ನಿಮ್ಮ ದೃಢ ಮೌಲ್ಯಗಳೇ ನಿಮ್ಮನ್ನು ಉನ್ನತ ಮಟ್ಟಕ್ಕೇರಿಸುತ್ತವೆ: ಹಿರಿಯ ಆರ್ಥಿಕ ತಜ್ಞೆ ಗೀತಾ ನಯ್ಯರ್ ಅಭಿಮತ

ಟೀಮ್​​ ವೈ.ಎಸ್​​.

ನಿಮ್ಮ ದೃಢ ಮೌಲ್ಯಗಳೇ ನಿಮ್ಮನ್ನು ಉನ್ನತ ಮಟ್ಟಕ್ಕೇರಿಸುತ್ತವೆ: ಹಿರಿಯ ಆರ್ಥಿಕ ತಜ್ಞೆ ಗೀತಾ ನಯ್ಯರ್ ಅಭಿಮತ

Tuesday November 10, 2015,

5 min Read

ಗೀತಾ ನಯ್ಯರ್ ಅವರಿಂದ ಕಲಿಯಲೇಬೇಕಾದ ಒಂದು ಮುಖ್ಯವಾದ ಅಂಶ ಎಂದರೆ ನಿಮ್ಮ ಮೌಲ್ಯಗಳಿಗೆ ಅಂಟಿಕೊಂಡಿರಿ. ಆಗ ನೀವು ಹೇಗಿದ್ದೀರೋ ಹಾಗೆ ಅತ್ಯುನ್ನತ ಸ್ಥಿತಿಗೆ ಏರಬಹುದು. ಆರ್ಥಿಕ ಸೇವೆಗಳ ಕ್ಷೇತ್ರದಲ್ಲಿ ಸುಮಾರು 24 ವರ್ಷಗಳ ಅನುಭವ ಹೊಂದಿರುವ ಗೀತಾ ನಯ್ಯಾರ್ ಅವರ ಈ ಮಾತುಗಳು ಬಹಳ ಮಹತ್ವಪೂರ್ಣವಾದದ್ದು. ಗೀತಾ ಅವರು ಮೊತ್ತ ಮೊದಲಿಗೆ ಉದ್ಯೋಗ ಆರಂಭಿಸಿದ್ದು ಸಿಟಿ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆಯಲ್ಲಿ. ಇಲ್ಲಿ 15 ವರ್ಷಗಳಿಗಿಂತ ಹೆಚ್ಚು ಕಾಲ ಅನೇಕ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದರು. 2003ರಲ್ಲಿ ಸಿಟಿ ಬ್ಯಾಂಕ್‌ನಿಂದಲೇ ಯುನೈಟೆಡ್ ಕಿಂಗ್‌ಡಮ್ ಗೆ ಕಾರ್ಯನಿರ್ವಹಿಸಲು ತೆರಳಿದರು. ತದನಂತರ ಯುಕೆಯ ಕ್ರೆಡಿಟ್ ಸ್ವಿಸ್ ಪ್ರೈವೇಟ್ ಬ್ಯಾಂಕ್‌ಗೆ ಏಷಿಯಾದ ರೀಜನಲ್ ಹೆಡ್ ಆಗಿ ಕಾರ್ಯನಿರ್ವಹಿಸಲಾರಂಭಿಸಿದರು. ಸ್ವಲ್ಪ ಸಮಯದ ನಂತರ ಗೀತಾ ಭಾರತಕ್ಕೆ ವಾಪಸಾದರು. ಇಲ್ಲಿನ ಉದ್ಯಮಗಳಲ್ಲಿ ಹೂಡಿಕೆ ಮಾಡುವ ಇಚ್ಛೆ ಅವರಿಗಿತ್ತು.

ಬಾಲ್ಯ ಮತ್ತು ವೃತ್ತಿ

ಗೀತಾ ಅವರ ಪೋಷಕರು ಸಮಯದೊಂದಿಗೆ ಅಭಿವೃದ್ಧಿ ಹೊಂದಿದ್ದವರು. ಅವರ ತಂದೆ ಭಾರತದ ನೌಕಾಪಡೆಯ ಅಡ್ಮಿರಲ್ ಆಗಿದ್ದರು. ಗೀತಾರ ತಾಯಿಗೆ ಮತ್ತು ಗೀತಾರ ವಿದ್ಯಾಭ್ಯಾಸಕ್ಕೆ ಅವರು ಸದಾ ಬೆಂಬಲವಾಗಿದ್ದರು. ಗೀತಾರ ತಾಯಿ ಸಹ ಒಬ್ಬ ಉದ್ಯಮಿಯಾಗಿದ್ದರು. ಉದ್ಯಮಿಯಾಗಲು ಗೀತಾರಿಗೆ ಅವರ ತಾಯಿಯೇ ಸ್ಫೂರ್ತಿ. 70ರ ದಶಕದಲ್ಲಿ ಎರಡು ಮಕ್ಕಳಾದ ನಂತರ ಗೀತಾರ ತಾಯಿ ಅವರ ಎಂಬಿಎ ಪದವಿಯನ್ನು ಪೂರ್ಣಗೊಳಿಸಿದರು. ಆ ಕಾಲದಲ್ಲಿ ಮಹಿಳೆಯೊಬ್ಬಳು ಉದ್ಯಮಿಯಾಗುವುದು, ಓದುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ.

ಗೀತಾರವರು ದೆಹಲಿ ವಿವಿಯಿಂದ ಅರ್ಥಶಾಸ್ತ್ರದಲ್ಲಿ ಬಿಎ ಪದವಿ ಪಡೆದಿದ್ದಾರೆ. ನಂತರ ಯುಎಸ್‌ಎನ ಅಮೋಸ್ ಟಕ್ ಸ್ಕೂಲ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಡರ್ಟ್‌ಮೌತ್ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದರು. ಈ ಬಿಸಿನೆಸ್‌ ಸ್ಕೂಲ್‌ನಲ್ಲಿ ದಾಖಲಾದ ಮೊದಲ ಭಾರತೀಯ ಮಹಿಳೆ ಇವರಾಗಿದ್ದರು.

image


ಎಂಬಿಎ ಪದವಿ ಪಡೆದ ಬಳಿಕ ಭಾರತಕ್ಕೆ ವಾಪಸಾದ ಗೀತಾ ಮುಂಬೈನ ಸಿಟಿ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸಲಾರಂಭಿಸಿದರು. 18 ವರ್ಷಗಳ ಕಾಲ ಸಿಟಿ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸಿದ ಬಳಿಕ ತಮ್ಮ ಮಿತಿಯನ್ನು ಮೀರಿ ಬೆಳೆಯಲು, ವೃತ್ತಿ ಜೀವನದಲ್ಲಿ ಔನ್ನತ್ಯ ಹೊಂದಲು ಅವರು ಇಚ್ಛಿಸಿದರು. ನಂತರ ಯುಕೆಯ ಕ್ರೆಡಿಟ್ ಸ್ವಿಸ್ ಪ್ರೈವೇಟ್ ಬ್ಯಾಂಕ್‌ನಲ್ಲಿ ಏಷಿಯಾ ರೀಜನಲ್ ಹೆಡ್ ಆಗಿ 7 ವರ್ಷಗಳ ಕಾಲ ಯುಕೆಯಲ್ಲೇ ಇದ್ದರು. 22 ವರ್ಷಗಳ ಕಾಲ ಬ್ಯಾಂಕರ್ ಆಗಿ ಕಾರ್ಯನಿರ್ವಹಿಸಿದ ಬಳಿಕ ನನ್ನ ಸ್ವಂತ ನೆಲದಲ್ಲಿ ಸ್ವಂತವಾಗಿ ಏನನ್ನಾದರೂ ಮಾಡಲು ಇಚ್ಛಿಸಿದ ಕಾಣ ಭಾರತಕ್ಕೆ ವಾಪಸಾದರು. ಹೀಗಾಗಿ ಮುಂಬೈಗೆ ಹಿಂತಿರುಗಿ ಹೊಸ ಜೀವನ ಆರಂಭಿಸಿದರು.

ಗ್ಲಾಸ್ ಸೀಲಿಂಗ್

“ಮಹಿಳೆಯಾಗಿರುವುದರಿಂದ ನಾನು ನಿರಂತರವಾಗಿ ನನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಲೇಬೇಕಾಗುತ್ತಿತ್ತು. ಆರಂಭದ ದಿನಗಳಲ್ಲಿ ಅನೇಕರು ನನ್ನನ್ನು ಆಡಿಕೊಂಡರು. ಅವರ ಅಭಿಪ್ರಾಯಗಳೆಲ್ಲಾ ತಪ್ಪು ಎಂಬುದನ್ನು ನಾನು ಸಾಬೀತು ಪಡಿಸಬೇಕಾಗುತ್ತಿತ್ತು. ಹೀಗಾಗಿ ನಾನು ಕಠಿಣ ಪರಿಶ್ರಮ ಪಡುತ್ತಿದ್ದೆ. ನಕಾರಾತ್ಮಕ ಉತ್ತರಗಳನ್ನು ನೀಡುತ್ತಲೇ ಇರಲಿಲ್ಲ. ಅಲ್ಲದೇ ನನ್ನ ಅಭಿಪ್ರಾಯಗಳನ್ನು ಹೇಳಲು ಹಿಂಜರಿಯುತ್ತಿರಲಿಲ್ಲ. ನೀವು ಕಷ್ಟಪಟ್ಟು ಕೆಲಸ ಮಾಡಿದರೆ ನಿಮ್ಮ ತಪ್ಪುಗಳಿಂದಲೇ ನೀವು ಕಲಿಯಬಹುದು, ಫಲಿತಾಂಶಗಳನ್ನು ಪಡೆಯಬಹುದು ಮತ್ತು ಸರಿಯಾದ ಕೆಲಸಗಳನ್ನೇ ಮಾಡಬಹುದು. ಆಗ ನೀವು ಗುರುತಿಸಲ್ಪಡುತ್ತೀರಿ. ಇದಕ್ಕಾಗಿ ಸ್ವಲ್ಪ ಸಮಯ ಹಿಡಿಯಬಹುದು ಆದರೆ ನೀವು ನಿಮ್ಮ ಗುರಿಯನ್ನು ತಲುಪಬಹುದು” ಇದು ಗೀತಾರ ಅಭಿಪ್ರಾಯ.

ಕೆಲ ವರ್ಷಗಳಲ್ಲಿ ಅನೇಕ ಸಂಗತಿಗಳು ಬದಲಾಗಿವೆ. ಆದರೂ ಮಹಿಳೆಯ ಮುಂದೆ ಅನೇಕ ಸವಾಲುಗಳು ಇದ್ದೇ ಇದೆ. ಮೊದಲಿಗೆ ಹೋಲಿಸಿದರೆ ಈಗ ಆ ಸಮಸ್ಯೆಗಳ ಪ್ರಮಾಣ ತುಂಬಾ ಕಡಿಮೆ ಆದರೂ ಸಮಸ್ಯೆಗಳಿದ್ದೇ ಇವೆ. ಮಹಿಳೆಯರಾಗಿರುವುದರಿಂದ ಪರಿಸ್ಥಿತಿಯ ಕಾರಣಗಳಿಂದಾಗಿ ಸಮಸ್ಯೆ ಉದ್ಭವವಾಯಿತು ಎಂಬ ನೆಪಗಳನ್ನು ಹೇಳುವುದು ಅಸಾಧ್ಯ. ಪರರ ದೃಷ್ಟಿಕೋನವನ್ನು ಬದಲಾಯಿಸುವುದು ಅಸಾಧ್ಯ. ನಾವು ಏನು ಮಾಡಬೇಕೋ ಅದರ ಬಗ್ಗೆ ಗಮನಹರಿಸಬೇಕು ಅಷ್ಟೇ. ನಮಗೆ ನಮ್ಮ ಕೆಲಸದಲ್ಲಿ ಬದ್ಧತೆ ಇರುವುದು ತುಂಬಾ ಮುಖ್ಯ. ಒಮ್ಮೆ ವಿಫಲರಾದ ಬಳಿಕವೂ ಮೇಲೆದ್ದು ಮತ್ತೆ ಹೊಸತಾಗಿ ಕಷ್ಟಪಟ್ಟು ಗುರಿಸಾಧಿಸಬೇಕು. ನಮ್ಮನ್ನು ಅನುಮಾನಿಸುವವರನ್ನು ನಿರ್ಲಕ್ಷಿಸುವುದು ತುಂಬಾ ಮುಖ್ಯ ಮತ್ತು ನಮ್ಮದೇ ಆದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎನ್ನುತ್ತಾರೆ ಗೀತಾ.

ಔನ್ನತ್ಯಕ್ಕೇರಿದಂತೆಲ್ಲಾ ಕಠಿಣ ಸಾಮೂಹಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನೂತನ ಕಂಪನಿ ಕಾನೂನಿನ ಅನ್ವಯ ಕಂಪನಿಗಳ ಮಂಡಳಿಗಳಲ್ಲಿ ಕನಿಷ್ಠ ಒಬ್ಬ ಮಹಿಳಾ ಸದಸ್ಯೆ ಇರಲೇಬೇಕು. ಕಾರ್ಯಕ್ಷೇತ್ರದಲ್ಲಿ ತೊಡಗಿರುವ ಮತ್ತು ನಾಯಕತ್ವ ಹೊಂದಿರುವ ಮಹಿಳೆ ತನ್ನ ಪ್ರತಿಸ್ಪರ್ಧಿ ಮಹಿಳೆಗೆ ಬೆಂಬಲವಾಗಿರಬೇಕು.ಅರ್ಹ ಮಹಿಳಾ ಅಭ್ಯರ್ಥಿಯ ಪರವಾಗಿ ನಿಲ್ಲಲೇಬೇಕು. ಹೀಗಾಗಿ ನನ್ನ ತಂಡದಲ್ಲಿರುವ ಪ್ರತಿಭಾವಂತ ಮಹಿಳೆಯನ್ನು ನಾನು ಪ್ರೋತ್ಸಾಹಿಸುತ್ತೇನೆ. ನನಗೆ ಅದರ ಪ್ರಾಮುಖ್ಯತೆ ಅರ್ಥವಾಗಿದೆ ಎನ್ನುತ್ತಾರೆ ಗೀತಾ.

ರೂಢಿ ಮಾದರಿಯಿಂದ ಹೊರಬರುತ್ತಾ...

ಆರಂಭದ ದಿನಗಳಲ್ಲಿ ಹೊಸತಾಗಿ ಪ್ರಯತ್ನಿಸುವ ಪ್ರವೃತ್ತಿ ಮತ್ತು ಗಂಡಸರ ಸರಿಸಮಾನವಾಗಿ ನಿಂತು ಕಾರ್ಯನಿರ್ವಹಿಸುವ ಮತ್ತು ಅವರಂತೆಯೇ ವರ್ತಿಸಲು ಮಹಿಳೆಯರು ಇಷ್ಟಪಡುತ್ತಾರೆ ಎಂಬುದನ್ನು ಗೀತಾ ಕಂಡುಕೊಂಡರು. ಆದರೆ ಸಮಯ ಕಳೆದಂತೆ, ಇದನ್ನೆಲ್ಲಾ ಮಾಡಲೇಬೇಕೆಂದೇನೂ ಇಲ್ಲ ಎಂಬುದನ್ನು ಅರಿತುಕೊಂಡರು. ನಾವು ವಿಭಿನ್ನವಾಗಿದ್ದೇವೆ ಮತ್ತು ವಿಭಿನ್ನವಾಗಿ ಮುಂದಾಳತ್ವ ವಹಿಸಬಹುದೆಂಬುದನ್ನು ಅವರು ಕಂಡುಕೊಂಡರು. ಮಹಿಳೆಯರು ಅವರ ಅಭಿಪ್ರಾಯಗಳನ್ನು ಸ್ಪಷ್ಟವಾಗಿ, ಧೈರ್ಯವಾಗಿ ಹೇಳಬೇಕು. ಬಹಳಷ್ಟು ಬಾರಿ ಮಹಿಳೆಯರು ಧೈರ್ಯವಾಗಿ ಮುನ್ನುಗ್ಗಲು, ತೀರ್ಮಾನ ಕೈಗೊಳ್ಳಲು ಹಿಂಜರಿಯುತ್ತಾರೆ. ಇಂತಹ ಸ್ವಭಾವಗಳನ್ನು ಬಿಟ್ಟುಬಿಡಬೇಕು.

ಗಡಸುತನ ಮತ್ತು ಸೂಕ್ಷ್ಮತೆ ಇಲ್ಲದೇ ನಾಯಕತ್ವದಲ್ಲಿ ಮುಂದುವರೆಯುವುದು ವಿಭಿನ್ನವಾದ ಗುಣ. ನಾನು ಗಟ್ಟಿಯಾಗಿ ನೆಲೆಯೂರಲು ಸಾಧ್ಯವಿದೆ ಮತ್ತು ಸರಿಯಾಗಿ, ಸಮರ್ಥ ನಾಯಕತ್ವ ಗುಣ ನನ್ನಲ್ಲಿದೆ ಎಂಬುದನ್ನು ಅರ್ಥಮಾಡಿಕೊಂಡೆ. ರೂಢಿಯಾದ ಮಾದರಿಯಂತೆ ಇರುವುದು ನನಗಿಷ್ಟವಿರಲಿಲ್ಲ. ಪ್ರಾಮಾಣಿಕವಾಗಿರುವ ಮೂಲಕ ತಮಗೆ ಏನು ಬೇಕೋ ಅದನ್ನು ಯಾರು ಬೇಕಾದರೂ ಸಾಧಿಸಬಹುದು. ಪುರುಷರು ಅಥವಾ ಮಹಿಳೆಯರು ಯಾರುಬೇಕಾದರೂ ಆಗಿರಬಹುದು ರೂಢ ಮಾದರಿಯಲ್ಲೇ ಇರಬೇಕಾದ ಅವಶ್ಯಕತೆ ಇಲ್ಲ ಎಂಬುದು ಗೀತಾರ ಅಭಿಮತ.

ಯಶಸ್ಸು

ನಿಮ್ಮ ವ್ಯಕ್ತಿತ್ವದೊಂದಿಗೆ ಸಂತೋಷದಿಂದಿರುವುದು ಮತ್ತು ನೀವೆಲ್ಲಿದ್ದೀರೋ ಅಲ್ಲೇ ಸಂತೋಷದಿಂದಿರುವುದೇ ನಿಜವಾದ ಯಶಸ್ಸು ಎಂಬುದು ಗೀತಾರ ಅಭಿಪ್ರಾಯ. ಅವರ ಮೌಲ್ಯಗಳೊಂದಿಗೆ ಪ್ರಾಮಾಣಿಕವಾಗಿ ಜೀವಿಸುವುದೇ ಅವರ ಗೆಲುವಿಗೆ ಕಾರಣ ಎನ್ನುತ್ತಾರೆ ಗೀತಾ.

ವೃತ್ತಿಪರವಾಗಿ ಹೇಳಬೇಕೆಂದರೆ, ನಾನೇನು ಸಾಧಿಸಬಹುದಿತ್ತೋ ಅದನ್ನೆಲ್ಲಾ ಸಾಧಿಸಿದ್ದೇನೆ ಎಂದು ಅಂದುಕೊಳ್ಳುತ್ತಿಲ್ಲ. ಆ ಸಾಧನೆಗೆ ಕೊನೆಯೇ ಇಲ್ಲ. ಮಾನಸಿಕವಾಗಿ ಸದಾ ಬ್ಯುಸಿಯಾಗಿರುವುದು ಬಹಳ ಇಷ್ಟ. ಕೆಲಸ ಮಾಡಲು, ಕಲಿಯಲು ಮತ್ತು ಮುಂದುವರೆಯಲು ಬಹಳ ಇಷ್ಟ ಎನ್ನುತ್ತಾರೆ ಗೀತಾ.

ಇಂದು ಗೀತಾ ಅವರು ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವುದು ಸೇರಿದಂತೆ ಅನೇಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ವಿಭಿನ್ನ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸುವುದು ಸಾಧ್ಯವಿದೆ ಎಂಬ ಅಂಶವೇ ಗೀತಾರಿಗೆ ಸಂತೋಷ ನೀಡುತ್ತದೆ. ಇತರ ಸಮಾಲೋಚನಾ ಅಥವಾ ಸಲಹಾ ಕಾರ್ಯಗಳ ಜೊತೆಗೆ ಸಾಹಸೋದ್ಯಮ ಬಂಡವಾಳ ಕ್ಷೇತ್ರಕ್ಕೆ ಹೂಡಿಕೆ ಮತ್ತು ಕಂಪನಿಗಳ ಬೆಳವಣಿಗೆಗಾಗಿ ಕಾರ್ಯನಿರ್ವಹಿಸುವುದರಲ್ಲಿಯೂ ಗೀತಾ ಸಂತೋಷ ಕಂಡುಕೊಳ್ಳುತ್ತಾರೆ.

ಮಹಿಳೆಯರಿಗಾಗಿ ಮತ್ತು ಹಿರಿಯ ನಾಗರೀಕರಿಗಾಗಿ ಕಾರ್ಯನಿರ್ವಹಿಸುವ ಎರಡು ಎನ್‌ಜಿಓಗಳ ಜೊತೆಯೂ ಗೀತಾ ಕೆಲಸ ಮಾಡುತ್ತಾರೆ. ಯುವ ಉದ್ಯಮಿಗಳ ಜೊತೆ ಕಾರ್ಯನಿರ್ವಹಿಸುವುದು, ಅವರ ಉದ್ಯಮಕ್ಕೆ ಹೂಡಿಕೆ ಮಾಡುವುದು ಸಹ ಗೀತಾರಿಗೆ ಇಷ್ಟ. ಯುವ ಉದ್ಯಮಿಗಳಲ್ಲಿರುವ ಆಸಕ್ತಿ ಅವರಿಗೆ ಇಷ್ಟವಾಗುತ್ತದೆ. ತಮ್ಮ ವೈಶಿಷ್ಟ್ಯತೆಯೊಂದಿಗೆ ಮುಂದುವರೆಯಲು ಯುವ ಉದ್ಯಮಿಗಳಿಗೆ ಯಾವುದೇ ಭಯವಿಲ್ಲ. ಹೆಚ್ಚು ಸಂಬಳ ನೀಡುವ ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸುವಾಗ ಸಂಸ್ಥೆಗಳಿಗೆ, ಸರಿಯಾದ ವ್ಯಕ್ತಿಚಿತ್ರ ಇರುವುದು ತುಂಬಾ ಮುಖ್ಯ.

ತಂತ್ರಗಾರಿಕೆ ಮತ್ತು ಹೂಡಿಕೆಯ ಕುರಿತಾದ ಯೋಜನೆಗಾಗಿ ಗೀತಾ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಇದನ್ನು ಯುವ ಉದ್ಯಮಿಗಳಿಗಾಗಿ ರೂಪುಗೊಳಿಸಲಾಗುತ್ತಿದೆ. ನೀವು ನಿಮ್ಮಂತೆ ಇರುವುದು ಮತ್ತು ನಿಖರವಾಗಿ ಏನಿಲ್ಲವೋ ಅದನ್ನು ಸಾಧಿಸುವುದೇ ಒಂದು ಅದ್ಭುತ ಅನುಭವ.

ಸ್ಫೂರ್ತಿ

ಗೀತಾರಿಗೆ ಅವರ ತಾಯಿಯೇ ಸ್ಫೂರ್ತಿ. ಅಸಂಪ್ರದಾಯಿಕವಾದುದನ್ನೇ ಸಾಧಿಸುತ್ತಾ ಮುಂದುವರೆದ ವ್ಯಕ್ತಿತ್ವ ಗೀತಾರ ತಾಯಿಯದ್ದು. ಅಲ್ಲದೇ ಗಾಂಧೀಜಿ ಮತ್ತು ನೆಲ್ಸನ್ ಮಂಡೇಲಾರಿಂದಲೂ ಗೀತಾ ಪ್ರೇರೇಪಿತರಾಗಿದ್ದಾರೆ. ತಾವು ನಂಬಿದ್ದ ವಿಚಾರಗಳಿಗಾಗಿ ಗಾಂಧೀಜಿ ಹಾಗೂ ಮಂಡೇಲಾ ಅನೇಕ ತ್ಯಾಗಗಳನ್ನು ಮಾಡಬೇಕಾಯಿತು, ಜನತೆಗಾಗಿ ಹೋರಾಡಬೇಕಾಯಿತು, ತಮ್ಮ ಮೌಲ್ಯಗಳನ್ನು ಜೀವನದುದ್ದಕ್ಕೂ ಬಿಟ್ಟುಕೊಡಲಿಲ್ಲ. ಹೀಗಾಗಿ ಗಾಂಧೀಜಿ ಮತ್ತು ಮಂಡೇಲಾರನ್ನು ಗೀತಾ ಬಹಳ ಗೌರವಿಸುತ್ತಾರೆ.

ಪುಸ್ತಕ ಪ್ರೇಮಿಯಾಗಿರುವ ಗೀತಾ, ಎಲ್ಲಾ ರೀತಿಯ ವಿಚಾರಗಳನ್ನು ಓದುತ್ತಾರೆ. ಸ್ಪಂಜಿನ ರೀತಿಯಲ್ಲಿ ವಿಚಾರಗಳನ್ನು ಹೀರಿಕೊಳ್ಳುತ್ತಾರೆ. ಜ್ಞಾನವೂ ಯಾವಾಗಲೂ ಸುಲಭವಾಗಿ ಎಲ್ಲೆಲ್ಲಿಯೂ ಸಿಗುತ್ತದೆ ಎಂಬುದು ಗೀತಾರ ಅಭಿಪ್ರಾಯ.

ಸಂಘಟನೆಗಳಿಗೆ ಸಲಹೆ

ಅನೇಕ ಸಂಘಟನೆಗಳು ತೀರಾ ಲಿಂಗಸಂವೇದನೆ ಹೊಂದಿವೆ. ಸಮಯ, ಪ್ರಜ್ಞಾಪೂರ್ವಕ ಪ್ರಯತ್ನ ಮತ್ತು ಕಠಿಣಪರಿಶ್ರಮದಿಂದ ಇದು ಬದಲಾಗಬಹುದು. ಐಸಿಐಸಿಐ ಒಂದು ಅತ್ಯುತ್ತಮ ಸಂಸ್ಥೆ. ಏಕೆಂದರೆ ಈ ಸಂಸ್ಥೆ ಅವರ ಮಹಿಳಾ ಮುಂದಾಳುಗಳನ್ನು ಗುರುತಿಸುತ್ತದೆ ಮತ್ತು ಅವರಿಗೆ ಪ್ರಚಾರನೀಡುತ್ತದೆ. ಈ ನಿಟ್ಟಿನಲ್ಲಿ ಐಸಿಐಸಿಐ ಸಂಸ್ಥೆ ಶ್ಲಾಘನೀಯ ಕೆಲಸ ಮಾಡಿದೆ ಎನ್ನುತ್ತಾರೆ ಗೀತಾ.

ಮಹಿಳಾ ನೌಕರರ ಜೊತೆ ಮತ್ತು ವೃತ್ತಿಬದುಕಿನಲ್ಲಿ ಮಹಿಳೆಯರು ನಿರ್ಭೀತಿಯಿಂದ ಮುಂದುವರೆಯುವಂತಹ ವಾತಾವರಣವನ್ನು ಸಂಘಟನೆಗಳು ಸೃಷ್ಟಿಸಿಕೊಡುವ ಅಗತ್ಯವಿದೆ. ವಿವಾಹ, ಹೆರಿಗೆಯಂತಹ ಸಂದರ್ಭಗಳ ಬಳಿಕವೂ ಮಹಿಳೆಯರಿಗೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡುವುದು ಅನೇಕ ಸಂಘಟನೆಗಳಿಗೆ ಪ್ರಮುಖ ಸವಾಲು. ಇಂತಹ ಸಮಸ್ಯೆಗಳಿಂದ ಸಂಘಟನೆಗಳು ಹೊರಬಂದು ಮಹಿಳೆಯರಿಗೆ ಅವಕಾಶ ಮಾಡಿಕೊಡುವಂತಾಗಬೇಕು ಎಂಬುದು ಗೀತಾರ ಅಭಿಮತ.

ಮಹಿಳೆಯರಿಗೆ ಸಂದೇಶ

ಸವಾಲುಗಳನ್ನು ತೆಗೆದುಕೊಳ್ಳಿ. ಅವಕಾಶಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ. ಕಷ್ಟಪಟ್ಟು ಕೆಲಸ ಮಾಡಿ ಮತ್ತು ನಿಮ್ಮ ಗುರಿಯಲ್ಲಿ ನಂಬಿಕೆಯಿಡಿ. ನೀವೇ ಆಯ್ಕೆ ಮಾಡಿಕೊಂಡ ದಾರಿಯನ್ನು ಎಂದಿಗೂ ತ್ಯಜಿಸಬೇಡಿ. ಸುಲಭ ದಾರಿಯನ್ನು ಅರಿತು ಮುನ್ನಡೆಯಿರಿ. ನಿಮಗೆ ನಿಮ್ಮ ಗುರಿ ಸ್ಪಷ್ಟವಾಗಿದ್ದರೆ, ಯೋಜನೆ ರೂಪಿಸಿ ಮತ್ತು ಅದೇನಾದರೂ ಆಗಿರಲಿ ಅದನ್ನು ಸಾಧಿಸಿ. ನಿಮಗೆ ಏನನ್ನಿಸುತ್ತದೋ, ನೀವೇನನ್ನು ನಂಬುತ್ತೀರೋ ಅದನ್ನು ಧೈರ್ಯವಾಗಿ ವ್ಯಕ್ತಪಡಿಸಿ. ನಿಮಗೆ ನೀವು ಪ್ರಾಮಾಣಿಕವಾಗಿರಿ. ನಿಮ್ಮ ಮೌಲ್ಯಗಳನ್ನು ಎಂದಿಗೂ ಬಿಟ್ಟುಕೊಡಬೇಡಿ. ಇದು ಗೀತಾ ಅವರು ಮಹಿಳೆಯರಿಗೆ ನೀಡುವ ಸಂದೇಶ