ಆಟದಲ್ಲಿ ಸೂಪರ್- ವ್ಯಕ್ತಿತ್ವದಲ್ಲಿ ಚಿನ್ನ- ಇದು ರಾಹುಲ್ ದ್ರಾವಿಡ್ ನಿಜಜೀವನದ ಕಥೆ

ಟೀಮ್​ ವೈ.ಎಸ್​. ಕನ್ನಡ

ಆಟದಲ್ಲಿ ಸೂಪರ್- ವ್ಯಕ್ತಿತ್ವದಲ್ಲಿ ಚಿನ್ನ- ಇದು ರಾಹುಲ್ ದ್ರಾವಿಡ್ ನಿಜಜೀವನದ ಕಥೆ

Sunday March 26, 2017,

2 min Read

ರಾಹುಲ್ ದ್ರಾವಿಡ್. ವಿಶ್ವ ಕ್ರಿಕೆಟ್​ನ ಜಂಟಲ್​ಮನ್. ಆಟ ಆಡುವಾಗ ಕಿರಿಕ್ ಅನ್ನುವ ಮಾತೇ ದ್ರಾವಿಡ್ ಬಳಿ ಇರಲಿಲ್ಲ. ಎದುರಾಳಿ ಅದೆಷ್ಟೇ ಮಾತಿನ ದಾಳಿ ಮಾಡಿದ್ರೂ ದ್ರಾವಿಡ್ ರಿಯಾಕ್ಟ್ ಮಾಡ್ತಾನೇ ಇರಲಿಲ್ಲ. ಎದುರಾಳಿಯನ್ನು ರನ್​ಗಳಿಸುವ ಮೂಲಕವೇ ಸೋಲಿಸುತ್ತಿದ್ದ ಅದ್ಭುತ ಆಟಗಾರ. ದ್ರಾವಿಡ್ ಆಟದಲ್ಲಿ ಎಷ್ಟು ಸಜ್ಜನರೋ, ನಿಜಜೀವನದಲ್ಲಿ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆಯೇ ಇದ್ದಾರೆ. ಸತ್ಯ, ನೇರಮಾತು ಮತ್ತು ದಿಟ್ಟತನ ರಾಹುಲ್ ದ್ರಾವಿಡ್​ಗೆ ಜಂಟಲ್​ಮನ್ ಪಟ್ಟ ತಂದುಕೊಟ್ಟಿದೆ. ಇವತ್ತು ದ್ರಾವಿಡ್ ಕೋಟ್ಯಾಂತರ ರೂಪಾಯಿಗಳನ್ನು ಸಂಪಾದಿಸಬಹುದು. ಆದ್ರೆ ದ್ರಾವಿಡ್ ವಿಮಾನದಲ್ಲಿ ಪ್ರಯಾಣ ಮಾಡುವುದು, ಎಕಾಮನಿ ಕ್ಲಾಸ್​ನಲ್ಲೇ ಅಂದರೆ ನಂಬಲೇಬೇಕು. ತನ್ನ ಮನೆಯ ಗ್ಯಾಸ್ ಬಿಲ್​ನಿಂದ ಹಿಡಿದು, ಮಕ್ಕಳನ್ನು ಶಾಲೆ ತನಕ ಡ್ರಾಪ್ ಮಾಡುವುದು ಸ್ವತಃ ದ್ರಾವಿಡ್ ಅವರೇ. ಕ್ರಿಕೆಟ್ ಆಡುತ್ತಿದ್ದಾಗ ಯಾವುದಾದರು ಟೂರ್ನಿಗೆ ಹೋದ್ರೆ ಎರಡೇ ಎರಡು ಟಿ-ಶರ್ಟ್​ಗಳನ್ನು ತೆಗೆದುಕೊಂಡು ಹೋಗುತ್ತಿದ್ದ ದ್ರಾವಿಡ್ ರನ್ನು ಮೆಚ್ಚಿಕೊಳ್ಳದೇ ಇರುವವರು ಈ ಭೂಮಿಯಲ್ಲಿ ಇಲ್ಲವೇನೋ ಅಂತ ಅನ್ಸುತ್ತೆ ಅಂದ್ರೆ ಅದು ಉತ್ಪ್ರೇಕ್ಷೆಯಲ್ಲ.

image


ಪರಿಶ್ರಮ ದ್ರಾವಿಡ್ ನಂಬಿರುವ ಅತೀ ದೊಡ್ಡ ಮಂತ್ರ. ಅದಕ್ಕೆ ದ್ರಾವಿಡ್ ವ್ಯಕ್ತಿತ್ವದಲ್ಲಿ ಬೇಕಾದಷ್ಟು ಉದಾಹರಣೆಗಳು ಸಿಗುತ್ತವೆ. ಇತ್ತೀಚೆಗೆ ಬೆಂಗಳೂರು ವಿಶ್ವವಿದ್ಯಾಲಯ ರಾಹುಲ್ ದ್ರಾವಿಡ್ ಅವರ ಸಾಧನೆಯನ್ನು ಮಾನದಂಡವನ್ನಾಗಿಟ್ಟುಕೊಂಡು ಗೌರವ ಡಾಕ್ಟರೇಟ್ ಪದವಿ ನೀಡಲು ಬಯಸಿತ್ತು. ಆದ್ರೆ ದ್ರಾವಿಡ್ ವಿಶ್ವವಿದ್ಯಾಲಯದ ಪ್ರಶಸ್ತಿಯನ್ನು ನಯವಾಗೇ ತಿರಸ್ಕರಿಸಿದ್ರು. ಅಷ್ಟೇ ಅಲ್ಲ ನಾನು ಶ್ರಮಪಟ್ಟು ಡಾಕ್ಟೆರೇಟ್ ಸಂಪಾದನೆ ಮಾಡುತ್ತೇನೆ ಅನ್ನುವ ಮಾತನ್ನು ಕೂಡ ಹೇಳಿದ್ರು. 2014ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯ ಡಾಕ್ಟರ್ ನೀಡಲು ಬಂದಾಗಲೂ ದ್ರಾವಿಡ್ ನೇರವಾಗಿಯೇ ಈ ಮಾತು ಹೇಳಿದ್ದರು. ದ್ರಾವಿಡ್ ಈ ಮಾತಿನ ಹಿಂದೆ ಅವರ ಅಮ್ಮ ಪುಷ್ಪಾ ಮತ್ತು ಪತ್ನಿ ವಿಜೇತಾರ ಸಾಧನೆಯೇ ಪ್ರೇರಣೆಯಾಗಿದೆ. ಇವರಿಬ್ಬರೂ ಕೂಡ ಶ್ರಮಪಟ್ಟು ಡಾಕ್ಟರೇಟ್ ಸಂಪಾದಿಸಿದ್ದರು ಅನ್ನುವುದನ್ನು ದ್ರಾವಿಡ್ ಉದಾಹರಣೆಯಾಗಿ ನೀಡುತ್ತಾರೆ.

“ ನನ್ನ ಅಮ್ಮ 55ನೇ ವರ್ಷದಲ್ಲಿ ಪರಿಶ್ರಮಪಟ್ಟು PhD ಪದವಿ ಸಂಪಾದನೆ ಮಾಡಿದ್ದರು. ನನ್ನ ಪತ್ನಿ ವಿಜೇತಾ ಸರ್ಜನ್ ಆಗಿದ್ದರೂ, 7 ವರ್ಷಗಳ ಕಾಲ ಶ್ರಮಪಟ್ಟು ಡಾಕ್ಟರೇಟ್ ಸಂಪಾದಿಸಿದ್ದಾಳೆ. ನಾನೂ ಕೂಡ ಅಷ್ಟೇ. ನನಗೆ ಏನಾದರೂ ಬೇಕು ಅಂದ್ರೆ ಅದನ್ನು ಪರಿಶ್ರಮದಿಂದಲೇ ಸಂಪಾದಿಸಬೇಕು ಅನ್ನುವ ಅಭಿಲಾಷೆ ನನ್ನದು. ನನ್ನ ನಿರ್ಧಾರಗಳ ಬಗ್ಗೆ ಜನ ಏನು ಬೇಕಾದ್ರೂ ಹೇಳಲಿ, ನಾನು ನನ್ನ ಶ್ರಮವನ್ನು ಮಾತ್ರ ಲೆಕ್ಕಹಾಕುತ್ತೇನೆ. ಡಾಕ್ಟರೇಟ್ ವಿಚಾರವಾಗಿ ಮೊದಲ ಬಾರಿ ನನ್ನನ್ನು ಆಯ್ಕೆ ಮಾಡಿದ್ದಾಗ ಅದು ಕೇವಲ ವೈಯಕ್ತಿಕವಾಗಿತ್ತು. ಎಲ್ಲವೂ ಒಂದು ಇ-ಮೇಲ್ ಮೂಲಕ ಮುಗಿದಿತ್ತು. ನಾನು ವಿಶ್ವವಿದ್ಯಾಲಯದ ನಿರ್ಧಾರ ಹೊರಬೀಳುವ ಮುನ್ನವೇ ನನ್ನ ನಿರ್ಧಾರ ತಿಳಿಸಿದ್ದೆ. ಆದ್ರೆ ನನ್ನ ನಿರ್ಧಾರ ಎಲ್ಲರಿಗೂ ತಿಳಿದಿದ್ದು ವಿಷಾದನೀಯ”
- ರಾಹುಲ್ ದ್ರಾವಿಡ್, ಮಾಜಿ ಕ್ರಿಕೆಟಿಗ

ದ್ರಾವಿಡ್ ಪಬ್ಲಿಸಿಟಿಯನ್ನು ಯಾವತ್ತೂ ಕೂಡ ಇಷ್ಟಪಡುವುದಿಲ್ಲ. ಅದೆಷ್ಟೋ ಸಾಮಾಜಿಕ ಕೆಲಸಗಳಲ್ಲಿ ಕೈಜೋಡಿಸಿದ್ದರೂ ದ್ರಾವಿಡ್ ಅವುಗಳೆಲ್ಲವನ್ನೂ ದ್ರಾವಿಡ್ ಯಾರಿಗೂ ಹೇಳಿಲ್ಲ.

“ ರಾಹುಲ್ ಜೀವನ ಕ್ರಿಕೆಟ್ ಜೊತೆಗೆ ಸಾಗುತ್ತದೆ. ಸಾಮಾಜಿಕ ಕೆಲಸಗಳಲ್ಲೂ ರಾಹುಲ್ ಕೈ ಜೋಡಸಿದ್ದಾರೆ. ಕಾಮೆಂಟೇಟರ್ ಮತ್ತು ಬರವಣಿಗೆಯಲ್ಲೂ ರಾಹುಲ್​ಗೆ ಆಸಕ್ತಿ ಇದೆ. ರಾಹುಲ್ ಭಾಷೆಯ ಮೇಲೂ ಹಿಡಿತ ಸಾಧಿಸಿದ್ದಾರೆ. ಆದ್ರೆ ಆತ ಕ್ರಿಕೆಟ್​ಗೆ ಮೊದಲ ಪ್ರಾಶಸ್ತ್ಯ ನೀಡುತ್ತಾನೆ. ಆಟದ ವಿಷಯದಲ್ಲಿ ರಾಹುಲ್ ಉತ್ತಮ ಕ್ರಿಕೆಟಿಗ. ಆದ್ರೆ ಮಾನವೀಯತೆಯಲ್ಲಿ ಮತ್ತು ಸಾಮಾಜಿಕ ಕೆಲಸಗಳಲ್ಲಿ ರಾಹುಲ್ ಅತ್ಯುತ್ತಮ ವ್ಯಕ್ತಿ. ”
ಪುಷ್ಪಾ ದ್ರಾವಿಡ್, ರಾಹುಲ್​ ತಾಯಿ

ರಾಹುಲ್ ದ್ರಾವಿಡ್ ಅದೆಂತಹ ಮಾನವೀಯ ವ್ಯಕ್ತಿ ಅನ್ನುವುದಕ್ಕೂ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಹಿಂದೊಮ್ಮೆ ಮೈಸೂರು ಮೃಗಾಲಯದಲ್ಲಿ ಎರಡು ಚಿರತೆಗಳನ್ನು ದತ್ತು ಪಡದು 1 ಲಕ್ಷ ರೂಪಾಯಿ ಧನಸಹಾಯ ನೀಡಿದ್ದರು. 2012ರಲ್ಲಿ ಬೆಂಗಳೂರಿನ ಸ್ಪೆಷಲ್ ಟ್ರಾಫಿಕ್ ವಾರ್ಡನ್ ಆಗಿ ಆಯ್ಕೆಯಾಗಿದ್ದರು. ಈ ವೇಳೆಯಲ್ಲೂ ದ್ರಾವಿಡ್ ಹೊಸ ಜವಾಬ್ದಾರಿಯ ಬಗ್ಗೆ ಚೆನ್ನಾಗಿ ಅರಿತುಕೊಂಡಿದ್ದರು. ಕ್ರಿಕೆಟ್ ಮೈದಾನದಲ್ಲಿ ಅದ್ಭುತ ಆಟ ಆಡಿದ್ದ ದ್ರಾವಿಡ್ ನಿಜಜೀವನದಲ್ಲೂ ನಿಜವಾದ ಹೀರೋ ಅನ್ನುವುದರಲ್ಲಿ ಎರಡು ಮಾತಿಲ್ಲ. 

ಇದನ್ನು ಓದಿ:

1. ಈ ಗ್ರಾಮದಲ್ಲಿ ಹೆಣ್ಣುಮಕ್ಕಳೇ ಮನೆ ಒಡತಿಯರು..!

2. ಉಚಿತ ಯೋಗ ಕಲಿಸುವ"ಪ್ರಿಯಾ"ಗುರು..!

3. ಇಳಿವಯಸ್ಸಿನಲ್ಲೂ ದೇಶ ಸುತ್ತುವ ಸಾಹಸಿ : ವಿಶ್ವಪರ್ಯಟನೆ ಮಾಡ್ತಿದ್ದಾರೆ 95ರ ಅಮ್ಮಾಚಿ