ತುನಿ ಸೀಡ್ಸ್ ವಿಷನ್: ಗ್ರಾಮೀಣ ಭಾರತಕ್ಕೆ ಸಹಾಯ ಹಸ್ತ

ಟೀಮ್​​ ವೈ.ಎಸ್​​.

ತುನಿ ಸೀಡ್ಸ್ ವಿಷನ್: ಗ್ರಾಮೀಣ ಭಾರತಕ್ಕೆ ಸಹಾಯ ಹಸ್ತ

Thursday October 29, 2015,

4 min Read

ಭಾರತದಲ್ಲೀಗ ಉದ್ಯಮ ಯುಗ. ಯುವ ಜನಾಂಗ ಉದ್ಯಮ ಸ್ಥಾಪನೆಯತ್ತ ಆಕರ್ಷಿತವಾಗುತ್ತಿದೆ. ಹಾಗಾದರೆ, ಈ ಬೆಳವಣಿಗೆಗಳು ಭಾರತವನ್ನು ನಿಜಕ್ಕೂ ಬೆಳೆಯುತ್ತಿರುವ ರಾಷ್ಟ್ರವೆಂದು ವರ್ಗೀಕರಿಸಬಲ್ಲವೇ? ಬಹುಶ: ಸಾಧ್ಯವಿಲ್ಲ. ಕಾರಣ, ಭಾರತದ ಬಹುತೇಕ ಜನಸಂಖ್ಯೆ ಗ್ರಾಮೀಣ ಪ್ರದೇಶದಲ್ಲಿ ನೆಲೆಸಿದೆ. ಗ್ರಾಮೀಣ ಜನಸಮುದಾಯ ಸಶಕ್ತವಾದರೆ ಮಾತ್ರ ನಿಜವಾಗಿಯೂ ಉದ್ಯಮಶೀಲತೆಯ ಯಶಸ್ಸು ದೇಶವನ್ನು ಬೆಳಗಿಸಬಲ್ಲುದು.

image


ಈ ನಿಟ್ಟಿನಲ್ಲಿ ತುನಿ ಸೀಡ್ ಇಟ್ಟಿರುವ ಹೆಜ್ಜೆ ಮಹತ್ವವಾದದ್ದು. ಇದು ಸಾಮಾಜಿಕ ಉದ್ಯಮವಾಗಿದ್ದು, ನಿರುದ್ಯೋಗಿಗಳಿಗೆ, ಆರ್ಥಿಕ ದುರ್ಬಲರಿಗೆ ಸುಸ್ಥಿರ ಜೀವನಶೈಲಿ ಸೃಷ್ಟಿಸುವಲ್ಲಿ ನಿರತವಾಗಿದೆ. ಇವರು, ನೇರವಾಗಿ ಸರ್ಕಾರೇತರ ಸಂಸ್ಥೆಗಳ ಮೂಲಕ ನಿರ್ದಿಷ್ಟ ಗುಂಪನ್ನು ಸಂಪರ್ಕಿಸುತ್ತಾರೆ. ಅವರಲ್ಲಿ ಸ್ಫೂರ್ತಿ ತುಂಬಿ, ಉದ್ಯಮಿಗಳಾಗ ಬಯಸುವವರಿಗೆ ಸೂಕ್ತ ತರಬೇತಿ ನೀಡುತ್ತಾರೆ. ಅಲ್ಲದೆ ವ್ಯವಹಾರದ ಅವಕಾಶಗಳನ್ನೂ ಸೃಷ್ಟಿಸುತ್ತಾರೆ. ಅಲ್ಲದೆ, ವೃತ್ತ ತರಬೇತಿ ಕೇಂದ್ರಗಳ ಜೊತೆಗೂ ಕೆಲಸ ಮಾಡುತ್ತಿದ್ದಾರೆ. ಬಳಿಕ ಈ ಉದ್ಯಮಿಗಳ ಜೊತೆಗೆ ಮಾರುಕಟ್ಟೆ ಸಹಭಾಗಿತ್ವ ಸ್ಥಾಪಿಸಿಕೊಂಡು, ಇಡೀ ಜಗತ್ತಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ.

ಕೊಯಂಬತ್ತೂರಿನ ತೆನ್ನಮನಲ್ಲೂರಿನ ಕವಿತಾ ಅವರಿಗೆ ತಮ್ಮ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಅಪಘಾತವಾಗಿತ್ತು. ಅವರ ತಂದೆಯವರ ದಿನದ ಸಂಪಾದನೆ ಸುಮಾರು 350 ರೂಪಾಯಿಗಳಲ್ಲಿ ಎಲ್ಲವೂ ಕವಿತಾರ ಚಿಕಿತ್ಸೆಗೆ ಖರ್ಚಾಗುತ್ತಿತ್ತು. 10ನೇ ತರಗತಿಯನ್ನೂ ಓದಿರದ ಕವಿತಾಗೆ ಬೇರೆ ಕೆಲಸವೂ ಸಿಗುತ್ತಿರಲಿಲ್ಲ. ತುನಿ ಸೀಡ್ ನೆರವಿನೊಂದಿಗೆ ಈಗ ಅವರು ಸೀರೆಗಳ ಅಂಚು ಹಾಗೂ ಲ್ಯಾಪ್​​ಟಾಪ್​​ ಕೇಸ್​​​ಗಳನ್ನು ತಯಾರಿಸುತ್ತಿದ್ದಾರೆ. ಇದರಿಂದ ಅವರಿಗೆ ಸ್ಥಿರವಾದ ಆದಾಯವೂ ಲಭ್ಯವಾಗುತ್ತಿದೆ.

image


ಮತ್ತೊಬ್ಬ ಫಲಾನುಭವಿ ಕೊಯಂಬತ್ತೂರಿನ ಪುತ್ತೂರಿನ ಮಹೇಶ್ವರಿಯವರು. ವಯಸ್ಸಾದ ಅವರ ತಂದೆಗೆ ಅವರು ಕೆಲಸ ಮಾಡುತ್ತಿದ್ದ ಫಾರ್ಮ್ ಮಾಲೀಕನಿಂದ ಸಾಕಷ್ಟು ತೊಂದರೆಯೂ ಉಂಟಾಗುತ್ತಿತ್ತು. ಅಮ್ಮ ತೀರಿಕೊಂಡ ಬಳಿಕ, ಮಹೇಶ್ವರಿ ಕೂಡಾ ಅಪ್ಪನಿಗೆ ಸಹಾಯ ಮಾಡಲು ನಿಂತರು. ಮಹೇಶ್ವರಿಯವರು ಈಗ ಕವಿತಾರ ಜೊತೆಗೆ ಕೆಲಸ ಮಾಡುತ್ತಿದ್ದಾರೆ.

ಹೆಸರಿನ ಹಿಂದಿನ ಕಥೆ

ತುನಿ ಎಂದರೆ ತಮಿಳಿನಲ್ಲಿ ಬಟ್ಟೆ ಎಂದರ್ಥ. ಇವರು ಮೊದಲು ಆರಂಭಿಸಿದ ಉದ್ಯಮವೇ ಸೀರೆ ನೇಯ್ಗೆ. ಇಡೀ ಉದ್ಯಮದ ಯಶಸ್ಸಿಗೆ ಸೀರೆ ಎಂದರೆ ಬಟ್ಟೆಯೇ ಕಾರಣವಾದ ಹಿನ್ನೆಲೆಯಲ್ಲಿ ತಮ್ಮ ತಂಡಕ್ಕೆ ತುನಿ ಸೀಡ್ ಎಂದು ಹೆಸರನ್ನಿಟ್ಟುಕೊಂಡಿದ್ದಾರೆ. “ನಮ್ಮ ಆರಂಭವೇ ವಿಭಿನ್ನವಾಗಿತ್ತು. ನಾವು ಚಿಕ್ಕಪುಟ್ಟದಾಗಿ ಹರಿದಿರುವ ಸೀರೆಗಳನ್ನು ತೆಗೆದುಕೊಳ್ಳುತ್ತಿದ್ದೆವು. ಹರಿದ ಸೀರೆಗಳನ್ನು ಯಾರೂ ಉಟ್ಟುಕೊಳ್ಳುವುದಿಲ್ಲ. ನಾವು ಹರಿದ ಜಾಗಗಳಲ್ಲಿ ಅಂದವಾಗಿ ಡಿಸೈನ್ ಮಾಡಿ ಎಲ್ಲರಿಗೂ ಇಷ್ಟವಾಗುವ ಹಾಗೆ ಪ್ರಸ್ತುತಪಡಿಸಿದೆವು. ನಮಗೆ ಅದೇ ಉದ್ಯಮವಾಯಿತು. ತುನಿ ಸೀಡ್​​ಗೆ ಈ ದಾರವೇ ಸ್ಫೂರ್ತಿಯಾಯಿತು. ಲಭ್ಯವಿರುವ ಸಂಪನ್ಮೂಲಗಳನ್ನೇ ಬಳಸಿಕೊಂಡು ನೂರಾರು ಜನರ ಬದುಕು ಬೆಳಗಲು ಇದೇ ಕಾರಣವಾಯಿತು.” ಎನ್ನುತ್ತಾರೆ ಅನಂತ್.

image


17 ವರ್ಷದ ಹುಡುಗನ ಐಡಿಯಾ

ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಈ ಐಡಿಯಾ ಹುಟ್ಟುಹಾಕಿದ್ದು ಕೇವಲ 17 ವರ್ಷ ವಯಸ್ಸಿನ ಹುಡುಗ. ಅನಂತ್ ಮಜುಂದಾರ್ ಆಗಿನ್ನೂ ಹೈಸ್ಕೂಲ್ ಮುಗಿಸಿದ್ದರಷ್ಟೇ. ಆಗಲೇ ಅವರು ಉದ್ಯಮಶೀಲತೆಯ ಮೂಲಕ ಕೊಯಂಬತ್ತೂರಿನ ಮಹಿಳೆಯರನ್ನು ಸಬಲೀಕರಿಸಲು ನಿರ್ಧರಿಸಿದ್ದ. ಬಡತನ ಮತ್ತು ನಿಸ್ಸಾಹಯಕತೆಯಿಂದ ಅವರನ್ನು ಹೊರತಂದು ಸುಸ್ಥಿರವಾದ ಬದುಕನ್ನು ಕಟ್ಟಿಕೊಡಬೇಕು ಎಂದು ಕನಸು ಕಂಡಿದ್ದರು.

ಅನಂತ್ ತಮ್ಮ ಬಹುತೇಕ ಜೀವನವನ್ನು ಹಾಂಕಾಂಗ್​​ನಲ್ಲೇ ಕಳೆದಿದ್ದರು. ಅವರದ್ದು ಕೊಯಂಬತ್ತೂರು ಮೂಲದ ಕುಟುಂಬವಾಗಿತ್ತು. ಅಲ್ಲಿರುವಾಗಲೇ ಲೆನ್ಸೇಷನಲ್ ಎಂಬ ಎನ್​​ಜಿಒದ ಬಾಂಗ್ಲಾದೇಶದ ಪ್ರಾಜೆಕ್ಟ್​​ಗೆ ಕೆಲಸ ಮಾಡಿದ್ದರು. ಈ ಪ್ರಾಜೆಕ್ಟ್​​ನಲ್ಲಿ ಕೆಲಸ ಮಾಡಿದ್ದರಿಂದ, ಸಾಮಾಜಿಕ ಉದ್ಯಮವೊಂದನ್ನು ನಡೆಸಲು ಬೇಕಾದ ಎಲ್ಲಾ ವೃತ್ತಿಪರತೆಯನ್ನು ಕಲಿಯಲು ಸಾಧ್ಯವಾಯಿತು. ಅಲ್ಲಿ ಸಿಕ್ಕ ಸಂಪರ್ಕದಿಂದಾಗಿ, ಅವರು ಸಾಮಾಜಿಕ ಉದ್ಯಮಗಳ ವೃತ್ತಿಪರರೊಂದಿಗೆ ಸಂಬಂಧ ಬೆಳೆಸಲು ಸಹಕಾರಿಯಾಯಿತು. “ನಾನು ಈ ಅವಕಾಶವನ್ನು ಜನರೊಂದಿಗೆ ಬೆರೆಯಲು ಬಳಸಿಕೊಂಡೆ, ಅವರಿಗೆ ಪ್ರಶ್ನೆಗಳನ್ನು ಹಾಕಿದೆ. ಉದ್ಯಮ ಮತ್ತು ಅದರ ಪರಿಣಾಮಗಳನ್ನು ತಿಳಿದುಕೊಂಡೆ. ಹಾಂಕಾಂಗ್​​ನಲ್ಲಿ ಸಾಮಾಜಿಕ ಉದ್ಯಮದ ಬಗೆಗಿನ ನನ್ನ ಕಲಿಕೆ, ನನಗೆ ಸಾಮಾಜಿಕ ಪರಿಣಾಮ ಬೀರಬಲ್ಲ ಅವಕಾಶಗಳನ್ನು ಹುಡುಕಲು ನೆರವಾದವು. ಇದು ನನಗೆ ಗ್ರಾಮೀಣ ಭಾರತದಲ್ಲಿ ಸಾಕಷ್ಟ ನೆರವು ನೀಡಿತು.”

ಸಂಶೋಧನೆ

ಚಿನ್ಮಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಜೊತೆ ಕೊಯಂಬತ್ತೂರಿನಲ್ಲಿ ಅನಂತ್ ಅವರು ಎರಡು ಬೇಸಿಗೆಗಳ ಕಾಲ ಕೆಲಸ ಮಾಡಿದ್ದರು. ಕ್ಷೇತ್ರ ಕೆಲಸದ ಅಂಗವಾಗಿ ಎಷ್ಟು ಸಾಧ್ಯವೋ ಅಷ್ಟು ಮಾಹಿತಿ ಕಲೆ ಹಾಕಿದರು. ಫಲಾನುಭವಿಗಳ ಮಾಹಿತಿ ಸಂಗ್ರಹಿಸಿದರು. “ನನಗೆ ಗ್ರಾಮೀಣ ಜನರ ಜೊತೆಗೆ ಅದರಲ್ಲೂ ಮುಖ್ಯವಾಗಿ ಮಹಿಳೆಯರ ಜೊತೆ ಸಂವಹನ ನಡೆಸುವ ಅವಕಾಶ ಸಿಕ್ಕಿತು. ಯಾಕೆಂದರೆ ಈ ಪ್ರದೇಶದಲ್ಲಿ ನಿರುದ್ಯೋಗಿಗಳ ಪೈಕಿ ಮಹಿಳೆಯರ ಸಂಖ್ಯೆಯೇ ಹೆಚ್ಚು. ಅವರಲ್ಲಿ ಉದ್ಯಮ ನಡೆಸುವ ಕಲ್ಪನೆ ಹಲವರಲ್ಲಿತ್ತು. ಆದರೆ, ಅವರಿಗೆ ಸರಿಯಾದ ಬೆಂಬಲ ಸಿಕ್ಕಿರಲಿಲ್ಲ. ನಾನು ಮಹಿಳಾ ಮಂಡಲಗಳ ಸ್ವ ಸಹಾಯ ಗುಂಪುಗಳ ಜೊತೆಗೂ ವ್ಯವಹರಿಸಿದ್ದೇನೆ. ಉದ್ಯಮದ ಬಗ್ಗೆ ಅವರ ಅಭಿಪ್ರಾಯ ಸಂಗ್ರಹಿಸಿದ್ದೇನೆ. ನೇಯ್ಗೆಯ ಬಗ್ಗೆ ಅವರಲ್ಲಿ ಹಲವರಿಗೆ ಆಸಕ್ತಿ ಇತ್ತು. ಮತ್ತು ಅದರಲ್ಲೇ ಮುಂದುವರಿಯುವುದು ಸೂಕ್ತ ಎಂಬ ಅಭಿಪ್ರಾಯವನ್ನೂ ಅವರು ಕೊಟ್ಟಿದ್ದರು. ನಾನು ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ತುನಿ ಸೀಡ್ ಅರಂಭಿಸಿದೆ.

ಅವರು ಹೇಗೆ ಕೆಲಸ ಮಾಡುತ್ತಾರೆ?

ತುನಿ ಸೀಡ್ ಎನ್ನುವುದು ಗ್ರಾಮೀಣ ಭಾರತಕ್ಕೆ ಅತ್ಯಗತ್ಯವಾದ ಉದ್ಯಮ ಮಾದರಿಯಾಗಿದೆ. ವಿಡಿಯೋ ಸಿರೀಸ್, ಪ್ಲೇಬುಕ್, ಐಡಿಯಾ ಬ್ಯಾಂಕ್ ಮೊದಲಾದ ಚಟುವಟಿಕೆಗಳ ಮೂಲಕ ನಾವು ಗ್ರಾಮೀಣ ಮಹಿಳೆಯರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಅವರಿಗೆ ಸ್ಫೂರ್ತಿ ತುಂಬಲು, ಮಾಹಿತಿ ನೀಡಲು, ಮಾರುಕಟ್ಟೆ ಬೆಂಬಲ ನೀಡಲು ನಾವು ನಮ್ಮದೇ ವೆಬ್​ಸೈಟ್ ಬೆಂಬಲ ನೀಡುತ್ತೇವೆ.

ಈಗ ಬಹುತೇಕ ಕಾರ್ಯಕ್ರಮಗಳನ್ನು ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮಗಳಾಗಿ ಬಿಂಬಿಸಲಾಗುತ್ತಿದೆ. ಆದರೆ ನಿಜವಾಗಿಯೂ ಅವರು ಕೇವಲ ಟೈಲರಿಂಗ್​ನಂತಹ ಕನಿಷ್ಟ ತರಬೇತಿಗಳನ್ನು ನೀಡುತ್ತಿದ್ದಾರೆ. ನಿಜವಾಗಿಯೂ ಉದ್ಯಮವನ್ನು ಸ್ಥಾಪಿಸುವುದು ಎಂದರೆ ಹೊಸ ಉತ್ಪನ್ನವನ್ನು ತಯಾರಿಸುವುದು ಎಂದರ್ಥ. ಅದಕ್ಕೆ ಕೌಶಲ್ಯ ಬೇಕು ಎನ್ನುತ್ತಾರೆ ಅನಂತ್. ಪ್ಲೇಬುಕ್, ವಿಡಿಯೋ ಸಿರೀಸ್, ಐಡಿಯಾಬ್ಯಾಂಕ್​​ಗಳನ್ನು ಒಟ್ಟಾಗಿಸುವ ಮೂಲಕ ಗ್ರಾಮೀಣ ಉದ್ಯಮಿಗಳು ಹೆಚ್ಚು ಪ್ರಚಾರ ಪಡೆಯಬಹುದಾಗಿದೆ.

ತುನಿ ಸೀಡ್ ತಮ್ಮ ಉದ್ಯಮವನ್ನು ಇನ್ನಷ್ಟು ವಿಸ್ತರಿಸುವ ಚಿಂತನೆಯಲ್ಲಿದೆ. ಅದಕ್ಕಾಗಿ ಇತರ ಗ್ರಾಮೀಣಾಭಿವೃದ್ಧಿ ಸಂಸ್ಥೆಗಳ ಜೊತೆಗೆ ಅದು ಕೆಲಸ ಮಾಡುತ್ತಿದೆ. ಪ್ರಾರಂಭಿಕ ಹಂತದಲ್ಲಿಯೇ ಅದು ಫಲಾನುಭವಿಗಳಿಗೆ ಲಾಭ ಸಿಗುವಂತೆ ಮಾಡಲು ಪ್ರಯತ್ನಿಸುತ್ತದೆ. ನಾವು ವೃತ್ತಿ ತರಬೇತಿ ಕೇಂದ್ರಗಳ ಮೂಲಕ ದೊಡ್ಡದೊಂದು ಜಾಲ ಸ್ಥಾಪಿಸಲು ಯತ್ನಿಸಿದೆವು. ಈ ಮೂಲಕ ಗ್ರಾಮೀಣ ಉದ್ಯಮಿಗಳಿಗೆ ಅವರ ಕೌಶಲ್ಯವನ್ನು ಎಲ್ಲಾ ಸಂದರ್ಭಗಳಲ್ಲೂ ಬಳಸಲು, ಉತ್ತಮ ವ್ಯವಹಾರ ನಡೆಸಲು ಸಾಧ್ಯವಾಗುತ್ತಿದೆ ಎನ್ನುತ್ತಾರೆ ಅನಂತ್.

image


ಇಷ್ಟೆಲ್ಲಾ ಮಾತನಾಡುವ ಅನಂತ್ ವಯಸ್ಸು ಇನ್ನೂ 17. ಆದರೆ ಅವರ ಯೋಚನೆ, ಯೋಜನೆ ಚಿಂತನೆಯಲ್ಲಿ ಅತ್ಯಂತ ಸ್ಪಷ್ಟತೆ ಇದೆ. ನಮ್ಮ ಜೊತೆಗಾರ ಸಂಸ್ಥೆಗಳು ನನ್ನನ್ನು ಗಂಭೀರವಾಗಿ ಪರಿಗಣಿಸುತ್ತವೆಯೋ ಎನ್ನುವುದರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲಿಲ್ಲ. ಕಾರಣ, ನನಗೆ ಏನನ್ನು ಭರ್ತಿ ಮಾಡಬೇಕು ಎನ್ನುವುದರ ಸ್ಪಷ್ಟ ಕಲ್ಪನೆಯಿತ್ತು. ಆರಂಭದಲ್ಲಿ ನನ್ನ ಪೋಷಕರಿಗೂ ಇದು ಯಾವ ರೀತಿ ಕೆಲಸ ಮಾಡುತ್ತದೆ ಎನ್ನುವುದರ ಆತಂಕವಿತ್ತು. ಆದರೆ ನಾನು ಗ್ರಾಮೀಣ ಭಾರತದಲ್ಲಿ ಹಲವು ತಿಂಗಳುಗಳನ್ನು ಕಳೆದಿದ್ದೆ. ಗ್ರಾಮೀಣಾಭಿವೃದ್ಧಿಯಲ್ಲಿ ವರ್ಷಗಳ ಕಾಲ ಸೇವೆ ಸಲ್ಲಿಸಿದವರ ಜೊತೆಗೆ ಕೆಲಸ ಮಾಡಿದೆ. ಮುಖ್ಯವಾಗಿ ನಾನು ಸಹಾಯ ಮಾಡುವ ಮಹಿಳೆಯರ ಜೊತೆ ಹೆಚ್ಚು ವಿಶ್ವಾಸದಿಂದ ಇದ್ದೆ.

ಮನುಷ್ಯನಿಗೆ ನೀವು ಮೀನು ಕೊಟ್ಟು ದಿನದ ಹಸಿವು ನೀಗಿಸಬಹುದು. ಆದರೆ ಆತನಿಗೆ ಮೀನು ಹಿಡಿಯಲು ಹೇಳಿಕೊಟ್ಟು ಜೀವನಪೂರ್ತಿ ಹಸಿವು ನೀಗಿಸಬಹುದು.

ಇದು ಅನಂತ್ ನಂಬಿ ಬಾಳುತ್ತಿರುವ ತತ್ವ. ಅನಂತ್ ದೃಷ್ಟಿಕೋನವು, ಜಗತ್ತಿನಾದ್ಯಂತ ಬಡವರ ಕಲ್ಯಾಣಕ್ಕಾಗಿ ಸಾಮಾಜಿಕ ಕ್ರಾಂತಿ ಮಾಡುವುದಾಗಿದೆ. ಬಡತನದಲ್ಲಿ ಹುಟ್ಟಿದರೂ ಅವರು ಅವಕಾಶದಿಂದ ವಂಚಿತರಾಗಬಾರದು ಎನ್ನುವುದು ಅನಂತ್ ಅಭಿಲಾಷೆ.

ನಾವು ಭಾರತವನ್ನು ಪ್ರಜಾಸತ್ತಾತ್ಮಕ ಗಣತಂತ್ರವೆಂದು ಕರೆಯುತ್ತೇವೆ. ಆದರೆ ನಿಜವಾಗಿಯೂ ನಮ್ಮ ದೇಶದಲ್ಲಿ ಎಲ್ಲರಿಗೂ ಸಮಾನವಾಗಿ ಅವಕಾಶಗಳ ಹಂಚಿಕೆಯಾಗುತ್ತಿಲ್ಲ. ನಗರ ಮಧ್ಯಮ ವರ್ಗಗಳ ಜನರ ಕಥೆಗಿಂತ ಗ್ರಾಮೀಣ ಜನರ ಕಥೆ ತುಂಬಾ ಭಿನ್ನವಾಗಿದೆ. ನಾನು ಗ್ರಾಮೀಣ ಜನರಿಗೆ ಅವಕಾಶಗಳನ್ನು ಸೃಷ್ಟಿಸಿಕೊಳ್ಳು ನೆರವಾಗುತ್ತಿದ್ದೇನೆ ಎನ್ನುತ್ತಾರೆ ಅನಂತ್.