ಭಾರತದಿಂದ ಪಾಕಿಸ್ತಾನದವರೆಗೆ ಹಸಿವಿನ ವಿರುದ್ಧ ರಾಬಿನ್ ಹುಡ್ ಆರ್ಮಿ ಸಮರ

ಟೀಮ್​​ ವೈ.ಎಸ್​​.

ಭಾರತದಿಂದ ಪಾಕಿಸ್ತಾನದವರೆಗೆ ಹಸಿವಿನ ವಿರುದ್ಧ ರಾಬಿನ್ ಹುಡ್ ಆರ್ಮಿ ಸಮರ

Thursday October 29, 2015,

2 min Read

ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಯಾವಾಗಲೂ ಉದ್ವಿಗ್ನತೆ ಇದ್ದೇ ಇರುತ್ತದೆ. ಆದರೆ, ಉಭಯ ದೇಶಗಳ ಕೆಲ ನಾಗರಿಕರು ಮಾತ್ರ ಯುದ್ಧ ಘೋಷಿಸಿದ್ದಾರೆ. ಅದು ಹಸಿವಿನ ವಿರುದ್ಧ. ಹೌದು ಹಸಿವಿನಿಂದ ಅವರು ಸ್ವಾತಂತ್ರ್ಯ ಬಯಸಿದ್ದಾರೆ. ಕಳೆದ ಒಂದು ವರ್ಷದಿಂದೀಚೆಗೆ ಸ್ವಯಂ ಸೇವಕರ ತಂಡ ರಾಬಿನ್ ಹುಡ್ ಆರ್ಮಿಯು ಬಡವರಿಗೆ ಆಹಾರ ಮತ್ತು ಅಗತ್ಯ ವಸ್ತುಗಳನ್ನು ಒದಗಿಸುವಲ್ಲಿ ನಿರತವಾಗಿದೆ.

ಈ ಐಡಿಯಾ ಮೊದಲಿಗೆ ಬಂದಿದ್ದು, ಝೊಮಾಟೋದ ಅಂತಾರಾಷ್ಟ್ರೀಯ ವ್ಯವಹಾರಗಳ ಉಪಾಧ್ಯಕ್ಷ ನೀಲ್ ಘೋಸ್ ಅವರಿಗೆ. ಲಿಸ್ಬನ್​​ನಲ್ಲಿ ಪೋರ್ಚುಗಲ್ ಕಾರ್ಯಾಚರಣೆ ವೇಳೆ ಈ ಐಡಿಯಾ ಹುಟ್ಟಿಕೊಂಡಿತ್ತು. ಅಲ್ಲಿ ಕೆಲಸ ಮಾಡುತ್ತಿದ್ದಾಗ ರೀಫುಡ್ ಸಂಸ್ಥೆಯ ಸಂಪರ್ಕಕ್ಕೆ ಬಂದರು. ಅವರು ತುಂಬಾ ಸಂಕೀರ್ಣ ಸ್ಥಳೀಯ ಮಟ್ಟದಲ್ಲಿ, ಸ್ಥಳೀಯ ಮಾದರಿಯಲ್ಲಿ ಕೆಲಸ ಮಾಡುತ್ತಿದ್ದರು. ಅದು ನನಗೆ ಆಸಕ್ತಿ ಕೆರಳಿಸಿತು. ನಾನು ಅವರ ಜೊತೆ ಸೇರಿಕೊಂಡು ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಯತ್ನಿಸಿದೆ ಎನ್ನುತ್ತಾರೆ ನೀಲ್.

image


ಗುರ್ಗಾಂವ್​​ಗೆ ವಾಪಸ್ಸಾದ ಬಳಿಕ, ನೀಲ್ ಅವರು ತಮ್ಮ ಸಹಸಂಸ್ಥಾಪಕರಾದ ಆನಂದ್ ಸಿನ್ಹಾ ಜೊತೆಗೂಡಿ 2014ರ ಆಗಸ್ಟ್​​​ನಲ್ಲಿ ರಾಬಿನ್​​ಹುಡ್ ಆರ್ಮಿಯನ್ನು ಸ್ಥಾಪಿಸಿದರು. ಈ ಪ್ರಯಾಣ 6 ಜನರ ತಂಡದೊಂದಿಗೆ ಆರಂಭವಾಯಿತು, ಒಂದು ರಾತ್ರಿಯಲ್ಲಿ ನಾವು 150 ಜನರಿಗೆ ಆಹಾರ ಒದಗಿಸಿದೆವು. ಈಗ ರಾಬಿನ್​​ಹುಡ್ ಆರ್ಮಿ ಭಾರತ ಮತ್ತು ಪಾಕಿಸ್ತಾನಗಳ 15 ನಗರಗಳಲ್ಲಿ ಕಾರ್ಯಪ್ರವೃತ್ತವಾಗಿದೆ. 732 ಸ್ವಯಂಸೇವಕರು 1,26,954 ಮಂದಿಗೆ ಆಹಾರ ಒದಗಿಸಿದ್ದಾರೆ.

ಕಾರ್ಯವೈಖರಿ

ಇದು ತುಂಬಾ ಸರಳವಾದ ಮಾದರಿ. ಈ ತಂಡವು, ರೆಸ್ಟೋರೆಂಟ್​​ಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳುತ್ತದೆ. ಅಲ್ಲಿ ಉಳಿದ ಆಹಾರವನ್ನು ಸಂಗ್ರಹಿಸಿ, ಅಗತ್ಯ ಇರುವ ಅಶಕ್ತರಿಗೆ ಸರಬರಾಜು ಮಾಡುತ್ತದೆ. “ಹಂಚಿಕೆಯನ್ನು ಸರಿಯಾದ ರೀತಿಯಲ್ಲಿ ಮಾಡಬೇಕು ಎನ್ನುವುದು ನಮ್ಮ ಆರಂಭಿಕ ಉದ್ದೇಶವಾಗಿತ್ತು,” ಎನ್ನುತ್ತಾರೆ ನೀಲ್. ಈ ಕೆಲಸಕ್ಕೆ ಸರಿಯಾದ ವ್ಯಕ್ತಿಗಳನ್ನು ಆರಿಸಿಕೊಳ್ಳಲು ಪ್ರತಿ ನಗರದಲ್ಲೂ ನಾವು ಶೋಧ ನಡೆಸಿದ್ದೆವು. ಬಹುತೇಕ ಜನರಿಗೆ ಸಂಶಯವಿತ್ತು. ನಾವು ನಿಜವಾಗಿಯೂ ಅರ್ಹ ವ್ಯಕ್ತಿಗಳಿಗೆ ಆಹಾರವನ್ನು ಒದಗಿಸುತ್ತಿದ್ದೇವೆಯೋ ಎನ್ನುವ ಪ್ರಶ್ನೆಗಳಿದ್ದವು. ಅದಕ್ಕಾಗಿ ನಾವು ನಮ್ಮ ಪ್ರತಿ ಚಟುವಟಿಕೆಗಳನ್ನೂ ಫೇಸ್​​ಬುಕ್ ಪುಟದಲ್ಲಿ ಅಪ್ಲೋಡ್ ಮಾಡಲಾರಂಭಿಸಿದೆವು ಎನ್ನುತ್ತಾರೆ ನೀಲ್.

ಈ ಚಟುವಟಿಕೆಯಿಂದಾಗಿ, ನಮ್ಮ ತಂಡವು ಸಾಕಷ್ಟು ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆಯಲು ಸಾಧ್ಯವಾಯಿತು. ನೀಲ್ ಮತ್ತು ಆನಂದ್ ಅವರು ಹಲವು ಗೆಳೆಯರೂ ತಮ್ಮ ನಗರಗಳಲ್ಲಿ ಈ ಕಾರ್ಯ ಆರಂಭಿಸಿದರೆ ಕೈ ಜೋಡಿಸುವುದಾಗಿ ಭರವಸೆ ಕೊಟ್ಟರು. ಆಗ ನಮಗೆ ಇದನ್ನು ದೊಡ್ಡ ಮಟ್ಟದಲ್ಲಿ ಮಾಡಬಹುದು ಎನ್ನುವ ವಿಶ್ವಾಸ ಸೃಷ್ಟಿಯಾಯಿತು ಎನ್ನುತ್ತಾರೆ ನೀಲ್. ಆರಂಭದಲ್ಲಿ ಈ ತಂಡ ಮುಂಬೈ, ದೆಹಲಿ, ಬೆಂಗಳೂರು, ಹೈದ್ರಾಬಾದ್ ಮತ್ತು ಕೋಲ್ಕತ್ತಾಗಳಲ್ಲಿ ಕೆಲಸ ಆರಂಭಸಿತು. ಗೆಳೆಯರು ಮತ್ತು ಕುಟುಂಬ ಸದಸ್ಯರ ಮೂಲಕ ಆರಂಭವಾದ ಈ ಸೇವೆ ಈಗ ಹಲವು ಸ್ವಯಂಸೇವಕರನ್ನು ಒಳಗೊಂಡು ಬೆಳೆಯುತ್ತಿದೆ.

ಗಡಿ ದಾಟಿದ ಸಾಹಸ !

ಜನವರಿ ಅಂತ್ಯದ ವೇಳೆ, ಎಲ್ಎಸ್ಇಯಲ್ಲಿ ಸಹೋದ್ಯೋಗಿಯಾಗಿದ್ದಾ ಗೆಳೆತಿಯೊಬ್ಬರು ಮತ್ತೆ ನೀಲ್ ಸಂಪರ್ಕಕ್ಕೆ ಬಂದಿದ್ದರು. ನಮ್ಮ ಸೇವೆ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ ಅವರು, ಕರಾಚಿಯಲ್ಲೂ ಇದನ್ನು ಆರಂಭಿಸುವ ಆಸೆ ವ್ಯಕ್ತಪಡಿಸಿದರು. ಫೆಬ್ರಬರಿ 14ರಂದು ಕರಾಚಿ ಚಾಪ್ಟರ್ ಆರಂಭಗೊಂಡಿದ್ದು, ಅತ್ಯಂತ ಕ್ರಿಯಾಶೀಲವಾಗಿ ಮುನ್ನಡೆದಿದೆ ಎನ್ನುತ್ತಾರೆ ನೀಲ್.

ಪ್ರತಿಯೊಂದು ಚಾಪ್ಟರ್​​ನಲ್ಲೂ ಕೋರ್ ತಂಡವೊಂದಿದ್ದು, ಅದು ಸ್ವಯಂಸೇವಕರ ಚಟುವಟಿಕೆ, ರೆಸ್ಟೋರೆಂಟ್​​ಗಳ ಜೊತೆ ಸಂಬಂಧ, ಹಂಚಿಕೆ ಮೊದಲಾದ ಕೆಲಸಗಳನ್ನು ನಿರ್ವಹಿಸುತ್ತದೆ. ಗ್ರೀನ್ ತಂಡವು, ಒಂದು ಸ್ಥಳದಲ್ಲಿ ಒಗ್ಗೂಡಿ, ರೆಸ್ಟೋರೆಂಟ್​​ಗಳಿಗೆ ತೆರಳಿ, ಅಲ್ಲಿಂದ ಆಹಾರ ಸಂಗ್ರಹಿಸುತ್ತಾರೆ. ಅವುಗಳನ್ನ ಸಂಸ್ಕರಿಸಿ, ಪೊಟ್ಟಣಗಳನ್ನು ಮಾಡುತ್ತಾರೆ. ಅಶಕ್ತರಿಗೆ ಅದನ್ನು ತಲುಪಿಸಿ ಬರುತ್ತಾರೆ.

image


ಪ್ರತಿಯೊಂದು ತಂಡವೂ ವಿವಿಧ ಉದ್ದೇಶಗಳಿಗಾಗಿ ಕಾರ್ಯಕರ್ತರನ್ನು ನಿಯೋಜಿಸಿರುತ್ತದೆ. ನಾವು ಕೇವಲ ನಿರಾಶ್ರಿತರಿಗಷ್ಟೇ ಆಹಾರ ಒದಗಿಸುತ್ತಿಲ್ಲ. ದೆಹಲಿಯ ಏಮ್ಸ್​​ನಲ್ಲಿ ಸಾಕಷ್ಟು ಕ್ಯಾನ್ಸರ್ ರೋಗಿಗಳಿದ್ದಾರೆ. ಅವರಿಗೆ ಹೆಚ್ಚಿನ ಆಹಾರದ ಅವಶ್ಯಕತೆ ಇದೆ ಎನ್ನುತ್ತಾರೆ ನೀಲ್.

ಮಿಷನ್ 100ಕೆ

ಒಂದು ವರ್ಷದ ಅವಧಿಯಲ್ಲಿ ಆರ್ಮಿಯು ಅಶಕ್ತರನ್ನು ಗುರುತಿಸುವ ವಿಭಿನ್ನ ವಿಧಾನಗಳನ್ನು ಕಂಡುಕೊಂಡಿದೆ. ದೆಹಲಿಯ ತೀವ್ರಚಳಿಗಾಲದಲ್ಲಿ ನಾವು ಆಹಾರದ ಬದಲು ಕಂಬಳಿ, ಹೊದಿಕೆ, ಬೆಚ್ಚನೆಯ ಉಡುಪುಗಳನ್ನು ಹಂಚುತ್ತೇವೆ. ನಾವು ನಮ್ಮ ಕಾರ್ಯಕರ್ತರಿಗೆ ಆಹಾರವನ್ನು ಹಂಚುವ ವಿಧಾನವನ್ನು ಹೇಳಿಕೊಡುತ್ತೇವೆ. ಅದೇ ವೇಳೆ, ಪ್ರತಿಯೊಬ್ಬರ ಖಾಸಗಿತನಕ್ಕೆ ಧಕ್ಕೆ ಬಾರದಂತೆ ಚಿತ್ರ ತೆಗೆಯುವುದನ್ನೂ ಹೇಳಿಕೊಡುತ್ತೇವೆ ಎನ್ನುತ್ತಾರೆ ನೀಲ್.

ಈ ಸೇನೆಯದ್ದು ವಿಭಿನ್ನವಾದ ಸ್ವಾತಂತ್ರ್ಯ ಹೋರಾಟ. ಹಸಿವು ಎಂಬ ವೈರಿಯ ವಿರುದ್ಧದ ಹೋರಾಟ. ಕಳೆದ ಸ್ವಾತಂತ್ರ್ಯೋತ್ಸವದ ವೇಳೆ ಬೇರೆ ಬೇರೆ ಸಂಸ್ಥೆಗಳ ಸಹಾಯದೊಂದಿಗೆ ರಾಬಿನ್ ಹುಡ್ ಆರ್ಮಿಯು ಸುಮಾರು 1 ಲಕ್ಷ ನಿರ್ಗತಿಕರಿಗೆ ಆಹಾರ ಒದಗಿಸಿದೆ.