ಮಾತು ಮಾರಿ ಬದುಕು ಕಟ್ಟಿಕೊಂಡ ಸೋದರರು

ಟೀಮ್​​ ವೈ.ಎಸ್​​. ಕನ್ನಡ

ಮಾತು ಮಾರಿ ಬದುಕು ಕಟ್ಟಿಕೊಂಡ ಸೋದರರು

Friday November 20, 2015,

4 min Read

ಅವರು ಅವರಷ್ಟಕ್ಕೇ ಸೂಪರ್ ಸ್ಟಾರ್ಸ್ ! ಅವರು ಸ್ವಯಂ ಬೆಳೆದವರು. ಅವರ ಜೀವನದಲ್ಲೂ ಏಳು ಬೀಳುಗಳಿದ್ದವು. ಆದರೆ ಅವುಗಳನ್ನು ಅವರು ಎದುರಿಸಿದ ರೀತಿಯೇ ಆ ಇಬ್ಬರನ್ನು ಭಿನ್ನವಾಗಿಸಿದೆ. ಇದು ಇಬ್ಬರು ರಕ್ತಸಂಬಂಧಿಗಳ ಕಥೆ. ಅವರ ಹೆಸರು ಎಂ.ಸಿ. ಕುಬ್ರಾ ಮತ್ತು ಆರ್. ಜೆ. ಧನಿಷ್.

ಧನಿಷ್ ಸೈಟ್ ಅವರು ಪ್ರಖ್ಯಾತ ರೇಡಿಯೋ ಜಾಕಿ, ಪ್ರಾಂಕ್​​ಸ್ಟ ರ್, ಟಿವಿ ನಿರೂಪಕ ಮತ್ತು ಕಲಾವಿದ. ಬೆಂಗಳೂರಿನ ಫೀವರ್ 104 ಎಫ್ಎಂನಲ್ಲಿ ಸುಪಾರಿ ಎನ್ನುವ ಪ್ರಖ್ಯಾತ ಕಾಲೆಳೆಯುವ ಕಾರ್ಯಕ್ರಮ ನಡೆಸಿಕೊಡ್ತಿರೋ ಧನಿಷ್ ಅದರಿಂದಲೇ ಖ್ಯಾತಿ ಸಂಪಾದಿಸಿದ್ದಾರೆ. ಅಷ್ಟೇ ಅಲ್ಲ ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ವಿಶ್ವಕಪ್ ಮತ್ತು ಸ್ಟಾರ್ ಸ್ಪೋರ್ಟ್ಸ್ ಕಬಡ್ಡಿ ಲೀಗ್ ನಿರೂಪಣೆಯನ್ನೂ ಮಾಡಿದ್ದರು.

image


ಧನಿಷ್ ಸೋದರಿ ಕುಬ್ರಾ ಭಾರತದ ಟಾಪ್ ಆ್ಯಂಕರ್​​​ಗಳಲ್ಲಿ ಒಬ್ಬರು. ಜಗತ್ತಿನ ವಿವಿಧ ಸ್ಥಳಗಳಲ್ಲಿ ಹಲವು ಲೈವ್ ಶೋಗಳನ್ನೂ ಅವರು ನಡೆಸಿಕೊಟ್ಟಿದ್ದಾರೆ. ಡಿಸೆಂಬರ್ 2012 ಮತ್ತು 2013ರಲ್ಲಿ ಸತತವಾಗಿ ಈವೆಂಟ್ ಕ್ಷೇತ್ರವು ಇವರನ್ನು ಗೌರವಿಸಿತ್ತು. ದೆಹಲಿಯಲ್ಲಿ ನಡೆದ ಲೈವ್ ಕೋಷೆಂಟ್ ಪ್ರಶಸ್ತಿ ಸಮಾರಂಭದಲ್ಲಿ ಬೆಸ್ಟ್ ಫೀಮೇಲ್ ಎಂಸಿ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದರು. ಡರ್ಬಾನ್​​ನಲ್ಲಿ ನಡೆದ ಮಿಸ್ ಇಂಡಿಯಾ ವರ್ಲ್ಡ್ ವೈಡ್ ಪೆಜೆಂಟ್ ನಲ್ಲಿ ಮಿಸ್ ಪರ್ಸನಾಲಿಟಿ ಪ್ರಶಸ್ತಿ ಗೆದ್ದುಕೊಂಡರು. ರೆಡಿ ಚಿತ್ರದ ಮೂಲಕ ಕುಬ್ರಾ ಬಾಲಿವುಡ್​​ಗೂ ಪದಾರ್ಪಣೆ ಮಾಡಿದರು. ಟಿಎಲ್​ಸಿ ಚಾನೆಲ್​​ನಲ್ಲಿ ಈಗ ಕಾರ್ಯಕ್ರಮ ನಿರೂಪಕಿಯಾಗಿದ್ದಾರೆ. ಧನಿಷ್ ಜೊತೆಗೆ ಸ್ಟಾರ್ ಸ್ಪೋರ್ಟ್ಸ್ ಕಬಡ್ಡಿ ಲೀಗ್​​ನಲ್ಲೂ ವೀಕ್ಷಕ ವಿವರಣೆ ನೀಡುತ್ತಿದ್ದಾರೆ.

ಬೆಳವಣಿಗೆಯ ಹಾದಿ..

ಒಡೆದ ಮನೆಯಲ್ಲಿ ಆದರ್ಶವಾಗಿ ಬೆಳೆಯುವುದು ಕಷ್ಟ ಸಾಧ್ಯವೇ. ಯಾವುದೇ ಅಡ್ಡಿಯನ್ನು ಎದುರಿಸಲು ಎರಡು ರೀತಿಯ ಮಾರ್ಗಗಳಿರುತ್ತವೆ. ಒಂದೋ ಕಷ್ಟಗಳ ಜೊತೆ ಬದುಕಬೇಕು ಇಲ್ಲವೇ ಅವುಗಳನ್ನು ಗಟ್ಟಿ ಮನಸ್ಸಿನಿಂದ ಎದುರಿಸಿ ನಮಗೆ ಬೇಕಾದಂತೆ ಬದುಕಬೇಕು.

ಅವರ ತಾಯಿ ಸೂಪರ್ ಮಾರ್ಕೆಟ್ ನಡೆಸುತ್ತಿದ್ದರು. ಕುಬ್ರಾ ಧನಿಷ್ ಲಾಲನೆ ನೋಡಿಕೊಂಡಿದ್ದರು. “ನಾನು ಅಪ್ಪನಿಲ್ಲದೆ ಬೆಳೆದೆ. ಆದರೆ ಸೋದರಿ ಕುಬ್ರನಲ್ಲಿಯೇ ನಾನು ಪೋಷಕರನ್ನು ಕಂಡೆ. ನಾನು ಆಹಾರ ಸೇವಿಸುವುದನ್ನು ಖಾತರಿ ಪಡಿಸುವುದರಿಂದ ಆರಂಭಿಸಿ, ಹೋಂ ವರ್ಕ್ ಮಾಡುವುದು ಎಲ್ಲವನ್ನೂ ಅಕ್ಕನೇ ನೋಡಿಕೊಳ್ಳುತ್ತಿದ್ದರು. ನಮ್ಮ ನಡುವಿನ ಬಾಂಧವ್ಯವೇ ವಿಶೇಷವಾದದ್ದು. ನನ್ನ ಬೆಳವಣಿಗೆಯ ಎಲ್ಲಾ ಹಂತಗಳಲ್ಲಿ ಆಕೆಯ ಪ್ರಭಾವ ತುಂಬಾ ಇದೆ,” ಎನ್ನುತ್ತಾರೆ ಧನಿಷ್.

image


“ಹೆತ್ತವರ ಸ್ಥಾನದಲ್ಲಿ ನಿಂತು ಅವನ ಲಾಲನೆಯಿಂದ ಆರಂಭಿಸಿ, ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುವವರೆಗೆ ನಮ್ಮ ಸಂಬಂಧವು ಬಹುದೂರ ಬಂದಿದೆ. ನಮ್ಮ ನಡುವೆ ವಯಸ್ಸಿನ ಅಂತರ ಇದೆ ಎನ್ನಿಸುವುದೇ ಇಲ್ಲ.” ಎನ್ನುತ್ತಾರೆ ಕುಬ್ರ.

ನಡೆಯಬೇಕಾದ ಹಾದಿ ದೂರವಿದೆ..

ಧನಿಷ್ ಹೇಳುವ ಹಾಗೆ ಅವರ ಪ್ರಯಾಣವೇನೂ ಸುಖಕರವಾಗಿರಲಿಲ್ಲ. ರೇಡಿಯೋ ಕೆಲಸ ಸಿಕ್ಕಿದ್ದು ಆಕಸ್ಮಾತ್ತಾಗಿ ಅಷ್ಟೇ. ಆ ಅವಕಾಶ ಬಳಸಿಕೊಳ್ಳಲು ಕಸಿನ ನಿಡಾರ ಒತ್ತಡವೇ ಮುಖ್ಯ ಕಾರಣವಂತೆ. “ನಾನು ಬಹರೈನ್​​ನಲ್ಲಿ ವೃತ್ತಿ ಆರಂಭಿಸಿದೆ. ರೇಡಿಯೋ ಜಾಕಿಯಾಗಿ ಏನು ಮಾಡಬೇಕು ಎನ್ನುವುದೇ ನನಗೆ ಗೊತ್ತಿರಲಿಲ್ಲ. ಆರಂಭದಲ್ಲಿ ನಾನು ಪ್ರಯೋಗ ಮಾಡುತ್ತಿದ್ದೆ, ನಗುತ್ತಿದ್ದೆ. ನನ್ನ ಸ್ವಂತ ಶೈಲಿ ರೂಪಿಸಿಕೊಳ್ಳಲು ವರ್ಷಗಳೇ ಬೇಕಾಯಿತು.”ಎನ್ನುತ್ತಾರೆ ಧನಿಷ್. ಸುಪಾರಿ ಎನ್ನುವ ಕಾರ್ಯಕ್ರಮವನ್ನು ಅವರೇ ರೂಪಿಸಿದರು. ಇದು ಅದೆಷ್ಟು ಹಿಟ್ ಆಯಿತೆಂದರೆ, ಹಿಂದೊಮ್ಮೆ ಧನಿಷ್​​ರನ್ನು ದೂರ ಇಟ್ಟವರೂ ಈಗ ಜೊತೆಗೆ ಕಾರ್ಯಕ್ರಮ ಮಾಡಲು ಬೆನ್ನು ಬೀಳುತ್ತಿದ್ದಾರೆ.

“ನಾನು ಒಳ್ಳೆಯ ಪರ್ಫಾಮರ್ ಆಗಬೇಕೆಂದು ಬಯಸಿದ್ದೆ. ನಾನು ಕಾಮಿಡಿಯಿಂದಾಗಿ ಬೆಳೆದಿದ್ದೇನೆಯೋ ? ಅಥವಾ ಈಗ ಏನು ಮಾಡುತ್ತಿದ್ದೇನೆಯೋ ಅದು ನನ್ನನ್ನು ಬೆಳೆಸಿತೋ? ನನಗನ್ನಿಸುತ್ತದೆ, ನಾವು ಎಂದಿಗೂ ಕ್ರೈಂ ಜೊತೆಗೆ ಹೆಚ್ಚು ಗುರುತಿಸಿಕೊಳ್ಳುತ್ತೇವೆ. ಜನರನ್ನು ನಗಿಸುವ ಕೆಲಸದಲ್ಲಿ ತೊಡಗಿಕೊಂಡಿರುವುದಕ್ಕೆ ಈಗ ತುಂಬಾ ಖುಷಿಯಾಗುತ್ತಿದೆ.” ಎನ್ನುತ್ತಾರೆ ಧನಿಷ್. ಈಗ ಅವರು ರೇಡಿಯೋ ಜಾಕಿ, ಟಿವಿ ನಿರೂಪಕ, ಎಂಸಿ, ಕಲಾವಿದ. ಈ ಎಲ್ಲಾ ಕೆಲಸಗಳಲ್ಲಿ ಯಾವುದು ಇಷ್ಟ ಎಂದರೆ ಅವರ ಉತ್ತರವೇ ಬೇರೆ. “ನೀವು ಎಲ್ಲವನ್ನೂ ಇಷ್ಟ ಪಟ್ಟು ಮಾಡುತ್ತಿರುವಾಗ ನಿಮಗೆ ಆಯ್ಕೆ ಎಂದಿಗೂ ಕಷ್ಟವಾಗಿರುತ್ತದೆ. ಇಬ್ಬರು ಮಕ್ಕಳಲ್ಲಿ ಯಾರು ಹೆಚ್ಚು ಎಂದರೆ ನಾನು ಹೇಗೆ ಹೇಳುವುದು.” ಎನ್ನುತ್ತಾರೆ ಧನಿಷ್.

ಕುಬ್ರಾ ಅವರಿಗೂ ಆರಂಭ ಉತ್ತಮವಾಗಿರಲಿಲ್ಲ. ನಾನು ನನ್ನ ಮೊದಲ ಕಾರ್ಯಕ್ರಮ ನಿರೂಪಿಸಿದಾಗ ನನಗೆ 12-13 ವರ್ಷವಾಗಿದ್ದಿರಬೇಕು. ಪದ್ಮಶ್ರೀ ಫಿಸಿಯೋಥೆರಪಿ ಸಂಸ್ಥೆಗೆ ಮೊದಲ ಕಾರ್ಯಕ್ರಮ ನಡೆಸಿಕೊಟ್ಟಿದ್ದೆ. ಅಲ್ಲಿ ರಾಜ್ಯಾದ್ಯಂತ ಸುಮಾರು 7 ವೈದ್ಯರನ್ನು ಸನ್ಮಾನಿಸುತ್ತಿದ್ದರು. ನನಗೆ ಇದು ದೊಡ್ಡ ವಿಷಯವಾಗಿತ್ತು. 5 ಮೀಟರ್ ಉದ್ದದ ಸೀರೆ ಉಟ್ಟುಕೊಂಡು ಹೋಗಿದ್ದ ನನಗೆ ಒಂದು ಬಾಸ್ಕೆಟ್ ಹಣ್ಣು ಮತ್ತು ಹೂ ಹಾಗೂ ಚಾಕೋಲೇಟ್ ನೀಡಿದ್ದರು.” ಎಂದು ನೆನಪಿಸಿಕೊಳ್ಳುತ್ತಾರೆ ಕುಬ್ರಾ. ಹೂ ಮತ್ತು ಹಣ್ಣುಗಳ ಜಾಗದಲ್ಲಿ ಈಗ ಪ್ರಶಸ್ತಿಗಳು ಮತ್ತು ಚೆಕ್​​ಗಳು ಬಂದಿವೆ. ಆದರೂ ಆ ಹುಡುಗಿ ಈಗಲೂ ಹಿಂದಿನಂತೆಯೇ ಚುರುಕಾಗಿ ಕೆಲಸ ಮಾಡುತ್ತಿದ್ದಾಳೆ.

ಬಾಲ್ಯದಲ್ಲಿ ಕುಬ್ರಾ ಅಂತರ್ಮುಖಿಯಾಗಿದ್ದರು. ಸ್ಟೇಜ್ ಹತ್ತುವುದು ಊಹಿಸಿಕೊಳ್ಳುವುದೂ ಸಾಧ್ಯವಿರಲಿಲ್ಲ. ಅವರ ಅಮ್ಮನೇ ಕುಬ್ರನಲ್ಲಿ ಧೈರ್ಯ ತುಂಬುತ್ತಿದ್ದರು. “ನನಗೆ ಜನಪ್ರಿಯತೆ ಅತ್ಯಂತ ಖುಷಿ ಕೊಡುತ್ತಿತ್ತು. ನಾನು ಚಿಕ್ಕ ಕೆಲಸ ಬಿಟ್ಟು ದುಬೈಗೆ ಹೊರಟಾಗ ಖ್ಯಾತಿ ಸಂಪಾದಿಸಬೇಕು ಎಂದು ತೀರ್ಮಾನಿಸಿದ್ದೆ. ಖ್ಯಾತಿ ಜೊತೆಗೆ ಜವಬ್ದಾರಿ ಕೂಡಾ ಬರುತ್ತದೆ. ನಾನು ಎರಡನ್ನೂ ನಿಭಾಯಿಸಲು ಸಿದ್ಧಳಾಗಿದ್ದೆ,” ಎನ್ನುತ್ತಾರೆ ಕುಬ್ರಾ.

image


ಪ್ರೇರಣೆ, ಸ್ಫೂರ್ತಿ ಮತ್ತು ಸವಾಲುಗಳು..

ಧನಿಷ್​ಗೆ ಬೆಂಗಳೂರಿನ ಜನರೇ ಸ್ಫೂರ್ತಿ. ನೀವು ಹೆಚ್ಚು ಕೇಳಿದಷ್ಟು, ಹೆಚ್ಚು ಗಮನಿಸಿದಷ್ಟು, ನೀವು ಹೇಳುವ ವಿಷಯಗಳು ಮತ್ತಷ್ಟು ಆಕರ್ಷಕವಾಗಿರುತ್ತವೆ ಎನ್ನುತ್ತಾರೆ ಧನಿಷ್. ಸೇಥ್ ಮ್ಯಾಕ್​ಫರಲೇನ್ ಅವರ ಅಭಿಮಾನಿಯಾಗಿರುವ ಧನಿಷ್, ಮುಂದೊಂದು ದಿನ ತನ್ನದೇ ಆನಿಮೇಟೆಡ್ ಪಾತ್ರಗಳಿಗೆ ಧ್ವನಿಯಾಗಬೇಕು ಎನ್ನುವ ಕನಸು ಕಾಣುತ್ತಿದ್ದಾರೆ.

ಸವಾಲುಗಳ ಬಗ್ಗೆ ಮಾತನಾಡುವ ಧನಿಷ್, “ನಾನು ಮತ್ತು ನನ್ನ ತಾಳ್ಮೆ ಇಲ್ಲದೆ ಇರುವುದೇ ನನ್ನ ಜೀವನದ ಅತಿದೊಡ್ಡ ಸವಾಲಾಗಿದೆ.” ಎನ್ನುತ್ತಾರೆ.

ಬಾಲ್ಯದಿಂದಲೂ ಧನಿಷ್​​ಗೆ ತಾಳ್ಮೆ ಇರಲಿಲ್ಲ. ರಸ್ತೆಯಲ್ಲಿ ಸಡನ್ ಆಗಿ ತಾಳ್ಮೆ ಕಳೆದುಕೊಂಡಾಗ ನಮಗೆ ಭಯವಾಗುತ್ತಿತ್ತು. ಅವನ ನಡವಳಿಕೆಯಿಂದಾಗಿ ಒಂದಲ್ಲ ಒಂದು ದಿನ ಏನಾದರೂ ಅಪಾಯ ಎಳೆದುಕೊಳ್ಳುತ್ತಾನೆ ಎಂದು ನಾವು ಕಂಗಾಲಾಗುತ್ತಿದ್ದೆವು, ಎನ್ನುತ್ತಾರೆ ಕುಬ್ರ.

ತಾಳ್ಮೆ ರಹಿತನಾಗಿರುವುದರಿಂದ ನಾನು ಜೀವನದಲ್ಲಿ ಬಹಳಷ್ಟನ್ನು ಕಳೆದುಕೊಂಡಿದ್ದೇನೆ. ಕೆಲವೊಮ್ಮೆ ಮನೆಯಲ್ಲಿ ಬೊಬ್ಬೆ ಹಾಕುತ್ತೇನೆ, ಕಿರಿಚಾಡುತ್ತೇನೆ, ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಸಿಟ್ಟಿನಿಂದ ಒಡೆದು ಹಾಕುತ್ತೇನೆ. ಈ ಎಲ್ಲಾ ಸಂದರ್ಭಗಳಲ್ಲಿ ನನ್ನ ಅಮ್ಮ ಮತ್ತು ಅಕ್ಕ ತುಂಬಾ ತಾಳ್ಮೆಯಿಂದಲೇ ಸಹಿಸಿಕೊಂಡರು. ನನ್ನ ಬದುಕಿನ ಭಾಗವಾಗಿರುವುದಕ್ಕೆ ಅವರಿಗೆಲ್ಲಾ ಕೃತಜ್ಱತೆಗಳು ಎನ್ನುತ್ತಾರೆ ಧನಿಷ್.

ಮಹಿಳೆಯಾಗಿ ಮಾಧ್ಯಮದಲ್ಲಿ ಕೆಲಸ ಮಾಡುವುದೇ ಕುಬ್ರಾಗೆ ದೊಡ್ಡ ಸವಾಲು. ಒಮ್ಮೆ ಕಾರ್ಯಕ್ರಮ ವ್ಯವಸ್ಥಾಪಕರೊಬ್ಬರು ಎಲ್ಲಿರಿಗೂ ಇಷ್ಟವಾಗುವಂತೆ ಧಿರಿಸು ಧರಿಸಲು ಹೇಳಿದ್ದರು. ಅಂತಹ ಧಿರಿಸುಗಳನ್ನು ಹೇಗೆ ಧರಿಸುವುದು? ಅದು ನಾನು ಎದುರಿಸಿದ ಅತ್ಯಂತ ಕಠಿಣ ಸವಾಲಾಗಿತ್ತು. ಅಂತರ್ಮುಖಿಯಾಗಿದ್ದ ಹುಡುಗಿಯೊಬ್ಬಳು ಸ್ಟೇಜ್ ಹತ್ತಿ ಎಲ್ಲರನ್ನೂ ಸೂಚಿಗಲ್ಲಿನಂತೆ ಸೆಳೆದು ಮಾತಿನಿಂದಲೇ ಮರಳುಮಾಡುವಂತೆ ಬೆಳೆದದ್ದು ನಿಜಕ್ಕೂ ಅಚ್ಚರಿಯ ವಿಚಾರವೇ. ಇದಕ್ಕೆಲ್ಲಾ ನನ್ನ ತಾಯಿಯೇ ಕಾರಣ, ಆಕೆಯೇ ಅತ್ಯುನ್ನತವಾದ ಸ್ಪೂರ್ತಿ. ಎಲ್ಲಾ ತಲೆಮಾರುಗಳ ಜೊತೆ ಬೆರೆಯುವ ಆಕೆಯ ಶಕ್ತಿಯೇ ದೊಡ್ಡ ಅಚ್ಚರಿ ಎನ್ನುತ್ತಾರೆ ಕುಬ್ರಾ,

ತಮ್ಮ ಕ್ಷೇತ್ರದಲ್ಲಿ ಉದ್ಯಮ ಅರಸುತ್ತಿರುವ ಯುವ ಜನಾಂಗಕ್ಕೆ ಧನಿಷ್ ಕಿವಿಮಾತೊಂದನ್ನು ಹೇಳುತ್ತಾರೆ. ಈ ಕ್ಷೇತ್ರದಲ್ಲಿ ಯಶಸ್ಸು ಪಡೆಯಲು ಯಾವುದೇ ನಿರ್ದಿಷ್ಟ ಮಾರ್ಗಗಳಿಲ್ಲ. ‘ನೀವು ಎಲ್ಲಿದ್ದೀರಿ ಎನ್ನುವುದನ್ನು ಮರೆಯದಿರಿ. ನೀವು ಕಳೆದ ದಿನಗಳಿಂದಾಗಿಯೇ ನೀವು ಇವತ್ತು ಇಲ್ಲಿದ್ದೀರಿ. ಯೋಚನೆ ಮಾಡಿ, ಯೋಚನೆಯ ಕನಸು ಕಾಣಿ, ಯೋಚನೆಯನ್ನು ಅಳವಡಿಸಿರಿ, ನಿಮ್ಮ ಸ್ನೇಹಿತರನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳಿರಿ” ಎನ್ನುತ್ತಾರೆ ಧನಿಷ್.

“ನೀವು ಸಾರ್ವಜನಿಕ ಮಾತುಗಾರರಾಗಬೇಕಾದರೆ ನೀವು ಪ್ರಾಮಾಣಿಕರಾಗಿರಬೇಕು. ಬಹುತೇಕ ಜನರು ಲಿಖಿತ ಸಾಹಿತ್ಯವನ್ನು ಅವಲಂಬಿಸಿದ್ದಾರೆ. ಧನಿಷ್ ಮತ್ತು ನಾನು ಕೆಲವು ನೋಟ್​​ಗಳನ್ನು ಮಾಡಿಕೊಂಡು ಹೋಗುತ್ತಿದ್ದೆವು ಅಷ್ಟೇ. ನಾವು ಸ್ಟೇಜ್​​ನಲ್ಲಿ ಮಾತನಾಡುವುದೆಲ್ಲಾ ನೇರವಾಗಿ ನಮ್ಮ ಹೃದಯದಿಂದ ಬಂದದ್ದು” ಎನ್ನುತ್ತಾರೆ ಕುಬ್ರಾ. ನೀವು ಮಾಡುವುದನ್ನು ಅತ್ಯುತ್ತಮವಾಗಿ ಮಾಡಬೇಕು ಅಷ್ಟೇ. ಹಣಕ್ಕಾಗಿ ಯಾವುದನ್ನೂ ಮಾಡಬೇಡಿ. ಪ್ರೀತಿಯಿಂದ ನಿಮಗೋಸ್ಕರ ಮಾಡಿ ಎನ್ನುತ್ತಾರೆ ಕುಬ್ರಾ.

ಅವರ ನಿಜವಾದ ಸೂಪರ್​​ಸ್ಟಾರ್ ಬಗ್ಗೆ ಹೇಳದೇ ಹೋದರೆ, ಈ ಕಥೆ ಅಪೂರ್ಣ. ಕುಬ್ರಾ ಮತ್ತು ಧನಿಷ್​​ರ ತಾಯಿ, ಮೊಮಗರ್ ಯಾಸ್ಮಿನ್ ಸೇಥ್ ಈ ಇಬ್ಬರನ್ನೂ ನಿಭಾಯಿಸುತ್ತಿದ್ದಾರೆ. ಅವರು ಅತ್ಯುತ್ತಮ ವ್ಯವಸ್ಥಾಪಕಿ. ಒಂದೆಡೆ ವ್ಯವಸ್ಥಾಪಕಿಯಾದರೆ, ಮತ್ತೊಂದೆಡೆ ಮೊಮಗರ್. ಸುತ್ತಲಿನ ಜನರ ಜೊತೆ ಅವರು ಹೊಂದಿಕೊಳ್ಳುವುದು ಮತ್ತು ನಿಭಾಯಿಸುವುದು ನೋಡಿದರೆ ಅಚ್ಚರಿಯಾಗುತ್ತದೆ, ಎನ್ನುತ್ತಾರೆ ಕರುಳಬಳ್ಳಿಗಳು.

ಈ ಇಬ್ಬರು ಸೋದರರು, ಪ್ರತಿದಿನವೂ ಬೆಳೆಯುತ್ತಿದ್ದಾರೆ. ಹೊಸ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಿದ್ದಾರೆ. ಹೊಸ ಹೊಸ ದೇಶಗಳಿಗೆ ಪ್ರಯಾಣಿಸುತ್ತಿದ್ದಾರೆ. ಹೆಚ್ಚು ಹೃದಯಗಳನ್ನು ಗೆಲ್ಲುತ್ತಿದ್ದಾರೆ. “ಧನಿಷ್ ಅವರು ಬೆಂಗಳೂರಿನ ಪೋಸ್ಟರ್ ಬಾಯ್ ಆಗಿರಬಹುದು, ನಾವು ಎಲ್ಲಿಯೇ ಇರಲಿ, ಎಷ್ಟೇ ಜನ ಸುತ್ತ ಇರಲಿ, ಅಕ್ಕ ನಾವು ಹೊರಡೋಣವೇ? ಅಕ್ಕ ನಾವು ಇದನ್ನು ಮಾಡೋಣವೇ ಎಂದಾಗ? ನನ್ನ ಹೃದಯ ಕರಗಿ ಹೋಗುತ್ತದೆ ಎನ್ನುತ್ತಾರೆ ಕುಬ್ರಾ.

ಜಗತ್ತು ಎಷ್ಟೇ ಮುನ್ನಡೆದಿರಬಹುದು. ಆಧುನಿಕವಾಗಿರಬಹುದು. ಸಂಬಂಧಗಳು ಮೌಲ್ಯ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಇಂತಹ ಕಥೆಗಳು, ಪ್ರೀತಿಯ ಶಕ್ತಿ, ಕುಟುಂಬದ ಅಗತ್ಯವನ್ನು ಸಾರಿ ಸಾರಿ ಹೇಳುತ್ತವೆ.

ಲೇಖಕರು: ಪ್ರತೀಕ್ಷಾ ನಾಯಕ್​​

ಅನುವಾದಕರು: ಪ್ರೀತಮ್​​​