ಕನ್ನಡ ಚಿತ್ರರಂಗದ ಸಾಹಿತ್ಯರತ್ನ ಚಿ.ಉದಯಶಂಕರ್
ಟೀಮ್ ವೈ.ಎಸ್.
Thursday July 23, 2015,
2 min Read
ಈ ಮನುಷ್ಯನಿಗೆ ಹಾಡುಗಳೆಂದರೆ ಬಹು ಇಷ್ಟ. ಇಂಪಾದ ಸಂಗೀತ ಅಂದರೆ ಪಂಚಪ್ರಾಣ. ಹಾಡನ್ನು ಕೇಳುಗರು ಮತ್ತೆ ಮತ್ತೆ ಮೆಲುಕು ಹಾಕಬೇಕೆಂದು ಬಯಸಿದ ಮಹಾನ್ ವ್ಯಕ್ತಿ.. ಹುಟ್ಟಿದ್ದು, ಬದುಕಿದ್ದು ಎರಡೂ ಕೂಡ ಕನ್ನಡದ ಹಾಡಿಗಾಗಿ. ಚಿ. ಉದಯಶಂಕರ್ ಅಂದ್ರೆ ಸಾಕು ಇವತ್ತಿಗೂ ಅವ ಅದೆಷ್ಟೋ ಹಾಡುಗಳು ನೆನಪಿಗೆ ಬರುತ್ತವೆ. ಅಷ್ಟರ ಮಟ್ಟಿಗೆ ಉದಯಶಂಕರ್ ಸಂಗೀತ ಪಾಂಡಿತ್ಯವನ್ನು ಹೊಂದಿದ್ದರು.
ಚಿ. ಉದಯಶಂಕರ್ ಹುಟ್ಟಿದ್ದು ಫೆಬ್ರವರಿ 18 1934ರಲ್ಲಿ. ಬೆಂಗಳೂರು ಉದಯಶಂಕರ್ ಜನ್ಮಸ್ಥಳ. ಉದಯಶಂಕರ್ ತಂದೆ ಸದಾಶಿವಯ್ಯ ಕೂಡ ಖ್ಯಾತ ಸಾಹಿತಿ. ಹೀಗಾಗಿ ರಕ್ತದಲ್ಲೇ ಉದಯಶಂಕರ್ಗೆ ಸಂಗೀತ ಬಂದು ಹೋಗಿತ್ತು.. ಅಪ್ಪನಂತೆಯೇ ಮಗ ಚಿಕ್ಕ ವಯಸ್ಸಿನಲ್ಲೇ ಸಂಗೀತದ ಪಾಂಡಿತ್ಯ ಪಡೆದ್ರು. ಕನ್ನಡ ಚಿತ್ರರಂಗಕ್ಕೆ ತನ್ನದೇ ಕೊಡುಗೆ ನೀಡಿದ್ರು.
ಉದಯಶಂಕರ್ ಕನ್ನಡದ 3000ಕ್ಕೂ ಅಧಿಕ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರು. ಆರಂಭದಲ್ಲಿ ಉದಯಶಂಕರ್ ಎಲ್ಲರಂತೆ ಅಸ್ಥಿತ್ವಕ್ಕಾಗಿ ಪರದಾಡಿದ್ದರು. ಆದ್ರೆ ವರನಟ ಡಾ. ರಾಜ್ಕುಮಾರ್ ಚಿತ್ರವೊಂದು ಉದಯಶಂಕರ್ಗೆ ದೊಡ್ಡ ಬ್ರೇಕ್ ಕೊಟ್ಟಿತ್ತು. ಉದಯಶಂಕರ್ ಪಾಲಿಗೆ ಸಂಜೀವಿನಿಯಾದ ಚಿತ್ರದ ಹೆಸರು ಸಂತ ತುಕಾರಾಮ.
ಸಂತ ತುಕಾರಾಮ ಚಿತ್ರ 1963 ರಲ್ಲಿ ತೆರೆಕಂಡಿತ್ತು. ನಟ ಸಾರ್ವಭೌಮ ರಾಜ್ಕುಮಾರ್ ಅಭಿನಯದ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದು ಕೂಡ ಉದಯ್ಶಂಕರ್. ಇಲ್ಲಿಂದ ಮುಂದೆ ಉದಯ್ಶಂಕರ್ ಮುಟ್ಟಿದ್ದೆಲ್ಲವೂ ಚಿನ್ನವಾಗಿತ್ತು. ರಾಜ್ಕುಮಾರ್ ಅಭಿನಯದ ಹಲವು ಚಿತ್ರಗಳಿಗೆ ಸಂಭಾಷಣೆ ಹಾಗೂ ಸಾಹಿತ್ಯ ಬರೆದಿದ್ದರು.
ಒಂದು ಕಾಲದಲ್ಲಿ ರಾಜ್ಕುಮಾರ್ ಮತ್ತು ಉದಯ್ ಶಂಕರ್ ಕಾಂಬಿನೇಷನ್ ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಆಗಿತ್ತು. ರಾಜ್ ಅವರ ಸುಮಾರು 88 ಚಿತ್ರಗಳಿಗೆ ಸಂಭಾಷಣೆ ಬರೆದಿದ್ದು ಕೂಡ ಚಿ. ಉದಯ್ಶಂಕರ್ ಅನ್ನೋದು ಮತ್ತೊಂದು ಅಚ್ಚರಿ. ಆರಂಭದಲ್ಲಿ ಉದಯಶಂಕರ್ ತಂದೆ ಸದಾಶಿವಯ್ಯ ಜೊತೆಗೂಡಿ ಕನ್ನಡ ಚಿತ್ರಗಳಿಗೆ ಸಾಹಿತ್ಯ ಬರೆಯುತ್ತಿದ್ದರು. ಮುಂದೆ ಒಂದೊಂದೇ ಹೆಜ್ಜೆ ಮುಂದಿಟ್ಟ ಉದಯಶಂಕರ್ ಸಂಭಾಷಣೆ ಮತ್ತು ಸಂಗೀತ ಸಂಯೋಜನೆ ಮಾಡಲು ಆರಂಭಿಸಿದ್ರು.
ಉದಯಶಂಕರ್ ಕೇವಲ ಸಾಹಿತ್ಯ ಮತ್ತು ಸಂಭಾಷಣೆ ಬರೆಯೋದಿಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಕನ್ನಡ ಚಿತ್ರವೊಂದನ್ನು ನಿರ್ದೇಶನ ಕೂಡ ಮಾಡಿದ್ದರು. ಉದಯ್ಶಂಕರ್ ವಿಶೇಷತೆ ಅಂದ್ರೆ, ಅವರು ಬರೆದಿದ್ದ ಸಾಹಿತ್ಯ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿತ್ತು. ಸುಲಭವಾದ ಪದಗಳನ್ನು ಬಳಸಿ ಸಾಹಿತ್ಯ ಬರೆಯುತ್ತಿದ್ದರು. ಉದಯ್ಶಂಕರ್ಗೆ ಸಾಹಿತ್ಯ ರತ್ನ ಎಂಬ ಬಿರುದು ಕೂಡ ಇದೆ. ಮಹಾಸತಿ ಅನಸೂಯಾ, ಸತಿ ಸಾವಿತ್ರಿ, ಭಾಗ್ಯದ ಬಾಗಿಲು, ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮಾ , ದೇವರ ಮಕ್ಕಳು ಹೀಗೆ ಇನ್ನೂ ಮುಂತಾದ ಚಿತ್ರಗಳಿಗೆ ಸಾಹಿತ್ಯ ಮತ್ತು ಸಂಭಾಷಣೆಯನ್ನು ಉದಯ್ಶಂಕರ್ ಬರೆದಿದ್ದರು.
ಉದಯಶಂಕರ್ ಶಾರದಮ್ಮ ಅವರನ್ನು ಮದುವೆ ಆಗಿದ್ದರು. ಶಾರದಮ್ಮ ಮತ್ತು ಉದಯ್ಶಂಕರ್ ದಂಪತಿಗೆ ಮೂರುಜನ ಮಕ್ಕಳಿದ್ದಾರೆ. ಉದಯ್ಶಂಕರ್ ಮಗ ಗುರುದತ್ ಕೂಡ ನಟ, ನಿರ್ಮಾಪಕ ಮತ್ತು ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ . ಕನ್ನಡ ಚಿತ್ರರಂಗಕ್ಕೆ ಉದಯ್ಶಂಕರ್ ನೀಡಿದ ಕೊಡುಗೆಗೆ ಹಲವು ಪ್ರಶಸ್ತಿಗಳು ಕೂಡ ದೊರಕಿವೆ.
ಉದಯ್ಶಂಕರ್ ಸಂಭಾಷಣೆ ಬರೆದಿದ್ದ ಕುಲಗೌರವ, ನಾಗರಹಾವು , ಜೀವನ ಚೈತ್ರ ಮತ್ತು ಪ್ರೇಮದ ಕಾಣಿಕೆ ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ದೊರಕಿದೆ. ಭಾಗ್ಯದ ಲಕ್ಷ್ಮಿ ಬಾರಮ್ಮ ಮತ್ತು ಆನಂದ್ ಚಿತ್ರಗಳಿಗೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಗೌರವವೂ ಲಭಿಸಿತ್ತು . ಕನ್ನಡ ಚಿತ್ರರಂಗಕ್ಕೆ ಮೇರು ಕೊಡುಗೆ ಸಲ್ಲಿಸಿದ್ದ ಉದಯಶಂಕರ್ 3 ಜುಲೈ 1993 ರಲ್ಲಿ ನಿಧನ ಹೊಂದಿದರು.