ಜಾನಪದದ ಉಳಿವಿಗಾಗಿ ಸ್ಥಾಪನೆಗೊಂಡಿದೆ ಕನ್ನಡ ಜಾನಪದ ಪರಿಷತ್

ಉಷಾ ಹರೀಶ್​​

ಜಾನಪದದ ಉಳಿವಿಗಾಗಿ ಸ್ಥಾಪನೆಗೊಂಡಿದೆ ಕನ್ನಡ ಜಾನಪದ ಪರಿಷತ್

Saturday April 09, 2016,

3 min Read

ಕರ್ನಾಟಕದಲ್ಲಿ ಜಾನಪದಕ್ಕೆ ಅದರದ್ದೆ ಆದ ಒಂದು ವಿಶಿಷ್ಟ ಸ್ಥಾನವಿದೆ. ನಮ್ಮ ನಾಡಿನ ಯಾವುದೇ ಭಾಗಕ್ಕೆ ಹೋದರೂ ಒ೦ದಲ್ಲ ಒಂದು ರೀತಿಯಲ್ಲಿ ಜಾನಪದದ ಸೊಗಡು ಇದ್ದೇ ಇದೆ. ಆಧರೆ ಆಧುನಿಕತೆಯ ಭರಾಟೆಯಲ್ಲಿ ಈ ಜಾನಪದ ತೆರೆಮರೆಗೆ ಸರಿಯುತ್ತಿದೆ. ತೆರೆಮರೆಗೆ ಸರಿಯುತ್ತಿರುವ ನಮ್ಮ ಜಾನಪದನವನ್ನು ಉಳಿಸಲು ಕೆಲ ಯುವಕರು ಸೇರಿಕೊಂಡು ಕರ್ನಾಟಕ ಜಾನಪದ ಪರಿಷತ್ ಎಂಬ ಸಂಸ್ಥೆ ಸ್ಥಾಪಿಸಿಕೊಂಡು ಆ ಮೂಲಕ ನಮ್ಮ ಜಾನಪದದ ರಕ್ಷಣೆಗೆ ನಿಂತಿದ್ದಾರೆ.

image


ಜಾನಪದ ಎಂದರೆ ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ವಿರುದ್ಧ ಎಂಬ ಭಾವನೆ ಜನರಲ್ಲಿದೆ. ದಾಖಲೀಕರಣದ ಮೂಲಕ ಮುಂದಿನ ಜನಾಂಗಕ್ಕೆ ಕೂಡಿಡುವುದು ಎಂಬ ಸ್ಥಾಪಿತ ತಿಳಿವಳಿಕೆಯ ಚೌಕಟ್ಟಿನ ಆಚೆಗೂ ಜಾನಪದವನ್ನು ವಿಶಾಲ ಮನೋಭಾವದಲ್ಲಿ ಅರ್ಥೆಸಿಕೊಳ್ಳಬೇಕು ಎಂಬ ಉದ್ದೇಶದಿಂದ ಡಾ.ಎಸ್ ಬಾಲಾಜಿ ಮತ್ತವರ ಸ್ನೇಹಿತರು ಸೇರಿಕೊಮಡು ಕನ್ನಡ ಜಾನಪದ ಪರಿಷತ್ ಸ್ಥಾಪಿಸಿದ್ದಾರೆ. ಆಧುನೀಕರಣ,ಜಾಗತೀಕರಣದ ಪರ್ವದಲ್ಲಿ ಜಾನಪದ ಸಾಹಿತ್ಯ,ಕಲೆಗಳನ್ನು ಉಳಿಸಲು ಈ ಕನ್ನಡ ಜಾನಪದ ಪರಿಷತ್ತನ್ನು ಅಸ್ತಿತ್ವಕ್ಕೆ ತರಲಾಗಿದೆ.

ಇದನ್ನು ಓದಿ: ವಯಸ್ಸಾದರೂ ಛಲ ಬಿಡದ ಸಾಹಸಿ

ಪ್ರತಿ ಹಳ್ಳಿಗಳಿಂದ ಮಾಹಿತಿ ಸಂಗ್ರಹ

ಜಾನಪದ ಪರಿಷತ್ತು ಈಗ ರಾಜ್ಯದ ಪ್ರತಿಯೊಂದು ಹಳ್ಳಿಯಲ್ಲಿರುವ ಜನಪದ ಕಲೆ, ಸಾಹಿತ್ಯ, ಜನಪದ ಸಾಮಗ್ರಿಗಳನ್ನು ಸಂಗ್ರಹಿಸುವ ಸಲುವಾಗಿ ರಾಜ್ಯಾದ್ಯಂತ ಹಲವು ಜಾಗೃತಿ ಹಾಗೂ ಸಂಗ್ರಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅದಕ್ಕೆ ರಾಜ್ಯದ ಜನತೆ ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ.

ವಿದ್ಯಾರ್ಥಿಗಳಿಗೆ ತರಬೇತಿ

ಜನಪದ ಕೆಲಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರೆ ಅದರ ಫಲಿತಾಂಶ ಹೆಚ್ಚಾಗಿರುತ್ತದೆ. ಅದಕ್ಕಾಗಿ ಪರಿಷತ್ತಿನಿಂದ ವಿಶೇಷವಾಗಿ ಜನಪದ ಕಲೆಗಳ ತರಬೇತಿಯನ್ನು ಶಾಲಾ,ಕಾಲೇಜು ವಿದ್ಯಾರ್ಥಿಗಳಿಗೆ ಸಾಕಷ್ಟು ವರ್ಷಗಳಿಂದ ನೀಡಲಾಗುತ್ತಿದೆ. ಅಷ್ಟೇ ಅಲ್ಲದೇ ಜನಪದ ಕಲೆಗಳನ್ನು ಕಲಿಯುವವರಿಗೆ ಪ್ರೋತ್ಸಾಹ ಮತ್ತು ಕಲಿತ ಕಲೆಗಳನ್ನು ಪ್ರದರ್ಶಿಸಲು ಸೂಕ್ತ ವೇದಿಕೆಯನ್ನು ಜಾನಪದ ಪರಿತ್ತು ಕಲ್ಪಿಸುತ್ತಿದೆ.

image


ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ದಾಖಲೀಕರಣ

ಜನಪದನವನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾದರೆ ಅರಿವು ಮೂಡಿಸುವ ಜೊತೆಗೆ ಅದರ ದಾಖಲೀಕರಣವು ಅಗತ್ಯ. ಅದಕ್ಕಾಗಿ ಕನ್ನಡ ಜಾನಪದ ಪರಿಷತ್ತು ಗ್ರಾಮಗಳಲ್ಲಿ ದೊರೆಯುವ ಪ್ರಾಚೀನ ವಸ್ತುಗಳು, ಗಾದೆ, ಒಗಟು, ಒಡಪು,ಅಡುಗೆ, ವೈದ್ಯ, ನಂಬಿಕೆ, ಹಬ್ಬ ಹರಿದಿನ, ಜನಪದ ಕಥೆ, ವೇಷಭೂಷಣ, ವೃತ್ತಿ, ಬದುಕು ಕುರಿತು ದಾಖಲೀಕರಣ ಕಾರ್ಯವನ್ನು ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ನಡೆಸಲಾಗುತ್ತಿದೆ. ಜನಪದ ಸಲಕರಣೆಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಈ ಪರಿಷತ್ತು ಮಾಡುತ್ತಿದೆ.

ವಿವಿಧ ಕಾರ್ಯಕ್ರಮಗಳ ಆಯೋಜನೆ

ಕನ್ನಡ ಜಾನಪದ ಪರಿಷತ್ತಿನ ವತಿಯಿಂದ ಜನಪದ ಜಾಗೃತಿಗಾಗಿ ಮಠದಿಂದ ಮಠಕ್ಕೆ ಜಾನಪದ , ಹಾಸ್ಟೆಲ್ಗಳಿಂದ ಹಾಸ್ಟೆಲ್ಗೆ ಜಾನಪದ’, ನಮ್ಮ ನಡಿಗೆ ಜಾನಪದದ ಕಡೆಗೆ’ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ನಡೆಸಲಾಗುತ್ತಿದೆ. ಅಷ್ಟೇ ಅಲ್ಲದೇ ಪ್ರತಿ ವರ್ಷ ರಾಜ್ಯ ಮಟ್ಟದ ಜಾನಪದ ಕಾವ್ಯ ಗಾಯನ, ಗಾಳಿ ಪಟ ಹಾಗೂ ಜನಪದ ಕ್ರೀಡೆಗಳ ಸ್ಪಧೆಗಳು, ಶಾಲೆ, ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಜಾನಪದ ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಕರಾವಳಿ ಕಡಲ ತೀರದಲ್ಲಿ ಪ್ರತಿ ವರ್ಷ ಜಲ ಜನಪದೋತ್ಸವ’ ಕಾರ್ಯಕ್ರಮಗಳನ್ನು ಆಯೋಜಸಿಕೊಂಡು ಬರುತ್ತಿದೆ. ಇದರ ಜೊತೆಗೆ ಕನ್ನಡ ಜಾನಪದ ಪರಿಷತ್ತು ಜಾನಪದದ ಬಗ್ಗೆ ನಮ್ಮ ಜನರಲ್ಲಿ ಅರಿವು ಮೂಡಿಸುವ ಜೊತೆಗೆ ಈ ಜಾನಪದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರಿಗೆ ಜಾನಪದ ಪ್ರಪಂಚ ಎಂಬ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.

image


ಜಾನಪದ ಪ್ರಪಂಚ ಸ್ಥಾಪನೆ

ಬರೀ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುವುದಕ್ಕೆ ಅಷ್ಟೇ ಸೀಮಿತವಾಗಿದೆ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮಾಗಡಿ ತಾಲೂಕು ತಿಪ್ಪಸಂದ್ರ ಹೋಬಳಿಯ ತಾಳೆಕೆರೆ ಬಳಿ ೧೦ ಎಕರೆ ಜಾಗದಲ್ಲಿ ‘ ಜಾನಪದ ಪ್ರಪಂಚ’ವನ್ನು ಸ್ಥಾಪಿಸಲು ಯೋಜನೆ ಸಿದ್ದಪಡಿಸಿಕೊಂಡಿದೆ. ಈ ಜಾನಪದ ಪ್ರಪಂಚದ ಜನಪದ ಕಲೆಗಳ ತರಬೇತಿ, ವಾಚನಾಲಯ, ಜನಪದ ವಸ್ತು ಸಂಗ್ರಹಾಲಯ, ಚರ್ಮ ವಾದ್ಯ ತಯಾರಿಕೆ ಕೇಂದ್ರ ಮತ್ತು ಜಾನಪದ ರಂಗಮಂದಿರ ಮತ್ತಿತರ ಸೌಲಭ್ಯಗಳನ್ನು ರುತ್ತವೆ.

ಜಿಲ್ಲಾ ಘಟಕ:

ಜನಪದದ ಬಗ್ಗೆ ರಾಜ್ಯದ್ಯಾಂತ ಎಲ್ಲರಿಗೂ ಅರಿವು ಮೂಡಿಸುವ ಸಲುವಾಗಿ ಪರಿಷತ್ ಕರ್ನಾಟಕದ ೨೧ ಜಿಲ್ಲೆಗಳಲ್ಲಿ ಜಿಲ್ಲಾ ಘಟಕಗಳನ್ನು ಅಸ್ತಿತ್ವಕ್ಕೆ ತಂದಿದೆ. ಅಷ್ಟೇ ಅಲ್ಲದೆ ತಾಲೂಕು, ಹೋಬಳಿ ಹಾಗೂ ಗ್ರಾಮ ಘಟಕಗಳನ್ನು ರಚಿಸಲಾಗುತ್ತದೆ. ಹಲವು ವಿಶ್ವವಿದ್ಯಾನಿಲಯಗಳಲ್ಲಿ ಪರಿಷತ್ತಿನ ವತಿಯಿಂದ ಸಾಕಷ್ಟು ಕಾರ್ಯಕ್ರಮ ನಡೆಸಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಹೊರ ರಾಜ್ಯಗಳಲ್ಲೂ ಘಟಕಗಳನ್ನು ಸ್ಥಾಪಿಸಲಾಗುವುದು. ಜನಪದ ಕಲೆ, ಸಾಹಿತ್ಯಕ್ಕೆ ಸಂಬಂಧಿಸಿದೆ ಪುಸ್ತಕ ಪ್ರಕಟಣೆ, ಜನಪದ ಕಲಾವಿದರ ಗಣತಿ ಮತ್ತು ಕಲಾವಿದರಿಗೆ ಮಾಶಾಸನ ಕೊಡಿಸುವ ಪ್ರಯತ್ನ ಪರಿಷತ್ ವತಿಯಿಂದ ನಡೆಸಲಾಗುತ್ತಿದೆ. ಕಾಲೇಜುಗಳಲ್ಲಿ ಜಾನಪದ ಕಲಾ ಪ್ರಕಾರ,ಅದರ ಸಾಂಸ್ಕೃತಿಕ ಹಿನ್ನೆಲೆ ಕುರಿತು ವಿಚಾರ ಸಂಕಿರಣ, ಕಮ್ಮಟ ಹಾಗೂ ಸಂವಾದ, ಅಂತಾರಾಜ್ಯ ಜಾನಪದ ವಿನಿಮಯ ಕಾರ್ಯಕ್ರಮ, ಶಾಲೆ ಕಾಲೇಜುಗಳಲ್ಲಿ ಜನಪದ ಹಬ್ಬ ಮತ್ತು ಜನಪದ ಜಾತ್ರೆ ಹಾಗೂ ರಾಗಿ ಬೀಸುವ ಸ್ಪರ್ಧೆ, ಮುದ್ದೆ ತಿನ್ನುವ ಸ್ಪರ್ಧೆ ಆಯೋಜಿಸಲಾಗುತ್ತದೆ.ಈ ವರ್ಷ ಗೊರವರ ಸಮಾವೇಶ, ಕಿನ್ನರಿ ಜೋಗಿ ಹಾಗೂ ಸುಡುಗಾಡು ಸಿದ್ಧರ ಮೇಳ, ಮಕ್ಕಳ ಮತ್ತು ಮಹಿಳಾ ಜಾನಪದ ಸಮ್ಮೇಳನವಲ್ಲದೆ, ಕರ್ನಾಟಕ ಜಾನಪದ ಮಹಾಕಾವ್ಯಗಳ ಕುರಿತು ಅಧ್ಯಯನ ಮತ್ತಿತರ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ

ಈ ಕನ್ನ್ನಡ ಜಾನಪದ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾಗಿ ಟಿ.ಕೆ.ಗೌಡ, ಕಾರ್ಯಾಧ್ಯಕ್ಷರಾಗಿ ಡಾ.ಎಸ್ .ಬಾಲಾಜಿ, ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ರಾಜ್ಯದ ವಿವಿಧ ಜನಪದಾಸಕ್ತರು ಸಹಾಯ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಜನಪದದ ಉಳಿವಿಗಾಗಿ ಕನ್ನಡ ಜಾನಪದ ಪರಿಷತ್ತು ತನ್ನ ಅವಿರತ ಸೇವೆ ಸಲ್ಲಿಸುತ್ತಿದೆ ಎಂದರೆ ತಪ್ಪಾಗಲಾರದು.

ಇದನ್ನು ಓದಿ:

1. ರಾಸಾಯನಿಕ ಐಟಂಗಳಿಗಿಂತ- ಹ್ಯಾಂಡ್‍ಮೇಡ್ ಐಟಂಗಳಿಗೆ ಭಾರೀ ಡಿಮ್ಯಾಂಡ್​​..!

2. ಆಟೋ ರಿಕ್ಷಾ ಜಾಹೀರಾತು ಸ್ಟಾರ್ಟ್ ಅಪ್ ನಲ್ಲಿ 1 ಕೋಟಿ ಮೊತ್ತದ ಬಂಡವಾಳ ಸೃಷ್ಠಿ.. !

3. ದೂರದರ್ಶನ ಚಾನಲ್ ಈಗ ಮೊಬೈಲ್​​ನಲ್ಲಿ...!