ಬಹುಮುಖ ಪ್ರತಿಭೆಯ ಅಸಾಮಾನ್ಯ ಸಾಧನೆ- ವೈದ್ಯ, ಲೇಖಕ, ಉದ್ಯಮಿಯಾಗಿ ಜನಸೇವೆ..

ಟೀಮ್​​ ವೈ.ಎಸ್​​.

ಬಹುಮುಖ ಪ್ರತಿಭೆಯ ಅಸಾಮಾನ್ಯ ಸಾಧನೆ- ವೈದ್ಯ, ಲೇಖಕ, ಉದ್ಯಮಿಯಾಗಿ ಜನಸೇವೆ..

Sunday October 25, 2015,

3 min Read

ಮನಸ್ಸಿದ್ದಲ್ಲಿ ಮಾರ್ಗ ಅನ್ನೋ ಮಾತು ಅಕ್ಷರಶಃ ಸತ್ಯ. ವೃತ್ತಿಯ ಜೊತೆಗೆ ಒಳ್ಳೆ ಪ್ರವೃತ್ತಿಯನ್ನೂ ಬೆಳೆಸಿಕೊಂಡ್ರೆ ಸಾಧನೆ ಅನ್ನೋದು ಕಷ್ಟವೇನಲ್ಲ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ಬಹುಮುಖ ಪ್ರತಿಭೆ ಡಾ.ಶರದ್ ಪಾಲ್. ಇವರೊಬ್ಬ ತಜ್ಞ ವೈದ್ಯ, ಲೇಖಕ, ಉದ್ಯಮಿ ಹಾಗೂ ಪರೋಪಕಾರಿ. ಡಾ. ಶರದ್ ಪಾಲ್ ಸಮಾಜ ಸುಧಾರಣೆಗಾಗಿ ತಮ್ಮ ಸರ್ವಸ್ವವನ್ನೂ ಧಾರೆ ಎರೆಯುತ್ತಿದ್ದಾರೆ. ಅವರು ಕಾಲಿಟ್ಟ ಕ್ಷೇತ್ರದಲ್ಲೆಲ್ಲಾ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ವೈದ್ಯಕೀಯ ಲೋಕಕ್ಕೆ ಹೊಸ ಬಗೆಯ ಶಸ್ತ್ರಚಿಕಿತ್ಸಾ ತಂತ್ರಜ್ಞಾನವನ್ನು ಕೊಡುಗೆಯಾಗಿ ನೀಡಿದ್ದಾರೆ. ಅವರ ಈ ಸಾಧನೆಗಾಗಿ ಹತ್ತಾರು ಪ್ರಶಸ್ತಿಗಳು ಅರಸಿ ಬಂದಿವೆ. ಇನ್ನು ಲೇಖಕನಾಗಿಯೂ ಶರದ್ ಪುಸ್ತಕ ಪ್ರಿಯರ ಮನಗೆದ್ದಿದ್ದಾರೆ. ತಮ್ಮ ಕಾದಂಬರಿಗಳ ಮೂಲಕವೇ ಜನರಿಗೆ ಹೊಸ ಸಂದೇಶಗಳನ್ನು ಸಾರುತ್ತಿದ್ದಾರೆ. ಇನ್ನು ಉದ್ಯಮಿಯಾಗಿ ಅತಿಯಾದ ಲಾಭಕ್ಕೆ ಆಸೆಪಡದೆ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆಂಬ ಹೆಗ್ಗಳಿಕೆ ಇವರದ್ದು.

ಡಾ. ಶರದ್​​​​​

ಡಾ. ಶರದ್​​​​​


" ನಾನು ಭಾರತ ಬಿಟ್ಟರೂ ಭಾರತ ನನ್ನ ಹೃದಯದಲ್ಲಿ,ನನ್ನ ಚರ್ಮದಲ್ಲಿ ನೆಲೆಸಿದೆ'' 

ಬಾಲ್ಯದಿಂದ್ಲೇ ಶರದ್ ಅವರಲ್ಲಿ ಸಾಮಾಜಿಕ ಕಳಕಳಿಯ ಬಗ್ಗೆ ಅರಿವು ಮೂಡಿತ್ತು. ಲಂಡನ್‍ನಲ್ಲಿ ಹುಟ್ಟಿ ಬೆಳೆದರೂ ಭಾರತೀಯ ಸಂಸ್ಕೃತಿ, ಆಚಾರ ವಿಚಾರಗಳು ಶರದ್ ಅವರಲ್ಲಿ ಆಳವಾಗಿ ಬೇರೂರಿತ್ತು. ಭಾರತೀಯ ಮೂಲದವರು ಎಂಬ ಕಾರಣಕ್ಕೆ ವಿದೇಶದಲ್ಲಿ ಅದೆಷ್ಟೋ ಉದ್ಯೋಗದ ಆಫರ್‍ಗಳು ಕೈತಪ್ಪಿದ್ದೂ ಇದೆ. ಆದ್ರೆ ಅದಕ್ಕೆಲ್ಲ ಶರದ್ ತಲೆಕೆಡಿಸಿಕೊಳ್ಳಲಿಲ್ಲ. ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಶಿಕ್ಷಣ ಹಾಗೂ ವೈದ್ಯಕೀಯ ಆವಿಷ್ಕಾರಗಳಲ್ಲಿ ಶರದ್ ಅವರ ಕೊಡುಗೆ ಅಪಾರ. ಭಾರತದ ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುವ ಅದಮ್ಯ ಆಸೆ ಅವರಿಗಿತ್ತು.

"ರೋಗಿಗಳನ್ನು ನಿಮ್ಮ ಮನೆಯವರೇ ಎಂದು ಕೊಡು ಚಿಕಿತ್ಸೆ ನೀಡಿ''

ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‍ನ ಖ್ಯಾತ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರಾಗಿ ಡಾ.ಶರದ್ ಸೇವೆ ಸಲ್ಲಿಸಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಔದ್ಯಮೀಕರಣ ಸಲ್ಲದು ಅನ್ನೋದು ಅವರ ಅಭಿಪ್ರಾಯ. ಹಣವಿದ್ರೂ ಒಳ್ಳೆಯ ಚಿಕಿತ್ಸೆ ಸಿಗತಂಥಹ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ ಎನ್ನುತ್ತಾರೆ ಅವರು. ವೈದ್ಯ ವೃತ್ತಿ ಬಗ್ಗೆ ಒಳ್ಳೆಯ ತರಬೇತಿ ಪಡೆಯಬೇಕಂದ್ರೆ ರೋಗಿಗಳನ್ನು ಮನೆಯವರಂತೆ ಕಾಣಬೇಕು, ಪ್ರೀತಿ ವಿಶ್ವಾಸದಿಂದ ಚಿಕಿತ್ಸೆ ನೀಡಬೇಕು ಅನ್ನೋದು ಶರದ್ ಅಭಿಪ್ರಾಯ. ಇದೇ ಅವರ ಯಶಸ್ಸಿನ ಮಂತ್ರ. ಬಡವರಿಗೆ ಉಚಿತವಾಗಿ ಹಾಗೂ ಮಧ್ಯಮವರ್ಗದವರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಶರದ್ ಚಿಕಿತ್ಸೆ ನೀಡುತ್ತಾರೆ.

"ಶತಮಾನದ್ದಾಗದಿದ್ದರೂ ದಶಕದ ಪುಸ್ತಕ..''

ಈವರೆಗೆ ಶರದ್ ನಾಲ್ಕು ಪುಸ್ತಕಗಳನ್ನು ಬರೆದಿದ್ದಾರೆ. ಕೂಲ್ ಕಟ್, ಟು ಕಿಲ್ ಎ ಸ್ನೋ ಡ್ರಾಗ್ನೋಫ್ಲೈ ಹಾಗೂ ಕೈಟ್ ಫ್ಲೈಯರ್ಸ್ ಎಂಬ ಮೂರು ಕಾದಂಬರಿಗಳ ಬಳಿಕ ಶರದ್ ಅವರ ನಾಲ್ಕನೇ ಕೃತಿ ಸ್ಕಿನ್ ಎ ಬಯೋಗ್ರಫಿ ಪುಸ್ತಕ ಬಿಡುಗಡೆಯಾಗಿದೆ. ಇದನ್ನು ದಶಕದ ಪುಸ್ತಕ ಎಂದು ಡಾ. ಕಾಮತ್ ಬಣ್ಣಿಸಿದ್ದಾರೆ. ಟು ಕಿಲ್ ಎ ಸ್ನೋ ಡ್ರಾಗ್ನೋಫ್ಲೈ ಎಂಬ ಕಾದಂಬರಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದವರ ನೋವನ್ನೇ ಮರೆಸಿತ್ತಂತೆ. ಓದುಗರ ಇಂತಹ ಅದ್ಭುತ ಪ್ರತಿಕ್ರಿಯೆಗಳು ಶರದ್ ಅವರಿಗೆ ಮತ್ತಷ್ಟು ಪ್ರೋತ್ಸಾಹ ನೀಡುತ್ತಿವೆ.

"ಹಣವೇ ನನ್ನ ಬದುಕಿನ ಗುರಿಯಲ್ಲ..''

ಆಸ್ಟ್ರೇಲಿಯಾದಲ್ಲಿ ಅಂತರಾಷ್ಟ್ರೀಯ ಕೃತಿಗಳನ್ನು ಮಾರಾಟ ಮಾಡುವ ಬಾಸಿ ಲಾಂಜ್ ಎಂಬ ಏಕೈಕ ಅಂಗಡಿಯಿತ್ತು. ಶರದ್ ಅವರಿಗೂ ಅಂಥದ್ದೊಂದು ಸ್ಟೋರ್ ತೆರೆಯುವ ಆಸೆಯಿತ್ತು. ಈಗ ಬಾಸಿ ಕಾಸ್ಮೆಟಾಲಜಿ ಎಂಬ ಸ್ಕಿನ್ ಕೇರ್ ಕಂಪನಿಯೊಂದನ್ನು ಶರದ್ ನಡೆಸುತ್ತಿದ್ದಾರೆ. ತಾವೊಬ್ಬ ಸಾಮಾಜಿಕ ಕಾರ್ಯಕರ್ತ, ಹೃದಯದಿಂದ ಉದ್ಯಮಿಯಲ್ಲ ಎನ್ನುತ್ತಾರೆ ಅವರು. ಲಾಭ ಮಾಡುವುದು ಅವರ ಉದ್ದೇಶವಲ್ಲ. ತಮ್ಮ ಸಂಸ್ಥೆ ಮೂಲಕ ಜನರಿಗೆ ಅನುಕೂಲ ಮಾಡಿಕೊಡುವ ಹಂಬಲ ಅವರಿಗಿದೆ.

"ನೀವು ನಿಮ್ಮ ಕನಸನ್ನು ನಂಬಿದರೆ ಉಳಿದವರೂ ನಂಬುತ್ತಾರೆ..ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ''

ನಮಗೆಲ್ಲಾ ಮನುಷ್ಯರಾಗಿ ಹುಟ್ಟುವ ಒಂದು ಅವಕಾಶ ಲಭಿಸಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇತರರಿಗೆ ಕೊಂಚವೂ ನೆರವಾಗದೇ ಹಣ ಮಾಡುವುದೊಂದೇ ನಮ್ಮ ಗುರಿಯಾಗಬಾರದು ಅನ್ನೋದು ಶರದ್ ಅವರ ಸಲಹೆ. ಜನೋಪಕಾರಿಯಾಗದೇ ಇದ್ದರೆ ಮಾನವ ಜನ್ಮವೇ ವ್ಯರ್ಥ ಎನ್ನುತ್ತಾರೆ ಅವರು. ಸಾಮಾನ್ಯರು ಕೂಡ ಅಸಾಮಾನ್ಯ ಸಾಧನೆ ಮಾಡಬಲ್ಲರು ಅನ್ನೋದು ಶರದ್ ಅವರ ಅಭಿಪ್ರಾಯ. ಈ ಬಗ್ಗೆ ಪುಟಾಣಿಗಳಿಗೂ ಅವರು ಕಿವಿಮಾತು ಹೇಳಿದ್ದಾರೆ. ಬಡ ಮಕ್ಕಳ ಶಾಲೆಗಳಿಗೆ ತೆರಳಿ ಅಲ್ಲಿ ಕೂಡ ಶರದ್ ಪಾಠ ಹೇಳಿಕೊಡುತ್ತಾರೆ. ಸೃಜನಾತ್ಮಕ ಬರವಣಿಗೆ ಬಗ್ಗೆ ಮಕ್ಕಳಿಗೆ ತಿಳಿಸಿ ಹೇಳುತ್ತಾರೆ. ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು. ನಮ್ಮ ಕನಸನ್ನು ನಾವು ನಂಬಿದರೆ ಇತರರೂ ನಂಬುತ್ತಾರೆ ಅನ್ನೋದು ಡಾ.ಶರದ್ ಪಾಲ್ ಅವರ ಮನದ ಮಾತು. ಇದನ್ನು ಎಲ್ಲರೂ ಅಳವಡಿಸಿಕೊಂಡರೆ ಸಮಾಜದಲ್ಲಿ ಧನಾತ್ಮಕ ಬದಲಾವಣೆಯಾಗುವುದರಲ್ಲಿ ಅನುಮಾನವೇ ಇಲ್ಲ.