ಸಾಕ್ಷರತೆ, ಮರುಬಳಕೆ ಮತ್ತು ಪರಿಸರಸ್ನೇಹಿ ಸಮಾಜ ನಿರ್ಮಾಣದತ್ತ ಯೂಸ್ಡ್‌ ಟು ಯೂಸ್‌ಫುಲ್ ಸಂಸ್ಥೆ ಹೆಜ್ಜೆ

ಟೀಮ್​​ ವೈ.ಎಸ್​.

ಸಾಕ್ಷರತೆ, ಮರುಬಳಕೆ ಮತ್ತು ಪರಿಸರಸ್ನೇಹಿ ಸಮಾಜ ನಿರ್ಮಾಣದತ್ತ ಯೂಸ್ಡ್‌ ಟು ಯೂಸ್‌ಫುಲ್ ಸಂಸ್ಥೆ ಹೆಜ್ಜೆ

Thursday October 22, 2015,

3 min Read

ನೀವು ಆತನಿಗೆ ಬಳಸಿದ ಪೇಪರ್‌ಗಳನ್ನು ಕೊಡಿ, ಅದರ ಬದಲಿಗೆ ಆತ ನಿಮಗೆ ನಿಮ್ಮಿಷ್ಟದ ಪುಸ್ತಕಗಳನ್ನು ಕೊಡುಗೆಯಾಗಿ ಕೊಡುತ್ತಾನೆ. ಇದು ನಂಬಲಸಾಧ್ಯ ಎನ್ನಿಸಿದರೂ ಸತ್ಯ.

2014ರ ಮಾರ್ಚ್ 26ರಂದು ಯೂಸ್ಡ್ ಟು ಯೂಸ್‌ಫುಲ್ ಆರಂಭವಾಯಿತು. ಜನರು ಹಾಗೂ ವಿದ್ಯಾರ್ಥಿಗಳಿಗೆ ಬಳಸಿದ ಪೇಪರ್ ನೀಡಿ ಅದರ ಬದಲಿಗೆ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಲಭ್ಯವಿರುವ ನಿಮ್ಮಿಷ್ಟದ ಪುಸ್ತಕವನ್ನು ಆಯ್ದುಕೊಳ್ಳುವ ಅವಕಾಶ ನೀಡುತ್ತಿದೆ ಯೂಸ್ಡ್ ಟು ಯೂಸ್‌ಫುಲ್ ಸಂಸ್ಥೆ. ಒಂದು ವೇಳೆ ನಿಮ್ಮಿಷ್ಟದ ಪುಸ್ತಕ ಯೂಸ್ಡ್ ಟು ಯೂಸ್‌ಫುಲ್ ಸಂಸ್ಥೆಯಲ್ಲಿ ಲಭ್ಯವಿರದಿದ್ದರೆ ನೀವು ಆ ಪುಸ್ತಕದ ಕುರಿತು ಅವರ ವೆಬ್‌ಸೈಟ್ ಗೆ ಮಾಹಿತಿ ರವಾನಿಸಿ ನಿಮ್ಮ ಬೇಡಿಕೆಯನ್ನು ನೋಂದಾಯಿಸಬಹುದು. ಯೂಸ್ಡ್‌ ಟು ಯೂಸ್‌ಫುಲ್ ವೆಬ್‌ಸೈಟ್‌ನವರು ನಿಮಗೆ ಆ ಪುಸ್ತಕವನ್ನು ಪಡೆಯಲು ಸಹಕರಿಸುತ್ತಾರೆ. ಆದರೆ ಇದಕ್ಕೆ ನೀವು ಮಾಡಬೇಕಿರುವುದು ಇಷ್ಟೇ. ನೀವು ಬಳಸಿದ ಪೇಪರ್‌ಗಳನ್ನು ಯೂಸ್ಡ್‌ ಟು ಯೂಸ್‌ಫುಲ್ ಸಂಸ್ಥೆಗೆ ನೀಡವುದು.

image


ಸಣ್ಣ ಪಟ್ಟಣದಿಂದ ದೊಡ್ಡ ನಗರಕ್ಕೆ ಬಂದ ವ್ಯಕ್ತಿಯ ಪ್ರಯಾಣದ ಅನುಭವ

ಯೂಸ್ಡ್ 2 ಯೂಸ್‌ಫುಲ್ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಓ ಗಿರೀಶ್ ರೆಡ್ಡಿ ಮೂಲತಃ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ವೆಂಕಟಗಿರಿಯ ಕೋಟ ಎಂಬ ಸಣ್ಣಪಟ್ಟಣದವರು. ದೊಡ್ಡ ಪಟ್ಟಣಗಳತ್ತ ಅಷ್ಟೇನೂ ವಿಸ್ಮಯ ಹೊಂದಿರದ ಒಬ್ಬ ಸರಳ ಸಾಧಾರಣ ವ್ಯಕ್ತಿ ಗಿರೀಶ್. ನಗರಗಳ ಅಗತ್ಯಗಳನ್ನು ಪೂರೈಸಲು ಅರಣ್ಯಗಳ ನಾಶ, ಸಾಹಿತ್ಯದಲ್ಲಿ ಕುಸಿಯುತ್ತಿರುವ ಆಸಕ್ತಿ ಮತ್ತು ಪೇಪರ್‌ನ ಬಳಕೆ ಮತ್ತು ಪೇಪರ್ ಉತ್ಪಾದಿಸಲು ಬಳಸುವ ಮೂಲ ವಸ್ತು ಮರಗಳನ್ನು ಪೋಷಿಸುವಲ್ಲಿನ ವಿಫಲತೆ ಇವುಗಳ ಕುರಿತು ಬಹಳಷ್ಟು ಕಲಿತಿದ್ದಾರೆ. ಇದೆಲ್ಲವನ್ನೂ ಒಂದೇ ಕಡೆ, ಒಂದೇ ವೇದಿಕೆಯನ್ನು ಬಳಸಿಕೊಂಡು ಹೇಳುವ ಅವಕಾಶಕ್ಕಾಗಿ ಗಿರೀಶ್ ಕಾಯುತ್ತಿದ್ದರು. ಪುನರ್​​ಬಳಕೆ ಎಂಬ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಲೂ ಸಹ ಅವರು ಪ್ರಯತ್ನಿಸುತ್ತಿದ್ದರು. ನಾನು ಬಂದ ಸ್ಥಳದಲ್ಲಿ ಪುನರ್​​ಬಳಕೆ ಬಗ್ಗೆ ಯಾರಿಗೂ ಪ್ರಜ್ಞಾಪೂರ್ವಕವಾಗಿ ತಿಳಿದಿರಲಿಲ್ಲ. “ನನ್ನ ಸೋದರಿಯ ಪುಸ್ತಕಗಳು 20 ವರ್ಷದಿಂದ ಸುಮ್ಮನೆ ಬಿದ್ದಿದ್ದರೂ ಅದನ್ನೇನು ಮಾಡಬೇಕೆಂದು ನನಗೆ ತಿಳಿದಿರಲಿಲ್ಲ” ಎನ್ನುತ್ತಾರೆ ಗಿರೀಶ್.

ಭಯಂಕರವಾದ ಕಥೆ ಹೇಳುವ ಸಂಖ್ಯೆಗಳು

ಭಾರತದಲ್ಲಿ ಪ್ರತಿ ವರ್ಷ 13 ಮಿಲಿಯನ್ ಟನ್ ಪೇಪರ್‌ ಉತ್ಪಾದಿಸಲಾಗುತ್ತಿದೆ. ಆದರೆ ಇವುಗಳ ಮರುಬಳಕೆಯಾಗುವುದು ಶೇ.26ರಷ್ಟು ಮಾತ್ರ.(ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ ಬಹಳ ಕಡಿಮೆ) ಪ್ರತಿ ವರ್ಷ ಭಾರತ 3750ಕೋಟಿ ಬೆಲೆಯ 4.6 ಮಿಲಿಯನ್ ಟನ್ ವೇಸ್ಟ್ ಪೇಪರ್‌ಗಳನ್ನು ಯುರೋಪ್ ಮತ್ತು ಅಮೆರಿಕಾದಿಂದ ಮರುಬಳಕೆಗಾಗಿಯೇ ಆಮದು ಮಾಡಿಕೊಳ್ಳುತ್ತಿದೆ.

2025ರ ವೇಳೆಗೆ ಪೇಪರ್‌ಗಳನ್ನು ಬಳಸುವ ಸಂಖ್ಯೆ 26 ಮಿಲಿಯನ್ ಆಗುತ್ತದೆ ಎಂದು ಅಂದಾಜಿಸಲಾಗಿದೆ. ಇದು 300 ಮರಗಳನ್ನು ಕಡಿದು ಮತ್ತು 100 ಬಿಲಿಯನ್ ಗ್ಯಾಲನ್ ನೀರನ್ನು ಬಳಸಿ ಉತ್ಪತ್ತಿಯಾದ ಕಾಗದಗಳಾಗಿರುತ್ತವೆ. ವರದಿಗಳು ಹೇಳುವಂತೆ 2025ರ ಹೊತ್ತಿಗಾಗಲೇ ಭಾರತ, ನೀರಿನ ಅಭಾವವಿರುವ ದೇಶವಾಗಿರುತ್ತದೆ.

ಮರುಬಳಕೆ ಮತ್ತು ಸಾಹಿತ್ಯದ ಪ್ರಚಾರಕ್ಕಾಗಿ ಒಂದು ದೊಡ್ಡ ಯೋಜನೆ

ನಮ್ಮ ಬಿಡುವಿಲ್ಲದ ಜೀವನದಲ್ಲಿ ಮರಗಳನ್ನು ಬೆಳೆಸಲು ನಮಗೆ ಮನಸ್ಸಿದ್ದರೂ ಅಲ್ಲಿ ನೂರಾರು ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ನಗರದ ಯಾವ ಭಾಗದಲ್ಲಿ ಗಿಡ ನೆಡುವುದು?, ಈ ಗಿಡಗಳ ಬಗ್ಗೆ ಕಾಳಜಿ ತೆಗೆದುಕೊಳ್ಳುವುದು ಹೇಗೆ?, ಯಾವ ರೀತಿಯ ಅನುಮತಿಗಳು ನಿಮಗೆ ಅಗತ್ಯ? ಇಂತಹ ಪ್ರಶ್ನೆಗಳಿಂದ ಗಿಡಗಳನ್ನು ಬೆಳೆಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದಕ್ಕೆ ಒಂದೇ ಪರಿಹಾರ. ನಿಮಗೆ ಗಿಡ ನೆಡಲು ಸಾಧ್ಯವಿರದಿದ್ದರೆ ಮರುಬಳಕೆಗಾಗಿ ಕಾಗದಗಳನ್ನು ಸಂಗ್ರಹಿಸಿ.

ಹೆಚ್ಚು ಓದಿ, ಮರುಬಳಕೆಯನ್ನು ಹೆಚ್ಚಿಸಿ ಇದು ಯೂಸ್ಡ್ ಟು ಯೂಸ್‌ಫುಲ್ ಸಂಸ್ಥೆಯ ಘೋಷವಾಕ್ಯ. ಬಳಸಿದ ಪೇಪರ್‌ಗಳನ್ನು ಸಂಗ್ರಹಿಸಲು ಗಿರೀಶ್, ಶಾಲೆಗಳು ಮತ್ತು ಅಪಾರ್ಟ್ ಮೆಂಟ್‌ಗಳಲ್ಲಿ ಕ್ಯಾಂಪೇನ್ ಮಾಡುತ್ತಿದ್ದಾರೆ. ಅಲ್ಲದೇ ಸಾಕ್ಷರತೆ ಮತ್ತು ಓದುವಿಕೆಯನ್ನು ಪ್ರೋತ್ಸಾಹಿಸುವುದೂ ಸಹ ಗಿರೀಶ್‌ ಅಭಿಲಾಶೆ. ಹೀಗಾಗಿ ಗ್ರಾಮೀಣ ಭಾರತದಲ್ಲಿ ಸಾಕ್ಷರತೆಯ ಮಹತ್ವ ಸಾರುವುದಕ್ಕಾಗಿಯೇ ತಮ್ಮ ಸಂಸ್ಥೆಯಲ್ಲಿ ಪೇಪರ್ ಬದಲಿಗೆ ಪುಸ್ತಕ ಎಂಬ ನೀತಿಯನ್ನು ಜಾರಿಗೊಳಿಸಿದ್ದಾರೆ. ಸರ್ಕಾರಿ ಶಾಲೆಗಳಿಗೆ ಆಗಾಗ ಭೇಟಿ ನೀಡುವ ಗಿರೀಶ್ ಅಲ್ಲಿನ ಮಕ್ಕಳಿಗೆ ಮರುಬಳಕೆ ಬಗ್ಗೆ ತಿಳುವಳಿಕೆ ನೀಡುತ್ತಾರೆ. ‘ನಮಗೆ ನೀಡಲ್ಪಟ್ಟ ಪೇಪರ್‌ನ ತೂಕದ ಆಧಾರದ ಮೇಲೆ ಗ್ರಾಹಕರಿಗೆ ಹೊಸ ಪುಸ್ತಕಗಳನ್ನು ನೀಡುತ್ತೇವೆ. ಈ ಮೂಲಕ ಗ್ರಾಹಕರಿಗೆ ಸಾಹಿತ್ಯದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ.’ ಹೀಗೆ ಸಂಗ್ರಹಿಸಲ್ಪಟ್ಟ ಕಾಗದಗಳನ್ನು ಸಮೀಪದ ಮರುಬಳಕೆಯ ಘಟಕಕ್ಕೆ ಕಳುಹಿಸಲಾಗುತ್ತದೆ. 1 ಟನ್ ಕಾಗದವನ್ನು ಮರುಬಳಕೆ ಮಾಡಿದರೆ ಅದರಿಂದ 17 ಮರಗಳು, 7000 ಗ್ಯಾಲನ್ ನೀರು, ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಶಕ್ತಿಯ ಬಳಕೆಯನ್ನು ಉಳಿಸಬಹುದು.

ಯೂಸ್ಡ್ ಟು ಯೂಸ್‌ಫುಲ್ ಗ್ರಂಥಾಲಯದಲ್ಲಿ ಕಾದಂಬರಿಗಳು, ಸ್ಪೂರ್ತಿದಾಯಕ, ಶೈಕ್ಷಣಿಕ, ಧಾರ್ಮಿಕ ಮತ್ತು ಉದ್ಯಮ ಸೇರಿದಂತೆ ವಿವಿಧ ವಿಭಾಗದ ಪುಸ್ತಕಗಳ ದೊಡ್ಡ ಸಂಗ್ರಹವಿದೆ. ಇಂಗ್ಲೀಷ್, ಹಿಂದಿ, ತಮಿಳು, ಕನ್ನಡ, ಮಲಯಾಳಂ ಮತ್ತು ತೆಲುಗು ಭಾಷೆಗಳ ಪುಸ್ತಕಗಳು ಲಭ್ಯವಿದ್ದು ಕಾಗದಗಳನ್ನು ನೀಡಿದವರ ಮನೆಬಾಗಿಲಿಗೆ ಉಚಿತವಾಗಿ ಪುಸ್ತಕಗಳನ್ನು ರವಾನಿಸಲಾಗುವುದು. ವೆಬ್‌ಸೈಟ್‌ನಲ್ಲಿ ಗ್ರಾಹಕರು ಪುಸ್ತಕಗಳ ಸಂಗ್ರಹವನ್ನು ನೋಡಬಹುದು. ಒಂದು ವೇಳೆ ಗ್ರಾಹಕರು ಇಚ್ಛಿಸಿದ ಪುಸ್ತಕ ಯೂಸ್ಡ್ ಟು ಯೂಸ್‌ಫುಲ್ ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲದೇ ಹೋದರೆ ತಮಗೆ ಬೇಕಿರುವ ಪುಸ್ತಕದ ಕುರಿತು ಬೇಡಿಕೆ ಇಡಬಹುದು. ಸಂಸ್ಥೆಯ ಮೂಲಕ ಆ ಪುಸ್ತಕವನ್ನು ತರಿಸಿ ಅವರಿಗೆ ಕೊಡಲಾಗುವುದು. ಕಾಗದದ ಮರುಬಳಕೆಯ ಪ್ರಮಾಣವನ್ನು ಗರಿಷ್ಠ ಮಟ್ಟಕ್ಕೇರಿಸುವುದು, ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ಬೆಳೆಸುವುದು ಮತ್ತು ಭವಿಷ್ಯದಲ್ಲಿ ತನ್ನ ಸಂಸ್ಥೆಯ ಶಾಖೆಯ ಮೂಲಕ ನಿರುದ್ಯೋಗವನ್ನು ನಿವಾರಣೆಗೆ ಶ್ರಮಿಸುವುದು ಯೂಸ್ಡ್ ಟು ಯೂಸ್‌ಫುಲ್ ಸಂಸ್ಥೆಯ ಅಂತಿಮ ಗುರಿ.

ಹೆಚ್ಚು ಜನರನ್ನು ತಲುಪುವ ಮತ್ತು ಗ್ರಂಥಾಲಯವನ್ನು ವಿಸ್ತರಿಸುವ ಕಾರ್ಯಕ್ರಮ

ತಮ್ಮ ಸಂಸ್ಥೆಗೆ ಅಗತ್ಯವಿರುವ ಹೂಡಿಕೆಗಾಗಿ ಗಿರೀಶ್ ಮಿಲಾಪ್(ಕ್ರೌಡ್ ಫಂಡಿಂಗ್ ವೇದಿಕೆ) ಅನ್ನು ಬಳಸಿಕೊಳ್ಳುತ್ತಿದ್ದಾರೆ. ಮಿಲಾಪ್ ಮೂಲಕ ಬಂದ ಹಣದಿಂದ ಮತ್ತಷ್ಟು ಪುಸ್ತಕಗಳನ್ನು ಕೊಳ್ಳುವುದು, ತಮ್ಮ ಸಂಸ್ಥೆಯ ಪ್ರಚಾರಕ್ಕಾಗಿ ನಗರಗಳಲ್ಲಿ ಸಂಚರಿಸಲು ವಾಹನ, ಮನೆಬಾಗಿಲಿಗೆ ಉಚಿತ ಪುಸ್ತಕಗಳನ್ನು ವಿತರಿಸಲು ಬೈಕ್ ಖರೀದಿಸುವು ಗಿರೀಶ್ ಉದ್ದೇಶ.

ಐಸಿಡಬ್ಲ್ಯುಎ(ಇನ್ಸ್​​ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ)ಯಲ್ಲಿ ಪದವಿ ಮುಗಿಸಿದ ಬಳಿಕ ಅಕೌಂಟ್ಸ್ ಅಸಿಸ್ಟೆಂಟ್ ಆಗಿ ಕೆಲ ಕಾಲ ಕಾರ್ಯನಿರ್ವಹಿಸಿದ ಗಿರೀಶ್ ಕೊನೆಗೆ ಯೂಸ್ಡ್ ಟು ಯೂಸ್‌ಫುಲ್ ಸಂಸ್ಥೆಯನ್ನು ಆರಂಭಿಸಿದರು. ಗಿರೀಶ್ ಅವರ ಜೊತೆ ಮಾತನಾಡುತ್ತಿದ್ದರೆ ಸಾಧನೆ ಹಾಗೂ ಸಾರ್ಥಕತೆಯ ಭಾವ ಆವರಿಸುತ್ತದೆ. ಇದಕ್ಕೂ ಮೊದಲು ಅನೇಕ ಕಡೆ ಕಾರ್ಯನಿರ್ವಹಿಸಿದ್ದೇನೆ. ಆದರೆ ಈ ಉದ್ಯಮ ನನಗೆ ತೃಪ್ತಿ ನೀಡಿದೆ. ಕಾಗದದ ಮರುಬಳಕೆಯಲ್ಲಿ ಶೇ.1ರಷ್ಟು ಏರಿಕೆಯಾದರೂ ಅದನ್ನೂ ಸಹ ನಮ್ಮ ಯಶಸ್ಸೆಂದೇ ಪರಿಗಣಿಸುತ್ತೇವೆ ಎನ್ನುತ್ತಾ ಮಾತು ಮುಗಿಸುತ್ತಾರೆ ಗಿರೀಶ್ ರೆಡ್ಡಿ.