2013ರ ಮಾರುಕಟ್ಟೆಯ ವಿದ್ಯಮಾನ ಅಂದಾಜಿಸಿ ಕಲಾರಿ ಕ್ಯಾಪಿಟಲ್ ಆರಂಭಿಸಿದ್ದ ಕುಮಾರ್ ಶಿರಲಗಿ

ಟೀಮ್​​ ವೈ.ಎಸ್​​.

2013ರ ಮಾರುಕಟ್ಟೆಯ ವಿದ್ಯಮಾನ ಅಂದಾಜಿಸಿ ಕಲಾರಿ ಕ್ಯಾಪಿಟಲ್ ಆರಂಭಿಸಿದ್ದ ಕುಮಾರ್ ಶಿರಲಗಿ

Sunday October 25, 2015,

4 min Read

ಮಾರುಕಟ್ಟೆಯ ಏರಿಳಿತಗಳ ವಿದ್ಯಮಾನವನ್ನು ಸೂಕ್ಷ್ಮವಾಗಿ ಗಮನಿಸಿ ಉದ್ಯಮವನ್ನಾರಂಭಿಸಿದ್ದ ಉದ್ಯಮಿಯ ಯಶಸ್ಸಿನ ಕಥೆಯಿದು. 2013ರಲ್ಲಿ ಭಾರತೀಯ ಮಾರುಕಟ್ಟೆ ಹೇಗಿತ್ತು ಅಂತ ಅಂದಾಜಿಸಿ ಹೊಸ ಉದ್ಯಮವನ್ನು ಪ್ರಾರಂಭಿಸಿದವರು ಕುಮಾರ್ ಶಿರಲಗಿ. ಯಾವುದೇ ಉದ್ಯಮಿಯಾದರೂ ಮಾಡುವಂತೆ ಕುಮಾರ್ 2013ರ ವ್ಯಾವಹಾರಿಕ ಪರಿಸರ ಹಾಗೂ ಮಾರುಕಟ್ಟೆಯ ವಿದ್ಯಮಾನವನ್ನು ಸಮೀಕ್ಷೆ ನಡೆಸಿದ್ದರು. ಆ ಬಳಿಕವಷ್ಟೇ ಭಾರತೀಯ ಮಾರುಕಟ್ಟೆಯಲ್ಲಿ ಹಣ ಹೂಡಬಹುದಾದರೆ ಸಂದರ್ಭ ಸೂಕ್ತವಾಗಿದೆಯೇ ಎಂದು ಪರಾಮರ್ಶಿಸಿದ್ದರು. ಆಗ ಮೊಬೈಲ್, ಆರೋಗ್ಯ, ಶಿಕ್ಷಣ, ಇ-ಕಾಮರ್ಸ್ ಮುಂತಾದ ಕ್ಷೇತ್ರಗಳಲ್ಲಿ ಹೂಡಿಕೆಗೆ ಪೂರಕ ಸನ್ನಿವೇಶ ಕಾಣಿಸಿಕೊಂಡಿತ್ತು. ಆಗ ಶುರುವಾಗಿದ್ದೇ ಕಲಾರಿ ಕ್ಯಾಪಿಟಲ್. ಕಲಾರಿ ಕ್ಯಾಪಿಟಲ್​​ನ ಸುಮಾರು 160 ಮಿಲಿಯನ್ ಡಾಲರ್ ಹೂಡಿಕೆಯಲ್ಲಿ ಮೂರನೆಯ ಒಂದು ಭಾಗದಷ್ಟು ಕುಮಾರ್​​ಗೆ ಸೇರಿದ್ದಾಗಿದೆ.

ಕುಮಾರ್​ರಿಗೆ ಇದೇನು ಹೊಸ ಉದ್ಯಮವಾಗಿರಲಿಲ್ಲ. ಈ ಹಿಂದೆ ಅವರು ಸಾಕಷ್ಟು ಬಂಡವಾಳಶಾಹಿ ಸಂಸ್ಥೆಗಳಲ್ಲಿ ಕೆಲಸಮಾಡಿದ ಅನುಭವ ಹೊಂದಿದ್ದರು. ಇಂಟೆಲ್ ಕ್ಯಾಪಿಟಲ್​​ನೊಂದಿಗೆ, ಎನ್ಐಐಟಿ, ಸುಬೆಕ್ಸ್ ಸಿಸ್ಟಂ, ಫ್ಯೂಚರ್​​ಸಾಫ್ಟ್, ಆರ್-ಸಿಸ್ಟಮ್ಸ್​​​, ಇಂಡಿಯಾ ಇನ್ಫೋಲೈನ್ ಮುಂತಾದ ಕಂಪೆನಿಗಳಲ್ಲಿ ಕುಮಾರ್ರ ಹೆಜ್ಜೆ ಗುರುತಿದೆ.

image


ಕುಮಾರ್​​ರಿಗೆ ಕಾರ್ಪೊರೇಟ್ ವಲಯಗಳಲ್ಲಿ ಮಹತ್ತರ ಜವಬ್ದಾರಿ ನಿರ್ವಹಿಸಿದ ಹಾಗೂ ಒಬ್ಬ ಯಶಸ್ವಿ ಉದ್ಯಮಿಯಾಗಿ ಸಂಸ್ಥೆಯ ಜವಬ್ದಾರಿ ಹೊತ್ತ ಅನುಭವವಿದೆ. ಹಾಗಾಗಿ ಭಾರತೀಯ ವ್ಯಾವಹಾರಿಕ ವಾತಾವರಣದಲ್ಲಿ ಆರಂಭಿಕ ಸಂಸ್ಥೆಗಳನ್ನು ಹೇಗೆ ಕಟ್ಟಿ ಬೆಳೆಸಬಹುದು ಅನ್ನುವ ಸಮರ್ಪಕ ಅಂದಾಜಿದೆ. ಕುಮಾರ್ ತಮ್ಮ ಕಲಾರಿ ಕ್ಯಾಪಿಟಲ್ ಸಂಸ್ಥೆಗೆ ಹೂಡಿಕೆ ಮಾಡುವ ಸಂಸ್ಥೆಗಳ ಬಗ್ಗೆ ಸಮಗ್ರವಾದ ವಿವರಣೆ ಸಿದ್ಧಪಡಿಸಿಕೊಂಡಿದ್ದರು. ಅದಕ್ಕೂ ಮೊದಲೇ ಅಂದರೆ 2013ರಲ್ಲಿ ಔದ್ಯಮಿಕ ವಾತಾವರಣದ ಏರಿಳಿತಗಳನ್ನು ಸ್ಥೂಲವಾಗಿ ಗುರುತಿಸಿದ್ದರು.

ಹೂಡಿಕೆಗಿಂತ ಮುಂಚಿನ ಸಿದ್ಧತೆ:

ಕುಮಾರ್ ಅಂದಿನ ಕಲಾರಿ ಸಂಸ್ಥೆಯ ಹೂಡಿಕೆಯ ಬಗ್ಗೆ ಮಾಹಿತಿ ನೀಡುತ್ತಾ, ಆ ಸಂದರ್ಭದಲ್ಲಿ ಹಿಂದಿನ ಮಾರುಕಟ್ಟೆಯ ಅಧ್ಯಯನದ ಪ್ರಕಾರ 3ರಿಂದ 5 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದೆವು. ಬಳಿಕ ಮುಂದಿನ ಹಂತದಲ್ಲಿ ಸಾಫ್ಟ್​​​ವೇರ್ ಉದ್ಯಮ, ಐಟಿ, ಐಟಿಇಎಸ್, ಮೊಬೈಲ್, ಹೆಲ್ತ್​​ಕೇರ್, ಶಿಕ್ಷಣ ಮುಂತಾದ ಕ್ಷೇತ್ರದಲ್ಲಿ ಇನ್ನಷ್ಟು ಹೆಚ್ಚಿನ ಹೂಡಿಕೆ ವಿಸ್ತರಿಸಲು ನಿರ್ಧರಿಸಿದೆವು ಅಂದಿದ್ದಾರೆ.

ಪ್ರಾರಂಭಿಕ 15ರಿಂದ 18 ತಿಂಗಳ ಕಾರ್ಯಾಚರಣೆ ನಿಜಕ್ಕೂ ಕಲಾರಿ ಕ್ಯಾಪಿಟಲ್​​ಗೆ ಅತೀ ದೊಡ್ಡ ಸವಾಲಾಗಿತ್ತು. ಕುಮಾರ್ ಹೇಳುವಂತೆ ಅವರಿಗೆ ಈ ಅವಧಿಯಲ್ಲಿ ಸುಮಾರು 8-9 ಹೂಡಿಕೆಗಳು ದೊರೆತವು. ಅದಾಗಿ ಸುಮಾರು 2 ವರ್ಷಗಳಾಗುತ್ತಾ ಬಂದಿವೆ. ಈಗ ಕುಮಾರ್ ತಮ್ಮ ಸಂಸ್ಥೆಯ ಲಾಭಗಳಿಕೆಯನ್ನು ಅಂದಾಜಿಸುತ್ತಿದ್ದಾರೆ.

ಈ ಆರಂಭಿಕ ದಿನಗಳು ಕಲಾರಿಯಾ ಕ್ಯಾಪಿಟಲ್​​ಗೆ ಸಾಕಷ್ಟು ಏರಿಳಿತಗಳನ್ನು ಕಾಣಿಸಿತ್ತು. ಈ ಸಮಯದಲ್ಲಿ ಹೂಡಿಕೆ ಮಾಡುವ ಬಹುತೇಕ ಹಣ ವಾಪಾಸ್ ಬರುವ ನಿರೀಕ್ಷೆಯೇ ಇರದಷ್ಟು ಸಂಕೀರ್ಣವಾದ ಮಾರುಕಟ್ಟೆ ಇದರದ್ದಾಗಿತ್ತು. ಆದರೆ ಕುಮಾರ್ ಸಂಸ್ಥೆಗೆ ಹಣ ಹೂಡಿದ್ದ ಕಂಪೆನಿಗಳು ಮಾರುಕಟ್ಟೆಯಲ್ಲಿ ಅತೀ ದೊಡ್ಡ ಸೆಳೆತ ಹೊಂದಿದ್ದ ಕಾರಣ ಹಾಗೂ ಅದಾಗಲೆ ಆ ಸಂಸ್ಥೆಗಳು ಲಾಭದ ಗಡಿಯನ್ನು ದಾಟಿ ಬಹಳಷ್ಟು ಮುಂದೆ ಹೋಗಿದ್ದ ಕಾರಣ ಹೆಚ್ಚಿನ ಹಾನಿಯಾಗಲಿಲ್ಲ. ಈ ಕ್ಲಿಷ್ಟಕರ ಅವಧಿಯನ್ನು ದಾಟಿದ ಕಲಾರಿ ಕ್ಯಾಪಿಟಲ್ ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ನೆಲೆನಿಲ್ಲಲು ಬೇಕಿದ್ದ ಆತ್ಮವಿಶ್ವಾಸ ಗಳಿಸಿಕೊಂಡಿತು.

ಇ-ಕಾಮರ್ಸ್ ಆಕ್ರಮಿಸಿಕೊಂಡಿದ್ದು ಅತಿ ಮುಖ್ಯ ಹಂತ

ಅದೇ ವೇಳೆ ಇ-ಕಾಮರ್ಸ್ ನಿಧಾನಗತಿಯಲ್ಲಿ ವೇಗಪಡೆದುಕೊಳ್ಳುತ್ತಿರುವುದನ್ನು ಗಮನಿಸಿದ ಕುಮಾರ್ ಕೂಡಲೇ ಇ-ಕಾಮರ್ಸ್ ಕ್ಷೇತ್ರವನ್ನೂ ತಮ್ಮ ಕಾರ್ಯವ್ಯಾಪ್ತಿಗೆ ಸೇರಿಸಿಕೊಂಡರು. ಹೀಗೆ ಅವಕಾಶಗಳನ್ನು ಕ್ಷಿಪ್ರಗತಿಯಲ್ಲಿ ಆಕ್ರಮಿಸಿಕೊಳ್ಳುವ ಮೂಲಕ ಕುಮಾರ್ ತಮ್ಮ ಸ್ಫರ್ಧಿಗಳಿಗಿಂತ ಒಂದು ಹೆಜ್ಜೆ ಮುಂದಿರೋದಾಗಿ ಸಾಬೀತುಮಾಡಿದರು.

ಒಂದೆಡೆ ಭಾರತೀಯ ಮಾರುಕಟ್ಟೆಯಲ್ಲಿ ಮೊಬೈಲ್ ಮಾರಾಟದ ಭರಾಟೆ ಜೋರಾಗುತ್ತಿತ್ತು ಹಾಗೂ ವಿಎಎಸ್ ಬದಲಿಗೆ ಆ್ಯಪ್ ಮಾರುಕಟ್ಟೆಯಲ್ಲಿ ಸ್ಥಾನ ಪಡೆದುಕೊಳ್ಳುತ್ತಿತ್ತು. ಇದನ್ನು ಗಮನಿಸಿದ ಕುಮಾರ್ ವಿಎಎಸ್ ಕ್ಷೇತ್ರಕ್ಕೆ ಹೂಡಿದ್ದ ಹಣವನ್ನು ಕ್ರಮೇಣ ಮಾಡಿ ಆ ಜಾಗದಲ್ಲಿ ಆ್ಯಪ್ ಖರೀದಿಗೆ ಹೂಡಿಕೆ ಮಾಡಿದರು. ಇದು ಸಾಕಷ್ಟು ಪ್ರಾರಂಭಿಕ ಕಂಪೆನಿಗಳೊಂದಿಗೆ ಕುಮಾರ್ ವ್ಯವಹರಿಸಲು ವೇದಿಕೆ ಕಲ್ಪಿಸಿತು.

ಭಾರತೀಯ ಮಾರುಕಟ್ಟೆಯಲ್ಲಿ ಮೊಬೈಲ್ ಹಾಗೂ ಆ್ಯಪ್​​​ಗಳಿಗೆ ಅತಿ ದೊಡ್ಡ ಬೇಡಿಕೆ ಕಾಣಿಸಿಕೊಳ್ಳುವ ಸಾಧ್ಯತೆ ಗೋಚರಿಸಿತ್ತು. ಆ ವಿಧ್ಯಮಾನವನ್ನು ಗಮನಿಸಿ ತಕ್ಷಣವೇ ಕಾರ್ಯಪ್ರವೃತ್ತರಾದ ಕುಮಾರ್, ಮಾರುಕಟ್ಟೆಯಲ್ಲಿ ಸಾಧ್ಯವಿದ್ದ ಎಲ್ಲಾ ಅವಕಾಶಗಳನ್ನು ಬಾಚಿಕೊಳ್ಳಲು ಮುಂದಾದರು. ಮುಂದೊಂದು ದಿನ ಈ ಕ್ಷೇತ್ರ ದೊಡ್ಡ ಆದಾಯ ಹಾಗೂ ಬ್ರಾಂಡ್ ನೇಮ್ ತಂದುಕೊಡುತ್ತದೆ ಅಂತ 2013ರಲ್ಲಿಯೇ ಕುಮಾರ್ ತರ್ಕಿಸಿದ್ದರು.

ಪ್ರಾರಂಭಿಕ ಹಂತದ ಕಂಪೆನಿಗಳೊಂದಿಗೆ ಕಾರ್ಯಾಚರಣೆಗೆ ಮಾರ್ಗಸೂಚಿ:

ಕುಮಾರ್ ಆರಂಭಿಕ ಸಂಸ್ಥೆಗಳು ಹೀಗೇ ಇರಬೇಕು ಅನ್ನುವ ಕೆಲವು ನಿಯಮಗಳನ್ನು ಇಟ್ಟುಕೊಂಡಿದ್ದಾರೆ. ಉದ್ಯಮವನ್ನು ಆರಂಭಿಸುವ ಸಂಸ್ಥೆಗಳ ಮುಖ್ಯಸ್ಥರು ಕ್ರಿಯಾಶೀಲರಾಗಿರುವುದು ಎಷ್ಟು ಮಖ್ಯವೋ ಅವರಿಗೆ ತಮ್ಮ ಪ್ರಯತ್ನದಲ್ಲಿ ನಿಷ್ಠೆ ಹಾಗೂ ಬದ್ಧತೆ ಇರುವುದೂ ಅಷ್ಟೇ ಮುಖ್ಯ ಅನ್ನುವುದು ಕುಮಾರ್​​ರ ನಿಲುವು. ಅತ್ಯಂತ ಸಮರ್ಥವಾಗಿ ಕಾರ್ಯಾಚರಣೆ ನಡೆಸುವಂತಿರಬೇಕು ಅಥವಾ ಕಾಲಕಾಲಕ್ಕೆ ತಕ್ಕಂತೆ ಹೂಡಿಕೆಯನ್ನು ಹೆಚ್ಚು ಮಾಡಿ ಹೆಚ್ಚುವರಿ ಬಂಡವಾಳ ಹೂಡುವ ತಾಕತ್ತಿರಬೇಕು. ಇವೆರಡೂ ಇರದಿದ್ದರೇ ಆ ಉದ್ಯಮ ಮಾರುಕಟ್ಟೆಯಲ್ಲಿ ಹೆಚ್ಚುಕಾಲ ಬದುಕುವುದಿಲ್ಲ ಅನ್ನುವುದು ಕುಮಾರ್​​ ಅಭಿಪ್ರಾಯ. ಇದರ ಜೊತೆ ಸಂಸ್ಥೆಯ ಕಾರ್ಯಾಚರಣೆಗೆ ಬೇಕಿರುವ ಪರಿಣಿತ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದು ಆಯಾ ಸಂಸ್ಥೆಗಳ ಪ್ರಮುಖ ಕರ್ತವ್ಯ ಅಂತಾರೆ ಕುಮಾರ್.

ಇದನ್ನು ಸ್ವತಃ ಅನುಭವಿಸಿರುವ ಕುಮಾರ್ ಹೇಳುವಂತೆ, ಅನುಭವಿ ಹಾಗೂ ವೃತ್ತಿಪರ ಉದ್ಯೋಗಿಗಳನ್ನು ನೇಮಿಸಿಕೊಂಡ ಕಾರಣ ಸಮರ್ಥಶಾಲಿ ಗ್ರಾಹಕರನ್ನು ಗಳಿಸಿಕೊಳ್ಳಲು ಸಾಧ್ಯವಾಯಿತು. ಕಾಲಾವಧಿ ಸಂಸ್ಥೆಯ ಬೆಳವಣಿಗೆ ಹಾಗೂ ಅಭಿವೃದ್ಧಿಯ ಮಾಪನ ಹಾಗೂ ಸಾಗುವ ಪ್ರತೀ ಹೆಜ್ಜೆಗಳನ್ನು ಎಣಿಸಿಟ್ಟುಕೊಳ್ಳುವುದು ಯಾವುದೇ ವೃತ್ತಿಪರ ಸಂಸ್ಥೆಯ ಯಶಸ್ಸಿಗೆ ಬೇಕಿರುವ ಮೆಟ್ರಿಕ್ಸ್ ಅನ್ನುವುದು ಕುಮಾರ್ ಅಂಬೋಣ.

ಹೂಡಿಕೆ ಮಾಡಿ ಕಲಿತಿದ್ದೇನು?

ಕುಮಾರ್​​ರ ವ್ಯಾವಹಾರಿಕ ಸಂಪರ್ಕ ಸಾಧಿಸುವ ಕಲೆಯ ಬಗ್ಗೆ ಕೇಳಿದಾಗ ಅವರು ಹೀಗೆ ಹೇಳಿಕೊಳ್ಳುತ್ತಾರೆ. ನಿಮಗೆ ಬರುವ ಇ-ಮೇಲ್​​ಗಳನ್ನು ಪ್ರತಿನಿತ್ಯವೂ ಚೆಕ್ ಮಾಡುತ್ತಾ ಹೋಗಿ. ಯಾರೂ ನಿಮಗೆ ಕಳಿಸುವ ಪರಿಚಯದ ಮೇಲ್​​ನಲ್ಲಿ 100 ಪುಟದ ಫೈಲ್ ಇಟ್ಟಿರುವುದಿಲ್ಲ. ಇಲ್ಲಿ ವಿಷಯವೇನೆಂದರೆ, ನೀವು ನಿಮ್ಮ ಬಗ್ಗೆ, ನಿಮ್ಮ ಯೋಜನೆಯ ಬಗ್ಗೆ ಅಥವಾ ಸಂಸ್ಥೆಯ ಕಾರ್ಯಾಚರಣೆಯ ಬಗ್ಗೆ ಮೊದಲ ಸಂವಾದದಲ್ಲಿ ಪೂರ್ತಿಯಾಗಿ ಹೇಳಬೇಕು ಅಂತೇನಿಲ್ಲ. ಹೇಳಬಾರದು ಕೂಡಾ. ಎಷ್ಟು ಅಗತ್ಯವೋ ಅಷ್ಟನ್ನು ಮಾತ್ರ ಅಚ್ಚುಕಟ್ಟಾಗಿ ಹೇಳಿ ಬಂದರೆ ಸಾಕು. ನೀವು ಭೇಟಿಯಾಗುವ ವ್ಯಕ್ತಿ ನಿಮ್ಮನ್ನು ಎರಡನೇ ಭೇಟಿಗೆ ಹುಡುಕಿಕೊಂಡು ಬರಬೇಕು. ನಿಮ್ಮ ಯಾವುದೇ ಯೋಜನೆಯನ್ನಾಗಲಿ ಕ್ರಮೇಣ ಹಂತ ಹಂತವಾಗಿ ವಿವರಿಸಬೇಕು. ಆಗ ಮಾತ್ರ ಹೂಡಿಕೆದಾರರು ನಿಮ್ಮ ಮೇಲೆ ವಿಶ್ವಾಸ ಬೆಳೆಸಿಕೊಳ್ಳಲು ಸಾಧ್ಯ.

ಯಾವುದೇ ಕೆಲಸ ಮಾಡುವ ಮುಂಚೆ ಮಾಡುವ ಕೆಲಸದ ಬಗ್ಗೆ ಸರಿಯಾದ ಅಂದಾಜು ಹಾಗೂ ಪ್ರಜ್ಞೆ ಇರಬೇಕು.ಉದಾಹರಣೆಗೆ ನಿಮ್ಮ ಸಂಸ್ಥೆಗೆ ಈ ವರ್ಷದ ಅಂತ್ಯದೊಳಗೆ 1 ಮಿಲಿಯನ್ ಟಾರ್ಗೆಟ್ ಕೊಟ್ಟರೆ, ಮೊದಲು ಅದು ಡಾಲರ್ ಅಥವಾ ರೂಪಾಯಿ ಅನ್ನುವ ವಿಷಯವನ್ನಾದರೂ ತಿಳಿದುಕೊಳ್ಳಬೇಕು.

ಇವೆಲ್ಲದರ ಜೊತೆ ಕುಮಾರ್ ತಮ್ಮ ಕಲಾರಿ ಸಂಸ್ಥೆಗಿದ್ದ ಮಿತಿಯ ಬಗ್ಗೆಯೂ ವಿವರಿಸಿದ್ದಾರೆ. ಕಲಾರಿ ಕ್ಯಾಪಿಟಲ್​​ಗಿದ್ದ ಗುರಿ 3-5 ಮಿಲಿಯನ್ ಡಾಲರ್ ಹೂಡಿಕೆಯಲ್ಲಿ ಮಾರುಕಟ್ಟೆಯನ್ನು ಸಾಧಿಸಿಕೊಳ್ಳಬೇಕು ಅನ್ನುವುದು. ಹಾಗಾಗಿ ಹೊಸತಾಗಿ ಆರಂಭವಾಗುತ್ತಿದ್ದ ಬಹುತೇಕ ಸಂಸ್ಥೆಗಳಿಗೆ ಕಲಾರಿ ವೇದಿಕೆ ಹಾಕಿಕೊಡಲಿಲ್ಲ. ವೆಂಚರ್​​ಗಳ ವ್ಯಾವಹಾರಿಕ ಮಾದರಿ ಹಾಗೂ ಉತ್ಪನ್ನಗಳನ್ನು ಗಮನಿಸಿ, ಅವು ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯಬಲ್ಲುದಾ ಎಂಬಿತ್ಯಾದಿ ಯೋಚನೆಗಳ ನಂತರವಷ್ಟೇ ಹೂಡಿಕೆ ಮಾಡಲಾಗುತ್ತಿತ್ತು. ಇದು ಕಲಾರಿ ಕ್ಯಾಪಿಟಲ್​​ನ ವಿಶಿಷ್ಟತೆ ಜೊತೆಗೆ ಕುಮಾರ್​​ರ ಡಿಫೆನ್ಸ್ ಗೇಮ್ ಸಹ ಆಗಿತ್ತು.

ಕಲಾರಿ ಕ್ಯಾಪಿಟಲ್ ತಮ್ಮೊಂದಿಗೆ ಗುರುತಿಸಿಕೊಂಡು ವ್ಯವಹರಿಸುತ್ತಿರುವ ಉದ್ಯಮಗಳ ತಂಡವನ್ನು ಸಾಕಷ್ಟು ಗೌರವದಿಂದ ಕಾಣುತ್ತದೆ. ಈ ತಂಡಗಳಿಂದ ನಿರಂತರ ವ್ಯಾವಹಾರಿಕ ಸಂಬಂಧ ಹಾಗೂ ಕಾರ್ಯಾಚರಣೆಯ ಅಗತ್ಯವಿದೆ. ಜೊತೆಗೆ ಇವುಗಳ ವ್ಯಾವಹಾರಿಕ ನೈತಿಕತೆ ಹಾಗೂ ಸೇವೆ ಮಾರುಕಟ್ಟೆಯಲ್ಲಿ ಗ್ರಾಹಕರ ವಿಶ್ವಾಸ ಗಳಿಸಲು ಅತ್ಯಗತ್ಯ. ಇದೆಲ್ಲದರ ಜೊತೆ ಈ ತಂಡಗಳ ಪರಿಶ್ರಮ ಹಾಗೂ ಪರಿಣಿತಿ ಗೌರವಿಸಲೇಬೇಕಾದ ವಿಷಯ ಅಂತಾರೆ ಕುಮಾರ್.

ತಮ್ಮ 2013ರ ಸಮೀಕ್ಷೆ ಹಾಗೂ ಹೂಡಿಕೆಯ ಕಥೆ ಹೇಳಿದ ಕುಮಾರ್, ಕೊನೆಯದಾಗಿ ಯಾವುದೇ ಉದ್ಯಮಿಗಾದರೂ ಈ ಕ್ಷೇತ್ರದಲ್ಲಿ ಯಶಸ್ವಿಯಾಗಿ ವ್ಯವಹರಿಸಲು ಅತ್ಯಂತ ಉನ್ನತವಾದ ವ್ಯಾವಹಾರಿಕ ಪ್ರಜ್ಞೆ ಹಾಗೂ ಸದಾ ದೃಢ ಚಿತ್ತದಿಂದ ಕೆಲಸ ನಿರ್ವಹಿಸಬಲ್ಲ ಮನಸ್ಥಿತಿ ಅತಿ ಮುಖ್ಯ ಅನ್ನುವ ತಮ್ಮ ಬಿಸಿನೆಸ್ ಟಿಪ್ಸ್ ನೀಡಲು ಮರೆಯಲಿಲ್ಲ.