ಗಾಯಗೊಂಡ ಪ್ರಾಣಿಗಳಿಗೆ ಆಶ್ರಯ ತಾಣ- ವಿರಾಟ್​ ಕೊಹ್ಲಿ ಭೇಟಿ ಬಳಿಕ ಬದಲಾಗಿದೆ ಅದೃಷ್ಟ

ಟೀಮ್​ ವೈ.ಎಸ್​.ಕನ್ನಡ

ಗಾಯಗೊಂಡ ಪ್ರಾಣಿಗಳಿಗೆ ಆಶ್ರಯ ತಾಣ-  ವಿರಾಟ್​ ಕೊಹ್ಲಿ ಭೇಟಿ ಬಳಿಕ ಬದಲಾಗಿದೆ ಅದೃಷ್ಟ

Tuesday May 30, 2017,

3 min Read

ಮನುಷ್ಯನ ಪಾಲಿಗೆ ನಾಯಿ ಪ್ರೀತಿಯ ಪ್ರಾಣಿ. ನಾಯಿ ನಿಯತ್ತಿಗೆ ಉದಾಹರಣೆ. ಆದರೆ ಬೆಂಗಳೂರಿನಲ್ಲಿ ಸಾಕುವ ನಾಯಿಗಳಿಗಿಂತ ಬೀದಿನಾಯಿಗಳೇ ಹೆಚ್ಚಾಗಿದ್ದವು. ಬೀದಿ ನಾಯಿಗಳು ಆರೋಗ್ಯವಾಗಿದ್ದರೆ ಚಿಂತೆ ಇಲ್ಲ. ಆದ್ರೆ ಬಹುತೇಕ ಬೀದಿನಾಯಿಗಳು ಅನಾರೋಗ್ಯದಿಂದ ನರಳುತ್ತಿವೆ. ಅಷ್ಟೇ ಅಲ್ಲ ಹೊಟ್ಟೆ ಹಸಿವನ್ನು ನೀಗಿಸಿಕೊಳ್ಳಲು ಪರದಾಡುತ್ತಿವೆ. ಬೆಂಗಳೂರಿನಲ್ಲಿ ಆಶ್ರಯದಾತರು, ಅನ್ನದಾತರು ಇಲ್ಲದೆ ಅಸಂಖ್ಯ ನಾಯಿಗಳು ಬೀದಿಯಲ್ಲಿ ನರಳುತ್ತಿದ್ದವು. ಒಂದೋ, ಎರಡೋ ಕಾಲುಗಳನ್ನು ಕಳೆದುಕೊಂಡ ಬೀದಿನಾಯಿಗಳಿಗೆ ನೆರವಾಗಬೇಕು ಎಂದು ಸುಧಾನಾರಾಯಣ್‌, ಡಾ. ಲೋಹಿತ್‌, ಸೇರಿದಂತೆ ಒಂದಷ್ಟು ಸಮಾನ ಮನಸ್ಕರು ಸೇರಿಕೊಂಡರು. ಬೀದಿ ನಾಯಿಗಳಿಗೆ ಆಶ್ರಯ ನೀಡಬೇಕು ಅನ್ನುವ ನಿರ್ಧಾರ ಮಾಡಿದರು. ಇದರ ಫಲಿತಾಂಶವೇ "ಚಾರ್ಲೀಸ್ ಎನಿಮಲ್ ರೆಸ್ಕ್ಯೂ ಸೆಂಟರ್". ಇವತ್ತು ಚಾರ್ಲೀಸ್​ ಎನಿಮಲ್​ ರೆಸ್ಕ್ಯೂ ಸೆಂಟರ್​ ಅನೇಕ ಬೀದಿ ನಾಯಿಗಳಿಗೆ, ಗಾಯಗೊಂಡ ನಾಯಿಗಳಿಗೆ ಆಶ್ರಯ ತಾಣವಾಗಿದೆ. 

image


ಕ್ಯೂಪಾ ಪ್ರೇರಣೆ

ಇದಕ್ಕಿಂತ ಹೆಬ್ಬಾಳದಲ್ಲಿ ಇದ್ದ ಕ್ಯೂಪಾ ಸಂಸ್ಥೆ ಮೂಲಕ ಇವರೆಲ್ಲರೂ ಪರಿಚಯವಾದವರು. ಅಲ್ಲಿ ಎಲ್ಲ ಪ್ರಾಣಿಗಳನ್ನು ರೆಸ್ಕ್ಯೂ ಮಾಡಲಾಗುತ್ತಿತ್ತು. ಆದರೆ ೨೦೧೨ರಲ್ಲಿ ಅಲ್ಲಿ ಪ್ರಾಣಿ ಪ್ರಾಣಿ ರಕ್ಷಣೆಯ ಕಾರ್ಯ ನಿಂತು ಹೋಯಿತು ಆದರೆ ಕ್ಯೂಪಾದೊಂದಿಗೆ ಗುರುತಿಸಿಕೊಂಡಿದ್ದ ಸುಧಾ ನಾರಾಯಣ್, ಡಾ.ಲೋಹಿತ್ ಸೇರಿದಂತೆ ಕೆಲವು ಸಮಾನ ಮನಸ್ಕರ ಕಾಳಜಿ ಮಾತ್ರ ಕಡಿಮೆಯಾಗಲಿಲ್ಲ. ಇವರೆಲ್ಲ ಸೇರಿಕೊಂಡು 2013ರಲ್ಲಿ ಅದೇ ಮಾದರಿಯ "ಚಾರ್ಲೀಸ್ ಎನಿಮಲ್ ರೆಸ್ಕ್ಯೂ"ಎಂ ಬ ಹೆಸರಿನಲ್ಲಿ ಪ್ರಾಣಿ ಸಂರಕ್ಷಣಾ ಕೇಂದ್ರಕ್ಕೆ ಜನ್ಮಕೊಟ್ಟರು. ಇದೀಗ ಅವರ ಶ್ರಮದಿಂದ ತಬ್ಬಲಿ ಜೀವಿಗಳಿಗೊಂದು ಆಶ್ರಯ ಸಿಕ್ಕಿದೆ.

ಇದನ್ನು ಓದಿ: ಪಾರಿವಾಳಗಳ ಪಾಲಿಗೆ ಅನ್ನದಾತ- ಪಕ್ಷಿ ಸಂಕುಲವನ್ನು ಕಾಪಾಡುವ ಸಂರಕ್ಷಕ

ಬೀದಿ ನಾಯಿಗಳೇ ಟಾರ್ಗೆಟ್

ಚಾರ್ಲೀಸ್​ ಎನಿಮಲ್​​ ರೆಸ್ಕ್ಯೂ ಕೇರ್​ನಲ್ಲಿ ನಾಯಿ, ಬೆಕ್ಕು, ಹಂದಿ, ಮೊಲ, ಹೀಗೆ ಹಲವು ವಿವಿಧ ಪ್ರಾಣಿಗಳು ಇವೆ. ಬೀದಿಗಳಲ್ಲಿ ಅನಾರೋಗ್ಯದಿಂದ ಬಿದ್ದಿರುವ ಶ್ವಾನಗಳನ್ನು ತಂದು ಚಿಕಿತ್ಸೆನೀಡಲಾಗುತ್ತದೆ. ಶೇಕಡಾ100ರಷ್ಟು ದೈಹಿಕವಾಗಿ ಫಿಟ್ ಆದ ಮೇಲೆ ಅವುಗಳನ್ನು ಅಗತ್ಯ ಸ್ಥಳಗಳಿಗೆ ಬಿಡಲಾಗುತ್ತದೆ. ಆದರೆ, ಅಪಘಾತವಾಗಿ ಕಾಲುಗಳನ್ನು ಕಳೆದುಕೊಂಡ, ದೃಷ್ಟಿ ಕಳೆದುಕೊಂಡ, ದೈಹಿಕವಾಗಿ ಫಿಟ್ನೆಸ್ ಇಲ್ಲದ ಪ್ರಾಣಿಗಳನ್ನು ಕೇಂದ್ರದಲ್ಲಿಯೇ ಸಾಕಲಾಗುತ್ತದೆ. ಪ್ರತಿದಿನವೂ ಶ್ವಾನಗಳನ್ನು ತಂದು ಚಿಕಿತ್ಸೆನೀಡಲಾಗುತ್ತದೆ. ತಿಂಗಳಲ್ಲಿ ಸುಮಾರು 100 ಶ್ವಾನಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. 

"ರಕ್ಷಣಾ ಕೇಂದ್ರ ಆರಂಭವಾದ ಮೇಲೆ ಸುಮಾರು 10 ಸಾವಿರಕ್ಕೂಅಧಿಕ ಪ್ರಾಣಿಗಳಿಗೆ ಚಿಕಿತ್ಸೆ ನೀಡಿದ್ದೇವೆ. ಪ್ರತಿದಿನವೂ ಇಲ್ಲಿಗೆ ಕರೆತರುವ ಪ್ರಾಣಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಾಣಿಗಳನ್ನು ರಕ್ಷಣೆ ಮಾಡುವುದು ನಮ್ಮ ಆದ್ಯ ಕರ್ತವ್ಯ"
 - ಡಾ.ಲೋಹಿತ್, ಚಾರ್ಲೀಸ್​ ಎನಿಮಲ್​ ರೆಸ್ಕ್ಯೂ ಸೆಂಟರ್​ ಜಕ್ಕೂರು

ವಿರಾಟ್‌ ಕೊಹ್ಲಿ ಭೇಟಿಯಿಂದ ಫುಲ್​ ಸುದ್ದಿ

ಈ ಚಾರ್ಲೀಸ್ ಎನಿಮಲ್ ರೆಸ್ಕ್ಯೂಗೆ ಇತ್ತೀಚೆಗೆ ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಭೇಟಿ ನೀಡಿದ್ದರು. ಇಲ್ಲಿಗೆ ಬಂದು ಸುಮಾರು ಒಂದು ಗಂಟೆ ಕಾಲ ಪ್ರಾಣಿಗಳೊಂದಿಗೆ ಕಳೆದರು. ಕಾಲು ಕಳೆದುಕೊಂಡ ನಾಯಿಗಳನ್ನು, ಗಾಯಗೊಂಡ ಬೆಕ್ಕುಗಳನ್ನು ನೋಡಿ ಅವುಗಳ ಹಿಂದಿನ ಕತೆಗಳನ್ನು ಕೇಳಿದರು. ಕರುಳು ನೋವನಿಂದ ನರಳುತ್ತಿದ್ದ 15ನಾಯಿಗಳನ್ನು ಮುದ್ದಾಡುತ್ತಾ, ಇವುಗಳ ಚಿಕಿತ್ಸೆಗೆ ಎಷ್ಟು ವೆಚ್ಚವಾಗುತ್ತದೋ, ಅದನ್ನು ಭರಿಸುತ್ತೇನೆ ಎಂದು ಭರವಸೆ ನೀಡಿ ಹೋಗಿದ್ದಾರೆ. 

" ಬೀದಿ ನಾಯಿಗಳಿಗೆ ಒಳಿತಾಗಲಿ ಎಂದು ಇದನ್ನು ಆರಂಭಿಸಿದೆವು. ವಿರಾಟ್ ಕೊಹ್ಲಿ ಭೇಟಿ ನೀಡಿದ ಮೇಲೆ ಪರಿಸ್ಥಿತಿಯೇ ಬದಲಾಗಿದೆ. ಅವರು ಅಷ್ಟು ದೊಡ್ಡ ಸ್ಟಾರ್​ ಆದರೂ ಇಲ್ಲಿನ ಪ್ರಾಣಿಗಳನ್ನು ಪ್ರೀತಿಯಿಂದ ನೋಡಿ, ಅವುಗಳ ಯೋಗಕ್ಷೇಮ, ವಿಚಾರಿಸಿದ್ದಾರೆ. ಈ ಬೆಳವಣಿಗೆಯ ನಂತರ ಈ ರೆಸ್ಕ್ಯೂ ಸೆಂಟರ್​ಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚುತ್ತಿದ್ದು, ಪ್ರಾಣಿಗಳ ಚಿಕಿತ್ಸೆಗೂ ಹಲವರು ನೆರವಾಗುತ್ತಿದ್ದಾರೆ."
- ಡಾ. ಲೋಹಿತ್, ಚಾರ್ಲೀಸ್ ಎನಿಮಲ್ ರೆಸ್ಕ್ಯೂ ಸೆಂಟರ್ , ಜಕ್ಕೂರು

ವಿರಾಟ್ ಕೊಹ್ಲಿಗೆ ಮೊದಲಿನಿಂದಲೂ ಶ್ವಾನಗಳ ಮೇಲೆ ಹೆಚ್ಚು ಪ್ರೀತಿ. ಕೊಹ್ಲಿಯ ಮನೆಯಲ್ಲಿ "ಬ್ರೂನೋ' ಎಂಬ ಶ್ವಾನವಿದೆ. ಅದಕ್ಕೆ ಮುತ್ತಿಕ್ಕಿಯೇ, ಅವರು ಹೊರಗೆ ಬ್ಯಾಟ್ ಹಿಡಿದು ಹೊರಡುತ್ತಾರೆ. ಸಮಯ ಸಿಕ್ಕಾಗಲೆಲ್ಲ ಅದರೊಂದಿಗೆ ಆಟ ಆಡುತ್ತಾರೆ. ಕೊಹ್ಲಿ ಬ್ರೂನೋ ಮಾತ್ರವಲ್ಲ, ಸ್ಟೇಡಿಯಂಗೆ ಬರುವ ಭದ್ರತಾ ದಳದ ನಾಯಿಗಳ ಮೈಯನ್ನೂ ಸವರುತ್ತಾರೆ. ಎಷ್ಟೋ ಸಲ ಚಿನ್ನಸ್ವಾಮಿ ಸ್ಟೇಡಿಯಂನೊಳಗೆ ಬೀದಿನಾಯಿಗಳು ನುಗ್ಗಿದಾಗ, ಅವುಗಳನ್ನು ಪ್ರೀತಿಯಿಂದ ಕಂಡಿದ್ದಾರೆ. ಈ ಪ್ರಾಣಿಪ್ರೀತಿಯೇ ಅವರಿಗೆ ಜಕ್ಕೂರಿನ ಪ್ರಾಣಿ ರಕ್ಷಣಾ ಕೇಂದ್ರಕ್ಕೆ ಭೇಟಿ ನೀಡಲು ಪ್ರೇರಣೆಯಾಗಿತ್ತು.

ನೀವೂ ದತ್ತು ತೆಗೆದೊಳ್ಳ ಬಹುದು

ಪ್ರಾಣಿಗಳ ಮೇಲೆ ನಿಮಗೂ ಪ್ರೀತಿ, ಕಾಳಜಿ ಇದ್ದರೆ ಇಲ್ಲಿನ ದತ್ತು ಕಾರ್ಯಕ್ಕೆ ನೀವೂ ಕೈಜೋಡಿಸಬಹುದು. ಅನಾಥ ಶ್ವಾನ, ಬೆಕ್ಕಿನ ಅನಾರೋಗ್ಯಕ್ಕೆ ನಿಮ್ಮಮನಸ್ಸು ಕರಗಿದರೆ ಅವುಗಳನ್ನು ದತ್ತು ತೆಗೆದುಕೊಂಡು, ಚಿಕಿತ್ಸಾ ವೆಚ್ಚ ಭರಿಸಬಹುದು. ಗಾಯಗೊಂಡ, ದೃಷ್ಟಿ ಕಳೆದುಕೊಂಡ, ಅನಾರೋಗ್ಯಕ್ಕೆ ತುತ್ತಾದ,ಅಪಘಾತದಿಂದ ಕಾಲುಗಳನ್ನು ಕಳೆದುಕೊಂಡ ಪ್ರಾಣಿಗಳಿಗೆ ಇಲ್ಲಿ ಆಶ್ರಯ ನೀಡಲಾಗಿದೆ. ದತ್ತು ತೆಗೆದುಕೊಂಡ ನಂತರ ಆಗಾಗ್ಗೆ ಬಂದು, ಆ ಪ್ರಾಣಿಗಳ ಜೊತೆ ಸಮಯ ಕಳೆಯಬಹುದು. ಅಷ್ಟೇ ಅಲ್ಲ, ನಿಮಗೆ ಇಷ್ಟವಾದ ಶ್ವಾನವನ್ನು ಮನೆಗೆ ತೆಗೆದುಕೊಂಡು ಹೋಗಲೂ ಅವಕಾಶವಿದೆ. ಆದರೆ, ನೀವು ಆ ಪ್ರಾಣಿಯನ್ನು ಪ್ರೀತಿಯಿಂದ ಸಾಕುತ್ತೀರಿ ಎನ್ನುವ ಖಚಿತ ಭರವಸೆ ಇಲ್ಲಿನ ಸಂರಕ್ಷಣಾ ಕೇಂದ್ರಕ್ಕೆ ಸಿಕ್ಕಿದ ಮೇಲೆಯೇ ನಿಮಗೆ ಪ್ರಾಣಿಯನ್ನು ನೀಡಲಾಗುತ್ತದೆ.

ಇದನ್ನು ಓದಿ:

1. ಅಜ್ಜಿ ಕಥೆಗೆ ಸರಕಾರಿ ಆರ್ಡರ್..!

2. ಸ್ಟಾರ್ಟ್​ಅಪ್​ ಯಶಸ್ಸಿಗೆ ಏನೇನು ಮುಖ್ಯ..?

3. ಫೇಸ್​ಬುಕ್​, ಇನ್ಸ್ಟಾಗ್ರಾಂನಲ್ಲಿ ಯುವ ಮನಸ್ಸುಗಳ ಖದರ್​- ಡಬ್​ಸ್ಮಾಶ್​ನಲ್ಲಿ ಇವರು ಸೂಪರ್​..!