ರೀಲ್ನಲ್ಲೂ ಹೀರೋ... ರಿಯಲ್ ಆಗಿಯೂ ಹೀರೋ..!
ಟೀಮ್ ವೈ.ಎಸ್. ಕನ್ನಡ
Monday January 02, 2017,
2 min Read
ಆ ದಿನಗಳು ಅನ್ನೋ ಅಂಡರ್ವರ್ಲ್ಡ್ ಕಥೆ ಹೊಂದಿರೋ ಸಿನಿಮಾ ಎಲ್ಲಾ ವರ್ಗವನ್ನೂ ತನ್ನತ್ತ ಸೆಳೆದ್ರೆ, ಬಿರುಗಾಳಿ ಅನ್ನೋ ಸಿನಿಮಾ ನೋಡಿದ ಹುಡುಗಿಯರು ವಾವ್..! ಯಾರಿದು ಹೀರೋ? ಅಂತ ಚಿತ್ರದ ನಾಯಕನನ್ನ ಆತನ ಹೇರ್ಸ್ಟೈಲ್ ನೋಡಿ ಮರುಳಾಗಿಬಿಟ್ಟಿದ್ರು. ಕನ್ನಡಾಭಿಮಾನಿಯಾಗಿ ಕನ್ನಡದಲ್ಲಿ ಒಂದಷ್ಟು ಚಿತ್ರ ಮಾಡಿ ಸೈ ಅನ್ನಿಸಿಕೊಂಡ ಚೇತನ್ ಬರೀ ರೀಲ್ ಲೈಫ್ನಲ್ಲಷ್ಟೇ ಹೀರೋ ಆಗೋಕೆ ಬಂದವರಲ್ಲ. ರಿಯಲ್ ಲೈಫ್ನಲ್ಲೂ ಹೀರೋ ಆಗೇ ಬದುಕು ಕಟ್ಟಿಕೊಳ್ಳಬೇಕು ಅನ್ನೋ ಕನಸಹೊತ್ತು ಕರ್ನಾಟಕಕ್ಕೆ ಕಾಲಿಟ್ಟವರು.
ಚೇತನ್ ಚಿಕ್ಕಂದಿನಿಂದಲೂ ಹೆಚ್ಚಾಗಿ ಓದಿದ್ದು ಬೆಳೆದದ್ದು ಅಮೇರಿಕಾ ಅನ್ನೋ ದೂರದ ದೇಶದಲ್ಲೇ ಆದ್ರೂ, ಅವರೊಳಗಿನ ಕನ್ನಡಿಗ ಮಾತ್ರ ಕನ್ನಡ ನಾಡಿಗಾಗಿ ಶ್ರಮಿಸಲು ಹಪಹಪಿಸುತ್ತಿದ್ದ. ಓದು ಮುಗಿಯುತಿದ್ದ ಹಾಗೇ ಈ ಮಾಯಾನಗರಿ ಬೆಂಗಳೂರಿಗೆ ಬಂದ ಚೇತನ್ರನ್ನು ಬಾಚಿ ಅಪ್ಪಿಕೊಂಡದ್ದು ಸ್ಯಾಂಡಲ್ವುಡ್. ನೋಡಲು ಸ್ಫುರದೂಪಿಯಾಗಿದ್ದ ಡಿಂಪಲ್ ಕೆನ್ನೆಯ ಹುಡುಗ ಇಷ್ಟು ಚೆನ್ನಾಗಿ ನಟಿಸಬಲ್ಲ ಅಂತ ಯಾರೂ ಅಂದುಕೊಂಡಿರಲಿಲ್ಲ. ಆತನ ಸ್ಪಷ್ಟ ಕನ್ನಡ, ತುಂಟ ನಗು ಈತ ಚಿತ್ರರಂಗದಲ್ಲಿ ನೆಲೆನಿಲ್ತಾನೆ ಅನ್ನೋದನ್ನ ಸಾರಿ ಹೇಳಿತ್ತು. ಆದ್ರೆ, ಚೇತನ್ ಚಿತ್ರರಂಗಕಷ್ಟೇ ತಮ್ಮನ್ನ ಸೀಮಿತವಾಗಿಸದೇ ಸಮಾಜ ಸೇವೆಯತ್ತ ವಾಲಿದ್ರು. ಕಷ್ಟ ಎಂದವರಿಗೆ ಸಹಾಯ ಹಸ್ತ ಚಾಚೋಕೆ ಮುಂದೆ ಬಂದ್ರು. ಅಲ್ಲಿ ಇಲ್ಲಿ ಸಣ್ಣ-ಪುಟ್ಟ ಸಮಾಜಸೇವೆ ಮಾಡುತ್ತಿದ್ದ ಚೇತನ್ ಸದ್ಯ ದೊಡ್ಡದೊಂದು ಜವಾಬ್ದಾರಿಯನ್ನು ತಲೆಮೇಲೆ ಹೊತ್ತು ಮುನ್ನಡೆದಿದ್ದಾರೆ.
ಇದನ್ನು ಓದಿ: ಹೊಸ ವರ್ಷದಲ್ಲಿ ಕಾಲ ಕಳೆಯೋದು ಹೇಗೆ..?- ಹಾಲಿಡೇ ಪ್ಲಾನ್ ಬಗ್ಗೆ ಯೋಚನೆ ಮಾಡಿ..!
ಚೇತನ್ ಈಗ ಕೊಡಗು ಜಿಲ್ಲೆಯಲ್ಲಿ ಬಿಡಾರ ಹೂಡಿದ್ದಾರೆ. ಕೊಡಗಿನ ವಿರಾಜಪೇಟೆ ತಾಲೂಕಿನ ಬಿಡ್ಡಳ್ಳಿ ಮತ್ತು ತಟ್ಟಳ್ಳಿ ಹಳ್ಳಿಗಳಲ್ಲಿ ಡಿಸೆಂಬರ್ನಲ್ಲಿ ಬೆಳ್ಳಂಬೆಳಗ್ಗೆ 3000 ಆದಿವಾಸಿಗಳ ಮನೆಗಳ ಮೇಲೆ ಜೆಸಿಬಿಯ ಆರ್ಭಟ ನಡೆಯುತ್ತದೆ. ಮಹಿಳೆಯರು ಮಕ್ಕಳು ಎನ್ನದೆ, ಎಲ್ಲರ ಮನೆಮೇಲೂ ಜೆಸಿಬಿ ದಾಳಿ ನಡೆಸಿ, ಎಲ್ಲರ ಮನೆಗಳ ಮೇಲೆ ಜೆಸಿಬಿ ದಾಳಿ ಮಾಡ್ತು. ಪರಿಣಾಮ ಅಲ್ಲಿನ ಜನರೆಲ್ಲಾ ಇದ್ದ ಗುಡಿಸಲನ್ನೂ ಕಳೆದುಕೊಂಡು ಬೀದಿಪಾಲಾದ್ರು. ಜೇನುಕುರುಬ, ಬೆಟ್ಟಕುರುಬ, ಶೋಲಿಯ, ಎರವ, ಮತ್ತು ಮನಿಯ ಪಂಗಡಗಳಿಗೆ ಸೇರಿದ ಆದಿವಾಸಿಗಳ 578 ಕುಟುಂಬಗಳು ಜೂನ್ 2016ರಿಂದ ಈ ಹಳ್ಳಿಗಳ ಕಾಫಿ ತೋಟಗಳ ಬಳಿ 2.5 ಎಕರೆ ಜಾಗದಲ್ಲಿ ಗುಡಿಸಲುಗಳಲ್ಲಿ ವಾಸಿಸುತ್ತಿದ್ದರು. ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯ ನಿವಾಸಿಗಳ ಕಾಯಿದೆ ಅತವಾ ಅರಣ್ಯ ಹಕ್ಕುಗಳ ಕಾಯಿದೆ ಪ್ರಕಾರ, ಡಿಸೆಂಬರ್ 2006ರಲ್ಲಿ ಜಾರಿಗೆ ಬಂದ ಶಾಸನ, ಜನವರಿ 1, 2008ರಂದು ಕಾರ್ಯರೂಪಕ್ಕೆ ಬಂದಿತು. ಇದರ ಪ್ರಕಾರ ಆದಿವಾಸಿಗಳ ಜೀವನೋಪಾಯಕ್ಕೆ ಸರ್ಕಾರವು 2.5 ಎಕರೆ ಭೂಮಿ ನೀಡಬೇಕು ಆದರೆ ಸರ್ಕಾರ ಈ ತನಕ ಒಂದು ಇಂಚು ಭೂಮಿಯನ್ನೂ ಸಹ ನೀಡಿಲ್ಲ. ಯಾವುದೇ ಮುನ್ಸೂಚನೆ ಹಾಗೂ ಪುನರ್ವಸತಿ ಕಲ್ಪಿಸದೆ ಅರಣ್ಯ ಇಲಾಖೆ ಸಿಬ್ಬಂದಿ ಈ ಗಿರಿಜನರ ಒಕ್ಕಲೆಬ್ಬಿಸುವ ಕಾರ್ಯ ಖಂಡನೀಯ, ಈ ಭೂಮಿಯ ಮೇಲೆ ಎಲ್ಲರಿಗೂ ಬದುಕುವ ಹಕ್ಕಿದೆ, ಸರ್ವರಿಗೂ ಸಮಬಾಳು ಅದೇ ಸಂವಿಧಾನದ ಆಶಯ ಊಡ ಎಂಬುದು ಚಿತ್ರ ನಟ ಚೇತನ್ರ ಅಭಿಪ್ರಾಯ. ಅದರಂತೆಯೇ ನಡೆದುಕೊಳ್ಳಲು ಮುಂದಾದ್ರು.
ಈ ವಿಚಾರಕ್ಕೆ ಹೆಚ್ಚು ಕಾಳಜಿ ವಹಿಸಿದ ನಟ ಚೇತನ್ ಮನೆ ಕಳೆದುಕೊಂಡ ನಿರಾಶ್ರಿತರ ಬೆನ್ನೆಲುಬಾಗಿ ನಿಂತ್ರು. ದಿಕ್ಕುಕಾಣದ ಜನರ ಪರವಾಗಿ ಕೊಡಗು ಜಿಲ್ಲೆಯ ಜಿಲ್ಲಾಧಿಲ್ಲಾಧಿಕಾರಿಗೆ ಪತ್ರ ಬರೆದ್ರು. ಪತ್ರದಲ್ಲಿ 3000 ಆದಿವಾಸಿಗಳಿಗೆ ಸೂಕ್ತ ನೆಲೆ ಕಲ್ಪಿಸಬೇಕೆಂದು, ಸರ್ಕಾರ ಮನ್ಸೂಚನೆ ನೀಡದೆ ಅಮಾನವೀಯವಾಗಿ ನಡೆದುಕೊಂಡದ್ದು ತಪ್ಪು ಎಂದು ಉಗ್ರವಾಗಿ ಖಂಡಿಸಲಾಗಿತ್ತು. ಚೇತನ್ ಆದಿವಾಸಿಗಳ ಪರ ನಿಂತಿದ್ದಷ್ಟೇ ಅಲ್ಲ, ಅವರೊಡನೆಯೇ ಉಳಿದು, ಅವರ ಕಷ್ಟ-ದುಖಃಗಳಿಗೆ ಸ್ಪಂದಿಸಿದ್ರು. ಅವ್ರು ಅದೆಷ್ಟೇ ಸೀಕ್ರೆಟ್ ಆಗಿ ಪ್ರತಚಾರದ ಆಸೆಯಿಲ್ಲದೆ ಸಮಾಜ ಸೇವೆಗೆ ಇಳಿದ್ರೂ, ಮಾಧ್ಯಮಗಳು ಅದನ್ನು ಹೊರತಂದ್ವು. ಸಾಮಾಜಿಕ ಜಾಲತಾಣಗಳಲ್ಲಿ ಚೇತನ್ ಆದಿವಾಸಿಗಳ ಜೊತೆಗಿರೋ ಫೋಟೋಗಳು ವೈರಲ್ ಆದ್ವು. ರೀಲ್ ಲೈಫ್ನಲ್ಲಿ ಬಣ್ಣ ಹಚ್ಚಿ ಹೀರೋ ಅನ್ನಿಸಿಕೊಂಡಿದ್ದಾತ, ರಿಯಲ್ ಲೈಫ್ನಲ್ಲಿ ಮಾನವೀಯತೆ ಮೆರೆದು ಜನರ ಮನಸ್ಸಲ್ಲಿ ರಿಯಲ್ ಹೀರೋ ಆಗಿ ಪಟ್ಟಬಿಡದೆ ಕುಂತಿದ್ದಂತು ನಿಜ.
1. ಎಲ್ಲಾ ಬಸ್ನಿಲ್ದಾಣಗಳಲ್ಲೂ ಎ2ಬಿಯದ್ದೇ ಸವಿ