ಹಿರಿ ಜೀವಗಳಿಗೆ ಊರುಗೋಲಾದ `ಬ್ಯೂಟಿಫುಲ್ ಇಯರ್ಸ್'

ಟೀಮ್​​ ವೈ.ಎಸ್​. ಕನ್ನಡ

ಹಿರಿ ಜೀವಗಳಿಗೆ ಊರುಗೋಲಾದ `ಬ್ಯೂಟಿಫುಲ್ ಇಯರ್ಸ್'

Monday December 21, 2015,

4 min Read

ಸಮೂಹ ಮಾಧ್ಯಮದಿಂದ ಹಿಡಿದು ಜಾಹೀರಾತು ಉದ್ಯಮದವರೆಗಿನ ಜಗತ್ತಿನಲ್ಲಿ ಯುವಜನತೆಗೆ ಮಾತ್ರ ಹೆಚ್ಚು ಆದ್ಯತೆ. ಹಿರಿಯ ಜೀವಗಳಿಗೆ ದೇಶವೇ ಇಲ್ಲವೇನೋ ಎಂಬಂತಾಗಿದೆ ಸದ್ಯದ ಸ್ಥಿತಿ. ಇನ್ನು 10 ವರ್ಷಗಳಲ್ಲಿ ಇದೇ ಜನಸಂಖ್ಯೆ ಹಿರಿಯ ನಾಗರೀಕರಾಗಿ ಬದಲಾಗುತ್ತದೆ. ಅವರೆಲ್ಲ ಬಹಳ ಟಚುವಟಿಕೆಯ ಜೀವನ ನಡೆಸಿದವರು, ಕಂಪನಿಗಳನ್ನು ಕಟ್ಟಿ ಬೆಳೆಸಿದ್ದಾರೆ, ದಾಖಲೆಗಳನ್ನು ನಿರ್ಮಿಸಿದ್ದಾರೆ. ಇದರ ಜೊತೆ ಜೊತೆಗೆ ಕಾರ್ಯನಿರ್ವಹಣೆಯ ಹಳೆಯ ವಿಧಾನಕ್ಕೂ ಅವರು ಅಡ್ಡಿಪಡಿಸಿದ್ದಾರೆ. ಅಂಥದ್ರಲ್ಲಿ ನಿವೃತ್ತ ಜೀವನದ ಜೊತೆ ಅವರು ಹೊಂದಿಕೊಳ್ತಾರಾ? ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಾಗಲೆಲ್ಲ ಮಕ್ಕಳು ವೃತ್ತಿಯನ್ನು ಬಿಟ್ಟು ತಮ್ಮ ಬಗ್ಗೆ ಕಾಳಜಿ ವಹಿಸಲಿ ಅಂತಾ ನಿರೀಕ್ಷಿಸ್ತಾರಾ?

ಅವಕಾಶಕ್ಕಾಗಿ ಕಾಯುತ್ತಿರುವ ಉದ್ಯಮಿಗೆ ನಿಜಕ್ಕೂ ಇದು ಸ್ವರ್ಣಯುಗ. `ಯುನೈಟೆಡ್ ನೇಶನ್ಸ್ ಪೊಪ್ಯುಲೇಶನ್ ಫಂಡ್' ಮತ್ತು `ಹೆಲ್ಪ್ ಏಜ್ ಇಂಟರ್‍ನ್ಯಾಶನಲ್'ನ ಜಂಟಿ ವರದಿಯ ಪ್ರಕಾರ ಭಾರತದಲ್ಲಿ 100 ಮಿಲಿಯನ್ ಹಿರಿಯ ನಾಗರೀಕರಿದ್ದಾರೆ. 2050ರ ವೇಳೆಗೆ ಈ ಸಂಖ್ಯೆ 323 ಮಿಲಯನ್‍ಗೆ ಏರಿಕೆಯಾಗಿದೆ. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ.20ರಷ್ಟು ಮಂದಿ ವೃದ್ಧರೇ ಇರುತ್ತಾರೆ.

image


ವಯಸ್ಸಾದ ಉದ್ಯಮ...

ಕಳೆದೆರಡು ವರ್ಷಗಳಿಂದ ಕೆಲ ಉದ್ಯಮಗಳು 60ರ ಆಸುಪಾಸಿನಲ್ಲಿರುವ ಜನರ ಸೇವೆಗಾಗಿ ಹೊಸ ಹೊಸ ಪರಿಕಲ್ಪನೆಗಳನ್ನು ಹುಟ್ಟುಹಾಕಿವೆ. ಇದಕ್ಕಾಗಿಯೇ ಸಾಮಾಜಿಕ ವೇದಿಕೆಗಳನ್ನು ನಿರ್ಮಿಸಿವೆ. `ಗುಡ್ ಹ್ಯಾಂಡ್ಸ್', `ಸೀನಿಯರ್ ಶೆಲ್ಫ್', `ಪ್ರಮತಿ ಕೇರ್', `ಸೀನಿಯರ್ ವಲ್ರ್ಡ್' `ಸಿಲ್ವರ್ ಟಾಕೀಸ್' ಸೇರಿದಂತೆ ಹಲವು ಸಂಸ್ಥೆಗಳು ಹಿರಿಯ ನಾಗರೀಕರ ಅಗತ್ಯಗಳನ್ನು ಪೂರೈಸುವತ್ತ ಗಮನಹರಿಸಿವೆ. ಇದನ್ನೆಲ್ಲ ಆರಂಭಿಸಿರುವವರು ಯುವಕರೇ, ತಮ್ಮ ಸಂಬಂಧಿಕರಲ್ಲೇ ಹಿರಿ ಜೀವಗಳು ಅನುಭವಿಸ್ತಾ ಇರೋ ನೋವನ್ನೆಲ್ಲ ಕಣ್ಣಾರೆ ಕಂಡು, ಅವರಿಗೆ ನೆರವಾಗುವ ಉದ್ದೇಶದಿಂದ ಕಂಪನಿಗಳನ್ನು ಸ್ಥಾಪಿಸಿದ್ದಾರೆ. ಮಕ್ಕಳನ್ನು ಅವಲಂಬಿಸಿ ಬದುಕಲು ನನಗೆ ಇಷ್ಟವಿಲ್ಲ, ವೃದ್ಧಾಪ್ಯದಲ್ಲೂ ಸ್ವಂತ ಪರಿಶ್ರಮದಿಂದ, ಸ್ವಂತ ಉದ್ಯಮ ಕಟ್ಟಿ ಬದುಕುತ್ತೇನೆ ಎನ್ನುತ್ತಾರೆ 51ರ ಹರೆಯದ ವ್ಲಾಡಿಮಿರ್ ರುಪ್ಪೋ. ಕಳೆದ 16 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ವ್ಲಾಡಿಮಿರ್ `ಬ್ಯೂಟಿಫುಲ್ ಇಯರ್ಸ್' ಎಂಬ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದಾರೆ. ನೈತಿಕ ಬೆಂಬಲ ನೀಡುವ ಮೂಲಕ, ನವೀನ ಉತ್ಪನ್ನಗಳನ್ನು ಪೂರೈಸುವ ಮೂಲಕ, ಅಗತ್ಯ ಸೇವೆಗಳನ್ನು ಒದಗಿಸುವ ಮೂಲಕ ಹಿರಿಯ ನಾಗರೀಕರ ಜೀವನ ಮಟ್ಟವನ್ನು ಸುಧಾರಿಸುವುದು ಮತ್ತು ಅವರ ಬಗ್ಗೆ ಕಾಳಜಿ ವಹಿಸುವುದು ವ್ಲಾಡಿಮಿರ್ ಅವರ ಉದ್ದೇಶ. ನಾವು ಹಿರಿಯರ ಆರೈಕೆಯ `ಟ್ರಿಪ್ ಅಡ್ವೈಸರ್ ಅಥವಾ `ಝೊಮೆಟೋ'ವನ್ನು ಮುಂದುವರಿಸುತ್ತೇವೆ ಎನ್ನುತ್ತಾರೆ ವ್ಲಾಡಿಮಿರ್.

ವ್ಲಾಡಿಮಿರ್ ಒಬ್ರು ಸಾಫ್ಟ್​​ವೇರ್ ಕಾರ್ಯನಿರ್ವಾಹಕ, ಅಂತರಾಷ್ಟ್ರೀಯ ಮಟ್ಟದಲ್ಲಿ ಸುಮಾರು 30 ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಅವರಿಗಿದೆ. ರಷ್ಯಾದ ಸೇಂಟ್ ಪೀಟರ್ಸ್‍ಬರ್ಗ್‍ನಲ್ಲಿ ಹುಟ್ಟಿ ಬೆಳೆದ ಅವರು ಇಸ್ರೇಲ್‍ನ ಜೆರುಸಲೇಮ್‍ನಲ್ಲಿ 12 ವರ್ಷ ಕಾರ್ಯನಿರ್ವಹಿಸಿದ್ದಾರೆ. ಬಳಿಕ 2000ನೇ ಇಸ್ವಿಯಲ್ಲಿ ಅವರು ಬೆಂಗಳೂರಿಗೆ ಬಂದ್ರು. ಬ್ರಿಟಿಷ್ ಎಂಎನ್‍ಸಿಯ ಶಾಖೆಯೊಂದನ್ನು ತೆರೆಯುವುದು ಅವರ ಉದ್ದೇಶವಾಗಿತ್ತು. ಅದ್ರಲ್ಲಿ 2200 ಮಂದಿ ಕಾರ್ಯನಿರ್ವಹಿಸ್ತಾ ಇದ್ರು. 6 ತಿಂಗಳು ನಡೆಯಬೇಕಿದ್ದ ಕೆಲಸ 16 ವರ್ಷಗಳ ವರೆಗೆ ಮುಂದುವರಿದಿತ್ತು. ಆದ್ರೆ ಸಿಸ್ಕೋದ ವಿಪಿ ಎಂಜಿನಿಯರಿಂಗ್‍ನಲ್ಲಿ ಕಾರ್ಯನಿರ್ವಹಿಸ್ತಾ ಇದ್ದ ವ್ಲಾಡಿಮಿರ್ ತಮ್ಮ ಕೆಲಸಕ್ಕೆ ಗುಡ್‍ಬೈ ಹೇಳಿ `ಬ್ಯೂಟಿಫುಲ್ ಇಯರ್ಸ್'ನತ್ತ ಹೆಚ್ಚು ಗಮನಹರಿಸಿದ್ರು.

ಇದು ವಯಸ್ಸಿನ ವಿಚಾರವಲ್ಲ...

ವ್ಲಾಡಿಮಿರ್ ತಮ್ಮ ಚಿಕ್ಕಮ್ಮನ ಕಥೆಯನ್ನು ಹೇಳ್ತಾರೆ. ಈಗ ಅವರಿಗೆ 86 ವರ್ಷ. ಪ್ರತಿ ಬಾರಿ ಕನ್ನಡಿಯಲ್ಲಿ ಇಣುಕಿದಾಗಲೂ ಈ ಕುರೂಪಿ ವೃದ್ಧೆ ಯಾರು? ಈಕೆ ನಾನಂತೂ ಅಲ್ಲ ಎಂದು ಅವರಿಗೆ ಅನ್ನಿಸುತ್ತಂತೆ. ಹಿರಿ ಜೀವಗಳನ್ನು ನಾವು ಅರ್ಥಮಾಡಿಕೊಂಡಿದ್ದೀವಾ? ಅನ್ನೋದು ವ್ಲಾಡಿಮಿರ್ ಅವರ ಪ್ರಶ್ನೆ. ಇದೇ ಪ್ರಶ್ನೆ, ತಾವು ಕೂಡಿಟ್ಟ ಹಣದಿಂದ್ಲೇ `ಬ್ಯೂಟಿಫುಲ್ ಇಯರ್ಸ್' ಅನ್ನು ಕಟ್ಟಲು ವ್ಲಾಡಿಮಿರ್ ಅವರಿಗೆ ಪ್ರೇರಣೆಯಾಗಿತ್ತು. `ಬ್ಯೂಟಿಫುಲ್ ಇಯರ್ಸ್' ವೇದಿಕೆ ಬಳಕೆದಾರರಿಗೆ ಸಂಪೂರ್ಣ ಉಚಿತ. ತಮ್ಮ ಇ-ಕಾಮರ್ಸ್ ಪೋರ್ಟಲ್ ಮೂಲಕ ವ್ಲಾಡಿಮಿರ್ ಆದಾಯ ಸಂಗ್ರಹಿಸುತ್ತಿದ್ದಾರೆ. ಅವರ ಇ-ಶಾಪ್‍ನಲ್ಲಿ ಮ್ಯಾಗ್ನಿಫೈಯಿಂಗ್ ಲೆನ್ಸ್ ಹೊಂದಿರುವ ನೇಲ್ ಕಟರ್‍ಗಳು, ಬುಕ್ ಹೋಲ್ಡರ್‍ಗಳು, ಮಾತ್ರಗೆಳನ್ನು ಕತ್ತರಿಸುವ ಸಾಧನ, ಮೋಟಾರ್ ಅಳವಡಿತ ವ್ಹೀಲ್ ಚೇರ್ ಸೇರಿದಂತೆ ಹಿರಿಯ ಜೀವಗಳ ಬದುಕಿಗೆ ಅಗತ್ಯವಾದ ವಸ್ತುಗಳು ದೊರೆಯುತ್ತವೆ. ಸ್ಥಳೀಯವಾಗಿ ಉತ್ಪಾದಿಸಿದ ಪ್ರಾಡಕ್ಟ್‍ಗಳು ಮಾತ್ರವಲ್ಲದೆ, ವಿದೇಶಗಳಿಂದ್ಲೂ `ಬ್ಯೂಟಿಫುಲ್ ಇಯರ್ಸ್' ಅತ್ಯಾಧುನಿಕ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಕಣ್ಣಿನ ಸಮಸ್ಯೆ ಇರುವವರಿಗಾಗಿ ಕನ್ನಡಕ, ಸಕ್ಕರೆ ಖಾಯಿಲೆ ಇರುವವರಿಗಾಗಿ ವಿಶೇಷ ಬೂಟುಗಳು, ಅನಾರೋಗ್ಯದಿಂದ ಹಾಸಿಗೆ ಹಿಡಿದವರಿಗಾಗಿ ವಿಶೇಷ ಉಡುಪುಗಳನ್ನು ತರಿಸಿಕೊಳ್ಳಲಾಗುತ್ತೆ.

image


ಸೀನಿಯರ್ ಕೇರ್ ಉತ್ಪನ್ನಗಳನ್ನು ಖರೀದಿಸಿದವರಿಗೆ ಸೇವೆಗಳ ಅಗತ್ಯ ಕೂಡ ಇರುತ್ತದೆ. ಅವರಿಗೆ ಫಿಸಿಯೋಥೆರಪಿಸ್ಟ್‍ಗಳು, ಮನೆಯಲ್ಲೇ ಡಯಾಗ್ನೋಸ್ಟಿಕ್ ಸೇವೆ, ಹಾಗೂ ವೈದ್ಯಕೀಯ ಉಪಕರಣಗಳನ್ನು ಒದಗಿಸಲಾಗುತ್ತದೆ. ವೆಬ್‍ಸೈಟ್‍ನಲ್ಲಿ ಪಟ್ಟಿ ಮಾಡಿರುವ ಸೇವೆ ಪೂರೈಕೆದಾರರ ಪರಿಶೀಲನೆ ನಡೆಸುವ ಸ್ವಯಂ ಸೇವಕಿ ಪವಿತ್ರಾ ರೆಡ್ಡಿ ಈ ಮಾಹಿತಿ ನೀಡಿದ್ದಾರೆ. ದೊಡ್ಡ ದೊಡ್ಡ ಆಸ್ಪತ್ರೆಗಳು, ಬ್ಯಾಂಕ್‍ಗಳು ಮತ್ತು ರಿಯಲ್ ಎಸ್ಟೇಟ್ ಕಂಪನಿಗಳ ಜೊತೆ ಸೇರಿ ಆದಾಯ ಸಂಗ್ರಹಿಸಿ, ಹಿರಿಯರ ಕಾಳಜಿ ಬಗ್ಗೆ ಜಾಗೃತಿ ಮೂಡಿಸಲು ಕೂಡ ವ್ಲಾಡಿ ಯೋಜನೆ ಹಾಕಿಕೊಂಡಿದ್ದಾರೆ.

ಅನುಗ್ರಹದ ಬದುಕು...

ತಮ್ಮ ಬದುಕಿನ ಕಥೆ ಹಾಗೂ ಸಾಹಸವನ್ನು ಹಂಚಿಕೊಳ್ಳಲು ಬಯಸುವ ಹಿರಿಯರ ಸಮುದಾಯವನ್ನು ರಚಿಸಲು ವ್ಲಾಡಿಮಿರ್ ಉತ್ಸುಕರಾಗಿದ್ದಾರೆ. ಅಷ್ಟೇ ಅಲ್ಲ ವೃದ್ಧರ ಬಗ್ಗೆ ಕಾಳಜಿ ವಹಿಸಲು ಬಯಸುವವರಿಗೂ ಒಂದು ಅವಕಾಶ ಕಲ್ಪಿಸುವುದು ಅವರ ಉದ್ದೇಶ. ನಮ್ಮ ತಂದೆ ತಾಯಿ ಮತ್ತು ತಾತ, ಅಜ್ಜಿಯರ ಸುಂದರ ಬದುಕಿನ ಕಥೆಯನ್ನು ಹಂಚಿಕೊಳ್ಳಬೇಕು ಎನ್ನುತ್ತಾರೆ ವ್ಲಾಡಿ. ಅಂತಹ ಉತ್ತೇಜನಕಾರಿ ಕಹಾನಿಗಳು `ಬ್ಯೂಟಿಫುಲ್ ಇಯರ್ಸ್'ನ ವೆಬ್‍ಸೈಟ್‍ನಲ್ಲಿವೆ. ಇದಕ್ಕಾಗಿಯೇ `ಬ್ಯೂಟಿಫುಲ್ ಏಜಿಂಗ್' ಎಂಬ ಪ್ರತ್ಯೇಕ ವಿಭಾಗವಿದೆ.

ಕೆಲ ವರ್ಷಗಳ ಹಿಂದೆ ವ್ಲಾಡಿಮಿರ್ ಅವರ ಚಿಕ್ಕಮ್ಮ ಸರ್ವಸ್ವವನ್ನೂ ಕಳೆದುಕೊಂಡಿದ್ರು. ಪತಿ, ಸಹೋದರಿ, ಮಗ, ಅಳಿಯ ಯಾರೂ ಅವರ ಜೊತೆಗಿರಲಿಲ್ಲ. ಆಗ ಆಕೆಗೆ 83 ವರ್ಷ. 83ರ ಹರೆಯದಲ್ಲೂ ಅವರು ಕಂಪ್ಯೂಟರ್ ಕಲಿತ್ರು, ಸುಂದರ ಬದುಕನ್ನು ಸವೆಸಿದವರ ಕಥೆಗಳನ್ನು ಬರೆಯಲು ಆರಂಭಿಸಿದ್ರು. ಬರವಣಿಗೆ ಬಗ್ಗೆ ಅವರಲ್ಲಿ ಅಪಾರ ಆಸಕ್ತಿ ಮೂಡಿತ್ತು. ಅವರು ಜನರ, ಒಂದು ಪೀಳಿಗೆಯ ಧ್ವನಿಯಾಗಿದ್ರು.

ಯುವ ಮನಸ್ಸು...

ಭಾರತೀಯರು ಹಿರಿಯರ ಬಗ್ಗೆ ಅಪಾರ ಗೌರವ ಮತ್ತು ಕಾಳಜಿ ತೋರಿಸುತ್ತಾರೆ ಅನ್ನೋ ಮಾತಿದೆ. ಆದ್ರೆ ಪ್ರತಿನಿತ್ಯ ಹೆತ್ತವರನ್ನೇ ಹೊರದಬ್ಬುವ ಮಕ್ಕಳ ಬಗ್ಗೆ, ಹಿರಿ ಜೀವಗಳನ್ನು ಹತ್ಯೆ ಮಾಡುವ ಕಟುಕರ ಬಗ್ಗೆ ದಿನಪತ್ರಿಕೆಗಳಲ್ಲಿ ಸುದ್ದಿ ಬರುತ್ತಲೇ ಇದೆ. ಈ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರಿನ `ಪೆನ್ಷನರ್ಸ್ ಪ್ಯಾರಡೈಸ್' ಪ್ರಯತ್ನ ಮಾಡ್ತಿದೆ. ಸೂಕ್ತ ವ್ಯವಸ್ಥೆ ಇಲ್ಲದೇ ಇದ್ರೆ ಒಮ್ಮೊಮ್ಮೆ 1000 ಜನರಲ್ಲ, 10 ಮಂದಿಯನ್ನು ನಿಭಾಯಿಸುವುದು ಕೂಡ ಕಷ್ಟ, ಅದೊಂದು ಸವಾಲಾಗಿ ಪರಿಣಮಿಸುತ್ತೆ ಎನ್ನುತ್ತಾರೆ ವ್ಲಾಡಿ. ಆದ್ರೆ ಅವರು ಅದನ್ನು ಪ್ರೀತಿಸ್ತಾರೆ, ತಮ್ಮ ಪೀಳಿಗೆ ಕೂಡ ಅಂದುಕೊಂಡಿದ್ದನ್ನು ಸಾಧಿಸಬಲ್ಲದು ಅನ್ನೋದನ್ನು ಯುವ ಉದ್ಯಮಿಗಳೆದುರು ಅವರು ಸಾಬೀತು ಮಾಡಲು ಬಯಸುತ್ತಾರೆ. ಒಟ್ನಲ್ಲಿ ಬಾಳ ಮುಸ್ಸಂಜೆಯಲ್ಲಿರುವ ಹಿರಿಯರಿಗೆ ಊರುಗೋಲಾಗಿರುವ ವ್ಲಾಡಿಮಿರ್ ಅವರ ಕಳಕಳಿ ಇಡೀ ಸಮಾಜಕ್ಕೆ ಮಾದರಿಯಾಗಿದೆ.

ಲೇಖಕರು : ದೀಪ್ತಿ ನಾಯರ್

ಅನುವಾದಕರು : ಭಾರತಿ ಭಟ್