ಉದ್ಯಮದಲ್ಲಿ ಸೋಲಿನ ಬಗ್ಗೆ ಚಿಂತೆ ಬೇಡ- ಗೆಲುವಿನ ಕನಸು ನಿಮ್ಮಲ್ಲಿರಲಿ..!

ಟೀಮ್​ ವೈ.ಎಸ್​. ಕನ್ನಡ

ಉದ್ಯಮದಲ್ಲಿ ಸೋಲಿನ ಬಗ್ಗೆ ಚಿಂತೆ ಬೇಡ- ಗೆಲುವಿನ ಕನಸು ನಿಮ್ಮಲ್ಲಿರಲಿ..!

Wednesday January 18, 2017,

3 min Read

ಉದ್ಯಮಿ ಅಂದ್ರೆ ಸಕ್ಸಸ್ ಅನ್ನೋ ಭಾವನೆ ಹಲವರಲ್ಲಿದೆ. ಯಾವುದೇ ಉದ್ಯಮಕ್ಕೆ ಕಾಲಿಟ್ರೂ, ಎಷ್ಟೇ ಬಂಡವಾಳ ಹೂಡಿದ್ರೂ ತಮ್ಮ ಪರಿಶ್ರಮ ಹಣದ ರೂಪದಲ್ಲಿ ವಾಪಸ್ ಬಂದೇ ಬರತ್ತೆ ಅಂತಲೇ ಎಲ್ಲರೂ ಬಂಡವಾಳ ಹೂಡಿಕೆ ಮಾಡೋದು. ಹೂಡಿದ ಬಂಡವಾಳ ವಾಪಸ್ ಬರೋದು ಅಷ್ಟು ಸುಲಭವಲ್ಲ ಅನ್ನೋ ಸತ್ಯ ಹಲವರಿಗೆ ಗೊತ್ತಿಲ್ಲ ಮತ್ತು ಸಕ್ಸಸ್ ಸಿಗದೇ ಹೋದರೆ ಬದುಕೇ ಇಲ್ಲ ಅಂದುಕೊಳ್ಳುವ ಮಂದಿಯೂ ಹಲವರಿದ್ದಾರೆ. ಹೀಗಾಗಿ ಬ್ಯುಸಿನೆಸ್‍ಮೆನ್ ಮತ್ತು ಉದ್ಯಮಿಗಳನ್ನು ಖಿನ್ನತೆ ಆಗಾಗ ಕಾಡತ್ತೆ ಎನ್ನೋ ಸತ್ಯಾಂಶ ಹಲವಾರು ಸಂಶೋಧನೆಗಳಿಂದ ಪ್ರೂವ್ ಆಗಿದೆ. ಉದ್ಯಮಿಗಳಿಗೆ ಖಿನ್ನತೆ ಇದೆಯಾ ಅಂತ ಆಶ್ಚರ್ಯರಾಗಬೇಡಿ, ಡಿಪ್ರೆಷನ್ ಆಗತ್ತಾ ಅಂತ ತಲೆ ಕೆಡಿಸಿಕೊಳ್ಳಲೂಬೇಡಿ. ಸ್ಟಾರ್ಟ್ ಅಪ್ ಗಳನ್ನು ಶುರು ಮಾಡಿದವರಿಂದ ಹಿಡಿದು ದೊಡ್ಡ ಮಟ್ಟದ ಹೂಡಿಕೆ ಮಾಡಿದವರಿಗೂ ಕೂಡ ಒತ್ತಡ ಇದ್ದೇ ಇರತ್ತೆ. ಇಂಥ ಒತ್ತಡದ ಸಮಯದಲ್ಲಿ ಸೋಲುತ್ತಿದ್ದೀವಿ ಅಂತ ಅನಿಸಿದ್ರೆ ಮತ್ತಷ್ಟು ಖಿನ್ನತೆ ಕಾಡಬಹುದು. ಹೀಗಾಗಿಯೇ ಹೊಸ ಉದ್ಯಮಿಗಳಿಗೆ ತಮ್ಮ ಒತ್ತಡ ಮತ್ತು ಖಿನ್ನತೆಯನ್ನು ಹೇಗೆ ದೂರ ಓಡಿಸಬಹುದು ಅನ್ನೋದಕ್ಕೆ ಇಲ್ಲೊಂದಿಷ್ಟು ಟಿಪ್ಸ್ ಇದೆ.

image


1. ಸೋಲು ಗೆಲುವು ಏನೇ ಬಂದರೂ ಎದುರಿಸುವ ತಾಕತ್ತು ಬೆಳೆಸಿಕೊಳ್ಳಿ 

ಹಲವಾರು ಮಂದಿ ಬಂಡವಾಳ ಹೂಡಿದವರು ತಮಗೆ ಗೆಲುವು ಮಾತ್ರ ಸಿಗತ್ತೆ ಅಂದುಕೊಂಡು ಸೋಲನ್ನು ಸಂಪೂರ್ಣವಾಗಿ ಮರೆತೆಬಿಟ್ಟಿರುತ್ತಾರೆ. ತಾವು ಉದ್ಯಮದಲ್ಲಿ ಸೋಲೋದೇ ಇಲ್ಲ ಅಂದುಕೊಂಡಿರುತ್ತಾರೆ. ಗೆದ್ದೇ ಗೆಲ್ತೀವಿ ಅನ್ನೋ ವಿಶ್ವಾಸದಷ್ಟೇ ಮುಖ್ಯ ಸೋತರೂ ಕೂಡ ಎದೆಗುಂದೋದಿಲ್ಲ ಅನ್ನೋ ಧೈರ್ಯ. ತಮ್ಮ ಉದ್ಯಮ ನೆಲಕಚ್ಚಿದರೂ ಕೂಡ ಮತ್ತೆ ಉದ್ಯಮದಲ್ಲಿ ಶ್ರಮಹಾಕಿ ಗೆಲ್ಲುತ್ತೇನೆ ಅನ್ನೋ ನಂಬಿಕೆ ಬೆಳೆಸಿಕೊಳ್ಳಿ.

2. ನಿರೀಕ್ಷೆ ವಾಸ್ತವಕ್ಕೆ ಹತ್ತಿರವಿರಲಿ

ಉದ್ಯಮಿಗಳಿಗೆ ವಾಸ್ತವ ಸಂಗತಿಗಳ ಅರಿವಿರಬೇಕು. ಇಷ್ಟು ಬಂಡವಾಳ ಹೂಡಿದರೆ ಇಷ್ಟು ಮೊತ್ತ ವಾಪಸ್ ಬರತ್ತೆ ಎನ್ನೋ ಲೆಕ್ಕಾಚಾರ ವಾಸ್ತವಕ್ಕೆ ಹತ್ತಿರವಾಗಿ ಗೊತ್ತಿರಬೇಕು. ವಾಸ್ತವದ ಬಗ್ಗೆ ಸ್ಪಷ್ಟ ಅರಿವಿದ್ದರೆ ಲಾಭ-ನಷ್ಟದ ಬಗ್ಗೆ ಬೇಸರವಾಗೋದಿಲ್ಲ, ಖಿನ್ನತೆ ಕಾಡೋದಿಲ್ಲ.

3. ಗೆಳೆಯರು, ಕುಟುಂಬದವರೊಂದಿಗೆ ಸಮಸ್ಯೆ ಹಂಚಿಕೊಳ್ಳಿ

ಉದ್ಯಮದಲ್ಲಿ ಲಾಭ ನಷ್ಟ ಸಹಜವಾದದ್ದು, ನಿಮ್ಮ ವ್ಯವಹಾರದ ಒಂದಿಷ್ಟು ವಿಚಾರಗಳು ನಿಮ್ಮ ಕುಟುಂಬಸ್ಥರಿಗೂ ತಿಳಿದಿರಲಿ. ವ್ಯವಹಾರದಲ್ಲಿ ಏನೇ ಸಮಸ್ಯೆಗಳಾದರೂ ನಿಮ್ಮ ಕುಟುಂಬಸ್ಥರು-ಆತ್ಮೀಯ ಗೆಳೆಯರೊಂದಿಗೆ ವಿಚಾರಗಳನ್ನು ಹಂಚಿಕೊಳ್ಳಿ. ಆಗ ನಿಮ್ಮವರು ನಿಮಗೊಂದಿಷ್ಟು ಸಲಹೆಗಳನ್ನು ಕೊಡಬಹುದು, ಧೈರ್ಯವನ್ನೂ ತುಂಬುತ್ತಾರೆ. ಉದ್ಯಮ ಎಷ್ಟು ಮುಖ್ಯವೋ ನಿಮ್ಮ ಕುಟುಂಬ ಸ್ನೇಹಿತರ ಸಲಹೆಗಳೂ ಅಷ್ಟೇ ಮುಖ್ಯ.

4. ಆಕಾಶದೆತ್ತರದ ಗುರಿ ಬೇಡ

ನಿಮ್ಮ ಕೆಪ್ಯಾಸಿಟಿ ಏನು ಅನ್ನೋದು ನಿಮಗಿಂತ ಚೆನ್ನಾಗಿ ಬೇರೆಯವರಿಗೆ ತಿಳಿದಿರಲು ಸಾದ್ಯವಿಲ್ಲ. ನಿಮ್ಮ ಗುರಿ ಈಡೇರಿಸಲು ಸುಲಭವಾಗಿರಬೇಕು. ಒಂದೊಂದೆ ಗುರಿಯನ್ನು ತಲುಪುತ್ತಾ, ನೀವು ಆಕಾಶ ತಲುಪಬೇಕೆ ವಿನಃ ಒಂದೇ ಸಲಕ್ಕೆ ಆಕಾಶಕ್ಕೆ ಏಣಿ ಹಾಕುವ ಹಪಹಪಿತನ ಬೇಡ. ನಿಮ್ಮ ಒಂದೊಂದೆ ಗುರಿಯನ್ನು ಸಾಧಿಸುತ್ತಾ ಹೋದಂತೆ ಸಹಜವಾಗೇ ನಿಮಗೆ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗತ್ತೆ, ದೊಡ್ಡ ಸಾಧನೆ ಸಾಧ್ಯ.

5. ಗೆಲುವು ಇಲ್ಲದಿದ್ದರೆ ಸಾವು ಅನ್ನೋ ಮನಸ್ಥಿತಿ ಬೇಡ

ಹಲವರು ಅಂದುಕೊಂಡಿರ್ತಾರೆ- ಡು ಆರ್ ಡೈ. ಇಂತಹ ಭ್ರಮೆಯಿಂದ ಹೊರಬನ್ನಿ. ಡು ಆರ್ ಟ್ರೈ ಎನ್ನೋ ಸಹಜ ಸ್ಥಿತಿಗೆ ಬನ್ನಿ. ಮಾಡು ಇಲ್ಲವೇ ಮತ್ತೊಮ್ಮೆ ಪ್ರಯತ್ನ ಪಡು, ಗೆಲ್ಲಲಿಲ್ಲ ಅಂದರೆ ಮತ್ತೊಮ್ಮೆ ಪ್ರಯತ್ನ ಪಡೋದಕ್ಕೆ ನಿಮಗೆ ಮತ್ತೊಂದು ಅವಕಾಶ ಅಷ್ಟೆ. ಉದ್ಯಮದಲ್ಲಿ ಸೋತಿದ್ದೀವಿ ಅಂದುಕೊಂಡು ಸಾವಿನ ಮನೆಯ ಬಾಗಿಲು ತಟ್ಟುವಂತ ಅತಿರಕೇದ ನಿರ್ಧಾರಗಳು ಯಾವತ್ತಿಗೂ ಒಳ್ಳೆಯದಲ್ಲ. ಬದುಕಿದ್ದರೆ ಇಂಥ ನೂರೆಂಟು ಉದ್ಯಮಗಳನ್ನು ಮಾಡಿ ಅನುಭವ ಪಡೆದುಕೊಳ್ಳಬಹುದು, ಆದರೆ ನಷ್ಟ ಸೋಲು ಸಂಭವಿಸಿತು ಅಂತ ಸಾವಿಗೆ ಶರಣಾಗುವ ನಿರ್ಧಾರ ತೆಗೆದುಕೊಂಡರೆ ಮತ್ತೆ ಪ್ರಯತ್ನಿಸೋದಕ್ಕೆ ಜೀವವೇ ಇರೋದಿಲ್ಲ.

6. ಸೋತವರೂ ಸುಖವಾಗಿರಬಹುದು ಅನ್ನೋದು ತಿಳಿದಿರಲಿ

ಈ ಪ್ರಪಂಚದಲ್ಲಿ ಸೋತವರೂ ಕೂಡ ಸುಖವಾಗಿದ್ದಾರೆ, ಉದ್ಯಮದಲ್ಲಿಯೂ ಅಷ್ಟೇ. ನಿಮ್ಮ ಸ್ಟಾರ್ಟ್ ಅಪ್ ಕಂಪನಿಗೆ ಬೀಗ ಬಿದ್ದರೂ ನೀವು ಚೆನ್ನಾಗೇ ಬದುಕಬಹುದು.

7. ಕಡಿಮೆ ಟೈಮ್ ನಲ್ಲಿ ಗೆಲ್ಲಬೇಕು ಎನ್ನೋ ಒತ್ತಡ ಬೇಡ

ನಿಮ್ಮ ಉದ್ಯಮದ ಸಕ್ಸಸ್ ಗೆ ಇಷ್ಟೇ ಕಡಿಮೆ ಟೈಮ್ ನ ಒತ್ತಡ ಹೇರಿಕೊಳ್ಳಬೇಡಿ. ಫ್ಲೆಕ್ಸಿಬಲ್ ಆದಷ್ಟು ಟೈಮ್ ಕೊಟ್ಟುಕೊಳ್ಳಿ. ಸಮಯದ ಒತ್ತಡ ನಿಮ್ಮನ್ನು ಖಿನ್ನತೆಗೆ ದೂಡುತ್ತದೆ, ಅದರಿಂದ ಆಗುವ ಲಾಭಕ್ಕಿಂತ ನಷ್ಟವೇ ಹೆಚ್ಚು.

8. ನಿಮಗೆ ನಿಮ್ಮನ್ನೇ ಹೋಲಿಸಿಕೊಳ್ಳಿ- ಬೇರೆಯವರನ್ನಲ್ಲ

ನಿಮ್ಮ ಗುರಿಯನ್ನು ನಿಮ್ಮ ಸಾಧನೆಯನ್ನು ನಿಮಗೆ ನೀವೆ ಹೋಲಿಸಿಕೊಳ್ಳಬೇಕು. ಯಾವುದೋ ಸ್ಟಾರ್ಟ್ ಅಪ್ ಕಂಪನಿ ವರ್ಷಕ್ಕೆ 1 ಕೋಟಿ ಲಾಭ ಗಳಿಸುವಷ್ಟು ಬೆಳೆದಿರಬಹುದು, ಅದಕ್ಕೆ ಖುಷಿಪಡಬೇಕೆ ಹೊರತು 10 ಕೋಟಿ ಲಾಭ ಗಳಿಸುತ್ತಿರುವ ಕಂಪನಿಯೊಂದಿಗೆ ಹೋಲಿಸಿಕೊಂಡು ವ್ಯಥೆ ಪಡುವುದಲ್ಲ, 1 ಕೋಟಿಯಿಂದ 2 ಕೋಟಿ ಲಾಭ ಪಡೆಯೋದು ಹೇಗೆ ಅಂತ ಸೂಕ್ಷ್ಮವಾಗಿ ಲೆಕ್ಕ ಹಾಕುವವನು ಹೆಚ್ಚು ಸುಖವಾಗಿರ್ತಾನೆ.

9. ಮಾನಸಿಕ ಒತ್ತಡ ಹೆಚ್ಚಾದರೆ ಆಪ್ತ ಸಲಹೆಯ ಮೊರೆ ಹೋಗಿ

ಎಲ್ಲ ಸಮಸ್ಯೆಗಳಿಗೂ ಪರಿಹಾರ ಶುದ್ದವಾದ ಮಾತು. ನಿಮ್ಮ ಉದ್ಯಮ ನಿಮ್ಮನ್ನು ಚಿಂತಗೇಡಿಮಾಡಿದ್ದರೆ ಯಾವುದೇ ಮುಲಾಜಿಲ್ಲದೆ ಆಪ್ತ ಸಲಹೆಗಾರರನ್ನೋ, ಮನೋವೈದ್ಯರನ್ನೋ ಭೇಟಿಯಾಗಿ ಸಲಹೆ ಪಡೆದುಕೊಳ್ಳಿ, ಅದರಲ್ಲೇನು ಮುಜುಗರಪಡುವಂತದ್ದಿಲ್ಲ.

ಒಟ್ಟಾರೆ, ಉದ್ಯಮ ಅನ್ನೋ ಸಮುದ್ರದಲ್ಲಿ ಸೋಲು ಬಂದರೂ ಎದೆಗುಂದದೆ ಧೈರ್ಯವಾಗಿ ಈಜಿ ದಡ ಸೇರಿ, ಆಲ್ ದಿ ಬೆಸ್ಟ್.