ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿರುವ ಅಪ್ಪಟ ಕನ್ನಡ ರಂಗಭೂಮಿ ಪ್ರತಿಭೆ

ಟೀಮ್​ ವೈ.ಎಸ್​. ಕನ್ನಡ

ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿರುವ ಅಪ್ಪಟ ಕನ್ನಡ ರಂಗಭೂಮಿ ಪ್ರತಿಭೆ

Saturday August 06, 2016,

3 min Read

ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದು ದೊಡ್ಡ ಸಂಬಳದಲ್ಲಿ ಕೆಲಸ ಮಾಡಬೇಕಾದವರೊಬ್ಬರು ಬಣ್ಣದ ಗೀಳು ಅಂಟಿಸಿಕೊಂಡು ರಂಗಭೂಮಿಯೆಡಿಗೆ ಬಂದು ಅಲ್ಲಿ ನೆಲೆ ಕಂಡುಕೊಂಡು ತಮ್ಮ ಅಗಾಧ ಪ್ರತಿಭೆಯಿಂದ ಬಾಲಿವುಡ್​ನಲ್ಲಿ ಅವಕಾಶ ಗಿಟ್ಟಿಸಿಕೊಂಡ ಯಶಸ್ವಿ ಕಲಾವಿದನೊಬ್ಬನ ಕಥೆ ಇದು. 

image


ಕನ್ನಡ ರಂಗಭೂಮಿಯಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ಅವರೆಲ್ಲ ಕನ್ನಡ ಸಿನಿಮಾ ರಂಗ ಮಾತ್ರವಲ್ಲದೆ ಇನ್ನಿತರೆ ಚಿತ್ರರಂಗದಲ್ಲೂ ನಟಿಸಿ ಹೆಸರು ಗಳಿಸುತ್ತಿದ್ದಾರೆ. ಅದರಲ್ಲಿ ಪ್ರಕಾಶ್ ರೈ, ಅರ್ಜುನ್ ಸರ್ಜಾ ಮತ್ತಿತರರು. ಆದರೆ ಇತ್ತೀಚೆಗೆ ಹಿಂದಿ ಚಿತ್ರರಂಗದಲ್ಲಿ ಹೆಸರು ಮಾಡುತ್ತಿರುವುದು ಕನ್ನಡ ರಂಗಭೂಮಿಯ ತಜ್ಞ ಪ್ರಕಾಶ್ ಬೆಳವಾಡಿ.

ಇದನ್ನು ಓದಿ: ನಿಮ್ಮೊಳಗಿನ ಉದ್ಯಮಿಯನ್ನು ಬಡಿದೆಬ್ಬಿಸುವ 5 ಟಿವಿ ಕಾರ್ಯಕ್ರಮಗಳು..!

ಹೌದು, ಪ್ರಕಾಶ್ ಬೆಳವಾಡಿ ಕನ್ನಡ ರಂಗಭೂಮಿಯಲ್ಲಿ ಬಹಳ ದೊಡ್ಡ ಹೆಸರು. ರಂಗಭೂಮಿ ಕಲಾವಿದೆ ಭಾರ್ಗವಿ ನಾರಾಯಣ್ ಮತ್ತು ಹಿರಿಯ ಮೇಕಪ್ ಕಲಾವಿದ ನಾಣಿ ಅವರ ಪುತ್ರರಾದ ಇವರು ಚಿಕ್ಕಿಂದಿನಿಂದಲೆ ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಟಿಕೆಟ್ ನೀಡುವ ಕೆಲಸ

ನಟ, ನಿರ್ದೇಶಕನಾಗುವುದಕ್ಕಿಂತ ಮೊದಲು ಬೆಂಗಳೂರು ಲಿಟ್ಲ್ ಥಿಯೆಟರ್​ನ ಒಂದು ನಾಟಕಕ್ಕೆ ಟಿಕೆಟ್ ಹರಿದು ನಂತರ ಬ್ಯಾಟರಿ ಹಿಡಿದು ಪ್ರೇಕ್ಷಕರಿಗೆ ಸೀಟು ತೋರಿಸುತ್ತಾ ರಂಗಭೂಮಿಗೆ ಅಧಿಕೃತವಾಗಿ ಎಂಟ್ರಿಕೊಟ್ಟವರು. ಅಲ್ಲಿಂದ ಇಲ್ಲಿಗೆ ರಂಗಭೂಮಿಯಲ್ಲಿ ತಿರುಗಿ ನೋಡೇ ಇಲ್ಲ. 1978ರಲ್ಲಿ ಮಾಲಿನಿ ಮತ್ತು ಎಡ್ವರ್ಡ್ ವೈಟ್ ಅವರ ನಿರ್ದೇಶನದ ಒಂದು ನಾಟಕ ಅನ್​ಗ್ರೇಟ್​ಫುಲ್​ ಮ್ಯಾನ್ ಎಂಬ ನಾಟಕದಲ್ಲಿ ಚಿಕ್ಕ ಪಾತ್ರ ಮಾಡಿದ್ದರು. ಅದಾದ ಮೇಲೆ ಕನ್ನಡದ ಯಶಸ್ವಿ ರಂಗಪ್ರಯೋಗ ಮುಖ್ಯ ಮಂತ್ರಿ ನಾಟಕದಲ್ಲಿ ಒಂದು ಪಾತ್ರ . ಅಲ್ಲಿಂದ ಇಲ್ಲಿಯವರೆಗೂ ಸಾಕಷ್ಟು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ವರ್ಷಕ್ಕೆ ಹತ್ತು ನಾಟಕಗಳಿಗೆ ಕೆಲಸ ಮಾಡುತ್ತಾರೆ. ನಾನು ಬೇಸಿಕಲಿ ನಾನು ನಟನಲ್ಲ, ನೇಪಥ್ಯದ ವ್ಯಕ್ತಿ ಎನ್ನು ಪ್ರಕಾಶ್ ಅವರು ಆರಂಭದಲ್ಲಿ ಸಾಕಷ್ಟು ನಾಟಕಗಳಿಗೆ ಮೇಕಪ್, ಲೈಟಿಂಗ್ ಮಾಡಿದ್ದಾರೆ. 1985ರಲ್ಲಿ ಬಿಎಲ್​ಟಿಗಾಗಿಯೇ "ಸೀಸ್​ ಫ್ರಂ ಸೊ​ ವಿಟೊ" ಎಂಬ ಇಂಗ್ಲೀಷ್ ನಾಟಕವನ್ನು ನಿರ್ದೇಶಿಸಿದ್ದಾರೆ. ಈ ನಾಟಕದ ಮೂಲಕ ಇಂಗ್ಲೀಷ್ ರಂಗಭೂಮಿಗೆ ಕಾಲಿಟ್ಟ ಇವರು ಇದುವರೆಗೂ 30ಕ್ಕೂ ಹೆಚ್ಚು ಇಂಗ್ಲೀಷ್ ನಾಟಕಗಳನ್ನು ನಿರ್ದೇಶಿಸಿದ್ದಾರೆ.

image


ಪತ್ರಕರ್ತರಾಗಿಯೂ ಸೇವೆ

ಬೆಂಗಳೂರಿನಲ್ಲಿ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಮುಗಿಸಿದ ಪ್ರಕಾಶ್ ಬೆಳವಾಡಿ ಯಾವುದಾದರೂ ಖಾಸಗಿ ಸಂಸ್ಥೆಗೆ ಹೋಗಿದ್ದರೆ ಇಷ್ಟು ಹೊತ್ತಿಗೆ ಲಕ್ಷಾಂತರ ರೂಪಾಯಿ ಸಂಬಳ ಪಡೆಯುತ್ತಿದ್ದರು. ಆದರೆ ಅದನ್ನು ಬಿಟ್ಟು ಲಂಕೇಶ್ ಪತ್ರಿಕೆಗೆ ಕೆಲಸಕ್ಕಾಗಿ ಅರ್ಜಿ ಹಾಕುತ್ತಾರೆ. ಆದರೆ ಮೇಷ್ಟ್ರು ಅವರಿಗೆ ಕೆಲಸ ಕೊಡಲಿಲ್ಲ. ಆ ನಂತರ ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಯಲ್ಲಿ ಇಂಟರ್ನಿ ಪತ್ರಕರ್ತನಾಗಿ ಕೆಲಸಕ್ಕೆ ಸೇರಿದ ಅವರು ತಿಂಗಳಿಗೆ 630 ರೂಪಾಯಿ ಸಂಬಳ ಪಡೆಯುತ್ತಿದ್ದರು. ಹಿರಿಯ ಪತ್ರಕರ್ತ ಅರುಣ್ ಶೌರಿಯವರು 80ರ ದಶಕದಲ್ಲಿ ಬರೆದ ಸಾಕಷ್ಟು ಲೇಖನಗಳಿಂದ ಪ್ರಭಾವಿತರಾಗಿ ಪತ್ರಿಕೋದ್ಯಮಕ್ಕೆ ಕಾಲಿಟ್ಟು ಕೆಲ ವರ್ಷಗಳ ಕಾಲ ಕೆಲಸ ಮಾಡಿದರು.

ಸಿನಿಮಾ ಪ್ರಯಾಣ ಆರಂಭ

ಗಿರೀಶ್ ಕಾರ್ನಡ್ ಅವರ "ಅಗ್ನಿ ಮತ್ತು ಮಳೆ" ನಾಟಕದ ಇಂಗ್ಲೀಷ್ ಅನುವಾದಿತ "ದಿ ರೈನ್ ಆ್ಯಂಡ್ ಫೈರ್" ಎಂಬ ನಾಟಕದಲ್ಲಿ ರೇಬಾನಿ ಅನ್ನೋ ಪಾತ್ರ ಮಾಡಿದ್ದರು. ಅದನ್ನು ನೋಡಿದ ಗಿರೀಶ್ ಅವರು ಕಾನೂರು ಸುಬ್ಬಮ್ಮ ಹೆಗ್ಗಡತಿ ಸಿನಿಮಾದಲ್ಲಿ ಓಬಯ್ಯನ ಪಾತ್ರ ಮಾಡಲು ಅವಕಾಶ ನೀಡಿದರು. ಅಲ್ಲಿಂದ ಅವರ ನಟನಾ ವೃತ್ತಿ ಆರಂಭವಾಯಿತು. ಅದಾದ ಮೇಲೆ ಅನ್​ಸ್ಟಂಬಲ್ ಎಂಬ ಇಂಗ್ಲೀಷ್ ಸಿನಿಮಾ ನಿರ್ದೇಶನ ಮಾಡಿ ಅದಕ್ಕೆ ರಾಷ್ಟ್ರೀಯ ಪುರಸ್ಕಾರ ಪಡೆದರು.

image


ಅನ್ ಸ್ಟಂಬಲ್ ನಂತರ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಪ್ರಕಾಶ್ ಬೆಳವಾಡಿ ಅವರಿಗೆ ಬಾಂಬೆಯಿಂದ ಮದ್ರಾಸ್ ಕೆಫೆ ಚಿತ್ರದ ಸಹನಿರ್ದೇಶಕನೊಬ್ಬ ಕರೆ ಮಾಡಿ ಬರುವಂತೆ ಹೇಳುತ್ತಾರೆ. ಆ ನಂತರ ಮದ್ರಾಸ್ ಕೆಫೆಯ ಬಾಲಾ ಪಾತ್ರಕ್ಕೆ ಆಯ್ಕೆಯಾಗಿ ಬಾಲಿವುಡ್​ನಲ್ಲಿ ಹೆಸರು ಮಾಡಿದರು. ಇದೆಲ್ಲವೂ ಇತಿಹಾಸ. ಆದರೆ ಇಂದಿಗೂ ಅವರು ಹಿಂದಿ ಚಿತ್ರರಂಗದಲ್ಲಿ ಬೇಡಿಕಯಲ್ಲಿರುವ ನಟ. ಹಿಂದಿ ಚಿತ್ರರಂಗದಲ್ಲಿ ಬೆಳವಾಡಿ ಅವರನ್ನು ಕರೆಯುತ್ತಾರೆ ಎಂದರೆ ಅದೊಂದು ಒಳ್ಳೆಯ ಪಾತ್ರವೇ ಆಗಿರುತ್ತದೆ. ಅಷ್ಟರ ಮಟ್ಟಿಗೆ ಬೆಳವಾಡಿ ಬಾಲಿವುಡ್ ಮಂದಿಯನ್ನು ತಮ್ಮ ಅಭಿನಯದಿಂದ ಆವರಿಸಿದ್ದಾರೆ. ಮದ್ರಾಸ್ ಕೆಫೆಯ ನಂತರ ತಲ್ವಾರ್, ಏರ್​ಲಿಫ್ಟ್, ವಜೀರ್, ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹಿಂದಿ ಚಿತ್ರಂಗದ ಆಫರ್​ಗಳು ಹೆಚ್ಚಾದಂತೆ ಕನ್ನಡ ಚಿತ್ರರಂಗದಲ್ಲೂ ಅವರಿಗೆ ಬೇಡಿಕೆ ಸಾಕಷ್ಟು ಹೆಚ್ಚಾಗಿದೆ. ಈಗ ಬೆಳವಾಡಿಯವರಿಗೆ ಆಫರ್​ಗಳು ಎಷ್ಟರ ಮಟ್ಟಿಗೆ ಇವೆ ಎಂದರೆ ಅವರಿಗೆ ಸರಿಯಾಗಿ ನಿದ್ದೆ ಮಾಡಲು ಆಗದಷ್ಟು ಬ್ಯುಸಿ ಆಗಿದ್ದಾರೆ. ಕನ್ನಡದಲ್ಲಿ ಕೆಂಡ ಸಂಪಿಗೆ, ಇಷ್ಟಕಾಮ್ಯ, ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅವರೆಂದಿಗೂ ಯಶಸ್ಸನ್ನು ತಲೆಗೇರಿಸಿಕೊಂಡಿಲ್ಲ ನಾನೇಂದಿಗೂ ಸಿನಿಮಾ ನಟ ಎಂದು ಹೇಳಿಕೊಳ್ಳುವುದಿಲ್ಲ. ನಾನು ರಂಗಭೂಮಿಯವನೇ ಎಂದು ಹೇಳಿಕೊಳ್ಳಲು ಇಷ್ಟ ಪಡುತ್ತೇನೆ. ಅದರಲ್ಲೂ ನಾನೊಬ್ಬ ನಿರ್ದೇಶಕ ಮಾತ್ರ ನಟನಲ್ಲ ಎಂದೇ ಹೇಳುತ್ತಾರೆ.

ತಮ್ಮ ಯಶಸ್ಸಿನ ಅಷ್ಟೂ ಕ್ರೆಡಿಟ್ಟನ್ನು ಹೆಂಡತಿ ಮತ್ತು ಮಕ್ಕಳಿಗೆ ನೀಡುವ ಅವರ ಸದ್ಯದ ಕನಸು ಸುಚಿತ್ರಾ ಆವರಣದಲ್ಲಿ ಒಂದೊಳ್ಳೆ ಸಿನಿಮಾ ನಿರ್ದೇಶನದ ಶಾಲೆ ಆರಂಭಿಸಬೇಕು ಎಂಬುದು. ಪ್ರಕಾಶ್ ಬೆಳವಾಡಿಯವರ ಕನಸು ನನಸಾಗಲಿ, ಅವರು ಇನ್ನಷ್ಟು ಒಳ್ಳೆ ಪಾತ್ರಗಳಲ್ಲಿ ಮಿಂಚಲಿ ಮತ್ತಷ್ಟು ಪ್ರಕಾಶ ಮಾನವಾಗಿ ಎಲ್ಲ ಚಿತ್ರರಂಗದಲ್ಲೂ ತೊಡಗಿಸಿಕೊಳ್ಳಲಿ ಅನ್ನೋದೇ ಎಲ್ಲರ ಹಾರೈಕೆ.

ಇದನ್ನು ಓದಿ:

1. 15 ಲಕ್ಷದ ನೌಕರಿ ತೊರೆದು ಹಳೆ ಸೆಲೂನ್ ಗೆ ಹೊಸ ಟಚ್ ನೀಡಿದ ಸ್ನೇಹಿತರು

2. ಸಿನಿಮಾ ತಾರೆಯರಿಗೆಲ್ಲ ಮಾದರಿ ಎವೆಲಿನ್ ಶರ್ಮಾರ ಸಮಾಜ ಸೇವೆ..!

3. ಟೊಮ್ಯಾಟೋ ಬೆಳೆಯಲ್ಲಿ ಹೊಸ ಮ್ಯಾಜಿಕ್​- ಜಪಾನ್​ ತಳಿಯಿಂದ ಲಾಭದ ಕಿಕ್​