ಮುಖ್ಯಮಂತ್ರಿ ನಿಜಲಿಂಗಪ್ಪನವರಿಗೆ ಸವಾಲು ಹಾಕಿದ್ದ ಕನ್ನಡದ ಧೀಮಂತ ಕವಿ ಅಡಿಗರು

ವಿಶ್ವಾಸ್​​​ ಭಾರಾಧ್ವಾಜ್​​

ಮುಖ್ಯಮಂತ್ರಿ ನಿಜಲಿಂಗಪ್ಪನವರಿಗೆ ಸವಾಲು ಹಾಕಿದ್ದ ಕನ್ನಡದ ಧೀಮಂತ ಕವಿ ಅಡಿಗರು

Monday November 02, 2015,

6 min Read

ಕನ್ನಡವೆಂದರೇ ತಾಯಿಯೇ ದೇವರೇ

ನಾನೂ ನೀನು ಅವರು

ಜನಮನದೊಳಗುದಿ ಮಿಡಿತ ತುಡಿತಗಳ

ಪ್ರತಿಕೃತಿ ಗತಿ ನೂರಾರು

ಹೀಗಂತ ಕನ್ನಡತನವನ್ನು ತಮ್ಮದೇ ದಾಟಿಯಲ್ಲಿ ಬರೆದ ಕನ್ನಡದ ಶ್ರೇಷ್ಠ ಸರಸ್ವತೀ ಪುತ್ರ ನವ್ಯ ಹಾಗೂ ನವೋದಯ ಪಂಥಗಳ ಪ್ರಾತಿನಿಧಿಕ ಕವಿ ಪ್ರೊ. ಎಂ ಗೋಪಾಲಕೃಷ್ಣ ಅಡಿಗರು. ಕನ್ನಡದ ಹೆಸರಾಂತ ಪತ್ರಕರ್ತ ಪಿ.ಲಂಕೇಶ್​​ರಿಂದ “ಒಂದು ಶತಮಾನದ ಕಣ್ಣು ತೆರೆಸಿದ ಕವಿ” ಎಂದು ಬಣ್ಣಿಸಲ್ಪಟ್ಟ ಕವಿಯೂ ಅಡಿಗರು. ಕುಂದಾಪುರದ ಮೊಗೇರಿ ಎನ್ನುವ ಹಳ್ಳಿಯಲ್ಲಿ ಯಕ್ಷಗಾನ ಬಯಲಾಟದ ಸಂಸ್ಕೃತಿ ಪರಂಪರೆಯ ವಾತಾವರಣದಲ್ಲಿ ಬೆಳೆದು ಬಂದ ಅಡಿಗರು 70, 80 ಹಾಗೂ 90ರ ದಶಕದಲ್ಲಿ ಕನ್ನಡದ ಸಾಕ್ಷಿ ಪ್ರಜ್ಞೆ ಎನಿಸಿದ ಮಹಾನ್ ಕವಿ. ಇಂಗ್ಲೀಷ್ ಪ್ರೊಫೆಸರ್​ ಆಗಿ, ಕವಿಯಾಗಿ, ಅಂಕಣಕಾರರಾಗಿ, ಪತ್ರಕರ್ತರಾಗಿ, ಸಮಾಜವಾದಿ ಚಿಂತಕರಾಗಿ, ಲೋಹಿಯಾವಾದಿಯಾಗಿ ಹಾಗೂ ಕನ್ನಡದ ಘನ ವಿದ್ವಾಂಸರಾಗಿ ತಮ್ಮದೇ ಆದ ಪ್ರತ್ಯೇಕತೆಯನ್ನು ಗಳಿಸಿಕೊಂಡಿದ್ದಾರೆ.

image


60ರ ದಶಕದಲ್ಲೇ ನಿಸಿಂ ಎಕ್ಸಿಜಲ್ ಅನ್ನುವ ಚಿಂತಕ ಅಡಿಗರನ್ನು ಕನ್ನಡದಲ್ಲಿ ಬರೆಯುತ್ತಿರುವ 20ನೇ ಶತಮಾನದ ಅಂತರಾಷ್ಟ್ರೀಯ ಕವಿ ಎಂದು ಕರೆದರೇ, ಇನ್ನೂ ಕೆಲವು ಘನ ವಿದ್ವಾಂಸರು ಅಡಿಗರಿಗೆ ಅಂತರಾಷ್ಟ್ರೀಯ ಕವಿ ಎನ್ನುವ ಬಿರುದು ನೀಡಿದ್ದಾರೆ. ಅವರ ಕಟ್ಟುವೆವು ನಾವು ಪದ್ಯದ 

“ಹೊಸ ನೆತ್ತರುಕ್ಕುಕ್ಕಿ ಆರಿ ಹೋಗುವ ಮುನ್ನ, 

ಹರೆಯದೀ ಮಾಂತ್ರಿಕನ ಮಾಟ ಮಸಳುವ ಮುನ್ನ,

ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ ಈ ಕ್ಷುಬ್ಧ ಸಾಗರವು ಬತ್ತಿ ಹೋಗುವ ಮುನ್ನ

ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು” 

ಎನ್ನುವ ಸಾಲುಗಳು ಬಿಸಿ ರಕ್ತದ ಯುವಕರ ನರ ನಾಡಿಗಳಿಗೆ ವಿದ್ಯುತ್ ಸಂಚಾರ ಕಲ್ಪಿಸುತ್ತವೆ.

ಕನ್ನಡದ ನವಪೀಳಿಗೆಯ ಸಾಹಿತಿಗಳಿಗೆ ಅವರು ಮಾರ್ಗದರ್ಶಕರು:

ಕನ್ನಡದ ಬಹುತೇಕ ಸಾಹಿತ್ಯ ದಿಗ್ಗಜರಿಗೆ ಮಾರ್ಗದರ್ಶನ ನೀಡಿದ ಶ್ರೇಯ ಗೋಪಾಲಕೃಷ್ಣ ಅಡಿಗರಿಗೆ ಸಲ್ಲಬೇಕು. ಖ್ಯಾತ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಡಾ. ಯು.ಆರ್ ಅನಂತಮೂರ್ತಿ, ಡಾ.ಚಂದ್ರಶೇಖರ್ ಕಂಬಾರ, ಕವಿ ಸುಮತೀಂದ್ರ ನಾಡಿಗ, ಹೆಚ್.ಎಸ್. ವೆಂಕಟೇಶಮೂರ್ತಿ, ಡಾ.ಲಕ್ಷ್ಮೀನಾರಾಯಣಭಟ್, ಕನ್ನಡದ ಖ್ಯಾತ ವಿಮರ್ಶಕರಾದ ಕಿ.ರಂ.ನಾಗರಾಜ್, ಡಿ.ಆರ್.ನಾಗರಾಜ್, ಕೀರ್ತಿನಾಥ ಕುರ್ತಕೋಟಿ ಮುಂತಾದ ಸರಸ್ವತಿ ಪುತ್ರರತ್ನಗಳನ್ನು ತಿದ್ದಿ ತೀಡಿ ಬೆಳೆಸಿದ್ದೇ ಗೋಪಾಲಕೃಷ್ಣ ಅಡಿಗರು ಅನ್ನುವ ಮಾತು ಸಾಹಿತ್ಯ ವಲಯದಲ್ಲಿದೆ. ತಮ್ಮದೇ ಆದ ಮೊನಚಾದ ಶೈಲಿಯಲ್ಲಿ ಪದ್ಯ ಬರೆಯುತ್ತಿದ್ದ ಅಡಿಗರು ಓದುಗರ ಅಚ್ಚುಮೆಚ್ಚಿನ ಹಾಗೂ ನೆಚ್ಚಿನ ಕವಿಯಾಗಿದ್ದರು. ಅನಿಸಿದ್ದನ್ನು ಯಾವುದೇ ಮುಲಾಜಿಲ್ಲದೇ, ಯಾರಿಗೂ ಹೆದರದೇ ನಿರ್ಭೀತಿಯಿಂದ ನೇರವಾಗಿ ಹೇಳುವ ದಾಟಿ ಅಡಿಗರ ಪದ್ಯಗಳ ಅತಿ ಮುಖ್ಯ ಲಕ್ಷಣ.

image


ಬಾಲ್ಯದಲ್ಲೇ ಸಾಹಿತ್ಯ ಗೀಳು-ಓದುವ ಆಸೆ ಮುಳ್ಳಿನ ದಾರಿ:

ಅಡಿಗರು ತಮ್ಮ ಬಾಲ್ಯದಲ್ಲಿಯೇ ಅವನ ನೆನವು, ರಾಕಾಚಂದ್ರ, ಬಡತನದ ಭೂತಕಾಗಿ, ಟಿಪ್ಪುವೇ, ಅಳಗನಬ್ಬಿನ ಕಳವಳ, ಕರೆ, ಮೋಡ ಒಳತೋಟಿ ಮುಂತಾದ ಅತ್ಯದ್ಭುತ ಪ್ರಾಸಬದ್ಧ ಕವಿತೆಗಳನ್ನು ಬರೆದಿದ್ದರು. ಬಾಲ್ಯದಲ್ಲಿ ಅಂತರ್ಮುಖಿ ವ್ಯಕ್ತಿತ್ವ ಹೊಂದಿದ್ದ ಅಡಿಗರು ದಕ್ಷಿಣ ಕನ್ನಡ ಜಿಲ್ಲೆಯ ಯಕ್ಷಗಾನ ಸಂಸ್ಕೃತಿಗೆ ಮಾರುಹೋಗಿದ್ದವರು. ಪುರೋಹಿತ ಮನೆತನದಲ್ಲಿ ಹುಟ್ಟಿದ ಅಡಿಗರು ತಮ್ಮ ಊರಿನ ರಮ್ಯ ಪರಿಸರ, ಮಹಾಸಾಗರದ ನೀರವ ಮೌನ ಹಾಗೂ ಭತ್ತದ ಗದ್ದೆಗಳು, ತೆಂಗಿನ ತೋಟಗಳ ವಾತಾವರಣದಲ್ಲಿ ತಮ್ಮ ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆ ಕಂಡರು.

ಮಿಡಲ್​​ಸ್ಕೂಲ್ ಹಾಗೂ ಹೈಸ್ಕೂಲ್ ಓದುವ ಅವಧಿಯಲ್ಲಿ ಕೈಗೆ ಸಿಕ್ಕಿದ್ದನ್ನು ಓದುತ್ತಿದ್ದ ಅವರು, ಅನೇಕ ವೇಳೆ ತಮ್ಮ ಸಮಯವನ್ನು ಓದಿದ್ದನ್ನು ಮನನ ಮಾಡಿಕೊಳ್ಳುವ ಹಾಗೂ ತಾರ್ಕಿಕವಾಗಿ ಅದನ್ನು ಅವಲೋಕಿಸುವ ಕಾರ್ಯದಲ್ಲಿ ಗಹನವಾಗಿ ತೊಡಗುತ್ತಿದ್ದರು. ಅಡಿಗರ ಮನೆಯಲ್ಲಿ ಎಲ್ಲರೂ ಸಂಸ್ಕೃತ ಹಾಗೂ ವೇದಗಳ ಕಲಿಕೆಗೆ ಮಹತ್ವ ಕೊಡುತ್ತಿದ್ದರೇ ಅಡಿಗರ ಮನಸಿದ್ದಿದ್ದು ಉನ್ನತ ವ್ಯಾಸಂಗ ಹಾಗೂ ಇಂಗ್ಲೀಷ್ ಸಾಹಿತ್ಯದ ಕಲಿಕೆ. ಹೀಗಾಗಿ ಹುಟ್ಟಿದೂರು ಬಿಟ್ಟು ಮೈಸೂರಿಗೆ ಬಂದ ಅಡಿಗರು, ಆರ್ಥಿಕವಾಗಿ ಅತ್ಯಂತ ಕಷ್ಟದ ದಿನಗಳನ್ನು ದೂಡಿ, ವಾರಾನ್ನದ ಬಲದ ಮೇಲೆ ತಮ್ಮ ಪದವಿ ಹಾಗೂ ಸ್ನಾತಕೋತ್ತರ ಮುಗಿಸಿದರು.

ಶಿಕ್ಷಣ ಹಾಗೂ ಅಧ್ಯಾಪಕ ವೃತ್ತಿ:

ಅಡಿಗರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲೀಷ್ ವಿಷಯದಲ್ಲಿ ಬಿ.ಎ. ಆನರ್ಸ್, 1942ರಲ್ಲಿ ನಾಗಪುರ ವಿಶ್ವವಿದ್ಯಾನಿಲಯದಲ್ಲಿ ಎಂ.ಎ .ಆನರ್ಸ್ ಪದವಿ ಗಳಿಸಿದ್ದರು. ಬಳಿಕ 1952ರ ನಂತರ ಹೈಸ್ಕೂಲ್ ಅಧ್ಯಾಪಕರಾಗಿ, ಮೈಸೂರಿನ ಶಾರದಾ ವಿಲಾಸ ಕಾಲೇಜ್​​ನಲ್ಲಿ, ಕುಮುಟಾದ ಕೆನರಾ ಕಾಲೇಜಿನಲ್ಲಿ, ಮೈಸೂರಿನ ಸೆಂಟ್ ಫಿಲೋಮಿನಾ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ನಡೆಸಿದರು. ಸುಮಾರು 10 ವರ್ಷಗಳ ಕಾಲ ಇಂಗ್ಲೀಷ್ ರೀಡರ್ ಆಗಿಯೂ ಕಾರ್ಯ ನಿರ್ವಹಿಸಿದರು. 1962ರಲ್ಲಿ ಸಾಕ್ಷಿ ಅನ್ನುವ ಮಾಸ ಪತ್ರಿಕೆ ಹೊರತರುವ ಮೂಲಕ ಸಾಹಿತ್ಯ ಪತ್ರಿಕೋದ್ಯಮ ನಡೆಸಿದರು. ಸಾಗರದ ಲಾಲ್ ಬಹದ್ದೂರ್ ಕಾಲೇಜಿನಲ್ಲಿ, ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಅಡಿಗರು ಇಂಗ್ಲೀಷ್ ಉಪನ್ಯಾಸಕರಾಗಿ ಹಾಗೂ ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ. ಅಡಿಗರು ಸಾಗರದಲ್ಲಿ ಪ್ರಿನ್ಸಿಪಾಲರಾಗಿದ್ದ ಅವಧಿಯಲ್ಲಿಯೇ ಅದೇ ಕಾಲೇಜಿನಲ್ಲಿ ಚಂದ್ರಶೇಖರ್ ಕಂಬಾರರು ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ಇನ್ನೊಬ್ಬ ಕನ್ನಡದ ಹೆಸರಾಂತ ವಿಚಾರವಂತರಾದ ಪ್ರೊ. ಜಿ.ಕೆ ಗೋವಿಂದ್ರಾವ್ ಲೈಬ್ರರಿಯನ್ ಆಗಿ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿದ್ದು ಇದೇ ಅವಧಿಯಲ್ಲಿ.

ಅಡಿಗರ ಕವಿ, ಕಾವ್ಯ ಸಮಗ್ರ ಪರಿಚಯ:

ಅಡಿಗರು ಭಾವತರಂಗ, ಕಟ್ಟುವೆವು ನಾವು, ನಡೆದುಬಂದ ದಾರಿ, ಚಂಡೆಮದ್ದಳೆ, ಭೂಮಿಗೀತ, ವರ್ಧಮಾನ, ಬತ್ತಲಾಗದ ಗಂಗೆ, ಮಾವೋ ಕವನಗಳು, ಇದನ್ನು ಬಯಸಿರಲಿಲ್ಲ, ಮೂಲಕ ಮಹಾಶಯರು, ಚಿಂತಾಮಣಿಯಲ್ಲಿ ಕಂಡ ಮುಖ, ಬಾ ಇತ್ತ ಇತ್ತ, ಸುವರ್ಣ ಪುತ್ಥಳಿ, ಅನುಬಂಧ-1 ಮುಂತಾದ ಹತ್ತು ಹಲವು ಸುಪ್ರಸಿದ್ಧ ಕವನ ಸಂಕಲಗಳನ್ನೂ ಆಕಾಶದೀಪ, ಅನಾಥೆ ಎನ್ನುವ ಕಾದಂಬರಿಗಳನ್ನೂ ಬರೆದಿದ್ದಾರೆ. ಅವರ 7 ದಶಕಗಳ ಸಾಹಿತ್ಯ ಕೃಷಿಯಲ್ಲಿ ಸುಮಾರು 12 ಕವನ ಸಂಕಲನಗಳು ಬಿಡುಗಡೆಯಾಗಿವೆ. ಜೊತೆಗೆ ಹುಲಿರಾಯ ಮತ್ತಿತರ ಕಥೆಗಳು, ಕಿಶೋರ ಕೃತ್ಯಗಳು, ಬೇರೆ ಬೇರೆ ಅವಧಿಯಲ್ಲಿ ಬರೆದ ಬಿಡಿ ಬಿಡಿ ಕಥೆಗಳ ಸಂಕಲನ ಹೊರತಂದಿದ್ದಾರೆ. ಮಣ್ಣಿನ ವಾಸನೆ, ವಿಚಾರಪಥ, ಕನ್ನಡ ಅಭಿಮಾನ, ನಮ್ಮ ಶಿಕ್ಷಣಕ್ಷೇತ್ರ ಮುಂತಾದ ಅನೇಕ ವಿಚಾರ ವಿಮರ್ಶೆಗಳೂ ಅಡಿಗರ ಪ್ರಖರ ಬರವಣಿಗೆಗೆ ಸಾಕ್ಷಿಯೆನಿಸಿವೆ. ಸುವರ್ಣಕೀಟ, ರೈತರ ಹುಡುಗಿ, ಜನತೆಯ ಶತ್ರು, ಭೂಗರ್ಭ ಯಾತ್ರೆ, ಹುಲ್ಲಿನ ದಳಗಳು, ಮುಕ್ತಾಫಲ, ಇತಿಹಾಸ ಚಕ್ರ, ಬನದ ಮಕ್ಕಳು, ಟೈಪೀ, ಕೆಂಪು ಅಕ್ಷರ, ನಾಲ್ಕು ಮಂದಿ ಗೆಳೆಯರ ಕಥೆ, ಕಾವ್ಯ ಜಗತ್ತು, ಕೆಸರಿನಿಂದ ಶಿಖರಕ್ಕೆ ಅನ್ನುವ ಅನುವಾದಿತ ಸಾಹಿತ್ಯದ ಜೊತೆಗೆ ಅವರ ಸಮಗ್ರ ಗದ್ಯವೂ ಪ್ರಕಟವಾಗಿದೆ. ಅವರ ಆಯ್ದ ಪ್ರಬಂಧಗಳು ಎರಡು ಸಂಚಿಕೆಯಲ್ಲಿ ಬಿಡುಗಡೆಗೊಂಡಿವೆ. ಅವರ ಆರಂಭದ ರಚನೆಗಳಾದ ಆರೂಡು ಸಮ್ಮಿಶ್ರ ಕಾವ್ಯವಾಗಿದ್ದರೇ, ನೆನಪಿನ ಗಣಿಯಿಂದ ಎನ್ನುವುದು ಅಡಿಗರ ಆತ್ಮಚರಿತ್ರೆ. ಐಬಿಹೆಚ್ ಪ್ರಕಾಶನ ಹಾಗೂ ಸಾಕ್ಷಿ ಪ್ರಕಾಶನಗಳು ಅವರ ಸಮಗ್ರ ಸಂಕಲನಗಳ ಕಾವ್ಯ ಹೊರತಂದಿವೆ. ಅಡಿಗರ ಬಹುತೇಕ ಪುಸ್ತಕಗಳಿಗೆ ಕನ್ನಡ ಸಾರಸ್ವತ ಲೋಕದ ಅತಿರಥ ಮಹಾರಥರುಗಳಾದ ದ.ರಾ ಬೇಂದ್ರೆ, ಪುತಿನ, ಯು.ಆರ್ ಅನಂತಮೂರ್ತಿ, ಎನ್.ಎಸ್ ಲಕ್ಷ್ಮಿನಾರಾಯಣ ಭಟ್ಟ, ಕಿ.ರಂ ನಾಗರಾಜ್, ಪಿ.ಶ್ರೀನಿವಾಸರಾವ್, ಸುಮತೀಂದ್ರ ನಾಡಿಗರು ಮುನ್ನುಡಿ ಬರೆದಿದ್ದಾರೆ.

ಅಡಿಗರ ಒಳತೋಟಿ ಕವಿತೆಗೆ ಬಿಎಂಶ್ರೀ ಸುವರ್ಣಪದಕ ಲಭಿಸಿತ್ತು. ಅವರ ಸಾಹಿತ್ಯ ಕೃಷಿಯ ಅನವರತ ಕಾರ್ಯಕ್ಕೆ ಗೌರವಸೂಚಕವಾಗಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅವರ ವರ್ಧಮಾನ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ದೊರಕಿವೆ. ಇದಲ್ಲದೇ ಕುಮಾರಾನ್ ಆಸಾನ್, ವರ್ಧಮಾನ ಪ್ರಶಸ್ತಿ, ಕಬೀರ್ ಸಮ್ಮಾನ್ ಪುರಸ್ಕಾರ, ಮರಣೋತ್ತರ ಪಂಪ ಪ್ರಶಸ್ತಿಗಳು ಅಡಿಗರ ಸಾಹಿತ್ಯ ಸೇವೆಗೆ ಸಿಕ್ಕ ಅಮೂಲ್ಯ ಕಾಣಿಕೆ. 1979ರಲ್ಲಿ ಅಡಿಗರು ಧರ್ಮಸ್ಥಳದಲ್ಲಿ ನಡೆದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.

ಅಡಿಗರ ಸಾಹಿತ್ಯಗಳ ವಿಮರ್ಶೆಯ ಬಗ್ಗೆ ಹತ್ತು ಹಲವು ಪುಸ್ತಕಗಳು ರಚನೆಯಾಗಿವೆ. ರಾಮದಾಸ್​​ರ ಭೂಮಿಗೀತ ಕಾವ್ಯಪ್ರವೇಶ, ಜಿ.ಹೆಚ್ ನಾಯಕ್ ಮತ್ತು ಹೆಚ್.ಎಂ ಚೆನ್ನಯ್ಯರವರು ಬರೆದ ಸಂವೇದನೆ, ಡಾ.ಸುಮತೀಂದ್ರ ನಾಡಿಗರು ಬರೆದ ಅಡಿಗರ ಕಾವ್ಯ, ಡಾ.ಎನ್ಎಸ್ ಲಕ್ಷ್ಮೀನಾರಾಯಣ ಭಟ್ಟರು ಬರೆದ ಕಾವ್ಯಶೋಧನ, ದೇಶಪಾಂಡೆ ಸುಬ್ಬರಾಯರು ಬರೆದ ಅನ್ವೇಷಣದ ಅಡಿಗರು, ಡಾ.ಯು.ಆರ್ ಅನಂತಮೂರ್ತಿ ರಚಿಸಿದ ಸಂಸ್ಕೃತಿ ಮತ್ತು ಅಡಿಗ, ಬಿ.ವಿ ಕೆದಿಲಾಯ ವಿರಚಿತ ಗೋಪಾಲಕೃಷ್ಣ ಅಡಿಗ, ಲಕ್ಷ್ಮೀನಾರಾಯಣ ಭಟ್ಟರೇ ಬರೆದ ಮತ್ತೊಂದು ವಿಮರ್ಶಾಗ್ರಂಥ ಅನ್ಯ ಮುಂತಾದವು ಅಡಿಗರ ಕಾವ್ಯ ಪರಂಪರೆಯನ್ನು ಪೋಷಿಸುವ ಗ್ರಂಥಗಳು.

ಕಲಿತಿದ್ದು, ಕಲಿಸಿದ್ದು, ಓದಿದ್ದು, ಸುತ್ತಿದ್ದು..

ಅಡಿಗರು ದೆಹಲಿಯಲ್ಲಿ ನ್ಯಾಷನಲ್ ಬುಕ್ ಟ್ರಸ್ಟ್​​ನ ಡೆಪ್ಯೂಟಿ ಡೈರೆಕ್ಟರ್​​ರಾಗಿ ಹಾಗೂ ಸಂಪಾದಕೀಯ ವಿಭಾಗದಲ್ಲಿ ಸುಮಾರು ಕಾಲ ಕೆಲಸ ಮಾಡಿದ್ದರು. ಶಿಮ್ಲಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್​​​​​ ಸ್ಟಡೀಸ್​​ನ ವಿಸಿಟಿಂಗ್ ಪ್ರೊಫೇಸರ್​​ರಾಗಿ ಅಡಿಗರು ಕಾಣಿಸಿಕೊಂಡಿದ್ದು ಈ ದಶಕದಲ್ಲೇ. ನಂತರ ವಿಶ್ವಕವಿ ಸಮ್ಮೇಳನದಲ್ಲಿ ಭಾಗವಹಿಸಲು ಪ್ಯಾರಿಸ್ ಹಾಗೂ ಯುಗಸ್ಲೋವಿಯಾಗಳಿಗೆ ಭೇಟಿ ನೀಡಿ, ಅದಾದ ಬಳಿಕ ಅಮೇರಿಕಾ ಸಹ ಸಂದರ್ಶಿಸಿದರು. ಅಧ್ಯಾಪಕ ವೃತ್ತಿ ಜೀವನದಿಂದ ನಿವೃತ್ತಿ ಹೊಂದಿದ ನಂತರ ಅಡಿಗರು ಎರಡನೇ ಬಾರಿ ಅಮೇರಿಕಾ ಭೇಟಿ ಮಾಡಿದರು. ಅಮೇರಿಕಾದಿಂದ ವಾಪಾಸು ಬಂದ ಕೆಲವೇ ದಿನಗಳಲ್ಲಿ ಅವರು ಪಾರ್ಶ್ವವಾಯು ಖಾಯಿಲೆಗೆ ತುತ್ತಾದರು. ಆದರೂ ತಮ್ಮ ಕಟ್ಟಕಡೆಯ ದಿನದವರೆಗೂ ಅಡಿಗರು ಬರವಣಿಗೆ ನಿಲ್ಲಿಸಲಿಲ್ಲ.

image


ಬಿಡದಂತೆ ಹಿಡಿದ ಸಮಾಜವಾದದ ಸೆಳೆತ

ಅಡಿಗರಿಗೆ ಬಾಲ್ಯದಲ್ಲಿ ಹೇಗೆ ಗಾಂಧಿ ಹಾಗೂ ವಿವೇಕಾನಂದರ ವಿಚಾರಗಳು ಆಕರ್ಷಿಸಿತ್ತೋ ಹಾಗೇ ಪ್ರಬುದ್ಧತೆಯ ಅವಧಿಯಲ್ಲಿ ಲೋಹಿಯಾವಾದ ಹಾಗೂ ಸಮಾಜವಾದ ಸೆಳೆದಿತ್ತು. ಕನ್ನಡದ ಧೀಮಂತ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರು ಅಡಿಗರ ಆತ್ಮೀಯ ಮಿತ್ರರಾಗಿದ್ದರು. ಕೋಣಂದೂರು ಲಿಂಗಪ್ಪರಂತಹ ಸಮಾಜವಾದಿ ನಾಯಕರ ಒಡನಾಟವಿತ್ತು. ಸಾಗರದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿದ್ದ ಸಂದರ್ಭದಲ್ಲಿ ಸಾಗರಕ್ಕೆ ಲೋಹಿಯಾ ಭೇಟಿ ನೀಡಿದ್ದಾಗ ಅಡಿಗರು ತಲೆಗೆ ಕೆಂಪು ಟೋಪಿ ಧರಿಸಿ ಲೋಹಿಯಾ ಭೇಟಿಗೆ ಹೋಗಿದ್ದರು. ಇದು ಮೂಲತಃ ಕಾಂಗ್ರೆಸ್ ಹಿನ್ನೆಲೆಯವರಾದ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜು ಕಮಿಟಿಯ ಅಧ್ಯಕ್ಷರಾದ ಕೆ.ಹೆಚ್ ಶ್ರೀನಿವಾಸ್​​ರಿಗೆ ಅಸಹನೀಯ ಸಂಗತಿಯಾಗಿತ್ತು. ಅಡಿಗರು ಸಾಗರ ತೊರೆಯಲು ಇದು ಪ್ರಮುಖ ಕಾರಣ. 70ರ ದಶಕದಲ್ಲಿ ಜನಸಂಘದ ಲೋಕಸಭಾ ಅಭ್ಯರ್ಥಿಯಾಗಿ ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅಡಿಗರು ಸೋಲಿನ ಕಹಿಯುಂಡಿದ್ದರು. ತಮ್ಮ ಅಮೇರಿಕಾ ಪ್ರವಾಸದಿಂದ ಹಿಂತಿರುಗಿ ಬಂದ ಅಡಿಗರು ಎರಡನೇ ಬಾರಿ ಸಮಾಜವಾದಿ ಪಕ್ಷದಿಂದ ವಿಧಾನಸಭೆ ಚುನಾವಣೆಗೂ ಸ್ಫರ್ಧಿಸಿ ಸೋಲನ್ನು ಅನುಭವಿಸಿದರು.

ಆದರೂ ಕೊನೆಯದಿನಗಳವರೆಗೂ ಸಮಾಜವಾದದ ಸೆಳೆತ ಅವರನ್ನು ಬಿಟ್ಟಿರಲಿಲ್ಲ. ಅವರು ತಮ್ಮ ಭೂಮಿಗೀತದಲ್ಲಿ “ಹೆಳವನ ಹೆಗಲ ಮೇಲೆ ಕುರುಡ ಕುಳಿತಿದ್ದಾನೆ ದಾರಿ ಸಾಗುವುದೆಂತೋ ಕಾಣಬೇಕು” ಅನ್ನುವ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದಾರೆ. ವ್ಯವಸ್ಥೆಯ ಲೋಪಗಳು ಅಡಿಗರ ಆಕ್ರೋಶಕ್ಕೆ ಕಾರಣವಾಗಿದ್ದವು. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲ್ಪಟ್ಟಾಗ ಅವರು ಈ ಕ್ರಮವನ್ನು ಖಂಡಿಸಿ “ನನ್ನ ನಾಲೆಗೆ ನೀರು” ಅನ್ನುವ ಪದ್ಯ ಬರೆದಿದ್ದರು.

ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪನವರಿಗೆ ಸವಾಲು ಹಾಕಿ ಬಂದಿದ್ದರು..!

ಅಡಿಗರಿಗೆ ಸಾತ್ವಿಕವಾದ ಅಹಂಕಾರವಿತ್ತು. ಅವರು ಯಾವತ್ತೂ ಯಾರಿಗೂ ದೇಹಿ ಅಂದವರಲ್ಲ. ಅವರು ಬರೆದಿದ್ದ ಪ್ರಾರ್ಥನಾ ಕವಿತೆಯಲ್ಲೂ ಇದನ್ನೇ ಉಲ್ಲೇಖಿಸಿ “ಪ್ರಭು, ನಾನು ಯಾರಿಗೂ ನಡು ಬಗ್ಗಿಸಿ ಡೊಗ್ಗು ಸಲಾಮು ಹಾಕಲಾರೆ” ಎಂದು ಬರೆದಿದ್ದರು. ಅವರ ಈ ಪದ್ಯವನ್ನು ಸ್ವತಃ ಅಡಿಗರೇ ದಸರಾ ಕವಿಗೋಷ್ಠಿಯಲ್ಲಿ ಓದಿದ್ದರು. ಬಳಿಕ ಈ ಪದ್ಯ ಆಕಾಶವಾಣಿಯಲ್ಲಿ ಪ್ರಸಾರಗೊಂಡಿದ್ದಲ್ಲದೇ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವೂ ಆಯಿತು. ಇದು ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪನವರ ಮಂತ್ರಿ ಮಂಡಲದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ಪದ್ಯದಲ್ಲಿ ಅಶ್ಲೀಲತೆ ವಿಜೃಂಭಿಸುತ್ತಿದೆ, ಅಡಿಗರಿಗೆ ಸೂಕ್ತ ವಾಗ್ದಂಡನೆಯಾಗಬೇಕು ಎಂದು ಮುಖ್ಯಮಂತ್ರಿ ನಿಜಲಿಂಗಪ್ಪನವರಿಗೆ ಯಾರೋ ದೂರು ನೀಡಿದ್ದರು. ಅದರಂತೆ ನಿಜಲಿಂಗಪ್ಪ ಅಡಿಗರಿಗೆ ಪತ್ರ ಬರೆದು ತುರ್ತಾಗಿ ಬಂದು ವಿವರಣೆ ನೀಡುವಂತೆ ಕೋರಿದ್ದರು. ಆದರೆ ಅಡಿಗರು ತಮಗನುಕೂಲವಾದ ದಿನ ಬಂದು ಕಾಣುವುದಾಗಿ ಪತ್ರ ಬರೆದಿದ್ದರು. ಅಷ್ಟೇ ಅಲ್ಲ ನಿಜಲಿಂಗಪ್ಪನವರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಪದ್ಯದ ಅರ್ಥ ಕೇಳಿದಾಗ ಕೆಂಡಾಮಂಡಲವಾಗಿದ್ದರು. ನಿಮಗೆ ಪ್ರಾರ್ಥನ ಪದ್ಯದಲ್ಲಿ ಅಶ್ಲೀಲತೆ ಕಾಣಿಸಿದ್ದರೆ ಅದು ನಿಮ್ಮ ಬೌದ್ಧಿಕ ಸಾಮರ್ಥ್ಯದ ಕೊರತೆಯೇ ವಿನಃ ನನ್ನ ಪದ್ಯದ್ದಲ್ಲ. ನಿಮಗೆ ವಿವರಣೆ ಬೇಕಿದ್ದರೇ ಅನಂತಮೂರ್ತಿಯವರನ್ನೋ, ಪು.ತಿ ನರಸಿಂಹಾಚಾರ್​​ರನ್ನೋ ಕೇಳಿ ಎಂದು ಸವಾಲು ಹಾಕಿದ್ದರು. ಇದು ಆಗಿನ ಸಂದರ್ಭದಲ್ಲಿ ಸಾಹಿತ್ಯಿಕ ಹಾಗೂ ರಾಜಕೀಯ ವಲಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದ್ದ ವಿದ್ಯಮಾನವಾಗಿತ್ತು.

ಅಡಿಗರು ಕನ್ನಡದಲ್ಲಿ ಬರೆಯುತ್ತಿದ್ದ ಅಂತರಾಷ್ಟ್ರೀಯ ಕವಿ

ಅಡಿಗರು ಕನ್ನಡ ಸಾಹಿತ್ಯವನ್ನು ಅಕ್ಷರಶಃ ಆಳಿದ ಕವಿ. ಅವರಿಗೆ ಇಂಗ್ಲೀಷ್ ಪಾಂಡಿತ್ಯದ ಜೊತೆ ಫ್ರೆಂಚ್ ಹಾಗೂ ಇನ್ನಿತರೆ ವಿದೇಶಿ ಸಾಹಿತ್ಯ ಹಾಗೂ ರಂಗಭೂಮಿಯ ಪ್ರೀತಿಯಿತ್ತು. ಯುರೋಪ್​​ನ ಸಾಹಿತ್ಯವನ್ನು ಅರಗಿಸಿಕೊಳ್ಳಬಲ್ಲ ಹಾಗೂ ಅರ್ಥ ಮಾಡಿಕೊಳ್ಳಬಲ್ಲ ಕೆಲವೇ ಬೆರಳಣಿಕೆ ಭಾರತೀಯರಲ್ಲಿ ಅಡಿಗರೂ ಒಬ್ಬರಾಗಿದ್ದರು. ಸಿಗ್ಮಂಡ್ ಫ್ರಾಯ್ಡ್​ನ ಮನಃಶಾಸ್ತ್ರವನ್ನು ಒದಿಕೊಂಡಿದ್ದ ಅಡಿಗರು ಸದಾ ಖಂಡತುಂಡವಾಗಿ ಮಾತನಾಡುವ ಸ್ವಭಾವದವರಾಗಿದ್ದರು. ಪಿ. ಲಂಕೇಶ್, ಜೆ.ಹೆಚ್ ಪಟೇಲ್, ರಾಮಕೃಷ್ಣ ಹೆಗಡೆ, ಎಂ.ಪಿ. ಪ್ರಕಾಶ್, ರಂತಹ ಪ್ರಗತಿ ರಂಗದ ಗೆಳೆಯರು ಅಡಿಗರನ್ನು ಗುರುಗಳೆಂದೇ ಸಂಭೋದಿಸುತ್ತಿದ್ದರು. ಅಂತಹ ಧೀಮಂತಿಕೆಯ ಕವಿ ಗೋಪಾಲಕೃಷ್ಣ ಅಡಿಗರು 1992ರಲ್ಲಿ ನಿಧನ ಹೊಂದಿದರು. ಅವರ 

ಯಾವ ಮೋಹನ ಮುರಳಿ ಕರೆಯಿತೋ, 

ಅಳುವ ಕಡಲಲಿ ತೇಲಿ ಬರುತಲಿದೆ,

ಇಂದು ಕೆಂದಾವರೆಯ ದಳದಳಿಸಿ ದಾರಿಯಲಿ,

ಮೌನ ತಬ್ಬಿತು ನೆಲವ..

ಮುಂತಾದ ಅನೇಕ ಭಾವಗೀತೆಗಳು ಕನ್ನಡಿಗರ ಮನಸಿನಲ್ಲಿ ಶಾಶ್ವತ ಕಂಪನ್ನು ಬೀರುತ್ತಲೇ ಇವೆ.

    Share on
    close