ಮರೆತುಹೋಗಿದ್ದ ಆರೋಗ್ಯಕರ ಆಹಾರ : ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಕರ್ನಾಟಕ ಸರ್ಕಾರ

ಟೀಮ್ ವೈ.ಎಸ್.ಕನ್ನಡ 

ಮರೆತುಹೋಗಿದ್ದ ಆರೋಗ್ಯಕರ ಆಹಾರ : ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಕರ್ನಾಟಕ ಸರ್ಕಾರ

Thursday April 27, 2017,

4 min Read

ಜಗತ್ತು ಹೊಸತನಕ್ಕೆ ಹೊಂದಿಕೊಂಡಿದೆ. ಜನರು ಕೂಡ ಮಾಡರ್ನ್ ಆಗಿದ್ದಾರೆ. ಆದ್ರೆ ಆರೋಗ್ಯ ಮಾತ್ರ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಪರಿಸರ ಹಾಳಾದಂತೆ ಜನರ ಆರೋಗ್ಯವೂ ಕೈಕೊಡುತ್ತಿದೆ. ಆಹಾರಕ್ರಮದಲ್ಲಿ ವ್ಯತ್ಯಯ ಆಗುತ್ತಿದೆ. ಸೇವನೆ ಮಾಡುತ್ತಿರುವ ಆಹಾರ, ಕೇವಲ ಹೊಟ್ಟೆಯನ್ನು ಮಾತ್ರ ತುಂಬಿಸುತ್ತದೆ. ಆಹಾರದಲ್ಲಿ ರಾಸಾಯನಿಕಗಳು ತುಂಬಿ ಅವುಗಳಲ್ಲಿ ಪೋಷಕಾಂಶಗಳೇ ಇಲ್ಲದಂತಾಗಿದೆ. ಆದ್ರೆ ಕರ್ನಾಟಕ ಸರಕಾರದ ಕೃಷಿ ಇಲಾಖೆ ಕರ್ನಾಟದಲ್ಲಿ ಸಾವಯವ ಕೃಷಿ ಧಾನ್ಯಗಳ ಬಗ್ಗೆ ಅರಿವು ಮೂಡಿಸಲು ಹೊರಟಿದೆ. ಆರೋಗ್ಯಕ್ಕೆ ಯಾವ ರೀತಿಯ ಆಹಾರ ಬೇಕು, ಅವುಗಳಲ್ಲಿ ಸಿಗುವ ಪೋಷಕಾಂಶಗಳೇನು ಅನ್ನುವುದನ್ನು ತೋರಿಸಲು ಸಜ್ಜಾಗಿದೆ.

image


ಕರ್ನಾಟಕ ರಾಜ್ಯ ಸರಕಾರದ ಕೃಷಿ ಸಚಿವ ಕೃಷ್ಣಬೈರೇ ಗೌಡ ಈ ಸಾವಯವ ಸಿರಿಧಾನ್ಯ ಮೇಳದ ಪ್ರಮುಖ ರೂವಾರಿ. ಗ್ರಾಹಕರಿಗೆ ಮತ್ತು ಕೃಷಿಕರಿಗೆ ಸಾವಯವ ಕೃಷಿ ಮತ್ತು ಅದರ ಉಪಯೋಗದ ಬಗ್ಗೆ ತಿಳಿಸುವ ಉದ್ದೇಶ ಹೊಂದಲಾಗಿದೆ. ಸಾವಯವ ಕೃಷಿ ಧಾನ್ಯಗಳ ಬೇಡಿಕೆ ಮತ್ತು ಪೂರೈಕೆಗಳ ಕುರಿತು ಕೂಡ ಯೋಜನೆ ರೂಪಿಸಲಾಗಿದೆ.

ರಾಷ್ಟ್ರೀಯ ಸಾವಯವ ಸಿರಿಧಾನ್ಯ ಮೇಳ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರಾ ವಾಸಿನಿಯಲ್ಲಿ ಎಪ್ರಿಲ್ 28ರಿಂದ ಎಪ್ರಿಲ್ 30ರ ತನಕ ನಡೆಯಲಿದೆ. ಈ ಮೇಳದಲ್ಲಿ ಕೃಷಿಕರು, ವರ್ತಕರು, ಹೊಟೇಲ್ ಉದ್ಯಮಿಗಳು, ಗ್ರಾಹಕರು, ರಫ್ತುದಾರರು, ಚಿಲ್ಲರೆ ವ್ಯಾಪಾರರು ಸೇರಿದಂತೆ ಹಲವರು ಈ ಮೇಳದಲ್ಲಿ ಭಾಗವಾಗಲಿದ್ದಾರೆ. ಈ ಮೇಳದಲ್ಲಿ ಸಾವಯವ ಕೃಷಿ, ಸಾವಯವ ಉತ್ಪನ್ನ ಗಳ ಬಳಕೆ ಬಗ್ಗೆ ಮತ್ತು ಅದರ ಉಪಯೋಗಗಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ.

ಇತ್ತೀಚೆಗೆ ಕೃಷಿ ಇಲಾಖೆ ಇತರೆ ಸಂಘ ಸಂಸ್ಥೆಗಳ ಜೊತೆ ಸೇರಿಕೊಂಡು ಸಾವಯವ ಕೃಷಿ, ಸಾವಯವ ಸಿರಿಧಾನ್ಯಗಳ ಬಗ್ಗೆ ಕಾರ್ಯಾಗಾರವನ್ನು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ನಡೆಸಿತ್ತು. ಸಾವಯವ ಸಿರಿಧಾನ್ಯಗಳಲ್ಲಿನ ಅನೇಕ ಪ್ರಯೋಜನಗಳನ್ನು, ಪರಿಸರದ ಸಂರಕ್ಷಣೆ ಹೇಗಾಗುತ್ತದೆ ಮತ್ತು ಸಾವಯವ ಕೃಷಿ ಯಾಕೆ ಪ್ರಸಿದ್ಧಿ ಪಡೆಯುತ್ತಿಲ್ಲ ಅನ್ನುವುದನ್ನು ಕಾರ್ಯಾಗಾರದಲ್ಲಿ ಚರ್ಚಿಸಲಾಗಿತ್ತು.

ಎಲ್ಲಾ ಆರೋಗ್ಯ ಸಮಸ್ಯೆಗೆ ಸಿರಿಧಾನ್ಯವೇ ಪರಿಹಾರ

ಅನಾರೋಗ್ಯಕಾರಿ ಆಹಾರ ಪದ್ಧತಿ ಸಾಕಷ್ಟು ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಭಾರತದಲ್ಲಿ ಸಕ್ಕರೆ ಕಾಯಿಲೆ, ಹೈಪರ್ ಟೆನ್ಷನ್ ಮತ್ತು ಸ್ಥೂಲಕಾಯ ಇವು ಭಾರತದಲ್ಲಿ ಕಂಡು ಬರುತ್ತಿರುವ ಪ್ರಮುಖ ಕಾಯಿಲೆಗಳಾಗಿವೆ. ಫಾಸ್ಟ್ ಫುಡ್ಸ್, ಜಂಕ್ ಫುಡ್ಸ್ ಮತ್ತು ಅಕ್ಕಿ, ರಾಗಿ ಗೋಧಿಗಳಲ್ಲಿನ ರಾಸಾಯನಿಕ ಬಳಿಕೆಯಿಂದ ಆಹಾರ ವಿಷಪೂರಿತವಾಗಿದೆ. ಪೋಷಕಾಂಶಗಳು ಮತ್ತು ಫೈಬರ್ ಅಂಶ ಆಹಾರದಲ್ಲಿ ಇಲ್ಲದೇ ಇರುವುದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತೆ ಮಾಡಿದೆ ಎನ್ನುತ್ತಾರೆ ಇಂಡಿಯನ್ ಇನ್ಸ್ಟಿಟ್ಯೂಟ್ನ ಮಿಲ್ಲೆಟ್ ರಿ ಸರ್ಚ್ ವಿಭಾಗದ ನಿರ್ದೇಶಕ ವಿಲಾಸ್ ತೊನಪಿ.

ಸಾವಯವ ಸಿರಿಧಾನ್ಯಗಳಲ್ಲಿ ಅಧಿಕ ಪೋಷಕಾಂಶಗಳು ಒಳಗೊಂಡಿರುತ್ತದೆ. ಕಡಿಮೆ ಪ್ರಮಾಣದ ಗ್ಲೇಮಿಕ್ ಇಂಡೆಕ್ಸ್, ಹೆಚ್ಚು ಫೈಬರ್ ಅಂಶಗಳು ಇರುವುದರಿಂದ ಇವರು ಆರೋಗ್ಯಕ್ಕೆ ಪೂರಕವಾಗಿದೆ. ಸ್ಥೂಲಕಾಯ, ಸಕ್ಕರೆ ಕಾಯಿಲೆ, ಕ್ಯಾನ್ಸರ್, ಹೈಪರ್ ಟೆನ್ಷನ್ ಮತ್ತು ಅನಿಮಿಯಾಗಳ ವಿರುದ್ಧ ಈ ಮಿಲ್ಲೆಟ್ಸ್ ಹೋರಾಡುತ್ತವೆ.

“ಸಮತೋಲಿತ ಆಹಾರ ಕ್ರಮ ಜೀವನಕ್ಕೆ ತುಂಬಾ ಅಗತ್ಯವಿದೆ. ಎಲ್ಲಾ ರೀತಿಯ ಆಹಾರಗಳು ಮನುಷ್ಯನ ಆರೋಗ್ಯ ವರ್ಧನೆಗೆ ಬೇಕಾಗಿದೆ. ಸಿರಿಧಾನ್ಯಗಳನ್ನು ಅನ್ನ ಬೇಯಿಸುವಾಗ ಹಾಕಿದರೆ, ಅದರಿಂದ ಸಾಕಷ್ಟು ಪೋಷಕಾಂಶಗಳು ದೊರೆಯುತ್ತವೆ. ಅದು ಆರೋಗ್ಯಕ್ಕೆ ಉಪಯೋಗಕಾರಿ ”

ಡಾ. ಹೇಮಾ ಅರವಿಂದ್, ಚೀಫ್ ಡಯಟಿಷಿಯನ್, ಎಂ,ಎಸ್. ರಾಮಯ್ಯ ಕಾಲೇಜ್

ವಿಶ್ವದಲ್ಲಿ ಲಕ್ಷಾಂತರ ಜನರು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ‘ಇಥಿಯೋಪಿಯಾದಿಂದ ಹಿಡಿದು ಭಾರತದವರೆಗೆ, ಘಾನಾದಿಂದ ಗ್ವಾಟೆಮಾಲಾವರೆಗೂ ಅಪೌಷ್ಠಿಕತೆ ಗ್ರಾಮೀಣ ಹಾಗೂ ನಗರಪ್ರದೇಶಗಳೆರಡರಲ್ಲೂ ಕಾಡುತ್ತಿರುವ ಬಹುದೊಡ್ಡ ಸಮಸ್ಯೆ’ ಎನ್ನುತ್ತಾರೆ ಡಾ.ತೋನಪಿ. ಸಿರಿಧಾನ್ಯಗಳಲ್ಲಿ ಹಸಿವನ್ನು ತಗ್ಗಿಸುವ ಸಾಮರ್ಥ್ಯ ಅಕ್ಕಿಗಿಂತಲೂ ಹೆಚ್ಚಾಗಿದೆ. ಹಾಗಾಗಿ ಜಗತ್ತಿನ ಗಂಭೀರ ಸಮಸ್ಯೆ ಹಸಿವನ್ನು ನೀಗಿಸುವಲ್ಲಿ ಈ ಸ್ಮಾರ್ಟ್ ಫುಡ್ ಸಹಕಾರಿಯಾಗಲಿದೆ ಅನ್ನೋದು ಅವರ ಅಭಿಪ್ರಾಯ.

ಪರಿಸರ ಸ್ನೇಹಿ ಬೆಳೆ…

ಹವಾಮಾನ ಬದಲಾವಣೆಯ ಗಂಭೀರತೆಯನ್ನು ಪ್ರಸ್ತಾಪಿಸಿದ ಕೃಷ್ಣಭೈರೇಗೌಡ, ಸಿರಿಧಾನ್ಯಗಳು 21ನೇ ಶತಮಾನದ ಸ್ಮಾರ್ಟ್ ಬೆಳೆ ಅಂತಾ ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕಾರ್ಬನ್ ಉತ್ಪತ್ತಿಯಾಗುತ್ತದೆ ಜೊತೆಗೆ ನೀರಿನ ಅಗತ್ಯವೂ ಹೆಚ್ಚಾಗಿ ಇರುವುದಿಲ್ಲ. ಕಬ್ಬು, ಅಕ್ಕಿ, ಗೋಧಿಗಿಂತ ಶೇ.80ರಷ್ಟು ಕಡಿಮೆ ಪ್ರಮಾಣದ ನೀರಿನಲ್ಲಿ ಸಿರಿಧಾನ್ಯಗಳನ್ನು ಬೆಳೆಯಬಹುದು. ರಾಸಾಯನಿಕ ಗೊಬ್ಬರಗಳ ಬಳಕೆ ಕೂಡ ಶೇ.70ರಷ್ಟು ಕಡಿಮೆ. ಬರಗಾಲದಲ್ಲೂ ಬೆಳೆಯಬಲ್ಲ ಅನ್ನದಾತರಿಗೆ ಅಪಾಯ ತಂದೊಡ್ಡದ ಬೆಳೆಗಳು ಇವು. 2004ರಲ್ಲಿ ಸಾವಯವ ಕೃಷಿ ನೀತಿಯನ್ನು ಅಳವಡಿಸಿಕೊಂಡ ಭಾರತದ ಮೊದಲ ರಾಜ್ಯ ಕರ್ನಾಟಕ. ಈಗ ಸಿರಿಧಾನ್ಯಗಳ ಮಹತ್ವವನ್ನು ಮನವರಿಕೆ ಮಾಡಿಕೊಡುವ ಮೂಲಕ ರೈತರ ಬದುಕನ್ನು ಹಸನಾಗಿಸಲು ಯತ್ನಿಸುತ್ತಿದೆ. ಸಮಸ್ಯೆ ಉತ್ಪಾದನೆಯಲ್ಲಿಲ್ಲ, ಬದಲಾಗಿ ಬಳಕೆಯಲ್ಲಿದೆ. ಸಿರಿಧಾನ್ಯಗಳಿಗೆ ಬೇಡಿಕೆ ಸೃಷ್ಟಿಯಾಗಬೇಕಿದೆ ಅನ್ನೋದು ಡಾ.ತೋನಪಿ ಅವರ ಅಭಿಪ್ರಾಯ.

ಬೇಡಿಕೆ ಸೃಷ್ಟಿಸಲು ಸಾಮಾಜಿಕ ಗ್ರಹಿಕೆ ಬದಲಾವಣೆ…

ಸಿರಿಧಾನ್ಯಗಳು ಬಡವರ ಆಹಾರ ಅನ್ನೋ ತಪ್ಪು ಕಲ್ಪನೆ ಜನರಲ್ಲಿರುವುದರಿಂದ ಅವುಗಳಿಗೆ ಬೇಡಿಕೆ ಸೃಷ್ಟಿಯಾಗುತ್ತಿಲ್ಲ. ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತಿರುವ ಭಾರತೀಯರು ಅತಿಯಾದ ಸಕ್ಕರೆ ಅಂಶ ಹಾಗೂ ಕಾರ್ಬೋಹೈಡ್ರೇಡ್ ಇರುವ ಡಯಟ್ ಅನ್ನೇ ನೆಚ್ಚಿಕೊಂಡಿದ್ದಾರೆ. ಪರಿಣಾಮ ಗಂಭೀರ ಆರೋಗ್ಯ ಸಮಸ್ಯೆಗಳು ದೇಶದಲ್ಲಿ ಹೆಚ್ಚಾಗುತ್ತಿವೆ. 1960ರಲ್ಲಿ ಹಸಿರು ಕ್ರಾಂತಿ ಮೂಲಕ ಸಿರಿಧಾನ್ಯಗಳ ತಪ್ಪು ಗ್ರಹಿಕೆಯನ್ನು ಹೋಗಲಾಡಿಸುವ ಪ್ರಯತ್ನ ನಡೆದಿತ್ತು. ಆದ್ರೆ ಅಕ್ಕಿ ಮತ್ತು ಗೋಧಿ ಶ್ರೀಮಂತ ಸಮಾಜದ ಆಹಾರ ಎಂಬ ವಿಚಾರ ಜನರ ಮನಸ್ಸಿನಲ್ಲಿ ಅಂಟಿಕೊಂಡಿತ್ತು.

ಬಹುತೇಕ ಭಾರತೀಯರು ಡಯಟ್ ಮಹತ್ವವನ್ನು ಅರಿತುಕೊಂಡರಾದ್ರೂ, ಓಟ್ಸ್ ಮತ್ತು ಕಿನ್ವದಂತಹ ಧಾನ್ಯಗಳಿಗೆ ಜನಪ್ರಿಯತೆ ಹೆಚ್ಚಿತ್ತು. ಯಾಕಂದ್ರೆ ವಿದೇಶಗಳಲ್ಲಿ ಅವು ಹೆಚ್ಚು ಪ್ರಚಲಿತದಲ್ಲಿದ್ದವು. ಆದ್ರೆ ಈಗ ಬಡವರ ಆಹಾರವೇ ಸಿರಿವಂತರ ರಕ್ಷಕನಾಗಿದೆ ಎನ್ನುತ್ತಾರೆ ಕೃಷ್ಣಭೈರೇಗೌಡ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಶ್ರೀಮಂತರು ಆರೋಗ್ಯಕರ ಆಹಾರ ತಿಂದ್ರೆ ಬಡವರು ಜಂಕ್ ಫುಡ್ ಗಳನ್ನೇ ನೆಚ್ಚಿಕೊಂಡಿದ್ದಾರೆ. ಆದ್ರೆ ಭಾರತದಲ್ಲಿ ಇದು ತದ್ವಿರುದ್ಧವಾಗಿದೆ ಎನ್ನು್ತತಾಋಎ ಗ್ರೀನ್ ಪಾಥ್ ಆರ್ಗೆನಿಕ್ ಸ್ಟೇಟ್ ಸಂಸ್ಥಾಪಕ ಜಯರಾಮ್.

ಸಿರಿಧಾನ್ಯಗಳ ಆರೋಗ್ಯ ಲಾಭಗಳ ಬಗ್ಗೆ ಜನರಿಗೆ ತಿಳಿಹೇಳುವುದು ಸರ್ಕಾರದ ಮೂಲ ಉದ್ದೇಶ. ನಿತ್ಯದ ಡಯಟ್ ನಲ್ಲಿ ನಿಜವಾದ ಸವಾಲು ಇರುವುದು ಎಲ್ಲಿ ಎಂಬುದನ್ನು ಅವರಿಗೆ ಅರ್ಥಮಾಡಿಸಬೇಕು ಎನ್ನುತ್ತಾರೆ ಕೌಳಿಗೆ ಫುಡ್ಸ್ ಮಾಲೀಕ ಅರುಣ್ ಕೌಳಿಗೆ. ಸಿರಿಧಾನ್ಯಗಳ ಬಗ್ಗೆ ಇರುವ ಅಪನಂಬಿಕೆಗಳನ್ನು ದೂರ ಮಾಡಬೇಕು. ಉಳಿದ ಧಾನ್ಯಗಳಷ್ಟು ರುಚಿಕರವಲ್ಲ ಎಂಬ ತಪ್ಪು ಕಲ್ಪನೆಯನ್ನು ಹೋಗಲಾಡಿಸಬೇಕು. ಇದಕ್ಕಗಿ ಕಂಪನಿಗಳು ಪ್ಯಾಕೆಟ್ ಗಳಲ್ಲಿ ಸಿರಿಧಾನ್ಯಗಳ ಸ್ನಾಕ್ಸ್ ಮಾಡಿ ಮಾರಾಟ ಮಾಡಿದ್ರೆ ಉತ್ತಮ. ಈ ನಿಟ್ಟಿನಲ್ಲಿ ಹಲವು ರೆಸ್ಟೋರೆಂಟ್ ಗಳು ಮತ್ತು ಖ್ಯಾತ ಬಾಣಸಿಗರು ಪ್ರಯತ್ನ ಮಾಡುತ್ತಿದ್ದಾರೆ. ಬೆಂಗಳೂರಿನ ತಾಜ್ ವಿವಾಂತಾದ ಬಾಣಸಿಗ ಸೆಲ್ವರಾಜ್ ಕೂಡ ಸಿರಿಧಾನ್ಯಗಳ ತಿನಿಸುಗಳ ಸಂಶೋಧಕರು ಅಂದ್ರೆ ತಪ್ಪಾಗಲಾರದು. ಬಹುತೇಕ ರೆಸ್ಟೋರೆಂಟ್ ಗಳು ದೋಸೆ, ಇಡ್ಲಿ, ಬಿಸಿಬೇಳೆ ಬಾತ್ ನಂತಹ ಸಾಂಪ್ರದಾಯಿಕ ತಿನಿಸುಗಳನ್ನು ಸಿರಿಧಾನ್ಯಗಳಿಂದ ತಯಾರಿಸುತ್ತಿವೆ. ಆದ್ರೆ ಸೆಲ್ವರಾಜ್ ಹೊಸ ಬಗೆಯ ತಿನಿಸುಗಳನ್ನು ಪರಿಚಯಿಸಿದ್ದಾರೆ. ಸಿರಿಧಾನ್ಯಗಳ ಪಾಸ್ತಾ, ಪಿಜ್ಜಾ, ಕೇಕ್, ಪೇಸ್ಟ್ರಿ, ಐಸ್ ಕ್ರೀಂ ಹೀಗೆ ಬಗೆಬಗೆಯ ತಿಂಡಿಗಳನ್ನು ತಯಾರಿಸಿದ್ದಾರೆ. ಇದರಿಂದ ಸಿರಿಧಾನ್ಯಗಳ ಬಗ್ಗೆ ಜನರಿಗೆ ಇರುವ ಅಪನಂಬಿಕೆ ದೂರವಾಗಬಹುದು ಅನ್ನೋದು ಅವರ ನಂಬಿಕೆ.

ಅರಿವು ಮೂಡಿಸುವುದು…

ಸಿರಿಧಾನ್ಯಗಳ ಬಗ್ಗೆ ಚರ್ಚೆ ಜಾಸ್ತಿ ಬಳಕೆ ಕಡಿಮೆಯಾಗಿದೆ ಎನ್ನುತ್ತಾರೆ ಪ್ರಿಸ್ಟಿನ್ ಆರ್ಗೆನಿಕ್ಸ್ ಸಿಇಓ ಡಾ.ಕೆಸಿ ರಘು. ರಾಗಿ ಈಗಾಗ್ಲೇ ಸಾಕಷ್ಟು ಜನಪ್ರಿಯವಾಗಿದೆ. ಉಳಿದ ಸಿರಿಧಾನ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಿದೆ ಅನ್ನೋದು ಅವರ ಅಭಿಪ್ರಾಯ.

image


ಯುವ ಜನತೆಯನ್ನು ಗುರಿಯಾಗಿಸಿಕೊಂಡು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾಮಾಜಿಕ ತಾಣಗಳ ಮೂಲಕ ಈ ಕಾರ್ಯ ಆಗಬೇಕಿದೆ. ಕಾಲೇಜು, ಆನ್ ಲೈನ್ ಕ್ಯಾಂಪೇನ್ ಗಳಾದ ‘ಲೆಟ್ಸ್ ಮಿಲ್ಲೆಟ್’ನಂತಹ ಕಾರ್ಯಾಗಾರವನ್ನು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲೆಂದೇ ಆರಂಭಿಸಲಾಗಿದೆ.

image


ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ‘ಮಿಲ್ಲೆಟ್ಸ್ ವರ್ಕ್ ಶಾಪ್ ಫಾರ್ ನ್ಯೂಟ್ರಿಶನಿಸ್ಟ್ಸ್’ ಎಂಬ ಕಾರ್ಯಕ್ರಮ ನಡೆಸಲಾಗಿದೆ. ಅಷ್ಟೇ ಅಲ್ಲ ವಿದ್ಯಾರ್ಥಿಗಳಿಗಾಗಿ ‘ಮಿಲ್ಲೆಟ್ ಆರ್ಟ್’ ಎಂಬ ಸ್ಪರ್ಧೆ ಆಯೋಜಿಸಲಾಗಿತ್ತು. ಸಿರಿಧಾನ್ಯಗಳ ಮಾರ್ಕೆಟಿಂಗ್ ಮತ್ತು ಬ್ರಾಂಡಿಂಗ್ ಕಡೆಗೆ ಹೆಚ್ಚಿನ ಗಮನಹರಿಸಬೇಕು ಅಂತಾ ಕನ್ಸಲ್ಟಂಟ್ ನ್ಯೂಟ್ರಿಶನಿಸ್ಟ್ ಆಗಿರೋ ಅಂಜನಾ ನಾಯರ್ ಸಲಹೆ ನೀಡಿದ್ದಾರೆ. ಅದನ್ನೇ ನಾವು ಮರೆತಿದ್ದೇವೆ ಅಂತಾ ಎಚ್ಚರಿಸಿದ್ದಾರೆ. 

ವಕೀಲ ವೃತ್ತಿಗೆ ಗುಡ್ ಬೈ ಹೇಳಿದ್ರು- ಸಾವಯವ ಕೃಷಿಕನಾಗಿ ಯಶಸ್ಸಿನ ಹೆಜ್ಜೆ ಇಟ್ರು..!

ಬೆಂಗಳೂರಲ್ಲಿ ಸಾವಯವ ಮತ್ತು ರಾಷ್ಟ್ರೀಯ ಸಿರಿಧಾನ್ಯ ಮೇಳ…