ಸಾರಾಯಿ ನಿಷೇಧ ಹಾಗೂ ಬಾಲ್ಯ ವಿವಾಹದ ವಿರುದ್ಧ ಹೋರಾಟ...

ಟೀಮ್​ ವೈ.ಎಸ್​. ಕನ್ನಡ

ಸಾರಾಯಿ ನಿಷೇಧ ಹಾಗೂ ಬಾಲ್ಯ ವಿವಾಹದ ವಿರುದ್ಧ ಹೋರಾಟ...

Tuesday February 16, 2016,

3 min Read

ಆಕೆ ಒಬ್ಬ ಆದಿವಾಸಿ ಮಹಿಳೆ. ಒಂದು ಕಾಲದಲ್ಲಿ ತುತ್ತಿನ ಊಟಕ್ಕೂ ಆಕೆ ಪರದಾಡುತ್ತಿದ್ದಳು. ಆದ್ರೆ, ಈಗ ಅದೇ ಮಹಿಳೆ ಹಲವರ ಪಾಲಿಗೆ ಆಶಾಕಿರಣ. ಆಕೆಗೆ 10ನೇ ವಯಸ್ಸಿನಲ್ಲೇ ಮದುವೆಯಾಗಿತ್ತು. ಅಂದು ತನಗಾದ ನೋವು ಮತ್ಯಾರಿಗೂ ಆಗಬಾರದೆಂಬ ಕಾರಣಕ್ಕೆ ಬಾಲ್ಯ ವಿವಾಹದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಅಂದು ಆಕೆಯ ಬಡತನದ ಬಗ್ಗೆ ಗೇಲಿ ಮಾಡುತ್ತಿದ್ದ ಜನರೇ ಈಗ ಆಕೆಯ ಹೋರಾಟಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದೀಗ ಆಕೆ ಒಂದು ಕರೆ ಕೊಟ್ಟರೆ ಸಾಕು ಏನನ್ನಾದರೂ ಮಾಡಲು ಸಿದ್ಧವಾಗೋ ಜನರ ದಂಡೇ ಇದೆ. ಛತ್ತೀಸ್‍ಗಢದ ರಾಜನಂದಗಾಂವ್ ಜಿಲ್ಲೆಯಲ್ಲಿರುವ ಸುಕುಲದೈಹಾನ್ ಎಂಬ ಹಳ್ಳಿಯಲ್ಲಿ ವಾಸವಾಗಿರೋ ಆಕೆಯ ಹೆಸರು ಫೂಲ್‍ಬಾಸನ್ ಯಾದವ್. ಇಂದು ಈ ಹೆಸರು ಕೇವಲ ರಾಜನಂದಗಾಂವ್ ಜಿಲ್ಲೆಯಲ್ಲಷ್ಟೇ ಅಲ್ಲದೆ ಇಡೀ ಛತ್ತೀಸ್‍ಗಢ ರಾಜ್ಯಾದಾದ್ಯಂತ ಜನಪ್ರಿಯವಾಗಿದೆ. ಫೂಲ್‍ಬಾಸನ್ ಯಾದವ್, ತಮ್ಮ ಸಂಘಟನೆಯ ಮೂಲಕ ‘ಮಹಿಳಾಸಬಲೀಕರಣ’ದ ರೋಲ್​ ಮಾಡೆಲ್ ಆಗಿದ್ದಾರೆ.

image


ಕಡುಬಡ ಕುಟುಂಬದಲ್ಲಿ ಜನಿಸಿದ ಫೂಲ್‍ಬಾಸನ್ ಓದಿದ್ದು ಕೇವಲ 7ನೇ ತರಗತಿಯವರೆಗೆ ಮಾತ್ರ. 10ನೇ ವಯಸ್ಸಿನಲ್ಲೇ ತಮ್ಮ ಪಕ್ಕದ ಊರಿನ ಚಂದೂಲಾಲ್ ಯಾದವ್ ಎಂಬಾತನೊಂದಿಗೆ ಮದುವೆಯಾದ ಫೂಲ್‍ಬಾಸನ್ 13ನೇ ವಯಸ್ಸಿನಲ್ಲಿ ಮಾವನ ಮನೆಗೆ ಕಾಲಿಟ್ಟಿದ್ರು. ಪತಿ ಚಂದೂಲಾಲ್‍ಗೆ ಸ್ವಂತ ಜಮೀನಾಗಲೀ ಅಥವಾ ಉದ್ಯೋಗವಾಗಲಿ ಇರಲಿಲ್ಲ. ಇದರಿಂದಾಗಿ ಆತ ದನ ಕಾಯುವ ಕೆಲಸವನ್ನು ಮಾಡುತ್ತಿದ್ದರು. ಅವರ ಸಂಪಾದನೆ 2 ಹೊತ್ತಿನ ಊಟಕ್ಕೂ ಸಾಕಾಗುತ್ತಿರಲಿಲ್ಲ. ಇದರಿಂದ ಅವರ ಕುಟುಂಬ ಅದೆಷ್ಟೋ ಉಪವಾಸವಿದ್ದ ದಿನಗಳನ್ನು ಕಂಡಿತ್ತು. ಇನ್ನು ಮೈ ಮುಚ್ಚಿಕೊಳ್ಳಲು ಸರಿಯಾದ ಬಟ್ಟೆ ಇರಲಿಲ್ಲ. ಕಾಲಿಗೆ ಚಪ್ಪಲಿ ಹಾಕಿಕೊಳ್ಳೋದು ಕನಸಿನ ಮಾತೇ ಆಗಿತ್ತು. ಹೀಗೇ ಕಷ್ಟದ ದಿನಗಳನ್ನು ಎದುರಿಸುತ್ತಿರುವಾಗಲೇ ಫೂಲ್‍ಬಾಸನ್ ತನ್ನ 20ನೇ ವಯಸ್ಸಿಗೆ 4 ಮಕ್ಕಳ ತಾಯಿಯಾಗಿದ್ದರು.

ಇದನ್ನು ಓದಿ

ಪ್ರಪಂಚವನ್ನೇ ಬೆರಗಾಗಿಸೋ ಸಾಮರ್ಥ್ಯ- ಎಬಿಲಿಟಿ ಅನ್ ಲಿಮಿಟೆಡ್ ..!

“ಬಡವರ ಪಾಲಿಗೆ ಯಾರೂ ಇರುವುದಿಲ್ಲ” ಎಂಬ ವಾಕ್ಯ ಫೂಲ್‍ಬಾಸನ್‍ರ ಜೀವನದಲ್ಲಿ ಅತಿಮುಖ್ಯ ಪಾತ್ರ ವಹಿಸಿತ್ತು. ಶ್ರೀಮಂತರು, ಬಡವರನ್ನು ಗೇಲಿ ಮಾಡುವುದು ಅಲ್ಲಿನ ಜನರಿಗೆ ಮಾಮೂಲಾಗಿತ್ತು. ಒಂದು ಕಡೆ ಬಡತನ, ಮತ್ತೊಂದು ಕಡೆ ಸಿರಿವಂತರಿಂದ ಆಗುತ್ತಿದ್ದ ಅವಮಾನ. ಇವೆಲ್ಲವುಗಳಿಂದ ಬೇಸತ್ತುಹೋದ ಫೂಲ್‍ಬಾಸನ್, ಅಂದು ತೆಗೆದುಕೊಂಡ ನಿರ್ಧಾರ ಆಕೆಯ ಜೀವನವನ್ನೇ ಬದಲಾಯಿಸಿತು. ಅದೇನೆಂದ್ರೆ, ಹೀಗೆ ಜೀವನದಲ್ಲಿ ನೊಂದು ಬದುಕೋದ್ರ ಬದಲು, ಏನನ್ನಾದರೂ ಸಾಧಿಸಬೇಕೆಂದು ಧೃಡ ನಿರ್ಧಾರಕ್ಕೆ ಬಂದದ್ದು. ಅದರ ಫಲವೇ ಇಂದು ಆಕೆ ಹಲವರಿಗೆ ಮಾದರಿಯಾಗುವಂತೆ ಮಾಡಿದೆ. ಮೊದಲಿಗೆ ತನ್ನಂತೆ ನೊಂದ ಮಹಿಳೆಯರನ್ನ ಸಂಘಟಿಸಲು ಮುಂದಾದರು ಫೂಲ್‍ಬಾಸನ್. ಹಗಲು-ರಾತ್ರಿ, ಚಳಿ-ಗಾಳಿ, ಮಳೆ-ಬಿಸಿಲು ಎನ್ನದೆ ಊರೂರು ಸುತ್ತಿದ್ರು. 2001ನೇ ಇಸವಿಯಲ್ಲಿ 11 ಜನ ಮಹಿಳಾ ಸದಸ್ಯರನ್ನು ಸಂಘಟಿಸಿ “ಮಾ ಬಂಬಲೇಶ್ವರೀ ಸ್ವ-ಸಹಾಯ ಸಮೂಹ’ ಸ್ಥಾಪಿಸಿದರು. ಇವರೆಲ್ಲಾ ಸೇರಿ ತಮ್ಮ ಸಂಘಟನೆಗೆ ತೊಡಗಿಸಿದ ಹಣವೆಷ್ಟು ಗೊತ್ತೇ ? ಕೇವಲ 2 ಮುಷ್ಠಿಯಷ್ಟು ಅಕ್ಕಿ ಹಾಗೂ 2 ರೂಪಾಯಿಗಳಷ್ಟೇ. ಮೊದಲಿಗೆ ಅವರ ಈ ಸಂಘಟನೆಗೆ ಹಲವಾರು ವಿರೋಧÀಗಳು ಎದುರಾದವು. ಸ್ವತಃ ಫೂಲ್‍ಬಾಸನ್ ತನ್ನ ಪತಿಯ ವಿರೋಧÀ ಕಟ್ಟಿಕೊಳ್ಳಬೇಕಾಯಿತು. ಸಂಘಟನೆಗಾಗಿ ಹಲವಾರು ರಾತ್ರಿಗಳು ಮನೆಯಿಂದ ಹೊರಗೆ ಕಳೆಯಬೇಕಾದ ಸಂದರ್ಭಗಳು ಬಂದವು. ರಾಜನಂದಗಾಂವ್ ಜಿಲ್ಲೆಯಾದ್ಯಂತ ಮಹಿಳಾ ಸಂಘಟನೆಗಳನ್ನು ಕಟ್ಟಲು ಹಗಲಿರುಳು ಶ್ರಮಿಸಿದರು. ಹೀಗೆ ಸಂಘಟನೆ ಮಾಡುವುದರೊಂದಿಗೆ ಆರ್ಥಿಕ ಸುಧಾರಣೆಯನ್ನು ಸಹ ಮಾಡುತ್ತಾ ಮುನ್ನಡೆಸಿದರು.

image


ವಿದ್ಯೆ, ಕಲ್ಯಾಣ ಮತ್ತು ಸ್ವಚ್ಛತಾ ವಿಷಯಗಳನ್ನ ಮಹಿಳೆಯರಿಗೆ ಮನದಟ್ಟು ಮಾಡಿಕೊಡುವುದಕ್ಕ್ಕೆ ಆದ್ಯತೆ ನೀಡಿದರು. ಮಹಿಳೆಯರು ತಮ್ಮ ಆಚಾರ-ವಿಚಾರಗಳ ಬಗ್ಗೆ ಕಾಳಜಿ ವಹಿಸುವಂತೆ ಕರೆ ನೀಡಿದರು. ಹಪ್ಪಳ ತಯಾರಿಕೆಯ ಬಗ್ಗೆ ಪ್ರಶಿಕ್ಷಣವನ್ನು ಎಲ್ಲರೂ ಪಡೆದುಕೊಳ್ಳುವಂತೆ ತಮ್ಮ ಸಂಘಟನೆಯ ವತಿಯಿಂದ ಕಾರ್ಯಾಗಾರ ಏರ್ಪಡಿಸಿದರು. ಬಂಬಲೇಶ್ವರಿ ಬ್ರಾಂಡ್‍ನ ವಸ್ತುಗಳು ಛತ್ತಿಸ್‍ಗಢದ ಸುಮಾರು 300 ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಿಗುವಂತೆ ಮಾರ್ಕೆಟ್ ಮಾಡಿಸಿದರು. ಮಹಿಳೆಯರೇ ತಮ್ಮ ವಸ್ತುಗಳನ್ನು ಸ್ವತಃ ತಾವೇ ಮಾರ್ಕೆಟಿಂಗ್ ಮಾಡುವಂತೆ ಕರೆ ನೀಡಿದರು. ಹಾಗೆಯೇ ಸೈಕಲ್ ಸವಾರಿ ಮಾಡಲು ಪ್ರೇರೇಪಿಸಿದರು. ಹೀಗೆ ಹಲವಾರು ವಿಚಾರಗಳ ಮೂಲಕ ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಿದರು. ಹೀಗೇ ಮುಂದುವರೆಯುತ್ತಾ ಗ್ರಾಮಾಂತರ ಪ್ರದೇಶಗಳಲ್ಲಿ ಸಾರಾಯಿಯಿಂದ ಆಗುವ ದುಷ್ಪರಿಣಾಮಗಳನ್ನು ಮನಗಂಡು, ಸಾರಾಯಿ ನಿಷೇಧಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸಾರಾಯಿ ನಿಷೇಧಕ್ಕೆ ಒತ್ತಾಯಿಸಿ ಹೋರಾಟ ಮಾಡುವಂತೆ ಮಹಿಳೆಯರಿಗೆ ಕರೆ ನೀಡಿದರು. ಈ ಆಂದೋಲನದ ತೀವ್ರತೆಯನ್ನು ಹೆಚ್ಚಿಸಲು ಉಪವಾಸ ಸತ್ಯಾಗ್ರಹ ಮಾಡಿದರು. ಈಗಲೂ ಪ್ರತಿ ವರ್ಷ ಮಾರ್ಚ್ 8ರಂದು ಮಹಿಳಾ ದಿನಾಚರಣೆಯಂದು ಈ ಸಂಘಟನೆಯ ಎಲ್ಲಾ ಮಹಿಳೆಯರೂ ಉಪವಾಸ ಸತ್ಯಾಗ್ರಹ ಮಾಡುತ್ತಾರೆ. ಛತ್ತೀಸ್‍ಗಡದ ಪ್ರತಿ ಹಳ್ಳಿಗೂ ಹಳ್ಳಿಗೂ ಭೇಟಿ ನೀಡಿ ಸಾರಾಯಿ ನಿಷೇಧ ಚಳುವಳಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇಂದು ಇವರ ಆಂದೋಲನದ ಮೂಲಕ ಸುಮಾರು 650ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸಾರಾಯಿ ಮಾರಾಟ ನಿಷೇಧಿಸಲಾಗಿದೆ. ಇನ್ನು ಸುಮಾರು 600 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಬಾಲ್ಯ ವಿವಾಹಗಳು ನಿಂತೇಹೋಗಿವೆ. ಇದಕ್ಕೆಲ್ಲಾ ಕಾರಣವಾಗಿದ್ದು, ಫೂಲ್‍ಬಾಸನ್‍ರ ಪರಿಶ್ರಮ.

ಇಂದು ಫೂಲ್‍ಬಾಸನ್‍ರ ಸಮೂಹದಲ್ಲಿ 2ಲಕ್ಷಕ್ಕೂ ಹೆಚ್ಚು ಮಹಿಳೆಯರು ಸಂಘಟಿತರಾಗಿದ್ದಾರೆ. ಸರ್ಕಾರ ಸುಮಾರು 25ಕೋಟಿ ರೂಪಾಯಿಗಳಷ್ಟು ಹಣವನ್ನು ಈ ಸಂಘಟನೆಯ ಮೂಲಕ ವಿನಿಯೋಗಿಸಿದೆ. ಬಡತನದ ನಿರ್ಮೂಲನೆಗಾಗಿ ಈ ಸಂಘಟನೆ ವಿವಿಧ ಯೋಜನೆಗಳನ್ನು ರೂಪಿಸುತ್ತಿದೆ. ಹೆಣ್ಣು ಮಕ್ಕಳ ವಿದ್ಯಾಭ್ಯಾಸ, ಮಹಿಳೆಯರ ಸಬಲೀಕರಣಕ್ಕಾಗಿ ಕೃಷಿ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ ಹಾಗೂ ಉದ್ಯೋಗ ಸೃಷ್ಠಿ ಹೀಗೆ ವಿವಿಧ ಯೋಜನೆಗಳನ್ನ ಸಂಘಟನೆ ಪ್ರೋತ್ಸಾಹಿಸುತ್ತಿದೆ.

ಫೂಲ್‍ಬಾಸನ್‍ರವರು ತಮ್ಮ ಈ ಕೆಲಸಗಳ ಜೊತೆಗೆ 2001ರಲ್ಲಿ ಸ್ವಚ್ಛತಾ ಅಭಿಯಾನವನ್ನೂ ಪ್ರಾರಂಭಿಸಿದರು. ಛತ್ತಿಸ್‍ಗಢದ ರಾಜನಾಂದ್‍ಗಾಂವ್ ಜಿಲ್ಲೆಯಾದ್ಯಂತ ಬ್ಲಾಕ್ ಮಟ್ಟದಲ್ಲಿ ಪ್ರತಿಯೊಂದು ಮನೆಯಲ್ಲೂ, ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಕರೆ ನೀಡಿದರು. ಸರ್ಕಾರದ ವತಿಯಿಂದ ಶೌಚಾಲಯದ ವ್ಯವಸ್ಥೆ ಮಾಡಿಸಲು ಪ್ರಯತ್ನಿಸಿದರು. ಇದರಿಂದ ಮಾ ಬಂಬಲೇಶ್ವರಿ ಜನಹಿತಕಾರಿ ಸಮಿತಿಯಿಂದ ಅಭಿಯಾನ ನಡೆಸಿದರು. ಈಗಲೂ ಸುಮಾರು 200 ಜನ ಮಹಿಳೆಯರು ಈ ಸ್ವಚ್ಛ ಆಂದೋಲನದಲ್ಲಿ ಶ್ರಮಧಾನ ಮಾಡುತ್ತಿದ್ದಾರೆ. ಪ್ರತಿಯೊಂದು ಮನೆಯಲ್ಲೂ ಶೌಚಾಲಯ ನಿರ್ಮಿಸಲು ಶ್ರಮಿಸುತ್ತಿದ್ದಾರೆ.

ಫೂಲ್‍ಬಾಸನ್‍ರವರ ಕಾರ್ಯವನ್ನು ಶ್ಲಾಘಿಸಿ ಭಾರತ ಸರ್ಕಾರ 2012ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ತಮ್ಮ ಸಂಘಟನಾ ಚತುರತೆ, ಮಹಿಳೆಯರ ಸಬಲೀಕರಣ, ಸ್ವಚ್ಛತಾ ಆಂದೋಲನದ ವಿಚಾರದಲ್ಲಿ ಫೂಲ್‍ಬಾಸನ್ ಅವರು ಮಾಡಿರೋ ಕಾರ್ಯ ನಿಜಕ್ಕೂ ಆದರ್ಶಪ್ರಾಯ.

ಲೇಖಕರು: ಹರೀಶ್​ ಬಿಶ್ತ್​​

ಅನುವಾದಕರು: ಬಾಲು

ಇದನ್ನು ಓದಿ

1. ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳು ಕೆಟ್ಟಿವೆಯೇ..? ರಿಪೇರಿಗೆ ಇದೆ ಸೇವಾ ಕಂಪನಿ..!

2. ಕ್ರಿಕೆಟ್ ಅಕಾಡೆಮಿಯಿಂದ ಮನಿ..!

3. ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆ ಅಭಿವೃದ್ಧಿ ಪಡಿಸಿದ ಫಾರ್ಮುಸ್ಯುಟಿಕಲ್ ಕಂಪನಿ