ಕಲಿತಿದ್ದು 7ನೇ ತರಗತಿಯಾದರೂ ಉದ್ಯಮ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಸಾಧಕ..!

ವಿಶ್ವಾಸ್​ ಭಾರಾಧ್ವಾಜ್​​

ಕಲಿತಿದ್ದು 7ನೇ ತರಗತಿಯಾದರೂ ಉದ್ಯಮ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಸಾಧಕ..!

Wednesday November 18, 2015,

3 min Read

7ನೇ ತರಗತಿ ಓದುತ್ತಿದ್ದ ಆ ಹುಡುಗನನ್ನು ಮನೆಯಿಂದ ಹೊರಹಾಕಿದ್ದರು. ಆತ ಬೀದಿಗೆ ಬಿದ್ದ ಬಳಿಕ ನೇರವಾಗಿ ಮುಂಬೈಗೆ ಬಂದಿಳಿದ. ಆತ ವೃತ್ತಿ ಆರಂಭಿಸಿದ್ದು ಕೇವಲ 4 ಸಾವಿರ ರೂಪಾಯಿಗಳ ಪಗಾರಕ್ಕೆ. ಆದ್ರೆ ಅದೇ ವ್ಯಕ್ತಿ ಇದೀಗ 50 ಕೋಟಿಗೂ ಮೀರಿದ ವಹಿವಾಟಿನ ರಿಟೇಲ್ ಉದ್ಯಮಿ. ಇದು ಗುಜರಾತ್ ಮೂಲದ ಮುಂಬೈನ ಉದ್ಯಮಿ ವಿಮಲ್ ಪಟೇಲ್​​ರ ಬಿಸಿನೆಸ್ ಯಶೋಗಾಥೆ. ವಿಮಲ್ ಪಟೇಲ್ ಬೇರಾರು ಅಲ್ಲ ಸುವರ್ಣ ಸ್ಪರ್ಷ್ ಅನ್ನುವ ಹರಳುಗಳ ವ್ಯವಹಾರದಲ್ಲಿ ಕ್ರಾಂತಿ ಮಾಡಿದ ಯುವ ಸಾಧಕ.

image


ಬದುಕುವ ಛಲವಿದ್ದರೆ ಬದುಕಲು ಸಾವಿರ ಮಾರ್ಗಗಳಿವೆ. ಆದ್ರೆ ಬದುಕಿನಲ್ಲಿ ಸಾಧನೆ ಮಾಡಬೇಕಿದ್ರೆ ಅಂತರಂಗದಲ್ಲಿ ಉರಿಯುವ ಮಹತ್ವಾಕಾಂಕ್ಷೆ ಇರಲೇಬೇಕು. ಅಂತಹ ತುಡಿತ ಹೊಂದಿದ್ದ ವ್ಯಕ್ತಿಯೊಬ್ಬ ಶೂನ್ಯದಿಂದ ಬೆಳೆದು ಇಂದು ಕೋಟ್ಯಾಧೀಶ್ವರನಾದ ಸಾಹಸದ ಕಥೆಯ ನಿರೂಪಕನೇ ವಿಮಲ್ ಪಟೇಲ್. ವಿಮಲ್, ಮೂಲತಃ ಗುಜರಾತ್​​ನ ಆನಂದದವರು. ಅವರ ಬದುಕೇ ಒಂದು ಅವಿರತ ಅಲೆದಾಟ ಹಾಗೂ ಸುದೀರ್ಘ ಹೋರಾಟ. ಆದ್ರೆ ನಿರಂತರ ಪರಿಶ್ರಮದ ಫಲವಾಗಿ ಇಂದು ವಿಮಲ್ ಪಟೇಲ್​​ರ ಸಂಸ್ಥೆ ಸುವರ್ಣ ಸ್ಪರ್ಷ್ ಜೆಮ್ಸ್ ಎಂಡ್ ಕೋ, ವಾರ್ಷಿಕ ಹಲವು ಕೋಟಿಗಳ ವಹಿವಾಟು ನಡೆಸುತ್ತಿದೆ.

ವಿಮಲ್ ಬದುಕಿನ ಸಿಂಹಾವಲೋಕನ

7ನೇ ತರಗತಿಯಲ್ಲಿ ಶಾಲೆಯಿಂದ ಹೊರದಬ್ಬಲ್ಪಟ್ಟವರು ಅನ್ನುವ ಕಾರಣದಿಂದ ವಿಮಲ್​​ರನ್ನು ಮನೆಯವರು ಹೊರಹಾಕಿದ್ದರು. ಹಾಗೆ ಗುಜರಾತ್​​ನ ಮನೆಯಿಂದ ಹೊರಬಿದ್ದ ಅವರು ಇಂದು ವಾರ್ಷಿಕ 50 ಕೋಟಿಗೂ ಮೀರಿದ ವಹಿವಾಟು ನಡೆಸುತ್ತಿರುವ ಸುವರ್ಣ ಸ್ಪರ್ಷ್ ಗ್ರೂಪ್ ಸಂಸ್ಥೆಯ ಸಂಸ್ಥಾಪಕ, ವ್ಯವಸ್ಥಾಪಕ ಹಾಗೂ ಅಧ್ಯಕ್ಷ. ಇದರ ಹಿಂದೆ ವಿಮಲ್​​ರ ಕಠಿಣ ಪರಿಶ್ರಮ, ದೃಢ ಸಂಕಲ್ಪ ಹಾಗೂ ಸಾಧಿಸಬೇಕೆನ್ನುವ ಅನನ್ಯ ತುಡಿತವಿತ್ತು. ತೃಪ್ತಿಯಿಂದ ತಮ್ಮ ಸಾಧನೆಯನ್ನು ಸಿಂಹಾವಲೋಕಿಸಿರುವ ವಿಮಲ್ ಪಟೇಲ್ ನಡೆದು ಬಂದ ಹಾದಿಯನ್ನು, ಅಲ್ಲಿನ ಸಂಕಷ್ಟ-ಸಂಘರ್ಷಗಳನ್ನು ಮರೆತಿಲ್ಲ.

ಶಾಲೆಯಿಂದ ಹೊರ ಹಾಕಿದ್ದ ವಿಮಲ್​​ನನ್ನು ಅವರ ಅಪ್ಪ ಮನೆಯಿಂದ ಹೊರಹಾಕಿದ್ದರು. ಆದರೆ ಅಪ್ಪನಿಂದ ವಜ್ರ, ಹರಳು, ಹಾಗೂ ಇತರೆ ಆಭರಣಗಳ ಪಾಲೀಶ್ ಮಾಡಲು ವಿಮಲ್ ಕಲಿತಿದ್ದರು. ಮುಂಬೈನಲ್ಲಿ ದೂರದ ಬಂಧುವೊಬ್ಬರ ಮನೆಯಲ್ಲಿ ವಾಸ್ತವ ಹೂಡಿ, ಚೀರಾ ಬಜಾರ್​​​ನಲ್ಲಿ ಮುತ್ತು, ವಜ್ರ ಹಾಗೂ ಹರಳುಗಳನ್ನು ಪಾಲಿಶ್​​​ ಮಾಡುವ ಕೆಲಸಕ್ಕೆ ಸೇರಿಕೊಂಡರು. ಅವರಿಗೆ ಆಗ ತಿಂಗಳಿಗೆ 4 ಸಾವಿರ ರೂ ಸಂಬಳ ನಿಗದಿಯಾಗಿತ್ತು. ಕೇವಲ ಎರಡು ವರ್ಷಗಳ ಒಳಗೆ ಅವರ ವೇತನ ಶೇ 75ರಷ್ಟು ಹೆಚ್ಚಾಯಿತು. ವಿಮಲ್​​ಗೆ ಅದರಿಂದ ತೃಪ್ತಿಯಿರಲಿಲ್ಲ. ವಿಮಲ್​​ರ ಗುರಿ ಬೇರೆಯದ್ದೇ ಆಗಿತ್ತು.

image


ವಿಮಲ್ 1997ರ ನವೆಂಬರ್​​ನಲ್ಲಿ ಕೆಲವು ಸ್ನೇಹಿತರೊಂದಿಗೆ ಕಲೆತು ಹೊಸದೊಂದು ಯೋಜನೆಗೆ ಕೈ ಹಾಕಿದ್ದರು. ಅದು ಅವರ ಬದುಕನ್ನೇ ಬದಲಾಯಿಸುವ ಮಹತ್ವಾಕಾಂಕ್ಷೆಯ ಯೋಜನೆಯಾಗಿತ್ತು. ಡ್ಯಾಮೇಜ್ ಹರಳುಗಳು ಹಾಗೂ ಜೆಮ್ಸ್ ಸ್ಟೋನ್​​ಗಳನ್ನು ಖರೀದಿಸಿ ಪಾಲೀಶ್ ಮಾಡಿ ಮಾರುವ ಕೆಲಸ ನಿಧಾನವಾಗಿ ಆರಂಭವಾಯಿತು. ಶ್ರೀಲಂಕಾ, ಥಾಯ್ಲೆಂಡ್​​ಗಳಿಂದ ಇಂತಹ ಹಾಳಾದ ಹರಳುಗಳು ಸಿಗುತ್ತಿತ್ತು. ಅದನ್ನು ಕಡಿಮೆ ದರದಲ್ಲಿ ಖರೀದಿಸಿ, ಪಾಲೀಶ್ ಮಾಡಿ ಉತ್ತಮ ರೂಪ ನೀಡುವ ಅವರ ಪ್ರಯತ್ನ ಕ್ರಮೇಣ ಫಲ ನೀಡತೊಡಗಿತು. ಕೆಲವು ಸಮಯದ ನಂತರ ವಿಮಲ್, ಮುಂಬೈನ ಗ್ರಾಮೀಣ ಪ್ರಾಂತ್ಯಗಳಲ್ಲಿ ತಿರುಗಾಡಿ ನಮ್ಮ ಪಾಲೀಶು ಮಾಡಿದ ಹರಳುಗಳಿಗೆ ಮಾರುಕಟ್ಟೆ ನಿರ್ಮಿಸುವ ಪ್ರಯತ್ನ ಮಾಡಿದರು. ಆಗಲೇ ಅವರಿಗೆ ಪ್ರತಿನಿತ್ಯ 2 ಸಾವಿರ ರೂಪಾಯಿ ಸಂಪಾದನೆಯಾಗುತ್ತಿತ್ತು. ಆ ವರ್ಷದ ಅಂತ್ಯದಲ್ಲಿ ಸುಮಾರು 50 ಸಾವಿರ ರೂಗಳನ್ನು ಉಳಿತಾಯವಾಗಿತ್ತು. ಅದೇ ವಿಮಲ್ ಜೆಮ್ಸ್ ಸಂಸ್ಥೆಯ ಬಂಡವಾಳಕ್ಕೆ ಮೂಲಧನವಾಯಿತು.

ಸುವರ್ಣಸ್ಪರ್ಷ್ ಪ್ರೈವೇಟ್ ಲಿಮಿಟೆಡ್​​ ಹುಟ್ಟು ಹಾಗೂ ಬೆಳವಣಿಗೆ

ಶ್ರೀಲಂಕಾ ಹಾಗೂ ಥಾಯ್ಲೆಂಡ್​​ನ ಗಣಿಗಳಿಗೆ ಭೇಟಿ ಕೊಟ್ಟು ಒರಟು ಹರಳುಗಳನ್ನು ಖರೀದಿಸಿ ತರತೊಡಗಿದರು. ತಮ್ಮ ಬ್ಯುಸಿನೆಸ್​​ಗೆ ಜ್ಯೋತಿಷ್ಯದ ಟಚ್ ನೀಡಿದರು. ಇದು ಅವರಿಗೆ ಇನ್ನಷ್ಟು ಯಶ ತಂದುಕೊಟ್ಟಿತು. ರಾಶಿಗಳ ಆಧಾರದಲ್ಲಿ ಹರಳುಗಳನ್ನು ಖರೀದಿಸುವ ಗ್ರಾಹಕರು ವಿಮಲ್ ಉದ್ಯಮಕ್ಕೆ ವಿಶ್ವಾಸಾರ್ಹ ಅರ್ಹತೆ ನೀಡಿದರು. ಇದಾದ ನಂತರ ವಿಮಲ್, ಸುವರ್ಣಸ್ಪರ್ಷ್ ಪ್ರೈವೆಟ್ ಲಿಮಿಟೆಡ್ ಅನ್ನೋ ಸಂಸ್ಥೆಯನ್ನ ಹುಟ್ಟುಹಾಕಿದರು.

ಪೂನಾ ಹಾಗೂ ಮುಂಬೈನಲ್ಲಿ ನಮ್ಮ ಮಳಿಗೆಗಳನ್ನು ಆರಂಭಿಸಿದ ವಿಮಲ್ ಪಟೇಲ್ ಆನಂತರ ಗ್ರಾಹಕರಲ್ಲಿ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಗಮನಿಸಿ 2011ರಲ್ಲಿ ಸುವರ್ಣಸ್ಪರ್ಷ್ ಜೆಮ್ಸ್ ಎಂಡ್ ಜ್ಯೂವೆಲ್ಸ್ ಆರಂಭಿಸಿದ್ರು. ಪ್ರಸ್ತುತ ದಾದರ್​​ನಲ್ಲಿ 4 ಶಾಖೆಗಳು, ಥಾಣೆ, ಬೋರೀವಿಲಿ, ದೊಂಬೀವಿಲಿಯಲ್ಲಿ ಹಾಗೂ ಅಂದೇರಿಯಲ್ಲಿ 3 ಶಾಖೆಗಳು, ಗುರ್​​ಗಾಂವ್, ನಾಗ್ಪುರ, ಔರಂಗಾಬಾದ್, ಭಯಾಂಡ್​​ನಲ್ಲಿ 2, ಪೂನಾದಲ್ಲಿ 7 ಶಾಖೆಗಳು, ಸಂತಾಕ್ರೂಝ್ಹ್​​ನಲ್ಲಿ, ಮಲಾಡ್, ಖಾಂಡೀವಿಲಿ, ಕುರ್ಲಾ, ಘೋಟಕ್​ಪುರ , ಕಲ್ಯಾಣ್, ಉಲ್ಲಾಸ್​​ನಗರ್, ಚೆಂಬೂರ್, ವಶಿ, ಜಲಗಾಂವ್, ಪನ್ವೆಲ್, ನಲ್ಲಸೋಪಾರ, ವಸಾಯ್, ನಾಸಿಕ್, ಕೊಲ್ಲಾಪುರ, ವಿರಾರ್, ಸಾಂಗ್ಲಿಗಳಲ್ಲಿ ಒಂದೊಂದು ಶಾಖೆಗಳೂ ಸೇರಿದಂತೆ ಒಟ್ಟು ಸುವರ್ಣಸ್ಪರ್ಷ್ ಮುಂಬೈ ಹಾಗೂ ಉಳಿದೆಡೆ ಒಟ್ಟು 52 ಔಟ್​​ಲೆಟ್​​​ಗಳನ್ನು ಹೊಂದಿದೆ. ವಿಮಲ್ ಪಟೇಲರ ಸಂಸ್ಥೆ ಹಾಗೂ ಶೋರೂಂಗಳಲ್ಲಿ 550 ಉದ್ಯೋಗಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಸದ್ಯ ಸಂಸ್ಥೆಯ ನಿವ್ವಳ ವಹಿವಾಟು ಯೋಜನೆ ಸುಮಾರು 50 ಕೋಟಿ ದಾಟಿದೆ. ಮುಂಬರುವ ದಿನಗಳಲ್ಲಿ ದೆಹಲಿ, ಕೊಲ್ಕತ್ತಾ ಹಾಗೂ ಚೆನ್ನೈಗಳಲ್ಲಿ ನಮ್ಮ ಶಾಖೆಗಳನ್ನು ತೆರೆಯುವ ಯೋಜನೆಯನ್ನು ವಿಮಲ್ ಹೊಂದಿದ್ದಾರೆ. ಒಟ್ಟಿನಲ್ಲಿ ಮನಸಿದ್ದರೆ ಮಾರ್ಗ ಅನ್ನುವಂತೆ, ಬರಿಗೈನಲ್ಲಿ ಮುಂಬೈಗೆ ಬಂದ ವಿಮಲ್ ಪಟೇಲ್ ಇಂದು ಆಭರಣದ ಹರಳು ಉತ್ಪಾದನೆ ಹಾಗೂ ಮಾರಾಟ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಸೃಷ್ಠಿಸಿದ್ದಾರೆ.