ಶುದ್ಧ ನೀರು ನೀಡುವ `ಅಮೃತ್' ಎಂಬ ಸಂಜೀವಿನಿ
ಅಗಸ್ತ್ಯ
Monday April 11, 2016,
2 min Read
ನಾಗರೀಕತೆ ಮತ್ತು ನಗರೀಕರಣ ಬೆಳೆಯುತ್ತಿದ್ದಂತೆ ಪರಿಸರ ಕೂಡ ಹಾಳಾಗುತ್ತಿದೆ. ಗಾಳಿ, ನೀರು ಎಲ್ಲವೂ ಕಲುಷಿತಗೊಂಡಿವೆ. ಅದರಲ್ಲೂ ನೀರನ್ನು ಶುದ್ಧೀಕರಿಸದೆ ಕುಡಿಯದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆ ಪರಿಹಾರ ಎನ್ನುವಂತೆ ಐಐಟಿ ಮದ್ರಾಸ್ನ ಫ್ರೊಫೆಸರ್ ಮತ್ತು ವಿದ್ಯಾರ್ಥಿಗಳು `ಅಮೃತ್' ಹೆಸರಿನ ನ್ಯಾನೋ ತಂತ್ರಜ್ಞಾನವಿರುವ ವಾಟರ್ ಫಿಲ್ಟರ್ ಅಭಿವೃದ್ಧಿಪಡಿಸಿದ್ದಾರೆ. ಆ ಮೂಲಕ ದೇಶದ ಕೊಟಿಗಟ್ಟಲೆ ಜನಕ್ಕೆ ವರದಾನ ಎನಿಸಿದೆ.
ಕ್ಲೋರಿನ್, ಆರ್ಸೆನಿಕ್ ಮತ್ತು ಕಬ್ಬಿಣ ಅಂಶದಿಂದ ಕೂಡಿದ ಅಪಾಯಕಾರಿ ನೀರನ್ನು ಸಂಪೂರ್ಣ ಶುದ್ಧೀಕರಿಸಿ, ಕುಡಿಯಲು ಯೋಗ್ಯಗೊಳಿಸುವ ನ್ಯಾನೊ ತಂತ್ರಜ್ಞಾನ ಇದಾಗಿದೆ. ಐಐಟಿ ಮದ್ರಾಸ್ನ ರಸಾಯನಶಾಸ್ತ್ರ ವಿಭಾಗದ ಫ್ರೊ.ಟಿ ಪ್ರದೀಪ್ ಇದರ ಸೃಷ್ಟಿಕರ್ತ. ಈ ತಂತ್ರಜ್ಞಾನವನ್ನು ಆರ್ಸೆನಿಕ್ಯುಕ್ತ ನೀರು ಇರುವ ಪ್ರದೇಶಗಳಲ್ಲಿ ಬಳಕೆ ಮಾಡಿದರೆ ನೀರು ಕುಡಿಯಲು ಯೋಗ್ಯವಾಗುವಷ್ಟು ಶುದ್ಧವಾಗಲಿದೆ. ಈಗಾಗಲೇ ಹಲವು ರಾಜ್ಯಗಳ ಗ್ರಾಮಾಂತರ ಭಾಗದಲ್ಲಿ ಅದರ ಬಳಕೆ ಆರಂಭಗೊಂಡಿದೆ. ಇದನ್ನು ಇನ್ನಷ್ಟು ವಿಸ್ತರಿಸಲು ನಿರ್ಧರಿಸಿರುವ ಭಾರತ ಸರ್ಕಾರ, ಎಲ್ಲಾ ರಾಜ್ಯಗಳಲ್ಲೂ ಅದನ್ನು ಅಳವಡಿಕೆಗೆ ಸೂಚಿಸುವ ಚಿಂತನೆ ನಡೆಸಿದೆ.
ಇದನ್ನು ಓದಿ: ವೈದ್ಯರ ಮಾಹಿತಿಗಾಗಿ ಇದೆ ಪ್ರಾಕ್ಟೋ ಆ್ಯಪ್
ಅಮೂಲ್ಯ ಫಿಲ್ಟರ್
ನೀರಿನಲ್ಲಿ ಆರ್ಸೆನಿಕ್ ಮತ್ತು ಕಬ್ಬಿಣದ ಅಂಶ ಇದ್ದರೆ, ನೀರಿನ ಗುಣಮಟ್ಟ ಹಾಳಾಗುತ್ತದೆ. ಅಲ್ಲದೆ ಅಂತಹ ನೀರನ್ನು ಕುಡಿದರೆ ಆರೋಗ್ಯದ ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತದೆ. ಅದರಲ್ಲೂ ಚರ್ಮ ರೋಗ, ಕ್ಯಾನ್ಸರ್, ಲಿವರ್ಗೆ ಸಂಬಂಧಿಸಿದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಅಂತಹ ಅಪಾಯಕಾರಿ ಅಂಶಗಳನ್ನು ಹೊರಹಾಕಿ ನೀರನ್ನು ಶುದ್ಧಿಕರಿಸುವ ಸಾಮಥ್ರ್ಯ ಅಮೃತ್ಗಿದೆ. ಈ ನ್ಯಾನೊ ಫಿಲ್ಟರ್ಗೆ 5 ಪಾರ್ಟ್ಸ್ ಪರ್ಮಿಲಿಯನ್ ಆರ್ಸೆನಿಕ್ಯುಕ್ತ ನೀರು ತುಂಬಿದರೆ, ಅದು ಶುದ್ಧ ನೀರನ್ನು ನೀಡುತ್ತದೆ. ಈ ಫಿಲ್ಟರ್ ನೀರಿನಲ್ಲಿ ಇರುವ ಎಲ್ಲ ಬಗೆಯ ಸೂಕ್ಷ್ಮಜೀವಿಗಳು, ಭಾರದ ಲೋಹಗಳು, ಕೀಟನಾಶಕಗಳು, ಫಾರ್ಮಾಸ್ಯುಟಿಕಲ್ಸ್, ರೇಡಿಯೋ ನ್ಯೂಕ್ಲಿಯೆಡ್ಗಳನ್ನು ಮುಕ್ತಗೊಳಿಸಿ, ಕುಡಿಯಲು ಸುರಕ್ಷಿತಗೊಳಿಸುತ್ತದೆ ಈ ತಂತ್ರಜ್ಞಾನ. ಅಮೃತ್ ಫಿಲ್ಟರ್ ಘಟಕಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಆರ್ಸೆನಿಕ್ಮುಕ್ತಗೊಳಿಸುವ ಫಿಲ್ಟರ್ಗಳಿಗಿಂತಲೂ 5 ರಿಂದ 6 ಪಟ್ಟು ಅಧಿಕ ಕ್ಷಮತೆ ಹೊಂದಿದೆ.
ಈಗಾಗಲೆ ಪ್ರಯೋಗ ಯಶಸ್ವಿ
ಅಮೃತ್ ಫಿಲ್ಟರನ್ನು ಈಗಾಗಲೆ ದೇಶದ ವಿವಿಧ ಕಡೆಗಳಲ್ಲಿ ನೀಡಿ ಅಮೃತ್ ಯಶಕಂಡಿದೆ. ಅದರಲ್ಲೂ ಪಶ್ಚಿಮ ಬಂಗಾಳದ ವಿವಿಧ ಕಡೆಗಳಲ್ಲಿ ಈ ಫಿಲ್ಟರ್ ಅಳವಡಿಸಿ ಒಂದು ಲೀಟರ್ ನೀರನ್ನು 5 ಪೈಸೆಗೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಇನ್ನು ದೇಶದ ವಿವಿಧ ಭಾಗಗಳಲ್ಲಿ ನೀರಿನಲ್ಲಿರುವ ಕೀಟನಾಶಕಗಳ ಅಂಶಗಳನ್ನು ಶುದ್ಧೀಕರಿಸುವ 1.5 ದಶಲಕ್ಷ ಫಿಲ್ಟರ್ಗಳನ್ನು ಅಳವಡಿಸಿದ್ದು, ಇದರಿಂದ 7.5 ದಶಲಕ್ಷ ಜನರಿಗೆ ಪ್ರಯೋಜನ ಸಿಗುತ್ತಿದೆ. ಆರ್ಸೆನಿಕ್ ಅಂಶವನ್ನು ಶುದ್ಧೀಕರಿಸುವ ತಂತ್ರಜ್ಞಾನದ ಪ್ರಯೋಜನ ಈಗಾಗಲೇ 4 ಲಕ್ಷ ಜನರಿಗೆ ತಲುಪಿದೆ. ಅತಿ ಶೀಘ್ರವೇ 10 ಲಕ್ಷ ಜನರಿಗೆ ಇದರ ಪ್ರಯೋಜನ ಸಿಗುವಂತೆ ಮಾಡುವ ಗುರಿ ಪ್ರದೀಪ್ ಅವರದು. ಇದಕ್ಕಾಗಿ ಎರಡು ಉತ್ಪಾದನಾ ಕಂಪನಿಗಳನ್ನು ಆರಂಭಿಸಿದ್ದಾರೆ.
ಜನ ಸಮುದಾಯಕ್ಕೆ ಅನುಕೂಲವಾಗುವ ರೀತಿ ಎರಡು ಬಗೆಯ ಅಮೃತ ಶುದ್ಧೀಕರಣ ಘಟಕಗಳಿವೆ. ಒಂದನ್ನು ನೇರವಾಗಿ ಬೋರ್ವೆಲ್ ಕೈಪಂಪಿಗೆ ಅಳವಡಿಸಬಹುದು. ಇದನ್ನು ಹ್ಯಾಂಡ್ಪಂಪ್ ಮಾದರಿ. ಎರಡನೆಯದು ಟ್ಯಾಂಕ್ ಮಾದರಿ ಎನ್ನುತ್ತಾರೆ. ಇವೆರಡೂ ಆಕರ್ಷಕವಾದುದು. ಇವುಗಳಲ್ಲಿ ಬರುವ ದೊಡ್ಡ ಫಿಲ್ಟರ್ 18 ಲೀಟರ್ ನೀರನ್ನು ಒಮ್ಮೆಲೇ ಶುದ್ಧಿಕರಿಸುವ ಸಾಮರ್ಥ್ಯ ಹೊಂದಿದೆ.
1. ಜಾನಪದದ ಉಳಿವಿಗಾಗಿ ಸ್ಥಾಪನೆಗೊಂಡಿದೆ ಕನ್ನಡ ಜಾನಪದ ಪರಿಷತ್
2. ಮಹಿಳೆಯರ ಸ್ವಯಂ ಅನುಭೂತಿಯ ಪರಿಕಲ್ಪನೆ : ಇದು ಬ್ಯುಸಿನೆಸ್ನಲ್ಲೂ ಅಡಕವಾದ ಚಿಂತನೆ