ಇನ್‌ಫಾರ್‌ಟ್ರ್ಯಾನ್‌ ಸಂಸ್ಥೆಯ ಸಂಸ್ಥಾಪಕಿ ಮತ್ತು ನಿರ್ದೇಶಕಿ ಸಿಂಧು ಗೋಪಾಲಕೃಷ್ಣನ್‌ ಅವರ ಪರಿಚಯ

ಟೀಮ್​​ ವೈ.ಎಸ್​​.

ಇನ್‌ಫಾರ್‌ಟ್ರ್ಯಾನ್‌ ಸಂಸ್ಥೆಯ ಸಂಸ್ಥಾಪಕಿ ಮತ್ತು ನಿರ್ದೇಶಕಿ ಸಿಂಧು ಗೋಪಾಲಕೃಷ್ಣನ್‌ ಅವರ ಪರಿಚಯ

Monday November 02, 2015,

3 min Read

“ಹೆರಿಗೆಯ ಬಳಿಕ ಕಚೇರಿ ಕೆಲಸಗಳಲ್ಲಿ ಪಾಲ್ಗೊಳ್ಳಲಾಗದ ಮಹಿಳೆಯರಿಗೆ ಒಂದು ಅವಕಾಶ ನೀಡಿ. ನಿಮಗೆ ಚಿನ್ನದ ಗಣಿಯಂತಹ ಪ್ರತಿಭೆಗಳು ದೊರಕುತ್ತದೆ.” ಇದು ಸಿಂಧು ಗೋಪಾಲಕೃಷ್ಣನ್ ಅವರ ನುಡಿಗಳು. ಇನ್‌ಫಾರ್‌ಟ್ರ್ಯಾನ್ ಎಂಬ ಉದ್ಯಮವೊಂದನ್ನು ಆರಂಭಿಸಿದ ಸಿಂಧು ಗೋಪಾಲಕೃಷ್ಣನ್ ಅವರ ಅನುಭವದ ಮಾತುಗಳು. ಹಾಗಾದರೆ ಅವರು ಉದ್ಯಮ ಆರಂಭಿಸಿದ್ದು ಹೇಗೆ.? ಉದ್ಯಮ ಕ್ಷೇತ್ರದಲ್ಲಿ ಅವರ ಗುರಿ ಏನು? ಎಂಬ ಎಲ್ಲಾ ಮಾಹಿತಿಯನ್ನು ಅವರಿಂದಲೇ ಪಡೆಯೋಣ.

image


2011ರಲ್ಲಿ ಟ್ಯಾಲಿ ಸೊಲ್ಯೂಷನ್‌ನ ಉನ್ನತ ಹುದ್ದೆ, ಉತ್ಪನ್ನ ನಿರ್ವಹಣೆ ಮತ್ತು ವಿತರಣೆಯ ಮುಖ್ಯಸ್ಥೆಯಾಗಿದ್ದಾಗಲೇ ನಾನು ನನ್ನ ಕೆಲಸಕ್ಕೆ ರಾಜೀನಾಮೆ ನೀಡಿದೆ. ಇದೇ ವೇಳೆಯಲ್ಲಿ ಟ್ಯಾಲಿ ಸೊಲ್ಯುಷನ್ ಸಂಸ್ಥೆ ಪ್ರಾಡಕ್ಟ್ ಬಿಸಿನೆಸ್‌ನಿಂದ ಉದ್ಯಮಗಳ ಪರಿಹಾರ ಬಿಸಿನೆಸ್‌ ಆಗಿ ಮಾರ್ಪಾಡಾಗುತ್ತಿತ್ತು. ಸಂಸ್ಥೆ ಭಾರೀ ಪ್ರಮಾಣದಲ್ಲಿ ಮರುಸ್ಥಾಪನೆಗೊಳ್ಳುತ್ತಿತ್ತು. ನಾನು ಮಾಡಬಯಸಿದ್ದ ಸಾಧನೆಗೂ, ಸಂಸ್ಥೆಯ ಕಾರ್ಯವಿಧಾನಕ್ಕೂ ದೊಡ್ಡ ವ್ಯತ್ಯಾಸವಿತ್ತು. ಐಟಿ ಇಂಡಸ್ಟ್ರಿಯಲ್ಲಿ 20 ವರ್ಷಗಳ ಅನುಭವ ಪಡೆದ ಬಳಿಕ ನಾನು ಮತ್ತೊಂದು ದೊಡ್ಡ ಕಂಪನಿಯನ್ನು ಸೇರಬೇಕೋ ಅಥವಾ ನನ್ನದೇ ಆದ ಉದ್ಯಮವನ್ನು ಆರಂಭಿಸಬೇಕೋ ಎಂದು ಚಿಂತಿಸಲಾರಂಭಿಸಿದೆ. ಅದೃಷ್ಟವಶಾತ್ ಬೆಂಗಳೂರಿನ ಐಐಎಂನಲ್ಲಿ ಮ್ಯಾನೇಜ್‌ಮೆಂಟ್ ಕೋರ್ಸ್‌ ಒಂದಕ್ಕೆ ದಾಖಲಾದೆ. ಇಲ್ಲಿ ಅಭ್ಯಾಸ ನಡೆಸುತ್ತಿದ್ದ ಸಂದರ್ಭದಲ್ಲಿ ಉದ್ಯಮಿಯಾಗುವ ಎಲ್ಲಾ ಸಾಮರ್ಥ್ಯಗಳೂ ನನ್ನಲ್ಲಿವೆ ಎಂಬುದನ್ನು ಅರಿತುಕೊಂಡೆ. ನಾನು ನನ್ನದೇ ಸ್ವಂತ ಉದ್ಯಮವನ್ನು ಆರಂಭಿಸಲು ಸಾಧ್ಯ ಮತ್ತು ಅದರ ಮೂಲಕ ನಾನಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ ಎಂಬ ಆತ್ಮವಿಶ್ವಾಸ ಹೊಂದಿದ್ದೆ. ಅಲ್ಲಿಂದ ಮುಂದೆ ನಾನು ಹಿಂತಿರುಗಿ ನೋಡಲೇ ಇಲ್ಲ. ಇದೇ ರೀತಿ ನನ್ನ ಸ್ನೇಹಿತರು, ಕುಟುಂಬಸ್ಥರು ಮತ್ತು ಮಾರ್ಗದರ್ಶಕರು ನನ್ನ ಮೇಲೆ ಅತಿಯಾದ ಭರವಸೆ ಇಟ್ಟಿದ್ದರು. ಆಗ ಸ್ವಲ್ಪ ಆರ್ಥಿಕ ಮುಗ್ಗಟ್ಟನ್ನು ಎದುರಿಸಬೇಕಾಗಿ ಬಂದರೂ ಅದರಿಂದ ನನ್ನ ಉದ್ಯಮವನ್ನು ಆರಂಭಿಸಲು ಹಿನ್ನಡೆಯಾಗಲಿಲ್ಲ. ನನ್ನ ಯೋಜನೆಯ ಬಗ್ಗೆ ನನಗೆ ನಂಬಿಕೆ ಇತ್ತು.

ಇನ್‌ಫಾರ್‌ಟ್ರ್ಯಾನ್‌ನಲ್ಲಿ ಸಣ್ಣ ಹಾಗೂ ಮಧ್ಯಮ ಮಟ್ಟದ ಉದ್ಯಮವನ್ನು ಹೊಂದಿರುವವರೇ ನನ್ನ ಗ್ರಾಹಕರು. ಉದ್ಯಮವನ್ನು ಆರಂಭಿಸಿದಾಗ ಇಆರ್‌ಪಿ(ಎಂಟರ್ ಪ್ರೈಸ್ ರಿಸೋರ್ಸ್ ಪ್ಲಾನಿಂಗ್) ಕನ್ಸಲ್ಟಿಂಗ್ ಅತಿ ನಾಜೂಕಾದ ಕೆಲಸವಾಗಿತ್ತು. ಬಹಳಷ್ಟು ಬಾರಿ, ಮಹಿಳೆಯಿಂದ ನಡೆಸಲ್ಪಡುವ ಯಾವುದೇ ಬಾಹ್ಯ ಪ್ರಚಾರವಿಲ್ಲದ ಉದ್ಯಮದ ಬಗ್ಗೆ ಜನರಲ್ಲಿ ವಿಶ್ವಾಸವಿರುವುದಿಲ್ಲ. ಆದರೆ ಕಾಲ ಬದಲಾದಂತೆ ಈ ಎಲ್ಲಾ ಗ್ರಹಿಕೆಗಳು, ಅನುಮಾನಗಳೂ ಬಗೆಹರಿದಿವೆ. ಕೌಶಲ್ಯಕ್ಕಾಗಿ ನಾವು ಪರಿಶ್ರಮ ಪಡಬೇಕು ಮತ್ತು ಗ್ರಾಹಕರ ಬಗೆಗೆ ಸರಿಯಾದ ಮನೋಭಾವ ಹೊಂದಿರಬೇಕು.

image


ಉದ್ಯಮವನ್ನು ಆರಂಭಿಸಿದಾಗ ನನಗೆ ನೆಟ್‌ವರ್ಕಿಂಗ್ ಅತೀ ದೊಡ್ಡ ಸಮಸ್ಯೆಯಾಗಿ ಕಾಡಿತ್ತು. ಇಲ್ಲಿಯವರೆಗಿನ ಜೀವನದಲ್ಲಿ ತಾಂತ್ರಿಕ ಕಾರ್ಯವಿಧಾನಗಳು ಮಾತ್ರ ನನಗೆ ತಿಳಿದಿದ್ದವು. ನನ್ನ ಉದ್ಯಮದ ಮುಖ್ಯಸ್ಥೆಯಾಗಿ ಹೊರಭಾಗದಲ್ಲಿ ಕಾರ್ಯನಿರ್ವಹಿಸುವುದು ನನಗೆ ಆರಂಭದಲ್ಲಿ ಕಷ್ಟವಾಯಿತು. ಉದ್ಯಮದಲ್ಲಿ ಹಿಂದುಳಿಯುವ ಭಯದಿಂದ ನಿಮ್ಮ ನಿರೀಕ್ಷೆಗಳನ್ನು ನೀವೇ ಮೀರಲು ಸಾಧ್ಯವಿದೆ. ಇಂದು ನೆಟ್‌ವರ್ಕಿಂಗ್ ಎಂಬುದು ಮತ್ತೊಂದು ಸಹಜವಾದ ಅನುಭವ ನೀಡುತ್ತಿದೆ. ಇದೇ ವೇಳೆ ನಾನು ಎದುರಿಸಿದ ಮತ್ತೊಂದು ದೊಡ್ಡ ಸವಾಲು ಎಂದರೆ ನನಗೆಂದೂ ಪ್ರಸ್ತುತಿಗಳನ್ನು ನೀಡಿ ಅಭ್ಯಾಸವೇ ಇರಲಿಲ್ಲ. ಶೀಘ್ರದಲ್ಲೇ ಪ್ರೆಸೆಂಟೇಶನ್ ಎಂದರೆ ಚೆನ್ನಾಗಿ ವಿನ್ಯಾಸಗೊಂಡ ಪಿಪಿಟಿಗಳು ಮಾತ್ರವಲ್ಲ ಎಂಬುದು ನನಗೆ ಅರ್ಥವಾಯಿತು. ಅದು ಗ್ರಾಹಕರನ್ನು ಅರ್ಥಮಾಡಿಕೊಳ್ಳುವಲ್ಲಿ ನಿಮಗೆ ಸಹಾಯವಾಗುವ, ನಿಮ್ಮಲ್ಲಿ ಆತ್ಮವಿಶ್ವಾಸವನ್ನುಂಟು ಮಾಡುವ ಹಾಗೂ ನಿಮ್ಮ ಮೇಲೆ, ನಿಮ್ಮ ಪಾಂಡಿತ್ಯದ ಮೇಲೆ ಗ್ರಾಹಕರ ನಂಬಿಕೆಯನ್ನು ಬಲಪಡಿಸುವ ಒಂದು ಸಾಧನ. ಈಗ ಪ್ರತೀ ವಾರವೂ ನನ್ನ ಗ್ರಾಹಕರಿಗಾಗಿ ಪ್ರಸೆಂಟೇಶನ್‌ಗಳನ್ನು ಮಾಡುತ್ತಲೇ ಇರುತ್ತೇನೆ. ಕಲಿಯಲು ತೆರೆದುಕೊಳ್ಳುವ ಮೂಲಕ, ತಪ್ಪುಗಳನ್ನು ಒಪ್ಪಿಕೊಳ್ಳುವ ಮೂಲಕ, ತಪ್ಪುಗಳಿಂದಲೇ ಕಲಿಯುವ ಮೂಲಕ ಶೀಘ್ರದಲ್ಲಿ ಬೆಳೆಯುವುದು ಉದ್ಯಮ ಬೆಳಸಲು ಅತೀ ಮುಖ್ಯವಾದ ಅಂಶವಾಗುತ್ತದೆ ಎಂಬುದನ್ನು ನಾನು ಅರಿತುಕೊಂಡೆ. ಬಂದದ್ದನ್ನು ಎದುರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ನಿಮ್ಮಷ್ಟಕ್ಕೆ ನೀವೇ ಕಲಿತುಕೊಳ್ಳಬೇಕು. ನಿಮಗಾಗಿ ಬೇರೆ ಯಾರೋ ಏನೋ ಮಾಡುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಳ್ಳಬಾರದು. ನಿಮಗೇನಾದರೂ ಅಗತ್ಯವಿದೆ ಎನ್ನಿಸಿದರೆ ನೀವೇ ಹೋಗಿ ಅದನ್ನು ಪಡೆದುಕೊಳ್ಳಬೇಕು. ಆ ವಿಚಾರದಲ್ಲಿ ನೀವು ಅಸಹಾಯಕರಾಗಬಾರದು.

ಇಂದು ನಮ್ಮ ಇನ್‌ಫಾರ್‌ಟ್ರ್ಯಾನ್ ಸಂಸ್ಥೆಯಲ್ಲಿ 15 ಮಂದಿಯ ತಂಡವಿದೆ. ಏನೂ ಅನುಭವವಿಲ್ಲದ ಅಥವಾ 2 ವರ್ಷ ಅನುಭವ ಹೊಂದಿರುವ ಯುವಕರನ್ನು ನಮ್ಮ ತಂಡಕ್ಕೆ ಸೇರಿಸಿಕೊಳ್ಳುತ್ತೇವೆ. ಯುವ ವೃತ್ತಿಪರರನ್ನು ತರಬೇತಿಗೊಳಿಸುವುದು ನನ್ನ ಉದ್ಯಮದ ಮಂತ್ರ. ಉದ್ಯಮವನ್ನು ಆರಂಭಿಸಿದಾಗಿನಿಂದ ಹಿಡಿದು ಇಲ್ಲಿಯವರೆಗೂ ಯಾವೊಬ್ಬ ನೌಕರನನ್ನೂ ತೆಗೆದುಹಾಕಿದ ಉದಾಹರಣೆ ಇಲ್ಲ. ಸಂಸ್ಥೆಯ ಲಾಭ ಕೇವಲ ಶೇ.5ರಷ್ಟಿದ್ದಾಗಲೂ ನಾವು ನೌಕರರಿಗೆ ಬೋನಸ್ ಘೋಷಣೆ ಮಾಡಿದ್ದೇವೆ. ನನ್ನ ತಂಡ ಉತ್ತಮ ಪರಿಸ್ಥಿತಿಯಲ್ಲಿರುವುದು ನನಗೆ ಅತ್ಯಂತ ಮುಖ್ಯವಾದ ವಿಷಯ. ನೌಕರರ ಬಗ್ಗೆ ಇಂಥದ್ದೊಂದು ಪ್ರೀತಿ, ಕಾಳಜಿ, ಅಕ್ಕರೆ ಇದ್ದಾಗ ಮಾತ್ರ ಅವರು ನಮಗಾಗಿ ಸಮರ್ಪಕವಾಗಿ ಕಾರ್ಯನಿರ್ವಹಿಸಬಲ್ಲರು ಎಂಬುದು ನನ್ನ ನಿಲುವು.

ನಾವು ನಮ್ಮ ಉದ್ಯಮಕ್ಕಾಗಿ ಗಟ್ಟಿ ತಳಪಾಯವನ್ನು ಹಾಕಿದ್ದೇವೆ. ಬೆಳವಣಿಗೆಯೇ ನಮ್ಮ ಗುರಿ. ಪ್ರಸ್ತುತ ನಾನು ಗುಡ್ ಟು ಗ್ರೇಟ್ ಎಂಬ ಜಿಮ್ ಕೋಲಿನ್ಸ್ ಅವರ ಪುಸ್ತಕವನ್ನು ಓದುತ್ತಿದ್ದು, ಒಂದು ಉತ್ತಮ ಸಂಘಟನೆಯನ್ನು ಕಟ್ಟುವ ಆಸೆ ನನಗಿದೆ.

ಇಂದು ಅವಕಾಶಗಳು ಹೇರಳವಾಗಿವೆ. ನಮ್ಮ ಸುತ್ತಲೂ ನೋಡಿದರೆ, ಅಲ್ಲಿ ಅನೇಕ ಪ್ರತಿಭೆಗಳು ಉದ್ಯೋಗಕ್ಕಾಗಿ ಕಾಯುತ್ತಿವೆ. ವಿಶೇಷವಾಗಿ ಹೆರಿಗೆಗಾಗಿ ಕೆಲಸವನ್ನು ತೊರೆದ ಮಹಿಳೆಯರಿಗೆ ಅವಕಾಶಗಳು ಕಡಿಮೆಯಾಗುತ್ತಿವೆ. ಅಂತಹ ಮಹಿಳೆಯರತ್ತ ವಿಶೇಷ ಗಮನಹರಿಸುತ್ತೇನೆ. ಅನೇಕ ಸಂಘಟನೆಗಳು ಇಂತಹ ಮಹಿಳೆಯರಿಗೆ ಕೆಲಸ ಮಾಡಲು, ಸಾಧಿಸಲು ಅವಕಾಶ ನೀಡಬೇಕು. ಅಂತಹ ಮಹಿಳೆಯರಿಗೆ ಕೆಲಸದ ಬಗ್ಗೆ ಶ್ರದ್ಧೆ ಇರುತ್ತದೆ ಎಂಬುದು ನನ್ನ ಅಭಿಪ್ರಾಯ.

ಹೀಗೆ ಉದ್ಯಮದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡು ಮಾತು ಮುಗಿಸಿದರು ಸಿಂಧು ಗೋಪಾಲಕೃಷ್ಣನ್.

ಸಿಂಧು ಅವರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ http://www.infortransolutions.com/ ಗೆ ಲಾಗಿನ್ ಆಗಿ.

    Share on
    close