ಕೋಟಿಗಟ್ಟಲೆ ವ್ಯವಹಾರ ನಡೆಸಲು ಲಕ್ಷಗಟ್ಟಲೆ ಸಂಬಳ ಬರುವ ಕೆಲಸ ಬಿಟ್ಟ ಸಚಿನ್..!

ಟೀಮ್​ ವೈ.ಎಸ್​.ಕನ್ನಡ

ಕೋಟಿಗಟ್ಟಲೆ ವ್ಯವಹಾರ ನಡೆಸಲು ಲಕ್ಷಗಟ್ಟಲೆ ಸಂಬಳ ಬರುವ ಕೆಲಸ ಬಿಟ್ಟ ಸಚಿನ್..!

Tuesday May 09, 2017,

3 min Read

ಇವತ್ತಿನ ಸಮಾಜದಲ್ಲಿ ಶಿಕ್ಷಣ ಬೇಕೇ ಬೇಕು. ಪದವಿ ಜೊತೆಗೆ ಉತ್ತಮ ಕೆಲಸವೂ ಇರಬೇಕು. ಕೈ ತುಂಬಾ ಸಂಬಳ ಬರುವ ಕೆಲಸ ಪಡೆದು ಆರಾಮವಾಗಿ ಜೀವನ ನಡೆಸಬೇಕು ಅಂತ ಕನಸು ಕಾಣುವವರೇ ಹೆಚ್ಚು. ಎಂಜಿಯರ್, ಡಾಕ್ಟರ್​ಗಳಾಗಬೇಕು ಎಂದು ಕನಸು ಕಾಣುವವರಿಗೇನು ಕೊರತೆ ಇಲ್ಲ. ಆದ್ರೆ ಈಗ ನಾವು ಹೇಳುತ್ತಿರುವ ಕಥೆಯೇ ವಿಭಿನ್ನ. ಇವರ ಹೆಸರು ಸಚಿನ್ ಕಾಳೆ. ಗುರುಗ್ರಾಮದಲ್ಲಿ ಲಕ್ಷಗಟ್ಟಲೆ ಸಂಬಳ ಪಡೆಯುವ ಕೆಲಸದಲ್ಲಿದ್ದರು. ಆದ್ರೆ ಆ ಕೆಲಸವನ್ನು ಬಿಟ್ಟು ಚತ್ತೀಸ್ ಗಢ ರಾಜ್ಯದ ಬಿಸ್ಲಾಪುರ ಜಿಲ್ಲೆಯ ಮೇಧ್​ಪುರ್ ಗ್ರಾಮಕ್ಕೆ ಬಂದು ಕೃಷಿ ಆರಂಭಿಸಿದ್ರು. ಇವತ್ತು ಸಚಿನ್ ಕಾಳೆ ಕೋಟ್ಯಾಂತರ ರೂಪಾಯಿ ಆದಾಯ ಪಡೆಯುತ್ತಿದ್ದಾರೆ. ಲಕ್ಷಗಟ್ಟಲೆ ಸಂಬಳ ಪಡೆದ್ರೂ ಒತ್ತಡದಲ್ಲೇ ಜೀವನ ನಡೆಸುತ್ತಿದ್ದ ಸಚಿನ್, ಇವತ್ತು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

image


ಸಚಿನ್ ಗುತ್ತಿಗೆ ಆಧಾರಿತ ಕೃಷಿಯ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದರು. 2014ರಲ್ಲಿ "ಇನ್ನೋವೇಟಿವ್ ಅಗ್ರಿಲೈಫ್ ಸೊಲ್ಯುಷನ್ ಪ್ರೈವೇಟ್ ಲಿಮಿಟೆಡ್" ಅನ್ನುವ ಕಂಪನಿಯನ್ನು ಆರಂಭಿಸಿದ್ರು. ಈ ಕಂಪನಿಯ ಮೂಲಕ ಗುತ್ತಿಗೆ ಆಧಾರಿತ ಕೃಷಿಗೆ ಪ್ರೋತ್ಸಾಹ ನೀಡಲಾಯಿತು. ಸಚಿನ್ ಸ್ಥಾಪಿಸಿದ ಕಂಪನಿ ತನ್ನ ಜೊತೆ ಒಪ್ಪಂದ ಮಾಡಿಕೊಂಡ ಕೃಷಿಕರಿಗೆ ತರಬೇತಿ ಹಾಗೂ ಸಲಹೆಗಳನ್ನು ನೀಡಿ ತನ್ನ ವ್ಯಾಪ್ತಿ ಮತ್ತು ಉದ್ಯಮವನ್ನು ವಿಸ್ತರಿಸಿತು.

ಭಾರತದ ಎಲ್ಲಾ ಮಧ್ಯಮ ವರ್ಗ ಕುಟುಂಬದ ತಂದೆತಾಯಿಯಂತೆ ಸಚಿನ್ ಹೆತ್ತವರು ಕೂಡ ಮಗ ಎಂಜಿನಿಯರ್ ಆಗಬೇಕು ಎಂದು ಬಯಸಿದ್ದರು. ಪೋಷಕರ ಬಯಕೆಯನ್ನು ಈಡೇರಿಸುವ ಸಲುವಾಗಿ ಸಚಿನ್ ನಾಗಪುರದ ಕಾಲೇಜಿನಿಂದ ಮೆಕಾನಿಕಲ್ ಎಂಜಿನಿಯರಿಂಗ್​ನಲ್ಲಿ ಪದವಿ ಪಡೆದುಕೊಂಡ್ರು. ಫೈನಾನ್ಸ್​ನಲ್ಲಿ ಎಂ.ಬಿ.ಎ. ಪದವಿ ಕೂಡ ಪಡೆದುಕೊಂಡ್ರು. ಪದವಿ ಬಳಿಕ ಪವರ್ ಪ್ಲಾಂಟ್ ಒಂದರಲ್ಲಿ ಕೆಲಸವನ್ನು ಕೂಡ ಗಿಟ್ಟಿಸಿಕೊಂಡ್ರು. ಯಶಸ್ಸಿನ ಒಂದೊಂದೇ ಮೆಟ್ಟಿಲುಗಳನ್ನು ಹತ್ತಿದ್ರು. ಕೆಲಸದ ಜೊತೆ ಓದು ಮುಂದುವರೆಸಿಕೊಂಡು ಲಾ ಪದವಿಯನ್ನು ಕೂಡ ಪಡೆದುಕೊಂಡ್ರು. 2007ರಲ್ಲಿ ಡೆವಲಪ್​ಮೆಂಟಲ್ ಎಕಾನಮಿಕ್ಸ್​ನಲ್ಲಿ ಪಿಎಚ್​ಡಿ ಪಡೆಯಲು ಅಡ್ಮಿಷನ್ ಪಡೆದುಕೊಂಡ್ರು. ಪಿಎಚ್​ಡಿ ಓದುವ ದಿನಗಳಲ್ಲಿ ಬೇರೆಯವರಿಗೆ ಲಾಭ ತಂದುಕೊಡುವ ಕೆಲಸದ ಬದಲು ತನಗೇ ಲಾಭ ಬರುವ ಕೆಲಸ ಮಾಡಬೇಕು ಅನ್ನುವ ನಿರ್ಧಾರ ಮಾಡಿದ್ರು.

ತನ್ನದೇ ಉದ್ಯಮ ಸ್ಥಾಪಿಸುವ ಮೊದಲು ಹಲವು ಕೆಲಸಗಳನ್ನು ಮಾಡು ಬಗ್ಗೆ ಸಚಿನ್​ಗೆ ಯೋಚನೆಗಳು ಬಂದಿದ್ದವು. ಇದೇ ವೇಳೆ ಸಚಿನ್ ಕಾಳೆಗೆ ತನ್ನ ಅಜ್ಜ ಸರಕಾರಿ ಕೆಲಸದಿಂದ ನಿವೃತ್ತಿ ಹೊಂದಿದ ಬಳಿಕ ಮಾಡುತ್ತಿದ್ದ ಕೃಷಿಯ ಬಗ್ಗೆ ಹೆಚ್ಚು ಆಸಕ್ತಿ ಹುಟ್ಟಿತ್ತು. ಮನುಷ್ಯ ಯಾವುದೇ ಸೌಲಭ್ಯ ಇಲ್ಲದೆ ಬದುಕಬಲ್ಲ, ಆದರೆ ಹೊಟ್ಟೆಗೆ ಹಿಟ್ಟಿಲ್ಲದೆ ಬದುಕಲಾರ ಅಂತ ಹೇಳಿದ ಮಾತು ಸಚಿನ್ ಕಾಳೆಗೆ ಸ್ಫೂರ್ತಿಯಾಯಿತು.

ಇದನ್ನು ಓದಿ: ಕೇಕ್​​​​ನಲ್ಲಿ ಅರಳಿತು ಕಲಾತ್ಮಕತೆ..!

ಸಚಿನ್​ಗೆ ಕೆಲವು ಎಕರೆಗಳಷ್ಟು ಜಮೀನು ಇತ್ತು. ಆದ್ರೆ ಅದರಲ್ಲಿ ಬೆಳೆಯುವ ಬೆಳೆ ಹಾಗೂ ಅದರಿಂದ ಲಾಭ ಪಡೆಯುವ ಬಗ್ಗೆ ಜ್ಞಾನವಿರಲಿಲ್ಲ. ಕೆಲವು ದಿನಗಳ ಅನುಭವದ ಬಳಿಕ ಸಚಿನ್, ಕೃಷಿಗೆ ಕೆಲಸಗಾರರ ಕೊರತೆ ಉಂಟಾಗುತ್ತದೆ ಅನ್ನುವುದನ್ನು ಅರಿತುಕೊಂಡ್ರು. ಅಚ್ಚರಿ ಅಂದ್ರೆ ಗ್ರಾಮಗಳಲ್ಲಿರುವ ಕೆಲಸಗಾರರು ಕೆಲಸ ಹುಡುಕಿಕೊಂಡು ಅಲೆದಾಟ ನಡೆಸುತ್ತಿದ್ದರು. ಈ ಕೆಲಸಗಾರರಿಗೆ ಸ್ವಗ್ರಾಮಗಳಲ್ಲೇ ಕೆಲಸ ಸಿಕ್ಕಿದರೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಅನ್ನುವ ಲೆಕ್ಕಾಚಾರ ಸಚಿನ್​ಕಾಳೆಯದ್ದಾಗಿತ್ತು. ಜೊತೆಗೆ ಸಚಿನ್ ಕೃಷಿಕರ ಬಗ್ಗೆ ಕೂಡ ಯೋಚನೆ ಆರಂಭಿಸಿದ್ರು. ಕೃಷಿಕರಿಂದ ಜಮೀನುಗಳನ್ನು ಬಾಡಿಗೆಗೆ ಪಡೆದು ಅಲ್ಲಿ ಕೃಷಿ ಮಾಡಲು ಆರಂಭಿಸಿದ್ರು. ಇದಕ್ಕಾಗಿ ಸಾಕಷ್ಟು ಶ್ರಮ ಹಾಕಿದ್ರು. 15 ವರ್ಷಗಳಿಂದ ಕೂಡಿಟ್ಟ ಪಿ.ಎಫ್. ಹಣವನ್ನು ತನ್ನ ಉದ್ಯಮದ ಬಂಡವಾಳವನ್ನಾಗಿ ಮಾಡಿಕೊಂಡ್ರು.

ಶೇಕಡಾ 100ರಷ್ಟು ಪರಿಶ್ರಮ ಹಾಕಿದರೆ ಮಾತ್ರ ಯಶಸ್ಸು ಸಾಧ್ಯ ಅನ್ನುವುದು ಸಚಿನ್​ಗೆ ಗೊತ್ತಿತ್ತು. ತನ್ನ ಶೈಕ್ಷಣಿಕ ಅರ್ಹತೆಗೆ ಕೆಲಸವನ್ನು ಸುಲಭವಾಗಿ ಪಡೆಯಬಹುದು. ಆದರೆ ಅದರಿಂದ ಸಂಬಳ ಮಾತ್ರ ಬರುತ್ತದೆ. ತನ್ನ ಅಭಿವೃದ್ಧಿ ಅಸಾಧ್ಯ ಅನ್ನುವುದನ್ನು ಮನಗಂಡ ಸಚಿನ್ ಕೃಷಿಯನ್ನು ಮುಂದುವರೆಸಿದ್ರು. ಇವತ್ತು ಸಚಿನ್ ಕಂಪನಿಯಲ್ಲಿ 137 ಕೃಷಿಕರಿದ್ದಾರೆ. 200 ಎಕರೆಗೂ ಅಧಿಕ ಜಮೀನುಗಳಲ್ಲಿ ಕೆಲಸಗಳು ನಡೆಯುತ್ತಿದೆ. ಸಚಿನ್ ಮಾಲೀಕತ್ವದ ಕಂಪನಿ ಇವತ್ತು ವಾಷಿರ್ಕವಾಗಿ 2 ಕೋಟಿ ರೂಪಾಯಿಗಳಿಗೂ ಅಧಿಕ ವಹಿವಾಟು ನಡೆಸುತ್ತಿದೆ.

ಸಚಿನ್ ಕೆಲಸಕ್ಕೆ ಪತ್ನಿ ಕಲ್ಯಾಣಿಯಿಂದಲೂ ನೆರವು ಸಿಗುತ್ತಿದೆ. ಮಾಸ್ ಕಮ್ಯೂನಿಕೇಷನ್​ನಲ್ಲಿ ಪದವಿ ಪಡೆದುಕೊಂಡಿರುವ ಕಲ್ಯಾಣಿ ಕಂಪನಿಯ ಹಣಕಾಸು ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದಾರೆ. ಮುಂದೊಂದು ದಿನ ಬಾಂಬೆ ಸ್ಟಾಕ್ ಎಕ್ಸೇಂಜ್​ನಲ್ಲಿ ಸಚಿನ್ ಕಾಳೆ ಸ್ಥಾಪಿಸಿರುವ ಕಂಪನಿಯ ಹೆಸರು ಇರುತ್ತೆ ಅನ್ನುವುದು ಇವರ ಆಶಯವಾಗಿದೆ.

ಇದನ್ನು ಓದಿ:

1. ಯಾರಿಗೂ ಬಿಟ್ಟುಕೊಡಬೇಡಿ ನಿಮ್ಮಗುಟ್ಟು- ಸ್ಯಾಲರಿ ಸ್ಲಿಪ್​ನಲ್ಲಿ ಅಡಗಿದೆ ಭವಿಷ್ಯದ ಕನಸು  

2. ಕೆಲವೇ ದಿನಗಳಲ್ಲಿ ಲಾಸ್ಟ್ ಶೋ ಫಿಕ್ಸ್​.. ಇತಿಹಾಸ ಸೃಷ್ಠಿಯಲ್ಲಿ ನೀವು ಒಬ್ಬರಾಗಿ..!

3. ಬುರ್ಜ್ ಖಲೀಪಾದ ಎತ್ತರಕ್ಕೆ ಚಾಲೆಂಜ್- ಮುಂಬೈನಲ್ಲಿ ತಯಾರಾಗಿದೆ ಸೂಪರ್ ಪ್ಲಾನಿಂಗ್