ಏಳು ಗುಡ್ಡಗಳನ್ನು ಕಡಿದು ರಸ್ತೆ ನಿರ್ಮಿಸಿದ ‘ಭಾಪ್’ಕರ್

ರವಿ ಎನ್​.ಎಸ್​.

ಏಳು ಗುಡ್ಡಗಳನ್ನು ಕಡಿದು ರಸ್ತೆ ನಿರ್ಮಿಸಿದ ‘ಭಾಪ್’ಕರ್

Sunday February 21, 2016,

2 min Read

ಮೌಂಟೆನ್ ಮ್ಯಾನ್ ಎಂದ ಕೂಡಲೇ ಕಣ್ಣಮುಂದೆ ಬರುವ ದೃಶ್ಯ ದಶರಥ್ ಮಾಂಜಿಯದು. 3 ದಶಕಗಳ ಕಾಲ ಗುಡ್ಡ ಕಡಿದು ರಸ್ತೆ ನಿರ್ಮಿಸಿದ ಅತ್ಯಂತ ವಿಭಿನ್ನ ಮನುಷ್ಯ ದಶರಥ್ ಮಾಂಜಿ. ಅವರ ಚಿತ್ರ ಬಿಡುಗಡೆಯಾದ ನಂತರ, ನವಾಜುದ್ದಿನ್ ಸಿದ್ಧಕಿ ಮಾಂಜಿ ಪಾತ್ರಕ್ಕೆ ಜೀವ ತುಂಬಿದ್ದು ನೋಡಿ ಈಡೀ ವಿಶ್ವವೇ ಆ ಮಹಾತ್ಮನಿಗೆ ತಲೆಬಾಗಿತ್ತು. ಅವರ ಸಾಧನೆ ಕೂಡ ಮೈನವಿರೇಳಿಸುವಂತಹದು. ದಶರಥ್ ಮಾಂಝಿ ಎಂಬ ಬೆಟ್ಟದ ಕತೆ ಬಾಲಿವುಡ್ ಅಂಗಳದಿಂದ ವಿಶ್ವಾದ್ಯಂತ ತೆರೆಗೆ ಅಪ್ಪಳಿಸಿತು. ಆದರೆ ಮಹಾರಾಷ್ಟ್ರದ ಅಹಮದ್ ನಗರ ಜೆಲ್ಲೆಯಲ್ಲೊರ್ವ ಏಳು ಬೆಟ್ಟಗಳನ್ನು ಕರಗಿಸಿ ತಮ್ಮೂರಿಗೆ ರಸ್ತೆ ಮಾಡಿಕೊಂಡಿದ್ದಾರೆ. ಮಾಂಜಿಯನ್ನು ಮೀರಿಸುವಂತಹ ಕೆಲಸ ಮಾಡಿದ್ದಾರೆ ಈ ಭಾಪ್ಕರ್.

image


ಭಾರತದಲ್ಲೆ ಮತ್ತೊಬ್ಬ ಮೌಂಟೆನ್ ಮ್ಯಾನ್ ಸಾಧನೆ ಬೆಳಕಿಗೆ ಬಂದಿದೆ. ಅಹಮದ್ ನಗರ ಜಿಲ್ಲೆಯ ರಾಜಾರಾಂ ಭಾಪ್ಕರ್ ಮಾಂಜಿಯಂತೆ ಬೆಟ್ಟಗಳನ್ನು ಬಗೆದು ತನ್ನೂರಿಗೆ ರಸ್ತೆ ಭಾಗ್ಯ ಕರುಣಿಸಿದ್ದಾರೆ. ಗುಂಡೆಗಾಂವ್ನಲ್ಲಿ ಶಿಕ್ಷಕನಾಗಿದ್ದ ಭಾಪ್ಕರ್, ಬರೋಬ್ಬರಿ 57 ವರ್ಷಗಳ ಕಾಲ ನಿರಂತರವಾಗಿ 7 ಗುಡ್ಡಗಳನ್ನು ಕಡಿದು ತಮ್ಮೂರಿಗೆ 40 ಕಿ.ಮೀ. ದೂರದ ರಸ್ತೆ ನಿರ್ಮಿಸಿದ್ದಾರೆ. ಸ್ಥಳೀಯರಿಂದ ಭಾಪ್‍ಕರ್ ಗುರೂಜಿ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುತ್ತಾರೆ. ರಾಜಾರಾಂ ಭಾಪ್‍ಕರ್, ಬಿಳಿ ಅಂಗಿ, ಪೈಜಾಮ, ತಲೆಯ ಮೇಲೊಂದು ಗಾಂಧಿ ಟೊಪ್ಪಿ ತೊಟ್ಟ ಸಾದಾ-ಸೀದಾ ವ್ಯಕ್ತಿ. ಆದರೆ, ಆ ಸರಳತೆಯ ಒಳಗೆ ಸಾಲು ಸಾಲು ಬೆಟ್ಟಗಳನ್ನೇ ಕರಗಸಿದ ಅಸೀಮ ದೃಢತೆ ಮತ್ತು ಕಠಿಣ ಪರಿಶ್ರಮ ಅಡಗಿದೆ. ಎಂದರೆ ಎಂತವರು ಬೆರಗಾಗಬೇಕು ಹಾಗಿದೆ ಇವರ ಕಥೆ.

image


ಭಾರತಕ್ಕೆ ಸ್ವಾತಂತ್ರ್ಯ ಬಂದ ಹೊತ್ತಿಗೆ ಗುಂಡೆಗಾಂವ್ಗೆ ಸರಿಯಾದ ಕಾಲುದಾರಿ ಇರಲಿಲ್ಲ. ಭಾಪ್‍ಕರ್, ಗುಜರಾತಿ ಭಾಷೆಯಲ್ಲಿ ಕೇವಲ ಏಳನೇ ತರಗತಿವರೆಗೆ ಕಲಿತಿದ್ದಾರೆ. 1957ರಿಂದ 1991ರವರೆಗೆ ಕೋಲೆಗಾಂವ್​ನ ಜಿಲ್ಲಾ ಪರಿಷತ್ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಆದರೆ, ಗುಂಡೆಗಾಂವ್ನಿಂದ ಕೋಲೆಗಾಂವ್​ಗೆ ಹೋಗಲು ಅಲ್ಲಿನ ಜನ ಮೂರು ಹಳ್ಳಿಗಳನ್ನು ದಾಟಿ ಹೋಗಬೇಕಿತ್ತು. 700 ಮೀ. ಎತ್ತರದ ಬೆಟ್ಟಗಳನ್ನು ಬಗೆದು ರಸ್ತೆ ನಿರ್ಮಿಸುವ ಮೂಲಕ ಗ್ರಾಮಕ್ಕೆ ಸೂಕ್ತ ಸಂಪರ್ಕ ವ್ಯವಸ್ಥೆ ಮಾಡುವಂತೆ ಸರ್ಕಾರಗಳಿಗೆ ಹಲವು ಸಲ ಮನವಿ ಮಾಡಿದ್ದನ್ನು ಇದೀಗ ನೆನೆಪಿಸಿಕೊಳ್ಳುವ ಭಾಪ್ಕರ್, ಆಡಳಿತ ವ್ಯವಸ್ಥೆಯ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಗದೇ ಬೇಸತ್ತು, ಅಂತಿಮವಾಗಿ ತಾವೇ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾಗಿ ಹೇಳುತ್ತಾರೆ.

image


1957ರಲ್ಲಿ ಹಠಕ್ಕೆ ಬಿದ್ದು ಆರಂಭಿಸಿದ ಕೆಲಸ ಇವತ್ತು ಒಟ್ಟು 40 ಕಿ.ಮೀ. ಉದ್ದದ ಏಳು ರಸ್ತೆಗಳ ನಿರ್ಮಾಣದ ಮೂಲಕ ತನ್ನೂರನ್ನು ನೆರೆಯ ಹಳ್ಳಿಗೆ ಸಂಪರ್ಕಿಸಲು ಕಾರಣವಾಗಿದೆ. ಈ ಮೊದಲು ಕೋಲೆಗಾಂವ್‍ನಿಂದ ಡಿಯುಲ್ಗಾಂವ್ಗಿದ್ದ 29 ಕಿ.ಮೀ. ಅಂತರ ಇದೀಗ ಕೇವಲ 10 ಕಿ.ಮೀಗೆ ಕುಸಿದಿದೆ. ಬೆಟ್ಟ ಕಡಿದು ಮಾಡಿದ ಕಚ್ಛಾ ರಸ್ತೆ 2 ಊರುಗಳನ್ನು ಸಮೀಪಿಸಿದೆ. ರಸ್ತೆ ನಿರ್ಮಾಣಕ್ಕೆ ತನ್ನೊಂದಿಗೆ ಕೈಜೋಡಿಸಿದವರಿಗೆ ತಮ್ಮ ಸ್ವಂತ ಹಣದಿಂದ ಕೂಲಿ ಕೊಟ್ಟಿರುವ ಭಾಪ್ಕರ್, ‘ನನ್ನ ಅರ್ಧ ಸಂಬಳವನ್ನು ರಸ್ತೆ ಕೆಲಸಕ್ಕಾಗಿಯೇ ವೆಚ್ಚ ಮಾಡುತ್ತಿದ್ದೆ. ಇದಕ್ಕಾಗಿ ಸರ್ಕಾರದಿಂದ ಒಂದೇ ಒಂದು ನಯಾ ಪೈಸೆಯನ್ನೂ ಪಡೆದಿಲ್ಲ’ ಎಂದು ಹೇಳುವಾಗ ಅವರ ಕಣ್ಣಲ್ಲಿ ಧನ್ಯತೆಯ ಭಾವ, ಕಷ್ಟಕ್ಕೆ ಸಿಕ್ಕ ಪ್ರತಿಫಲ ಮಿಂಚುತ್ತದೆ.

1968ರಲ್ಲಿ ಇಲ್ಲಿದ್ದ ಕಾಲುದಾರಿ ಸೈಕಲ್ ಓಡಿಸಲು ಸಹ ಯೋಗ್ಯವಾಗಿರಲಿಲ್ಲ. ಆದರೆ, ಈಗ ಭಾರೀ ವಾಹನಗಳೂ ನಿತ್ಯ ಓಡಾಡುತ್ತವೆ ಎಂದು ಗ್ರಾಮಸ್ಥರು ಭಾಪ್‍ಕರ್ ಅವರ ಸಾಧನೆಗೆ ಹೆಮ್ಮೆಪಡುತ್ತಾರೆ. 1997ರಲ್ಲೇ ರಸ್ತೆ ನಿರ್ಮಾಣವನ್ನು ಪೂರ್ಣಗೊಳಿಸಿದ ಭಾಪ್‍ಕರ್, ತಮ್ಮ ಅಷ್ಟೂ ಪಿಂಚಣಿ ಹಾಗೂ ನಿವೃತ್ತಿನಂತರದ ಆದಾಯವನ್ನು ರಸ್ತೆಗಾಗಿಯೇ ವ್ಯಯಿಸಿದ್ದಾರೆ. ಗುದ್ದಲಿ, ಹಾರೆಗಳೊಂದಿಗೆ ಬೆಟ್ಟವನ್ನು ಕರಗಿಸಲು ಜೆಸಿಬಿಯಂತಹ ಯಂತ್ರಗಳನ್ನೂ ಅವರು ಬಾಡಿಗೆ ಪಡೆದಿದ್ದರು. ಬೇಕಾಬಿಟ್ಟಿಯಾಗಿ ಇವರು ರಸ್ತೆ ನಿರ್ಮಿಸಲಿಲ್ಲ. ಸರ್ಕಾರ ನಿರ್ಮಿಸಿದ್ರೆ, ಅಥವಾ ಒಬ್ಬ ಇಂಜಿನಿಯರ್ ನಿರ್ಮಿಸಿದ ರಸ್ತೆ ಹೇಗೆ ಇರುತ್ತೋ ಅಂತಹ ರಸ್ತೆಯನ್ನು ನಿರ್ಮಿಸಿದ್ರು.

image


ಹೊರಜಗತ್ತಿನಿಂದ ದೂರವೇ ಉಳಿದಿದ್ದ ಹಳ್ಳಿಯೊಂದು ಬೆಟ್ಟ ಕರಗಿಸಿ ರಸ್ತೆ ಕಂಡಿದೆ. ಮಹಾರಾಷ್ಟ್ರದ ಈ `ಮಾಂಜಿ'ಯ ಕಾರಣದಿಂದಾಗಿ ಇಂದು ಈ ಗ್ರಾಮದ ಜನ ಅಭಿವೃದ್ಧಿಯ ಪಥದಲ್ಲಿ ಸಾಗಿದೆ. ಒಂದು ರಸ್ತೆ ನಿರ್ಮಾಣದಿಂದ ಒಂದು ಗ್ರಾಮದ ಭವಿಷ್ಯವನ್ನೇ ಬದಲಿಸಬಹುದು ಎಂಬುದನ್ನು, ರಾಜರಾಂ ತೋರಿಸಿಕೊಟ್ಟಿದ್ದಾರೆ. ಜಗತ್ತೇ ಬೆರಗುಗೊಳ್ಳುವಂತಹ ಸಾಧನೆ ಮಾಡಿದ್ದಾರೆ. ಹೊರಜಗತ್ತಿನ ಸಂಪರ್ಕ ತಂದಕೊಡುವ ಮೂಲಕ ತಮ್ಮೂರಿಗೆ ಹೊಸ ಬೆಳಕು, ಹೊಸ ಬದುಕು ಕಲ್ಪಿಸಿದ್ದಾರೆ.