ಐಸಿಸ್ ರಕ್ಕಸರಿಂದ ಅತ್ಯಾಚಾರಕ್ಕೊಳಗಾಗಿ ತಪ್ಪಿಸಿಕೊಂಡಿದ್ದ ಯುವತಿ : ಈಗ ವಿಶ್ವಸಂಸ್ಥೆ ಸದ್ಭಾವನಾ ರಾಯಭಾರಿ

ಟೀಮ್ ವೈ.ಎಸ್.ಕನ್ನಡ 

ಐಸಿಸ್ ರಕ್ಕಸರಿಂದ ಅತ್ಯಾಚಾರಕ್ಕೊಳಗಾಗಿ ತಪ್ಪಿಸಿಕೊಂಡಿದ್ದ ಯುವತಿ : ಈಗ ವಿಶ್ವಸಂಸ್ಥೆ ಸದ್ಭಾವನಾ ರಾಯಭಾರಿ

Sunday September 18, 2016,

2 min Read

ನಾದಿಯಾ ಮುರದ್, 23 ವರ್ಷದ ಸುಂದರ ಯುವತಿ. ಐಎಸ್ಐಎಸ್ ಉಗ್ರರ ಹಿಂಸೆಗೆ ನಲುಗಿದ್ದ ಮುಗ್ಧೆ. ಈಗ ವಿಶ್ವಸಂಸ್ಥೆಯ ಸದ್ಭಾವನಾ ರಾಯಭಾರಿ. ವಿಶ್ವಸಂಸ್ಥೆಯ ಡ್ರಗ್ಸ್ ಮತ್ತು ಕ್ರೈಮ್ ವಿಭಾಗದ ಅಧಿಕಾರಿ. ಮಾನವ ಕಳ್ಳಸಾಗಣೆಯಲ್ಲಿ ಬಚಾವಾದವರ ಗೌರವ ಕಾಪಾಡುವ ಜವಾಬ್ಧಾರಿ ನಾದಿಯಾ ಮೇಲಿದೆ. ಐಸಿಸ್ ಪಾತಕಿಗಳ ಕೈಯ್ಯಿಂದ ತಪ್ಪಿಸಿಕೊಂಡು ಬಂದಿದ್ದ ನಾದಿಯಾ ಈ ವರ್ಷ ನೊಬೆಲ್ ಪ್ರಶಸ್ತಿಗೂ ನಾಮನಿರ್ದೇಶನಗೊಂಡಿದ್ದರು.

image


ನಾದಿಯಾ ಮುರದ್ ಇರಾಕ್​ನ ಉತ್ತರ ಭಾಗದಲ್ಲಿರುವ ಕೋಚಾ ಎಂಬ ಗ್ರಾಮದಲ್ಲಿ ಒಡಹುಟ್ಟಿದವರು ಹಾಗೂ ತಾಯಿಯೊಂದಿಗೆ ವಾಸವಾಗಿದ್ಲು. ಮೊದಮೊದಲು ಐಸಿಸ್ ಉಗ್ರರ ಹಿಂಸಾಕೃತ್ಯದ ಬಗ್ಗೆ ಅವರಿಗೆ ಅರಿವೇ ಇರಲಿಲ್ಲ. ಒಮ್ಮೆ ನಾದಿಯಾ ವಾಸವಿದ್ದ ಹಳ್ಳಿಗೆ ನುಗ್ಗಿದ ಐಸಿಸ್ ಉಗ್ರರು ಎಲ್ಲರಿಗೂ ಶಾಲೆಯೊಳಕ್ಕೆ ಹೋಗುವಂತೆ ಸೂಚಿಸಿದ್ರು. ಗುಂಪಿನಲ್ಲಿದ್ದ ಮಹಿಳೆಯರು ಮತ್ತು ಪುರುಷರನ್ನು ಬೇರ್ಪಡಿಸಿದ್ರು. 314 ಪುರುಷರನ್ನು ನಿಷ್ಕರುಣೆಯಿಂದ ಕೊಂದು ಹಾಕಿದ್ರು. ನಾದಿಯಾಳ 6 ಮಂದಿ ಸಹೋದರರು ಕೂಡ ಐಸಿಸ್ ಕ್ರೌರ್ಯಕ್ಕೆ ಬಲಿಯಾಗಿದ್ರು. ನಾದಿಯಾ ಹಾಗೂ ಉಳಿದ ಯುವತಿಯರನ್ನೆಲ್ಲ ಐಸಿಸ್ ಉಗ್ರರು ಇರಾಕ್​ನ ಮೋಸುಲ್ ನಗರಕ್ಕೆ ಕರೆದೊಯ್ದರು. ಅಲ್ಲಿ ಅನುಭವಿಸಿದ್ದು ಮಾತ್ರ ಅಕ್ಷರಶಃ ನರಕಯಾತನೆ.

ಕ್ರೂರ ಸಂಘಟನೆ ಮಾನವೀಯತೆಯ ಲವಲೇಶವೂ ಇಲ್ಲದೆ ನಾದಿಯಾ ಮೇಲೆ ಅತ್ಯಾಚಾರ ಎಸಗಿತ್ತು. ಐಸಿಸ್ ವಶದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಸಿಕ್ಕಿಬಿದ್ರೆ ಅವರಿಗೆ ಘೋರ ಶಿಕ್ಷೆ ಕೊಡಲಾಗುತ್ತೆ. ಆಕೆಯನ್ನು ಬಂಧಿಖಾನೆಯಲ್ಲಿಟ್ಟು ಒಬ್ಬೊಬ್ಬರಾಗಿ ಎಲ್ಲರೂ ಅವಳ ಮೇಲೆ ಅತ್ಯಾಚಾರ ಎಸಗುತ್ತಾರೆ. ''ಐಸಿಸ್​ನಿಂದ ಪಾರಾಗುವ ಪ್ರಯತ್ನದಲ್ಲಿ ತಾನು ಕೂಡ ಸಾಮೂಹಿಕ ಅತ್ಯಾಚಾರದಿಂದ ನಲುಗಿದ್ದೆ'' ಎನ್ನುತ್ತಾರೆ ನಾದಿಯಾ ಮುರದ್.

ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ನಡೆದ ವಿಶ್ವ ಶಾಂತಿ ದಿನಾಚರಣೆಯಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್, ನಾದಿಯಾ ಮುರದ್​ರನ್ನು ಸನ್ಮಾನಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ನಾದಿಯಾ, ಐಸಿಸ್ ಪಾಪಿಗಳ ಕೈಯಲ್ಲಿ ಸಿಕ್ಕು ನರಳಿದ ತಮ್ಮದೇ ನೋವಿನ ಕಥೆಯನ್ನು ಬಿಚ್ಚಿಟ್ಟರು. ಐಸಿಸ್ ಕಪಿಮುಷ್ಠಿಯಲ್ಲಿರುವ ಪ್ರಾಂತ್ಯಗಳು, ಮಹಿಳೆಯರು, ಮಕ್ಕಳನ್ನು ಬಿಡಿಸಲು ವಿಶ್ವದ ನಾಯಕರೆಲ್ಲ ಒಗ್ಗೂಡಬೇಕೆಂದು ನಾದಿಯಾ ಮುರದ್ ಕರೆ ನೀಡಿದ್ರು. ಧರ್ಮವನ್ನು ನಾಶ ಮಾಡಲು ಐಸಿಸ್ಗೆ ಅವಕಾಶ ನೀಡದಂತೆ ವಿಶ್ವದ ಮುಸ್ಲಿಂ ನಾಯಕರಿಗೆ ಕರೆ ನೀಡಿದ್ದಾರೆ. ``ಐಎಸ್ಐಎಸ್ ಇಸ್ಲಾಂ ಧರ್ಮವನ್ನು ಪ್ರತಿನಿಧಿಸುವುದಿಲ್ಲ. ಅವರು ಕೇವಲ ತಮ್ಮ ಅಪರಾಧವನ್ನು ಸಮರ್ಥಿಸಿಕೊಳ್ಳಲು ಇಸ್ಲಾಂ ಧರ್ಮವನ್ನು ಬಳಸಿಕೊಳ್ಳುತ್ತಿದ್ದಾರೆ'' ಅಂತಾ ನಾದಿಯಾ ಅಭಿಪ್ರಾಯಪಟ್ಟರು.

ಐಸಿಸ್ ನೀಚ ಕೃತ್ಯಕ್ಕೆ ಸಿಕ್ಕು ನರಕ ಅನುಭವಿಸಿ ಅಲ್ಲಿಂದ ತಪ್ಪಿಸಿಕೊಂಡು ಬಂದ ಸಾಹಸಿ ನಾದಿಯಾ. ಇದೀಗ ವಿಶ್ವಸಂಸ್ಥೆಯಲ್ಲಿ ಉನ್ನತ ಹುದ್ದೆ ಅಲಂಕರಿಸಿರುವುದು ನಿಜಕ್ಕೂ ಪ್ರಶಂಸನಾರ್ಹ.

ಇದನ್ನೂ ಓದಿ...

ಗಾರ್ಮೆಂಟ್ಸ್​ಗೆ ಎಂಟ್ರಿಕೊಡುತ್ತಿದೆ "ಪತಂಜಲಿ"- ವಿದೇಶಿ ಬ್ರಾಂಡ್​ಗಳಿಗೆ ತಿಲಾಂಜಲಿ..!

ನನ್ನ ಅಂಕಣದಲ್ಲಿ ಗಾಂಧೀಜಿ ಚಿತ್ರಣ..