ಇದು ಬಂಜರು ಭೂಮಿಯನ್ನು ಹಸಿರಾಗಿಸಿದೆ ಕಥೆ..!

ಟೀಮ್​ ವೈ.ಎಸ್​. ಕನ್ನಡ

ಇದು ಬಂಜರು ಭೂಮಿಯನ್ನು ಹಸಿರಾಗಿಸಿದೆ ಕಥೆ..!

Tuesday July 25, 2017,

2 min Read

ಆತ ನಿಜಕ್ಕೂ ಮರಗಳ ಪಾಲಿನ ಆಶ್ರಯದಾತ. ಫ್ರಾನ್ಸಿಸ್ಕನ್ ಮಿಷನರಿಗಳಲ್ಲಿ ಧರ್ಮ ಬೋಧನೆ ಮಾಡುವುದು ಇವರ ಕೆಲಸ. ಆದ್ರೆ ತಾನು ಮಾಡುತ್ತಿರುವ ಕೆಲಸಕ್ಕೆ ತಕ್ಕ ಹಾಗೆ ನಡೆದುಕೊಳ್ಳುತ್ತಿದ್ದಾರೆ. ಮೂಲತಃ ಜರ್ಮನಿಯವರು. ಆದ್ರೆ ಕೀನ್ಯಾದಲ್ಲಿ ಕಳೆದ 3 ದಶಕಗಳಿಂದ ಮರ ನೆಡುವ ಕಾಯಕದಲ್ಲಿ ತೊಡಗಿದ್ದಾರೆ. ನಕುರು ದೇಶದ ಸುಬುಕಿಯ ಕಣಿವೆ ಪ್ರದೇಶ ಈಗ ಹಚ್ಚ ಹಸುರಿನಿಂದ ಕಂಗೊಳಿಸುತ್ತಿದೆ. ಸಾವಿರಾರು ಮರಗಳು ಬೆಳೆದು ನಿಂತಿದೆ. ಮಳೆ ಹೆಚ್ಚಾಗಿ ನೀರಿನ ಸೆಲೆಗಳು ಹೆಚ್ಚಾಗಿವೆ. ಹೀಗಾಗಿ ಗುಳೆಹೋಗುತ್ತಿರುವವರ ಸಂಖ್ಯೆ ಸಾಕಷ್ಟು ಕಡಿಮೆ ಆಗಿದೆ.

image


ಈ ಪರಿಸರ ಪಿತಾಮಹನ ಹೆಸರು ಹರ್ಮನ್ ಬೊರ್ಗ್. ಮದರ್ ಅರ್ಥ್ ನೆಟ್ ವರ್ಕ್ ಅನ್ನುವ ಎನ್ ಜಿಒ ಒಂದರ ಸಂಸ್ಥಾಪಕ. ಕೀನ್ಯಾದಲ್ಲಿ ಪರಿಸರದ ಬಗ್ಗೆ ಜಾಗೃತಿ ಹುಟ್ಟಿಸುತ್ತಿದ್ದಾರೆ. ಮರ ಬೆಳೆಸುವುದರಿಂದ ಆಗುವ ಲಾಭ ಮತ್ತು ಪರಿಸರಕ್ಕೆ ಉಂಟಾಗುವ ಲಾಭದ ಬಗ್ಗೆ ಈ ಜನ ಸಾಮಾನ್ಯರಿಗೆ ತಿಳಿಸಿಕೊಡುವ ಪ್ರಯತ್ನವನ್ನು ಈ ಸಂಸ್ಥೆ ಮಾಡುತ್ತಿದೆ.

“ಕಳೆದ 30 ವರ್ಷಗಳಲ್ಲಿ ನಾನು ಗಿಡ ನೆಡಲು ಸುಮಾರು 50,000 ಡಾಲರ್ ಖರ್ಚು ಮಾಡಿದ್ದೇನೆ. ನಾನು ನೆಟ್ಟಿರುವ ಮರಗಳ ಬೆಲೆ ಈಗ 5 ಮಿಲಿಯನ್ ಡಾಲರ್ ಗಳ ಗಡಿ ದಾಟುತ್ತಿದೆ. ದುಡ್ಡಿನ ಲೆಕ್ಕಾಚಾರ ಬಿಟ್ಟು, ಪರಿಸರದ ಬಗ್ಗೆ ಯೋಚನೆ ಮಾಡಿದ್ರೆ, ಅದಕ್ಕೆ ಯಾವುದೇ ರೀತಿಯಿಂದ ಬೆಲೆ ಕಟ್ಟಲು ಸಾಧ್ಯವಿಲ್ಲ.”
- ಬೊರ್ಗ್, ಪರಿಸರವಾದಿ

ಬೊರ್ಗ್ ಸುಬುಕಿಯಾದಲ್ಲಿ ಸ್ಥಳೀಯ ಜನರನ್ನು ಒಟ್ಟು ಸೇರಿಸಿಕೊಂಡು 1983ರಲ್ಲಿ ಕೆಲಸ ಆರಂಭಿಸಿದ್ರು. ಖಾಲಿ ಬಿದ್ದಿದ್ದ ಜಾಗಗಳಲ್ಲಿ ಮರ, ಬೆಳೆಸುವ ಕಾರ್ಯ ಆರಂಭಿಸಿದ ಬೊರ್ಗ್ ಅದರಲ್ಲಿ ಹೆಚ್ಚಿನ ಯಶಸ್ಸು ಕಂಡರು. 30 ವರ್ಷಗಳ ಬಳಿಕ ಬೊರ್ಗ್ ವಿಶ್ವವೇ ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ದಿನ ಕಳೆದಂತೆ ಮರಗಳು ಹೆಮ್ಮರವಾಗಿ ಬೆಳೆಯುತ್ತಿವೆ. ಪ್ರಾಕೃತಿಕ ಕ್ರಿಯೆಗಳು ಮತ್ತೆ ಆರಂಭವಾಗಿವೆ. ಅಂತರ್ಜಲದ ಮಟ್ಟ ಹೆಚ್ಚಿದೆ. ಭವಿಷ್ಯ ಉಜ್ವಲವಾಗಿ ಕಾಣುತ್ತಿದೆ. ಹಸಿರೇ ನಮ್ಮ ಉಸಿರು ಅನ್ನುವುದು ಎಲ್ಲದಕ್ಕೂ ಒಗ್ಗುವಂತಹ ಮಾತು.

ಇದನ್ನು ಓದಿ: ವಿಜ್ಞಾನ ಪಾಠ ಮಾಡಲು ಟೀಚರ್ ಇಲ್ಲದಿದ್ದರೂ ನೋ ವರಿ- ಐಎಎಸ್ ಆಫೀಸರ್ ಪತ್ನಿ ಅಧ್ಯಾಪಕಿಯಾದ ಕಥೆ ಓದಿ..!

ಕಳೆದ 30 ವರ್ಷಗಳಲ್ಲಿ ಬೊರ್ಗ್ ಕೀನ್ಯಾದ ಹಲವಾರು ಪ್ರದೇಶಗಳ ಜನರಿಗೆ ಹತ್ತಿರವಾಗಿದ್ದಾರೆ. ಸ್ಥಳೀಯ ಭಾಷೆಯಲ್ಲಿ ಅವರನ್ನು ಬಾಬಾ ಮಿಟಿ ಅಂದ್ರೆ ಮರಗಳ ಪಾಲಿನ ಅಪ್ಪ ಎಂದು ಕರೆಯುತ್ತಿದ್ದಾರೆ. ಸುಬುಕಿಯ ಪ್ರದೇಶಕ್ಕೆ ಬೊರ್ಗ್ ಮೊದಲು ಆಗಮಿಸಿದ್ದಾಗ ಆ ಪ್ರದೇಶದಲ್ಲಿ ಶಾಲೆಯಾಗಲಿ ಅಥವಾ ಇನ್ನಿತರ ಬೇಸಿಕ್ ಸೌಲಭ್ಯಗಳಿರಲಿಲ್ಲ. ಬಂಜರು ಭೂಮಿಯೇ ಹೆಚ್ಚಾಗಿದ್ದುದರಿಂದ ಜನ ಗುಳೆ ಹೋಗುವುದು ಸಾಮಾನ್ಯವಾಗಿತ್ತು. ಆದ್ರೆ ಈಗ ಪರಿಸ್ಥಿತಿಯೇ ಬದಲಾಗಿದೆ.

“ ಜನರು ಗುಳೆ ಹೋಗುವುದು ಈಗ ಬಹುತೇಕ ನಿಂತು ಹೋಗಿದೆ. ಸುಬುಕಿಯಾದಲ್ಲಿ ಶಾಲೆಗಳು ಕೂಡ ಇವೆ. ಈ ಹಿಂದೆ ಗುಳೆ ಹೋದವರು ವಾಪಾಸ್ ಬರುತ್ತಿದ್ದಾರೆ. ಕೃಷಿಯಲ್ಲಿ ಜನ ನಿರತರಾಗಿದ್ದಾರೆ. ಟಿಂಬರ್ ಮೂಲಕ ಹಣ ಕೂಡ ಸಂಪಾದನೆ ಮಾಡುತ್ತಿದ್ದಾರೆ. ”
- ಬೊರ್ಗ್, ಪರಿಸರವಾದಿ

ಬೊರ್ಗ್ ಕೆಲಸಕ್ಕೆ ಸ್ಥಳೀಯರು ಕೂಡ ಸಾಕಷ್ಟು ನೆರವು ನೀಡುತ್ತಿದ್ದಾರೆ. ಪ್ರತೀ ವರ್ಷ ಸ್ಥಳೀಯರು 30,000 ಸಸಿಗಳನ್ನು ನೆಟ್ಟು ಪರಿಸರ ಕಾಪಾಡಲು ಸಹಾಯ ಮಾಡುತ್ತಿದ್ದಾರೆ. ಮರಗಳನ್ನು ಸ್ಥಳೀಯರೇ ರಕ್ಷಣೆ ಮಾಡುತ್ತಿರುವುದರಿಂದ ಪರಿಸರದಲ್ಲಿನ ಅಸಮತೋಲನ ತಪ್ಪಿದೆ. ಸದ್ಯ ಕೀನ್ಯಾದಲ್ಲಿ ಯಶಸ್ಸು ಸಾಧಿಸಿರುವ ಮದರ್ ಅರ್ಥ್ ನೆಟ್ ವರ್ಕ್ ಮುಂದಿನ ಕಾರ್ಯಾಚರಣೆಗೆ ಸಿದ್ಧವಾಗಿದೆ. ಉಗಾಂಡಾ ಮತ್ತು ತಾಂಜಾನಿಯಾದಲ್ಲಿ ಹಸಿರು ಬೆಳೆಸುವುದು ಇವರ ಗುರಿಯಾಗಿದೆ. 

ಇದನ್ನು ಓದಿ:

1. ಕುಗ್ರಾಮದ ಮನೆಗಳಿಗೆ ಸೋಲಾರ್ ಭಾಗ್ಯ..!

2. ಹೆಂಗಸರಿಗೆ ತಪ್ಪಿಲ್ಲ ನೀರಿನ ಬವಣೆ- ಆಗಬೇಕಿದೆ ವ್ಯವಸ್ಥೆಯಲ್ಲಿ ಭಾರೀ ಸುಧಾರಣೆ

3. ಆ್ಯಪ್​ನಲ್ಲೇ ಪಠ್ಯ, ಆ್ಯಪ್​ನಲ್ಲೇ ಓದು- ಇದು ಬಡ ಮಕ್ಕಳ ನೆರವಿಗೆ ನಿಂತ ಶಂಕರ್ ಯಾದವ್ ಕಥೆ