ಬಿಸಿಯೂಟದ ಖದೀಮ ಕಳ್ಳರಿಗೆ ರಾಜಸ್ತಾನ ಸರ್ಕಾರದ ಶಾಕ್..!
ಟೀಮ್ ವೈ.ಎಸ್. ಕನ್ನಡ
Tuesday August 02, 2016,
2 min Read
ಶಾಲಾ ವಿದ್ಯಾರ್ಥಿಗಳಿಗೆ ಬಿಸಿಯೂಟದ ಯೋಜನೆ ಸಾಕಷ್ಟು ಸುದ್ದಿ ಮಾಡಿದೆ. ದೇಶದ ಬಹುತೇಕ ರಾಜ್ಯಗಳು ಈ ವಿಶಿಷ್ಠ ಯೋಜನೆಯನ್ನು ಜಾರಿಗೆ ತಂದಿದೆ. ಆದ್ರೆ ಈ ಬಿಸಿಯೂಟ ಯೋಜನೆಯಲ್ಲೇ ದುಡ್ಡು ಕೊಳ್ಳೆ ಹೊಡೆಯುವ ಖದೀಮರಿಗೇನು ಕೊರತೆ ಇಲ್ಲ. ಅದೆಷ್ಟೇ ಹದ್ದಿನಕಣ್ಣು ಇಟ್ರೂ ಮೋಸ ಮಾಡುವವರು ಸರ್ಕಾರದ ಬೊಕ್ಕಸವನ್ನು ಖಾಲಿ ಮಾಡುತ್ತನೇ ಇದ್ದಾರೆ. ಆದ್ರೆ ಬಿಸಿಯೂಟ ಯೋಜನೆಯಲ್ಲಿ ಪಾರದರ್ಶಕತೆ ತರಲು ರಾಜಸ್ಥಾನ ಸರ್ಕಾರ ಹೊಸ ಪ್ಲಾನ್ ಮಾಡಿದೆ. ಎಸ್ಎಂಎಸ್ ಆಧಾರಿತ ಸೇವೆಯನ್ನು ಜಾರಿಗೆ ತಂದಿದ್ದು, ಬಿಸಿಯೂಟ ಯೋಜನೆಯ ಖರ್ಚುವೆಚ್ಚಗಳು ಸೇರಿದಂತೆ ಎಲ್ಲಾ ಮಾಹಿತಿಗಳು ಟೋಲ್ ಫ್ರೀ ನಂಬರ್ನಲ್ಲಿ ಪ್ರತೀದಿನ ದಾಖಲಾಗುವ ವ್ಯವಸ್ಥೆ ಮಾಡಲಾಗಿದೆ. ಇಡೀ ರಾಜ್ಯದ ಎಲ್ಲಾ ಮಾಹಿತಿಗಳು ಈ ಕೇಂದ್ರೀಕೃತ ಯೋಜನೆಯ ಅಡಿಯಲ್ಲಿ ಸಿಗಲಿದೆ.
ಈ ಹಿಂದೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಪ್ರತೀ ತಿಂಗಳು ಜಿಲ್ಲಾ ಶಿಕ್ಷಣ ಕೇಂದ್ರದಲ್ಲಿ ದಾಖಲಾಗುತ್ತಿತ್ತು. ಹೀಗಾಗಿ ಸಾಕಷ್ಟು ಅವ್ಯವಹಾರಗಳು ನಡೆಯಲು ಹೆಚ್ಚಿನ ಅವಕಾಶವಿತ್ತು. ಆದ್ರೆ ಈಗ ಜಾರಿಗೆ ತಂದಿರುವ ನಿಯಮದ ಪ್ರಕಾರ, ಮಧ್ಯಾಹ್ನ ಬಿಸಿಯೂಟ ಬಡಿಸಿದ ತಕ್ಷಣ ಟೋಲ್ ಫ್ರೀ ನಂಬರ್ಗೆ ಎಲ್ಲಾ ಅಪ್ಡೇಟ್ಗಳನ್ನು ಕಳುಹಿಸಬೇಕಾಗುತ್ತದೆ. ಈ ದಾಖಲೆಗಳನ್ನು ರಾಜ್ಯದ ಕೇಂದ್ರೀಕೃತ ಸೆಂಟರ್ ಒಂದರಲ್ಲಿ ಪರೀಕ್ಷಿಸಲಾಗುತ್ತದೆ. ಇದ್ರ ಜೊತೆಗೆ ಜಿಲ್ಲಾ ಶೈಕ್ಷಣಿಕ ಅಧಿಕಾರಿ ಕೂಡ ಡೇಟಾಗಳನ್ನು ಪರೀಕ್ಷೆ ನಡೆಸಲಿದ್ದಾರೆ. ಬಿಸಿಯೂಟದ ಡೇಟಾ ಸಂಗ್ರಹಕ್ಕಾಗಿಯೇ ರಾಜಸ್ಥಾನ ಸರ್ಕಾರ 15544 ಸಂಖ್ಯೆಯನ್ನು ಅಧಿಕೃತವಾಗಿ ಜಾರಿಗೆ ತಂದಿದೆ.
" ಈ ವ್ಯವಸ್ಥೆಯಲ್ಲಿ ಬಿಸಿಯೂಟ ಬಡಿಸುವ ಅಧಿಕಾರಿ ಶಾಲೆಯ ಹೆಸರು, ವಿದ್ಯಾರ್ಥಿಗಳ ಸಂಖ್ಯೆ ಮತ್ತು ಬಿಸಿಯೂಟದ ಲಾಭ ಪಡೆದ ವಿದ್ಯಾರ್ಥಿಗಳ ಸಂಖ್ಯೆಯನ್ನು ನಮೂದಿಸಬೇಕು. ಇದ್ರ ಜೊತೆಗೆ ಅಡುಗೆಗೆ ಬಳಸಿದ ವಸ್ತುಗಳು ಮತ್ತು ಅದರ ಪ್ರಮಾಣವನ್ನು ನಿಖರವಾಗಿ ಅಪ್ ಡೇಟ್ ಮಾಡಬೇಕು"
- ಪರಸ್ ಚಂದ್ ಜೈನ್
ರಾಜಸ್ಥಾನದಲ್ಲಿ ಸದ್ಯ 62.50 ಲಕ್ಷ ವಿದ್ಯಾರ್ಥಿಗಳು ಬಿಸಿಯೂಟ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ. 1ನೇ ತರಗತಿಯಿಂದ 8ನೇ ತರಗತಿಯ ವಿದ್ಯಾರ್ಥಿಗಳು ಮಧ್ಯಾಹ್ನ ಶಾಲೆಯಲ್ಲೇ ಭೊಜನ ಮಾಡುವ ವ್ಯವಸ್ಥೆ ಮಾಡಲಾಗಿದೆ. 73, 199 ಸರ್ಕಾರಿ ಮತ್ತು ಖಾಸಗಿ ಅನುದಾನಿತ ಶಾಲೆಗಳು ಈ ಯೋಜನೆಯ ಲಾಭ ಪಡೆದುಕೊಳ್ಳುತ್ತಿವೆ. ಕೇಂದ್ರೀಕೃತ ಎಸ್ಎಂಎಸ್ ಅಪ್ಡೇಟ್ ವ್ಯವಸ್ಥೆ ಜಾರಿಗೆ ಬಂದ್ರೆ ಈಗ ನಡೆಯುತ್ತಿರುವ ಮೋಸದ ಲೆಕ್ಕಾಚಾರ ಬಯಲಿಗೆ ಬರಲಿದೆ ಅನ್ನೋದು ಹೆಸರು ಹೇಳಲು ಇಚ್ಛಿಸದ ಶಿಕ್ಷಕರೊಬ್ಬರ ಅಭಿಪ್ರಾಯ.
68729 ಶಾಲೆಗಳು ತಾವೇ ಸಂಭಾವನೆ ನೀಡಿ ಸುಮಾರು 58.58 ಲಕ್ಷ ವಿದ್ಯಾರ್ಥಿಗಳಿಗೆ ಬಿಸಿಯೂಟ ಬಡಿಸುತ್ತಿದೆ. ಉಳಿದಂತೆ ಸೆಂಟ್ರಲ್ ಕಿಚನ್, ಅನ್ನಪೂರ್ಣ ಮಹಿಳಾ ಸಮಿತಿ ಮತ್ತು ಹಲವು ಎನ್ಜಿಒಗಳು ಈ ಕಾರ್ಯದಲ್ಲಿ ನಿರತವಾಗಿದೆ. ಒಟ್ಟಿನಲ್ಲಿ ರಾಜಸ್ಥಾನ ಸರ್ಕಾರ ಬಿಸಿಯೂಟ ಯೋಜನೆಯನ್ನು ಇನ್ನಷ್ಟು ವಿಭಿನ್ನವಾಗಿ ಮಾಡಲು ಪ್ಲಾನ್ ಮಾಡಿದೆ. ದೇಶದ ಉಳಿದ ರಾಜ್ಯಗಳು ಕೂಡ ಈ ನಿಟ್ಟಿನಲ್ಲಿ ಶೀಘ್ರವೇ ಹೆಜ್ಜೆ ಇಡಲಿದೆ.
1. ಬ್ಯಾಂಡ್ ಲೋಕದಲ್ಲಿ ವಿಶಿಷ್ಟ“ಧ್ರುವ”ತಾರೆ