ಹೊಸ ಸಾಹಸಕ್ಕೆ ಮುನ್ನುಡಿಯಾಯ್ತು ವೈಯಕ್ತಿಕ ಜೀವನದಲ್ಲುಂಡ ನೋವು : ಸೂರಿ ನಮಗೆಲ್ಲರಿಗೂ ಮಾದರಿ..!

ಟೀಮ್​ ವೈ.ಎಸ್​. ಕನ್ನಡ

ಹೊಸ ಸಾಹಸಕ್ಕೆ ಮುನ್ನುಡಿಯಾಯ್ತು ವೈಯಕ್ತಿಕ ಜೀವನದಲ್ಲುಂಡ ನೋವು : ಸೂರಿ ನಮಗೆಲ್ಲರಿಗೂ ಮಾದರಿ..!

Sunday January 17, 2016,

4 min Read

ಪ್ರತಿಯೊಬ್ಬರಿಗೂ ಉದ್ಯಮ ಆರಂಭಿಸಲು ಸ್ಫೂರ್ತಿ ಯಾವುದಾದರೂ ವ್ಯಕ್ತಿ ಅಥವಾ ಘಟನೆಗಳಿಂದ ಬರುತ್ತದೆ. ನಾನೀಗ ಇಲ್ಲಿ ಹೇಳ ಹೊರಟಿರುವುದು ಸುನಿಲ್ ಸೂರಿ ಅವರ ಕಥೆ. ಸುನಿಲ್ ಸೂರಿ, ಸಾಫ್ಟ್​​ವೇರ್ ಇಂಜಿನಿಯರ್. ಆದರೆ ಅವರ ಬಾಳಿನಲ್ಲಿ ಸಂಭವಿಸಿದ ಕೆಲವು ಘಟನೆಗಳು ಅವರನ್ನು ಹೊಸ ಸಾಹಸಕ್ಕೆ ಪ್ರೇರೇಪಿಸಿದವು. ಅವರ ತಾಯಿ ಕ್ಯಾನ್ಸರ್ ರೋಗಕ್ಕೆ ತುತ್ತಾದರೆ, ತಂದೆ ಮಧುಮೇಹ ರೋಗಕ್ಕೆ ಬಲಿಯಾದರು. ಈ ಸಂದರ್ಭದಲ್ಲಿ ಸೂರಿ ಅವರಿಗೆ ಒಂದು ವಿಷಯ ತಿಳಿದು ಬಂತು. ತಂದೆ- ತಾಯಿ ಅವರ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದಲ್ಲಿ ಅವರು ಇನ್ನಷ್ಟು ಕಾಲ ಬದುಕುತ್ತಿದ್ದರು ಎಂದು. ಇದು ಸೂರಿ ಅವರನ್ನು ಈ ದಿಕ್ಕಿನಲ್ಲಿ ಹೊಸ ಸಾಹಸಕ್ಕೆ ಪ್ರೇರೇಪಿಸಿತು. ಸಮಾಜ ಮುಖಿ ಚಿಂತನೆಯ ಹರಿವನ್ನು ಹೆಚ್ಚಿಸಿತ್ತು. ತಮ್ಮ ತಂದೆಯ ಮೇಲಿನ ಗೌರವಾರ್ಥ ‘ಸ್ವದೇಶ್ ಮೆನು ಪ್ಲಾನರ್’ ಎಂಬ ಅಪ್ಲಿಕೇಷನ್ ಸಿದ್ಧಪಡಿಸಿದರು. ಬಳಕೆದಾರರು ತಮ್ಮ ಆಹಾರ ಪದ್ಧತಿಯ ಸಂಪೂರ್ಣ ವಿವರವನ್ನು ಈ ಅಪ್ಲಿಕೇಷನ್ ನಲ್ಲಿ ಅಪ್ ಲೋಡ್ ಮಾಡಬೇಕು. ಬಳಿಕ ಪರಿಣಿತ ವೈದ್ಯರು ಇದು ಸೂಕ್ತವಾಗಿದೆಯೇ ಎಂಬುದನ್ನು ದೃಢೀಕರಿಸುತ್ತಿದ್ದರು. ಎರಡು ತಿಂಗಳಲ್ಲಿ ಈ ಅಪ್ಲಿಕೇಷನ್​​​ನನ್ನು ಸಿದ್ಧಪಡಿಸಿದ್ದರೂ ಅದನ್ನು ಯಾರೂ ಕೂಡ ಸ್ವಾಗತಿಸಲು ಮುಂದೆ ಬಂದಿರಲಿಲ್ಲ.

ಧೃತಿಗೆಡಲಿಲ್ಲ ಸುನಿಲ್​​ ಸೂರಿ

ತಮ್ಮ ಆಲೋಚನೆ ಕ್ಲಿಕ್ ಆಗದಿದ್ದಾಗ ಸೂರಿ ಗಾಬರಿಗೊಂಡರು. ಆದರೂ ವಿಶ್ವಾಸ ಕಳೆದುಕೊಂಡಿರಲಿಲ್ಲ. ಹೊಸ ಅನ್ವೇಷಣೆಗೆ ಮುಂದಾದರು. ತರಕಾರಿ ಮತ್ತು ಹಣ್ಣು ಹಂಪಲುಗಳನ್ನು ಮಾರಾಟ ಮಾಡಲು ಮುಂದಾದರು. ಬಳಕೆದಾರರ ವಿಶ್ವಾಸ ಗೆಲ್ಲುವ ಕಸರತ್ತು ನಡೆಸಿದರು.

ಹಣ್ಣು ಹಂಪಲು ತರಕಾರಿ ಪೂರೈಕೆ ವೆಬ್​​​ಸೈಟ್​​ಗಳು ಅತ್ಯಧಿಕ ಸಂಖ್ಯೆಯಲ್ಲಿ ಇರುವುದು ಕೂಡ ಸಮಸ್ಯೆಗೆ ಕಾರಣವಾಗಿತ್ತು. ಹೆಚ್ಚಿನ ವೆಬ್ ಆಧಾರಿತ ವಿನೂತನ ಯೋಜನೆಗಳು ನಿರೀಕ್ಷಿತ ಲಾಭ ಪಡೆಯದಿರುವುದು ಹಾಗೂ ಇನ್ನಿತರ ಸಮಸ್ಯೆಗಳು ಈ ಸಂದರ್ಭದಲ್ಲಿ ಕಂಡು ಬಂದವು. ಆದರೂ ಬಳಕೆದಾರರನ್ನು ಸಂಪರ್ಕಿಸಲು ಅವರ ಜೊತೆ ನಿರಂತರ ಸಂಪರ್ಕ ಸಾಧಿಸಲು ಹಣ್ಣು ಹಂಪಲು ಪೂರೈಕೆ ಅನಿವಾರ್ಯವಾಗಿತ್ತು. ಈ ಸಂದರ್ಭದಲ್ಲಿ ಅವರು ತಮ್ಮ ಕಾರ್ಯತಂತ್ರದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರು. ನಷ್ಟ ಬರದ ರೀತಿಯಲ್ಲಿ ಮಾರ್ಪಾಡು ಮಾಡಿಕೊಂಡರು. ಅವತ್ತವತ್ತೇ ಆರ್ಡರ್ ಸ್ವೀಕರಿಸಿ ಪೂರೈಕೆ ಮಾಡುವ ಬದಲು ಸಂಜೆ ಆರ್ಡರ್ ಸ್ವೀಕರಿಸಿ ಮರು ದಿನ ಬೆಳಿಗ್ಗೆ ಪೂರೈಸುವ ವಿಧಾನ ಆಯ್ಕೆ ಮಾಡಿಕೊಂಡರು. ಇದು ಕ್ಲಿಕ್ ಆಯಿತು.

2015ರಲ್ಲಿ ಈ ಕಲ್ಪನೆ ಮೊಳಕೆಯೊಡೆದು ಫಲ್​ಫೂಲ್ (falphool) ಸ್ಥಾಪನೆಗೆ ಕಾರಣವಾಯಿತು. ಇದು ವಾಯುವ್ಯ ದೆಹಲಿಯಲ್ಲಿ ಪ್ರಮುಖವಾಗಿ ಚಟುವಟಿಕೆ ನಡೆಸುತ್ತಿದೆ.

ಸಂಜೆ ಆರ್ಡರ್ ಸ್ವೀಕರಿಸಿ , ಮರು ದಿನ ಬೆಳಿಗ್ಗೆ ಪೂರೈಕೆ ಮಾಡುವ ವಿಧಾನದಿಂದಾಗಿ ಬಳಕೆದಾರನಿಗೂ ಮತ್ತು ಸಂಸ್ಥೆಗೂ ಲಾಭವಾಯಿತು. ಇದರಲ್ಲಿ ಶೂನ್ಯ ವೇಸ್ಟೇಜ್ ನಿರ್ವಹಣೆ ಸುಲಭವಾಯಿತು ಎನ್ನುತ್ತಾರೆ ಸೂರಿ. ಉತ್ತಮ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಔಷಧಿ, ಗಿಡಗಳು ಮತ್ತು ದಿನ ಬಳಕೆ ವಸ್ತುಗಳನ್ನು ಸೇರ್ಪಡೆಗೊಳಿಸಲಾಯಿತು. ಇದು ಸೂರಿ ಹೇಳುವ ಸಾಹಸ ಕಥೆ.

ಕಳೆದ ಆರು ತಿಂಗಳಲ್ಲಿ ಮೂರು ಸಾವಿರ ಬಳಕೆದಾರರಿಗೆ ಸೇವೆ ನೀಡಿದ್ದೇವೆ. ಪ್ರತಿ ದಿನ 45 ಬಳಕೆದಾರರು ಪ್ರಯೋಜನ ಪಡೆಯುತ್ತಿದ್ದಾರೆ. ಹಣ್ಣು ಹಂಪಲು, ಔಷಧಿ, ದಿನ ಬಳಕೆಯ ವಸ್ತುಗಳು ಸೇರಿದಂತೆ ಎಲ್ಲಾ ಬೇಡಿಕೆಗಳಿಗೆ ಪೂರ್ಣ ಪರಿಹಾರ ಇಲ್ಲಿದೆ ಎನ್ನುತ್ತಾರೆ ಸೂರಿ.

ಇದುವರೆಗೆ ಈ ವಿನೂತನ ಯೋಜನೆ ಜನಪ್ರಿಯಗೊಳಿಸಲು ಏಳರಿಂದ ಎಂಟು ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ. ಅದೇ ರೀತಿ ಬಾಯಿ ಮಾತಿನ ಪ್ರಚಾರ ಮತ್ತು ಕಿರು ಪತ್ರ ಹಂಚಿಕೆ, ಜನಪ್ರಿಯತೆಗೊಳಿಸಲು ಸಹಕಾರಿಯಾಗಿದೆ.

ರಿಯಾಯಿತಿ ಬಗ್ಗೆ ಮಾತನಾಡುತ್ತ ಸೂರಿ ಈ ರೀತಿ ಹೇಳುತ್ತಾರೆ. 2015ರ ನವೆಂಬರ್ ತಿಂಗಳಲ್ಲಿ ಮೊದಲ ಬಾರಿಗೆ ಬಳಕೆದಾರರಿಗೆ ಡಿಸ್ಕೌಂಟ್ ಘೋಷಿಸಲಾಯಿತು. ವಿವಿಧ ರೀತಿಯ ಬಳಕೆದಾರರಿಗೆ ಡಿಸ್ಕೌಂಟ್ ಘೋಷಿಸಲಾಯಿತು. ಅಲ್ಲಿಯ ತನಕ ಡಿಸ್ಕೌಂಟ್ ಬಗ್ಗೆ ಆಲೋಚಿಸಿಯೇ ಇರಲಿಲ್ಲ ಎನ್ನುತ್ತಾರೆ ಸೂರಿ. 22 ಮಾನದಂಡಗಳನ್ನು ಪರಿಗಣಿಸಿ, ವೈವಿಧ್ಯಮಯವಾದ ರಿಯಾಯಿತಿ ದರದಲ್ಲಿ ಬಳಕೆದಾರರಿಗೆ ಅಂತಿಮ ದರ ಪಟ್ಟಿ ನಿಗದಿಪಡಿಸಿದೆವು, ಇದು ಕ್ಲಿಕ್ ಆಯಿತು ಎನ್ನುತ್ತಾರೆ ಸೂರಿ.

image


ಸಶಕ್ತನಿಗೆ ಮಾತ್ರ ಉಳಿಗಾಲ

ಭಾರತದಂತಹ ದೇಶದಲ್ಲಿ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ದವಸ ಧಾನ್ಯಗಳದ್ದೇ ಪಾರುಪತ್ಯ. ಶೇಕಡಾ 60ರಷ್ಟು ವ್ಯಾಪಾರ ಇದರಲ್ಲಿಯೇ ಬರುತ್ತದೆ. ಆಹಾರದ್ದೇ ಮುಖ್ಯ ಪಾಲು. ಪ್ರಸಕ್ತ ದವಸ ಧಾನ್ಯ ಮತ್ತು ಆಹಾರದ ವ್ಯವಹಾರ 383 ಬಿಲಿಯನ್ ಡಾಲರ್ ಗಳಾಗಿವೆ. ಇದು 2020ರ ಹೊತ್ತಿಗೆ 1 ಟ್ರಿಲಿಯನ್ ಗಳಿಗೆ ತಲುಪುವ ನಿರೀಕ್ಷೆ ಇದೆ.

ಆದರೆ , ಈ ಕ್ಷೇತ್ರ ಕೂಡ ಸವಾಲುಗಳಿಂದ ಹೊರತಾಗಿಲ್ಲ. ಬೃಹತ್ ಸಂಸ್ಥೆಗಳು ಇಲ್ಲಿ ಏಕಸ್ವಾಮ್ಯ ಸ್ಥಾಪಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿವೆ. ಇವುಗಳಲ್ಲಿ ಪ್ರಮುಖವಾದವುಗಳು ಬಿಗ್ ಬಾಸ್ಕೆಟ್, ಝೋಪ್ ನೋವ್. ಗ್ರೋಪರ್ಸ್ ಹೀಗೆ ಪಟ್ಟಿ ಉದ್ದ ಇದೆ. ಭಾರತದ ಪ್ರಮುಖ ಐದು ಗ್ರೋಸರಿ ವಿನೂತನ ಯೋಜನೆಗಳು ಈಗಾಗಲೇ 173.5 ಮಿಲಿಯನ್ ಡಾಲರ್ ಹಣವನ್ನು ಮಾರುಕಟ್ಟೆಯಿಂದ ಸಂಚಯನಗೊಳಿಸಿವೆ. ಅದರಲ್ಲಿ 120 ಮಿಲಿಯನ್ ಡಾಲರ್ ಸಂಪನ್ಮೂಲ ಈ ವರ್ಷವೇ ಸಂಗ್ರಹಿಸಿದೆ ಎಂಬುದು ಗಮನಾರ್ಹ. ಬಿಗ್ ಬಾಸ್ಕೆಟ್ ಮತ್ತು ಗ್ರೋಪರ್ಸ್ ಅನುಕ್ರಮವಾಗಿ 85.8 ಮಿಲಿಯನ್ ಡಾಲರ್ ಮತ್ತು 45. 5 ಮಿಲಿಯನ್ ಡಾಲರ್ ಹಣ ಸಂಗ್ರಹಿಸಿವೆ.

ಮಾರುಕಟ್ಟೆ ಎದುರಿಸುತ್ತಿರುವ ಪೈಪೋಟಿ ಬಗ್ಗೆ ಪ್ರಶ್ನಿಸಿದಾಗ ಸೂರಿ ಹೇಳುತ್ತಿರುವುದು ಹೀಗೆ. ನಮ್ಮ ಪ್ರತಿಸ್ಪರ್ಧಿಗಳು ಹೂಡಿಕೆದಾರರ ಸಾಕಷ್ಟು ಹಣವನ್ನು ವೆಚ್ಚಮಾಡಿ ಮಾರುಕಟ್ಟೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿವೆ. ನಷ್ಟ ಅನುಭವಿಸುತ್ತಿವೆ. ಆದರೆ ನಮ್ಮ ಸಂಸ್ಥೆ, ನಷ್ಟದ ಹಾದಿ ತುಳಿಯದೇ ಮಾರುಕಟ್ಟೆಯಲ್ಲಿ ಸಶಕ್ತವಾಗಿರಲು ಪ್ರಯತ್ನಿಸುತ್ತಿದ್ದೇವೆ ಎನ್ನುತ್ತಾರೆ ಸೂರಿ. ಶೀಘ್ರದಲ್ಲಿಯೇ ಲಾಭ ಪಡೆಯವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಬ್ಯುಸಿನೆಸ್ ಮಾದರಿ ಬಗ್ಗೆ ಮಾಹಿತಿ ನೀಡಿದ ಸೂರಿ, ಪ್ರತಿದಿನ ಸಂಜೆ ಆರ್ಡರ್ ಪಡೆದು ಮರು ದಿನ ಬೆಳಿಗ್ಗೆ ಪೂರೈಕೆ ಮಾಡುತ್ತೇವೆ. ಅದೇ ದಿನ ಪೂರೈಕೆ ಬೇಕು ಎಂದಾದರೆ ಪ್ರತಿ ಆರ್ಡರ್​​ ಗೆ 45 ರೂಪಾಯಿ ಶುಲ್ಕ ವಿಧಿಸುತ್ತೇವೆ ಎನ್ನುತ್ತಾರೆ ಸೂರಿ.

ಇತ್ತೀಚಿನ ಮತ್ತು ಮುಂದಿನ ಬೆಳವಣಿಗೆ

ಇತ್ತೀಚೆಗೆ ಸಂಸ್ಥೆ ಹಲವು ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳನ್ನು ಸಂಪರ್ಕಿಸಿದೆ. ಈ ಎಲ್ಲ ಅಂಗಡಿ ಮಾಲೀಕರು ಹಲವು ವಿಧದ ಆಕರ್ಷಕ ಕೊಡುಗೆಯ ಪ್ರಸ್ತಾಪ ಮುಂದಿಟ್ಟಿದ್ದಾರೆ. ಶೀಘ್ರವೇ ಈ ವ್ಯಾಪಾರಿಗಳೆಲ್ಲ ಫಲ್ಫೂಲ್.ಕಾಮ್ ಮೂಲಕ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲಿದ್ದಾರೆ ಎನ್ನುತ್ತಾರೆ ಸೂರಿ.

ಮುಖ್ಯವಾಗಿ ದೆಹಲಿಯ ದ್ವಾರಕಾ ಪ್ರದೇಶವನ್ನು ಕೇಂದ್ರೀಕರಿಸಿ ಕಾರ್ಯಾಚರಿಸಲಾಗುತ್ತಿದೆ.

ಇದರ ಜೊತೆ ಜೊತೆಗೆ ಹೊಸ ಹೊಸ ಅನ್ವೇಷಣೆಯತ್ತ ಕೂಡ ಮನಸ್ಸು ಮಾಡಿದೆ. ಆಹಾರ ಸಿದ್ಧಪಡಿಸುವ ಸೂತ್ರವನ್ನು ಹಂಚಿಕೊಳ್ಳುವ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣದತ್ತ ಹೆಜ್ಜೆ ಇರಿಸಿದೆ.

ಮುಂದಿನ ದಿನಗಳಲ್ಲಿ ವಿಸ್ತರಣೆಯನ್ನು ಕೂಡ ಸಂಸ್ಥೆ ಉದ್ದೇಶಿಸಿದೆ. ಮುಖ್ಯವಾಗಿ ದೆಹಲಿ, ಗುರ್ಗಾಂವ್, ನೋಯ್ಡಾ, ಗಳಲ್ಲಿ ವಾಣಿಜ್ಯ ಚಟುವಟಿಕೆ ವಿಸ್ತರಣೆಗೆ ಮುಂದಾಗಿದೆ. ಇದೀಗ ಮೆನು ಪ್ಲಾನರ್ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಾಗುತ್ತಿದ್ದು, ಅದನ್ನು ಮತ್ತೆ ಲಾಂಚ್ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಇದು ಖಂಡಿತವಾಗಿಯೂ ಸಂಸ್ಥೆಯ ಮೌಲ್ಯ ಹೆಚ್ಚಳಕ್ಕೆ ನೆರವಾಗಲಿದೆ ಎನ್ನುತ್ತಾರೆ ಸೂರಿ.

ಲೇಖಕರು : ತೌಸಿಫ್​ ಆಲಮ್​

ಆನುವಾದಕರು : ಎಸ್​ಡಿ