆಯಂತೆ.

ಎ.ಎಸ್.ಇ.ಆರ್. ವರದಿಯ ಪ್ರಕಾರ ಭಾರತದಲ್ಲಿರುವ ಶೇ.50 ರಷ್ಟು ಜನ ಮಕ್ಕಳು ಒಂದು ಮಟ್ಟದವರೆಗಾದರೂ ಓದಲು ಸಾಧ್ಯವಾಗುತ್ತಿಲ್ಲ, ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹಲವಾರು ಸಂಶೋಧನಾ ಅಧ್ಯಯನಗಳ ಪ್ರಕಾರ ದೇಶದ ಸಾಕ್ಷರತೆ ಪ್ರಮಾಣ ಹೆಚ್ಚಾದಾಗ ಮಕ್ಕಳು ಒಳ್ಳೆಯ ಓದುಗರಾಗುತ್ತಾರೆ. ಒಳ್ಳೆಯ ಓದುಗರು ಸಿಕ್ಕಾಗ ಸಾಕಷ್ಟು ಯಶಸ್ಸು, ಪ್ರಗತಿ ಸಾಧಿಸುವುದು ಸುಲಭ ಸಾಧ್ಯ.

image


“ಭಾರತದಲ್ಲಿ ಮಕ್ಕಳಿಗೆ ಪೂರಕವಾದ ಪುಸ್ತಕಗಳು ಲಭಿಸುವುದು ಕಷ್ಟವಾಗಿದೆ. ಈ ಕೊರತೆ ಎಲ್ಲಾ ಭಾಷೆಗಳಲ್ಲಿಯೂ ಕಾಣುವುದಿಲ್ಲ. ಬಹಳಷ್ಟು ಜನ ಪಬ್ಲಿಶರ್‍ಗಳು ಶ್ರೀಮಂತ ಹಾಗೂ ಮಧ್ಯಮ ವರ್ಗದವರ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪುಸ್ತಕಗಳನ್ನು ತಯಾರಿಸಲು ಮುಂದಾಗುತ್ತಾರೆ. ಇದರಿಂದ ನಾವು ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳು ವಂಚಿತರಾಗುತ್ತಿರುವುದನ್ನು ಮನಗಂಡು ಕ್ರಿಯಾಶೀಲವಾದ ಈ ಕೆಲಸಕ್ಕೆ ಮುಂದಾಗಿದ್ದೇವೆ.”

ಸುಜೇನ್ ಸಿಂಗ್, ಪ್ರಥಮ್‍ಬುಕ್ಸ್​​​​​​​ ಅಧ್ಯಕ್ಷೆ