ವೃತ್ತಿಯಿಂದ ನಿವೃತ್ತಿಗೆ.. ಕಲೆಯಿಂದ ಪ್ರವೃತ್ತಿಗೆ..!

ವಿಸ್ಮಯ

ವೃತ್ತಿಯಿಂದ ನಿವೃತ್ತಿಗೆ.. ಕಲೆಯಿಂದ ಪ್ರವೃತ್ತಿಗೆ..!

Wednesday January 20, 2016,

3 min Read

ವಯಸ್ಸು 70 ಆದ್ರೂ ಇನ್ನು ಚಿರ ಯುವಕನ ಉತ್ಸಾಹ. ತಮ್ಮ ಖಡಕ್ ಮಾತನಿಂದಲೇ ಎಲ್ಲರನ್ನು ಸೆಳೆಯುತ್ತಾರೆ. ಮಾತು ಖಾರ ಮನಸ್ಸು ಜೇನಿನಷ್ಟೇ ಸಿಹಿ. ಎಲ್ಲರೂ ತಮ್ಮ ಕೆಲಸದಿಂದ ನಿವೃತ್ತಿ ಹೊಂದಿದ್ದ ನಂತರ ಮನೆಯಲ್ಲಿ ಟೈಂ ಪಾಸ್ ಮಾಡತ್ತಾರೆ. ಆದರೆ ಇವರು ತಮ್ಮ ಮುಪ್ಪಿನ ಕಾಲದಲ್ಲೂ ಇತರರಿಗೆ ಕಲೆಯನ್ನ ಕಲಿಸ್ತಾರೆ.

image


ಹಲವರು ತಮ್ಮಲ್ಲಿರೋ ಕಲೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಬೇರೆ ವೃತ್ತಿಯಲ್ಲಿ ತೊಡಗಿಸಿ ಕೊಂಡಿದ್ದರೂ ಕಲೆಯನ್ನು ಪ್ರವೃತ್ತಿಯನ್ನಾಗಿಸಿಕೊಂಡು ತಮ್ಮ ನಿರಂತರ ಅಭ್ಯಾಸ, ಶ್ರಮಗಳ ಮೂಲಕ ವೃತ್ತಿಪರ ಕಲಾವಿದರಂತಯೇ ಸಾಧನೆಯ ಹಾದಿಯಲ್ಲಿ ಮುನ್ನಡೆದಿದ್ದಾರೆ. ಅಂತಹವರಲ್ಲಿ ನರಸಿಂಹ ಕುಲಕುರ್ಣಿ ಕೂಡ ಒಬ್ಬರು.

ಮೂಲತಃ ಗುಲ್ಬರ್ಗದವರಾಗಿರೋ ಕುಲಕುರ್ಣಿ ನೆಲೆಸಿರೋದು ಬೆಂಗಳೂರಿನ ಮಲ್ಲೇಶ್ವರಂನಲ್ಲಿ. ಮೂರು ಹೆಣ್ಣು ಮಕ್ಕಳಿಗೂ ಮದುವೆ ಮಾಡಿ.ತಮ್ಮ ನಿವೃತ್ತಿಯನ್ನ ಕಲೆಯ ಮೂಲಕ ಕಳೆಯುತ್ತಿದ್ದಾರೆ. ಕಲಾವಿದ ನರಸಿಂಹ ಕುಲಕರ್ಣಿಯವರು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಅಸಿಸ್ಟೆಂಟ್ ರಿಜಿಸ್ಟಾರ್ ಆಗಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ್ದಾರೆ. ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ಅತೀವ ಆಸಕ್ತಿ ಹೊಂದಿರುವ, ಇವರು ಸಂತ್ವ ಪರಿಶ್ರಮದಿಂದ ಗಣನೀಯ ಸಾಧನೆ ಮಾಡಿದ್ದಾರೆ. ನರಸಿಂಹ ಅವರಿಗೆ ಕಲೆ ಎಂಬುದು ತಾಯಿಯಿಂದಲೇ ಬಳುವಳಿಯಾಗಿ ಬಂದಿದೆ. ಚಿತ್ರಕಲೆ, ಕಸೂತಿ, ದಾರದ ಹೆಣೆಗೆ ಮತ್ತು ಗೊಂಬೆಗಳ ಅಲಂಕಾರ ಮುಂತಾದ ಕಲೆಗಳನ್ನ ಅನೇಕ ಕಲಾಕೃತಿಗಳನ್ನು ರಚಿಸಿ ಜನಪ್ರಿಯರಾಗಿದ್ದಾರೆ.

ಬಾಲಕನಾಗಿದ್ದಾಗ ನರಸಿಂಹ ಕುಲಕರ್ಣಿ ಅವರು ತಮ್ಮ ತಾಯಿಯವರು ರಚಿಸುತ್ತಿದ್ದ, ಸುಂದರ ಕಸೂತಿ ಚಿತ್ರಗಳನ್ನು ಗಮನವಿಟ್ಟು ನೋಡುತ್ತಿದ್ದರು. ಹೀಗಾಗಿ ಬಾಲ್ಯದಿಂದಲೇ ಚಿತ್ರ ಕಲೆಯ ಬಗ್ಗೆ ಅವರಿಗೆ ಆಸಕ್ತಿ ಬೆಳೆಯಿತು. 12 ವರ್ಷದ ಚಿಕ್ಕ ವಯಸ್ಸಿನಲ್ಲಿಯೇ ಚಿತ್ರಕಲೆಯಲ್ಲಿ ಸೀನಿಯರ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರು. ಪ್ರೌಢಶಾಲೆಯಲ್ಲಿದ್ದಾಗ ನಡೆಯುವ ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆಯುತ್ತಿದ್ದರು.

ಹಲವಾರು ಕೃತಿ ರಚನೆ...

ವೃತ್ತಿಯಿಂದ ನಿವೃತ್ತಿ ಹೊಂದಿದ್ದ ನಂತರ ಕಲಾವಿದ ನರಸಿಂಹ ಚಿತ್ರಕಲೆಯ ನಾನಾ ಪ್ರಕಾರಗಳಾದ ರೇಖಾಚಿತ್ರ, ವರ್ಣಚಿತ್ರ ಮತ್ತು ತೈಲಚಿತ್ರ ಮುಂದಾದ ವಿಭಾಗಗಳಲ್ಲಿ ಸುಮಾರು ಒಂದು ಸಾವಿರ ಚಿತ್ರಗಳನ್ನು ರಚಿಸಿದ್ದಾರೆ. ಪ್ರಕೃತಿ ಸೌಂದರ್ಯ ಮತ್ತು ಡಿಸೈನ್‍ಗಳಲ್ಲಿ ವಿಶೇಷ ಆಸಕ್ತಿ ಇದ್ದದರಿಂದ ಕಸೂತಿ ಚಿತ್ರಗಳು ಎಂಬ ಹತ್ತು ಪುಸ್ತಕಗಳನ್ನು ರಚಿಸಿದ್ದಾರೆ. ಕಸೂತಿ ಚಿತ್ರಗಳು ಎಂಬ ಪುಸ್ತಕಗಳು ಪ್ರಕಟವಾಗಿವೆ. ಅವರು ರಚಿಸಿದ ಸುಮಾರು 300 ರೇಖಾ ಚಿತ್ರಗಳು ನಾಡಿನ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಅಷ್ಟೇ ಅಲ್ಲದೇ ರೇಖಾ ಚಿತ್ರ ಪುಸ್ತಕಗಳ ಮಾರುಕಟ್ಟೆಗೂ ಪ್ರವೇಶಿಸಿದೆ.

ಬಂಧುಗಳ ಮತ್ತು ಸ್ನೇಹಿತರ ಮದುವೆ, ಉಪನಯನ, ನಾಮಕರಣ, ಗೃಹಪ್ರವೇಶ ಮುಂತಾದ ಸಮಾರಂಭಗಳಿಗೆ ತಾವೇ ರಚಿಸಿದ ಅನೇಕ ತೈಲ ಚಿತ್ರಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಕೆಲವು ಸಂಘ ಸಂಸ್ಥೆಗಳಲ್ಲಿ ರಚಿಸಿದ ಚಿತ್ರಗಳು ಇವೆ. ಅಷ್ಟೇ ಯಾಕೆ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಅಸಿಸ್ಟೆಂಟ್ ರಿಜಿಸ್ಟಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ವೇಳೆ ಕಾರ್ಯಕ್ರಮದಲ್ಲಿ ಇವರದ್ದೇ ಚಿತ್ರಗಳು ಮೂಡಿಬರುತ್ತಿದ್ದವು.

image


ಚಿತ್ರಕಲೆಗಳು ಅಲ್ಲದೇ ಇತರೆ ಕರಕುಶಲ ಕಲೆಯಲ್ಲಿಯೂ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಥರ್ಮಕೋಲ್‍ನಲ್ಲಿ ತಾಜ್‍ಮಹಲ್, ಚಾರಮಿನಾರ್, ದೇವರ ಮಂಟಪಗಳು. ಬೃಂದಾವನ, ಸೋಫಾಸೆಟ್, ದೇವರ ರಥಗಳು ಮುಂತಾದವುಗಳನ್ನು ಮಾಡಿದ್ದಾರೆ. ಅವರ ಮನೆಗೆ ಬರೋ ಮಂದಿ ಅದನ್ನ ಮಾಡಿಕೊಡುವಂತೆ ಕೇಳುತ್ತಾರಂತೆ. ಬಣ್ಣದ ಕಾಗದಗಳಲ್ಲಿ ಗಿಫ್ಟ್ ರ್ಯಾಪರ್ಸ್ ಅಂಗಿ ಪಂಚೆ, ಸೀರೆಗಳನ್ನು ಮಾಡುತ್ತಾರೆ. ಅವುಗಳು ಅತ್ಯಂತ ಆಕರ್ಷಕವಾಗಿದ್ದು ನಿಜವಾದ ಬಟ್ಟೆಯ ಉಡುಪುಗಳಂತೆ ಕಾಣುತ್ತವೆ. ಯಾರನ್ನಾದ್ರೂ ಬಣ್ಣದ ಕಾಗದದಲ್ಲಿ ಮಾಡಿದ್ದ ಶರ್ಟ್‍ಗೆ ಎಷ್ಟು ಬೆಲೆ ಎಂದ್ರೆ 500 ರೂಪಾಯಿ ಯಿಂದ 1000 ರೂಪಾಯಿವರೆಗೂ ಅಂದಾಜು ಬೆಲೆ ಹೇಳತ್ತಾರೆ. ಆದ್ರೆ ಅವ್ರ ಕೈಗೆ ಕೊಟ್ಟು ಈಗ ಹೇಳಿ ಇದ್ರ ಮುಖಬೆಲೆ ಅಂದರೆ ಎಲ್ಲರೂ ಅದನ್ನ ನೋಡಿ ನಸುನಕ್ಕು ಆಶ್ಚರ್ಯ ಗೊಳ್ಳತ್ತಾರೆ. ಅಷ್ಟರಮಟ್ಟಿಗೆ ಥೇಟ್ ಬಟ್ಟೆಯಂತೆ ಬಿಂಬಿಸುತ್ತೆ. ಆಗ ಅವರು ಹೇಳುವ ಉತ್ತರ ಈ ಅಂಗಿಗೆ ಕೇವಲ 10 ರೂಪಾಯಿ ಮೌಲ್ಯವೆಂದು.

ಇಂತಹ ಕರಕುಶಲ ವಸ್ತುಗಳಿಗೆ ಮದುವೆ ಮನೆಗಳಲ್ಲಿ ಸರ್ವೆ ಸಾಮಾನ್ಯವಾಗಿ ಅಲಂಕಾರದ ವಸ್ತುಗಳನ್ನಾಗಿ ಇಡಲು ಹಾಗೂ ಉಡುಗೊರೆಯಾಗಿ ಕೊಡಲು ಯೋಗ್ಯವಾಗಿದ್ದು, ಅನೇಕ ರಂಗೋಲಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ. ಅವರ ಕಲಾ ಪ್ರತಿಭೆಯನ್ನು ಗುರುತಿಸಿ ಕರ್ನಾಟಕ ಉಚ್ಚ ನ್ಯಾಯಾಲಯದ ನೌಕಾರರ ಸಂಘ, ಕನ್ನಡ ಯುವಕ ಚಳುವಳಿಗಾರರ ಸಂಘ ಸೇರಿದಂತೆ ಗೌರವಿಸಿ ಸನ್ಮಾನಿಸಿದ್ದಾರೆ.

image


ಬೇರೆಯವರು ಬರೆದಿರೋ ಚಿತ್ರವನ್ನು ನೋಡಿಕೊಂಡು ಬರೆಯೋದು ಕಲೆಯಲ್ಲ, ಸ್ವಂತವಾಗಿ ಬರೆಯೋದು ಕಲೆ ಅಂತಾರೆ. ನಿರಂತರ ಅಭ್ಯಾಸ ಮಾಡಿದ್ದಾರೆ ಎಲ್ಲವನ್ನು ಬರೆಯಬಹುದು ಅಂತಾರೆ ಕುಲಕುರ್ಣಿಯವರು. ನ್ಯಾಯಂಗದಲ್ಲಿ ಕೆಲಸ ಮಾಡುವವರು ಕಾನೂನು ಬಾಹಿರ ಮಾಡಬಾರದು ಎಂದು ಹೇಳತ್ತಾರೆ ಅಷ್ಟರ ಮಟ್ಟಿಗೆ ಕಲೆಗೆ, ಕಲಾವಿದರಿಗೆ ಗೌರವವನ್ನು ಕೊಡುತ್ತಾರೆ. ನಾವು ಮಕ್ಕಳಿಗೆ ಹೇಳಿಕೊಡುವಾಗ ಸ್ವಂತವಾಗಿ ಬರೆಯೋಕ್ಕೆ ಹೇಳ್ತಿವೆ. ಆಗ ಅವರು ತಮ್ಮ ಸ್ವಂತ ಅನುಭವದ ಚಿತ್ರವನ್ನು ಬಿಡಿಸುತ್ತಾರೆ ಅನ್ನುತ್ತಾರೆ.

ಸದ್ಯ 77ರ ಇಳಿವಯಸ್ಸಿನಲ್ಲೂ ನರಸಿಂಹ ಕುಲಕರ್ಣಿ ಅವರು ಕಲೆಯನ್ನು ಅದ್ಭುತವಾಗಿ ಕುಸರಿ ಕಲೆಯನ್ನು ಕೈಚಳಕ ತೋರಿಸಿದ್ದಾರೆ. ಅವರ ಮನೆಯ ಅಲಂಕಾರಕ್ಕೆ ಅವರದ್ದೇ ಕೈ ಯಿಂದ ಮೂಡಿದ ಕಲೆಗಳು ಮನೆಯ ಅಂದವನ್ನು ಹೆಚ್ಚಿಸಿವೆ. ಅವರ ಈ ಕಲೆಗೆ ಪತ್ನಿಯ ಪ್ರೋತ್ಸಾಹವೇ ಕಾರಣವೆನ್ನುತ್ತಾರೆ. ಕುಲಕರ್ಣಿಯವರು ಎಂದಿಗೂ ಕಲೆಯನ್ನು ಹಣ ಸಂಪಾನೆಗಾಗಿ ಬಳಸಿಕೊಂಡಿಲ್ಲ. ಕಲಿಯುವ ಆಸಕ್ತಿ ಮತ್ತು ಉತ್ಸಾಹ ಉಳ್ಳವರಿಗೆ ಉಚಿತವಾಗಿ ಕಲಿಸುತ್ತಾರೆ. ಇಂತಹವರು ನಿಜಕ್ಕೂ ಪ್ರತಿಯೊಬ್ಬ ಕಲಾವಿದರಿಗೂ, ಯುವಕರಿಗೂ ಸ್ಪೂರ್ತಿದಾಯಕ.

    Share on
    close