ಉದ್ಯಮದಲ್ಲಿ ಯಶಸ್ಸು ಗಳಿಸಬೇಕೆ..?ಉದಯೋನ್ಮುಖ ಉದ್ಯಮಿಗಳಿಗೆ ಶೈಲೇಂದ್ರ ಸಿಂಗ್ ಪಾಠ...

Saturday October 31, 2015,

4 min Read

“ಕ್ಷಮಿಸಿ, ನೀವು ಯಾರಂತ ಮತ್ತೆ ಹೇಳ್ತೀರಾ?’ ಇದು ಅಮೆರಿಕಾದಲ್ಲಿ ನಾನು ನನ್ನ ಕಂಪನಿಯನ್ನು ಸ್ಥಾಪಿಸಿದಾಗ, ಅತಿ ಹೆಚ್ಚು ಬಾರಿ ಕೇಳಿಬಂದ ಪ್ರಮುಖ ಪ್ರಶ್ನೆಗಳಲ್ಲೊಂದು. ಇದೇ ನಾನು ನನ್ನ ಜೀವನದಲ್ಲಿ ಕಲಿತ ಅತ್ಯಂತ ಆಹ್ಲಾದಕರವಾದ ಹಾಗೂ ವಿನೀತನನ್ನಾಗಿಸುವ ಅನುಭವಗಳು.” ಅಂತಾರೆ ಸಿಕೋಯಾ (Sequoiಚಿ) ಕ್ಯಾಪಿಟಲ್ ಶೈಲೇಂದ್ರ ಸಿಂಗ್. ಟೆಕ್‍ಸ್ಪಾಕ್ರ್ಸ್ 2015ನಲ್ಲಿ ಮಾತನಾಡುತ್ತಾ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಒಬ್ಬ ಹೊಸ ಉದ್ಯಮಿಯಾಗಿ ಗುರುತಿಸಿಕೊಳ್ಳುವುದೇ ಇಲ್ಲಿರುವ ಅತಿ ದೊಡ್ಡ ಸವಾಲು. ಹೊಸ ಸ್ಟಾರ್ಟಪ್ ಕಂಪನಿಯ ಸಂಸ್ಥಾಪಕನಾಗಿದ್ದರೂ ನೀವ್ಯಾರು ಅನ್ನೋದು ಪ್ರಪಂಚಕ್ಕೇ ಗೊತ್ತಿರೋದಿಲ್ಲ. ನಿನ್ನನ್ನು ಎಲ್ಲರೂ ಗುರುತಿಸುವಂತೆ ಮಾಡುವ ಜವಾಬ್ದಾರಿ ನಿನ್ನ ಮೇಲೇ ಇರುತ್ತದೆ. ದುರಾದೃಷ್ಟವಶಾತ್, ಹಲವರಿಗೆ ಇದರ ಅರಿವು ಇರುವುದಿಲ್ಲ. ಹೀಗಾಗಿಯೇ ನಿಮ್ಮ ಬಗ್ಗೆ ಎಲ್ಲರಿಗೂ ಗೊತ್ತಾಗಬೇಕು ಅಂದ್ರೆ ಅದಕ್ಕೆ ಸಂಪರ್ಕ ಸಂವಹನ ಉತ್ತಮವಾಗಿರಬೇಕು.

ಹಲವು ಸ್ಥಾಪಕರು ಸಂವಹನ ಮಾಡೋದು ನಮ್ಮ ಕೆಲಸವನ್ನ, ಅದು ಮಾರ್ಕೆಟಿಂಗ್ ವಿಭಾಗದ ಜವಾಬ್ದಾರಿ ಅಂದುಕೊಂಡರೆ, ಕೆಲವರು ನಮಗೆ ಸಂವಹನಿಸುವ ಅವಶ್ಯಕತೆಯಿಲ್ಲ, ನಮ್ಮ ಉತ್ಪನ್ನ ಮುಂದಿನ ವಾಟ್ಸಾಪ್ ಆಗುತ್ತೆ ಅನ್ನೋ ನಂಬಿಕೆಯಲ್ಲಿರ್ತಾರೆ. ‘ಆದ್ರೆ, ಇನ್ನೊಂದು ವಾಟ್ಸಾಪ್ ಅಭಿವೃದ್ಧಿಪಡಿಸೋದು ಕೇವಲ ಒಬ್ಬ ಮನುಷ್ಯನಿಂದ ಸಾಧ್ಯವಿಲ್ಲ. ಹೇಗೇ ಇರಲಿ, ಅಂತಹ ಕೆಲಸಕ್ಕೆ ಕೈ ಹಾಕುವವರಿಗೆ ಒಳ್ಳೆಯದಾಗಲಿ, ಗುಡ್ ಲಕ್’ ಅಂತಾರೆ ಶೈಲೇಂದ್ರ ಸಿಂಗ್. ಜೊತೆಗೆ ಕಂಪನಿಯೊಂದರ ಸ್ಥಾಪಕರು, ಅದರ ಸಂವಹನ ವಿಭಾಗದ ಬಗ್ಗೆ ಗಮನ ಹರಿಸಿದರೆ, ಅವರಿಗೆ ದೀರ್ಘಾವಧಿಯಲ್ಲಿ ಸಹಕಾರಿಯಾಗುತ್ತೆ ಅನ್ನೋದು ಶೈಲೇಂದ್ರ ಅಭಿಮತ.

ಕೋರ್ ಮೆಸೇಜಿಂಗ್

ಕೋರ್ ಮೆಸೇಜಿಂಗ್ ಸರಳವಾಗಿದ್ದರೂ, ಬಹುತೇಕ ಸ್ಥಾಪಕರು ಈ ಕೆಳಗಿನ ನಾಲ್ಕು ಅಂಶಗಳಿಗೆ ಸಮಯ ಹಾಗೂ ಒತ್ತು ನೀಡೋದಿಲ್ಲ ಅಂತಾರೆ ಶೈಲೇಂದ್ರ ಸಿಂಗ್.

1. ದೂರದೃಷ್ಟಿ ಮತ್ತು ಧ್ಯೇಯಗಳ ಪ್ರಕಟ: ಒಂದು ಉದ್ಯಮ ಸ್ಥಾಪಿಸಲು ಈ ಎರಡೂ ಅಂಶಗಳೂ ತುಂಬಾ ಅನಿವಾರ್ಯ. ‘ಏನಾದರೂ ಅನುಮಾನಗಳಿದ್ದರೆ, ಇವುಗಳನ್ನು ಸೂಚಿಸಬಹುದಾದ ಕಾರಣ ಇದು ತುಂಬಾ ಪ್ರಮುಖವಾದುದು’ ಅಂತಾರೆ ಶೈಲೇಂದ್ರ. ಹಾಗೇ ಇವು ಮಾರ್ಗದರ್ಶೀ ತತ್ವಗಳಾಗಿಯೂ ಕೆಲಸ ಮಾಡುತ್ತಿವೆ.

2. ಈ-ಮೇಲ್ ಕಳಿಸುವಾಗ ಸ್ಪಷ್ಟತೆಯಿರಲಿ: ಶೈಲೇಂದ್ರ ಅವರು ಹೇಳೋ ಹಾಗೆ, ಅವರು ಕೆಲಸ ಮಾಡುವಾಗ, ಅವರ ಕಂಪನಿ ಮಾಲೀಕರು ಒಂದೇ ಕೆಲಸದ ಬಗ್ಗೆ ನಾಲ್ಕೈದು ಬಾರಿ ಬೇರೆ ಬೇರೆ ರೀತಿಯ ವಿವರಣೆಗಳೊಂದಿಗೆ ಈ-ಮೇಲ್ ಕಳುಹಿಸುತ್ತಿದ್ದರಂತೆ. ‘ಒಂದು ಕಂಪನಿಯ ಮಾಲೀಕನಾಗಿ ಸಂವಹಿಸುವಾಗ ನೀವು ಸ್ಥಿರವಾಗಿರದಿದ್ದರೆ, ನಿಮ್ಮ ತಂಡದ ಸದಸ್ಯರೂ ಹಾಗೂ ನಿಮ್ಮ ಉದ್ಯೋಗಿಗಳೂ ಸ್ಥಿರವಾಗಿರೋದಿಲ್ಲ; ಹೀಗಾಗಿ ಈ-ಮೇಲ್ ಕಳುಹಿಸುವಾಗ ಸ್ಪಷ್ಟತೆಯಿರಲಿ.

3. ಮಾರಾಟವೇ ಗುರಿ: ಉದಯೋನ್ಮುಖ ಉದ್ಯಮಿ ತನ್ನನ್ನು ತಾನು ಒಂದು ಕ್ಷೇತ್ರದಲ್ಲಿ ಗುರುತಿಸುವಂತೆ ಮಾಡಬೇಕು ಅಂದ್ರೆ ಆತ ಯಾವಾಗಲೂ ಮಾರಲು ಸಿದ್ಧನಿರಬೇಕು. ನೀವು ನಿಮ್ಮ ಆಲೋಚನೆಗಳನ್ನು ಬಂಡವಾಳ ಹೂಡುವ ಹೂಡಿಕೆದಾರರಿಗೆ ಮಾರಬೇಕು, ನಿಮ್ಮ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರುವಂತೆ ಮಾಡಲು ಉದ್ಯೋಗಿಗಳಿಗೆ ಮಾರಬೇಕು, ನಿಮ್ಮೊಂದಿಗೆ ವ್ಯಾಪಾರ ಮಾಡಲು ಗ್ರಾಹಕರಿಗೆ ಮಾರಬೇಕು. ಪ್ರತಿ ಸಮಯವೂ ನೀವು ಮಾರಾಟ ಮಾಡುತ್ತಿರುತ್ತೀರಿ. ನಿಮಗದು ಇಷ್ಟವಿಲ್ಲ ಅಂದ್ರೆ, ಈ ವಿಭಾಗವನ್ನು ನೋಡಿಕೊಳ್ಳಲು ಮತ್ತೊಬ್ಬ ಸಹ-ಸಂಸ್ಥಾಪಕನನ್ನು ಹುಡುಕಿಕೊಳ್ಳಿ’ ಅಂತ ಹೇಳ್ತಾರೆ ಶೈಲೇಂದ್ರ.

4. ಪವರ್‍ಪಾಯಿಂಟ್ ಪ್ರಸ್ತುತಿಯ ರಚನೆ: ಬಹುತೇಕ ಕಂಪನಿ ಮಾಲೀಕರು, ಇದರಿಂದ ಸಮಯ ಹಾಳಾಗುತ್ತೆ ಅಂದುಕೊಳ್ಳುತ್ತಾರೆ. ಆದ್ರೆ ಪವರ್‍ಪಾಯಿಂಟ್ ಪ್ರೆಸೆಂಟೇಷನ್ ಸಿದ್ದಪಡಿಸಿಕೊಳ್ಳುವುದು ಕಂಪನಿಯೊಂದರ ಮೂಲ ನೈರ್ಮಲ್ಯಕ್ಕೆ ಒಳ್ಳೆಯದು ಅನ್ನೋದು ಶೈಲೇಂದ್ರರ ನಂಬಿಕೆ. ಪವರ್‍ಪಾಯಿಂಟ್‍ಗಾಗಿ ಸ್ವಲ್ಪ ಸಮಯ ಕೊಟ್ಟು, ಶ್ರಮವಹಿಸಿದರೆ ನಿಮ್ಮ ಆಲೋಚನೆಗಳನ್ನು ವ್ಯವಸ್ಥಿತವಾಗಿ ರಚಿಸಲು ಹಾಗೂ ಕಂಪನಿ ಮತ್ತು ಗುರಿಗಳ ಕುರಿತು ಸ್ಪಷ್ಟತೆ ಹೊಂದಲು ಸಹಕರಿಸುತ್ತದೆ.

5. ಸ್ಪರ್ಧಿಗಳ ಕುರಿತು ಅರಿವು: ‘ನಿಮ್ಮ ಉದ್ಯಮದ ಕ್ಷೇತ್ರದಲ್ಲಿ, ನೀವು ಎಲ್ಲಿ ನಿಂತಿದ್ದೀರಿ ಅನ್ನೋದರ ಬಗ್ಗೆ ನಿಮಗೆ ಅರಿವಿದ್ದರೆ ಒಳ್ಳೆಯದು’ ಅಂತಾರೆ ಶೈಲೇಂದ್ರ. ಆಯಾ ವಲಯಗಳಲ್ಲಿನ ಕಂಪನಿಗಳ ಕುರಿತ ಒಂದು ಸ್ಪರ್ಧಾತ್ಮಕ ನಕ್ಷೆಯನ್ನು ರಚಿಸಿಟ್ಟುಕೊಂಡರೆ, ನಾವು ನಮ್ಮ ಕಂಪನಿಯಲ್ಲಿ ಯಾವ ವಿಭಾಗದ ಮೇಲೆ ಹೆಚ್ಚು ಗಮನ ಹರಿಸಬೇಕು, ಎಲ್ಲಿ ಹೆಚ್ಚು ಒತ್ತು ನೀಡಬೇಕು ಅನ್ನೋದರ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯುತ್ತದೆ. ಆಗ ಸಾಮಾನ್ಯವಾಗಿ ಆ ಕ್ಷೇತ್ರದ ಮೌಲ್ಯ ಸರಪಳಿ ಕುರಿತು ಸ್ಪಷ್ಟತೆ ದೊರೆತರೆ, ನಮಗೆ ನಮ್ಮ ಪ್ರತಿಸ್ಪರ್ಧಿಗಳು ಯಾರು ಅನ್ನೋದರ ಕುರಿತು ತಿಳಿಯುತ್ತದೆ ಅನ್ನೋದು ಅವರ ಅಭಿಮತ.

ಕೋರ್ ಮೆಸೇಜಿಂಗ್‍ನ ಕೆಲಸಗಳೇನು?

ಶೈಲೇಂದ್ರ ಸಿಂಗ್ ಪ್ರಕಾರ:

1. ಟ್ರೆಂಡ್ ಒಂದನ್ನು ಅನುಸರಿಸುವುದು: ಹೈಪರ್‍ಲೋಕಲ್ ಮತ್ತು ಕ್ಲೌಡ್ ಎರಡೂ ಕೂಡ ಇತ್ತೀಚೆಗೆ ಹೆಚ್ಚು ಪ್ರಸ್ತುತಿಯಲ್ಲಿರುವ ವಿಷಯಗಳು. ಹೀಗಾಗಿಯೇ ಈ ವಲಯಗಳಲ್ಲಿ ಏನನ್ನಾದರೂ ಮಾಡಲು ಪ್ರಾರಂಭಿಸಿದರೆ, ಇದು ನಿಮ್ಮ ಹಾಗೂ ಕಂಪನಿಯ ಬೆಳವಣಿಗೆಗೆ ಸಹಕಾರಿಯಾಗುತ್ತೆ. ಈ ಮೂಲಕ ಉದ್ಯಮಶೀಲ ಸನ್ನಿವೇಶವನ್ನು ಸೃಷ್ಟಿಸಲು ಹಾಗೂ ಉತ್ಪನ್ನವನ್ನು ಅರ್ಥ ಮಾಡಿಕೊಳ್ಳಲು ಉಪಯೋಗವಾಗುತ್ತೆ. ಹೀಗಾಗಿಯೇ ಬೇರೆ ಕಂಪನಿಗಳನ್ನು ಹಿಂಬಾಲಿಸದೇ, ಪ್ರಮುಖ ಟ್ರೆಂಡ್‍ಗಳನ್ನು ಅನುಸರಿಸಲು ಸೂಚಿಸುತ್ತಾರೆ ಶೈಲೇಂದ್ರ.

2. ಸರಳವಾಗಿರಿ ಹಾಗೂ ಅಭಿವ್ಯಕ್ತಗೊಳಿಸಿ: ಇದಕ್ಕೆ ಅತ್ಯುತ್ತಮ ಉದಾಹರಣೆ ಅಂದ್ರೆ ಡ್ರಾಪ್‍ಬಾಕ್ಸ್ ಅಂತಾರೆ ಶೈಲೇಂದ್ರ. ಇಲ್ಲಿ ಪರಿಭಾಷೆಗಳಿರುವುದಿಲ್ಲ. ಬೇರೆ ಅಪ್ಲಿಕೇಶನ್‍ಗಳ ಸಹಯೋಗದೊಂದಿಗೆ ಕೆಲಸ ಮಾಡುವ ಅವಶ್ಯಕತೆಯೂ ಇಲ್ಲ.

3. ದ್ವಂದ್ವಾರ್ಥ ಬೇಡ: ಬಹುತೇಕ ಸಮಯಗಳಲ್ಲಿ ಹಿಂದೆ- ಮುಂದೆ ನೋಡದೇ, ಪರಿಣಾಮದ ಅರಿವಿಲ್ಲದೇ ಜನ ನೇರವಾಗಿ ಮಾತನಾಡ್ತಾರೆ. ಇದು ಕೆಲವೊಮ್ಮೆ ತಪ್ಪು ತಿಳುವಳಿಕೆಗೆ ಕಾರಣವಾಗೋದುಂಟು. ಹೀಗಾಗಿಯೇ ದ್ವಂದ್ವಾರ್ಥ ಬೇಡ ಅಂತಾರೆ ಶೈಲೇಂದ್ರ.

ಗ್ರಾಹಕ-ಕೇಂದ್ರಿತ ಸಂದೇಶ ರವಾನೆ

1. ಸ್ಮರಣೀಯವನ್ನಾಗಿಸಿ

2. ಹತ್ತು ಬಾರಿ ಪುನರುಚ್ಛರಿಸಿ

3. ಭಿನ್ನತೆ: ‘ನೀವು ಕಂಡುಹಿಡಿದ ಅಥವಾ ನಿಮಗೆ ತಿಳಿದ ಒಂದು ಭಿನ್ನತೆ, ಅತಿ ದೊಡ್ಡ ಬದಲಾವಣೆಗೆ ಕಾರಣವಾಗಬಹುದು. ಹೀಗಾಗಿಯೇ ಏನಾದರೂ ನಕಾರಾತ್ಮಕ ಬದಲಾವಣೆ ಕಂಡುಬಂದಲ್ಲಿ, ಅದರ ಬಗ್ಗೆ ಗಮನಹರಿಸಿ’ ಅಂತಾರೆ ಶೈಲೇಂದ್ರ.

4. ಸ್ಪಷ್ಟತೆ: ಸಂವಹನದಲ್ಲಿ ಸ್ಪಷ್ಟತೆ ಇರಬೇಕಾದದ್ದು ಅತ್ಯಂತ ಪ್ರಮುಖವಾದುದು.

5. ಸ್ವಂತ ಪರಿಭಾಷೆಯಿರಲಿ: ನೀವು ನಿಮ್ಮ ಆಲೋಚನೆಗಳನ್ನು ನಿಮ್ಮ ಪರಿಭಾಷೆಯಲ್ಲಿ ಸರಿಯಾಗಿ ಎಲ್ಲರಿಗೂ ಅರ್ಥವಾಗುವಂತೆ ಅಭಿವ್ಯಕ್ತಿಗೊಳಿಸಿದರೆ, ಅದು ಅತ್ಯಂತ ಪರಿಣಾಮಕಾರಿಯಾಗಿರುತ್ತೆ ಅಂತಾರೆ ಶೈಲೇಂದ್ರ.

ಕಂಪನಿಯೊಂದರ ಸ್ಥಾಪಕ ಆಗೊಮ್ಮೆ ಈಗೊಮ್ಮೆ ಕಂಪನಿಯ ಆಗು-ಹೋಗುಗಳ ಬಗ್ಗೆ ಪಾಲುದಾರರಿಗೆ ಸಂದೇಶಗಳನ್ನು ಕಳುಹಿಸುವುದು ತುಂಬಾ ಮುಖ್ಯ. ಕಂಪನಿಯ ಸಂಸ್ಥಾಪಕರು ಕೇಂದ್ರಬಿಂದುವಾಗಿದ್ದರೆ, ಮಂಡಳಿ ಸದಸ್ಯರು, ಸಲಹಗಾರರು, ನೌಕರರು, ಗ್ರಾಹಕರು, ಮಾಧ್ಯಮ, ಹೂಡಿಕೆದಾರರು ಮತ್ತು ಇಡೀ ಪ್ರಪಂಚವೇ ಅವರ ಸುತ್ತ ನಿಂತಿರುತ್ತದೆ. ‘ಕೆಲವೊಮ್ಮೆ ಒಂದೇ ಕಂಪನಿಯ ಪಾಲುದಾರರ ನಡುವೆ ಜಟಾಪಟಿ ನಡೆಯೋದುಂಟು. ಹೀಗಾಗಿಯೇ ಇಂತಹ ಗೊಂದಲಗಳನ್ನು ತಪ್ಪಿಸಬೇಕು ಅಂದ್ರೆ ಕಂಪನಿ ಮಾಲೀಕರು ಬೇರೆ ಬೇರೆ ಪಾಲುದಾರರೊಂದಿಗೆ ಬೇರೆ ಬೇರೆ ರೀತಿ ಚರ್ಚಿಸಬೇಕು. ಆದ್ರೆ ಎಲ್ಲರೊಂದಿಗೂ ಅವರು ಸಂಪರ್ಕದಲ್ಲಿರಬೇಕು. ಈ ಮೂಲಕ ಗೊಂದಲಗಳನ್ನು ತಡೆಗಟ್ಟಬಹುದು ಅಥವಾ ಬಗೆಹರಿಸಬಹುದು’ ಅಂತಾರೆ ಶೈಲೇಂದ್ರ.

ಉದ್ಯಮಿಗಳು ತಮ್ಮ ಕಛೇರಿಯ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು. ಹಾಗೇ ತಮ್ಮ ಟೇಬಲ್‍ಅನ್ನೂ ಸ್ವಚ್ಛವಾಗಿಡಬೇಕು. ಯಾಕಂದ್ರೆ ಸ್ವಚ್ಛ ಪ್ರಸ್ತುತಿಯೂ ಅವರ ಕಂಪನಿ ಮತ್ತು ಅವರನ್ನು ಪ್ರತಿಬಿಂಬಿಸುತ್ತದೆ.

ಸ್ಪಷ್ಟತೆ ಮತ್ತು ದೃಢೀಕರಣ

ಒಬ್ಬ ಉದ್ಯಮಿಗೆ ಆತನ ಕಂಪನಿಯ ಕುರಿತ ಸ್ಪಷ್ಟತೆ ಇದ್ದರೆ, ಅದರ ಗುರಿಯ ಕುರಿತು ಎಲ್ಲರಿಗೂ ನಂಬಿಕೆ ಹುಟ್ಟುತ್ತದೆ. ನೀವು ನಿಮ್ಮ ಧ್ಯೇಯೋದ್ದೇಶಗಳನ್ನು ಸರಿಯಾಗಿ ತಿಳಿಸದಿದ್ದರೆ, ನಿಮ್ಮ ಹೂಡಕೆದಾರರು ಅದರ ಬಗ್ಗೆ ಗಮನ ಹರಿಸೋದಿಲ್ಲ, ಪ್ರಾಮುಖ್ಯತೆಯನ್ನೂ ನೀಡೋದಿಲ್ಲ. ಇದು ಮತ್ತೆ ಕಂಪನಿ ಮಾಲೀಕರಿಗೇ ಹೊರೆಯಾಗುತ್ತಿದೆ. ನಿಖರತೆಯೂ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ. ಉತ್ಪ್ರೇಕ್ಷೆಯ ಹಾಗೂ ನಿಜವಲ್ಲದ ವಿಷಯಗಳನ್ನು ಹೇಳಿದ್ರೆ, ಇದು ಕಂಪನಿ ಸ್ಥಾಪಕರು ಮತ್ತು ಉದ್ಯೋಗಿಗಳು ಹಾಗೂ ಸಂಸ್ಥೆಯ ನಂಬಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ನಾವು ದೊಡ್ಡವರು, ನಮ್ಮ ಸಂಸ್ಥೆ ದೊಡ್ಡದು ಅಂತ ತೋರಿಸಿಕೊಳ್ಳಲು ಸುಳ್ಳುಗಳ ಕಟ್ಟು ಕಥೆ ಕಟ್ಟುವುದು ಒಳ್ಳೆಯದಲ್ಲ ಅಂತಾರೆ ಶೈಲೇಂದ್ರ.

ಸಾಂದರ್ಭಿಕ ಮಾಧ್ಯಮಗೋಷ್ಠಿ

ಬಹುತೇಕ ಕಂಪನಿಗಳು ದೊಡ್ಡ ಘೋಷಣೆಗಳನ್ನು ಮಾಡಲು ಅಥವಾ ತುಂಬಾ ಅಪರೂಪಕ್ಕೆ ಒಮ್ಮೆ ಮಾಧ್ಯಮಗೋಷ್ಠಿ ಆಯೋಜಿಸುತ್ತವೆ. ಆದ್ರೆ ನೀವು ನಿಮ್ಮ ಕಂಪನಿಯ ಕುರಿತು ಮಾಹಿತಿ ನೀಡಲು ಆಗೊಮ್ಮೆ ಈಗೊಮ್ಮೆ ಪತ್ರಕರ್ತರನ್ನು ಭೇಟಿಯಾಗುತ್ತಿದ್ದರೆ ಒಳ್ಳೆಯದು.

ಸಾಮಾಜಿಕ ಅಂತರ್ಜಾಲ ತಾಣ

ಪತ್ರಿಕೆಗಳ ಮೂಲಕ ನೀವು ನಿಮ್ಮ ಬಗ್ಗೆ, ನಿಮ್ಮ ಸಂಸ್ಥೆಯ ಬಗ್ಗೆ ತಿಳಿಸುವುದರ ಜೊತೆಗೆ ನೀವೂ ಕೂಡ ಸಾಮಾಜಿಕ ಅಂತರ್ಜಾಲ ತಾಣಗಳ ಮೂಲಕ ನೇರವಾಗಿ ಜನರೊಂದಿಗೆ ಬೆರೆಯಬಹುದು. ಬ್ಲಾಗ್‍ಗಳಲ್ಲಿ, ಟ್ವಿಟರ್, ಫೇಸ್‍ಬುಕ್‍ಗಳ ಮೂಲಕ ನಿಮ್ಮ ಕಂಪನಿ ಕುರಿತ ಮಾಹಿತಿ ಹಂಚಬಹುದು.

ಗ್ರಾಹಕರ ಇಷ್ಟ-ಕಷ್ಟಗಳ ಬಗ್ಗೆ ಗಮನವಿರಲಿ. ಅವರು ನಿರೀಕ್ಷಿಸುವ, ಅವರಿಗೆ ಬೇಕಿರುವ ಅಂಶಗಳನ್ನು, ವಿಷಯಗಳನ್ನು ಅವರಿಗೆ ಕೊಡಿ. ಅದು ಬಿಟ್ಟು ನಿಮಗಿಷ್ಟವಾದ ವಿಷಯಗಳನ್ನು ತಿಳಿಸಲು ಹೋದರೆ, ಅವರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ ಅಂತಾರೆ ಶೈಲೇಂದ್ರ ಸಿಂಗ್. ಹಾಗೇ ನಿಮ್ಮ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಹಾಗೂ ನೌಕರರಿಗೆ ಆಗಾಗ ಸ್ಫೂರ್ತಿ ತುಂಬುತ್ತಿರಬೇಕು. ಕಂಪನಿಯೊಂದಿಗೆ ಅವರೂ ಬೆಳೆಯುತ್ತಿದ್ದಾರೆ ಎಂಬ ಮನೋಭಾವ ಅವರಲ್ಲಿ ಮೂಡಿಸಬೇಕು. ನಿಮ್ಮ ಧೇಯ ಹಾಗೂ ಗುರಿಗಳ ಬಗ್ಗೆ ಅವರಿಗೂ ತಿಳಿಸಬೇಕು. ಆ ಮೂಲಕ ಅವರಲ್ಲಿ ನಿಮ್ಮ ಮೇಲೆ ಹಾಗೂ ಕಂಪನಿ ಮೇಲೆ ನಂಬಿಕೆ ಬರುತ್ತದೆ. ಆದ್ರೆ ಇದೆಲ್ಲವೂ ಸ್ಪಷ್ಟ, ನೈಜ ಹಾಗೂ ಸ್ಥಿರ ಸಂವಹನದಿಂದ ಮಾತ್ರ ಸಾಧ್ಯ.