ಹುಣಸೆ ಹಣ್ಣು ಕೀಳಲು ಹೆದರುತ್ತಿದ್ದ ಬಾಲೆ ಗ್ರಾಮೀಣ ಪದವೀಧರರಿಗೆ ಗುರುವಾದ್ರು..!

ಟೀಮ್​​ ವೈ.ಎಸ್​​​​

ಹುಣಸೆ ಹಣ್ಣು ಕೀಳಲು ಹೆದರುತ್ತಿದ್ದ ಬಾಲೆ ಗ್ರಾಮೀಣ ಪದವೀಧರರಿಗೆ ಗುರುವಾದ್ರು..!

Friday October 09, 2015,

5 min Read

ತಮಿಳುನಾಡಿನ ಚಿಕ್ಕ ಹಳ್ಳಿ ತಿರುನೆಲ್ವೆಲಿ. ಅಲ್ಲಿ ಹುಟ್ಟಿದ ಬಾಲೆಯೊಬ್ಬಳು ವಿಶ್ವವೇ ಮಾತನಾಡುವಷ್ಟು ಪ್ರಸಿದ್ಧಿ ಪಡೆಯುತ್ತಾರೆಂದು ಯಾರೂ ನಿರೀಕ್ಷಿಸಿರಲಿಲ್ಲ. ಮಣ್ಣಿನಲ್ಲಿ ಆಟವಾಡುತ್ತ, ಸೀಬೆ ಮರಕ್ಕೆ ಕಲ್ಲು ಹೊಡೆಯುತ್ತ, ಹುಣಸೆ ಕಾಯಿ ಕೀಳುತ್ತ, ಮೀನು ಹಿಡಿಯುತ್ತ ಬೆಳೆದವರು ಅಶ್ವಿತಾ ಶೆಟ್ಟಿ.

ಅಶ್ವಿತಾ ಶೆಟ್ಟಿ ತಂದೆ ತಾಯಿ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದವರು. ಅವರದ್ದು ಪುರುಷ ಪ್ರಧಾನ ಕುಟುಂಬ. ಪುರುಷ ಪ್ರಧಾನ ಸಮಾಜ ಕೂಡ ಹೌದು. ಆಟ-ಪಾಠದಲ್ಲಿ ಬಾಲ್ಯ ಕಳೆಯಿತು. ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ಅನೇಕ ಸವಾಲುಗಳು ಎದುರಾದವು. ಅಪರೂಪಕ್ಕೆ ಪುರುಷರ ಜೊತೆ ಮಾತನಾಡುತ್ತಿದ್ದ ಅಶ್ವಿತಾ, ಹಿರಿಯರ ಮುಂದೆ ತಲೆ ಎತ್ತಿ ಮಾತನಾಡುತ್ತಿರಲಿಲ್ಲ.

ಗ್ರಾಮೀಣ ಮಕ್ಕಳ ಜೊತೆ ಅಶ್ವಿತಾ ಶೆಟ್ಟಿ

ಗ್ರಾಮೀಣ ಮಕ್ಕಳ ಜೊತೆ ಅಶ್ವಿತಾ ಶೆಟ್ಟಿ


ಅವರ 13 ನೇ ವಯಸ್ಸು, ಅಶ್ವಿತಾ ಜೀವನದ ದಿಕ್ಕನ್ನೇ ಬದಲಾಯಿಸಿತು. ಬದುಕಿಗೆ ಹೊಸ ರೂಪ ನೀಡಲು, ಕನಸನ್ನು ಹುಟ್ಟಿ ಹಾಕಲು ನಾಂದಿ ಹಾಡಿದ್ದು ಹೆಲ್ಲನ್ ಕೆಲ್ಲರ್ ಆತ್ಮಚರಿತ್ರೆ. ಅದು ಅವರ ಬಾಳಲ್ಲಿ ಅರುಣೋದಯವಾಗಲು ಕಾರಣವಾಯ್ತು. ವಿದ್ಯಾಭ್ಯಾಸದಲ್ಲಿ ಮುಂದಿದ್ದ ಅಶ್ವಿತಾ ಶೆಟ್ಟಿಯಗೆ, ಬೋಧನೆ ಬಗ್ಗೆ ಹೆಚ್ಚಿನ ಒಲವಿತ್ತು. ಹೆಲ್ಲರ್ ಕೆಲ್ಲರ್ ಆತ್ಮಚರಿತ್ರೆಯಿಂದ ಸ್ಫೂರ್ತಿಗೊಂಡಿದ್ದ ಅಶ್ವಿತಾ, ಮೊದಲು ಸ್ನೇಹಿತರು ಹಾಗೂ ನೆರೆಯ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ನೆರವಾದರು. ನಂತರ ಮನೆ ಪಾಠ ಶುರುಮಾಡಿದರು. 15 ರಿಂದ 20 ಮಕ್ಕಳ ಗುಂಪು ಮಾಡಿ ಪ್ರಮುಖ ವಿಷಯಗಳನ್ನು ಕಲಿಸಲು ಆರಂಭಿಸಿದರು. ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಅವರ ಆತ್ಮವಿಶ್ವಾಸ ಹೆಚ್ಚಾಯಿತು.

ಅಶ್ವಿತಾ ಪಾಲಕರು ಅನಕ್ಷರಸ್ತರು. ಶಿಕ್ಷಣದ ಅರಿವಿಲ್ಲದವರು. ಹಾಗಾಗಿ ಹೆಚ್ಚಿನ ಶಿಕ್ಷಣ ಪಡೆಯುವ ವಿಚಾರದಲ್ಲಿ ಹೋರಾಟ ಅನಿವಾರ್ಯವಾಗಿತ್ತು. ಹೆತ್ತವರ ಮನವೊಲಿಕೆ ಕಾರ್ಯ ನಿರಂತರವಾಗಿ ನಡೆಯುತ್ತಲೇ ಇರುತ್ತಿತ್ತು. ಪ್ರತಿಕೂಲ ಸಂದರ್ಭಗಳು ಎದುರಾಗುತ್ತಿದ್ದರೂ ಸಹ ಅವರ ಆಯ್ಕೆಗಳನ್ನು ಪಾಲಕರು ಅರ್ಥಮಾಡಿಕೊಳ್ಳುತ್ತಿದ್ದರಿಂದ ಅವರ ಹಾದಿ ಮತ್ತಷ್ಟು ಸುಗಮವಾಯಿತು.

ಕಾಲೇಜು ಮತ್ತು ಕನಸು

ಕನಸಿನ ಕುದುರೆಯೇರಿ ಹೊರಟ ಅಶ್ವಿತಾರ ದಾರಿ ಕಲ್ಲು-ಮುಳ್ಳುಗಳಿಂದ ಕೂಡಿತ್ತು. ಹಳ್ಳಿಯಲ್ಲಿ ಶಿಕ್ಷಣ ಪಡೆಯುತ್ತಿದ್ದ ಅವರು, ಅತ್ಯುನ್ನತ ಶಿಕ್ಷಣ ಸಂಸ್ಥೆ, ಉತ್ತಮ ಉಪನ್ಯಾಸಕರೊಂದಿಗೆ ಪಾಠ ಕಲಿಯುವ ವಿಶ್ವಾಸ ಹೊಂದಿದ್ದರು. `ಒಂದು ದಿನ ತಾವು ಕಾಲೇಜಿನ ಮೆಟ್ಟಿಲೇರುವುದಾಗಿ 'ತಮ್ಮ ಆಸೆಗಳನ್ನು ತಾಯಿಯ ಮುಂದಿಡುತ್ತಿದ್ದರು ಅಶ್ವಿತಾ. `ಮೊದಲು ಹೈಸ್ಕೂಲ್ ಮುಗಿಸು 'ಎಂಬುದು ಅಶ್ವಿತಾ ತಾಯಿಯ ಪ್ರತಿಕ್ರಿಯೆಯಾಗಿರುತ್ತಿತ್ತಂತೆ. ಮಗಳನ್ನು ನಿರುತ್ಸಾಹಗೊಳಿಸುವ ಉದ್ದೇಶ ಅವರದ್ದಾಗಿರಲಿಲ್ಲ. ಮಹಿಳೆಯರಿಗೆ ಶಿಕ್ಷಣ ಎಷ್ಟು ದೊಡ್ಡ ಕನಸು ಎಂಬುದನ್ನು ಅರ್ಥ ಮಾಡಿಸಲು ಅವರು ಪ್ರಯತ್ನ ಪಡುತ್ತಿದ್ದರಂತೆ.

ಮನೆ ಪಾಠಗಳನ್ನು ಹೇಳುತ್ತಿದ್ದ ಅಶ್ವಿತಾಗೆ ಇಂಗ್ಲೀಷ್ ಕಬ್ಬಿಣದ ಕಡಲೆಯಾಗದಿದ್ದರೂ, ಎಲ್ಲವೂ ಅರ್ಥವಾಗುತ್ತಿರಲಿಲ್ಲ. ತಿರುನೆಲ್ವೆಲಿಯಲ್ಲಿ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪದವಿಯಲ್ಲಿ ಚಿನ್ನದ ಪದಕ ಪಡೆದಿರುವ ಅವರಿಗೆ ವಿಷಯದ ಬಗ್ಗೆ ಆಳವಾದ ತಿಳುವಳಿಕೆ ಇರಲಿಲ್ಲವಂತೆ. ಎಲ್ಲ ವಿಷಯ ಇಂಗ್ಲೀಷ್ ನಲ್ಲಿ ಇದ್ದ ಕಾರಣ, ನೆನಪಿನಲ್ಲಿಟ್ಟುಕೊಂಡು ಬರೆಯುತ್ತಿದ್ದರಂತೆ. ಅಕ್ಷರ ದುಂಡಗಿದ್ದ ಕಾರಣ ಹೆಚ್ಚಿನ ಅಂಕ ಬೀಳುತ್ತಿತ್ತು ಎಂದು ಯಾವುದೇ ಹಿಂಜರಿಕೆ ಇಲ್ಲದೇ ಹೇಳಿಕೊಳ್ಳುತ್ತಾರೆ ಅಶ್ವಿತಾ.

ಅಶ್ವಿತಾ ಶೆಟ್ಟಿ

ಅಶ್ವಿತಾ ಶೆಟ್ಟಿ


ಹೊರಗಿನ ಪ್ರಪಂಚದ ಬಗ್ಗೆ ಆಕರ್ಷಿತರಾಗಿದ್ದ ಅವರಿಗೆ ಪದವಿಯ ಕೊನೆ ವರ್ಷ ಅದೃಷ್ಟ ಒಲಿದು ಬಂತು. ಕನಸನ್ನು ಸಾಕಾರಗೊಳಿಸುವ ದಾರಿ ತೆರೆಯಿತು. ತಮಿಳು ಪತ್ರಿಕೆಯೊಂದು ಪ್ರಕಟಿಸಿದ ಯಂಗ್ ಇಂಡಿಯಾ ಫಾಲೋಶಿಪ್ ಬಗ್ಗೆ ಅವರು ಓದಿದರು. ಫಾಲೋಶಿಪ್ ಬಗ್ಗೆ ಆಸಕ್ತಿ ತೋರಿದ ಅವರಿಗೆ ಇ-ಮೇಲ್ ಐಡಿ ಸೃಷ್ಟಿಸಲು ಲೈಬ್ರರಿಯನ್ ಸಹಾಯ ಮಾಡಿದರು. ಅಪ್ಲಿಕೇಷನ್ ತುಂಬಲು ಹಾಗೂ ದೂರವಾಣಿ ಸಂದರ್ಶನ ನೀಡಲು ಅವರ ಸ್ನೇಹಿತರೊಬ್ಬರು ಫೋನ್ ನೀಡಿದ್ದರು. ಕೊನೆಯ ಸುತ್ತಿನ ಸಂದರ್ಶನಕ್ಕೆ ದೆಹಲಿಗೆ ಪ್ರಯಾಣ ಬೆಳೆಸಲು ಅವರ ಬಳಿ ಹಣ ಇರಲಿಲ್ಲ. ಹಾಗಾಗಿ ಸಂದರ್ಶಕರು ಹತ್ತಿರದ ಪಟ್ಟಣದಲ್ಲಿ ಸ್ಕೈಪ್ ಮೂಲಕ ಸಂದರ್ಶನ ನಡೆಸಿದರು.

ಒಂದು ತಲ್ಲಣ

ಅದು ಅಶ್ವಿತಾ ಶೆಟ್ಟಿ ನಿರೀಕ್ಷಿಸದ ಕ್ಷಣ. ಫಾಲೋಶಿಪ್ ಸಂದರ್ಶನದ ವೇಳೆ ತಮ್ಮ ಜೀವನದಲ್ಲಿ ಮೊದಲ ಬಾರಿ ಇಂಗ್ಲೀಷ್ ನಲ್ಲಿ ಮಾತನಾಡಿದರು ಅಶ್ವಿತಾ. ಸಂದರ್ಶನದಲ್ಲಿ ಆಯ್ಕೆಯಾದ ಅವರು ಮಹಾನಗರಿ ದೆಹಲಿಯತ್ತ ಪ್ರಯಾಣ ಬೆಳೆಸಬೇಕಾಯಿತು. ತಮ್ಮ ಜೀವನದಲ್ಲಿ ದಿಢೀರನೆ ಆದ ಬೆಳವಣಿಗೆಗೆ ಅವರು ಮಾನಸಿಕವಾಗಿ ಸಿದ್ಧರಾಗಿರಲಿಲ್ಲ.ಒಂದು ಹಳ್ಳಿಯಿಂದ ದೇಶದ ರಾಜಧಾನಿಗೆ ಹೋಗಿ ಜೀವನ ಸಾಗಿಸುವುದು ಅಷ್ಟು ಸರಳವಾಗಿರಲಿಲ್ಲ. ಆರಂಭದಲ್ಲಿ ಕೀಳರಿಮೆ ಅವರನ್ನು ಕಾಡಿತ್ತಂತೆ. ಮಹಾನಗರದ ಜೀವನ ಆಘಾತವನ್ನುಂಟು ಮಾಡಿತ್ತಂತೆ. ಅಮೆರಿಕನ್ ಉಚ್ಛಾರಣೆಯಲ್ಲಿ ಕೆಲವು ಉಪನ್ಯಾಸಕರು ಪಾಠ ಹೇಳುತ್ತಿದ್ದರು. ಅದನ್ನು ಅರ್ಥ ಮಾಡಿಕೊಳ್ಳಲು ಅಶ್ವಿತಾ ಪರದಾಡಿದ್ದರು. ಅವರ ಆಲೋಚನೆಗಳನ್ನು ಇಂಗ್ಲೀಷ್ ನಲ್ಲಿ ಅಭಿವ್ಯಕ್ತಿಗೊಳಿಸುವುದು ಕಷ್ಟವಾಗಿತ್ತು. ಅದೇನೇ ಸಮಸ್ಯೆ ಬಂದರೂ ಇಟ್ಟ ಹೆಜ್ಜೆಯನ್ನು ಹಿಂದಿಡಲಿಲ್ಲ ಅಶ್ವಿತಾ. ಉಪನ್ಯಾಸಕರೊಂದಿಗೆ ಹೆಚ್ಚಿನ ಸಮಯ ಕಳೆದು, ಇಂಗ್ಲೀಷ್ ಭಾಷೆಯಲ್ಲಿ ಹಿಡಿತ ಸಾಧಿಸಿದರು. ಅವರ ಇಂಗ್ಲೀಷ್ ಈಗ ಸ್ಫುಟವಾಗುವುದರ ಜೊತೆಗೆ ಆಳವಾಗಿದೆ. ಫಾಲೋಶಿಪ್ ಅವರ ತಿಳುವಳಿಕೆಯನ್ನು ಹೆಚ್ಚಿಸಿದೆ. ಇದರಿಂದ ವಿಭಿನ್ನ ಜನರನ್ನು ಅವರಿರುವಂತೆಯೇ ಸ್ವೀಕರಿಸುವ ಹಾಗೂ ಗೌರವಿಸುವುದನ್ನು ಅವರು ಕಲಿತಿದ್ದಾರೆ. ಗೆಳೆಯರ ಪ್ರೋತ್ಸಾಹ, ಪ್ರೀತಿ ಅವರನ್ನು ಈ ಮಟ್ಟಕ್ಕೇರಿಸಿದೆಯಂತೆ. ಜೀವನ ನನಗೆ ಉತ್ತಮ ಗೆಳೆಯರನ್ನು ನೀಡಿದೆ ಎನ್ನುತ್ತಾರೆ ಅಶ್ವಿತಾ.

ಜಾಗೃತಗೊಂಡ ಆತ್ಮಸಾಕ್ಷಿ

ಫಾಲೋಶಿಪ್ ನಂತರ Sughavazhvu ಹೆಲ್ತ್ ಕೇರ್ ನಲ್ಲಿ ಅಶ್ವಿತಾ ಸಮುದಾಯ ಒಪ್ಪಂದದ ನಿರ್ವಾಹಕರಾಗಿ ಕೆಲಸ ನಿರ್ವಹಿಸಿದರು. ಗ್ರಾಮೀಣ ಭಾರತದಲ್ಲಿ ಪ್ರಾಥಮಿಕ ಆರೋಗ್ಯಕ್ಕೆ ಒತ್ತು ನೀಡುವ ಕಾರ್ಯದಲ್ಲಿ ಅವರು ನಿರತರಾಗಿದ್ದರು. ರಕ್ತ ಹೀನತೆ ಹಾಗೂ ರಕ್ತನಾಳಗಳ ಕಾಯಿಲೆಗಳ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ತಮ್ಮ ಕೆಲಸದ ಭಾಗವಾಗಿ ಅಶ್ವಿತಾ ನಿರ್ವಹಿಸಿದರು.

ಉತ್ತಮ ಶಿಕ್ಷಣ ಹಾಗೂ ಗೌರವಾನ್ವಿತ ಕೆಲಸ ಅವರ ಕನಸಾಗಿರಲಿಲ್ಲ. ಅಶ್ವಿತಾ ತಮ್ಮ ದಾರಿಯಲ್ಲಿ ಏನೋ ತಪ್ಪಿದೆ ಎಂಬುದನ್ನು ಅರಿತರು. ಕಷ್ಟಪಟ್ಟು ಓದಿ, ಈಗ ಏನು ಮಾಡುತ್ತಿದ್ದೇನೆ? ವಿಶ್ವದಲ್ಲಿ ಏನು ಬದಲಾವಣೆ ಅಗತ್ಯವಿದೆ? ಹಳ್ಳಿಯಲ್ಲಿ ಸೂಕ್ತ ವೃತ್ತಿ ಆಯ್ಕೆಗೆ ಹೋರಾಟ ನಡೆಸುತ್ತಿರುವ ಸ್ನೇಹಿತರು ಹಾಗೂ ನನಗಿರುವ ವ್ಯತ್ಯಾಸವೇನು? ಹೀಗೆ ಕೆಲಸ ಮಾಡುತ್ತಿದ್ದಾಗ ನಿರಂತರವಾಗಿ ತಮ್ಮನ್ನು ತಾವು ಪ್ರಶ್ನಿಸಿಕೊಂಡರು. ಅವಕಾಶಗಳಿಗೆ ಮಾನ್ಯತೆ ನೀಡುವುದರ ಜೊತೆಗೆ ಕೌಶಲ್ಯಗಳನ್ನು ಸುಧಾರಿಸಿಕೊಳ್ಳುವ ಅಂಶಗಳಿಗೆ ಮಹತ್ವ ನೀಡಿದ್ದರಿಂದ ಅವರು ಜೀವನದಲ್ಲಿ ಮುನ್ನುಗ್ಗಲು ಸಾಧ್ಯವಾಯಿತು.

ಬೋಧಿ ಟ್ರೀ ಫೌಂಡೇಶನ್ ಜನನ

ತಿರುನೆಲ್ವೆಲಿಗೆ ವಾಪಸ್ಸಾದ ಅಶ್ವಿತಾ, ತಮ್ಮ ಕನಸನ್ನು ಸಾಕಾರಗೊಳಿಸುವತ್ತ ಮಹತ್ವದ ಹೆಜ್ಜೆ ಇಟ್ಟರು. ಗ್ರಾಮೀಣ ಭಾಗದ ಜನರ ಉದ್ಧಾರಕ್ಕಾಗಿ ಬೋಧಿ ಟ್ರೀ ಫೌಂಡೇಶನ್ ಕಟ್ಟಿದರು. ಈ ಸಂಸ್ಥೆ ಗ್ರಾಮೀಣ ಭಾಗದ ಪದವಿಧರರ ಕೌಶಲ್ಯವನ್ನು ಹೆಚ್ಚಿಸಿ, ಅವರಿಗೆ ಅವಕಾಶ ಒದಗಿಸಿಕೊಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಪದವೀಧರರಿಗೆ ತರಬೇತಿ ನೀಡುವುದರ ಜೊತೆಗೆ ಇತರರೊಂದಿಗೆ ಸಂಪರ್ಕ ಹೊಂದಲು, ಅವರ ಸ್ವಾಭಿಮಾನ ಹೆಚ್ಚಿಸಿ, ಜವಾಬ್ದಾರಿಗಳನ್ನು ಕಲಿಸುತ್ತ, ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲು ಈ ಸಂಸ್ಥೆ ನೆರವಾಗುತ್ತಿದೆ. ಸ್ಥಳಿಯ ಕನಸುಗಳನ್ನು ಸಾಕಾರಗೊಳಿಸುವ ಜೊತೆಗೆ ತಮ್ಮ ಹಳ್ಳಿಯನ್ನು ಅಭಿವೃದ್ದಿಪಡಿಸುವ ಉತ್ತಮ ನಾಯಕರನ್ನು ಸಂಸ್ಥೆ ಹುಟ್ಟು ಹಾಕುತ್ತಿದೆ.

ಪದವಿಧರರಿಗಿರುವ ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸಲು ಸಂಸ್ಥೆ ಮೂರು ಗಂಟೆಗಳ ಕಾಲ ಕಾರ್ಯಕ್ರಮ ನೀಡುತ್ತಿದೆ. ಗ್ರಾಮೀಣ ಕಾಲೇಜು ಪದವೀಧರರಿಗೆ ಲಭ್ಯವಿರುವ ಫೆಲೋಷಿಪ್ ವಿದ್ಯಾರ್ಥಿವೇತನ, ಸರಕಾರಿ ಉದ್ಯೋಗ, ಖಾಸಗಿ ಉದ್ಯೋಗಗಳು, ಉದ್ಯಮಶೀಲತೆ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡುತ್ತಿದೆ. ಕಲೆ ಮತ್ತು ವಿಜ್ಞಾನ ವಿದ್ಯಾರ್ಥಿಗಳ ವೃತ್ತಿಪರ ಅಭಿವೃದ್ಧಿಗೆ ಹಾಗೂ ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಧನಾತ್ಮಕ ವರ್ತನೆ ಕುರಿತಂತೆ ಎರಡು ದಿನಗಳ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

ಅಶ್ವಿತಾ ನಡೆಸುತ್ತಿರುವ ಕಾರ್ಯಕ್ರಮದ ಪ್ರಯೋಜನ ಪಡೆದ ವಿದ್ಯಾರ್ಥಿಗಳಲ್ಲಿ ಬಿಬಿಎ ವಿದ್ಯಾರ್ಥಿನಿ ಗಾಂಧಿಮಥಿ ಕೂಡ ಒಬ್ಬರು. ಅವರ ಪ್ರಕಾರ ಅಶ್ವಿತಾ ನಡೆಸುತ್ತಿರುವ ಸಂಸ್ಥೆ ಕೇವಲ ಸಂಭಾಷಣೆಯಲ್ಲಾಗುವ ವ್ಯಾಕರಣವನ್ನು ಸರಿಪಡಿಸುತ್ತಲೇ ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾರಂತೆ. ಗಾಂಧಿಮಥಿ ಹೇಳುವಂತೆ `ನಾನು ಹಳ್ಳಿಯಿಂದ ಬಂದವಳು. ನನಗೆ ಇಂಗ್ಲೀಷ್ ಬರುತ್ತಿರಲಿಲ್ಲ. ಸಂವಹನದಲ್ಲಿ ಇಂಗ್ಲೀಷ್ ಪ್ರಾಮುಖ್ಯತೆ ಏನು ಎಂಬುದನ್ನು ತರಬೇತಿ ನನಗೆ ತಿಳಿಸಿಕೊಟ್ಟಿತು. ಈಗ ನನಗೆ ಯಾವುದೇ ಆತಂಕವಿಲ್ಲ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ನಾನು ಕೆಲಸ ಮಾಡಲು ಕಲೆತಿದ್ದೇನೆ. ಬೆದರಿಕೆಯನ್ನು ಮೆಟ್ಟಿ ನಿಂತಿದ್ದೇನೆ ಎನ್ನುವ ಮೂಲಕ ಸಂಸ್ಥೆ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಶ್ವಿತಾ ಅಂದುಕೊಂಡಿದ್ದನ್ನು ಸಾಧಿಸಿತೋರಿಸಿದ್ದಾರೆ. ಅವರ ಪ್ರಕಾರ, ಬಾಲಾಜಿ, ಸೆಬಾಸ್ಟಿಯನ್ ಹಾಗೂ ಪದ್ಮಾ ಸಂಸ್ಥೆಯ ಬೆನ್ನೆಲುಬು. ಒಂದೇ ವರ್ಷದಲ್ಲಿ ತಂಡದ ಕಾರ್ಯ ಸಾಕಷ್ಟು ಪ್ರಭಾವ ಬೀರಿದೆ. 2500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರಿವು ಮೂಡಿಸುವ ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ. 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೃತ್ತಿಪರ ಅಭಿವೃದ್ಧಿ ಮತ್ತು ಧನಾತ್ಮಕ ವರ್ತನೆ ತರಬೇತಿ ಪಡೆದಿದ್ದಾರೆ. 20 ಕ್ಕೂ ಹೆಚ್ಚು ಕಾಲೇಜುಗಳು ಇದರಲ್ಲಿ ಪಾಲ್ಗೊಂಡಿವೆ. ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯ ತೆರೆಯಲಾಗಿದೆ. ಗ್ರಾಮೀಣ ಶಾಲಾ ವಿದ್ಯಾರ್ಥಿಗಳಲ್ಲಿ ಇಂಗ್ಲೀಷ್ ಕಲಿಕೆ ಹೆಚ್ಚಿಸುವ ಗುರಿ ಹೊಂದಿರುವ ಅನೇಕ ಸಂಸ್ಥೆಗಳ ಜೊತೆ ಬೋಧಿ ಟ್ರೀ ಕೈ ಜೋಡಿಸಿದೆ.

ಸಾಧನೆಯ ಹಾದಿ

ಬೋಧಿ ಟ್ರೀ ಫೌಂಡೇಶನ್ ಸ್ಥಾಪನೆ ವೇಳೆ ಅಶ್ವಿತಾ ಅವರಿಗೆ ಪ್ಲಸ್ ಟ್ರಸ್ಟ್ ನೆರವಿನ ಹಸ್ತ ಚಾಚಿತ್ತು. ಮದರ್ ತೆರೇಸಾ ವೈಐಎಫ್ ಸೋಶಿಯಲ್ ಎಂಟರ್ ಪ್ರೈಸ್ ಸ್ಕಾಲರ್ ಶಿಪ್ ಅವರ ಉದ್ಯಮ ಉಳಿಸಿಕೊಳ್ಳಲು ನೆರವಾಗಿತ್ತು. ಜೊತೆಗೆ, ಅವರು ಕೆಲವು ವೈಯಕ್ತಿಕ ದಾನಿಗಳ ಮೂಲಕ ಹಣ ಸಂಗ್ರಹಿಸಿದ್ದಾರೆ. ಈಗ ತಮ್ಮ ತಂಡ ಮತ್ತು ಕಾರ್ಯಕ್ರಮಗಳನ್ನು ವಿಸ್ತರಿಸಲು ಹೆಚ್ಚು ನಿಧಿಸಂಗ್ರಹಕ್ಕೆ ಮುಂದಾಗಿದ್ದಾರೆ.

ಮಾನವ ಜ್ಞಾನ, ಕೌಶಲ್ಯ, ಸಂಪನ್ಮೂಲಗಳು ಮತ್ತು ಅವಕಾಶಗಳ ಆಧಾರದ ಮೇಲೆ ಗ್ರಾಮೀಣ ಮತ್ತು ನಗರ ಪ್ರದೇಶದ ವಿಭಜನೆ ಮಾಡಬಾರದು ಎಂಬುದು ಅಶ್ವಿತಾ ಕನಸು. ಬೋಧಿ ಟ್ರೀ ಫೌಂಡೇಶನ್ ಆ ಕನಸನ್ನು ಸಾಕಾರಗೊಳಿಸುವತ್ತ ಹೆಜ್ಜೆ ಇಟ್ಟಿದೆ.

ತಮ್ಮ ಅದೃಷ್ಟದ ಬಗ್ಗೆ ಖುಷಿ ಪಡುವ ಅಶ್ವಿತಾ, ಸ್ವತಂತ್ರವಾಗಿ ಬದುಕುವ ಅವಕಾಶ ಕಳೆದುಕೊಂಡಿರುವ ತಮ್ಮ ಸಹೋದರಿ ಸೇರಿದಂತೆ ಹಳ್ಳಿ ಮಹಿಳೆಯನ್ನು ನೆನೆದು ಬೇಸರ ವ್ಯಕ್ತಪಡಿಸುತ್ತಾರೆ.